Tag: Medini Village

  • ದಶಕದ ಸಮಸ್ಯೆಗೆ ಸಿಗದ ಮುಕ್ತಿ – ಈ ಊರಿನ ಯುವಕರಿಗಿಲ್ಲ ಕಂಕಣ ಭಾಗ್ಯ

    ದಶಕದ ಸಮಸ್ಯೆಗೆ ಸಿಗದ ಮುಕ್ತಿ – ಈ ಊರಿನ ಯುವಕರಿಗಿಲ್ಲ ಕಂಕಣ ಭಾಗ್ಯ

    ಕಾರವಾರ: ಕೇವಲ 3 ಕಿ.ಮೀ ರಸ್ತೆ ತೀರಾ ದುರ್ಘಮವಾದ ಕಾರಣಕ್ಕೆ ಇಲ್ಲೊಂದು ಕುಗ್ರಾಮದ ಯುವಕ-ಯುವತಿಯರಿಗೆ ದಶಕಗಳಿಂದ ಕಂಕಣ ಭಾಗ್ಯವೇ ಕೂಡಿಬರುತ್ತಿಲ್ಲ. ಎರೆಡೆರಡು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಿ ಸಮಸ್ಯೆ ಬಗ್ಗೆ ವಿಸ್ತೃತ ವರದಿ ಸಲ್ಲಿಸಿದರೂ ಜನಪ್ರತಿನಿಧಿಗಳು ಹಾಗೂ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಜನರು ಆರೋಗ್ಯ, ಶಿಕ್ಷಣ ಮಾತ್ರವಲ್ಲದೆ ಮದುವೆಯಿಂದಲೂ ವಂಚಿತರಾಗಿ ನರಕಯಾತನೆ ಅನುಭವಿಸುವಂತಾಗಿದೆ.

    ಕುಮಟಾ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದಿನಿ ಕುಗ್ರಾಮದಲ್ಲಿ ಇಂತಹದೊದು ದಯನೀಯ ಸ್ಥಿತಿ ಇದೆ. ಊರಿಗೆ ಸರಿಯಾದ ರಸ್ತೆ ಇಲ್ಲದ ಕಾರಣಕ್ಕೆ ಸಂಬಂಧ ಬೆಳೆಸಲು ಜನರು ಹಿಂದೇಟು ಹಾಕುತ್ತಿದ್ದು, ಪರಿಣಾಮ ಸುಮಾರು 15ಕ್ಕೂ ಹೆಚ್ಚು ಯುವಕ-ಯುವತಿಯರು ಮದುವೆಗೆ ಬಂದು ದಶಕಗಳು ಕಳೆದರೂ ಮದುವೆ ಮಾಡಲಾಗದ ಸ್ಥಿತಿ ಇಲ್ಲಿನ ಪಾಲಕರದ್ದಾಗಿದೆ.

    ಮಕ್ಕಳಿಗೆ ಸಂಬಂಧ ಬೆಳೆಸುವುದಕ್ಕಾಗಿ ಹತ್ತಾರು ಬಾರಿ ಘಟ್ಟ ಇಳಿದು ಊರೂರು ಸುತ್ತಿದರೂ ಕೂಡ ಕಾಲು ಸವೆಯುತ್ತಿದೆಯೇ ವಿನಃ ಸಂಬಂಧಗಳು ಕೂಡಿ ಬರುತ್ತಿಲ್ಲ. ಕೆಲವು ಸಂಬಂಧಗಳು ಕೂಡಿ ಬಂದರೂ ಮನೆ ನೋಡಲು ಬಂದಾಗ ರಸ್ತೆ ನೆಪ ಹೇಳಿ ಸಂಪರ್ಕಕ್ಕೆ ಸಿಗದಂತೆ ದೂರಾಗುತ್ತಿದ್ದಾರೆ. ಪರಿಣಾಮ ದಶಕಗಳಿಂದ ಗ್ರಾಮದಲ್ಲಿ ಮದುವೇ ನಡೆದಿಲ್ಲ. ಮಕ್ಕಳ ಮದುವೇ ಮಾಡಲಾಗದೇ ಅದೇಷ್ಟೋ ತಂದೆ-ತಾಯಿಯರು ಚಿಂತೆಗೆ ಜಾರಿದ್ದು ಆರೋಗ್ಯ ಸಮಸ್ಯೆ ಕಾಡತೊಡಗಿದೆ.

    ರಸ್ತೆ ಸರಿ ಇಲ್ಲದ ಕಾರಣಕ್ಕೆ ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೆ ತುತ್ತಾದರೂ ಕೂಡ ಕಂಬಳಿ ಜೋಳಿಗೆ ಕಟ್ಟಿ ಹೊರಬೇಕಾದ ಸ್ಥಿತಿ ಇದೆ. ಕಳೆದ ಕೆಲ ವರ್ಷದ ಹಿಂದೆ ಇದೇ ರೀತಿ ಬಾಣಂತಿಯೊಬ್ಬರನ್ನು ಮಧ್ಯ ರಾತ್ರಿ ಕೊಂಡೊಯ್ಯುವಾಗ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಲಾಗದೆ ಮಾರ್ಗಮಧ್ಯದಲ್ಲಿಯೇ ಸಾವಾಗಿದ್ದು, ಇದೀಗ ಅವರ ಮಕ್ಕಳು ಅನಾಥರಾಗಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗಣಪ ಗೌಡ. ಊರಿನಲ್ಲಿರುವ ಶಾಲೆ ಮುರಿದು ವರ್ಷ ಕಳೆದರೂ ಮಂಜೂರಾದ ಕಟ್ಟಡ ನಿರ್ಮಾಣವಾಗಿಲ್ಲ. ಇದರಿಂದ ಅಂಗನವಾಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಕೇವಲ ಐದನೇ ತರಗತಿವರೆಗೆ ಮಾತ್ರ ಇರುವ ಕಾರಣ ಮುಂದೆ ಓದಲಾಗದೆ ಬಹುತೇಕ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿ ಚಿಕ್ಕವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯುತ್, ಪಡಿತರ ಸೇರಿದಂತೆ ಸರ್ಕಾರದ ಸೌಲಭ್ಯಗಳು ಕೊಟ್ಟರೂ ಸಿಗಲಾಗದ ಸ್ಥಿತಿ ಗ್ರಾಮಸ್ಥರದ್ದಾಗಿದೆ.

    ಗ್ರಾಮದಲ್ಲಿ ಸುಮಾರು 60 ಮನೆಗಳಿದ್ದು, 350 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕುಮಟಾ-ಸಿದ್ದಾಪುರ ಮುಖ್ಯ ರಸ್ತೆಯಿಂದ 8 ಕಿ.ಮೀ ದೂರ ಇರುವ ಗ್ರಾಮಕ್ಕೆ 3 ಕಿ.ಮೀ ರಸ್ತೆ ಮಾತ್ರ ತೀರಾ ಇಳಿಜಾರಾಗಿದೆ. ಈ 3 ಕಿ.ಮೀ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾದಲ್ಲಿ ಊರಿನ ಅರ್ಧಕ್ಕರ್ಧ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದರೆ ಇದೀಗ ರಸ್ತೆ ಇಲ್ಲದ ಕಾರಣಕ್ಕೆ ಅನಾರೋಗ್ಯಕ್ಕೆ ಒಳಗಾದವರನ್ನು ಕಂಬಳಿ ಜೋಳಿಗೆ ಕಟ್ಟಿ ಸಾಗಿಸ ಸದ್ಯ ಗ್ರಾಮಕ್ಕೆ 12 ಅಡಿ ಅಗಲದ ರಸ್ತೆ ಇದೆಯಾದರೂ ಪ್ರತಿ ಮಳೆಗಾಲದಲ್ಲಿ ಹಾಳಾಗುತ್ತಿದೆ. ಪ್ರತಿ ವರ್ಷವೂ ಗ್ರಾಮಸ್ಥರೇ ಶ್ರಮದಾನದ ಮೂಲಕ ಬೈಕ್ ಓಡಾಟಕ್ಕೆ ಸಾಧ್ಯವಾಗುವಂತೆ ರಸ್ತೆ ನಿರ್ಮಾಣ ಮಾಡಿಕ್ಕೊಳ್ಳುತ್ತಿದ್ದಾರೆ.

  • ಜನವರಿ 4ರಂದು ಮೇದಿನಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

    ಜನವರಿ 4ರಂದು ಮೇದಿನಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅತಿ ಹಿಂದುಳಿದ ಕುಗ್ರಾಮ ಎಂಬ ಹಣೆಪಟ್ಟಿ ಕಟ್ಟಿಕೊಂಡು ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಕುಮಟಾ ತಾಲೂಕಿನ ಮೇದಿನಿ ಗ್ರಾಮಕ್ಕೆ ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಭೇಟಿ ನೀಡಲಿದ್ದು, ಒಂದು ದಿನ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಾರ್ತಾ ವಾಸ್ತವ್ಯ ಎಂಬ ವಿನೂತನ ಕಾರ್ಯಕ್ರಮದಲ್ಲಿ ಹಿಂದುಳಿದ ಪ್ರದೇಶದ ಜನರಿಗೆ ಸರ್ಕಾರ ನಿಮ್ಮೊಂದಿಗೆ ಎಂಬ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜನವರಿ ನಾಲ್ಕರಂದು ಗ್ರಾಮಕ್ಕೆ ತೆರಳಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

    ಕುಮಟಾ ಪಟ್ಟಣದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಸೊಪ್ಪಿನ ಹೊಸಳ್ಳಿ ಗ್ರಾಮ ಮೇದಿನಿ ಗ್ರಾಮವೂ ರಸ್ತೆ, ವಿದ್ಯುತ್, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದೆ. ಕುಮಟಾ-ಸಿದ್ದಾಪುರ ಮುಖ್ಯ ರಸ್ತೆ ಹುಲಿದೇವರಕೊಡ್ಲು ಕ್ರಾಸ್ ನಿಂದ 8 ಕಿ.ಮೀ ದೂರದಲ್ಲಿದ್ದು ಘಟ್ಟ ಪ್ರದೇಶದ ಕಡಿದಾದ ಹಾದಿಯಲ್ಲಿ ಸಾಗಬೇಕಾಗಿದೆ.

    ಪ್ರಸ್ತುತ ಮೇದಿನಿ ಬಗ್ಗೆ ತಿಳಿದ ಮತ್ತು ಇತ್ತೀಚೆಗೆ ಸರ್ಕಾರದ ಸೂಚನೆಯಂತೆ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭೇಟಿ ನೀಡಿ ರಸ್ತೆ ಪರಿಶೀಲಿಸಿದ್ದ ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಇದೀಗ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯೊಬ್ಬರು ಮೇದಿನಿ ಕುಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ. ಅಲ್ಲದೆ ವಾಸ್ತವ್ಯಕ್ಕಾಗಿ ಈಗಾಗಲೇ ಶಾಲಾ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮದ ಸ್ಥಿತಿಗತಿಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಲಿದ್ದಾರೆ.

    ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಕುಮಟಾ ಸಹಾಯಕ ಕಮೀಷನರ್ ಅಜಿತ್ ಸೇರಿದಂತೆ ಇತರೆ ಅಧಿಕಾರಿಗಳು ತೆರಳಲಿದ್ದು, ಆರೋಗ್ಯ ಶಿಬಿರ, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಪ್ರತಿ ತಿಂಗಳ ಎರಡನೇ ಬುಧವಾರ ಮತ್ತು ನಾಲ್ಕನೇ ಬುಧವಾರ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ನೇರ ಫೋನ್ ಇನ್ ವಾರ್ತಾ ಸ್ಪಂದನ, ಪತ್ರಕರ್ತರೊಂದಿಗೆ ಸಂವಾದ ಹಾಗೂ ತಿಂಗಳಿಗೊಮ್ಮೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಸಮಸ್ಯೆಗಳಿಗೆ ಸ್ಪಂದಿಸುವ ವಾರ್ತಾ ಮುಸ್ಸಂಜೆ ಕಾರ್ಯಕ್ರಮಗಳನ್ನು ವಾರ್ತಾ ಇಲಾಖೆ ಹಮ್ಮಿಕೊಂಡಿದೆ.

    ಜಿಲ್ಲೆಯೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಸ್ವಚ್ಛತೆ ಹಾಗೂ ಭದ್ರತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಯತ್ ಸಿಇಓ ಎಂ. ರೋಷನ್ ಅವರು ಮಾತನಾಡಿ, ಇನ್ನು ಒಂದು ವರ್ಷದಲ್ಲಿ ಪ್ಲಾಸ್ಟಿಕ್ ರಹಿತ ಜಿಲ್ಲೆಯನ್ನಾಗಿ ಮಾಡುವ ಇಚ್ಚೆ ಇದೆ. ಇದರ ಜೊತೆಗೆ ಜಿಲ್ಲೆಯ ಸಂಪ್ರದಾಯಿಕ ಪದಾರ್ಥಗಳನ್ನು ಮಾರಾಟ ಮಾಡಲು ಜಿಲ್ಲಾಡಳಿತದಿಂದ ಹೊಸ ಆ್ಯಪ್ ಬಿಡುಗಡೆ ಮಾಡಲಾಗುವುದು. ಇದರ ಮೂಲಕ ಸ್ಥಳೀಯ ಸಂಪ್ರದಾಯಿಕ ಪದಾರ್ಥಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದರು.