– ಹುಲಿವೇಷ ತಂಡಕ್ಕೆ 2 ಲಕ್ಷ ರೂ. ಬಹುಮಾನ ಘೋಷಿಸಿದ ಝೈದ್ ಖಾನ್
ಮಂಗಳೂರಿನಲ್ಲಿ ದಸರಾ (Mangaluru Dasara) ಹಿನ್ನೆಲೆ ಮಿಥುನ್ ರೈ ಅವರು ಆಯೋಜಿಸಿದ್ದ `ಪಿಲಿನಲಿಕೆ’ (Pilinalike) ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ತೆರೆದಿದ್ದು, ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ (Kiccha Sudeep), ಬಾಲಿವುಡ್ ನಟಿ ಪೂಜಾ ಹೆಗ್ಡೆ, ಕ್ರಿಕೆಟಿಗ ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು.
ದಸರಾ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅನೇಕ ತಂಡಗಳು ಹುಲಿಕುಣಿತ ಮಾಡಿತ್ತು. ಈ ಕಲಾವಿದರಾದ ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಝೈದ್ ಖಾನ್, ಪೂಜಾ ಹೆಗ್ಡೆ, ಕ್ರಿಕೆಟಿಗ ಅಜಿಂಕ್ಯ ರಹಾನೆ, ಜಿತೇಶ್ ಶರ್ಮ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಅಖಂಡ 2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ : ಬಾಲಯ್ಯ ನಟನೆಯ ಸಿನಿಮಾ
ಕಾರ್ಯಕ್ರಮದಲ್ಲಿ ಒಂದು ತಂಡದ ನೃತ್ಯವನ್ನು ವೀಕ್ಷಿಸಿ ಬಹಳ ಸಂತೋಷಪಟ್ಟ ನಟ ಝೈದ್ ಖಾನ್ ಸ್ಥಳದಲ್ಲೇ ಆ ತಂಡಕ್ಕೆ 2 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡುವ ಮೂಲಕ ಹುಲಿಕುಣಿತಕ್ಕೆ ಪ್ರೋತ್ಸಾಹ ನೀಡಿದರು. ಇದನ್ನೂ ಓದಿ: ಕೊತ್ತಲವಾಡಿ ನಿರ್ದೇಶಕರ ಜೊತೆಗೆ ಪುಷ್ಪಮ್ಮ ಮತ್ತೊಂದು ಸಿನಿಮಾ
ತುಂಬಾ ಸೊಗಸಾಗಿ ಹುಲಿನೃತ್ಯ ಮಾಡಿದ ಹುಡುಗನ ಪ್ರತಿಭೆಗೆ ಮನಸೋತ ಝೈದ್ ಖಾನ್, ಆತನಿಗೆ 50,000 ರೂ. ಹಣ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಪ್ರಸ್ತುತ ಝೈದ್ ಖಾನ್ ಅವರು ನಾಯಕನಾಗಿ ನಟಿಸುತ್ತಿರುವ `ಕಲ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಪ್ರೇಕ್ಷಕರ ಮನ ಗೆದ್ದಿದೆ.
ಈಗಂತೂ ಎಲ್ಲರ ಬಾಯಲ್ಲೂ ಒಂದೇ ಪದ.. ಅದೇನೆಂದರೆ ಮೈಸೂರು ದಸರಾ (Mysuru Dasara). ಆದರೆ ನಮ್ಮ ಕರಾವಳಿ ಭಾಗದ ಜನರಲ್ಲಿ ನವರಾತ್ರಿ (Navratri) ಅಂದರೆ ನೆನಪಾಗೋದೇ ಹುಲಿವೇಷ (Hulivesha). ಹೌದು, ನವರಾತ್ರಿಯಲ್ಲಿ ಮಂಗಳೂರು, ಉಡುಪಿ ಭಾಗದಲ್ಲಂತೂ ಠಾಸೆ, ಡೋಲುಗಳದ್ದೇ ಸದ್ದು. ಮತ್ತೊಂದೆಡೆ ಹುಲಿ ವೇಷಗಳದ್ದೇ ದರ್ಬಾರ್.
ತುಳುನಾಡಿನ ಸಂಪ್ರದಾಯಗಳಲ್ಲಿ ಪಿಲಿ ವೇಷವೂ ಒಂದು. ಮಂಗಳೂರು ದಸರಾದಲ್ಲಿ (Mangaluru Dasara) ಈ ಹುಲಿಗಳ ನರ್ತನವೇ ಒಂದು ಆಕರ್ಷಣೆ. ಮೊದಲೆಲ್ಲ ಬರೀ ಕರಾವಳಿ ಭಾಗದ ಜನರಿಗೆ ಮಾತ್ರ ಇದರ ಬಗ್ಗೆ ಗೊತ್ತಿತ್ತು. ಆದರೆ ಈ ಹುಲಿವೇಷಗಳನ್ನು ಸಿನಿಮಾ, ರಿಯಾಲಿಟಿ ಶೋಗಳಿಂದ ದೇಶ ವಿದೇಶದ ಜನರಿಗೂ ಈ ಹುಲಿವೇಷ ಚಿರಪರಿಚಿತವಾಗಿದೆ. ಇಷ್ಟೆಲ್ಲ ಹೇಳಿದ ಮೇಲೆ ಈ ಹುಲಿ ಕುಣಿತ ಹೇಗೆ ಶುರು ಆಯ್ತು ಅಂತ ತಿಳ್ಕೋಬೇಕು ಅಂದ್ರೆ ಮುಂದೆ ಓದಿ..
ಹುಲಿವೇಷ ಹುಟ್ಟಿಕೊಂಡಿದ್ದು ಹೇಗೆ?
ಇಷ್ಟಾರ್ಥ ಸಿದ್ಧಿಗಾಗಿ ಜನರು ದೇವರಿಗೆ ನಾನಾ ರೀತಿಯ ಹರಕೆಯನ್ನು ಹೊರುತ್ತಾರೆ. ಇದೇ ರೀತಿ ಹರಕೆಯ ರೂಪವಾಗಿ ಹುಲಿವೇಷ ಧರಿಸುವ ಸಂಪ್ರದಾಯದ ಹಿಂದೆಯೂ ಐಹಿತ್ಯಗಳಿವೆ. ತಾಯಿಯೊಬ್ಬರು ತನ್ನ ಮಗು ಹುಷಾರಾಗಿ ನಡೆಯಲು ಆರಂಭಿಸಿದರೆ ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ನೃತ್ಯ ಮಾಡಿಸುವುದಾಗಿ ಹರಕೆ ಹೊತ್ತಿದ್ದರು ನಂಬಿಕೆಯಿದೆ.
ದೈಹಿಕ ಸಮಸ್ಯೆಯ ಕಾರಣ ಮಗು ಕಾಲುಗಳಿದ್ದರೂ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಚಿಂತೆಗೊಳಗಾದ ತಾಯಿ ಮಂಗಳಾದೇವಿ ದೇವಾಲಯಕ್ಕೆ ಬಂದು ಕೈ ಮುಗಿದು, ನನ್ನ ಮಗು ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದರೆ ಮುಂದಿನ ವರ್ಷ ನವರಾತ್ರಿ ಹಬ್ಬಕ್ಕೆ ಮಗುವಿಗೆ ಹುಲಿ ವೇಷ ಹಾಕಿಸಿ ಇದೇ ದೇವಸ್ಥಾನದ ಅಂಗಳದಲ್ಲಿ ಮಗುವಿನಿಂದ ಪಿಲಿ ನಲಿಕೆಯನ್ನು ಹರಕೆ ರೂಪದಲ್ಲಿ ಸಲ್ಲಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು.
ಇದಾದ ಕೆಲ ದಿನಗಳ ಬಳಿಕ ಆ ಮಗು ಸಂಪೂರ್ಣವಾಗಿ ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದನಂತೆ. ತಾಯಿ ತಾನು ಕೊಟ್ಟ ಮಾತಿನಂತೆ ಮರು ವರ್ಷವೇ ನವರಾತ್ರಿ ಹಬ್ಬದ ಸಮಯದಲ್ಲಿ ತಮ್ಮ ಮಗನಿಗೆ ಹುಲಿ ವೇಷವನ್ನು ಹಾಕಿಸಿ ಮಂಗಳಾದೇವಿ ದೇವಾಲಯದಲ್ಲಿ ಹುಲಿವೇಷದ ಹರಕೆಯನ್ನು ಸಲ್ಲಿಸಿದರು. ಅಂದಿನಿಂದ ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಗೆ ಗೌರವ ಸಲ್ಲಿಸಲು ಯುವಕರಿಂದ ಹಿಡಿದು ಪುಟ್ಟ ಮಕ್ಕಳವರೆಗೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಹುಲಿವೇಷವನ್ನು ಹಾಕುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ನವರಾತ್ರಿ ಬಂತೆಂದರೆ ಕರಾವಳಿಗರ ಕಣ್ಣಿಗಂತು ಹಬ್ಬವೇ ಸರಿ. ಎತ್ತ ನೋಡಿದರೂ ಹುಲಿಕುಣಿತ ಮೆರುಗು. ಈಗಂತೂ ಪಿಲಿಗೊಬ್ಬು, ಪಿಲಿಪಜ್ಜೆ, ಪಿಲಿನಲಿಕೆ ಎಂದು ನವರಾತ್ರಿಯಲ್ಲೇ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಡೆಯಿಂದ ಹುಲಿವೇಷದ ತಂಡಗಳು ಭಾಗವಹಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ. ಇಲ್ಲಿ ಕಿನ್ನಿ ಪಿಲಿಯಿಂದ ಹಿಡಿದು ದೊಡ್ಡವರು ಸಹ ಈ ಹುಲಿವೇಷ ಧರಿಸಿ ನರ್ತಿಸುತ್ತಾರೆ.
ದಸರಾ ಎಂದೊಡನೆ ಥಟ್ಟನೆ ನೆನಪಾಗುವುದು ಸಾಂಸ್ಕೃತಿಕ ನಗರಿ ಮೈಸೂರು (Mysuru Dasara). ಆದರೆ, ಈ ಸಾಂಸ್ಕೃತಿಕ ಉತ್ಸವದ ಬೇರುಗಳು ಒಂದೊಂದು ಕಡೆಗೆ ಕವಲೊಡೆದು ನಿಂತಿದೆ. ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ ದಸರಾದ ಮೂಲ ವಿಜಯನಗರ ಸಾಮ್ರಾಜ್ಯದಲ್ಲಿದೆ. ರಾಜ ಕೃಷ್ಣದೇವರಾಯ ಅವರ ಕಾಲದಲ್ಲಿ ವೈಭವದಿಂದ ಈ ಹಬ್ಬ ಆಚರಿಸಲಾಗುತ್ತಿತ್ತು. ಅದು ಅಲ್ಲಿಂದ ನೇರವಾಗಿ ಮೈಸೂರಿಗೆ ಬಳುವಳಿಯಾಗಿ ಬಂದಿಲ್ಲ. ಇಲ್ಲೂ ಒಂದು ಇತಿಹಾಸವಿದೆ. ಹಳೆ ಮೈಸೂರು ಭಾಗದ ಪಟ್ಟಣವೊಂದರಲ್ಲಿ ದಸರಾವನ್ನು ಮೊದಲು ಆಚರಿಸಲಾಯಿತು. ಅದುವೇ ಈಗಿನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna Dasara). ನಂತರ ಇದರ ಪ್ರಭಾವ ಎಲ್ಲೆಡೆ ಹಬ್ಬಿತು. ಹಲವು ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ದಸರಾ ಆಚರಣೆ ಪ್ರಾರಂಭಗೊಂಡವು. ಅದು ಪರಂಪರಾಗತವಾಗಿ ಮುಂದುವರಿದುಕೊಂಡು ಬಂದವು.
ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭ
ಕರ್ನಾಟಕದಲ್ಲಿ ದಸರಾ ಆಚರಣೆಗಳು ವಾಸ್ತವವಾಗಿ 1610 ರಲ್ಲಿ ಪ್ರಾರಂಭವಾಯಿತು. ರಾಜ ರಾಜ ಒಡೆಯರ್ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣ ಎಂಬ ಸಣ್ಣ ಪಟ್ಟಣದಲ್ಲಿ ಇದು ಆರಂಭಗೊಂಡಿತು ಎಂದು ಇತಿಹಾಸ ಹೇಳುತ್ತದೆ. ಆಗ ಶ್ರೀರಂಗಪಟ್ಟಣವು ಒಡೆಯರ್ ರಾಜವಂಶದ ರಾಜಧಾನಿಯಾಗಿತ್ತು. ಮುಂದಿನ ಶತಮಾನದ ವರೆಗೆ ಹಾಗೆಯೇ ಮುಂದುವರಿದಿತ್ತು. ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್: ದುಡ್ಡಿದ್ದವರ ದರ್ಬಾರ್ಗೆ ಅಧಿಕಾರಿಗಳು ಸಾಥ್?
ಮೈಸೂರಿಗೆ ರಾಜಧಾನಿ ಸ್ಥಳಾಂತರ
17 ನೇ ಶತಮಾನದ ಅಂತ್ಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಾಜಧಾನಿಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಅದರೊಂದಿಗೆ, ಅದ್ಧೂರಿ ದಸರಾ ಆಚರಣೆಗಳು ಸಹ ಮೈಸೂರಿಗೆ ಸ್ಥಳಾಂತರಗೊಂಡವು. ಒಂಬತ್ತು ದಿನಗಳ ಉತ್ಸವದ ಸಮಯದಲ್ಲಿ ಸ್ಥಳೀಯ ಜನರು (ಶ್ರೀರಂಗಪಟ್ಟಣ) ಸರಳ ಆಚರಣೆಗಳನ್ನು ಮಾತ್ರ ಕೈಬಿಡದೇ ಮುಂದುವರೆಸಿದರು. ಆದರೆ, 2009 ರಲ್ಲಿ ಸ್ಥಳೀಯರ ಭಾರಿ ಬೇಡಿಕೆಯಿಂದಾಗಿ ಜಂಬೂ ಸವಾರಿ ಸೇರಿದಂತೆ ಮೂರು ದಿನಗಳ ದಸರಾ ಆಚರಣೆಯನ್ನು ಶ್ರೀರಂಗಪಟ್ಟಣದಲ್ಲಿ ನಡೆಸಲಾಯಿತು. ಆ ಪರಂಪರೆ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಆದ್ದರಿಂದಲೇ ಮೈಸೂರು ದಸರಾ ಸಂದರ್ಭದಲ್ಲೇ ಶ್ರೀರಂಗಪಟ್ಟಣದಲ್ಲೂ ದಸರಾ ನಡೆಯಲಿದೆ.
ಮಂಗಳೂರು ದಸರಾ: ಬಾರಿ ಚಂದ
ಮಂಗಳೂರಿನಲ್ಲಿ ದಸರಾವನ್ನು ಆಡುಮಾತಿನಲ್ಲಿ ಮಾರ್ನಾಮಿ ಎಂದು ಕರೆಯಲಾಗುತ್ತದೆ. ಕರಾವಳಿ ನಗರದಲ್ಲಿ ಈ ಹಬ್ಬವು ಮಂಗಳಾದೇವಿ, ಕುದ್ರೋಳಿ ಗೋಕರ್ಣನಾಥೇಶ್ವರ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳ ಸುತ್ತ ಸುತ್ತುತ್ತದೆ. ಸರ್ವಜನಿಕ ಶಾರದಾ ಪೂಜಾ ಮಹೋತ್ಸವ (ಸಾರ್ವಜನಿಕ ಆಚರಣೆ) ಮತ್ತೊಂದು ಪ್ರಮುಖ ಅಂಶವಾಗಿದೆ. ಎಲ್ಲಾ ದೇವಾಲಯಗಳು ಶಾರದಾ ದೇವಿಯ ಅಲಂಕೃತ ವಿಗ್ರಹಗಳನ್ನು ತಯಾರಿಸುತ್ತವೆ. ದೈನಂದಿನ ಪೂಜೆಗಳ ನಂತರ ಭವ್ಯ ಮೆರವಣಿಗೆಗಳನ್ನು ನಡೆಸುತ್ತವೆ. ಒಂಬತ್ತು ದಿನಗಳು ಸಾವಿರಾರು ಭಕ್ತರು ಸಾಕ್ಷಿಯಾಗುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಿಂದ ತುಂಬಿರುತ್ತವೆ. ಹುಲಿ ವೇಷ ಅಥವಾ ಹುಲಿ ನೃತ್ಯವು ಉತ್ಸವಕ್ಕೆ ಭೂಷಣದಂತಿರುತ್ತದೆ. ವಿವಿಧ ಕಲಾ ಪ್ರಕಾರಗಳು, ನೃತ್ಯ, ಸಂಗೀತ ಮತ್ತು ಸಾಂಪ್ರದಾಯಿಕ ರಥಗಳನ್ನು ಒಳಗೊಂಡಿರುವ ಭವ್ಯವಾದ ಟ್ಯಾಬ್ಲೋಗಳ ಮೆರವಣಿಗೆಯೂ ಇರುತ್ತದೆ. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?
ಮೈಸೂರು ದಸರಾ: ಎಷ್ಟೊಂದು ಸುಂದರ
ದಸರ ಆಚರಣೆಯನ್ನು ಮೂಲತಃ ವಿಜಯನಗರ ರಾಜರು ಆಚರಿಸುತ್ತಿದ್ದರು. ನಂತರ ಇದನ್ನು ಮಹಾನವಮಿ ಎಂದು ಕರೆಯಲಾಯಿತು. ಸಾಮ್ರಾಜ್ಯದ ಪತನದ ನಂತರ, ಮೈಸೂರಿನ ಒಡೆಯರ್, ಮುಖ್ಯವಾಗಿ ರಾಜ ಒಡೆಯರ್ ಈ ಸಂಪ್ರದಾಯವನ್ನು ಮುಂದುವರೆಸಿದರು. 10 ದಿನಗಳ ಉತ್ಸವದ ಸಮಯದಲ್ಲಿ ಅವರು ರಾಜ ನಗರದಲ್ಲಿ ಆಚರಣೆಗಳಿಗೆ ಹೊಸ ಪರಂಪರೆಯನ್ನು ಸೇರಿಸಿದರು. ಅದರ ಪ್ರತಿಬಿಂಬ ಎಂಬಂತೆ ರಾಜಮನೆತನ, ಸ್ಮಾರಕಗಳು, ಪ್ರಮುಖ ಸರ್ಕಾರಿ ಕಟ್ಟಡಗಳು ಮತ್ತು ನಗರದ ಪ್ರಮುಖ ಪ್ರದೇಶಗಳು ಈಗ ಬೆಳಗುತ್ತಿವೆ. ಮೈಸೂರಿನ ಹಳೆಯ-ಪ್ರಪಂಚದ ಮೋಡಿಯನ್ನು ಪ್ರತಿಬಿಂಬಿಸುವ ದರ್ಬಾರ್ಗಳು ಆತಿಥೇಯ ಕವಿ ಸಭೆಗಳು, ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮತ್ತು ಚಲನಚಿತ್ರೋತ್ಸವಗಳು ಎಲ್ಲವೂ ಮೇಳೈಸಿವೆ. ವಿಜಯದಶಮಿ ದಿನದಂದು ಉತ್ಸವಗಳು ಪ್ರಸಿದ್ಧ ಜಂಬೂ ಸವಾರಿಯೊಂದಿಗೆ ವಿಜೃಂಭಣೆಯಿಂದ ಕೊನೆಗೊಳ್ಳುತ್ತವೆ. ಇದು ಅರಮನೆಯಿಂದ ಪ್ರಾರಂಭವಾಗಿ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಅಲಂಕರಿಸಿದ ಆನೆಯ ಮೇಲೆ ಚಿನ್ನದಂಬಾರಿ ಮೇಲೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತುಕೊಂಡು ಹೋಗುವುದು ಪ್ರಮುಖ ಆಕರ್ಷಣೆಯಾಗಿದೆ. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಎಲ್ಲಾ ಉತ್ಸವಗಳ ಮುಕ್ತಾಯವನ್ನು ಸೂಚಿಸುತ್ತದೆ.
ಮಡಿಕೇರಿ ದಸರಾ: ಮಾರಿಯಮ್ಮ ಸರ್ವೋಚ್ಚ ಆಳ್ವಿಕೆ ನಡೆಸುವ ಸ್ಥಳ
ರಾಜ ದೊಡ್ಡವೀರ ರಾಜೇಂದ್ರ ಮೈಸೂರಿನ ಪ್ರತಿರೂಪಗಳಂತೆಯೇ ಆಯುಧ ಪೂಜೆ ಮತ್ತು ದೇವಿ ಪೂಜೆಯನ್ನು ಮಾಡಿ ನವರಾತ್ರಿಯನ್ನು ಆಚರಿಸುತ್ತಿದ್ದನೆಂದು ಹೇಳಲಾಗುತ್ತದೆ. ಬೆಟ್ಟದ ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವವು ಮಾರಿಯಮ್ಮ ದೇವತೆಗೆ ಸಮರ್ಪಿತವಾಗಿದೆ. ಕೊಡಗಿನಲ್ಲಿ ದೇವಿ ಹೆಸರಿನಲ್ಲಿ ನಾಲ್ಕು ದೇವಾಲಯಗಳಿವೆ. ಮಾರಿಯಮ್ಮನ ನೃತ್ಯವು ವಿಶಿಷ್ಟವಾದ ಧಾರ್ಮಿಕ ಜಾನಪದ ನೃತ್ಯ (ಕರಗ)ವನ್ನು ಹೊಂದಿದೆ. ಇಲ್ಲಿ ಹಬ್ಬವು ಭಕ್ತರಿಗೆ ಸಂಬಂಧಿಸಿದೆ. ಆದ್ದರಿಂದ ಇದನ್ನು ಜನೋತ್ಸವ ಎಂದೂ ಕರೆಯುತ್ತಾರೆ. ಈ ಪ್ರದೇಶದ ಪ್ರತಿಯೊಂದು ದೇವಾಲಯವು ‘ಮಂಟಪ’ ಅಥವಾ ಟ್ಯಾಬ್ಲೋಗಳಿಗೆ ತನ್ನದೇ ಆದ ಥೀಮ್ ಅನ್ನು ಹೊಂದಿದೆ.
ಶಿವಮೊಗ್ಗ ದಸರಾ: ಒಂದು ಮಿನಿ ಮೈಸೂರು ದಸರಾ
ಶಿವಮೊಗ್ಗದ ಆಚರಣೆಗಳು ಇತ್ತೀಚಿನದ್ದಾಗಿದ್ದು ಮೈಸೂರು ದಸರಾ ಮಾದರಿಯಲ್ಲಿವೆ. ಹಬ್ಬಗಳ ಕೇಂದ್ರವಾಗಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಶಿವಮೊಗ್ಗವು ನವರಾತ್ರಿಯ ಸಮಯದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಮೇಳಗಳು ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತದೆ. ಇತ್ತೀಚೆಗೆ, ಈ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಲನಚಿತ್ರ ತಾರೆಯರು ಮತ್ತು ಗಾಯಕರು ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಜಂಬೂಸವಾರಿ ಕೂಡ ಇಲ್ಲಿ ನಡೆಯುವ ಉತ್ಸವಗಳ ಭಾಗವಾಗಿದೆ. ಈ ಪ್ರದೇಶದ ಸುತ್ತಮುತ್ತಲಿನ ದೇವಾಲಯಗಳು ಸಹ ಉತ್ಸವಗಳಲ್ಲಿ ಭಾಗವಹಿಸುತ್ತವೆ. ಶಿವಮೊಗ್ಗದಲ್ಲಿ ನಡೆಯುವ ದಸರಾ ಆಚರಣೆಗಳು ಬರಹಗಾರರು, ಕವಿಗಳು, ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಇತರ ಕಲಾವಿದರ ಸಂಗಮಕ್ಕೆ ಕಾರಣವಾಗುತ್ತವೆ.
– ದಸರಾ ಮೆರವಣಿಗೆಗೆ ಮೆರುಗು ನೀಡಿದ ವಿವಿಧ ಸ್ತಬ್ಧ ಚಿತ್ರಗಳು
ಮಂಗಳೂರು: ಜಗತ್ ಪ್ರಸಿದ್ಧ ಮಂಗಳೂರು ದಸರಾ (Mangaluru Dasara) ಮೆರವಣಿಗೆ ಭಾನುವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ (Kudroli Gokarnanatha Temple) ಸಂಜೆ 4 ಗಂಟೆಗೆ ಆರಂಭಗೊಂಡಿತು. ಸುಮಾರು 60ಕ್ಕೂ ಅಧಿಕ ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರುಗು ನೀಡಿತು. ದೇಶ – ವಿದೇಶಗಳಿಂದ ಬಂದ ಲಕ್ಷಾಂತರ ಮಂದಿ ಭಕ್ತರು ಈ ದಸರಾ ಮೆರವಣಿಗೆಗೆ ಸಾಕ್ಷಿಯಾದರು.
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ 10 ದಿನಗಳಿಂದ ಅದ್ಧೂರಿಯಾಗಿ ನಡೆದ ನವರಾತ್ರಿ ಮಹೋತ್ಸವಕ್ಕೆ ದಸರಾ ಮೆರವಣಿಗೆಯೊಂದಿಗೆ ತೆರೆ ಕಾಣಲಿದೆ. ಅಕ್ಟೋಬರ್ 3 ರಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡ ಈ ದಸರಾ ಮೆರವಣಿಗೆ ಇಂದು ಬೃಹತ್ ಮೆರವಣಿಗೆಯೊಂದಿಗೆ ಸಂಪನ್ನಗೊಳ್ಳಲಿದೆ. ಸಂಜೆ ಸುಮಾರು 4 ಗಂಟೆಗೆ ಕ್ಷೇತ್ರದಿಂದ ಹೊರಟ ಈ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ತಬ್ಧ ಚಿತ್ರದೊಂದಿಗೆ ಕೊಂಡೊಯ್ಯಲಾಯಿತು. ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ಈ ಬೃಹತ್ ದಸರಾ ಮೆರವಣಿಗೆ ನಡೆಯುತ್ತಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಇಷ್ಟು ಅಚ್ಚುಕಟ್ಟಾಗಿ ನಡೆಯುವ ಈ ದಸರಾವನ್ನು ಭಕ್ತರ ಸಹಕಾರದಿಂದ ಅದ್ಧೂರಿಯಾಗಿ ನಡೆಸಲಾಗುತ್ತದೆ. ಇದನ್ನೂ ಓದಿ: ಮಂಚಹಳ್ಳಿ, ಕೋಟೆಕೆರೆಯಲ್ಲಿ ಆನೆ ದಾಳಿಗೆ ರೈತರ ಟೊಮೆಟೊ, ತೆಂಗು ನಾಶ
ಸುಮಾರು ಒಂದು ಸಾವಿರ ಆಕರ್ಷಕ ಕೇರಳ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್ಗಳು, ಸುಮಾರು 50 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ, ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 63 ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರಗು ನೀಡಿತು. ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಪೊಲೀಸ್ ಕಸ್ಟಡಿಗೆ ಓರ್ವ ಕೊಲೆ ಆರೋಪಿ
ಶ್ರೀ ಕ್ಷೇತ್ರದಿಂದ ಇಂದು ಸಂಜೆ ಹೊರಟ ಈ ಮೆರವಣಿಗೆ ನಗರದ ಸುಮಾರು 7 ಕಿಲೋ ಮೀಟರ್ ಸಾಗಿದ್ದು, ಸೋಮವಾರ ಮುಂಜಾನೆ 8 ಗಂಟೆಗೆ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಲಿದೆ. ಕ್ಷೇತ್ರದ ಪುಷ್ಕರಣಿಯಲ್ಲಿ ಗಣೇಶ, ಆದಿಶಕ್ತಿ, ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗುವುದು. ಇದರೊಂದಿಗೆ ಈ ದಸರಾ ಮೆರವಣಿಗೆಗೆ ತೆರೆ ಬೀಳಲಿದೆ. ಇದನ್ನೂ ಓದಿ: ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನ ಯಾರೂ ಅಲ್ಲಾಡಿಸೋಕೆ ಆಗಲ್ಲ: ಸಿದ್ದರಾಮಯ್ಯ
ಕರಾವಳಿಯೆಂದರೆ ಸಾಕು ಮೊದಲು ನೆನಪಾಗುವುದು ಹುಲಿಕುಣಿತ, ಯಕ್ಷಗಾನ. ನವರಾತ್ರಿ ಬಂತೆಂದರೆ ಸಾಕು ಮಂಗಳೂರಿನ (Mangaluru) ಎಲ್ಲೆಡೆ ಮಾರ್ನೆಮಿ ಹುಲಿಗಳದ್ದೇ ಹವಾ. ತುಳುನಾಡಿನ ಸಂಪ್ರದಾಯಗಳಲ್ಲಿ ಒಂದಾದ ಹುಲಿ ವೇಷ (ಪಿಲಿ ವೇಷ) ಮಂಗಳೂರು ದಸರಾದಲ್ಲಿ (Mangaluru Dasara) ಪ್ರಮುಖ ಆಕರ್ಷಣೆಯಾಗಿದೆ. ಬನ್ನಿ ಹುಲಿವೇಷದ (Tiger Dance) ಇತಿಹಾಸವನ್ನು ನಾವು ತಿಳಿದುಕೊಳ್ಳೋಣ.
ಕರಾವಳಿಯಲ್ಲಿ ಹಿಂದಿನಿಂದಲೂ ನವರಾತ್ರಿ ಸಮಯದಲ್ಲಿ ವಿವಿಧ ವೇಷಗಳನ್ನು ಧರಿಸಿ ಹಾಕಿಕೊಂಡು ಊರೂರು ಸುತ್ತಿಕೊಂಡು, ಮನೆ ಮನೆಗಳಿಗೆ ಹೋಗುವ ಪದ್ಧತಿ. ಕರಾವಳಿ ತುಂಬೆಲ್ಲಾ ನವರಾತ್ರಿ ಹಬ್ಬದ ಸಮಯದಲ್ಲಿ ಮಾರ್ನೆಮಿ ವೇಷಗಳೇ ಕಾಣಸಿಗುತ್ತವೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಹುಲಿ ವೇಷದ ಅನೇಕ ತಂಡಗಳಿದ್ದು, ಇವುಗಳು ನವರಾತ್ರಿ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಆಹ್ವಾನಿತರ ಮನೆಗಳಿಗೆ ತೆರಳಿ ನರ್ತಿಸುವ ದೊಡ್ಡ ದೊಡ್ಡ ಹುಲಿ ವೇಷ ತಂಡಗಳಿವೆ.
ನವರಾತ್ರಿಯ ಸಮಯದಲ್ಲಿ ವಿವಿಧ ಸಂಘಟನೆಗಳು ಪಿಲಿ ನಲಿಕೆ ಕಾರ್ಯಕ್ರಮಗಳನ್ನು ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಇಲ್ಲಿ ವಿವಿಧ ಭಾಗಗಳಿಂದ ಪ್ರತಿಷ್ಠಿತ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಒಂದೊಂದು ಹುಲಿ ವೇಷ ತಂಡದಲ್ಲಿರುವ ಯುವಕರು ಮತ್ತು ಸಣ್ಣ ಮಕ್ಕಳು ಹುಲಿಯ ಬಣ್ಣ ಹಚ್ಚಿ ಚೆಂಡೆ ಮತ್ತು ಡೋಲಿನ ತಾಳಕ್ಕೆ ಲಯಕ್ಕೆ ತಕ್ಕಂತೆ ಗಾಂಭೀರ್ಯದಿಂದ ಕುಣಿಯುತ್ತಾರೆ. ಇದನ್ನು ನೋಡುವುದೇ ಚಂದ. ಪ್ರತೀ ತಂಡದಲ್ಲಿ ಸುಮಾರು 25 ಕ್ಕೂ ಹೆಚ್ಚು ವೇಷಧಾರಿಗಳಿರುತ್ತಾರೆ. ನಾನಾ ರೀತಿಯಲ್ಲಿ ಪಲ್ಟಿಗಳನ್ನು ಹೊಡೆಯುವುದು, ಭಿನ್ನ ವಿಭಿನ್ನ ವೇಷಗಳನ್ನು ಹಚ್ಚುತ್ತಾರೆ. ನೆಲದಲ್ಲಿ ಬಿದ್ದ ನಾಣ್ಯ ಅಥವಾ ನೋಟುಗಳನ್ನು ಹಿಮ್ಮುಖವಾಗಿ ತೆಗೆಯುವುದು, ಅಕ್ಕಿ ಮೂಟೆಗಳನ್ನು ಬಾಯಲ್ಲಿ ಕಚ್ಚಿ ಎತ್ತಿ ಬಿಸಾಡುವಂತಹ ವಿವಿಧ ರೀತಿಯ ಕಸರತ್ತು, ತಾಯಿ ಹುಲಿ, ಮಗು ಹುಲಿ ಹೀಗೆ ನಾನಾ ತರಹದ ವೇಷಗಳನ್ನು ಕಾಣಬಹುದು.
ಹುಲಿ ವೇಷವನ್ನು ಹಾಕುವ ಹಿಂದೆ ಐಹಿತ್ಯವಿದೆ:
ಹಲವು ವರ್ಷಗಳ ಹಿಂದೆ ದೈಹಿಕ ಸಮಸ್ಯೆಯ ಕಾರಣ ಬಾಲಕನೊಬ್ಬನಿಗೆ ಕಾಲುಗಳಿದ್ದರೂ ನಡೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಆತನ ತಾಯಿ ಮಂಗಳೂರಿನ ಮಂಗಳಾದೇವಿ ದೇವಾಲಯಕ್ಕೆ ಬಂದು ಭಕ್ತಿಯಿಂದ ಕೈ ಮುಗಿದು, ನನ್ನ ಮಗು ಗುಣಮುಖವಾಗಿಸು ಆತ ನಡೆದಾಡುವಂತೆ ಮಾಡು. ಹುಷಾರಾದರೆ ಮುಂದಿನ ವರ್ಷ ನವರಾತ್ರಿ ಹಬ್ಬಕ್ಕೆ ಮಗುವಿಗೆ ಹುಲಿ ವೇಷ ಹಾಕಿಸಿ ನಿನ್ನ ಸಾನಿಧ್ಯದಲ್ಲಿ ಮಗುವಿಗೆ ಹುಲಿವೇಷ ಹಾಕಿ ಕುಣಿಸಿ ಹರಕೆ ರೂಪದಲ್ಲಿ ಸಲ್ಲಿಸುವುದಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಇದಾದ ಕೆಲ ದಿನ ಕಳೆದನಂತರ ಆ ಬಾಲಕ ಸಂಪೂರ್ಣವಾಗಿ ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದ. ತಾಯಿ ಕೊಟ್ಟ ಮಾತಿನಂತೆ ಮರು ವರ್ಷವೇ ನವರಾತ್ರಿ ಸಮಯದಲ್ಲಿ ಮಗನಿಗೆ ಹುಲಿ ವೇಷವನ್ನು ಹಾಕಿಸಿ ಮಂಗಳಾದೇವಿ ದೇವಾಲಯದಲ್ಲಿ ಪಿಲಿನಲಿಕೆಯ ಹರಕೆಯನ್ನು ತೀರಿಸುತ್ತಾರೆ. ಅಂದಿನಿಂದ ಇಂದಿನವರೆಗೂ ನವರಾತ್ರಿಯ ಸಂದರ್ಭದಲ್ಲಿ ಯುವಕರಿದಂದ ಹಿಡಿದು ಪುಟ್ಟ ಮಕ್ಕಳವರೆಗೆ ಭಕ್ತಿಯಿಂದ ಹುಲಿವೇಷವನ್ನು ಧರಿಸುವ ಸಂಪ್ರದಾಯ ಸಾಗುತ್ತಾ ಬಂದಿದೆ. ಹೀಗಾಗಿ ಹರಕೆಯ ರೂಪವಾಗಿ, ಸಂಕಲ್ಪಕ್ಕಾಗಿ, ಇಷ್ಟಾರ್ಥ ಸಿದ್ಧಿಗಾಗಿ, ಸೇವೆ ಹೀಗೆ ನಾನಾ ಭಕ್ತಿ ಭಾವದ ಕಾರಣದಿಂದ ಹುಲಿ ವೇಷ ಧರಿಸುತ್ತಾರೆ.
ವಿವಿಧ ಪ್ರಕಾರದ ಕುಲಿ ವೇಷಗಳು:
ಹುಲಿವೇಷದಲ್ಲಿ ಪಟ್ಟೆ ಹುಲಿ ಮತ್ತು ಚಿಟ್ಟೆ ಹುಲಿ ಎಂಬ ಎರಡು ಪ್ರಕಾರದ ವೇಷಗಳಿವೆ. ಪಟ್ಟೆ ಹುಲಿಗೆ ಹುಲಿಯ ಮೇಲಿರುವ ಪಟ್ಟೆ ಅಥವಾ ಗೆರೆಗಳ ಆಕಾರವನ್ನು ಬಿಡಿಸಲಾಗುತ್ತದೆ. ಚಿಟ್ಟೆ ಎಂದರೆ ಹುಲಿಯ ದೇಹದ ಮೇಲೆ ಚಿರತೆಯ ಮೈ ಮೇಲೆ ಇರುವ ಹಾಗೆ ಚುಕ್ಕಿಯಾಕಾರವನ್ನು ಬಿಡಿಸಲಾಗುತ್ತದೆ. ಇತ್ತೀಚಿಗೆ ಕರಿ ಪಿಲಿ ಕೂಡಾ ಬಾರಿ ಹೆಸರುವಾಸಿಯಗಿದೆ. ಕಪ್ಪು ಹುಲಿ ವೇಷಧಾರಿಗೆ ಕಪ್ಪುಬಣ್ಣವನ್ನು ಹಾಕಿ ಅದರ ಮೇಲೆ ಬಿಳಿ ಬಣ್ಣದ ಚುಕ್ಕೆಗಳನ್ನು ಬಿಡಿಸುತ್ತಾರೆ. ಹಿಂದೆಲ್ಲಾ ರಾತ್ರಿಯಿಂದ ಬೆಳಗ್ಗಿನವರೆಗೆ ವೇಷಧಾರಿಗಳಿಗೆ ಬಣ್ಣ ಹಚ್ಚಲಾಗುತ್ತಿತ್ತು. ಆದರೆ ಈಗ ಸ್ಪ್ರೇ ಇತ್ಯಾದಿ ಆಧುನಿಕ ಸೌಲಭ್ಯಗಳಿರುವ ಕಾರಣ 2 ರಿಂದ 3 ಗಂಟೆಯ ಒಳಗೆ ಬಣ್ಣ ಹಚ್ಚಲಾಗುತ್ತದೆ. ಹಿಂದಿನ ಕಾಲದಲ್ಲಿ ಒಂದು ತಿಂಗಳು ಅಥವಾ ಒಂದು ವಾರ ಇರುವಾಗ ಹಿಂದೆಲ್ಲಾ ಬಣ್ಣ ತಯಾರಿಸಲು ಪ್ರಾರಂಭಿಸುತ್ತಿದ್ದರು. ಅರಶಿನ, ಇದ್ದಿಲು ಸೇರಿಸಿ ಅರೆದು ಆ ಬಣ್ಣಕ್ಕೆ ಹೊಳಪು ಬರಲು ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ಹಾಕಿ, ಚೆನ್ನಾಗಿ ಕುದಿಸಿ ಬಣ್ಣಗಳನ್ನು ತಯಾರಿಸುತ್ತಿದ್ದರು. ಈ ಬಣ್ಣ ವಿಪರೀತ ಉರಿಯಿಂದ ಕೂಡಿತ್ತು ಮಾತ್ರವಲ್ಲದೆ ಮೈಗೆ ಹಚ್ಚಿದ ಈ ಬಣ್ಣ ಅಷ್ಟು ಸುಲಭವಾಗಿ ಮಾಸುತ್ತಿರಲಿಲ್ಲ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಸ್ಪ್ರೇ ಇತ್ಯಾದಿ ಸುಲಭ ವಿಧಾನದ ಮೂಲಕ ಬಣ್ಣ ಹಚ್ಚುತ್ತಾರೆ.
ಹುಲಿವೇಷಧಾರಿಗಳಿಗೆ ಬಣ್ಣ ಬಳಿದ ಮೇಲೆ ಬಿಳಿ ಬಣ್ಣದ ಜೆಟ್ಟಿ ಉಡುಪನ್ನು ಸೊಂಟಕ್ಕೆ ಕಟ್ಟಲಾಗುತ್ತದೆ. ಸುಮಾರು ಆರು ಇಂಚು ಅಗಲ ಮತು 12 ರಿಂದ 14 ಅಡಿ ಉದ್ದವಿರುತ್ತದೆ. ಅದನ್ನು ಹುಲಿಯ ಬಾಲದ ರೀತಿಯಲ್ಲಿ ಕಟ್ಟಲಾಗುತ್ತದೆ. ವೇಷಾಧಾರಿಗಳು ಹುಲಿ ಕುಣಿತಕ್ಕೆ ಅಣಿಯಾಗುವ ಮೊದಲು ‘ಲೋಬನ ಸೇವೆ’ಯನ್ನು ಮಾಡಲಾಗುತ್ತದೆ. ಹೀಗೆ ಲೋಬನ ಸೇವೆಯ ಬಳಿಕ ಮನೆಮನೆಗಳಿಗೆ ಹೋಗಿ, ನಗರದ ಬೀದಿಗಳಲ್ಲಿ ಹುಲಿವೇಷಧಾರಿಗಳು ತಾಸೆ ಸದ್ದಿಗೆ ಭರ್ಜರಿಯಾಗಿ ಹುಲಿ ಕುಣಿತ ಸೇವೆಯನ್ನು ಮಾಡುತ್ತಾರೆ.
ಹುಲಿ ಕುಣಿತಕ್ಕೆ ಅದರದ್ದೇ ಆದ ನೃತ್ಯ ಪ್ರಕಾರವಿದೆ. ಆದರೆ ತೀರಾ ಇತ್ತೀಚಿಗೆ ಹುಲಿ ಕುಣಿತ ವಿವಿಧ ನೃತ್ಯ ಶೈಲಿಯನ್ನು ಪಡೆದುಕೊಳ್ಳುತ್ತಿದೆ. ಕಲೆಯನ್ನು ಉಳಿಸುವುದು ಬೆಳೆಸುವುದು ಎರಡೂ ನಮ್ಮ ಕೈಯಲ್ಲಿದೆ. ಹೀಗಾಗಿ ಎಲ್ಲಾ ಕಲೆಯನ್ನು ಗೌರವಿಸೋಣ ಉಳಿಸಿ ಬೆಳೆಸೋಣ.
ಮಂಗಳೂರು: ಮಂಗಳೂರು ದಸರಾ (Mangaluru Dasara) ನಡೆಯುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ (Kudroli Shri Gokarnath Kshetra) ಪೂಜಿಸಲ್ಪಡುವ ಮೂರ್ತಿಗಳೇ ಎಲ್ಲರನ್ನು ಆಕರ್ಷಿಸುತ್ತವೆ. ಮುದ್ದು ಮುಖದ ಶಾರದಾ ಮಾತೆ ಸೇರಿ ಎಲ್ಲಾ ದೇವರ ಮಣ್ಣಿನ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬದ ವಾತಾವರಣದಂತಿರುತ್ತದೆ. ನವರಾತ್ರಿಯಲ್ಲಿ ಬರುವ ಎಲ್ಲ ಲಕ್ಷಾಂತರ ಜನರಿಗೆ ಅಲ್ಲಿನ ದೇವಿಯ ಮೂರ್ತಿಗಳೇ ಮುಖ್ಯವಾಗಿ ಸೆಳೆಯುತ್ತವೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಸಂಭ್ರಮಕ್ಕೆ ಮೆರಗು ನೀಡುವುದೇ ಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ಮಣ್ಣಿನ ಮೂರ್ತಿಗಳು. ಈ ಮೂರ್ತಿಗಳನ್ನ ನೋಡುವ ಸಲುವಾಗಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ಜೊತೆಗೆ ಒಂದೇ ಸೂರಿನಡಿ ನವದುರ್ಗೆಯರು, ಶಾರದಾ ಮಾತೆಯ ಪ್ರತಿಷ್ಟಾಪನೆ, ಆರಾಧನೆ ದೇಶದ ಬೇರೆಲ್ಲೂ ನಡೆಯುವುದಿಲ್ಲ. ಇಂತಹ ಅದ್ಬುತ ಮೂರ್ತಿಗಳಿಗೆ ಜೀವ ತುಂಬುವ ಕಲೆಗಾರರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ನೋಡಿ ಕಲಾವಿದನ ಕೈಚಳಕಕ್ಕೆ ಎಲ್ಲರೂ ಸೈ ಎನ್ನುತ್ತಾರೆ. ಆ ಕಲಾವಿದರು ಕಲೆಯ ಹಿಂದೆ ಇರುತ್ತಾರೆಯೇ ಹೊರತು ಎಲ್ಲಿಯೂ ಕಾಣಿಸಿಕೊಳ್ಳೋದಿಲ್ಲ. ಮೂರ್ತಿಗಳನ್ನು ರಚಿಸಿ ಅದಕ್ಕೆ ಜೀವ ತುಂಬುವ ಆ ಕಲಾವಿದರ ಕೈಚಳಕವೇ ಅದ್ಭುತ.
ನವರಾತ್ರಿ ಉತ್ಸವ ಆರಂಭವಾದ ದಿನಗಳಲ್ಲಿ ಶಿವಮೊಗ್ಗದ ಬಿ.ಜೆ.ರಾಜಶೇಖರ್ ಹಾಗೂ ಅವರ ತಂಡದವರು ಮೂರ್ತಿ ರಚನೆ ಮಾಡುತ್ತಿದ್ದರು. ಇದೀಗ ಅದೇ ತಂಡದಲ್ಲಿ ಕಲಾವಿದನಾಗಿ ಶಿವಮೊಗ್ಗದ ಕುಬೇರ ತನ್ನ 18 ವರ್ಷದ ಪ್ರಾಯದಲ್ಲಿಯೇ ಕೆಲಸ ಆರಂಭಿಸಿದ್ದರು. ಶಿವಮೊಗ್ಗದ ಕುಬೇರ ಹಾಗೂ ಅವರ ಬಳಗ ಕಳೆದ ಏಳು ವರ್ಷದಿಂದ ನವರಾತ್ರಿಯ ಎಲ್ಲಾ 12 ಮೂರ್ತಿಗಳನ್ನು ರಚಿಸುತ್ತಾರೆ. ದೇವತೆಯ ಸ್ವರೂಪವಾದ ಮೂರ್ತಿಗಳನ್ನು ರಚಿಸುವಾಗ ಈ ಎಲ್ಲಾ ಕಲಾವಿದರು ಶ್ರದ್ದೆ, ನಿಷ್ಠೆ, ಭಕ್ತಿಯ ಜೊತೆ ವೃತಾಚರಣೆ, ಜಪವನ್ನು ಮಾಡಿ ಮೂರ್ತಿಗಳನ್ನು ರಚಿಸುತ್ತಾರೆ. ಆದೇ ಮಣ್ಣಿನಿಂದಲೇ ಪರಿಸರ ಪ್ರೇಮಿ ಬಣ್ಣಗಳನ್ನು ಬಳಸಿ ಮೂರ್ತಿಗಳ ರಚನೆ ಮಾಡುತ್ತಾರೆ. ದೇವಿಯೇ ನಮ್ಮ ಕೈಯಿಂದ ಈ ರೀತಿ ಸುಂದರವಾಗಿ ಮಾಡಿಸುತ್ತಾರೆ ಎನ್ನುವುದು ಕಲಾವಿದರ ಮಾತು.
ಸುಮಾರು 40 ದಿನಗಳ ಕಾಲ ರಾತ್ರಿ-ಹಗಲು ಈ 12 ಮೂರ್ತಿಗಳನ್ನು 15 ಮಂದಿ ಕಲಾವಿದರು ಸೇರಿ ರಚನೆ ಮಾಡಿದ್ದಾರೆ. ಪ್ರತೀ ವರ್ಷವೂ ವಿಸರ್ಜನೆಗೊಳ್ಳುವ ಈ ಮೂರ್ತಿಗಳು ಮತ್ತೆ ಮುಂದಿನ ವರ್ಷ ಪ್ರತ್ಯಕ್ಷವಾಗಿದೆಯೇ ಅನ್ನುವಷ್ಟರ ಮಟ್ಟಿಗೆ ಅಷ್ಟೇ ಸುಂದರವಾಗಿ ಈ ಕಲಾವಿದರ ತಂಡ ಪ್ರತಿ ವರ್ಷ ಮೂರ್ತಿಗಳನ್ನು ರಚಿಸುತ್ತಾರೆ.
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಪೂಜಿಸಲ್ಪಡುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯೂ ಪ್ರತಿಷ್ಠಾಪನೆಗೊಂಡಿದೆ. ಶಾರದಾ ಮಾತ್ರೆಗೆ ದಿನಕ್ಕೊಂದು ರೀತಿಯಲ್ಲಿ ವಿಶೇಷ ಅಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರುಗು ನೀಡಲಾಗುತ್ತಿದೆ. ಮಾತೆ ದರ್ಶನಕ್ಕೆ ಬರುವ ಭಕ್ತರು ಅದ್ಧೂರಿ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗೆಯೇ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪೂಜಿಸಲ್ಪಡುವ ಶಾರದಾ ಮಾತೆಗೆ ನವರಾತ್ರಿಯ 8ನೇ ದಿನದ ದಿವ್ಯಾಲಂಕಾರ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…
ಮಂಗಳೂರು: ದಸರಾ ಎಂದರೆ ಮೊದಲು ನೆನಪಾಗುವುದು ಮೈಸೂರು ದಸರಾ(Mysuru Dasara). ಇತ್ತೀಚಿನ ದಿನಗಳಲ್ಲಿ ಮಂಗಳೂರು ದಸರಾ (Mangaluru Dasara) ಕೂಡ ಮೈಸೂರು ದಸರಾದಷ್ಟೇ ಪ್ರಖ್ಯಾತಿ ಪಡೆದಿದೆ. ಇದೀಗ ದಸರಾ ಸಂಭ್ರಮದಲ್ಲಿ ಬೆಳಕಿನ ಚಿತ್ತಾರದಿಂದ ಎಲ್ಲರನ್ನೂ ಸ್ವಾಗತಿಸಲು ಸಿದ್ಧವಾಗಿ ನಿಂತಿದೆ.
ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ (Kudroli Shri Gokarnanatheshwara Kshetra) ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ. ದಸರಾ ಮೆರವಣಿಗೆ (Dasara Procession) ಹಾದುಹೋಗುವ ನಗರದ ಸುಮಾರು 7ಕಿ.ಮೀ. ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಬರೋಬ್ಬರಿ 22 ಲಕ್ಷ ಬಲ್ಬುಗಳನ್ನು ಬಳಸಿ ದೀಪಾಲಂಕಾರ ಮಾಡಲಾಗಿದೆ. ಈ ಬೆಳಕಿನ ಚಿತ್ತಾರ ಮಂಗಳೂರು ದಸರಾವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಿದೆ.ಇದನ್ನೂ ಓದಿ: BBK 11: ಕಂಟೆಂಟ್ಗೋಸ್ಕರ ಲವ್ ಆಗುತ್ತಾ?: ಚೈತ್ರಾಗೆ ಅನುಷಾ ಪ್ರಶ್ನೆ
7 ಕಿ.ಮೀ. ರಸ್ತೆಯುದ್ದಕ್ಕೂ ಮಾಡಿರುವ ವಿದ್ಯುತ್ ದೀಪಾಲಂಕಾರದಲ್ಲಿ 10 ಲಕ್ಷ ದೊಡ್ಡ ಪ್ರಮಾಣದ ಬಲ್ಬ್ಗಳು ಸೇರಿದಂತೆ ಒಟ್ಟು 22 ಲಕ್ಷಕ್ಕೂ ಅಧಿಕ ಬಲ್ಬ್ಗಳಿಂದ ಶೃಂಗರಿಸಲಾಗಿದೆ. ದಸರಾದ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ಮೊದಲ ದಿನದಿಂದ 10 ದಿನಗಳ ಕಾಲ ಸಂಜೆ 7 ಗಂಟೆಯಾಗುತ್ತಿದ್ದAತೆ ನಗರವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ವಾಹನ ಜನಜಂಗುಳಿಯಿಂದ ಕೂಡಿದ ರಸ್ತೆಗಳು ಇದೀಗ ಬೆಳಕಿನ ಚಿತ್ತಾರದಿಂದ ಮಧುವಣಗಿತ್ತಿಯಂತೆ ಅಲಂಕೃತಗೊಂಡಿದೆ.
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕಳೆಗಟ್ಟಿದೆ. 9 ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿದಿನ ಶಾರದಾ ಮಾತೆಗೆ ವಿಭಿನ್ನ ಅಲಂಕಾರ ಮಾಡುವ ಮೂಲಕ ಗಮನ ಸೆಳೆಯಲಾಗುತ್ತಿದೆ. ಹಾಗೆಯೇ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಾರದಾ ಮಾತೆಗೆ ನವರಾತ್ರಿಯ ಆರನೇ ದಿನದ ಶೃಂಗಾರ ಮಾಡಿದ್ದು, ವೈಭವಪೂರಿತ ಅಲಂಕಾರ ದೃಶ್ಯ SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ವೈಭವೋಪೇತ ಚಾಲನೆ ಸಿಕ್ಕಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಯೊಂದಿಗೆ ಶಾರದಾ ಮಾತೆಯ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಲಾಗಿದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿಧಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ ಮಹಾಗೌರಿಯರಬನ್ನೂ ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಸಂದರ್ಭದಲ್ಲಿ ಶಾರದಾ ಮಾತೆಯ ಅದ್ಧೂರಿ ಅಲಂಕಾರ, ದಸರಾ ಸಂಭ್ರಮದ ಕ್ಷಣಗಳು SPOTLIGHT PRODUCTIONS ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ…