Tag: Minister Satish Jarakiholi

  • ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿ

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿ

    ಬೆಳಗಾವಿ: ನಗರ ನೀರು ಶುದ್ಧೀಕರಣ ಯೋಜನೆಗೆ ರೈತರು ವಿರೋಧ ವ್ಯಕ್ತಿಪಡಿಸಿ ಕುರ್ಚಿ ಮುರಿದು ಗಲಾಟೆ ವಿಚಾರಕ್ಕೆ ಸಂಬಂಧಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ.

    ಯೋಜನೆಗೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಹಿಂದೆಯೇ ಯೋಜನೆಗೆ ಬೇಕಾದ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆದಿದ್ದು, ಕಾನೂನು ಪ್ರಕ್ರಿಯೆ ಸಂರ್ಪೂಣವಾಗಿ ಆಗಿದೆ. ಆದ್ದರಿಂದ ಈಗ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಯಾವುದೇ ಪ್ರಯೋಜನ ಆಗೋದಿಲ್ಲ. ಸದ್ಯ ರೈತರಿಗೆ ನಷ್ಟ ಆಗದಂತೆ ಮಾತ್ರ ಕ್ರಮಕೈಗೊಳ್ಳಲು ಸಾಧ್ಯ. ಈ ಜವಾಬ್ದಾರಿಯನ್ನ ತಾವೇ ನಿರ್ವಹಿಸುತ್ತೇವೆ ಎಂದರು.

    ಈಗಾಗಲೇ ನಾನು ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಿದ್ದೇನೆ. 2 ವರ್ಷಗಳ ಹಿಂದೆಯೇ ಯೋಜನೆ ಕಾರ್ಯ ರೂಪಕ್ಕೆ ಬಂದಿದ್ದು, ಬೆಳಗಾವಿ ನಗರಕ್ಕೆ ಈ ಯೋಜನೆ ಅನಿವಾರ್ಯ ಆಗಿದೆ. ರೈತರಿಗೆ ನಷ್ಟ ಆಗದಂತೆ ಈ ಯೋಜನೆಯನ್ನು ಜಾರಿ ಮಾಡಿ, ವಿಶೇಷ ಪ್ರಕರಣದ ಅಡಿಯಲ್ಲಿ ರೈತರಿಗೆ 30 ಲಕ್ಷ ರೂ. ಕೊಡಿಸುವ ಬಗ್ಗೆ ಪ್ರಸ್ತಾವನೆ ಇದೆ. ಈಗಾಗಲೇ ಸರ್ಕಾರದ ಹಣ ಬಿಡುಗಡೆಯಾಗಿ ಮತ್ತೆ ವಾಪಸ್ ಹೋಗಿದ್ದು, 2ನೇ ಬಾರಿಗೆ ಹಣ ವಾಪಸ್ ಹೋದರೆ ಮತ್ತೆ ರೈತರಿಗೆ ಪರಿಹಾರ ನೀಡುವುದು ಕಷ್ಟಸಾಧ್ಯವಾಗಲಿದೆ. ಇದನ್ನ ಸ್ಥಳೀಯ ಶಾಸಕರು ಆರ್ಥೈಸಿಕೊಳ್ಳಬೇಕು ಎಂದರು.

    ಜಿಲ್ಲಾಧಿಕಾರಿಗಳು ಬದಲಾವಣೆ ಆದರೆ ರೈತರಿಗೆ ನ್ಯಾಯ ನೀಡುತ್ತೇನೆ ಎಂಬ ಹೆಬ್ಬಾಳ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಳೆ ಜಿಲ್ಲಾಧಿಕಾರಿಗಳಿದ್ರು, ಯಾವ ಡಿಸಿ ಬಂದರೂ ಏನು ಮಾಡಲು ಆಗಲ್ಲ. ಈ ವಿಚಾರದಲ್ಲಿ ಡಿಸಿ ಹೆಲ್ಪ್ ಲೆಸ್. ಜಿಲ್ಲಾಧಿಕಾರಿಗಳು ಯಾರೇ ಇರಲಿ, ಯೋಜನೆಗೆ ಜಮೀನು ಕೊಡಿಸುವುದು ಅವರ ಜವಾಬ್ದಾರಿ. ಈ ಬಗ್ಗೆ ನ್ಯಾಯಾಲಯದ ನಿರ್ದೇಶನವೂ ಇದೆ ಎಂದರು.

    ಬೆಳಗಾವಿ ಉಸ್ತುವಾರಿ ಸಚಿವನಾಗಿ ಯೋಜನೆ ಬಗ್ಗೆ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೆ ಇಲ್ಲ. ರೈತರಿಗೆ ಸುಳ್ಳು ಭರವಸೆ ನೀಡಲು ಆಗುವುದಿಲ್ಲ, ಇದನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅನ್ಯಾಯ, ತೊಂದರೆ ಆಗಿದ್ದರೆ ಸಹಿಸಿಕೊಳ್ಳಬೇಕೇ ವಿನಃ ಪರ್ಯಾಯ ಮಾರ್ಗವಿಲ್ಲ. ಶಾಸಕರು ಸರ್ಕಾರದ ಒಂದು ಭಾಗ, ರೈತರಿಗೆ ತಿಳಿ ಹೇಳುವುದು ಅವರ ಕರ್ತವ್ಯ. ಯೋಜನೆಯ ಬಗ್ಗೆ ಇಬ್ಬರ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ ಎಂದು ತಿಳಿಸಿದರು.

    ಕೊಳಚೆ ನೀರು ಶುದ್ಧೀಕರಣ ಯೋಜನೆಗೆ ವಿರೋಧ ವ್ಯಕ್ತಡಿಸಿ ನಿನ್ನೆಯಷ್ಟೇ ಆ ಭಾಗದ ರೈತರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಎದುರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಅಧಿಕಾರಿಗಳಿಗೆ ತಂದಿದ್ದ ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು.

    https://www.youtube.com/watch?v=0YMqp89UWas

  • ಸಚಿವರ ಕಾರಿನ ಕೆಂಪು ದೀಪ ನಿಷೇಧವಾಗಿದೆ – ಸಹೋದರನಿಗೆ ಟಾಂಗ್ ಕೊಟ್ಟ ಸತೀಶ್ ಜಾರಕಿಹೊಳಿ

    ಸಚಿವರ ಕಾರಿನ ಕೆಂಪು ದೀಪ ನಿಷೇಧವಾಗಿದೆ – ಸಹೋದರನಿಗೆ ಟಾಂಗ್ ಕೊಟ್ಟ ಸತೀಶ್ ಜಾರಕಿಹೊಳಿ

    ಬೆಳಗಾವಿ: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕೆಂಪುಗೂಟದ ಕಾರುಗಳಲ್ಲಿ ಓಡಾಡುತ್ತಿರುವವರು ಮಾಜಿ ಆಗಲಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕುಟುಕಿರುವ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಸಚಿವರ ಕಾರಿನ ಕೆಂಪು ದೀಪ ನಿಷೇಧವಾಗಿದೆ. ಅವರಿಗೆ ಗೊತ್ತಿಲ್ಲ ಅನ್ನಿಸುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಬಿಜೆಪಿ ಹೆಚ್ಚಿನ ಸ್ಥಾನಗಳಿಸಿದರೆ ಖಂಡಿತ ಸರ್ಕಾರ ಅಸ್ಥಿರಗೊಳಿಸಲು ಕೈ ಹಾಕುತ್ತದೆ. ಅಲ್ಲದೇ 2014 ರಲ್ಲಿ ಬಂದ ಸಂಖ್ಯಾಬಲ ಬಂದರೂ ಈ ಪ್ರಯತ್ನ ನಡೆಯುತ್ತದೆ ಎಂದರು. ಇದೇ ವೇಳೆ ಸಹೋದರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರಮೇಶ್ ಜಾರಕಿಹೊಳಿ ಅವರಿಗೆ ಕೆಂಪು ಗೂಟದ ಕಾರು ಮತ್ತು ಸರ್ಕಾರ ಬಗ್ಗೆ ಏನೂ ಐಡಿಯಾ ಇರಲ್ಲ. ಕೆಂಪು ದೀಪ ನಿಷೇಧವಾಗಿರುವುದು ಅವರಿಗೆ ಗೊತ್ತಿಲ್ಲ ಅನಿಸುತ್ತೆ,. ಏನು ಗೊತ್ತಿಲ್ಲದೆ ಮಾತನಾಡುತ್ತಾರೆ. ಅಧಿಕಾರ ಇದ್ದರೆ ಹಾಲಿ, ಇಲ್ಲವಾದರೆ ಅಧಿಕಾರ ಹೋದವರು ಮಾಜಿ ಆಗುತ್ತಾರೆ. ಅವರ ಆಸೆ ಮೇ 23 ನಂತರ ಆದರು ಬಂದರೇ ಬರಲಿ ನೋಡೋಣ ಎಂದರು.

    ಮೈತ್ರಿ ಪಾಲನೆ ಆಗಿಲ್ಲ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಅಲ್ಲಲ್ಲಿ ಈ ಬಗ್ಗೆ ಅಸಮಾಧಾನ ಇರುವುದು ನಿಜ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವದಿಲ್ಲ ಎಂದರು. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಎಲ್ಲಾ ರಾಜ್ಯದಲ್ಲೂ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಇರುವ ಸರ್ಕಾರವನ್ನ ಅಸ್ಥಿರ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮೋದಿ ನಡೆ ಸರಿಯಲ್ಲ. ಆದರೆ ಮೋದಿ ಕಾಲದಲ್ಲಿ ಇದು ಸಾಮಾನ್ಯವಾಗಿದೆ ಎಂದರು.

    ರಾಜ್ಯಕ್ಕೆ ಕೃಷ್ಣಾ ನದಿ ನೀರು ಬಿಡಿಸಿಕೊಳ್ಳುವ ಬಗ್ಗೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಇಂದು ಅಥವಾ ನಾಳೆ ನೀರು ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು. ಇದೇ ವೇಳೆ ತಮ್ಮ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಯಾವುದೇ ರೀತಿಯಲ್ಲಿ ಅಸಮಾಧಾನ ಇಲ್ಲ. ನಾನು ಯಾವುದೇ ಹೇಳಿಕೆ ನೀಡಿಲ್ಲ ಎಂಬುವುದು ಅವರಿಗೂ ಅರಿವಿಗೆ ಬಂದಿದೆ. ಒಟ್ಟಾಗಿ ಎಲ್ಲರೂ ಕುಂದಗೋಳ ಉಪ ಚುನಾವಣೆ ಎದುರಿಸುತ್ತೇವೆ ಎಂದರು.

  • ಡಿಕೆಶಿ ಲೀಡರೇ ಅಲ್ಲ, ನಮ್ಮ ರೇಂಜ್ ಏನಿದ್ರೂ ರಾಹುಲ್ ಗಾಂಧಿ – ರಮೇಶ್ ಜಾರಕಿಹೊಳಿ

    ಡಿಕೆಶಿ ಲೀಡರೇ ಅಲ್ಲ, ನಮ್ಮ ರೇಂಜ್ ಏನಿದ್ರೂ ರಾಹುಲ್ ಗಾಂಧಿ – ರಮೇಶ್ ಜಾರಕಿಹೊಳಿ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿರುದ್ಧ ನಿರಂತರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾ, ಬಂಡಾಯದ ಭಾವುಟ ಹಿಡಿದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಲೀಡರೇ ಅಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಧಾನಕ್ಕೆ ಡಿಕೆ ಶಿವಕುಮಾರ್ ಸಿದ್ಧ ಎಂಬ ಹೇಳಿಕೆಗೆ ತಿರುಗೇಟು ನೀಡಿದರು. ಡಿಕೆ ಶಿವಕುಮಾರ್ ಲೀಡರೇ ಅಲ್ಲ. ನಮ್ಮ ರೇಂಜ್ ಏನಿದ್ರೂ ರಾಹುಲ್ ಗಾಂಧಿ ಎಂದು ಹೇಳಿದರು. ಆ ಮೂಲಕ ಮತ್ತೊಮ್ಮೆ ರಾಹುಲ್‍ರೊಂದಿಗೆ ಚರ್ಚೆ ನಡೆಸುತ್ತರಾ ಎನ್ನುವ ಪ್ರಶ್ನೆ ಎದ್ದಿದೆ.

    ರಮೇಶ್ ಜಾರಕಿಹೊಳಿ ಅವರ ಈ ಹೇಳಿಕೆ ಆಪರೇಷನ್ ಕಮಲ ಈ ಬಾರಿಯೂ ವಿಫಲವಾಗಲಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದ್ದು. ರಾಹುಲ್ ಗಾಂಧಿ ಮನವೊಲಿಸಿದರೆ ಕಾಂಗ್ರೆಸ್‍ನಲ್ಲೇ ಉಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

    ಇದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್ ಅವರು, ಶಾಸಕ ರಮೇಶ್ ಜಾರಕಿಹೋಳಿ ರಾಜೀನಾಮೆ ವಿಚಾರವನ್ನ ಪಕ್ಷದ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಾರೆ. ಅವರು ಎಲ್ಲವನ್ನೂ ಗಮನಿಸುತ್ತಾರೆ. ನಾವು ಮನವೊಲಿಸಲು ಪ್ರಯತ್ನ ಪಟ್ಟೆವು, ಆದರೆ ನಾನು ಮನವೊಲಿಸಲು ಅವರು ಸಿಕ್ಕರೆ ತಾನೇ? ಸಿಕ್ಕರೆ ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಅಲ್ಲದೇ ಇಲ್ಲಿಯವರೆಗೂ ಅವರನ್ನ ಗೌರವದಿಂದ ಕಂಡಿದ್ದೇವೆ. ಪಕ್ಷ ಶಾಸಕ, ಸಚಿವ ಸ್ಥಾನ ಎಲ್ಲವನ್ನೂ ಅವರಿಗೆ ನೀಡಿದೆ. ಅವರಿಗೆ ಉಸಿರುಕಟ್ಟುವಂತೆ ಏನಾಗಿದೆಯೋ ಗೊತ್ತಿಲ್ಲ. ಭಗವಂತ ಅವರ ಆಸೆ ಈಡೇರಿಸುವಂತೆ ಮಾಡಲಿ ಎಂದು ಹೇಳಿ ಟಾಂಗ್ ನೀಡಿದ್ದರು.

  • ಒಂದೇ ಒಂದು ‘ವಸ್ತು’ವಿಗಾಗಿ ‘ಸಾಹುಕಾರ’ನ ಸಿಟ್ಟು – ಸಹೋದರನ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

    ಒಂದೇ ಒಂದು ‘ವಸ್ತು’ವಿಗಾಗಿ ‘ಸಾಹುಕಾರ’ನ ಸಿಟ್ಟು – ಸಹೋದರನ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

    ಬೆಂಗಳೂರು: ಲೋಕಸಭಾ ಚುನಾವಣೆ ಮತದಾನ ಮುಕ್ತಾಯವಾಗುತ್ತಿದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಇತ್ತ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು, ಪಕ್ಷದ ವಿರುದ್ಧ ಅವರು ಸಿಟ್ಟು ಮಾಡಿಕೊಳ್ಳಲು ಕಾರಣ ಏನು ಎನ್ನುವುದನ್ನು ಸಚಿವ ಸತೀಶ್ ಜಾರಕಿಹೊಳಿ ಬಿಚ್ಚಿಟ್ಟಿದ್ದಾರೆ.

    ರಮೇಶ್ ಜಾರಕಿಹೊಳಿ ಅವರು ಆ ಒಂದೇ ಒಂದು ವಸ್ತುಗಾಗಿ ಸಿಟ್ಟಾಗಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಸಹೋದರರನ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಬಿಜೆಪಿ ಬೆಂಬಲ ನೀಡುತ್ತಾರೆ. ಈ ಬಗ್ಗೆ ಅವರಿಗೆ ಪ್ರಶ್ನೆ ಮಾಡಿ. ಬೇರೆ ಅವರ ವಿರುದ್ಧ ಆರೋಪ ಮಾಡುವ ಮುನ್ನ ಅವರು ಸ್ಪಷ್ಟವಾಗಿ ಇದ್ದರಾ ಎಂಬುವುದನ್ನು ತಿಳಿದುಕೊಳ್ಳಬೇಕು. ಎಂಎಲ್‍ಎ ಎಂಬ ಒಂದು ಅಂಶವನ್ನು ಬಿಟ್ಟರೇ ಅವರಿಗೆ ಬೇರೆ ಯಾವುದೇ ಅರ್ಹತೆ ಇಲ್ಲ. ಇದು ರಾಜ್ಯದ ಎಲ್ಲಾ ಜನರಿಗೂ ಗೊತ್ತು. ಪಕ್ಷಕ್ಕೆ ರಾಜೀನಾಮೆ ನೀಡಿ ಮರು ಆಯ್ಕೆ ಆಗಿ ಬರಲಿ. ಅವರ ಅರ್ಹತೆ ತಿಳಿಯುತ್ತದೆ ಎಂದು ಸವಾಲು ಎಸೆದರು.

    ಇದೇ ವೇಳೆ ರಮೇಶ್ ಅವರು ತಮ್ಮ ಜೀವನದಲ್ಲಿ ಮಾಡಿಕೊಂಡಿದ್ದ ಒಂದು ವಸ್ತುವನ್ನು ಕಳೆದುಕೊಂಡಿದ್ದು, ಅದಕ್ಕಾಗಿಯೇ ಈ ರೀತಿ ಆಡುತ್ತಿದ್ದಾರೆ ಎಂದು ನುಕ್ಕು ಸುಮ್ಮನಾದರು. ಆ ವಸ್ತುವನ್ನು ಕಳೆದುಕೊಂಡ ಬಗ್ಗೆ ಅವರಿಗೆ ಪ್ರಶ್ನೆ ಮಾಡಿ. ಆ ಬಗ್ಗೆ ನಾನು ಹೇಳಲು ಆಗಲ್ಲ. ಅವನೇ ಏನೋ ತಿಳಿದುಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾನೆ. ನೀವೇ ಈ ಬಗ್ಗೆ ಪ್ರಶ್ನೆ ಮಾಡಿ ಎಂದರು.

    ಇತ್ತ ರಾಜೀನಾಮೆ ಅಂತಿಮ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿರುವ ರಮೇಶ್ ಜಾರಕಿಹೊಳಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದರು. ಆ ವಸ್ತು ಅಂದರೆ ‘ಮಂತ್ರಿ ಸ್ಥಾನ’ ಎನ್ನಬಹುದು ಅದಕ್ಕಾಗಿಯೇ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ನಾನು ಸ್ವತಃ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಸಚಿವ ಸ್ಥಾನ ಬೇಕು ಎಂದಿದ್ದರೆ ದೆಹಲಿಗೆ ಹೋಗಿ ತರುತ್ತೇನೆ. ನಾನು ಯಾವತ್ತು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಅವನೇ ನನ್ನ ಮನೆಗೆ 2 ಬಾರಿ ಭೇಟಿ ನೀಡಿದ್ದನ್ನು ನೀವು ನೋಡಿದ್ದೀರಿ ಎಂದು ತಿರುಗೇಟು ನೀಡಿದರು.

    ಸತೀಶ್ ಅವರ ವಸ್ತು ಹೇಳಿಕೆ ಸದ್ಯ ಇಬ್ಬರ ನಡುವೆ ವಾಕ್ ಸಮರಕ್ಕೆ ಕಾರಣವಾಗಿದ್ದು, ಸತೀಶ್ ಅವರ ನಗುವಿನ ಹಿಂದೆ ಇರುವ ‘ವಸ್ತು’ ಏನು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇತ್ತ ಪಕ್ಷಕ್ಕೆ ರಾಜೀನಾಮೆ ನೀಡಿಯೇ ಸಿದ್ಧ ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಅವರು ಇನ್ನೇರಡು ದಿನಗಳಲ್ಲಿ ನಿಮಗೇ ಸಿಹಿ ಸುದ್ದಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

  • ‘ನಮ್ಮ ಸಿಎಂ’ ಸತೀಶ್ ಜಾರಕಿಹೊಳಿ – ಕಲಬುರಗಿ ನಗರದಾದ್ಯಂತ ಸ್ವಾಗತ ಬ್ಯಾನರ್

    ‘ನಮ್ಮ ಸಿಎಂ’ ಸತೀಶ್ ಜಾರಕಿಹೊಳಿ – ಕಲಬುರಗಿ ನಗರದಾದ್ಯಂತ ಸ್ವಾಗತ ಬ್ಯಾನರ್

    ಕಲಬುರಗಿ: `ನಮ್ಮ ಸಿಎಂ ಸತೀಶ್ ಜಾರಕಿಹೊಳಿ’ ಎನ್ನುವ ಬ್ಯಾನರ್ ಕಲಬುರಗಿ ನಗರದಾದ್ಯಂತ ರಾರಾಜಿಸುತ್ತಿದ್ದು, ಮಾನವ ಬಂದುತ್ವ ವೇದಿಕೆ ಮತ್ತು ದಲಿತ ಸೇನೆ ಈ ಬ್ಯಾನರ್ ಹಾಕಿದೆ.

    ಜಿಲ್ಲೆಯಲ್ಲಿ ಸದ್ಯ ಸತೀಶ್ ಜಾರಕಿಹೊಳಿ ಅವರ ಬ್ಯಾನರ್ ಕುರಿತು ಬಿಸಿ ಬಿಸಿ ರಾಜಕೀಯ ಚರ್ಚೆಗೆ ನಡೆಯುತ್ತಿದೆ. ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಆಗಬೇಕಂಬ ಮಾತು ಕೇಳಿ ಬರುತ್ತಿದೆ. ಇಂದು ಸತೀಶ್ ಜಾರಕಿಹೊಳಿ ಅವರು ಕಲಬುರಗಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಬ್ಯಾನರ್ ಮೂಲಕ ಸಚಿವರನ್ನು ಬೆಂಬಲಿಗರು ಸ್ವಾಗತ ಮಾಡಿದ್ದಾರೆ.

    ಈ ಹಿಂದೆಯೂ ಸಚಿವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ‘ನಮ್ಮ ಸಿಎಂ ನಮ್ಮ ಸಾಹುಕಾರ’ ಸತೀಶ್ ಜಾರಕಿಹೊಳಿ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸತೀಶ್ ಜಾರಕಿಹೊಳಿ, ನಾನು ಸಿಎಂ ಯಾಕಾಗಬಾರದು ಎಂದಿದ್ದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಸತೀಶ್ ಜಾರಕಿಹೊಳಿ ಸಿಎಂ ಸ್ಥಾನಕ್ಕೆ ಅರ್ಹ ಎಂದು ಹೇಳಿದ್ದರು.

    ಇತ್ತ ಸಚಿವರ ಸಹೋದರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ಸತೀಶ್ ಅವರನ್ನ ಮುಖ್ಯಮಂತ್ರಿ ಮಾಡುವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ರಾಜು ಗೌಡ ಕೂಡ ಸತೀಶ್ ಜಾರಕಿಹೊಳಿ ಅಥವಾ ಮಾಜಿ ಸಚಿವ ಶ್ರೀರಾಮುಲು ಸಿಎಂ ಆಗಲೇಬೇಕು ಎಂದು ಒತ್ತಾಯಿಸಿದ್ದರು.

    ವಾಲ್ಮೀಕಿ ಸಮುದಾಯದ ಜನರ ಕೂಗು ವಿಧಾನಸೌಧಕ್ಕೆ ತಲುಪುತ್ತಿಲ್ಲ. ರಾಜ್ಯದಲ್ಲಿ 17 ಶಾಸಕರು, ಇಬ್ಬರೂ ಸಂಸದರು ಇದ್ದರು ಕೂಡ ಕೂಗು ಕೇಳುತ್ತಿಲ್ಲ. ನಮ್ಮ ಸಮಾಜದಿಂದ ಸಚಿವ ಸತೀಶ್ ಜಾರಕಿಹೊಳಿ ಇಲ್ಲವೇ ಶ್ರೀರಾಮುಲು ಮುಖ್ಯಮಂತ್ರಿ ಆಗಲೇಬೇಕು ಎಂದು ವಾಲ್ಮೀಕಿ ಶ್ರೀಗಳು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಬಂಡಾಯ ಶಮನವಾಗಿಲ್ಲ – ಅಲರ್ಟ್ ಆಗಿದ್ದೇವೆ: ಸತೀಶ್ ಜಾರಕಿಹೊಳಿ

    ಕಾಂಗ್ರೆಸ್ ಬಂಡಾಯ ಶಮನವಾಗಿಲ್ಲ – ಅಲರ್ಟ್ ಆಗಿದ್ದೇವೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷವಾದ ಕಾಂಗ್ರೆಸ್ ನಲ್ಲಿ ಇನ್ನು ಬಂಡಾಯ ಶಮನ ಆಗಿಲ್ಲ, ಅದನ್ನು ಶಮನಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದು ಅರಣ್ಯ ಸಚಿವ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿಯ ನಿಪ್ಪಾಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಅದು ಇನ್ನು ಶಮನ ಆಗಿಲ್ಲ. ಎಷ್ಟು ಶಾಸಕರು ಬಂಡಾಯದ ಬಾವುಟ ಹಿಡಿದಿದ್ದಾರೆ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಪಕ್ಷದಲ್ಲಿ ಗೊಂದಲವಿದೆ ಅಷ್ಟೇ, ನಾವು ಅಲರ್ಟ್ ಇದ್ದೇವೆ. ರೆಸಾರ್ಟ್ ರಾಜಕಾರಣಕ್ಕೆ ಬಿಜೆಪಿಯಿಂದ ನಿರಂತರ ಪ್ರಯತ್ನ ನಡೆದಿದೆ ಎಂದರು.

    ಇದೇ ವೇಳೆ ಕೇಂದ್ರ ಬಿಜೆಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ 4 ವರ್ಷಗಳಲ್ಲಿ ಸರ್ಕಾರ ಘೋಷಣೆ ಮಾಡಿದ ಯಾವುದೇ ಯೋಜನೆ ಸಮರ್ಪಕವಾಗಿ ಜಾರಿ ಆಗಿಲ್ಲ. ಅಲ್ಲದೇ ಬಜೆಟ್‍ನಲ್ಲಿ ಯಾವುದೇ ವಿಶೇಷ ಯೋಜನೆ, ಘೋಷಣೆ ಇಲ್ಲ. ಇದರಿಂದ ಜನರಿಗೆ ನಿರಾಸೆ ಆಗಿದೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಅಂಶಗಳಿಲ್ಲದೇ ಕೇವಲ ಚುನಾವಣಾ ಬಜೆಟ್ ಆಗಿದೆ ಅಷ್ಟೇ ಎಂದರು.

    ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಜಾರಕಿಹೊಳಿ ನಮ್ಮ ಸಿಎಂ ಎಂದು ಅಭಿಮಾನಿಗಳು ಪೋಸ್ಟ್ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಕೂಡ ಇಂತಹ ಅಭಿಯಾನ ನಡೆದಿತ್ತು. ಇದು ಪ್ರೀತಿ, ವಿಶ್ವಾಸಕ್ಕೆ ಅಭಿಮಾನಿಗಳ ಬೇಡಿಕೆ ಅಷ್ಟೇ. ಇದರಿಂದ ಸರ್ಕಾರಕ್ಕೆ ತೊಂದರೆ ಆಗಲ್ಲ. ಸರ್ಕಾರದ ಸುಗಮವಾಗಿ ನಡೆಯುತ್ತದೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಮ್ಮ ಸಿಎಂ ಅಭಿಯಾನದಲ್ಲಿ ಕಾಂಗ್ರೆಸ್‍ನ ಮತ್ತೊಬ್ಬ ನಾಯಕರ ಹೆಸರು ಸೇರ್ಪಡೆ!

    ನಮ್ಮ ಸಿಎಂ ಅಭಿಯಾನದಲ್ಲಿ ಕಾಂಗ್ರೆಸ್‍ನ ಮತ್ತೊಬ್ಬ ನಾಯಕರ ಹೆಸರು ಸೇರ್ಪಡೆ!

    – ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಅಭಿಯಾನ ಆರಂಭ

    ಬೆಳಗಾವಿ (ಚಿಕ್ಕೋಡಿ): ಕಾಂಗ್ರೆಸ್‍ನಲ್ಲಿ ‘ನಮ್ಮ ಸಿಎಂ’ ಅಭಿಯಾನ ಭಾರೀ ಸದ್ದು ಮಾಡುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆನ್ನಲ್ಲೇ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪವಾಗಿದೆ.

    ಸಚಿವರ ಅಭಿಮಾನಿಗಳು, ನಮ್ಮ ಸಿಎಂ ಸತೀಶ್ ಜಾರಕಿಹೊಳಿ ಅವರು ಎನ್ನುವ ಅಭಿಯಾನ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ‘ನಮ್ಮ ಸಿಎಂ ನಮ್ಮ ಸಾಹುಕಾರ್’ ಅಂತ ಹೇಳಿಕೊಂಡಿದ್ದಾರೆ.

    ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಯಾಕಾಗಬಾರದೂ ಎಂದು ಪ್ರಶ್ನಿಸಿದ್ದರು. ಜೊತೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಅರ್ಹ ವ್ಯಕ್ತಿ ಅಂತ ಸಿದ್ದರಾಮಯ್ಯ ಬಿಂಬಿಸಿದ್ದರು. ಇದು ಅಭಿಮಾನಿಗಳ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ.

    ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಹಿಂದೆಯೇ ಹೇಳಿದ್ದಾರೆ. ಇದರಿಂದಾಗಿ ಕಾಂಗ್ರೆಸ್‍ನಲ್ಲಿ ಮತ್ತೊಬ್ಬ ನಾಯಕರ ಬೆಂಬಲಿಗರು ನಮ್ಮ ಸಿಎಂ ಅಭಿಯಾನವನ್ನು ಆರಂಭಿಸಿದ್ದು, ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆಯೇ ಎನ್ನುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಸ್ತಲಾಘವ ಮಾಡಿ, ಬೆನ್ನು ತಟ್ಟಿದ್ರು – ಮುನಿಸು ಮರೆತು ಒಂದಾದ್ರಾ ಮಂತ್ರಿಗಳು

    ಹಸ್ತಲಾಘವ ಮಾಡಿ, ಬೆನ್ನು ತಟ್ಟಿದ್ರು – ಮುನಿಸು ಮರೆತು ಒಂದಾದ್ರಾ ಮಂತ್ರಿಗಳು

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಕಾಂಗ್ರೆಸ್ ಪಕ್ಷದ ಒಳಗಡೆ ಉಂಟಾಗಿದ್ದ ನಾಯಕರ ಮುನಿಸು ಸದ್ಯ ತಣ್ಣಗೆ ಆದಂತೆ ಕಾಣುತ್ತಿದ್ದು, ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪರಸ್ಪರ ಹಸ್ತಲಾಘವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಬುಧವಾರ ನಿಗದಿಯಾಗಿದ್ದ ಸಿಎಂ ಕುಮಾರಸ್ವಾಮಿ ಅವರೊಂದಿನ ಸಭೆಗೆ ಹಾಜರಾಗಿದ್ದ ಇಬ್ಬರು ನಾಯಕರು ಸಭೆಗೂ ಮುನ್ನ ಹಸ್ತಲಾಘವ ಮಾಡಿ ಪರಸ್ಪರ ಬೆನ್ನನ್ನು ತಟ್ಟಿ ಒಳಗೆ ಹೋದರು. ಬೆಳಗಾವಿ ರಾಜಕಾರಣದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪ ಹಾಗೂ ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರದ ಬಗ್ಗೆ ಈ ಹಿಂದೆ ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಆದರೆ ಇಂದು ಕಂಡು ಬಂದ ದೃಶ್ಯಗಳು ನಾಯಕರ ನಡುವೆ ಉಂಟಾಗಿದ್ದ ಮುನಿಸು ದೂರವಾಗಿದೆಯಾ ಎಂಬಂತೆ ಕಂಡು ಬಂತು.

    ಸಿಎಂ ಜೊತೆಗಿನ ಸಭೆ ಬಳಿಕ ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ, 11ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಸಾಕಷ್ಟು ವಿಷಯಗಳಿಗೆ ಮುಖ್ಯ ಮಂತ್ರಿಗಳಿಂದ ಅನುಮೋದನೆ ಸಿಕ್ಕಿದೆ. ಗದಗದ ಕಪ್ಪತಗುಡ್ಡ ವನ್ಯ ಜೀವಧಾಮವಾಗಿ ಘೋಷಣೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹಾಡಿಗಳಿಗೆ ವಿದ್ಯುತ್ ಒದಗಿಸಲು ಅನುಮೋದನೆ, ಮುಳ್ಳಯ್ಯನಗಿರಿ ನೈಸರ್ಗಿಕ ಭೂ ಪ್ರದೇಶವನ್ನ ಸಂರಕ್ಷಿತ ಪ್ರದೇಶವೆಂದು ಘೋಷಣೆ, ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಹೆಚ್ಚಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಆದರೆ ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ನಿರ್ಮಾಣಕ್ಕಾಗಿ 1,470 ಎಕರೆ ಭೂಮಿ ಮಂಜೂರು ಮಾಡುವ ವಿಚಾರ ಮುಂದೂಡಿದ್ದಾರೆ ಎಂದು ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.

    ಜನವರಿಯಿಂದ ಮೇ ತಿಂಗಳವರೆಗೆ ಕಾಡಿನಲ್ಲಿ ಕಾಡ್ಗಿಚ್ಚು ಹೆಚ್ಚಳವಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಅರಣ್ಯ ಇಲಾಖೆ ಸಿದ್ಧವಾಗಿದೆ. ಈ ಅವಧಿಯದಲ್ಲಿ ಸಿಬ್ಬಂದಿಗೆ ರಜೆ ಕಡಿಮೆ ಮಾಡಿ, ಅಗ್ನಿಶಾಮಕ ದಳದ ಸಹಕಾರದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮವಹಿಸುತ್ತೇವೆ ಎಂದರು. ಅಲ್ಲದೇ ಕಪ್ಪತಗುಡ್ಡವನ್ನ ಮೀಸಲು ಅರಣ್ಯ ಪ್ರದೇಶವಾಗಿ ಘೋಷಣೆ ಮಾಡಿದ್ದು, ತುಮಕೂರಿನ ಬುಕ್ಕಾ ಪಟ್ಟಣ ಮೀಸಲು ಅರಣ್ಯ ಪ್ರದೇಶದ 220 ಎಕರೆ ಜಾಗವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದ್ದೇವೆ ಎಂದು ವಿವರಿಸಿದರು.

    ಸಭೆಯಲ್ಲಿ ಪ್ರಮುಖವಾಗಿ ದೇಶದಲ್ಲಿ ಅತಿ ಹೆಚ್ಚು 6ನೇ ಧಾಮವನ್ನ ಹುಲಿ ಸಂರಕ್ಷಿತ ಪ್ರದೇಶವಾಗಿರುವ ಮಲೆಮಹದೇಶ್ವರ ವನ್ಯಧಾಮವನ್ನ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡುವ ಹಾಗೂ ಕೋಲಾರದ ಕಾಮಸಮುದ್ರ ಮೀಸಲು ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮ ಎಂದು ಹೊಸದಾಗಿ ಘೋಷಣೆ ಮಾಡಿದ್ದೇವೆ. ಉಳಿದಂತೆ ಮುಳಬಾಗಿಲಿನ ಹೊನ್ನಹಳ್ಳಿ ಗುಹೆಗಳಿಗೆ ವಿದ್ಯುತ್ ಸಂಪರ್ಕ ಯೋಜನೆ, ಕೈಗಾ 5 ಮತ್ತು 6ನೇ ಘಟಕ ವಿಸ್ತರಣೆಗೆ ಎನ್‍ಒಸಿ ನೀಡಲಾಗಿದೆ ಎಂದು ತಮ್ಮ ಇಲಾಖೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಡರಾತ್ರಿ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತ್ಯಕ್ಷ – ಬೆಳಗ್ಗೆ 8 ಗಂಟೆಗೆ ಮತ್ತೆ ಅಜ್ಞಾತವಾಸ

    ತಡರಾತ್ರಿ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತ್ಯಕ್ಷ – ಬೆಳಗ್ಗೆ 8 ಗಂಟೆಗೆ ಮತ್ತೆ ಅಜ್ಞಾತವಾಸ

    – ರಮೇಶ್ ರಾಜೀನಾಮೆ ಕೊಟ್ರೆ ನಾವೇನು ಮಾಡೋಕಾಗುತ್ತೆ: ಸಚಿವ ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಪಕ್ಷದ ಮುಖಂಡರು ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಡರಾತ್ರಿ ತಮ್ಮ ಗೋಕಾಕ್ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದಾರೆ.

    ತಡರಾತ್ರಿ ಮನೆಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಅವರು ಬೆಳಗ್ಗೆ 8 ಗಂಟೆ ಬಳಿಕ ಮತ್ತೆ ಮನೆಯಿಂದ ಹೊರ ನಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ವೇಳೆ ಬೆಳಗಾವಿಗೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿತ್ತು.

    ಕಳೆದ 8 ದಿನಗಳಿಂದ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಫೋನ್ ಸ್ವಿಚ್ ಆಫ್ ಮಾಡಿದ್ದ ರಮೇಶ್ ಜಾರಕಿಹೊಳಿ ಅವರು, 8 ದಿನಗಳ ಬಳಿಕ ಮನೆಗೆ ಆಗಮಿಸಿದ್ದರು. ಬೆಳಗಾವಿಯ ಗೋಕಾಕ್ ನ ನಿವಾಸಕ್ಕೆ ಬಂದಿದ್ದ ಅವರು ಬೆಳಗಾವಿಗೂ ಬಾರದೇ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

    ಇತ್ತ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಸಹೋದರ, ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಅವರು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲವೇ ಇಲ್ಲ. ನಮ್ಮ ಪಕ್ಷದಲ್ಲೇ ರಮೇಶ್ ಮುಂದುವರಿಯುತ್ತಾರೆ, ನಮಗೆ ಅವರು ಸಿಕ್ಕಿಲ್ಲ. ರಮೇಶ್ ಅವರು ಇಂದು ಸಿಗುತ್ತಾರೆ ಅವರೊಂದಿಗೆ ಮಾತನಾಡುತ್ತೇನೆ. ಪಕ್ಷದ ಹೈಕಮಾಂಡ್ ಕೂಡ ರಮೇಶ್ ಜಾರಕಿಹೊಳಿ ಅವರನ್ನ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದೆ ಎಂದು ಸ್ಪಷ್ಟನೆ ನೀಡಿದರು.

    ನಾವೇನು ಮಾಡೋಕೆ ಬರುತ್ತೆ:
    ಇದೇ ವೇಳೆ ಗೋಕಾಕ್ ನಗರಸಭೆ ಸದಸ್ಯರು ರಾಜೀನಾಮೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸದಸ್ಯರು ಕೂಡ ರಾಜೀನಾಮೆ ಕೊಡುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಅವಶ್ಯಕತೆ ಇದೆ. ಒಂದು ವೇಳೆ ಅವರು ರಾಜೀನಾಮೆ ಕೊಟ್ಟರೆ ನಾವೇನು ಮಾಡೋಕೆ ಬರುತ್ತೆ. ಅವರು ನಮ್ಮ ಪಕ್ಷದ ಪರವಾಗಿ ಇದ್ದಾರೆ. ರಮೇಶ್ ರಾಜೀನಾಮೆ ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಕ್ಷದಲ್ಲೇ ಮುಂದುವರಿಯುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv