Tag: medical college

  • ಪರಿವರ್ತನಾಯಾತ್ರೆ ಮಾಡೋ ಮೊದ್ಲು ಬಿಜೆಪಿ ನಾಯಕರು ಪರಿವರ್ತನೆಯಾಗಲಿ: ಶರಣಪ್ರಕಾಶ್ ಪಾಟೀಲ್

    ಪರಿವರ್ತನಾಯಾತ್ರೆ ಮಾಡೋ ಮೊದ್ಲು ಬಿಜೆಪಿ ನಾಯಕರು ಪರಿವರ್ತನೆಯಾಗಲಿ: ಶರಣಪ್ರಕಾಶ್ ಪಾಟೀಲ್

    ಬಾಗಲಕೋಟೆ: ಪರಿವರ್ತನಾ ಯಾತ್ರೆ ಮಾಡುವ ಮೊದಲು ಬಿಜೆಪಿ ನಾಯಕರು ತಮ್ಮ ನಡುವಳಿಕೆ ತಿದ್ದುಕೊಳ್ಳಲಿ. ಅವರ ಆಚಾರ-ವಿಚಾರ ಹಾಗೂ ಸಿದ್ಧಾಂತಗಳಲ್ಲಿ ಪರಿವರ್ತನೆಯಾಗಲಿ. ಆಗ ಮಾತ್ರ ರಾಜ್ಯದ ಜನತೆ ಅವರಿಗೆ ಮನ್ನಣೆ ಕೊಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

    ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಾತನಾಡಿದ ಶರಣಪ್ರಕಾಶ್, ಹಿಂದೆ 5 ವರ್ಷದ ಬಿಜೆಪಿ ಅಧಿಕಾರಾವಧಿಯಲ್ಲಿ ಹೇಗೆ ನಡೆದುಕೊಂಡಿದ್ದಾರೆಂದು ರಾಜ್ಯದ ಜನತೆ ನೋಡಿದ್ದಾರೆ. ಹೀಗಾಗಿ ಮೊದಲು ಬಿಜೆಪಿ ಮುಖಂಡರು ಪರಿವರ್ತನೆಯಾಗಲಿ ಎಂದು ವ್ಯಂಗ್ಯವಾಡಿದರು. ಅಲ್ಲದೇ ನಾನು ನೆಗೆಟೀವ್ ಹಾಗೂ ಟೀಕೆ ಮಾಡುವುದರಲ್ಲಿ ನನಗೆ ವಿಶ್ವಾಸವಿಲ್ಲ. ಆದರೆ ಬಿಜೆಪಿಯವರು ಬದಲಾಗಬೇಕು ಎಂದು ಹೇಳಿದ್ರು.

    ರಾಜ್ಯದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜುಗಳು ಕಾರ್ಯಾರಂಭ ಮಾಡಲಿವೆ. ಇದರಿಂದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಸಿಗುತ್ತವೆ. ಅಲ್ಲದೇ ರಾಜ್ಯದ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಲು ಸಹಕಾರಿಯಾಗುತ್ತೆ. ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇರೋದು ನಿಜ. ಅದೇ ಉದ್ದೇಶದಿಂದಲೇ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನಿಗದಿಗಾಗಿ ರೈತರೊಂದಿಗೆ ಉಪಸಮತಿ ಸಭೆ ಕರೆಯಲಾಗಿದೆ ಸಭೆಯಲ್ಲಿ ರೈತರ ಜೊತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

  • ಹಾಸ್ಟೆಲ್‍ನಲ್ಲಿ ಕಿರಿಯರ ಮೇಲೆ ರ್‍ಯಾಗಿಂಗ್‌: 54 ಮೆಡಿಕಲ್ ವಿದ್ಯಾರ್ಥಿನಿಯರಿಗೆ ದಂಡ

    ಹಾಸ್ಟೆಲ್‍ನಲ್ಲಿ ಕಿರಿಯರ ಮೇಲೆ ರ್‍ಯಾಗಿಂಗ್‌: 54 ಮೆಡಿಕಲ್ ವಿದ್ಯಾರ್ಥಿನಿಯರಿಗೆ ದಂಡ

    ಪಾಟ್ನಾ: ವಿದ್ಯಾರ್ಥಿನಿಯರ ಮೇಲೆ ರ್‍ಯಾಗಿಂಗ್‌ ಎಸಗಿದ್ದಕ್ಕೆ 54 ವಿದ್ಯಾರ್ಥಿನಿಯರಿಗೆ ಬಿಹಾರದ ದರ್ಭಾಂಗ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಾ 25 ಸಾವಿರ ರೂ. ದಂಡ ವಿಧಿಸಿದೆ. 54 ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ್ದನ್ನು ಒಪ್ಪಿಕೊಂಡ ಕಾಲೇಜು, ಎಲ್ಲ ವಿದ್ಯಾರ್ಥಿಗಳಿಂದ ಒಟ್ಟು 13.50 ಲಕ್ಷ ರೂ. ಹಣವನ್ನು ಸಂಗ್ರಹಿಸಿದೆ.

    ಹಾಸ್ಟೆಲ್ ನಲ್ಲಿದ್ದ ಪ್ರಥಮ ವರ್ಷದ ಸೆಮಿಸ್ಟರ್ ಓದುತ್ತಿದ್ದ ಓರ್ವ ಸಂತ್ರಸ್ತೆ ನವೆಂಬರ್ 11 ರಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ಗೆ ತನಗೆ ಆಗುತ್ತಿರುವ ಅನ್ಯಾಯವನ್ನು ತೋಡಿಕೊಂಡು ಈ ಮೇಲ್ ಮೂಲಕ ದೂರನ್ನು ನೀಡಿದ್ದಳು.

    ವಿದ್ಯಾರ್ಥಿನಿಯ ವಿವರವನ್ನು ಬಹಿರಂಗ ಪಡಿಸದೇ ಈ ದೂರಿನ ಪ್ರತಿಯನ್ನು ಕಾಲೇಜಿನ ಆಡಳಿತ ಮಂಡಳಿಗೆ ಕಳುಹಿಸಿ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಎಂಸಿಐ ಆದೇಶಿಸಿತ್ತು.

    ಎಂಸಿಐ ಆದೇಶದ ಅನ್ವಯ ಈಗ ಮೂರನೇ ಸೆಮಿಸ್ಟರ್ ಓದುತ್ತಿದ್ದ ಎಲ್ಲ ವಿದ್ಯಾರ್ಥಿನಿಯರಿಗೆ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಥಮ ವರ್ಷ ಓದುತ್ತಿರುವ 26 ಮಂದಿ ಈ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರಿಗೂ ದಂಡವನ್ನು ವಿಧಿಸಿದೆ.

    ರ್‍ಯಾಗಿಂಗ್‌ ಆಗುತ್ತಿರುವ ವಿಚಾರ ತಿಳಿದಿದ್ದರೂ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರದೇ ಘಟನೆಯನ್ನು ಮರೆಮಾಚಲು ಯತ್ನಿಸಿದ್ದಕ್ಕೆ ಪ್ರಥಮ ಸೆಮಿಸ್ಟರ್ ಓದುತ್ತಿದ್ದ 26 ವಿದ್ಯಾರ್ಥಿನಿಯರಿಗೆ ದಂಡ ಹಾಕಲಾಗಿದೆ. ಒಂದು ವೇಳೆ ನವೆಂಬರ್ 25ರ ಒಳಗಡೆ ಈ ದಂಡವನ್ನು ಪಾವತಿಸದೇ ಇದ್ದಲ್ಲಿ ಆ ವಿದ್ಯಾರ್ಥಿನಿಯರ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಆಡಳಿತ ಮಂಡಳಿ ಮುಂದಾಗಿದೆ.

     

  • ಘೋಷಣೆಯಷ್ಟೇ, ಬಿಡಿಗಾಸು ಕೊಡದ ಸರ್ಕಾರ- 3 ವರ್ಷವಾದ್ರೂ ಮೆಡಿಕಲ್ ಕಾಲೇಜಿಗಿಲ್ಲ ಮುಹೂರ್ತ

    ಘೋಷಣೆಯಷ್ಟೇ, ಬಿಡಿಗಾಸು ಕೊಡದ ಸರ್ಕಾರ- 3 ವರ್ಷವಾದ್ರೂ ಮೆಡಿಕಲ್ ಕಾಲೇಜಿಗಿಲ್ಲ ಮುಹೂರ್ತ

    ಯಾದಗಿರಿ: ನಾಲ್ಕು ವರ್ಷ ಪೂರೈಸಿ ಮತ್ತೊಮ್ಮೆ ಅಧಿಕಾರ ಯುದ್ಧಕ್ಕೆ ಸನ್ನದ್ಧವಾಗಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ನಾವು ನುಡಿದಂತೆ ನಡೆದಿದ್ದೇವೆ ಅಂತಿದೆ. ಆದ್ರೆ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷದ ಹಿಂದೆ ಘೋಷಿಸಿದ ಮಹತ್ವದ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

    ಹೌದು. ಸರ್ಕಾರಗಳು ಘೋಷಣೆ ಮಾಡುವಾಗ ಹಿಂದೆ ಮುಂದೆ ನೋಡಲ್ಲ. ಜನಪ್ರಿಯತೆಗಾಗಿ ಘೋಷಣೆ ಮಾಡಿದ ಬಳಿಕ ಅನುದಾನ ನೀಡುವಾಗ ಕೈ ಹಿಂದೆ ಮಾಡ್ತಾರೆ. ಅದೇ ರೀತಿ ಆಗಿದೆ ಯಾದಗಿರಿ ಮೆಡಿಕಲ್ ಕಾಲೇಜು ಸ್ಥಾಪನೆ. ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಘೋಷಣೆ ಮಾಡಿದ್ದ ಮೆಡಿಕಲ್ ಕಾಲೇಜಿಗೆ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ.


    ರಾಜ್ಯ ಸರ್ಕಾರ ಮೆಡಿಕಲ್ ಕಾಲೇಜು ಕ್ಯಾಂಪಸ್ ನಿರ್ಮಾಣಕ್ಕಾಗಿ ಮುದ್ನಾಳ ತಾಂಡಾ ಬಳಿ 30 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದು, ಅದೇ ಜಾಗದಲ್ಲಿ 56 ಕೋಟಿ ರೂಪಾಯಿ ವೆಚ್ಚದಲ್ಲಿ 300 ಹಾಸಿಗೆಯ ಸುಸಜ್ಜಿತ ಜಿಲ್ಲಾಸ್ಪತ್ರೆ ತಲೆ ಎತ್ತುತ್ತಿದೆ. ವಿಪರ್ಯಾಸ ಅಂದ್ರೆ ಮೆಡಿಕಲ್ ಕಾಲೇಜು ಕ್ಯಾಂಪಸ್‍ನಲ್ಲಿ ಜಿಲ್ಲಾಸ್ಪತ್ರೆ ಬರುತ್ತಿದೆ. ಆದ್ರೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಮಾತ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.

    2018-19ನೇ ಸಾಲಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸೂಚಿಸಿದ್ದು, 150 ವಿದ್ಯಾರ್ಥಿಗಳಿಗೆ ಅಡ್ಮಿಷನ್ ಕೊಡುವಂತೆ ತಿಳಿಸಿದೆ. ಮುಂದಿನ ತಿಂಗಳು ನವೆಂಬರ್‍ನಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಯಾದಗಿರಿಗೆ ಭೇಟಿ ನೀಡುತ್ತಿದ್ದು, ಮೂಲಭೂತ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಿದೆ. ಈ ಬಗ್ಗೆ ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರನ್ನು ಕೇಳಿದ್ರೆ ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ ಅವರ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.

    ಈಗಿರುವ ಜಿಲ್ಲಾಸ್ಪತ್ರೆಯಲ್ಲಿ ನುರಿತ ವೈದ್ಯರ ಕೊರತೆಯಿದ್ದು, ವೈದ್ಯರು, ನರ್ಸ್ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಹೀಗಾಗಿ ಜಿಲ್ಲೆಯ ಜನ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗಳತ್ತ ತೆರಳಬೇಕಿದೆ. ಮೆಡಿಕಲ್ ಕಾಲೇಜು ಆರಂಭವಾದ್ರೆ ಜಿಲ್ಲೆಯ ಜನರಿಗೆ ಸ್ಥಳೀಯವಾಗಿ ಆರೋಗ್ಯ ಭಾಗ್ಯ ಸಿಗಲಿದೆ ಅಂತ ಜನ ಹೇಳುತ್ತಿದ್ದಾರೆ.

     

  • ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್ ನಿಂದಾಗಿ ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು!

    ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್ ನಿಂದಾಗಿ ಎಂಬಿಬಿಎಸ್ ವಿದ್ಯಾರ್ಥಿ ನೇಣಿಗೆ ಶರಣು!

    ಶಿವಮೊಗ್ಗ: ನಗರದ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಕೊಂಡಿರುವ ಘಟನೆ ನಡೆದಿದೆ.

    ರಾಘು ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದು, ಈತ ಸೀನಿಯರ್ ವಿದ್ಯಾರ್ಥಿಗಳ ರ‍್ಯಾಗಿಂಗ್ ನಿಂದಾಗಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

    ಹಾಸ್ಟೆಲ್‍ ನ ತನ್ನ ರೂಮಿನಲ್ಲೇ ನೇಣು ಬಿಗಿದುಕೊಂಡಿರುವ ರಾಘು ಮೃತದೇಹವನ್ನು ಸೀನಿಯರ್ ವಿದ್ಯಾರ್ಥಿಗಳೇ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದರು. ಪೊಲೀಸರು ಬರುವ ಮುನ್ನವೇ ನೇಣು ಹಾಕಿಕೊಂಡಿದ್ದ ದೇಹವನ್ನು ಕೆಳಗಿಳಿಸಿ, ಆಸ್ಪತ್ರೆಗೆ ಸೇರಿಸಲಾಗಿತ್ತು. ವಾರ್ಡನ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ರಾಘುವಿನ ಪೋಷಕರನ್ನು ಮಾತನಾಡಿಸಿಲ್ಲ.

    ಮೂಲತಃ ಶಿಕಾರಿಪುರ ತಾಲೂಕು ಹೊಸೂರಿನ ರಾಘು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಊರಿನಲ್ಲಿ ದೀಪಾವಳಿ ಹಬ್ಬ ಮುಗಿಸಿ ಭಾನುವಾರ ಮಧ್ಯಾಹ್ನವಷ್ಟೇ ಹಾಸ್ಟೆಲ್‍ ಗೆ ಮರಳಿದ್ದ. ಮನೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ರೂಮಿಗೆ ಬಂದವನೇ ಸ್ವಲ್ಪ ಸಮಯದಲ್ಲೇ ನೇಣು ಹಾಕಿಕೊಂಡಿರುವುದು ಇದೀಗ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

    ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಎಂಬಿಬಿಎಸ್ ವಿದ್ಯಾರ್ಥಿನಿ ಹಾಸ್ಟೆಲ್ ಮಹಡಿಯಿಂದ ಜಿಗಿದು ಆತ್ಮಹತ್ಯೆ

    ಎಂಬಿಬಿಎಸ್ ವಿದ್ಯಾರ್ಥಿನಿ ಹಾಸ್ಟೆಲ್ ಮಹಡಿಯಿಂದ ಜಿಗಿದು ಆತ್ಮಹತ್ಯೆ

    ಬೀದರ್: ಎಂಬಿಬಿಎಸ್ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿನಿ ಹಾಸ್ಟೆಲ್‍ನ 4ನೇ ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ಬೀದರ್ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದು, ಕೇರಳ ಮೂಲದ ಕೀರ್ತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣ ಎಂದು ಹೇಳಲಾಗುತ್ತಿದ್ದು ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿಯಬೇಕಿದೆ.

    ಸ್ಥಳಕ್ಕೆ ನ್ಯೂಟೌನ್ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ.