Tag: MLA BK Sangamesh

  • ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಭಾರತೀಯನಾಗಿ ಮತ್ತೆ ಹುಟ್ಟಬೇಕು ಅನ್ನೋದು ನನ್ನಾಸೆ: ಮಧು ಬಂಗಾರಪ್ಪ

    ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಭಾರತೀಯನಾಗಿ ಮತ್ತೆ ಹುಟ್ಟಬೇಕು ಅನ್ನೋದು ನನ್ನಾಸೆ: ಮಧು ಬಂಗಾರಪ್ಪ

    ಬೆಂಗಳೂರು: ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಮತ್ತೆ ಭಾರತೀಯನಾಗಿ ಹುಟ್ಟಬೇಕು ಅನ್ನೋದು ನನ್ನಾಸೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.

    ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಮುಂದಿನ ಜನ್ಮದಲ್ಲಿ ಮುಸ್ಲಿಂರಾಗಿ ಹುಟ್ಟಬೇಕು ಶಾಸಕ ಸಂಗಮೇಶ್ (BK Sangamesh) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಶಾಸಕರ ಆಸೆ ಬಗ್ಗೆ ಅವರನ್ನು ಹೋಗಿ ಕೇಳಿ, ಅದು ನನಗೆ ಗೊತ್ತಿಲ್ಲ. ನಾನು ಮಾತ್ರ ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕು, ಭಾರತೀಯನಾಗಿ ಹುಟ್ಟಬೇಕು ಅನ್ನೋದು ನನ್ನಾಸೆ. ಅವರಿಗೆ ಆ ರೀತಿ ಅಸೆ ಇದ್ದರೆ ಅವರು ಉತ್ತರಿಸಲಿ ಎಂದರು. ಇದನ್ನು ಓದಿ: ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು: `ಕೈ’ ಶಾಸಕ ಸಂಗಮೇಶ್

    ಹಿಂದೆ ಮಾಜಿ ಪ್ರಧಾನ ಮಂತ್ರಿಗಳು ಏನು ಹೇಳಿದ್ರು ಗೊತ್ತಾ? ಎಂದು ಪರೋಕ್ಷವಾಗಿ ದೇವೇಗೌಡರ (H.D Devegowda) ಹೆಸರು‌ ಹೇಳದೇ ಅವರ ಮಾತಿನ ಬಗ್ಗೆ ಪ್ರಸ್ತಾಪಿಸಿದರು. ನಾನು ಈಗ ಅವರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಅವರವರ ಆಯ್ಕೆ ಅವರವರಿಗೆ ಬಿಡಬೇಕು. ಅದು ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.

    ಇನ್ನು ಕಾಂಗ್ರೆಸ್ ಸರ್ಕಾರ ಬಂದಾಗಲೇ ಭದ್ರಾವತಿಯ ರೀತಿಯ ಘಟನೆಗಳು ನಡೆಯುತ್ತವೆ ಎಂಬ ಬಿಜೆಪಿ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ಉತ್ತರ ಕೊಡೋಕೆ ನಾನು‌ ಮಿನಿಸ್ಟರ್ ಆಗಿಲ್ಲ. ಸರ್ಕಾರದ ಕುಮ್ಮಕ್ಕಿನಿಂದ ಬಿಜೆಪಿಯವರು ಹೇಳ್ತಾರಾ? ತಪ್ಪು ಮಾಡಿದಾಗ ಶಿಕ್ಷೆ ಆದಾಗ ಕಾನೂನು ಇದೆ. ಬಿಜೆಪಿಯವರು ಏನು ಹೇಳ್ತಾರೆ ಅಂತ ಅದಕ್ಕೆ ಉತ್ತರ ಕೊಡೋಕೆ ನಾನಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ; 12 ಸೆಕೆಂಡ್ ವೀಡಿಯೋ ಪರಿಶೀಲಿಸಿ ಕ್ರಮ: ಮಧು ಬಂಗಾರಪ್ಪ

  • ಸದನದ ಬಾವಿಯಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ – ಸಂಗಮೇಶ್ 1 ವಾರ ಅಮಾನತು

    ಸದನದ ಬಾವಿಯಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ – ಸಂಗಮೇಶ್ 1 ವಾರ ಅಮಾನತು

    – ಅಮಾನತು ಮಾಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ

    ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಹೈಡ್ರಾಮಾ ನಡೆದಿದೆ. ಸದನದ ಬಾವಿಗಿಳಿದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅಂಗಿ ಬಿಚ್ಚಿ ದುರ್ವರ್ತನೆ ತೋರಿದ್ದಾರೆ. ಇದನ್ನು ಖಂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ವಾರಗಳ ಕಾಲ ಸದನಕ್ಕೆ ಭಾಗವಹಿಸದಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.

    ಸದನದಲ್ಲಿ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಅಶಿಸ್ತು ಪ್ರದರ್ಶಿಸಿದ್ದು, ಈ ಹಿನ್ನೆಲೆ ಮಾರ್ಚ್ 12ರ ವರೆಗೆ ಸಂಗಮೇಶ್‍ರನ್ನು ಕಲಾಪದಿಂದ ಅಮಾನತು ಮಾಡಿ ಸ್ಪೀಕರ್ ಆದೇಶಿಸಿದ್ದಾರೆ. ನಿಯಮ 348ರ ಅಡಿ ಅಮಾನತು ಮಾಡಿ ಸ್ಪೀಕರ್ ಮಧ್ಯಾಹ್ನ 3 ಗಂಟೆಗೆ ಕಲಾಪ ಮುಂದೂಡಿದರು.

    ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚರ್ಚೆ ನಡೆಸುವ ಬಗ್ಗೆ ಸ್ಪೀಕರ್ ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಡಿಸಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವ ನಿಯಮಾವಳಿಗಳಲ್ಲಿ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ತಕ್ಷಣವೇ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡು ಗದ್ದಲ ಎಬ್ಬಿಸಿದರು. ಅಲ್ಲದೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಸಂಗಮೇಶ್ ಬಾವಿಗಿಳಿದಾಗ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದ್ದಾರೆ.

    ವಿಧಾನಸಭೆ ಕಲಾಪಕ್ಕೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ತನ್ವೀರ್ ಸೇಠ್, ಅಖಂಡ ಶ್ರೀನಿವಾಸಮೂರ್ತಿ ಕಲಾಪಕ್ಕೆ ಗೈರಾಗಿದ್ದಾರೆ ಎಂದರು. ಈ ವೇಳೆ ಸಿದ್ದರಾಮಯ್ಯರವರಿಗೆ ಸಾಥ್ ನೀಡಿದ ರಮೇಶ್ ಕುಮಾರ್ ಮತ್ತು ಹೆಚ್.ಕೆ.ಪಾಟೀಲ್ ಒನ್ ನೇಷನ್, ಒನ್ ಎಲೆಕ್ಷನ್ ಚರ್ಚೆಗೆ ಅವಕಾಶ ಕೊಟ್ಟರೆ ಕ್ರಿಯಾಲೋಪ ಆಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಮಧ್ಯೆ ಎದ್ದು ನಿಂತ ಸಿಎಂ ಬಿಎಸ್ ಯಡಿಯೂರಪ್ಪ, ಸ್ಪೀಕರ್ ಅವರು ಸಂವಿಧಾನದ ಚೌಕಟ್ಟಿನಲ್ಲೇ ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ ಸಹಕರಿಸಿ ಎಂದು ಮನವಿ ಮಾಡಿದರು.

    ಈ ಎಲ್ಲ ಗೊಂದಲಗಳ ನಡುವೆ ಸ್ಪೀಕರ್ ಒಂದು ದೇಶ, ಒಂದು ಚುನಾವಣೆ ಚರ್ಚೆಯ ಪ್ರಸ್ತಾವನೆ ಓದಲು ಮುಂದುವರಿಸಿದರು. ಈ ವೇಳೆ ಇದು ಆರ್‍ಎಸ್‍ಎಸ್ ಅಜೆಂಡಾ, ಪ್ರಧಾನಿ ಡಿಕ್ಟೇಟರ್ ಎಂದು ಸಿದ್ದರಾಮಯ್ಯ ಜರಿದರು. ಅಲ್ಲದೆ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಇದರಿಂದ ಕೋಪಗೊಂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 19 ಜನ ಮಾತನಾಡುವವರ ಪಟ್ಟಿಯನ್ನು ಕೊಟ್ಟಿದ್ದೀರಿ. ಮೊದಲಿನಿಂದಲೂ ಇದನ್ನು ಒಪ್ಪಿಕೊಂಡು ಈಗ ಬೆಳಗ್ಗೆ ಏಕಾಏಕಿ ಬೇಡ ಅಂದರೆ ಏನು ಅರ್ಥ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ, ಬೇಕು ಅಂತಾನೇ ಅಂಗಿ ಬಿಚ್ಚಿದ್ದು, ನನಗೆ ವಿಷಾದ ಇಲ್ಲ. ನ್ಯಾಯ ಸಿಗಬೇಕು ಎಂದೇ ಅಂಗಿ ಬಿಚ್ಚಿದ್ದು. ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಸ್ಪೀಕರ್ ಬಿಜೆಪಿ ಪರ, ನಾನು ಧರಣಿ ಮುಂದುವರಿಸುತ್ತೇನೆ. ಅಪ್ಪ, ಮಕ್ಕಳು, ಈಶ್ವರಪ್ಪ ಭದ್ರಾವತಿಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ನಿಂತಿದ್ದಾರೆ ಎಂದರು.

  • ಲಕ್ಷ್ಮಿ ಹೆಬ್ಬಾಳ್ಕರನ್ನ ಕಿತ್ತೂರು ರಾಣಿ ಚೆನ್ನಮ್ಮರಿಗೆ ಹೋಲಿಸಿದ ಭದ್ರಾವತಿ ಶಾಸಕ

    ಲಕ್ಷ್ಮಿ ಹೆಬ್ಬಾಳ್ಕರನ್ನ ಕಿತ್ತೂರು ರಾಣಿ ಚೆನ್ನಮ್ಮರಿಗೆ ಹೋಲಿಸಿದ ಭದ್ರಾವತಿ ಶಾಸಕ

    – ಮಲೆನಾಡಿನ ಹುಡುಗಿಗೆ ವಜ್ರದ ಉಂಗುರ ತೊಡಿಸಿದ ಶಾಸಕಿ ಪುತ್ರ

    ಶಿವಮೊಗ್ಗ: ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಿವಮೊಗ್ಗದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಕುಟುಂಬ ಇಂದು ಸಂಬಂಧದ ಬಾಂಧವ್ಯದೊಂದಿಗೆ ಒಂದಾಗಿವೆ. ಜಿಲ್ಲೆಯಲ್ಲಿ ಈ ಕುಟುಂಬದ ಕುಡಿಗಳ ನಿಶ್ಚಿತಾರ್ಥ ನೆರವೇರಿದ್ದು, ಸಂಪ್ರದಾಯದಂತೆ ಈ ಕಾರ್ಯಕ್ರಮ ನೆರವೇರಿದೆ.

    ನಗರದ ಸರ್ಜಿ ಕನ್ವೆನ್ಷನ್ ಹಾಲ್‍ನಲ್ಲಿ ಸಂಗಮೇಶ್ ಸಹೋದರ ಬಿ.ಕೆ.ಶಿವಕುಮಾರ್ ಪುತ್ರಿ ಹಿತಾ ಹೊತೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ನಿಶ್ಚಿತಾರ್ಥ ನೆರವೇರಿತು. ನಿಶ್ಚಿತಾರ್ಥಕ್ಕೆ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಮುಖಂಡರೆಲ್ಲರೂ ಪಾಲ್ಗೊಂಡಿದ್ದರು. ವಧು-ವರ ಇಬ್ಬರು ಪರಸ್ಪರ ವಜ್ರದ ಉಂಗುರ ಬದಲಾಯಿಸಿಕೊಂಡಿದ್ದು, ಆಹ್ವಾನಿತ ಗಣ್ಯರು ಮತ್ತು ಹಿರಿಯರಿಂದ ಆಶೀರ್ವಾದ ಪಡೆದರು.

    ಈ ವೇಳೆ ಮಾತನಾಡಿದ ಸಂಗಮೇಶ್, ಲಕ್ಷ್ಮಿ ಹೆಬ್ಬಾಳ್ಕರ್ ಮನೆಗೆ ಸೊಸೆಯಲ್ಲ, ಮಗಳಾಗಿ ನಮ್ಮ ಮಗಳನ್ನು ಕಳುಹಿಸುತ್ತಿದ್ದೇವೆ ಎಂದು ಸಂತಸ ಹಂಚಿಕೊಂಡರು. ಅಲ್ಲದೇ ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮರಾಗಿ ಹೋರಾಟ ಮಾಡಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ. ಅವರ ಕುಟುಂಬಂದೊಂದಿಗೆ ಬಾಂಧವ್ಯ ಬೆಸೆದಿರುವುದು ಸಂತಸವಾಗಿದೆ ಎಂದರು.

    ನವೆಂಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಗೋವಾದಲ್ಲಿ ನಿಶ್ಚಯವಾಗಿದೆ. ಈ ಮೂಲಕ ರಾಜಕೀಯ ಕುಟುಂಬವೊಂದು ನೆಂಟಸ್ತನ ಬೆಸೆದಂತಾಗಿದೆ. ಮಲೆನಾಡಿನ ಭದ್ರಾ ದಂಡೆಯ ಮಗಳು, ನಮ್ಮ ಮನೆಯ ಸೊಸೆಯಾಗುತ್ತಿರುವುದಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದರು.

    ಇದೊಂದು ಋಣಾನುಬಂಧವಾಗಿದ್ದು ಹುಡುಗ-ಹುಡುಗಿ ಒಪ್ಪಿಕೊಂಡು ಈ ಮದುವೆ ನಿಶ್ಚಯವಾಗಿತ್ತು. ನಂತರ ಎರಡೂ ಕುಟುಂಬಗಳು ಸಂತೋಷದಿಂದ ಒಪ್ಪಿ ನಿಶ್ಚಿತಾರ್ಥ ನೆರವೇರಿಸಿವೆ. ನಿಶ್ಚಿತಾರ್ಥದಲ್ಲಿ ಬಂದ ಅತಿಥಿಗಳು ಮತ್ತು ಆಹ್ವಾನಿತರಿಗೆಲ್ಲರಿಗೂ ಸಂಗಮೇಶ್ ಕುಟುಂಬ ಮೈಸೂರು ಪೇಟ ತೊಡಿಸಿ, ಬರಮಾಡಿಕೊಂಡಿದ್ದಲ್ಲದೇ ಆತಿಥ್ಯ ಕೂಡ ಭರ್ಜರಿಯಾಗಿಯೇ ನೀಡಿದ್ದಾರೆ.