Tag: mata manikeshwari

  • ಮಾತೆಯ ಅಂತಿಮ ದರ್ಶನಕ್ಕೂ ಕೊರೊನಾ ಭೀತಿ: ಮಾಸ್ಕ್ ಧರಿಸಿ ಅಂತಿಮ ದರ್ಶನ ಪಡೆದ ಭಕ್ತರು

    ಮಾತೆಯ ಅಂತಿಮ ದರ್ಶನಕ್ಕೂ ಕೊರೊನಾ ಭೀತಿ: ಮಾಸ್ಕ್ ಧರಿಸಿ ಅಂತಿಮ ದರ್ಶನ ಪಡೆದ ಭಕ್ತರು

    ಕಲಬುರಗಿ: ಲಿಂಗೈಕ್ಯರಾದ ಮಾತಾ ಮಾಣಿಕೇಶ್ವರಿ ಅಮ್ಮನವರ ಅಂತಿಮ ದರ್ಶನಕ್ಕೆ ಜಿಲ್ಲೆಯ ಯಾನಗುಂದಿ ಮಾಣಿಕ್ಯಗಿರಿ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಆದರೆ ದುಃಖತಪ್ತರಾದ ಭಕ್ತರಿಗೂ ಕೊರೊನಾ ವೈರಸ್ ಭೀತಿ ಎದುರಾಗಿದ್ದು, ಮಾಸ್ಕ್ ಧರಿಸಿಕೊಂಡು ಬರುತ್ತಿದ್ದಾರೆ.

    ಮಾತೆ ಮಾಣಿಕೇಶ್ವರಿಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಸೇರಿದಂತೆ ಹೊರ ರಾಜ್ಯಗಳ ಭಕ್ತರೂ ಇದ್ದು, ತೆಲಂಗಾಣ ಭಾಗದಲ್ಲೇ ಹೆಚ್ಚು ಸಂಖ್ಯೆಯ ಭಕ್ತರಿದ್ದಾರೆ. ಹೀಗಾಗಿ ಅಂತಿಮ ದರ್ಶನಕ್ಕೆ ಬಂದ ಭಕ್ತರಲ್ಲಿ ತೆಲುಗು ಭಾಷಿಕರೇ ಹೆಚ್ಚು. ತೆಲಂಗಾಣದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಉಳಿದ ಭಕ್ತರು ಸಹ ಭೀತಿಯಲ್ಲಿದ್ದಾರೆ. ಹೀಗಾಗಿ ಮುಖಕ್ಕೆ ಮಾಸ್ಕ್, ಕರ್ಚೀಫ್, ಬಟ್ಟೆ ಸುತ್ತಿಕೊಂಡು ಬರುತ್ತಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಜನ ಭಯಬೀತರಾಗಿರುವ ಹಿನ್ನೆಲೆ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಐದು ತಂಡಗಳು ಔಷಧಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮಾಹಿತಿ ನೀಡುತ್ತಿವೆ. ಪೊಲೀಸರು ಸಹ ಮಾಸ್ಕ್ ಗಳನ್ನ ಧರಿಸಿ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದಾರೆ.

    ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಪೀಠಾಧಿಪತಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

  • ಮಾತಾ ಮಾಣಿಕೇಶ್ವರಿ ಅಂತಿಮ ದರ್ಶನಕ್ಕೆ ಸಿದ್ಧತೆ- ತಾವೇ ನಿರ್ಮಿಸಿಕೊಂಡಿರೋ ಸಮಾಧಿಯಲ್ಲಿ ಅಂತ್ಯಕ್ರಿಯೆ

    ಮಾತಾ ಮಾಣಿಕೇಶ್ವರಿ ಅಂತಿಮ ದರ್ಶನಕ್ಕೆ ಸಿದ್ಧತೆ- ತಾವೇ ನಿರ್ಮಿಸಿಕೊಂಡಿರೋ ಸಮಾಧಿಯಲ್ಲಿ ಅಂತ್ಯಕ್ರಿಯೆ

    ಕಲಬುರಗಿ: ಲಿಂಗೈಕ್ಯರಾದ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಅವರೇ ನಿರ್ಮಿಸಿಕೊಂಡಿರುವ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ಅನಾರೋಗ್ಯದಿಂದ ಶನಿವಾರ ಲಿಂಗೈಕ್ಯರಾದ ಮಾತಾ ಮಾಣಿಕೇಶ್ವರಿ ಅವರನ್ನು ನೋಡಲು ತಡರಾತ್ರಿಯಿಂದಲೇ ಸಾವಿರಾರು ಭಕ್ತರು ಮಾಣಿಕ್ಯಗಿರಿ ಬೆಟ್ಟಕ್ಕೆ ಬರುತ್ತಿದ್ದಾರೆ. ಆಂಧ್ರ ಪ್ರದೇಶ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದು, ಮಠದ ಮುಖ್ಯ ದ್ವಾರದ ಆವರಣದಲ್ಲಿ ವೇದಿಕೆಗೆ ಸಿದ್ಧತೆ ಮಾಡಿ 10 ಗಂಟೆಯ ನಂತರ ಸಾರ್ವಜನಿಕ ದರ್ಶನಕ್ಕೆ ಚಿಂತನೆ ಮಾಡಲಾಗಿದೆ.

    ಮಾತಾ ಮಾಣಿಕೇಶ್ವರಿಯವರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಹರಿದು ಬರುವ ನೀರಿಕ್ಷೆ ಇದ್ದು, ಜಿಲ್ಲಾಡಳಿತ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲು ಭಕ್ತರು ಆಗಮಿಸಲಿದ್ದು, ಎರಡು ಸಾವಿರ ಪೊಲೀಸರು ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಮಠದ ಅವರಣದಲ್ಲಿ ಹಾಕಿರುವ ವೇದಿಕೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಸರತಿ ಸಾಲಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಬೆಳಗ್ಗೆ ಐದು ಗಂಟೆಗೆ ಅಮ್ಮನಿಗೆ ಮಠದ ಗುಹೆಯಲ್ಲಿ ಅರ್ಚಕರು ಹಾಲಿನಿಂದ ಅಭಿಷೇಕ ಮಾಡಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಪ್ರಕಾರ ಅಂತಿಮ ವಿಧಿವಿಧಾನ ನಡೆಯಲಿದ್ದು, ಮಠದ ಆವರಣದಲ್ಲಿಯೇ ಇರುವ ಶಿವಲಿಂಗದ ಆಕಾರದ ಸಮಾಧಿಯಲ್ಲಿ ಅವರನ್ನು ಲಿಂಗೈಕ್ಯ ಮಾಡಲಾಗುತ್ತದೆ. ಈ ಸಮಾಧಿಯನ್ನು ಸ್ವತಃ ಮಾತಾ ಮಾಣಿಕೇಶ್ವರಿ ಅವರೇ ನಿರ್ಮಾಣ ಮಾಡಿಕೊಂಡಿದ್ದರು.

    ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಪೀಠಾಧಿಪತಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದರು.