Tag: Mini Vidhana Soudha

  • ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ – ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಭರ್ಜರಿ ಸಿದ್ಧತೆ!

    ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ – ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಭರ್ಜರಿ ಸಿದ್ಧತೆ!

    – 2ನೇ ಬಾರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ಸಚಿವ ಸಂಪುಟ ಸಭೆ

    ಕಲಬುರಗಿ: ದಶಕದ ಬಳಿಕ ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯಲ್ಲಿ (Kalaburagi) ಸಚಿವ ಸಂಪುಟ ಸಭೆ ನಡೆಯಲು ಕ್ಷಣಗಣನೆ ಶುರುವಾಗಿದೆ.

    ಸೆ.17ರಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ಸಭೆ ನಡೆಯುವ ಸ್ಥಳ ಮಿನಿವಿಧಾನಸೌಧ (Mini Vidhana Soudha) ಕಟ್ಟಡದಲ್ಲಿ ಭರಪೂರ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ನಡೆಯಲಿರುವ ಸಚಿವ ಸಂಪುಟ ಸಭೆಯಿಂದಾಗಿ ಈ ಭಾಗದ ಜನರ ಆಸೆಗಳು ಗರಿಗೆದರಿವೆ.ಇದನ್ನೂ ಓದಿ: ದಿನ ಭವಿಷ್ಯ 16-09-2024

    ಕಳೆದ ಒಂದು ದಶಕದ ಹಿಂದೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಕಟ್ಟಡಕ್ಕೆ ಬಣ್ಣ ಹಚ್ಚುವುದರ ಜೊತೆಗೆ ಗ್ರಿಲ್, ಗೇಟ್‌ಗಳಿಗೆ ಪೇಂಟ್ ಮಾಡಲಾಗುತ್ತಿದೆ. ಆವರಣದಲ್ಲಿ ಡಾಂಬರೀಕರಣ ಸಹ ಮಾಡಲಾಗುತ್ತಿದೆ. ಇನ್ನೂ ಸಭೆ ನಡೆಯುವ ಸ್ಥಳ, ಪ್ರಾದೇಶಿಕ ಆಯುಕ್ತರ ಸಭಾಂಗಣಕ್ಕೆ ಹೈಟೆಕ್ ಟಚ್ ನೀಡಲಾಗುತ್ತಿದೆ. ಟೇಬಲ್, ಮೈಕ್, ಎಸಿ ಸೇರಿದಂತೆ ಪ್ರತಿಯೊಂದು ವಸ್ತುಗಳನ್ನು ಹೊಸದಾಗಿ ನವೀಕರಣ ಮಾಡಲಾಗುತ್ತಿದೆ. ಇನ್ನು ದಶಕದ ಬಳಿಕ ಕ್ಯಾಬಿನೆಟ್ ಸಭೆ ಹಿನ್ನೆಲೆ ಆಡಳಿತ ಪಕ್ಷದ ಶಾಸಕರು ಕ್ಷೇತ್ರದ ಅಭಿವೃದ್ಧಿ ಪಟ್ಟಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ನೀಡಿದ್ದಾರೆ.

    ಕಲಬುರಗಿಯಲ್ಲಿ ಮೊದಲ ಬಾರಿಗೆ 1982ರಲ್ಲಿ ಆರ್.ಗುಂಡೂರಾವ್ ಸಿಎಂ ಆಗಿದ್ದ ವೇಳೆ ಸಚಿವ ಸಂಪುಟ ಸಭೆ ನಡೆದಿತ್ತು. ಆ ಬಳಿಕ 2008ರಲ್ಲಿ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಸಚಿವ ಸಂಪುಟ ಸಭೆ ನಡೆದಿತ್ತು. ಇನ್ನೂ 2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿತ್ತು, ಇದೀಗ 2024 ರಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎರಡನೇ ಬಾರಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಇನ್ನೂ ದಶಕದ ಬಳಿಕ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಭಾಗದ ಜನರ ಬೇಡಿಕೆಗಳು ಈಡೇರುವ ನಿರೀಕ್ಷೆ ದುಪ್ಪಟ್ಟಾಗಿವೆ.

    371(ಜೆ) ಅಡಿಯಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳು ಭರ್ತಿಯಾಗಬೇಕು. ವಿಶೇಷ ಸ್ಥಾನಮಾನ ಅಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗಬೇಕಿರುವ ಸೌಲಭ್ಯಗಳು ಸಿಗಬೇಕು. ಕೈಗಾರಿಕೆಗಳ ಸ್ಥಾಪನೆ, ರೋಗಗ್ರಸ್ಥವಾಗಿರುವ ತೊಗರಿ ಅಭಿವೃದ್ಧಿ ಮಂಡಳಿಗೆ ಬಲ ತುಂಬಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಇನ್ನೂ ಜಿಲ್ಲೆಯಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಶಾಶ್ವತ ಕುಡಿಯುವ ನೀರಿಗಾಗಿ ಆಲಮಟ್ಟಿಯಿಂದ ಕಲಬುರಗಿಗೆ ಪೈಪ್‌ಲೈನ್ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲೂ ಜಲಾಶಯಗಳನ್ನು ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: 16-09-2024

    ಅದೆಲ್ಲಾ ಒಂದೆಡೆಯಾದರೆ, ದಶಕದ ಬಳಿಕ ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಈ ಭಾಗದ ಜನರ ಖುಷಿ ದುಪ್ಪಟ್ಟಾಗುವಂತೆ ಮಾಡಿದೆ. ಒಟ್ಟಿನಲ್ಲಿ ಹಿಂದುಳಿದ ಭಾಗದಲ್ಲಿ ಐತಿಹಾಸಿಕ ಸಭೆ ಕೇವಲ ನಾಮಕಾವಸ್ಥೆ ಆಗದೇ ಈ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಬೇಕು ಎನ್ನುವುದು ಜನರ ಆಶಯವಾಗಿದೆ.

  • ದೇವದುರ್ಗ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳು ಮಾಯ- ಸಾರ್ವಜನಿಕರ ಪರದಾಟ

    ದೇವದುರ್ಗ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳು ಮಾಯ- ಸಾರ್ವಜನಿಕರ ಪರದಾಟ

    ರಾಯಚೂರು: ಜಿಲ್ಲೆಯ ದೇವದುರ್ಗದ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರ ಗೋಳು ಕೇಳುವವರಿಲ್ಲ. ಕೊರೊನಾ ಭೀತಿಯಲ್ಲೇ ಕಚೇರಿ ಕೆಲಸಗಳಿಗೆ ಅಲೆದು ಅಲೆದು ಜನ ಸುಸ್ತಾಗುತ್ತಿದ್ದಾರೆ.

    ಸರ್ಕಾರಿ ಕೆಲಸಗಳಿಗಾಗಿ ಉಪನೋಂದಣಾಧಿಕಾರಿ ಕಚೇರಿ ಮುಂದೆ ಜನ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಯಾವೊಬ್ಬ ಸಿಬ್ಬಂದಿ ಇಲ್ಲದೆ ಕುರ್ಚಿಗಳೆಲ್ಲಾ ಖಾಲಿಖಾಲಿಯಾಗಿವೆ. ಕಚೇರಿಗೆ ದಿನಾಲೂ ಮಧ್ಯಾಹ್ನ ವೇಳೆ ಆಗಮಿಸುವ ದೇವದುರ್ಗ ಸಬ್ ರಿಜಿಸ್ಟ್ರಾರ್ ವರ್ತನೆಯಿಂದ ಜನ ಬೇಸತ್ತಿದ್ದಾರೆ.

    ಕಾಗದ ಪತ್ರಗಳಿಗಾಗಿ ಬೆಳಗ್ಗಿನಿಂದಲೇ ಮಿನಿ ವಿಧಾನಸೌಧಕ್ಕೆ ಹಳ್ಳಿಗಳಿಂದ ಬರುವ ನೂರಾರು ಜನ ಕೆಲಸಗಳು ಆಗದೇ ನಿತ್ಯ ಮರಳುತ್ತಿದ್ದಾರೆ. ಕಚೇರಿಯಲ್ಲಿರುವುದಕ್ಕಿಂತ ಹೆಚ್ಚು ಸಮಯ ಚಹಾ ಅಂಗಡಿಯಲ್ಲೆ ದೇವದುರ್ಗ ಮಿನಿ ವಿಧಾನಸೌಧ ಸಿಬ್ಬಂದಿ ಕಾಲ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಕಚೇರಿ ಕೆಲಸಗಳಿಗೆ ದೇವದುರ್ಗ ತಹಶೀಲ್ದಾರ್ ಕಚೇರಿಯಲ್ಲಿ ಜಮಾಯಿಸುವ ನೂರಾರು ಜನ ಯಾವುದೇ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೇ ಓಡಾಡುತ್ತಾರೆ. ದೇವದುರ್ಗ ತಾಲೂಕು ಒಂದರಲ್ಲೇ 338 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು. ತಹಶೀಲ್ದಾರ್ ಕಚೇರಿ ಪಕ್ಕದಲ್ಲೇ ಕಂಟೈನ್ಮೆಂಟ್ ಝೋನ್ ಇದ್ದು ಸಂಪೂರ್ಣ ಸೀಲ್‍ಡೌನ್ ಆಗಿದೆ.

  • ಭೂ ಮಾಪಕಿಗೆ ಕೊರೊನಾ- ಮಿನಿ ವಿಧಾನಸೌಧ ಸೀಲ್‍ಡೌನ್

    ಭೂ ಮಾಪಕಿಗೆ ಕೊರೊನಾ- ಮಿನಿ ವಿಧಾನಸೌಧ ಸೀಲ್‍ಡೌನ್

    ಚಾಮರಾಜನಗರ: ಜಿಲ್ಲೆಯ ಮಿನಿ ವಿಧಾನಸೌಧದ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೂ ಮಾಪಕಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು ಮಿನಿವಿಧಾನಸೌಧವನ್ನು ಸಂಪೂರ್ಣ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಇದೇ ಕಟ್ಟಡದಲ್ಲಿ ತಾಲೂಕು ಕಚೇರಿಯು ಇದ್ದು, ಇಂದು ತಾಲೂಕು ಕಚೇರಿ ಮತ್ತು ಮಿನಿ ವಿಧಾನಸೌಧಕ್ಕೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಆರ್.ರವಿ ಆದೇಶಿಸಿದ್ದಾರೆ. ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 33 ವರ್ಷ ವಯಸ್ಸಿನ ಭೂ ಮಾಪಕಿಗೆ ಕಳೆದ ವಾರ ಜ್ವರ ತಲೆನೋವು ಕಾಣಿಸಿಕೊಂಡಿತ್ತು.

    ಖಾಸಗಿ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ತಲೆನೋವು ಕಡಿಮೆ ಆಗದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ ತೆರೆದಿರುವ ಫೀವರ್ ಕ್ಲಿನಿಕ್‍ಗೆ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ಅವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ತಾಲೂಕು ಕಚೇರಿ ಮತ್ತು ಮಿನಿ ವಿಧಾನಸೌಧ ಕಟ್ಟಡಕ್ಕೆ ಈಗಾಗಲೇ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.

    ಇದೀಗ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಜ್ವರ ಹಾಗೂ ತಲೆನೋವು ಇದ್ದು, ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕೊಟ್ಟಿದ್ದರೂ ಸಹ ಮಹಿಳೆ ಪರೀಕ್ಷಾ ವರದಿ ಬರುವ ಮುನ್ನ ಕಚೇರಿಯಲ್ಲಿ ಮೂರ್ನಾಲ್ಕು ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ ಕೆಲವು ರೈತರ ಜಮೀನುಗಳಿಗೂ ಭೇಟಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಈಕೆಯ ಪ್ರಾಥಮಿಕ ಸಂಪರ್ಕಕ್ಕೆ ಸುಮಾರು 10 ಜನ ಬಂದಿದ್ದು, ಅವರನ್ನೆಲ್ಲಾ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಹಂತದ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮಹಿಳೆ ವಾಸ ಮಾಡುತ್ತಿದ್ದ ನಗರದ ಭಗೀರಥನಗರ ಹೊಸಬಡಾವಣೆ 5ನೇ ಕ್ರಾಸನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದೆ. ಅಲ್ಲದೆ ಮಹಿಳೆ ವಾಸಿಸುತ್ತಿದ್ದ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.

  • ‘ಕೈ’ ಶಾಸಕರ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ ಲೋಕಾರ್ಪಣೆಗೊಳಿಸಿದ ಆರ್.ಅಶೋಕ್

    ‘ಕೈ’ ಶಾಸಕರ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ ಲೋಕಾರ್ಪಣೆಗೊಳಿಸಿದ ಆರ್.ಅಶೋಕ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ನೂತನ ಶಕ್ತಿ ಕೇಂದ್ರ ಮಿನಿ ವಿಧಾನಸೌಧ ಕಟ್ಟಡವನ್ನು ಕಂದಾಯ ಸಚಿವ ಆರ್.ಅಶೋಕ್ ಲೋಕಾರ್ಪಣೆಗೊಳಿಸಿದರು.

    ಗೌರಿಬಿದನೂರು ನಗರ ಹೊರವಲಯದ ಬೆಂಗಳೂರು ರಸ್ತೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣವಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್ ಬಚ್ಚೇಗೌಡ ಸಾಥ್ ನೀಡಿದರು.

    ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರ ಕನಸಿನ ಕಟ್ಟಡ ಈ ಮಿನಿ ವಿಧಾನಸೌಧ. ಅಂದಹಾಗೆ ಕಳೆದ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಿನಿ ವಿಧಾನಸೌಧ ಕಟ್ಟಡಕ್ಕೆ ಅನುದಾನ ಮಂಜೂರಾಗಿ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭೂಮಿ ಪೂಜೆ ನೇರವೇರಿಸಿದ್ದರು. ಇಂದು ಆ ಕಟ್ಟಡ ಬಹಳಷ್ಟು ಸುಂದರವಾಗಿ ತಲೆ ಎತ್ತಿ ನಿಂತಿದ್ದು, ನೂತನ ಕಟ್ಟಡ ಸಾರ್ವಜನಿಕರಿಗೆ ಸದುಪಯೋಗವಾಗಲಿ ಎಂದು ಕಂದಾಯ ಸಚಿವ ಆರ್ ಅಶೋಕ್ ಶುಭ ಕೋರಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ಅವರು, ಗೌರಿಬಿದನೂರು ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಸಕ್ಕರೆ ಕಾರ್ಖಾನೆಯವರು ಸೇರಿದಂತೆ ಕೆಲ ಬೇನಾಮಿ ವ್ಯಕ್ತಿಗಳು ಈ ಕಟ್ಟಡದ ಜಾಗವನ್ನು ಆಕ್ರಮಿಸಿಕೊಂಡಿದ್ದರು. ಆದರೆ ಅವರನ್ನೆಲ್ಲಾ ತೆರವುಗೊಳಿಸಿ ಈ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೇವೆ. ಸದ್ಯ 20 ಇಲಾಖೆಗಳ ಕಚೇರಿಗಳನ್ನ ಈ ನೂತನ ಮಿನಿ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಸಾಮಾನ್ಯ ಜನರಿಗೆ ಒಂದೇ ಸೂರಿನಡಿ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನ ನೀಡಬೇಕು ಎನ್ನುವ ಸದುದ್ದೇಶದಿಂದ ಈ ಸೌಧ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

    ಇದೊಂದು ಮಾದರಿ ಕಟ್ಟಡವಾಗಿದ್ದು, ಅಧಿಕಾರಿಗಳು ಸಹ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡುವ ಮೂಲಕ ಮಾದರಿಯಾಗಬೇಕು. ಸಾರ್ವಜನಿಕರು ಈ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳುಬೇಕು ಎಂದು ಶಿವಶಂಕರರೆಡ್ಡಿ ತಿಳಿಸಿದರು.

    ಇದೇ ವೇಳೆ ಮಿನಿವಿಧಾನಸೌಧ ಕಟ್ಟಡದ ಪಕ್ಕದಲ್ಲೇ 7.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಡಾ ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಸಮಾನತಾ ಸೌಧವನ್ನು ಸಹ ಲೋಕಾರ್ಪಣೆ ಮಾಡಲಾಯಿತು. ಈ ಕಟ್ಟಡ ಗ್ರಂಥಾಲಯ ಸೇರಿದಂತೆ 800 ಆಸನಗಳುಳ್ಳ ಬೃಹತ್ ಸಭಾಂಗಣ ಹೊಂದಿದ್ದು, ಸಿಇಟಿ, ನೀಟ್, ಬ್ಯಾಂಕಿಂಗ್, ಕೆಎಎಸ್, ಐಪಿಎಸ್, ಹಾಗೂ ಐಎಎಸ್ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡಲು ಕಟ್ಟಡ ಸದುಪಯೋಗವಾಗಲಿದೆ.

    ಇದೇ ಕಟ್ಟಡದಲ್ಲಿ ಡಾ ಬಿ.ಆರ್.ಅಂಬೇಡ್ಕರ್ ಅವರ ಬದುಕು, ಹೋರಾಟ ಹಾಗೂ ಸಾಧನೆಗಳನ್ನು ಬಿಂಬಿಸುವ ಚಿತ್ರಪಟ ಫೋಟೋ ಗ್ಯಾಲರಿಯನ್ನು ಮುಂದಿಮ ದಿನಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ಎನ್.ಬಚ್ಚೇಗೌಡ ಅವರು, ಶಾಸಕ ಶಿವಶಂಕರರೆಡ್ಡಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದ ಶಾಸಕ ಶಿವಶಂಕರರೆಡ್ಡಿ, ಸರ್ಕಾರ ಘೋಷಣೆ ಮಾಡಿರುವ ನೂತನ ಮಂಚೇನಹಳ್ಳಿ ತಾಲೂಕಿಗೆ ನಮ್ಮ ಕ್ಷೇತ್ರದ 4 ಗ್ರಾಮ ಪಂಚಾಯತಿಗಳನ್ನು ಸೇರಿಸಲಾಗಿದೆ. ಆದರೆ ಇದಕ್ಕೆ ಜನರ ವಿರೋಧವಿದ್ದು, ಸಚಿವರು ಮಂಚೇನಹಳ್ಳಿ ತಾಲೂಕಿಗೆ ಸೇರ್ಪಡೆ ಮಾಡಲಾಗಿರುವ 4 ಗ್ರಾಮ ಪಂಚಾಯತಿಗಳನ್ನ ಕೈ ಬಿಡಬೇಕು ಎಂದು ಆಗ್ರಹಿಸಿದರು.