Tag: MLA Suresh Gowda

  • ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

    ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

    – ಅನರ್ಹರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಹೇಳಿಕೆ

    ಮಂಡ್ಯ: ವೈದ್ಯಕೀಯ ಕಾಲೇಜುಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಡ್ಲೇಕಾಯಿ ಅಂಗಡಿಗಳಾಗಿರಬೇಕು ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಪೇಟೆಗೆ ವೈದ್ಯಕೀಯ ಕಾಲೇಜು ನೀಡುವ ಭರವಸೆ ನೀಡಿದ ಬಿಎಸ್‍ವೈ ವಿರುದ್ಧ ಕಿಡಿಕಾರಿದರು. ಅನರ್ಹ ಶಾಸಕರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ತಡೆಹಿಡಿಯುತ್ತಿದ್ದಾರೆ. ಇಂದಹ ಸಂದರ್ಭದಲ್ಲಿ ಅನರ್ಹ ಶಾಸಕರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವರೇ ಎಂದು ಪ್ರಶ್ನಿಸಿದ್ದಾರೆ.

    ಸೋಮವಾರದಿಂದ ನೀತಿಸಂಹಿತೆ ಜಾರಿಯಾಗುತ್ತದೆ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ರಾಜಕೀಯ ಗಿಮಿಕ್ ಅಷ್ಟೇ. ನಾರಾಯಣಗೌಡರನ್ನು ಅಭ್ಯರ್ಥಿ ಮಾಡಬಹುದು ಅನಿಸುತ್ತೆ ಅದಕ್ಕೆ ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಕಾರ್ಯರೂಪಕ್ಕೆ ತಂದಿದ್ದಾರೆ? ಮಾಧ್ಯಮಗಳೇ ಅವಲೋಕಿಸಿ ನೋಡಿ ತಿಳಿಯುತ್ತದೆ ಎಂದು ಹರಿಹಾಯ್ದರು.

    ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಕುರಿತು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜಾತ್ಯಾತೀತ ತತ್ವದಲ್ಲಿವೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲಾ ಕಟಿಬದ್ಧರಾಗಿರುತ್ತೇವೆ. ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ರಮ್ಯಾನ ಮುಂದಿಟ್ಟು ರಾಜಕೀಯ ಮಾಡಿದ್ದ ಸುರೇಶ್‍ಗೌಡ ಶಿಖಂಡಿಯಲ್ವಾ: ಸೋಮಶೇಖರ್ ತಿರುಗೇಟು

    ರಮ್ಯಾನ ಮುಂದಿಟ್ಟು ರಾಜಕೀಯ ಮಾಡಿದ್ದ ಸುರೇಶ್‍ಗೌಡ ಶಿಖಂಡಿಯಲ್ವಾ: ಸೋಮಶೇಖರ್ ತಿರುಗೇಟು

    ಮಂಡ್ಯ: ಜೆಡಿಎಸ್ ಶಾಸಕ ಸುರೇಶ್‍ಗೌಡ ಅವರು ಮಾಜಿ ಸಂಸದೆ ರಮ್ಯಾ ಅವರನ್ನು ಮುಂದಿಟ್ಟು ರಾಜಕೀಯ ಮಾಡಿದ್ದರು. ಆಗ ತಾನು ಶಿಂಖಡಿ ರಾಜಕಾರಣ ಮಾಡುತ್ತಿದ್ದೇನೆ ಅಂತ ತಿಳಿಯಲಿಲ್ಲವೇ ಎಂದು ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್ ತಿರುಗೇಟು ನೀಡಿದ್ದಾರೆ.

    ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಮ್ಯಾ ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ ಸುರೇಶ್‍ಗೌಡರನ್ನು ಏನೆಂದು ಕರೆಯಬೇಕು? ಜೆಡಿಎಸ್‍ನವರು ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡುತ್ತಿದ್ದಾರೆ. ಈ ರೀತಿಯ ಪದ ಬಳಕೆ ಮಾಡುವುದನ್ನು ಬಿಡಬೇಕು ಎಂದು ಆಕ್ರೋಶ ಹೊರ ಹಾಕಿದರು.

    ಲೋಕಸಭಾ ಚುನಾವಣೆ ಪ್ರಚಾರ ಆರಂಭದಿಂದಲೂ ಜೆಡಿಎಸ್‍ನವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದರೂ ಟೀಕೆ ಮಾಡುತ್ತಿದ್ದಾರೆ ಅಸಮಾಧಾನ ಹೊರ ಹಾಕಿದರು.

    ಸುರೇಶ್‍ಗೌಡ ಹೇಳಿದ್ದೇನು?:
    ಮಂಡ್ಯ ಜಿಲ್ಲೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಓರ್ವ ಮಹಿಳೆಯನ್ನು ಮುಂದಿಟ್ಟುಕೊಂಡು ಶಿಖಂಡಿ ರಾಜಕಾರಣ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಮಾತ್ರ ಮೈತ್ರಿ ಪಾಲನೆ ಮಾಡಿದ್ದಾರೆ. ಇತ್ತೀಚೆಗೆ ಪಕ್ಷ ಸೇರಿದವರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕ ಸುರೇಶ್‍ಗೌಡ ಹೇಳಿದ್ದರು.

  • ಪಟ್ಟಾಭಿಷೇಕ ವೇದಿಕೆಯಲ್ಲೇ, ನಿಖಿಲ್ ಮದುವೆ ಮಾತು!

    ಪಟ್ಟಾಭಿಷೇಕ ವೇದಿಕೆಯಲ್ಲೇ, ನಿಖಿಲ್ ಮದುವೆ ಮಾತು!

    – ಮಂಡ್ಯ ಅಳಿಯ ಆಗ್ತಾರಾ ನಿಖಿಲ್?

    ಮಂಡ್ಯ: ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರು ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡುವ ಸಂದರ್ಭದಲ್ಲೇ ಅವರ ಮದುವೆ ಬಗ್ಗೆಯೂ ಜೆಡಿಎಸ್ ಶಾಸಕ ಪರೋಕ್ಷವಾಗಿ ಮಾಹಿತಿ ನೀಡಿದ್ದಾರೆ.

    ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿದ್ದ ನಾಗಮಂಗಲ ಶಾಸಕ ಸುರೇಶ್ ಗೌಡ ಅವರು, ನಿಮ್ಮ ನಿಮ್ಮ ಬೂತ್ ಗಳಲ್ಲಿ ಕೆಲಸ ಆರಂಭಿಸಿ. ಯಾರು ಏನು ಟೀಕೆ ಮಾಡಿದರೂ ಸಂತೋಷವಾಗಿ ಸ್ವೀಕರಿಸಿ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ. ಮಂಡ್ಯ ಜಿಲ್ಲೆಯ ಜೆಡಿಎಸ್ ಕಟ್ಟಾಳುಗಳು ಯಾವ ರೀತಿ ಇದ್ದಾರೆ ಎಂಬುದನ್ನು ಮತ ನೀಡಿ ಸಾಬೀತು ಪಡಿಸಬೇಕಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

    ಇದೇ ವೇಳೆ ವೇದಿಕೆ ಮೇಲಿದ್ದ ನಿಖಿಲ್‍ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಿಖಿಲ್ ಬೇರೆಯಲ್ಲ ನಮ್ಮ ಮನೆಯ ಮಗ, ನಾಳೆ ಅಳಿಯ ಆದರೂ ಆಗಬಹುದು ಎಂದರು. ಈ ಮೂಲಕ ಪರೋಕ್ಷವಾಗಿ ನಿಖಿಲ್ ಮಂಡ್ಯದ ಯುವತಿಯನ್ನು ಮದುವೆಯಾಗುತ್ತಾರೆ ಎಂದು ಶಾಸಕ ಸುರೇಶ್‍ಗೌಡ ಸುಳಿವು ನೀಡಿದ್ರು.

    ಈಗಾಗಲೇ ರೇವಣ್ಣ ಅವರ ಮಕ್ಕಳು ಮಂಡ್ಯದ ಅಳಿಯರಾಗಿದ್ದಾರೆ. ಇವರು ಕೂಡ ಮುಂದೆ ಇಲ್ಲಿನ ಅಳಿಯ ಆಗಬಹುದು. ಇವರನ್ನು ನಾವು ನೆರೆಯ ಆಂಧ್ರ, ತಮಿಳುನಾಡಿನಿಂದ ಕರೆತಂದಿಲ್ಲ. ಇಲ್ಲಿನ ಮಗ ಆಗಿದ್ದಾರೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.

    ನಿಖಿಲ್ ವಿರುದ್ಧ ಮದುವೆಯ ವಿಚಾರವನ್ನೇ ಪ್ರಸ್ತಾಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ನಡೆಸಿದ್ದರು. ಸದ್ಯ ವೇದಿಕೆಯಲ್ಲೇ ಮದುವೆ ವಿಚಾರ ಪ್ರಸ್ತಾಪ ಮಾಡುವ ಮೂಲಕ ಶಾಸಕರು ತಿರುಗೇಟು ನೀಡಿದ್ದಾರೆ. ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ಕೂಡ ಒಗಟ್ಟಿನ ಮಂತ್ರ ಜಪಿಸಿ ನಿಖಿಲ್ ಗೆಲುವಿಗೆ ಶ್ರಮಿಸಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಎಡಬಿಡಂಗಿಗಳು ಮೈತ್ರಿ ಅಭ್ಯರ್ಥಿ ವಿರೋಧಿಸ್ತಾರೆ: ಕಾಂಗ್ರೆಸ್ ವಿರುದ್ಧ ಸುರೇಶ್‍ಗೌಡ ಕಿಡಿ

    ಎಡಬಿಡಂಗಿಗಳು ಮೈತ್ರಿ ಅಭ್ಯರ್ಥಿ ವಿರೋಧಿಸ್ತಾರೆ: ಕಾಂಗ್ರೆಸ್ ವಿರುದ್ಧ ಸುರೇಶ್‍ಗೌಡ ಕಿಡಿ

    – ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲ್ಲ
    – ಸುಮಲತಾ ಪಕ್ಷೇತರ ಅಭ್ಯರ್ಥಿವಾಗಿ ಸ್ಪರ್ಧಿಸಿದ್ರೂ ಜೆಡಿಎಸ್ ಗೆಲ್ಲುತ್ತೆ

    ಮಂಡ್ಯ: ರಾಜ್ಯದಲ್ಲಿ ಮೈತ್ರಿ ಇದ್ದರೂ ಮಂಡ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಶತ್ರುಗಳು ಎಂಬುದನ್ನು ನಾಗಮಂಗಲ ಶಾಸಕ ಸುರೇಶ್‍ಗೌಡ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.

    ನಾಗಮಂಗಲದಲ್ಲಿ ಮಾತನಾಡಿದ ಶಾಸಕರು, ನಿಜವಾದ ಕಾಂಗ್ರೆಸ್ಸಿಗರು ಪಕ್ಷದ ಮಾತು ಕೇಳಿ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಪರ ನಿಲ್ಲುತ್ತಾರೆ. ಎಡಬಿಡಂಗಿಗಳು ಮೈತ್ರಿ ಅಭ್ಯರ್ಥಿ ವಿರೋಧಿಸುತ್ತಾರೆ ಎಂದು ಕಾಂಗ್ರೆಸ್ ಶಾಸಕರು, ಕಾರ್ಯಕರ್ತರ ವಿರುದ್ಧ ಹರಿಹಾಯ್ದರು.

    ಮಂಡ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸೈದ್ಧಾಂತಿಕವಾಗಿ ರಾಜಕಾರಣ ಮಾಡುತ್ತಿದ್ದು, ಹೊಂದಾಣಿಕೆ ಕಷ್ಟವಾಗುತ್ತಿದೆ. ಶತ್ರುಗಳ ಶತ್ರು ಮಿತ್ರರು ಎಂಬಂತೆ ಸೋತು ಕೆಲಸ ಇಲ್ಲದವರು ಸುಮಲತಾ ಅಂಬರೀಶ್ ಅವರನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಯಾರೋ ಮಾತನಾಡಿದರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು. ನಮ್ಮ ವರಿಷ್ಠರು ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮತನಾಡುತ್ತಾರೆ. ಏನೇ ಆದರೂ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಿರೆ ನಮ್ಮ ಪಕ್ಷಕ್ಕೆ ನಷ್ಟವಿಲ್ಲ. ಈ ಬಾರಿ ನಾವೇ ಗೆಲ್ಲುತ್ತೇವೆ. ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಅವರಿಗೆ ಕಾಂಗ್ರೆಸ್‍ನವರೆಲ್ಲ ಮತ ಹಾಕಿದ್ದರಾ? ಪ್ರಚಾರ ಮಾಡಿದ್ದರಾ? ಕೆಲ ಮೋಸಗಾರರು ಇರುತ್ತಾರೆ. ಈ ಬಾರಿಯೂ ಅದೇ ರೀತಿ ಮಾಡುತ್ತಾರೆ. ನಮ್ಮ ಅಭ್ಯರ್ಥಿ ಗೆಲ್ಲಿಸಲು ನಾವು ಹುಷಾರಾಗಿರುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳಿಂದ ಗೆಲ್ಲಬೇಕು. ಈ ನಿಟ್ಟಿನಲ್ಲಿ ಟಿಕೆಟ್ ಹಂಚಿಕೆ ಆಗುತ್ತೆ. ಆದರೆ ಕಾಂಗ್ರೆಸ್‍ಗೆ ಮಂಡ್ಯವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಮೈತ್ರಿ ಧರ್ಮ ಪಾಲನೆ ಆಯಾ ಪಕ್ಷಕ್ಕೆ ಬಿಟ್ಟದ್ದು ಎಂದು ತಿಳಿಸಿದರು.

    ಮಾಜಿ ಸಚಿವ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕ ಸುರೇಶ್‍ಗೌಡ ಅವರು, ಸತ್ಯ ಯಾವಾಗಲೂ ಕಹಿಯಾಗಿರುತ್ತೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕರ ಎದುರೇ ರಸ್ತೆಯನ್ನು ಕೈಯಲ್ಲಿ ಕಿತ್ತ ಗ್ರಾಮಸ್ಥರು

    ಶಾಸಕರ ಎದುರೇ ರಸ್ತೆಯನ್ನು ಕೈಯಲ್ಲಿ ಕಿತ್ತ ಗ್ರಾಮಸ್ಥರು

    -ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರಿಂದ ಅಸಮಾಧಾನ

    ಮಂಡ್ಯ: ರಸ್ತೆಯನ್ನು ಶಾಸಕರ ಎದುರೇ ಕೈಯಲ್ಲಿ ಕಿತ್ತು ಕಳಪೆ ಕಾಮಗಾರಿ ಬಗ್ಗೆ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕಹೊಸಗಾವಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

    ಚಿಕ್ಕಹೊಸಗಾವಿ ಗ್ರಾಮ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದಾಗಿದ್ದು, ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್‍ಗೌಡ ಅವರು ಶುಕ್ರವಾರ ಚಿಕ್ಕಹೊಸಗಾವಿ ಗ್ರಾಮಕ್ಕೆ ಸಭೆ ನಡೆಸಲು ಬಂದಿದ್ದರು. ಇತ್ತೀಚೆಗೆ ಗ್ರಾಮಕ್ಕೆ ಹೊಸದಾಗಿ ಡಾಂಬರು ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಅಲ್ಲಲ್ಲಿ ಬಿರುಕು ಬಿಡುತ್ತಿತ್ತು. ಗ್ರಾಮಕ್ಕೆ ಬಂದ ಶಾಸಕರನ್ನು ರಸ್ತೆಯ ಬಳಿ ಕರೆದುಕೊಂಡು ಹೋಗಿ ಡಾಂಬರನ್ನು ಕಿತ್ತು ಗ್ರಾಮಸ್ಥರು ತೋರಿಸಿದ್ದಾರೆ.

    ರಸ್ತೆಗೆ ಹಾಕಿದ್ದ ಡಾಂಬರನ್ನು ಕೈಯಲ್ಲಿ ಕಿತ್ತು ಶಾಸಕರಿಗೆ ತೋರಿಸಿ ಜೆಲ್ಲಿ ಹರಡದೆ ನೆಪ ಮಾತ್ರಕ್ಕೆ ಟಾರ್ ಹಾಕಿ ಬಿಲ್ ಪಡೆಯುತ್ತಿದ್ದಾರೆ. ಇಂತಹ ರಸ್ತೆ ಎಷ್ಟು ದಿನ ಬಾಳಿಕೆ ಬರುತ್ತೆ. ಹೀಗೆ ಆದರೆ ನಿಮಗೆ ಕೆಟ್ಟ ಹೆಸರು ಬರುತ್ತೆ ಎಂದು ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ಹೊರಹಾಕಿದರು. ಇದೆಲ್ಲವನ್ನು ನೋಡಿದ ಶಾಸಕರು ಕೂಡ ಇದೇನು ರಸ್ತೆಗೆ ಟಾರ್ ಹಾಕಲು ಜೆಲ್ಲಿಯನ್ನೇ ಹಾಕಿಲ್ಲ ಎಂಬ ರೀತಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಬರ ಪರಿಹಾರದಲ್ಲಿ ಕುಡಿಯುವ ನೀರು ಪೂರೈಸಿದ್ದ ಬಿಲ್‍ನ ಹಣ ಎರಡು ವರ್ಷವಾದರೂ ನನ್ನ ಕೈ ಸೇರಿಲ್ಲ ಎಂದು ಶಾಸಕರ ಎದುರೇ ಜೆಡಿಎಸ್ ಪಕ್ಷದ ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ್ ಎಂಬವರು, ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಲತಾ ಕುಡಿಯುವ ನೀರು ಪೂರೈಸಿದ ಬಿಲ್ ನೀಡುತ್ತಿಲ್ಲ. ನನ್ನನ್ನು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ದೂರಿದರು. ಈ ಸಮಯದಲ್ಲಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಶಾಸಕರೇ ಎಲ್ಲರನ್ನೂ ಸಮಾಧಾನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮತ ಹಾಕ್ಲಿಲ್ಲ ಅಂತ ಮನೆ ಕೆಡವಿದ್ರು – ಮಂಡ್ಯದಲ್ಲಿ ಮತ್ತೆ ಜೆಡಿಎಸ್, ಕಾಂಗ್ರೆಸ್ ಕಿತ್ತಾಟ!

    ಮತ ಹಾಕ್ಲಿಲ್ಲ ಅಂತ ಮನೆ ಕೆಡವಿದ್ರು – ಮಂಡ್ಯದಲ್ಲಿ ಮತ್ತೆ ಜೆಡಿಎಸ್, ಕಾಂಗ್ರೆಸ್ ಕಿತ್ತಾಟ!

    ಮಂಡ್ಯ: ವಿಧಾನಸೌಧದಲ್ಲಿ ಮೈತ್ರಿ ಸರ್ಕಾರ ರಚಿಸಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಸ್ಥಿತಿ ಜಿಲ್ಲೆಯಲ್ಲಿ ತದ್ವಿರುದ್ಧವಾಗಿದೆ.

    ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವಿನ ರಾಜಕೀಯ ದ್ವೇಷ ಎಷ್ಟಿದೆ ಅಂದರೆ, ಕಳೆದ ವಿಧಾನಸೌಧ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಚಲುವರಾಯಸ್ವಾಮಿಗೆ ಮತ ಹಾಕಿದ್ದಾರೆ ಎಂಬ ದ್ವೇಷದಲ್ಲಿ ನಾಗಮಂಗಲ ಶಾಸಕ ಸುರೇಶ್‍ಗೌಡ ಮತದಾರರೊಬ್ಬರ ಮನೆ ಒಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಬಚ್ಚಿಕೊಪ್ಪಲು ಗೇಟ್‍ನಿಂದ ಹುರುಳಿಗಂಗನಹಳ್ಳಿಗೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ರಸ್ತೆ ಆಗಲಿಕಾರಣಕ್ಕೆ ಮನೆ ಅಡ್ಡ ಬರುತ್ತಿದೆ ಎಂದು ಮನೆ ಕೆಡವಲಾಗಿದೆ. ಆದರೆ ತಮ್ಮ ಮನೆಯನ್ನ ಕಡವದಂತೆ ಮನೆ ಒಡತಿ ಸುಧಾಮಣಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡಿದ ಅಧಿಕಾರಿಗಳು ಮನೆ ಕೆಡವಿ ಹಾಕಿದ್ದಾರೆ.

    ಅಧಿಕಾರಿಗಳ ದರ್ಪ ಎಷ್ಟಿದೆ ಎಂದರೆ ಮನೆಯ ಪಕ್ಕ ಇದ್ದ ಕೊಟ್ಟಿಗೆಯನ್ನು ಬಿಟ್ಟಿಲ್ಲ. ಕೊಟ್ಟಿಗೆಯನ್ನು ಕಡವಿದ ಕಾರಣ ಅವಶೇಷಗಳಡಿ ಸಿಲುಕಿರುವ ಹಸು-ಎಮ್ಮೆಗಳು ನರಳಾಡುತ್ತಿದ್ದು, ಶಾಸಕ ಸುರೇಶ್‍ಗೌಡ ಕುಮ್ಮಕ್ಕಿನಿಂದ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಚಲುವರಾಯಸ್ವಾಮಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮನೆ ಒಡತಿ ಸುಧಾಮಣಿ ಅವರು, 6 ತಿಂಗಳಿಂದ ಪದೇ ಪದೇ ಅಧಿಕಾರಿಗಳು ಮನೆ ಬಳಿ ಬಂದು ಸಮಸ್ಯೆ ನೀಡುತ್ತಿದ್ದಾರೆ. ಆದರೆ ಈ ಬಗ್ಗೆ 3 ಬಾರಿ ಶಾಸಕರಿಗೂ ದೂರು ನೀಡಲಾಗಿದೆ. ಅಧಿಕಾರಿಗಳಿಗೆ ಒತ್ತಡ ಹಾಕಿದ ಕಾರಣ ಕೃತ್ಯ ನಡೆಸಿದ್ದು, ನಮಗೇ ನ್ಯಾಯ ದೊರೆಯದಿದ್ದರೆ ಇಡೀ ಕುಟುಂಬ ಸಿಎಂ ಕುಮಾರಸ್ವಾಮಿ ಅವರ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

    https://www.youtube.com/watch?v=AtcVfWX1fsw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv