Tag: MIMS

  • ಮಂಡ್ಯದ ಮಿಮ್ಸ್‌ನಲ್ಲಿ ಹೃದ್ರೋಗಿಗಳ ವಿಭಾಗವೇ ಇಲ್ಲ

    ಮಂಡ್ಯದ ಮಿಮ್ಸ್‌ನಲ್ಲಿ ಹೃದ್ರೋಗಿಗಳ ವಿಭಾಗವೇ ಇಲ್ಲ

    ಮಂಡ್ಯ: ರಾಜ್ಯದಲ್ಲಿ ಹೃದಯಾಘಾತ (Heart Attack) ಸುದ್ದಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇತ್ತ ಹೃದಯ ಸಂಬಂಧಿ ರೋಗಗಳಿಗೆ (Heart Disease) ಚಿಕಿತ್ಸೆ ನೀಡಬೇಡಬೇಕಾದ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹೃದಯ ವಿಭಾಗವೇ ಇಲ್ಲ. ಇಲ್ಲಿಗೆ ಬರುವ ಹೃದಯ ಸಂಬಂಧಿ ರೋಗಿಗಳು ಬೇರೆ ಜಿಲ್ಲೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಸದ್ಯ ರಾಜ್ಯದಲ್ಲಿ ಹಾಸನ (Hassan) ಜಿಲ್ಲೆಯಲ್ಲಿ ಹೃದಯಾಘಾತದಿಂದ (Heart Attack) ಸರಣಿಯಾಗಿ ಸಾವನ್ನಪ್ಪುತ್ತಿದ್ದಾರೆ. ಹಾಸನ ಮಾತ್ರವಲ್ಲ ರಾಜ್ಯದ ಹಲವೆಡೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ವಿಚಾರದಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಏನು ಹೊರತಾಗಿಲ್ಲ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆ (MIMS Hospital) ಒಂದರಲ್ಲಿಯೇ ಕಳೆದ 3 ತಿಂಗಳಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹೃದಯಾಘಾತದಿಂದ ಮನೆಯಲ್ಲಿ ಹಾಗೂ ಬೇರೆ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಇನ್ನೂ ಹೆಚ್ಚಿದೆ. ಇದನ್ನೂ ಓದಿ: ಬೆಂಗಳೂರು ಸ್ಫೋಟದ ಸೂತ್ರಧಾರಿ ಅರೆಸ್ಟ್‌ – ಶಂಕಿತರ ಮನೆಯಲ್ಲಿ ಭಾರೀ ಪ್ರಮಾಣದ ದೇಶ ವಿನಾಶಕಾರಿ ವಸ್ತುಗಳು ಪತ್ತೆ

    ಸಾಂದರ್ಭಿಕ ಚಿತ್ರ

    ಮೊದಲೆಲ್ಲಾ ಮಿಮ್ಸ್ ಆಸ್ಪತ್ರೆಗೆ ಎದೆ ನೋವು ಎಂದು ಕಡಿಮೆ ಸಂಖ್ಯೆಯಲ್ಲಿ ಬರ್ತಾ ಇದ್ದರು. ಆದರೆ ಇದೀಗ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ, ಆದರೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹೃದಯದ ವಿಭಾಗವೇ ಇಲ್ಲ, ಹೀಗಾಗಿ ಹೃದಯ ಸಂಭವಿಸಿದ ವೈದ್ಯರು ಕೂಡ ಇಲ್ಲ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮಹಿಳಾ ಸಾರಥ್ಯ?

    ಎದೆ ನೋವು ಎಂದು ಮಿಮ್ಸ್ ಆಸ್ಪತ್ರೆಗೆ ಹೋದರೆ ಕೇವಲ ಇಸಿಜಿ, ಎಕೋ, ಸಿಪಿಕೆಎಂಬಿ ಪರೀಕ್ಷೆಯಷ್ಟೇ ಮಾಡ್ತಾರೆ. ಹೆಚ್ಚಿನ ಚಿಕಿತ್ಸೆ ಬೇಕು ಅಂದ್ರೆ ಮೈಸೂರು ಅಥವಾ ಬೆಂಗಳೂರು ಆಸ್ಪತ್ರೆಗೆ ಇಲ್ಲಿನ ವೈದ್ಯರು ಚಿಕಿತ್ಸೆಗೆ ರೆಫರ್ ಮಾಡುತ್ತಾರೆ. ಇದನ್ನೂ ಓದಿ:  ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಭೋಜನ ಸವಿದ ಪ್ರಧಾನಿ ಮೋದಿ

    ಹೃದಯಾಘಾತವಾದ ವ್ಯಕ್ತಿಗೆ ಒಂದೂವರೆ ಗಂಟೆಯ ಅವಧಿಯ ಒಳಗೆ ಚಿಕಿತ್ಸೆ ನೀಡಿದರೆ ಆ ವ್ಯಕ್ತಿಯನ್ನು ಬದುಕಿಸುವ ಅವಕಾಶ ಇರುತ್ತೆ.‌ ಆದ್ರೆ ಮಂಡ್ಯದ ಮಿಮ್ಸ್‌ನಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ವೈದ್ಯರೇ ಇಲ್ಲ ಎಂದರೆ ದುರದೃಷ್ಟಕರ ಸಂಗತಿ. ಈಗಲಾದರು ಮಂಡ್ಯ ಮಿಮ್ಸ್‌ನಲ್ಲಿ ಹೃದಯದ ವಿಭಾಗ ಓಪನ್ ಆಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

  • ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿಗೆ ಲಾಭ – ಸಚಿವ ಚಲುವರಾಯಸ್ವಾಮಿ

    ಮಂಡ್ಯ: ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಅಷ್ಟೇ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದರು.

    ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ವಿಚಾರವಾಗಿ, ದೆಹಲಿ ಫಲಿತಾಂಶದಲ್ಲಿ ವಿಶೇಷ ಏನಿಲ್ಲ. ಕೇಜ್ರಿವಾಲ್ ಇಂಡಿಯಾ ಒಕ್ಕೂಟದ ಜೊತೆ ಹೋಗಿದ್ದರೆ ಬಿಜೆಪಿಗೆ ಗೆಲ್ಲುವ ಅವಕಾಶ ಇರಲಿಲ್ಲ. ಆದರೆ ಕೇಜ್ರಿವಾಲ್ ಸ್ವಲ್ಪ ದುಡುಕಿ ನಿರ್ಧಾರ ಮಾಡಿದರು. ಹೀಗಾಗಿ ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಎಂದರು.ಇದನ್ನೂ ಓದಿ: ಸೋಲು ಒಪ್ಕೋತೀವಿ ಆದ್ರೆ ಇವಿಎಂ ಮೇಲೆ ಅನುಮಾನ ಇದೆ: ಶಿವರಾಜ್ ತಂಗಡಗಿ

    ರಾಜ್ಯ ಬಜೆಟ್ ವಿಚಾರ:
    ಕಳೆದ ಬಾರಿಯೂ ಕೃಷಿ ಇಲಾಖೆಗೆ ಹೊಸ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡಿದ್ದರು. ಈ ಬಾರಿಯೂ ಉತ್ತಮ ಕಾರ್ಯಕ್ರಮಗಳು ಸಿಗುವ ನಿರೀಕ್ಷೆ ಇದೆ. ಇನ್ನೂ ಸಚಿವಾಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿ ಸಮಾಧಾನಪಡಿಸಿರುವ ವಿಚಾರವಾಗಿ, ಸಚಿವಾಕಾಂಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಛೇರ್ಮನ್ ಒಳ್ಳೆಯ ಹುದ್ದೆಯಾಗಿದ್ದು, ರಾಜ್ಯಾದ್ಯಂತ ಕೆಲಸ ಮಾಡಲು ಉತ್ತಮ ಅವಕಾಶವಿದೆ. ನರೇಂದ್ರ ಸ್ವಾಮಿಯವರು ಎಂಜಿನಿಯರ್ ಆಗಿದ್ದರಿಂದ ಅವಕಾಶ ಸಿಕ್ಕಿದೆ ಎಂದರು.

    ಮಂಡ್ಯ ಮಿಮ್ಸ್ ಸಮಸ್ಯೆಯ ಆಗರ:
    ಮಿಮ್ಸ್‌ನಲ್ಲಿ (MIMS) ತುಂಬಾ ಸಮಸ್ಯೆ ಇದೆ. ಹೀಗಾಗಿ ಡಿಸಿ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿಸಲಾಗಿದೆ. ಮಿಮ್ಸ್‌ಗೆ ಮೇಜರ್ ಸರ್ಜರಿ ಆಗಬೇಕು. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಶೀಘ್ರವೇ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

    ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೇರಿದೆ. ಆದ್ರೆ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಪ್ ಸೋಲು ಕಂಡಿದ್ದರೆ, `ಕೈ’ ಪಾಳಯ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ.ಇದನ್ನೂ ಓದಿ: ಡಿಬಾಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಫೆ.16ರಂದು ರಿಲೀಸ್ ಆಗಲಿದೆ ‘ಡೆವಿಲ್’ ಚಿತ್ರದ ಟೀಸರ್

     

  • ಮಂಡ್ಯ ಮಿಮ್ಸ್‌ನಲ್ಲಿ ಅವ್ಯವಸ್ಥೆಯ ಆಗರ – ಅಧಿಕಾರಿಗಳಿಗೆ ಡಿಸಿ ತೀವ್ರ ತರಾಟೆ

    ಮಂಡ್ಯ ಮಿಮ್ಸ್‌ನಲ್ಲಿ ಅವ್ಯವಸ್ಥೆಯ ಆಗರ – ಅಧಿಕಾರಿಗಳಿಗೆ ಡಿಸಿ ತೀವ್ರ ತರಾಟೆ

    ಮಂಡ್ಯ: ಬಡವರಿಗೆ ಕಡಿಮೆ ದುಡ್ಡಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವುದು ಸರ್ಕಾರಿ ಆಸ್ಪತ್ರೆಗಳ (Government Hospitals) ಕರ್ತವ್ಯ. ಆದ್ರೆ ಸರ್ಕಾರಿ ಆಸ್ಪತ್ರೆಗಳು ತನ್ನ ಜವಾಬ್ದಾರಿ ಮರೆತು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿವೆ. ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆ ಕೂಡ ಅವ್ಯವಸ್ಥೆ ಆಗರವಾಗಿದ್ದು, ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಅಲ್ಲಿನ ಬೇಜವಾಬ್ದಾರಿ ನಿರ್ವಹಣೆ ಕಂಡು ಶಾಕ್ ಆಗಿದ್ದಾರೆ.

    ಗಬ್ಬು ನಾರುತ್ತಿರುವ ವಾರ್ಡ್‌ಗಳು, ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ಬಾತ್‌ರೂಂ ಇಲ್ಲದ ಡೋರ್‌ಗಳು ಇಂತಹ ಅವ್ಯವಸ್ಥೆ ಕಂಡುಬಂದಿದ್ದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ. ಸದಾ ವಿವಾದಗಳಿಂದಲೇ ಸುದ್ದಿಗೆ ಬರುವ ಮಂಡ್ಯ ಮಿಮ್ಸ್‌ಗೆ ನಿನ್ನೆ ಜಿಲ್ಲಾಧಿಕಾರಿ ಡಾ.ಕುಮಾರ್‌ ದಿಢೀರ್ ಭೇಟಿ ಕೊಟ್ಟಿದ್ರು. ಆಸ್ಪತ್ರೆಯ ಅಶುಚಿತ್ವ, ಅಸಮರ್ಪಕ ನಿರ್ವಹಣೆಯನ್ನ ಕಣ್ಣಾರೆ ಕಂಡ ಡಿಸಿಗೆ ಒಂದು ಕ್ಷಣ ದಂಗುಬಡಿದಂತಾಯಿತು. ಇದನ್ನೂ ಓದಿ: ಲಾರಿ-ಟ್ಯಾಂಕರ್ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಓರ್ವ ಸಾವು

    ಮಂಡ್ಯ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಡಾ. ಕುಮಾರ ಹೊರರೋಗಿಗಳ ವಿಭಾಗ, ಸರ್ಜರಿ ಹಾಗೂ ಪುರುಷರು, ಮಹಿಳೆಯರ ವಾರ್ಡ್ ಪರಿಶೀಲಿಸಿದರು. ಗಬ್ಬು ನಾರುತ್ತಿದ್ದ ವಾರ್ಡ್‌ಗಳು, ಎಲ್ಲೆಂದರಲ್ಲಿ ಬಿದ್ದಿದ್ದ ಹಾಸಿಗೆ, ಬೆಡ್‌ಶೀಟ್‌ಗಳು ಜಿಲ್ಲಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಯಿತು. ಶೌಚಾಲಯದಲ್ಲಿ ನೀರು ಬಂದ್ ಆಗಿತ್ತು. ಮಹಿಳೆಯರ ಬಾತ್‌ರೂಂ‌ಗೆ ಬಾಗಿಲನ್ನು ಹಾಕಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಈ ವೇಳೆ ಕಂಡುಬಂದಿತು.

    ಹೀಗೆ ಆಸ್ಪತ್ರೆಯ ಹತ್ತು ಹಲವು ಸಮಸ್ಯೆಗಳನ್ನು ಕಣ್ಣಾರೆ ಕಂಡ ಡಿಸಿ ಕುಮಾರ ಅಕ್ಷರಶಃ ಸುಸ್ತಾಗಿ ಹೋದ್ರು. ಅಲ್ಲೇ ಇದ್ದ ಮಿಮ್ಸ್ ನಿರ್ದೇಶಕ ಡಾ. ನರಸಿಂಹಮೂರ್ತಿ, ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್‌ ಅವರನ್ನ ತರಾಟೆಗೆ ತೆಗೆದುಕೊಂಡರು. ನೀವೆಲ್ಲಾ ಮನುಷ್ಯರ ಮೃಗಗಳಾ? ನಿಮ್ಮ ಮನೆಯನ್ನ ಹೀಗೆ ಇಟ್ಕೋತೀರಾ ಎಂದು ಅಧಿಕಾರಿಗಳ ಬೆವರಿಳಿಸಿದ್ರು.

    ಪರಿಶೀಲನೆ ಬಳಿಕ ಸಭೆ ನಡೆಸಿದ ಡಿಸಿ, ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ಸೂಚಿಸಿದ್ರು. ಜಿಲ್ಲಾಧಿಕಾರಿಗಳ ಮುಂದೆ ತಲೆಯಾಡಿಸಿದ ಅಧಿಕಾರಿಗಳು ಇನ್ಮುಂದಾದರೂ ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಕೆಲಸ ಮಾಡ್ತಾರಾ ಅನ್ನೋದೆ ಸದ್ಯದ ಪ್ರಶ್ನೆ. ಇದನ್ನೂ ಓದಿ: MUDA Scam | ಕೊನೇ ಹಂತದಲ್ಲಿದೆ ಸಿಎಂ ವಿರುದ್ಧದ ತನಿಖೆ

  • ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ವಿಚಿತ್ರ ಮಗು ಜನನ

    ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ವಿಚಿತ್ರ ಮಗು ಜನನ

    ಮಂಡ್ಯ: ಒಣ ಚರ್ಮ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ವಿಚಿತ್ರ ಹೆಣ್ಣು ಮಗುವೊಂದು ಮಂಡ್ಯ ಮಿಮ್ಸ್ ನಲ್ಲಿ ಮಂಗಳವಾರ ರಾತ್ರಿ ಜನಿಸಿದೆ.

    ರಾಮನಗರ ಮೂಲದ ದಂಪತಿಯ ಮೊದಲ ಮಗು ಇದಾಗಿದ್ದು, ಹೆರಿಗೆಗಾಗಿ ಮಿಮ್ಸ್ ಗೆ ಗರ್ಭಿಣಿಯನ್ನು ದಾಖಲಿಸಲಾಗಿತ್ತು. ರಾತ್ರಿ ಡಾ.ಗೀತಾ ಹೆರಿಗೆ ಮಾಡಿಸಿದ್ದು, ಈ ವಿಚಿತ್ರ ಮಗು ಜನನವಾಗಿದೆ. ಮಗುವಿನ ದೇಹದ ಚರ್ಮವು ತೀರ ದಪ್ಪವಾಗಿದ್ದು, ಒಣಗಿದಂತಿದೆ. ಹೀಗಾಗಿ ಅಲ್ಲಲ್ಲಿ ದೇಹದ ಮೈಮೇಲಿನ ಚರ್ಮವು ಬಿರುಕು ಬಿಟ್ಟಿದೆ. ಬಿರುಕು ಬಿಟ್ಟಿದ್ದರಿಂದ ಮೈಮೇಲೆ ರಕ್ತ ಚೆಲ್ಲಿದಂತೆ ಕಾಣುತ್ತಿದೆ. ಸದ್ಯಕ್ಕೆ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

    ಮಿಮ್ಸ್ ವೈದ್ಯ ಅಧೀಕ್ಷಕ- ಡಾ. ಎಂ.ಆರ್. ಹರೀಶ್

    ವಂಶಪಾರಂಪರ್ಯ ಕಾಯಿಲೆಗೆ ಒಳಗಾಗಿ ಈ ಮಗು ಜನಿಸಿದೆ. ಎಬಿಸಿಎ 12 ಜೀನ್ ಮ್ಯುಟೇಶನ್ ಕಾರಣದಿಂದ ಮಗುವು ಈ ರೀತಿ ಆದ ವಿಚಿತ್ರ ಒಣಚರ್ಮ ಕಾಯಿಲೆಗೆ ಒಳಗಾಗಿದೆ. ಐದು ಲಕ್ಷದಲ್ಲಿ 1 ಮಗುವಿಗೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ ಎಂದು ಚರ್ಮರೋಗ ತಜ್ಞರು ಹಾಗೂ ಮಿಮ್ಸ್ ವೈದ್ಯ ಅಧೀಕ್ಷಕ ಡಾ. ಎಂ.ಆರ್. ಹರೀಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಸಾವು

    ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಸಾವು

    ಮಂಡ್ಯ: ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಮೃತಪಟ್ಟ ಘಟನೆ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಶಶಿಕುಮಾರ್ ಮತ್ತು ಶೃತಿ ದಂಪತಿಯ ಗಂಡು ಮಗು ಮೃತಪಟ್ಟಿದೆ. ಗುರುವಾರ ಬೆಳಗ್ಗೆ ಮಗುವಿಗೆ ಉಸಿರಾಟ ಸಮಸ್ಯೆ ಕಂಡುಬಂದಿತ್ತು. ಕೂಡಲೇ ಪೋಷಕರು ಮಗುವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇದ್ದರಿಂದ ಮಗುವನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು.

    ವೈದ್ಯರು ನಿರಾಕರಿಸುತ್ತಿದ್ದಂತೆ ಮಗುವನ್ನು ಆ್ಯಂಬುಲೆನ್ಸ್ ಮುಖಾಂತರ ಮೈಸೂರು ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಮಿಮ್ಸ್ ಆಸ್ಪತ್ರೆಯ ವೈದ್ಯರು ಮಗುವನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರೇ ಮಗು ಬದುಕುಳಿಯುತ್ತಿತ್ತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಗಂಭೀರ ಪರಿಸ್ಥಿತಿಯಲ್ಲಿದ್ದ ಮಗವನ್ನು ತಕ್ಷಣವೇ ದಾಖಲಿಸಿಕೊಳ್ಳದೇ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಮಗುವಿನ ಸಾವಿಗೆ ಮಿಮ್ಸ್ ವೈದ್ಯರುಗಳೇ ಕಾರಣವೆಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv