Tag: Medical education Minister

  • ಕೆಟ್ಟ ಮೇಲೆ ಬುದ್ಧಿ ಕಲಿತ ರಾಜ್ಯ ಸರ್ಕಾರ – ಕ್ವಾರಂಟೈನ್ ಅವಧಿ ಮತ್ತೆ ವಿಸ್ತರಣೆ

    ಕೆಟ್ಟ ಮೇಲೆ ಬುದ್ಧಿ ಕಲಿತ ರಾಜ್ಯ ಸರ್ಕಾರ – ಕ್ವಾರಂಟೈನ್ ಅವಧಿ ಮತ್ತೆ ವಿಸ್ತರಣೆ

    ಬೆಂಗಳೂರು: ಕೊರೊನಾ ರಾಜ್ಯದಲ್ಲಿ ಸ್ಫೋಟಗೊಳ್ಳುತ್ತಲೇ ಬುದ್ಧಿ ಕಲಿತ ರಾಜ್ಯ ಸರ್ಕಾರ ಈ ಹಿಂದಿನ ಆದೇಶವನ್ನು ಮತ್ತೆ ಜಾರಿಗೊಳಿಸಿದೆ. ಹೊರ ರಾಜ್ಯದಿಂದ ಯಾರೇ ಬಂದರೂ ಅವರು 14 ದಿನಗಳ ಕಾಲ ಕ್ವಾರಂಟೈನ್ ಇರಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ಹೆಚ್ಚಾಗುತ್ತಲೇ. ಕೋವಿಡ್-19 ನಿಯಂತ್ರಣಕ್ಕೆ ಸಿಗದೆ ಕಳೆದ ಕೆಲ ದಿನಗಳಿಂದ ಪ್ರತಿನಿತ್ಯವೂ 200ಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗುತ್ತಿದೆ. ಭಾನುವಾರವಷ್ಟೇ 453 ಜನರಿಗೆ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಎಚ್ಚೆತ್ತ ರಾಜ್ಯ ಸರ್ಕಾರ ಕ್ವಾರಂಟೈನ್ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿದೆ.

     

    ಈ ಕುರಿತು ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, “ರಾಜ್ಯದಲ್ಲಿ ಶೇ.61.39 ರಷ್ಟು ಕೊರೊನಾ ರೋಗಿಗಳು ಗುಣಮುಖರಾಗುತ್ತಿದ್ದಾರೆ, ಮರಣ ಪ್ರಮಾಣವು ಶೇ.1.49 ರಷ್ಟಿದೆ. 24 ಗಂಟೆಗಳೊಳಗೆ ಕೊರೊನಾ ಪಾಸಿಟಿವ್ ಬಂದ ರೋಗಿ ಪ್ರಕರಣದಲ್ಲಿದ್ದ ಎಲ್ಲರನ್ನೂ ಪತ್ತೆಹಚ್ಚಿ ಕ್ವಾರಂಟೈನ್ ಮಾಡುತ್ತಿದ್ದೇವೆ. ಹಾಗೇ ಅಂತರರಾಜ್ಯದಿಂದ ಆಗಮಿಸಿದರನ್ನು 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

    ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನ ಹೊಂದಿರುವ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನ ಏಳು ದಿನ ಸಾಂಸ್ಥಿಕ ಕ್ವಾರಂಟೈನ್, ಏಳು ದಿನ ಹೋಂ ಕ್ವಾರಂಟೈನ್ ಗೆ ಒಳಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಅದೇ ರೀತಿ ದೆಹಲಿ ಮತ್ತು ತಮಿಳುನಾಡಿನಿಂದ ಬರುವ ಪ್ರಯಾಣಿಕರು ಮೂರು ದಿನ ಸಾಂಸ್ಥಿಕ ಕ್ವಾರಂಟೈನ್ ಹನ್ನೊಂದು ದಿನ ಹೋಂ ಕ್ವಾರಂಟೈನ್.  ದೇಶದ ಇತರೆ ರಾಜ್ಯಗಳಿಂದ ಅಗಮಿಸುವ ಪ್ರಯಾಣಿಕರು ಕಡ್ಡಾಯ 14 ದಿನ ಹೋಂ ಕ್ವಾರಂಟೈನ್ ಇರಬೇಕೆಂದು ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

    ಈ ಹಿಂದೆ ಹೇಗಿತ್ತು?
    ಆರಂಭದಲ್ಲಿ ಯಾವುದೇ ರಾಜ್ಯದಿಂದ ಬಂದರೂ 14 ದಿನಗಳ ಕಾಲ ಕ್ವಾರಂಟೈನ್ ಆಗುವುದು ಕಡ್ಡಾಯ ಮಾಡಲಾಗಿತ್ತು. ಇದಾದ ಬಳಿಕ ಕೊರೊನಾ ಹೈ ರಿಸ್ಕ್ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದಿಂದ ಬರುವವರಿಗೆ ಮಾತ್ರ 14 ದಿನ ಕ್ವಾರಂಟೈನ್ ಮಾಡಲಾಗುವುದು. ಉಳಿದ ರಾಜ್ಯಗಳಿಂದ ಬಂದವರು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗುವುದು ಕಡ್ಡಾಯ ಎಂದು ಆದೇಶಿಸಲಾಗಿತ್ತು.

    ಹೋಮ್ ಕ್ವಾರಂಟೈನ್ ಎಂದರೆ ಮನೆಯಲ್ಲೇ ಪ್ರತ್ಯೇಕವಾಗಿರುವುದು. ಸಾಂಸ್ಥಿಕ ಕ್ವಾರಂಟೈನ್ ಎಂದರೆ ಸರ್ಕಾರ ನಿಗದಿ ಮಾಡಿದ ಜಾಗದಲ್ಲಿ 14 ದಿನಗಳ ಕಾಲ ವಾಸ್ತವ್ಯ ಇರುವುದು. ಸರ್ಕಾರ ಈಗ ಈ ಹಿಂದೆ ಜಾರಿ ಮಾಡಿದ್ದ ಮಾರ್ಗಸೂಚಿಯನ್ನು ಮತ್ತೆ ಅಳವಡಿಸಲು ಮುಂದಾಗಿದೆ.

  • ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಗೂ 2 ಕೋವಿಡ್ ಟೆಸ್ಟ್ ಲ್ಯಾಬ್: ಸಚಿವ ಸುಧಾಕರ್

    ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಗೂ 2 ಕೋವಿಡ್ ಟೆಸ್ಟ್ ಲ್ಯಾಬ್: ಸಚಿವ ಸುಧಾಕರ್

    ದಾವಣಗೆರೆ: ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದ ಮಾತ್ರ ಕೊರೊನಾ ನಿಗ್ರಹ ಸಾಧ್ಯ. ಜನರ ಜೀವ ಮತ್ತು ಜೀವನವನ್ನು ಸುಸ್ಥಿತಿಗೆ ತರಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ಜನರು ಸಹಕರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲಾಡಳಿತ ಭವನದದಲ್ಲಿ ಇಂದು ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಕೊರೊನಾ ನಿಗ್ರಹ ಹಿನ್ನೆಲೆ ರಾಜ್ಯದಲ್ಲಿರುವ 60 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸಲು ಸರ್ಕಾರ ಈಗಾಗಲೇ ಆದೇಶಿಸಿದ್ದು, ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲಿ 2 ಪರೀಕ್ಷಾ ಲ್ಯಾಬ್ ಸಿದ್ಧಗೊಳ್ಳುವ ವಿಶ್ವಾಸವಿದೆ. ಅಲ್ಲದೆ ದಾವಣಗೆರೆಯ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಪಿಸಿಆರ್ ಲ್ಯಾಬ್‍ನಲ್ಲಿ ಶನಿವಾರದಿಂದ ಕೋವಿಡ್ ಪರೀಕ್ಷೆ ಆರಂಭಗೊಳ್ಳಲಿದ್ದು, ಅದಕ್ಕೆ ಚಾಲನೆ ನೀಡುತ್ತಿರುವುದು ಸಂತಸದ ವಿಷಯ ಎಂದರು.

    ನಗರದ ಸಿ.ಜಿ.ಆಸ್ಪತ್ರೆಯಲ್ಲಿಯೂ ಕೋವಿಡ್ ಪರೀಕ್ಷೆ ಲ್ಯಾಬ್ ಕಾರ್ಯಾರಂಭಗೊಂಡಿದ್ದು, ಭಾನುವಾರದಿಂದ ಆರ್‍ಟಿಪಿಸಿಆರ್ ಮೆಷಿನ್‍ಗಳನ್ನು ಅಳವಡಿಸಲು ತಿಳಿಸಿದ್ದೇನೆ. ಇನ್ನೊಂದು ಎರಡು ದಿನಗಳಲ್ಲಿ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸಿದ್ಧಗೊಳ್ಳಲಿದ್ದು ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಪರೀಕ್ಷೆಗಾಗಿ ಜನರು ದಿನಗಳಟ್ಟಲೆ ಕಾಯುವುದು ತಪ್ಪುತ್ತದೆ. ಖಾಸಗಿ ಲ್ಯಾಬ್‍ಗಳಿಗೆ ದರ ನಿಗದಿಗೊಳಿಸಿದ್ದು, ಸರ್ಕಾರದ ವತಿಯಿಂದಲೇ ಕಿಟ್‍ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

    ಇಡೀ ಜಗತ್ತನ್ನು ಕಣ್ಣಿಗೆ ಕಾಣದೊಂದು ವೈರಾಣು ನಡುಗಿಸುತ್ತಿದೆ. ವಿಶ್ವದಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಕೊರೊನಾ ನಿಯಂತ್ರಣ ಮಾಡುತ್ತಿದೆ. ದೇಶದಲ್ಲಿ ಸುಮಾರು 60 ಸಾವಿರ ಜನರಿಗೆ ಸೋಂಕು ತಗುಲಿದ್ದು, ನಮ್ಮ ರಾಜ್ಯ ಸೋಂಕಿತರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಂಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತಿದೆ ಎಂದರು.

    ಜೀವ ಉಳಿಸುವ ಜೊತೆಗೆ ಜನಜೀವನ ಸುಧಾರಣೆ ಎರಡೂ ಕೆಲಸಗಳನ್ನು ಸಮತೋಲನದಿಂದ ಸರಿದೂಗಿಸಬೇಕಿದೆ. ಕೊರೊನಾ ಕೂಡ ಇರುತ್ತದೆ. ಆದರೆ ನಾವು ಅದರಿಂದ ದೂರ ಇರಬೇಕು. ನಾಲ್ಕು ಟಿ ಅಂದರೆ ಟ್ರ್ಯಾಕಿಂಗ್, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‍ಮೆಂಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲಾಗುತ್ತಿದೆ. ಕೊರೊನಾ ನಿಯಂತ್ರಣ ಕೇವಲ ಸರ್ಕಾರದ ಕೈಯಲ್ಲಿಲ್ಲ ಬದಲಾಗಿ ಎಲ್ಲ ಜನತೆ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

    ಅನಗತ್ಯ ಆತಂಕ ಬೇಡ:
    ಕೊರೊನಾ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಎಷ್ಟೋ ಅಂತೆ-ಕಂತೆಗಳು ಆಗಿ ಹೋಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿದಿನ ಹೊಸ ಮಾರ್ಗಸೂಚಿಗಳನ್ನು ನೀಡುವ ಮೂಲಕ ಕೊರೊನಾ ನಿಯಂತ್ರಣದಲ್ಲಿ ಶ್ರಮ ವಹಿಸುತ್ತಿದೆ. ಕೊರೊನಾ ಸಾಮಾಜಿಕ ಕಳಂಕ ಅಲ್ಲ. ಯಾರಿಗೆ ಬೇಕಾದರೂ ಬರಬಹುದು. ಸೋಂಕಿನ ಬಗ್ಗೆ ಭಯ ಬೇಡ. ಯಾವ ವೈರಾಣುವೂ ಜನರನ್ನು ಸೋಲಿಸಿಲ್ಲ. ಬದಲಾಗಿ ಜನರು ವೈರಾಣುವನ್ನು ಸೋಲಿಸಿದ್ದಾರೆ. ಕೊರೊನಾವನ್ನೂ ಸೋಲಿಸಲು ಸ್ವಲ್ಪ ಸಮಯ ಬೇಕು. ಆದ ಕಾರಣ ಜನರು ಅಂತರ ಕಾಯ್ದುಕೊಳ್ಳುವ ಮೂಲಕ, ಸ್ವಚ್ಛತೆ, ಮಾಸ್ಕ್ ಧರಿಸುವ ಮೂಲಕ ಹಾಗೂ ಸರ್ಕಾರದ ನಿಯಮ, ಸೂಚನೆಗಳನ್ನು ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

    ಮಾಹಿತಿ, ಧೈರ್ಯ ತುಂಬಬೇಕು:
    ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಬಂದವರ ಪೈಕಿ ಈಗಾಗಲೇ ಶೇ.50 ಗುಣಮುಖರಾಗಿದ್ದಾರೆ. ಶೇ.80ರಷ್ಟು ಜನರು ಚಿಕಿತ್ಸೆ ಇಲ್ಲದೆಯೇ ಗುಣಮುಖರಾಗುತ್ತಾರೆ. ಮರಣ ಪ್ರಮಾಣ ಶೇ.3.1 ರಷ್ಟಿದ್ದು, ಅದರಲ್ಲೂ ಹೃದಯ ತೊಂದರೆ, ಕ್ಯಾನ್ಸರ್, ಡಯಾಬಿಟಿಕ್ ಇತರೆ ತೊಂದರೆಯಿಂದ ಬಳಲುವವರು ಮರಣಕ್ಕೆ ತುತ್ತಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಜನರಲ್ಲಿ ಭಯ ಬೇಡ. ಆದರೆ ಅಂತರ ಕಾಯ್ದುಕೊಂಡು, ಸ್ವಚ್ಛತೆ ಕಾಪಾಡಿಕೊಂಡು ನಿಯಮಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಿಗೆ ಸಮರ್ಪಕ ಮಾಹಿತಿ ಮತ್ತು ಧೈರ್ಯವನ್ನು ತುಂಬಬೇಕು ಎಂದರು.

    ಆರೋಗ್ಯಸೇತು ಆ್ಯಪ್:
    ಜಿಲ್ಲೆಯ ಎಲ್ಲ ಜನತೆ ಆರೋಗ್ಯಸೇತು ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಆಪ್ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು. ಈ ಆ್ಯಪ್‍ನ ಸಹಾಯದಿಂದ ತಾವು ಸೋಂಕಿತರಿಂದ ಎಷ್ಟು ಅಂತರದಲ್ಲಿದ್ದೀರಿ ಎಂದು ತಿಳಿಯುತ್ತದೆ ಹಾಗೂ ಸೋಂಕಿತರು ಹತ್ತಿರ ಬಂದರೆ ಸೂಚನೆ ನೀಡುತ್ತದೆ. ಆದ್ದರಿಂದ ಎಲ್ಲರೂ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಹಿನ್ನೆಲೆ ಕೆಲಸ ಆಗಬೇಕು. ಇಂದಿನಿಂದಲೇ ನಾನ್ ಕೋವಿಡ್ ಸೇವೆಗಳನ್ನು ಬಾಪೂಜಿ, ಎಸ್‍ಎಸ್ ಇತರೆ ಆಸ್ಪತ್ರೆಗಳಿಗೆ ಕಳುಹಿಸಬೇಕು. ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಹೆರಿಗೆ ವಿಭಾಗವನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ವರ್ಗಾಯಿಸಿ, ಕೋವಿಡ್ ಆಸ್ಪತ್ರೆಯಲ್ಲಿ ಕೇವಲ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಆಗಬೇಕು ಎಂದು ಸೂಚಿಸಿದರು.

  • ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಬೆಂಗಳೂರು: ಕೊರೊನಾ ಭೀತಿ ನಡುವೆಯೂ ನಿಗದಿಯಂತೆ ಇಂಡಿಯನ್ ಪ್ರಿಮಿಯರ್ ಲೀಗ್‍ನ 13ನೇ ಆವೃತ್ತಿ ಟೂರ್ನಿ ನಡೆಯುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆಯಷ್ಟೇ ಸ್ಪಷ್ಟಪಡಿಸಿದ್ದರು. ಆದರೆ ಕೊರೊನಾ ದೇಶದಲ್ಲಿ ಹಬ್ಬುತ್ತಿರುವ ಪರಿ ನೋಡಿದರೆ ಐಪಿಎಲ್ ನಡೆಯುತ್ತಾ ಎಂಬ ಅನುಮಾನ ಶುರುವಾಗಿದೆ.

    ಉದ್ಯಾನಗರಿಯಲ್ಲಿ ನಾಲ್ಕು ಪಾಸಿಟೀವ್ ಕೇಸ್‍ಗಳು ಪತ್ತೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಬೆಂಗಳೂರು ಸಿದ್ಧವಿಲ್ಲ. ಐಪಿಎಲ್ ಪಂದ್ಯಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪತ್ರ ಬರೆದಿದ್ದಾರೆ.

    ಮಾರ್ಚ್ 29ರಿಂದ ಆರಂಭವಾಗಬೇಕಿರುವ ಐಪಿಎಲ್‍ನಲ್ಲಿ ಆರ್‌ಸಿಬಿಯ 7 ಲೀಗ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಬೇಕಿದೆ. ಐಪಿಎಲ್ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಡೆಯಬೇಕಿರುವ ಪ್ರಸಿದ್ಧ ಕರಗ ಮಹೋತ್ಸವವನ್ನು ಮುಂದೂಡಲು ಸಹ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

  • ನೂತನ ಸಚಿವ ತುಕಾರಾಂ ದುರ್ವರ್ತನೆ

    ನೂತನ ಸಚಿವ ತುಕಾರಾಂ ದುರ್ವರ್ತನೆ

    ಬಳ್ಳಾರಿ: ನೂತನ ಸಚಿವರಾಗಿ ಸಂಪುಟ ಸೇರಿರುವ ಕಾಂಗ್ರೆಸ್ ಶಾಸಕ ತುಕಾರಾಂ ಅವರು ಇಂದು ಸಾರ್ವಜನಿಕವಾಗಿ ಸಂಬಂಧಿ ಯುವಕನಿಂದ ಶೂ ಹಾಕಿಸಿಕೊಳ್ಳುವ ಮೂಲಕ ಅಧಿಕಾರದ ದರ್ಪ ತೋರಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

    ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ದೇವರ ದರ್ಶನ ಪಡೆದರು. ಬಳಿಕ ದೇವಾಲಯದಿಂದ ಹಿಂದಿರುಗುವ ವೇಳೆ ಕಾರಿನ ಹಿಂಭಾಗದ ಡಿಕ್ಕಿಯಲ್ಲಿದ್ದ ಸಚಿವರ ಶೂವನ್ನು ಸಂಬಂಧಿ ಹುಡುಗ ಕೈಯಲ್ಲೇ ತಂದು ಕಾರಿನ ಮುಂಭಾಗದ ಸೀಟಿನಲ್ಲಿ ಕೂತಿದ್ದ ತುಕಾರಾಂ ಬಳಿ ತೆರಳಿ ಕಾಲಿನ ಮುಂದೆ ಇರಿಸಿದರು.

    ಶಾಸಕರಾಗಿದ್ದ ವೇಳೆ ತಮ್ಮ ಸರಳ ಸಜ್ಜನಿಕೆಯಿಂದಲೇ ತುಕಾರಾಂ ಅವರು ಹೆಸರು ಪಡೆದಿದ್ದರು. ಆದರೆ ಸಚಿವ ಸ್ಥಾನ ಸ್ವೀಕರಸಿದ ಬಳಿಕ ಈ ರೀತಿಯ ವರ್ತನೆಯನ್ನು ಸಾರ್ವಜನಿಕವಾಗಿ ತೋರಿದ್ದು, ಅಧಿಕಾರ ಬಂದ ಕೂಡಲೇ ಬದಲಾಗುತ್ತಾರೆ ಎಂದ ಮಾತಿಗೆ ಸಾಕ್ಷಿಯಾಗಿ ಕಂಡಿತು.

    ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ವ್ಯಕ್ತಿಯಾದ ನನಗೆ ಹೈಕಮಾಂಡ್ ನನ್ನ ಕಾರ್ಯಗಳನ್ನು ಮೆಚ್ಚಿ ಸಚಿವ ಸ್ಥಾನ ನೀಡಿದೆ. ವೈದ್ಯಕೀಯ ಶಿಕ್ಷಣ ಸಚಿವರಾಗಿ ನನಗೆ ಅವಕಾಶ ನೀಡಿದ್ದು, ಯುವ ಜನಾಂಗ ಹಾಗೂ ಬಡ ಜನರ ಸೇವೆ ಮಾಡಲು ಅವಕಾಶ ಲಭಿಸಿದೆ. 3 ಬಾರಿ ಶಾಸಕನಾಗಿ ನಾನು ಮಾಡಿದ ಕಾರ್ಯಗಳೇ ಸಚಿವ ಸ್ಥಾನ ನೀಡಲು ಕಾರಣ. ನಗರಕ್ಕೆ ಬಂದಾಗ ದೇವಾಲಯಕ್ಕೆ ಭೇಟಿ ನೀಡುವುದು ನನ್ನ ನಂಬಿಕೆ, ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದ್ರು.

    ಚುನಾವಣಾ ನೀತಿ ಸಂಹಿತೆ ಬಂದ ಕಾರಣ ಹಂಪಿ ಉತ್ಸವ ಆಚರಣೆ ಮಾಡಿಲ್ಲ. ಆದರೆ ಈಗ ಚರ್ಚೆ ನಡೆಸಿ ಉತ್ಸವ ನಡೆಸುವ ಚಿಂತನೆ ಇದೆ. ಜಿಲ್ಲೆಯ ಜನರ ಭಾವನೆಗೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀರಾಮನಿಗಿಂತ ಆಂಜನೇಯನನ್ನು ಹೆಚ್ಚು ಜನ ಪೂಜಿಸ್ತಾರೆ: ಸಚಿವ ಡಿಕೆಶಿ

    ಶ್ರೀರಾಮನಿಗಿಂತ ಆಂಜನೇಯನನ್ನು ಹೆಚ್ಚು ಜನ ಪೂಜಿಸ್ತಾರೆ: ಸಚಿವ ಡಿಕೆಶಿ

    ಬೆಂಗಳೂರು: ಹೆಚ್ಚು ವಿವಾದ ಮಾಡಿಕೊಂಡ ವ್ಯಕ್ತಿಗಳು, ಧೈರ್ಯ ಇದ್ದವರು ಮಾತ್ರ ನಾಯಕರಾಗುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಇಲ್ಲಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀನಿವಾಸ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸೇರಿದ್ದ ಯುವ ಕಾರ್ಯಕರ್ತರಿಗೆ ತಮ್ಮ ಮಾತುಗಳನ್ನು ಉದಾಹರಣೆ ಕೊಡುತ್ತ ಮಾತನಾಡಿದ ಅವರು, ನಾಯಕರಾದವರು ಹೆಚ್ಚು ವಿವಾದ ಮಾಡಿಕೊಳ್ಳುತ್ತಾರೆ. ಇನ್ನು ರಾಮ-ಆಂಜನೇಯರ ಉದಾಹರಣೆ ಕೊಟ್ಟ ಅವರು, ಸೇವೆ, ಭಕ್ತಿಗೆ ಹೆಸರಾದ ಆಂಜನೇಯನನ್ನು ಹೆಚ್ಚು ಜನರು ಪೂಜಿಸುತ್ತಾರೆ. ಅಲ್ಲದೇ ರಾಮನ ದೇವಸ್ಥಾನಕ್ಕಿಂತ ಆಂಜನೇಯನ ದೇವಸ್ಥಾನಗಳೇ ಹೆಚ್ಚಾಗಿವೆ ಎಂದು ಹೇಳಿದರು. ಇದನ್ನು ಓದಿ: ಕಾಂಗ್ರೆಸ್ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಆರೋಪಿ ನಲಪಾಡ್ ಮಿಂಚಿಂಗ್!

    ಬಂಡೆ ಕಲ್ಲು ಹೆಚ್ಚು ಪೆಟ್ಟು ತಿಂದು ಸುಂದರ ಶಿಲೆಯಾಗುತ್ತದೆ. ಹಾಗೆಯೇ ಪರಿಶ್ರಮದಿಂದ ಕೆಲಸ ಮಾಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುತಿಸಿ ನಮ್ಮ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಸಭಾ ಸದಸ್ಯರಾಗಿ ಮಾಡಿದ್ದಾರೆ. ಹೀಗೆ ಪಕ್ಷದ ಸೇವೆಯಲ್ಲಿ ಶ್ರದ್ಧೆವಹಿಸುವ ಪ್ರತಿಯೊಬ್ಬರಿಗೂ ಪಕ್ಷ ಗೌರವ ನೀಡುತ್ತದೆ ಎಂದು ಹೇಳಿದರು.