Tag: medical college

  • ಕೊರೊನಾ ವಿರುದ್ಧ ಹೋರಾಡಿ ಗೆದ್ದ ದೇಶದ 93-88 ವರ್ಷದ ವೃದ್ಧ ದಂಪತಿ

    ಕೊರೊನಾ ವಿರುದ್ಧ ಹೋರಾಡಿ ಗೆದ್ದ ದೇಶದ 93-88 ವರ್ಷದ ವೃದ್ಧ ದಂಪತಿ

    ತಿರುವನಂತಪುರಂ: ವಿಶ್ವಾದಂತ್ಯ ಕೊರೊನಾ ವೈರಸ್‍ಗೆ ಬಲಿಯಾದವರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಪವಾಡ ರೀತಿ ಕೇರಳದ ವೃದ್ಧ ದಂಪತಿ ಕೊರೊನಾ ವಿರುದ್ಧ ಹೋರಾಡಿ ಸಾವು ಗೆದ್ದಿದ್ದಾರೆ.

    ಕೊರೊನಾ ಪಾಸಿಟಿವ್ ಆಗಿದ್ದ ಕೇರಳದ ಕೊಟ್ಟಾಯಂ ದಂಪತಿ, 93 ವರ್ಷದ ಥಾಮಸ್ ಮತ್ತು 88 ವರ್ಷದ ಥ್ರೆಸ್ಯಮ್ಮ ಅವರು ಗುಣಮುಖರಾಗಿದ್ದಾರೆ. ಹೀಗಾಗಿ ಅವರನ್ನು ಶುಕ್ರವಾರ ವೈದ್ಯಕೀಯ ಕಾಲೇಜು ಕೊಟ್ಟಾಯಂನಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಇಟಲಿಯಿಂದ ಮರಳಿದ್ದ ತಮ್ಮ ಮಗ ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದ ನಂತರ ದಂಪತಿ ಸೋಂಕಿಗೆ ಒಳಗಾಗಿದ್ದರು. ದಂಪತಿ ಒಂದೆರಡು ದಿನಗಳ ಹಿಂದೆಯೇ ಗುಣಮುಖರಾಗಿದ್ದರು. ಆದಾಗ್ಯೂ ಆಸ್ಪತ್ರೆಯ ಅಧಿಕಾರಿಗಳು ಕೆಲವು ಪರೀಕ್ಷೆಗಳಿಗೆ ಉಳಿಸಿಕೊಂಡಿದ್ದರು. ಶುಕ್ರವಾರ ಸಭೆ ನಡೆಸಿದ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ದಂಪತಿಯನ್ನು ಡಿಸ್ಚಾರ್ಜ್ ಮಾಡುವ ನಿರ್ಧಾರ ಕೈಗೊಂಡಿತು.

    ವೃದ್ಧ ದಂಪತಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿ ಆಂಬುಲೆನ್ಸ್ ಮೂಲಕ ಮತ್ತ ಮನೆ ತೆರಳಿದರು. ಇದಕ್ಕೂ ಮುನ್ನ ದಂಪತಿಯೊಂದಿಗೆ ವೃದ್ಯರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ವ್ಯಕ್ತಪಡಿಸಿದರು.

  • ಯಾದಗಿರಿ ಮೆಡಿಕಲ್ ಕಾಲೇಜು ರಸ್ತೆ ನಿರ್ಮಾಣದಲ್ಲಿ ಪ್ರಭಾವಿಗಳ ಹಿಂಬದಿಯಾಟ – ಭೂಮಿ ಕೊಟ್ಟವರ ಕಣ್ಣೀರು

    ಯಾದಗಿರಿ ಮೆಡಿಕಲ್ ಕಾಲೇಜು ರಸ್ತೆ ನಿರ್ಮಾಣದಲ್ಲಿ ಪ್ರಭಾವಿಗಳ ಹಿಂಬದಿಯಾಟ – ಭೂಮಿ ಕೊಟ್ಟವರ ಕಣ್ಣೀರು

    ಯಾದಗಿರಿ: 2018ರಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ದೃಷ್ಟಿಕೋನ ಇಟ್ಟುಕೊಂಡು ನಗರದ ಹೊರವಲಯದ ಮುದ್ನಾಳ್ ತಾಂಡಾದ ಬಳಿ 300 ಹಾಸಿಗೆಯ ಸಾಮರ್ಥ್ಯದ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ನಿರೀಕ್ಷೆಯಂತೆ ಕಳೆದ ವರ್ಷ ಕೇಂದ್ರ ಸರ್ಕಾರ ಮೆಡಿಕಲ್ ಕಾಲೇಜು ಸಹ ಮಂಜೂರು ಮಾಡಿದೆ. ವಿಪರ್ಯಾಸ ಎಂದರೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದರೂ ರಸ್ತೆಗೆ ಜಾಗ ಕೊಟ್ಟವರಿಗೆ ಸಂಕಷ್ಟ ಮಾತ್ರ ತಪ್ಪಿಲ್ಲ.

    ಆಸ್ಪತ್ರೆಗೆ 2017ರಲ್ಲಿ ನಿಗದಿಯಾಗಿದ್ದ ಜಾಗ ಬಿಟ್ಟು, ಈಗ ಬೆರೆಡೆ ಮಾರ್ಗ ಬದಲಿಸಿದ ಜಿಲ್ಲಾಡಳಿತ ಜಮೀನು ಮಾಲೀಕರ ಅನುಮತಿ ಇಲ್ಲದೆ, ರಸ್ತೆ ನಿರ್ಮಾಣ ಮಾಡುತ್ತಿದೆ. ಚಿತ್ತಾಪುರ ಮುಖ್ಯ ರಸ್ತೆಯಿಂದ ಸುಮಾರು 7 ಎಕ್ರೆ ಉದ್ದ ಮತ್ತು 100 ಅಡಿ ಅಗಲವಾದ ರಸ್ತೆ ನಿರ್ಮಿಸಲು 2017ರಲ್ಲಿ ಆಸ್ಪತ್ರೆ ಬ್ಲೂ ಪ್ರಿಂಟ್ ತಯಾರಿಸಲಾಗಿತ್ತು. ಅದರಂತೆ ಸುಮಾರು 21 ರೈತರ ಜಮೀನಲ್ಲಿ ಈ ರಸ್ತೆ ಹಾದು ಹೋಗುತ್ತದೆ. ಇದಕ್ಕೆ ಈಗಾಗಲೇ ರೈತರು ಸಹ ಸಮ್ಮತಿ ನೀಡಿ ಕೆಲವೊಬ್ಬರು ಪರಿಹಾರ ಸಹ ಪಡೆದಿದ್ದರು. ಇನ್ನೂ ಕೆಲವರು ಭೂಮಿ ಕೊಡುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಹೊತ್ತಿನಲ್ಲಿ ಜಿಲ್ಲಾಡಳಿತ ತನ್ನ ವರಸೆ ಬದಲಾಯಿಸಿದ್ದು, ಮೊದಲು ನಿಗದಿ ಮಾಡಿದ ಸ್ಥಳವನ್ನು ಬಿಟ್ಟು ಬೆರೆ ಕಡೆ ರಸ್ತೆ ನಿರ್ಮಾಣ ಮಾಡುತ್ತಿದೆ.

    ಅಲ್ಲದೇ ಇದಕ್ಕೆ ರೈತರಿಂದ ಯಾವುದೇ ಅನುಮತಿ ಕೂಡ ಜಿಲ್ಲಾಡಳಿತ ಪಡೆದಿಲ್ಲ. ಹೀಗಾಗಿ ಕೆಲ ರೈತರ ಅರ್ಧ ಜಮೀನು ಈ ರಸ್ತೆಯ ಪಾಲಾಗುತ್ತಿದೆ. ಇದು ಭೂಮಿ ಮಾಲೀಕರ ನೋವಿಗೆ ಕಾರಣವಾಗಿದೆ. ರುಕ್ಮಿಣಿ ಬಾಯಿ ಮತ್ತು ತಾರಾಬಾಯಿ ಚವ್ಹಾಣ ಅವರಿಗೆ ಸೇರಿದ ಜಾಗ ಸರ್ವೆ ನಂಬರ್ 2/2ರಲ್ಲಿ ಈ ಹಿಂದೆ ಗುರುತಿಸಿದ್ದಕ್ಕಿಂತ ಹೆಚ್ಚಿಗೆ ಜಾಗವನ್ನು ರಸ್ತೆ ಕಾಮಗಾರಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರ ಪರಿಣಾಮ ಈ ಮಹಿಳೆಯರ ಬಳಿ ಇರುವ ಹೊಲದಲ್ಲಿ ಶೇ. 95ರಷ್ಟು ಜಾಗ ರಸ್ತೆಗೆ ಹೋಗುತ್ತದೆ. ಇದರಿಂದ ಈ ಕುಟುಂಬಕ್ಕೆ ತಾವು ಬೀದಿಗೆ ಬೀಳುವ ಆತಂಕ ಎದುರಾಗಿದೆ.

    2017ರಲ್ಲಿ ಸಿದ್ಧವಾಗಿದ್ದ ರಸ್ತೆ ಕಾಮಾಗರಿ ನಕ್ಷೆಯಲ್ಲಿ ಸರ್ವೆ ನಂಬರ್ 2/2ರ 2 ಗುಂಟೆ ಜಾಗವನ್ನ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಪರಿಷ್ಕೃತ ರಸ್ತೆ ನಕ್ಷೆಯಲ್ಲಿ 14 ಗುಂಟೆ ಜಾಗವನ್ನ ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಹೆಚ್ಚುವರಿ ಜಾಗ ಪಡೆದುಕೊಳ್ತಿರುವ ಬಗ್ಗೆ ಮಾಲೀಕರಿಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ. ಇತ್ತ ಕಂದಾಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಸರ್ವೆ ಮಾಡಿ, ಯಾವುದೇ ಮುನ್ಸೂಚನೆ ನೀಡದೆ ಜಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.

    ಇದರ ಹಿಂದೆ ಕೆಲ ಕಾಣದ ಕೈಗಳಿದ್ದು, ಪ್ರಭಾವಿಯೊಬ್ಬರ ಜಮೀನು ಉಳಿಸಲು ಕೆಲ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣವಾಗುತ್ತಿರುವ ಹಿನ್ನೆಲೆ ಈ ಭೂಮಿಗೆ ಈಗ ಬಂಗಾರದ ಬೆಲೆ ಬಂದಿದ್ದು, ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾದ ಕೈವಾಡಯಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

  • ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡ್ತವರಂತೆ: ಸುಧಾಕರ್ ಟೀಕೆ

    ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡ್ತವರಂತೆ: ಸುಧಾಕರ್ ಟೀಕೆ

    ಚಿಕ್ಕಬಳ್ಳಾಪುರ: ಈಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಏನೋ ಕುರಿ ವ್ಯಾಪಾರ ಮಾಡುತ್ತಿದ್ದಾರಂತೆ ಎಂದು ಶಾಸಕ ಸುಧಾಕರ್ ಟೀಕಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿ ನೂತನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬೆಂಬಲಿಗರ ಸಮ್ಮುಖದಲ್ಲಿ ಭೂಮಿ ಪೂಜೆ ನೇರವೇರಿಸಿ ಸುಧಾಕರ್ ಅವರು ಮಾತನಾಡಿದರು. ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡುತ್ತ ಸುಧಾಕರ್ ಅವರು ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದರು. ಈಗ ರಮೇಶ್ ಕುಮಾರ್ ಕುರಿ ವ್ಯಾಪಾರ ಮಾಡುತ್ತಿದ್ದಾರಂತೆ ಎಂದು ಬೆಂಬಲಿಗರು ಹೇಳಿದ್ದನ್ನು ಪುನರುಚ್ಚರಿಸಿದ ಸುಧಾಕರ್ ಅವರು, ‘ಹಾ ಏನೋ ಕುರಿಗಳ ವ್ಯಾಪಾರ ಮಾಡ್ತಾವರಂತೆ, ನನಗೆ ಗೊತ್ತಿಲ್ಲ’ ಎಂದು ನಗುತ್ತಾ ವ್ಯಂಗ್ಯವಾಡಿದರು.

    ಸುಪ್ರೀಂ ಕೋರ್ಟ್ ರಮೇಶ್ ಕುಮಾರ್ ಗೆ ತಕ್ಕಶಾಸ್ತಿ ಮಾಡಿದ್ದು, ಅದಕ್ಕಿಂತ ಹೆಚ್ಚಾಗಿ ನಾನು ನಂಬಿದ ನೀವು ತಕ್ಕಶಾಸ್ತಿ ಮಾಡಿದ್ದೀರಿ ಅಂತ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು. ರಮೇಶ್ ಕುಮಾರ್ ನಮ್ಮನ್ನ ಅನರ್ಹರನ್ನಾಗಿ ಮಾಡಿದರು. 4 ವರ್ಷ ನಾವೆಲ್ಲಾ ಮನೆಯಲ್ಲಿರಬೇಕು. ಮತ್ತೆ ಚುನಾವಣೆಗೆ ನಿಲ್ಲಬಾರದು ಅಂತ ಅನರ್ಹರನ್ನಾಗಿ ಮಾಡಿದರು. ಕಾನೂನು ಬಿಟ್ಟು ರಮೇಶ್ ಕುಮಾರ್ ಅಂಬೇಡ್ಕರ್ ಆಗಲು ಹೊರಟರು. ಡಾ ಅಂಬೇಡ್ಕರ್ ಬರೆದಿರೋ ಸಂವಿಧಾನವೇ ಬೇರೆ, ಇವರು ಸಂವಿಧಾನವನ್ನ ಅರ್ಥೈಸಿದ್ದೇ ಬೇರೆ ಎಂದು ವಾಗ್ದಾಳಿ ನಡೆಸಿದರು.

    ಈ ಹಿಂದೆ ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ರಮೇಶ್ ಕುಮಾರ್ ಕುರಿಗಳನ್ನು ಖರೀದಿಸಿದ್ದರು. ಆ ಬಳಿಕ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಚೇಳೂರು ಸಂತೆಯಲ್ಲಿ ಕುರಿಗಳನ್ನು ಖರೀದಿಸಿದ್ದರು. ಆಗ ರಾಜಕಾರಣಕ್ಕಿಂತ ಕುರಿ ಸಾಕುವುದು ಲೇಸು ಅಂತಲೋ ಏನೋ ಇತ್ತೀಚೆಗೆ ರಮೇಶ್ ಕುಮಾರ್ ಕುರಿ ಸಂತೆಗಳಲ್ಲಿ ಆಗಮಿಸಿ ಕುರಿ ಕೊಂಡುಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

  • ಶೀಘ್ರವೇ ಸಂಪುಟ ವಿಸ್ತರಣೆ- ಮಂತ್ರಿ ಸ್ಥಾನ ಸಿಗೋ ನಂಬಿಕೆ ಇದೆ: ಸುಧಾಕರ್

    ಶೀಘ್ರವೇ ಸಂಪುಟ ವಿಸ್ತರಣೆ- ಮಂತ್ರಿ ಸ್ಥಾನ ಸಿಗೋ ನಂಬಿಕೆ ಇದೆ: ಸುಧಾಕರ್

    -ಮೆಡಿಕಲ್ ಕಾಲೇಜಿಗೆ ಭೂಮಿ ಪೂಜೆ

    ಚಿಕ್ಕಬಳ್ಳಾಪುರ: ಕೆಲವೇ ದಿನಗಳಲ್ಲಿ ಸುಧಾಕರ್ ಮಂತ್ರಿಯಾಗುತ್ತಾರೆ ಎಂದು ಮಾನ್ಯ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದು. ಹೀಗಾಗಿ ಬಿಎಸ್‍ವೈ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ. ಅದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಕೆ ಸುಧಾಕರ್ ಹೇಳಿದರು.

    ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಆರೂರು ಗ್ರಾಮದ ಬಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಉಪಚುನಾವಣೆಗೆ ಮುನ್ನವೂ ಸಿಎಂ ಬಿಎಸ್‍ವೈ ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದರು. ಈಗ 525 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಸಚಿವ ಸಂಪುಟ ವಿಳಂಬಕ್ಕೆ ತಮ್ಮ ಬೆಂಬಲಿಗರು ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಸಿಎಂ ಅವರು ನಮಗಾಗಿ 525 ಕೋಟಿ ರೂ. ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ. ದಿನಗಳು ಚೆನ್ನಾಗಿಲ್ಲ ಎಂದು ಇಷ್ಟು ದಿನ ಮಾಡಲಿಲ್ಲ, ಈಗ ಎಲ್ಲವೂ ಪರಿಪಕ್ವವಾಗಿದೆ. ನೂರಕ್ಕೆ ನೂರು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು ಆತ್ಮವಿಶ್ವಾಸದ ವ್ಯಕ್ತಪಡಿಸಿದರು.

    ಹಿರಿಯ ಶಾಸಕರು, ಕಿರಿಯ ನೂತನ ಶಾಸಕರಿಗೆ ತಮ್ಮ ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳ ಪಕ್ಷ ಹಾಗೂ ಹೈಕಮಾಂಡ್‍ಗೆ ನಾಯಕರು ಕೊಡುವ ಬೆಲೆಗೆ ಸಾಕ್ಷಿಯಾಗಿದೆ ಎಂದರು. ಪದವಿ ಮುಖ್ಯ ಅಲ್ಲ, ಪಕ್ಷ ಹಾಗೂ ಸರ್ಕಾರಕ್ಕೆ ಒಳ್ಳೆಯಾಗಲಿ ಎಂದು ಅಧಿಕಾರ ಮುಖ್ಯ ಅಲ್ಲ ಅಂತ ತ್ಯಾಗ ಮಾಡ್ತೀವಿ ಎಂದಿರುವುದು ಅವರ ಹೃದಯ ವೈಶಾಲ್ಯತೆಯ ಗುಣ ಎಂದರು.

    ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂಬ ಮಾಹಿತಿ ಇದೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು ಪದೇ ಪದೇ ಯಡಿಯೂರಪ್ಪನವರ ಬಗ್ಗೆ ಟೀಕೆ ಮಾಡುತ್ತಿದ್ದು, ಅವರಿಗೆ ಸಿಎಂ ಕುರ್ಚಿ ಮೇಲಿನ ಮೋಹಕ್ಕೆ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ಸಮಾಜಘಾತುಕ ಶಕ್ತಿಗಳ ಬಲ ಹೆಚ್ಚಾಗಲು ಹಿಂದಿನ ಸರ್ಕಾರ ಕಾರಣ: ಡಿಸಿಎಂ ಅಶ್ವಥ್

    ಸಮಾಜಘಾತುಕ ಶಕ್ತಿಗಳ ಬಲ ಹೆಚ್ಚಾಗಲು ಹಿಂದಿನ ಸರ್ಕಾರ ಕಾರಣ: ಡಿಸಿಎಂ ಅಶ್ವಥ್

    – ಕನಕಪುರಕ್ಕೆ ಸದ್ಯಕ್ಕೆ ಮೆಡಿಕಲ್ ಕಾಲೇಜಿಲ್ಲ

    ಮೈಸೂರು: ರಾಜ್ಯದಲ್ಲಿ ಬಾಂಬ್ ಪತ್ತೆಯಂತಹ ಪ್ರಕರಣಗಳಿಗೆ ಹಿಂದಿನ ಸರ್ಕಾರಗಳೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕೋದು ಬಿಟ್ಟು ಪ್ರೋತ್ಸಾಹ ಕೊಟ್ಟ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಡಿಸಿಎಂ, ಹಿಂದಿನ ಸರ್ಕಾರ ಸಮಾಜಘಾತುಕ ಕೆಲಸ ಮಾಡುತ್ತಿದ್ದವರ ಮೇಲಿನ ಕೇಸ್‍ಗಳನ್ನ ವಾಪಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರೆಲ್ಲಾ ಕಾನೂನು ಮೀರಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.

    ನಮ್ಮ ಸರ್ಕಾರ ಎಲ್ಲವನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡಿದೆ. ಆದಷ್ಟು ಘಟನೆಗಳು ನಡೆಯುವ ಮುನ್ನವೇ ತಡೆಹಿಡಿಯಲಾಗಿದೆ. ಬಾಂಬ್ ತಯಾರಿಕೆಯ ಕೆಲ ವಸ್ತುಗಳು ಕಾರ್ಖಾನೆ ಉಪಯೋಗಕ್ಕೆ ಸಿಗುತ್ತೆ. ಅವುಗಳನ್ನ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ. ಇಂತಹ ವಸ್ತುಗಳನ್ನು ಅವರ ಕೈಗೆ ಸಿಗದಂತೆ ನೋಡಿಕೊಳ್ಳುತ್ತೇವೆ ಎಂದರು.

    ಸದ್ಯಕ್ಕೆ ಕನಕಪುರಕ್ಕೆ ಮೆಡಿಕಲ್ ಕಾಲೇಜಿಲ್ಲ ಎಂದು ಅಶ್ವಥ್ ನಾರಾಯಣ್ ಪರೋಕ್ಷವಾಗಿ ಹೇಳಿದ್ದಾರೆ. ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡುತ್ತಿದ್ದೇವೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಜೊತೆ ಹೆಲ್ತಿ ಸಿಟಿ ಮಾಡಲಾಗುತ್ತೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಿರುವುದರಿಂದ ತಾಲೂಕು ಕೇಂದ್ರದಲ್ಲಿ ಮೆಡಿಕಲ್ ಕಾಲೇಜಿನ ಅಗತ್ಯ ಇರಲ್ಲ ಎಂದರು. ರಾಜ್ಯದಲ್ಲಿ ಮಂಜೂರಾಗಿರುವ ನಾಲ್ಕು ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

  • ಯಾದಗಿರಿಗೆ ಮೆಡಿಕಲ್ ಕಾಲೇಜು ಮಂಜೂರು

    ಯಾದಗಿರಿಗೆ ಮೆಡಿಕಲ್ ಕಾಲೇಜು ಮಂಜೂರು

    ಯಾದಗಿರಿ: ಜಿಲ್ಲೆಯ ಜನರ ಬಹು ದಿನ ಕನಸು ಕೊನೆಗೂ ನನಸಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶ ಎನ್ನಲಾಗುತ್ತಿದ್ದ ಯಾದಗಿರಿ ಜಿಲ್ಲೆಗೆ ಅಗತ್ಯವಿದ್ದ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ.

    ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ ಮಾಡಿದ್ದಾರೆ.ಸಂಸದ ರಾಜಾ ಅಮರೇಶ್ ನಾಯಕ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು, ನಿಮ್ಮ ನಾಯಕತ್ವದಲ್ಲಿ ಕಾರ್ಯ ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ.

    ಗ್ರಾಮ ವಾಸ್ತವ್ಯ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೆಡಿಕಲ್ ಕಾಲೇಜು ಮಂಜೂರಾತಿಗೆ ತಡೆ ನೀಡಿದ್ದರು. ಇದರಿಂದ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಯಾದಗಿರಿ ಬಂದ್ ಸಹ ಮಾಡಲಾಗಿತ್ತು. ಈ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ನಾನು ಮುಖ್ಯಮಂತ್ರಿಯಾದರೆ ಮೆಡಿಕಲ್ ಕಾಲೇಜು ಮಂಜೂರು ಮಾಡುತ್ತೇನೆ ಎಂದು ಬಿಜೆಪಿ ನಾಯಕರು ಹಾಗೂ ಜಿಲ್ಲೆಯ ಜನರಿಗೆ ಮಾತು ಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಜಿಲ್ಲೆಯ ಜನರಿಗೆ ಖುಷಿ ತಂದಿದೆ.

    ರಾಜ್ಯ ಸಂಪುಟ ಸಭೆಯ ಬಳಿಕ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಅವರು, ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 525 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

  • ಕನಕಪುರ ಜನರಿಗೆ ನ್ಯಾಯ ದೊರಕಿಸಿಕೊಡಲು ನನ್ನದೇ ಮಾರ್ಗ ಅನುಸರಿಸಬೇಕಾಗುತ್ತದೆ: ಡಿಕೆಶಿ

    ಕನಕಪುರ ಜನರಿಗೆ ನ್ಯಾಯ ದೊರಕಿಸಿಕೊಡಲು ನನ್ನದೇ ಮಾರ್ಗ ಅನುಸರಿಸಬೇಕಾಗುತ್ತದೆ: ಡಿಕೆಶಿ

    ರಾಮನಗರ: ಉಪಚುನಾವಣೆಗೂ ಮೊದಲು ಭಾರೀ ಸುದ್ದಿಯಾಗಿದ್ದ ಕನಕಪುರ ಮೆಡಿಕಲ್ ಕಾಲೇಜು ವಿಚಾರ, ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬರುತ್ತಿದಂತೆ ಕನಕಪುರ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದು ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಡಾ.ಸುಧಾಕರ್ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ನಡುವಿನ ಕಾಳಗಕ್ಕೂ ಕಾರಣವಾಗಿತ್ತು. ಆದರೆ ಇದೀಗ ಡಿಕೆ ಶಿವಕುಮಾರ್ ಮತ್ತೆ ಮೆಡಿಕಲ್ ವಿಚಾರವಾಗಿ ಸಿಡಿದೆದ್ದಿದ್ದು, ಕನಕಪುರ ಮೆಡಿಕಲ್ ಕಾಲೇಜು ರದ್ದುಗೊಳಿಸಿದ ಬಗ್ಗೆ ಮರು ಪರಿಶೀಲನೆ ನಡೆಸಿ ಮರು ಆದೇಶಕ್ಕಾಗಿ ಪಟ್ಟು ಹಿಡಿದು ಶನಿವಾರ ಸಿಎಂಗೆ ಪತ್ರ ಬರೆದಿದ್ದಾರೆ.

    ರಾಮನಗರ ಜಿಲ್ಲೆಯ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಪಡಿಸಿರುವ ಅದೇಶವನ್ನು ಹಿಂತೆಗೆದುಕೊಂಡು ಕನಕಪುರದಲ್ಲೇ ಮೆಡಿಕಲ್ ಕಾಲೇಜು ಸ್ಥಾಪನೆ ಮರು ಆದೇಶ ಹೊರಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಹೋರಾಟಕ್ಕೆ ಆಸ್ಪದ ನೀಡುವುದಿಲ್ಲವೆಂದು ಸಿಎಂ ಯಡಿಯೂರಪ್ಪರನ್ನ ನಂಬಿರುವುದಾಗಿ ಎಂದು ಶಿವಕುಮಾರ್ ಅವರು ಯಡಿಯೂರಪ್ಪನವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮೆಡಿಕಲ್ ಕಾಲೇಜಿಗೆ ಒತ್ತಾಯಿಸಿ ಶನಿವಾರ ಬರೆದ ಪತ್ರದಲ್ಲಿ ಡಿಕೆ ಶಿವಕುಮಾರ್, ಯಡಿಯೂರಪ್ಪನವರಿಗೆ ಅವರ ದಾಟಿಯಲ್ಲಿದೇ ತಿವಿಯುವುದರ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕನಕಪುರದ ಜನತೆಗಾಗಿ ಸರ್ಕಾರ ಕೂಡಲೇ ಕನಕಪುರಕ್ಕೆ ನೀಡಲಾಗಿದ್ದ ಕಾಲೇಜನ್ನು ಮರು ಮಂಜೂರು ಮಾಡಬೇಕು. ಕಾಲೇಜು ಕಟ್ಟಡ ನಿರ್ಮಾಣದ ಭೂಮಿ ಪೂಜೆಗೆ ದಿನಾಂಕ ನಿಗದಿಪಡಿಸಬೇಕು. ಒಂದು ವೇಳೆ ನಿಮ್ಮ ಸರ್ಕಾರ ಈ ವಿಚಾರದಲ್ಲಿ ದ್ವೇಷದ ರಾಜಕಾರಣ ಮುಂದುವರಿಸಿದರೆ ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಕನಕಪುರ ಜನರಿಗೆ ನ್ಯಾಯ ದೊರಕಿಸಿಕೊಡಲು ನನ್ನದೇ ಮಾರ್ಗ ಅನುಸರಿಸಬೇಕಾಗುತ್ತದೆ. ಇದಕ್ಕೆ ನೀವು ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ‘ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ, ಜನರ ಹಿತದೃಷ್ಟಿ ಹಾಗೂ ಅಭಿವೃದ್ಧಿ ವಿಚಾರವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಯಡಿಯೂರಪ್ಪನವರು ಬಸವ ತತ್ವಗಳನ್ನು ಪಾಲಿಸುವುದಾಗಿ ಹೇಳಿಕೊಳ್ಳುವ ಅವರು ಈ ಹಿಂದೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ಆದರೆ ನಂತರದ ದಿನಗಳಲ್ಲಿ ಅವರು ತಮ್ಮ ಮಾತಿಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕನಕಪುರ ವೈದ್ಯಕೀಯ ವಿಜ್ಞಾನ ಕಾಲೇಜು ಆದೇಶವನ್ನು ರದ್ದುಗೊಳಿಸಿರುವುದು ಮುಖ್ಯಮಂತ್ರಿಗಳು ತಮ್ಮ ಮಾತು ತಪ್ಪಿರುವುದಕ್ಕೆ ಸಾಕ್ಷಿಯಾಗಿದೆ.

    ಕಳೆದ ಸರ್ಕಾರ 2018-19ನೇ ಸಾಲಿನ ಬಜೆಟ್‍ನಲ್ಲಿ ಕನಕಪುರ ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡಿತ್ತು. ಈ ವಿಚಾರವಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ನೀವು ನಿಮ್ಮ ಅಭಿಪ್ರಾಯ ಹಾಗೂ ಒಪ್ಪಿಗೆಯನ್ನೂ ಸೂಚಿಸಿದ್ದಿರಿ. ನಂತರ ಯೋಜನಾ ಇಲಾಖೆ, ಆರ್ಥಿಕ ಇಲಾಖೆ, ಕಾನೂನು ಮತ್ತು ಸಂಸದೀಯ ಇಲಾಖೆ ಈ ಪ್ರಸ್ತಾವನೆ ಪರಿಶೀಲಿಸಿ 2018ರ ಡಿಸೆಂಬರ್ 13 ರಂದು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದಾದ ನಂತರ ಮೆಡಿಕಲ್ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಕನಕಪುರದ ರಾಯಸಂಧ್ರ ಹಳ್ಳಿಯಲ್ಲಿ 25 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ನಂತರ ಟೆಂಡರ್ ಕರೆದು ಗುದ್ದಲಿ ಪೂಜೆ ಮಾತ್ರ ಬಾಕಿ ಉಳಿದಿತ್ತು.

    ಟೆಂಡರ್ ಕರೆದು ಗುದ್ದಲಿ ಪೂಜೆ ನಡೆಸುವ ಹಂತದಲ್ಲಿರುವ ಯೋಜನೆಯನ್ನು ನಿಮ್ಮ ಏಕವ್ಯಕ್ತಿ ಸಂಪುಟ ಹಿಂಪಡೆದು ಹಿಂದಿನ ಸರ್ಕಾರದ ಆದೇಶ ರದ್ದುಗೊಳಿಸಿ ಯೋಜನೆಯನ್ನು ರಾತ್ರೋರಾತ್ರಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿರುವುದು ನನಗೆ ಅಚ್ಚರಿ ತಂದಿದೆ. ನೀವು ಇಂತಹ ನಿರ್ಧಾರ ಕೈಗೊಂಡಿರುವುದು ನನ್ನ ಮನಸ್ಸಿಗೆ ನೋವು ತಂದಿದೆ. ಯಾವುದೇ ಬೇರೆ ಕ್ಷೇತ್ರಕ್ಕೆ ನೀಡಿದ್ದ ಕಾಲೇಜನ್ನು ರದ್ದುಗೊಳಿಸಿ ಕನಕಪುರಕ್ಕೆ ಕಾಲೇಜು ಅನುಮೋದನೆ ನೀಡಿರಲಿಲ್ಲ ಎಂದು ನಿಮಗೆ ನೆನಪಿಸಲು ಇಚ್ಚಿಸುತ್ತೇನೆ. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಿರುವ ಬಗ್ಗೆ ನಾನು ಯಾವುದೇ ಪ್ರಶ್ನೆ ಮಾಡುವುದಿಲ್ಲ.

    ಸರ್ಕಾರ ತನಗೆ ಇಚ್ಛೆ ಬಂದ ಪ್ರದೇಶಗಳಿಗೆ ಎಷ್ಟು ಕಾಲೇಜುಗಳನ್ನು ಬೇಕಾದರೂ ನೀಡಲಿ. ಆದರೆ ಕನಕಪುರಕ್ಕೆ ನೀಡಲಾಗಿದ್ದ ಕಾಲೇಜನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂಬುದು ನಮ್ಮ ವಾದ. ಇತ್ತೀಚೆಗೆ ನೀವು ಮಾಗಡಿಯಲ್ಲಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡುವುದಾಗಿ ಕೊಟ್ಟಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಕೂಡಲೇ ಕನಕಪುರಕ್ಕೆ ನೀಡಲಾಗಿದ್ದ ಕಾಲೇಜನ್ನು ಮರು ಮಂಜೂರು ಮಾಡಬೇಕು. ಅಲ್ಲದೆ ಕಾಲೇಜು ಕಟ್ಟಡ ನಿರ್ಮಾಣದ ಭೂಮಿ ಪೂಜೆಗೆ ದಿನಾಂಕ ನಿಗದಿಪಡಿಸಬೇಕು. ಒಂದು ವೇಳೆ ನಿಮ್ಮ ಸರ್ಕಾರ ಈ ವಿಚಾರದಲ್ಲಿ ದ್ವೇಷದ ರಾಜಕಾರಣ ಮುಂದುವರಿಸಿದೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಒಂದು ವೇಳೆ ಸಿಎಂ ಯಡಿಯೂರಪ್ಪನವರು ಏನಾದ್ರೂ ಕನಕಪುರ ಮೆಡಿಕಲ್ ಕಾಲೇಜನ್ನು ಮರು ಪರಿಶೀಲಿಸಿ ಮರು ಆದೇಶ ಹೊರಡಿಸದೇ ಇದ್ದರೆ, ಡಿಕೆ ಶಿವಕುಮಾರ್ ತಮ್ಮ ಹೋರಾಟ ಶುರು ಮಾಡುವುದು ಪಕ್ಕಾ ಆದಂತಿದೆ. ಅದು ಯಾವ ರೀತಿ ಅನ್ನೋದನ್ನ ಕೂಡಾ ತಿಳಿಸಿರುವುದು ಇದೀಗ ಜಿಲ್ಲೆಯ ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

  • ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

    ವೈದ್ಯಕೀಯ ಕಾಲೇಜುಗಳು ಬಿಎಸ್‍ವೈಗೆ ಕಡಲೆಕಾಯಿ ಅಂಗಡಿಯೇ – ಸುರೇಶ್ ಗೌಡ ಪ್ರಶ್ನೆ

    – ಅನರ್ಹರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಹೇಳಿಕೆ

    ಮಂಡ್ಯ: ವೈದ್ಯಕೀಯ ಕಾಲೇಜುಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಡ್ಲೇಕಾಯಿ ಅಂಗಡಿಗಳಾಗಿರಬೇಕು ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಪೇಟೆಗೆ ವೈದ್ಯಕೀಯ ಕಾಲೇಜು ನೀಡುವ ಭರವಸೆ ನೀಡಿದ ಬಿಎಸ್‍ವೈ ವಿರುದ್ಧ ಕಿಡಿಕಾರಿದರು. ಅನರ್ಹ ಶಾಸಕರ ಕ್ಷೇತ್ರಗಳಿಗೆ ಇಂದ್ರಲೋಕವನ್ನೇ ಇಳಿಸುವಂತೆ ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ತಡೆಹಿಡಿಯುತ್ತಿದ್ದಾರೆ. ಇಂದಹ ಸಂದರ್ಭದಲ್ಲಿ ಅನರ್ಹ ಶಾಸಕರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವರೇ ಎಂದು ಪ್ರಶ್ನಿಸಿದ್ದಾರೆ.

    ಸೋಮವಾರದಿಂದ ನೀತಿಸಂಹಿತೆ ಜಾರಿಯಾಗುತ್ತದೆ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ರಾಜಕೀಯ ಗಿಮಿಕ್ ಅಷ್ಟೇ. ನಾರಾಯಣಗೌಡರನ್ನು ಅಭ್ಯರ್ಥಿ ಮಾಡಬಹುದು ಅನಿಸುತ್ತೆ ಅದಕ್ಕೆ ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಕಾರ್ಯರೂಪಕ್ಕೆ ತಂದಿದ್ದಾರೆ? ಮಾಧ್ಯಮಗಳೇ ಅವಲೋಕಿಸಿ ನೋಡಿ ತಿಳಿಯುತ್ತದೆ ಎಂದು ಹರಿಹಾಯ್ದರು.

    ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಕುರಿತು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜಾತ್ಯಾತೀತ ತತ್ವದಲ್ಲಿವೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲಾ ಕಟಿಬದ್ಧರಾಗಿರುತ್ತೇವೆ. ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಪಾಕ್‍ನಲ್ಲಿ ಹಿಂದೂ ಯುವತಿ ಸಾವು – ಆತ್ಮಹತ್ಯೆ ಅಲ್ಲ ಇದು ರೇಪ್ ಆ್ಯಂಡ್ ಮರ್ಡರ್

    ಪಾಕ್‍ನಲ್ಲಿ ಹಿಂದೂ ಯುವತಿ ಸಾವು – ಆತ್ಮಹತ್ಯೆ ಅಲ್ಲ ಇದು ರೇಪ್ ಆ್ಯಂಡ್ ಮರ್ಡರ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಹಿಂದೂ ಯುವತಿಯು ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆಕೆಯ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.

    ಸೆಪ್ಟೆಂಬರ್ 16 ರಂದು ಲಾರ್ಕಾನಾದ ಶಹೀದ್ ಮೊಹತರ್ಮಾ ಬೆನಜೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದ (ಎಸ್‍ಎಂಬಿಬಿಎಂಯು) ಹಾಸ್ಟೆಲ್ ಕೋಣೆಯೊಂದರಲ್ಲಿ ಡೆಂಟಲ್ ಸರ್ಜರಿ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದ ನಮೃತ ಕುಮಾರಿಯ ಮೃತ ದೇಹವು ಸಿಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ನಮೃತ ಯಾಕೆ ಹೀಗೆ ಮಾಡಿಕೊಂಡಿದ್ದಳು ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ನಮೃತ ಸಹೋದರ ಮಾತ್ರ ನನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ದುರ್ಬಲವಾಗಿ ಇರಲಿಲ್ಲ. ಅಲ್ಲದೇ ಆಕೆ ಯಾವುದೇ ರೀತಿಯ ಖಿನ್ನತೆಯಿಂದ ಬಳಲುತ್ತಿರಲಿಲ್ಲ. ಆಕೆಯನ್ನು ಯಾರೋ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

    ನಮೃತ ಸಾವಿನ ಸುದ್ದಿ ಹೊರಬಂದ ಕೂಡಲೇ ಸಿಂಧ್ ಪ್ರಾಂತ್ಯದಲ್ಲಿ ಭಾರೀ ಪ್ರತಿಭಟನೆಯಾಗಿತ್ತು. ಪ್ರತಿಭಟನೆಕಾರರ ಹೋರಾಟಕ್ಕೆ ಮಣಿದ ಸಿಂಧ್ ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಸಿಂಧ್ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ನಿರ್ದೇಶನದಂತೆ ಲರ್ಕಾನಾ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಕೊಲೆ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದರು.

    ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಮೃತ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಿದೆ. ನಮೃತ ಆತ್ಮಹತ್ಯೆಯನ್ನು ಮಾಡಿಕೊಂಡಿಲ್ಲ. ಆಕೆಯನ್ನು ಯಾರೋ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎನ್ನುವ ಅಂಶ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ಮಾಡಲು ನಮೃತ ಮೃತದೇಹವನ್ನು ಲರ್ಕಾನದಲ್ಲಿರುವ ಛಂಡ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ನೀಡಲಾಗಿದ್ದು, ಅಲ್ಲಿನ ವೈದ್ಯರು ಬುಧವಾರದಂದು ವರದಿಯನ್ನು ಬಿಡುಗಡೆ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಛಂಡ್ಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯೆ ಅಮೃತ, ನಮೃತ ಕುತ್ತಿಗೆ ಭಾಗ ಬಿಗಿದಿದ್ದ ಪರಿಣಾಮ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಯುವತಿಯ ಬಟ್ಟೆಯ ಮೇಲಿ ಇದ್ದ ವೀರ್ಯದ ಕಲೆಯ ಆಧಾರದ ಮೇಲೆ ಡಿಎನ್‍ಎ ಪರೀಕ್ಷೆ ಮಾಡಿದಾಗ ಅದು ಯಾವುದೋ ಪುರುಷನದ್ದು ಎಂದು ತಿಳಿದು ಬಂದಿದೆ. ಆಕೆಯ ಜನನಾಂಗವನ್ನು ಪರೀಕ್ಷೇ ಮಾಡಿದಾಗ ಯಾರೋ ಬಲವಂತಾಗಿ ಲೈಂಗಿಕ ಕ್ರಿಯೇ ನಡೆಸಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

  • ಸುಧಾಕರ್‌ಗೆ ಮಣೆ- ಬಿಜೆಪಿ ಕಾರ್ಯಕರ್ತರ ಅಸಮಾಧಾನ, ನಳಿನ್‌ಗೆ ದೂರು

    ಸುಧಾಕರ್‌ಗೆ ಮಣೆ- ಬಿಜೆಪಿ ಕಾರ್ಯಕರ್ತರ ಅಸಮಾಧಾನ, ನಳಿನ್‌ಗೆ ದೂರು

    ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಣೆ ಹಾಕುತ್ತಿದ್ದು, ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಂಜುನಾಥ್ ಕಾರ್ಯಕರ್ತರೊಂದಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದಲ್ಲಿ ನಳಿನ್ ಕುಮಾರ್ ಅವರನ್ನು ಮಂಜುನಾಥ್ ಭೇಟಿಯಾಗಿದ್ದಾರೆ. ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿಗಳು ಮಣೆ ಹಾಕುತ್ತಿದ್ದಾರೆ. ಈ ಮೂಲಕ ಬಿಜೆಪಿಯ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಸುಧಾಕರ್ ಬೆಂಬಲಿಗರಿಗೆ ಹೆಚ್ಚು ಅಧಿಕಾರ ನೀಡುತ್ತಿದ್ದು, ಇದರಿಂದಾಗಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರ ಸಿಗದಂತಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.

    ಮುಖ್ಯಮಂತ್ರಿ ಹಾಗೂ ಸರ್ಕಾರದ ನಡೆ ವಿರುದ್ಧ ಕಟೀಲ್‌ಗೆ ದೂರು ನೀಡಿರುವ ಮಂಜುನಾಥ್, ಈ ಕುರಿತು ಚಿತ್ತ ಹರಿಸುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನಂತರ ಮಂಜುನಾಥ್ ನೇತೃತ್ವದ ಬಿಜೆಪಿ ನಿಯೋಗ ಕಟೀಲ್ ಅವರನ್ನು ಭೇಟಿ ಮಾಡಿತ್ತು. ಈ ಮೂಲಕ ತಮ್ಮ ಅಹವಾಲನ್ನು ನಾಯಕರಿಗೆ ಸಲ್ಲಿಸಿದ್ದಾರೆ.

    ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಕಂದಾಯ ಸಚಿವ ಆರ್.ಆಶೋಕ್ ಕಾರಿನಲ್ಲೇ ಅನರ್ಹ ಶಾಸಕ ಸುಧಾಕರ್ ಸುತ್ತಾಡಿದ್ದಾರೆ. ವೈದ್ಯಕೀಯ ಕಾಲೇಜು ಜಾಗ ವೀಕ್ಷಣೆಗೆ ಆಗಮಿಸಿದ್ದ ಆರ್.ಆಶೋಕ್ ಜೊತೆಯಲ್ಲಿ ಸುಧಾಕರ್ ಸಹ ತೆರಳಿದ್ದಾರೆ. ಇಬ್ಬರೂ ಒಟ್ಟಿಗೆ ಕಾಲೇಜು ಜಾಗವನ್ನು ವೀಕ್ಷಣೆ ಮಾಡಿದರು. ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಬಳಿ ವೈದ್ಯಕೀಯ ಕಾಲೇಜಿಗೆ ಜಾಗ ಗುರುತಿಸಲಾಗಿದೆ.

    ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿಗೆ ಜಾಗ ಮಂಜೂರು ಮಾಡಲಾಗಿದೆ. ಆರೂರು ಗ್ರಾಮದ ಸರ್ವೆ ನಂಬರ್ 201 ಹಾಗೂ 202 ರಲ್ಲಿ 60 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಕಾನೂನು ಪ್ರಕಾರ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಲಾಗಿದೆ. ಯಾವುದೇ ಅಡ್ಡದಾರಿ ಶಾರ್ಟ್ ಕಟ್ ಇಲ್ಲ. ಸುಧಾಕರ್ ಈ ಬಗ್ಗೆ ಹೋರಾಟ ಮಾಡಿದ್ದಾರೆ. ಜಿಲ್ಲಾ ಕೇಂದ್ರಗಳಿಗೆ ವೈದ್ಯಕೀಯ ಕಾಲೇಜು ನೀಡುವುದನ್ನು ಮೊದಲು ಪೂರ್ಣಗೊಳಿಸಬೇಕು ಎಂದರು.

    ತಾಲೂಕು ಮಟ್ಟಕ್ಕೆ ಮೆಡಿಕಲ್ ಕಾಲೇಜು ನೀಡುವುದು ಇನ್ನು ಬಂದಿಲ್ಲ. ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜು ನೀಡಲು ಮಾತ್ರ ಶಕ್ತಿಯಿದೆ. ತಾಲೂಕು ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಕೊಡುವ ಶಕ್ತಿ ಇಲ್ಲ. ಕಾನೂನು ಪ್ರಕಾರ ನೀಡಿದ್ದೇವೆ ಇದರಲ್ಲಿ ಯಾವುದೇ ದ್ವೇಷವಿಲ್ಲ. ಅಡ್ಡ ದಾರಿಯಲ್ಲಿ ಮಾಡುವ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಆಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ ಜಿಲ್ಲಾ ಕೇಂದ್ರ ಬಿಟ್ಟು ತಾಲೂಕು ಕೇಂದ್ರಕ್ಕೆ ಕಾಲೇಜು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.