Tag: Malanadu

  • ಮಲೆನಾಡಿಗರನ್ನು ಬಿಟ್ಟು ಬಿಡದೇ ಕಾಡುತ್ತಿರುವ ‘ಮಂಗನ ಕಾಯಿಲೆ’

    ಮಲೆನಾಡಿಗರನ್ನು ಬಿಟ್ಟು ಬಿಡದೇ ಕಾಡುತ್ತಿರುವ ‘ಮಂಗನ ಕಾಯಿಲೆ’

    ಶಿವಮೊಗ್ಗ: ಮಲೆನಾಡಿಗರನ್ನು ಮಂಗನ ಕಾಯಿಲೆ ಬಿಟ್ಟು ಬಿಡದೇ ಕಾಡುತ್ತಿದೆ. 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ ಮೊದಲ ಬಾರಿಗೆ ಈ ಮಂಗನ ಕಾಯಿಲೆ ಕಂಡುಬಂದಿತ್ತು. ಈಗಾಗಿಯೇ ಈ ರೋಗಕ್ಕೆ ‘ಕ್ಯಾಸನೂರು ಡಿಸೀಸ್ ಫಾರೆಸ್ಟ್'(ಕೆಎಫ್‍ಡಿ) ಅಂತಾ ಕರೆಯುತ್ತಾರೆ. ಕೆಎಫ್‍ಡಿ ರೋಗಕ್ಕೆ ಇದುವರೆಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಒಂದೇ ಗ್ರಾಮದಲ್ಲಿ 23ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದೀಗ ಮೇ 3 ರಂದು ಮಂಗನ ಕಾಯಿಲೆಗೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಮೃತಪಟ್ಟಿರುವುದು ಇದೀಗ ಮತ್ತೆ ಆತಂಕ ಉಂಟು ಮಾಡಿದೆ.

    23 ಮಂದಿ ಬಲಿ
    ಶಿವಮೊಗ್ಗ ಜಿಲ್ಲೆಯ ಬಹುತೇಕ ಪ್ರದೇಶ ಮಲೆನಾಡಿನಿಂದ ಕೂಡಿದೆ. ಮಲೆನಾಡಿನ ಭಾಗದಲ್ಲಿಯೇ ಅತಿ ಹೆಚ್ಚು ಕಾಣಿಸಿಕೊಳ್ಳುವ ರೋಗ ಅಂದರೆ ಮಂಗನ ಕಾಯಿಲೆ. ಈ ಕಾಯಿಲೆ ಮಂಗಗಳಿಂದಲೇ ಹರಡುತ್ತದೆ ಎಂಬ ಕಾರಣದಿಂದಲೇ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಕಳೆದ ಎರಡು ವರ್ಷದ ಹಿಂದೆ ಒಂದೇ ಗ್ರಾಮದಲ್ಲಿ ಮಂಗನ ಕಾಯಿಲೆಗೆ 23 ಮಂದಿ ಬಲಿಯಾಗಿದ್ದರು.

    ಕಳೆದ ವರ್ಷ ಈ ಕಾಯಿಲೆ ಅಷ್ಟಾಗಿ ಪತ್ತೆಯಾಗಿರಲಿಲ್ಲ. ಆದರೆ ಈ ಬಾರಿ ಮತ್ತೆ ಅರಳಗೋಡು ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ರಾಮಸ್ವಾಮಿ(55) ಮಂಗನ ಕಾಯಿಲೆಗೆ ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.

    ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖ
    ಮಂಗಗಳು ಸತ್ತ ನಂತರ, ಮೃತ ಮಂಗಗಳ ದೇಹದಿಂದ ಉಣುಗುಗಳು ಹೊರ ಬರುತ್ತವೆ. ಹೀಗೆ ಹೊರ ಬಂದ ಉಣುಗುಗಳು ಬೇರೆ ಜೀವಿಗಳ ದೇಹ ಸೇರಿಕೊಂಡು ಬದುಕುತ್ತವೆ. ಈ ಉಣುಗುಗಳು ಕಾಡಿಗೆ ಹೋಗುವ ಜಾನುವಾರುಗಳು ಹಾಗು ಮನುಷ್ಯರ ದೇಹವನ್ನು ಸೇರಿಕೊಳ್ಳುತ್ತವೆ. ಮನುಷ್ಯನಲ್ಲಿ ಉಣುಗುಗಳು ಸೇರಿಕೊಂಡಾಗ ನಿಧಾನವಾಗಿ ಜ್ವರ, ಕೆಮ್ಮು, ಶೀತ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ಆದರೆ ನಿರ್ಲಕ್ಷಿಸಿದರೇ ಸಾವು ಕಟ್ಟಿಟ್ಟ ಬುತ್ತಿ.

    6-7 ದಶಕ ಸಮೀಪಿಸಿದೆ
    ಈ ಮಂಗನ ಕಾಯಿಲೆಗೆ ಇದುವರೆಗೆ ಯಾವುದೇ ಲಸಿಕೆ ಇಲ್ಲ. ಕೇವಲ ಬೂಸ್ಟರ್ ಡೋಸ್ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇ ಇದಕ್ಕೆ ಸೂಕ್ತ ಮದ್ದು. ಈ ಕಾಯಿಲೆ ಪತ್ತೆಯಾಗಿ 6-7 ದಶಕಗಳೇ ಸಮೀಸುತ್ತಿದ್ದರೂ ಇದುವರೆಗೂ ಯಾವುದೇ ಸರ್ಕಾರಗಳು ಆಗಲಿ, ವಿಜ್ಞಾನಿಗಳಾಗಲಿ ಇದಕ್ಕೆ ಲಸಿಕೆ ಕಂಡುಹಿಡಿಯಲು ಮುಂದಾಗಿಲ್ಲ. ಈ ರೋಗ ಸಾಮಾನ್ಯವಾಗಿ ಜನವರಿಯಿಂದ ಜೂನ್‍ವರೆಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಬಚಾವ್ ಆಗಬಹುದು.

    ಮಲೆನಾಡಿನ ಭಾಗಗಳಾದ ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಈ ರೋಗ ಹೆಚ್ಚು ಕಾಡುತ್ತಿದ್ದರೂ, ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳುತ್ತಿಲ್ಲ. ಈ ಭಾಗದಲ್ಲಿ ವಿಶೇಷವಾದ ಆಸ್ಪತ್ರೆ ಆರಂಭಿಸಲು, ಪ್ರಯೋಗಾಲಯ ಸ್ಥಾಪಿಸಲು ಮುಂದಾಗುತ್ತಿಲ್ಲ. ಜನರ ಜೀವದ ಜೊತೆ ಚೆಲ್ಲಾಟ ಆಡುವ ಮುನ್ನ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯನ್ನು ವಿಚಾರಿಸಿದರೆ, ಕೆಎಫ್‍ಡಿ ರೋಗಕ್ಕೆ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬೂಸ್ಟರ್ ಡೋಸ್ ಲಸಿಕೆ ಹಾಕಲಾಗಿದೆ. ಆದರೆ ರಾಮಸ್ವಾಮಿ ಅವರಿಗೆ ಡಯಾಬಿಟಿಸ್ ರೋಗ ಇತ್ತು, ಈಗಾಗಿಯೇ ಅವರು ಮೃತಪಟ್ಟಿದ್ದಾರೆ ಹೊರತು ಕೇವಲ ಮಂಗನ ಕಾಯಿಲೆಯಿಂದಲ್ಲ ಎಂದು ಡಿಎಚ್‍ಒ ಡಾ.ರಾಜೇಶ್ ಸುರಗಿಹಳ್ಳಿ ಹೇಳುತ್ತಾರೆ.

    ಒಟ್ಟಿನಲ್ಲಿ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆ ರೋಗ ಮತ್ತಷ್ಟು ಉಲ್ಬಣಗೊಂಡು, ಹಲವರ ಸಾವು-ನೋವು ಸಂಭವಿಸುವ ಮೊದಲು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

  • ಮಲೆನಾಡಲ್ಲಿ ಭಾರೀ ಮಳೆ- ಉಕ್ಕಿ ಹರಿಯುತ್ತಿದೆ ಕಲ್ಲತ್ತಿಗಿರಿ ಜಲಪಾತ

    ಮಲೆನಾಡಲ್ಲಿ ಭಾರೀ ಮಳೆ- ಉಕ್ಕಿ ಹರಿಯುತ್ತಿದೆ ಕಲ್ಲತ್ತಿಗಿರಿ ಜಲಪಾತ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಉಕ್ಕಿ ಹರಿಯುತ್ತಿವೆ. ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.

    ಕಾಫಿನಾಡಿನ ಗಿರಿ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ. ಭಾರೀ ನೀರಿನಿಂದ ಉಕ್ಕಿ ಹರಿಯುತ್ತಿರುವ ಜಲಪಾತ ಪ್ರವಾಸಿಹರನ್ನು ತನ್ನತ್ತ ಸೆಳೆಯುತ್ತಿದೆ. ಹೀಗಾಗಿ ಮುಳ್ಳಯ್ಯನಗಿರಿ ಬೆಟ್ಟ ಸೇರಿದಂತೆ ಈ ಭಾಗಕ್ಕೆ ಭೇಟಿ ನೀಡಿದ ಪ್ರವಾಸಿಗರು ಜಲಪಾತದ ಬಳಿ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಶನಿವಾರ ಮಧ್ಯಾಹ್ನದಿಂದ ಮುಳ್ಳಯ್ಯನ ಗಿರಿ ಹಾಗೂ ದತ್ತ ಪೀಠ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಲ್ಲತ್ತಿಗಿರಿ ಜಲಪಾತಕ್ಕೆ ಅತೀ ಹೆಚ್ಚು ನೀರು ಹರಿದು ಬಂದಿದೆ. ಹೀಗಾಗಿ ಜಲಪಾತಕ್ಕೆ ಜೀವಕಳೆ ಬಂದಿದೆ. ಪ್ರವಾಸಿಗರ ದಂಡು ಮಲೆನಾಡಿಗೆ ಹೆಚ್ಚು ಆಗಮಿಸುತ್ತಿದ್ದು, ಅದರಲ್ಲೂ ಚಿಕ್ಕಮಗಳೂರಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಜಲಪಾತದ ರಮಣೀಯ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮೂಡಿಗೆರೆ, ಕೊಪ್ಪ, ಎನ್‍ಆರ್ ಪುರ, ಶೃಂಗೇರಿಯಲ್ಲಿ ಮಳೆ ಜೋರಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಎರಡು ಅಡಿಯಷ್ಟು ನೀರಿನ ಹರಿಯುತ್ತಿದೆ. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಈ ಬಾರಿಯೂ ಮುಳುಗಡೆಯಾಗಿದೆ. ಕಳೆದ ಬಾರಿ ಸಹ ಹೆಬ್ಬಾಳೆ ಸೇತುವೆ ಹಲವು ಬಾರಿ ಮಳುಗಡೆಯಾಗಿತ್ತು. ಭಾರೀ ಮಳೆಯಿಂದಾಗಿ ಭದ್ರಾ ಅಪಾಯ ಮಟ್ಟ ಮೀರಿ ತುಂಬಿ ಹರಿಯುತ್ತಿದೆ.

  • ಮಳೆಯ ತವರು ಕೊಟ್ಟಿಗೆಹಾರದಲ್ಲಿ ಕಾಮನಬಿಲ್ಲು- ಸ್ಥಳೀಯರಲ್ಲಿ ಆಶ್ಚರ್ಯ

    ಮಳೆಯ ತವರು ಕೊಟ್ಟಿಗೆಹಾರದಲ್ಲಿ ಕಾಮನಬಿಲ್ಲು- ಸ್ಥಳೀಯರಲ್ಲಿ ಆಶ್ಚರ್ಯ

    ಚಿಕ್ಕಮಗಳೂರು: ಜಿಲ್ಲೆಯ ಮಳೆಯ ತವರೂರಾದ ಕೊಟ್ಟಿಗೆಹಾರ ಗ್ರಾಮದಲ್ಲಿ ಕಾಮನಬಿಲ್ಲು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸೇರಿದಂತೆ ಸುತ್ತಮುತ್ತ ಹಳ್ಳಿಗಳ ಜನ ಜೂನ್ 10-15ರಿಂದ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಸೂರ್ಯನನ್ನ ನೋಡೋದೇ ತೀರಾ ವಿರಳ. ಕಾರಣ ಇಲ್ಲಿ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಮಳೆ ಆರಂಭವಾದರೆ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಒಂದೇ ಸಮನೆ ಸುರಿಯುತ್ತಿರುತ್ತದೆ. ಜನ ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಾರೆ. ಸೂರ್ಯನನ್ನ ನೋಡೋದು ತೀರಾ ವಿರಳ.

    ಜುಲೈ ಎರಡನೇ ವಾರ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವಂತೆ ಭಾಸವಾಗ್ತಿರೋ ಮನಮೋಹಕ ಕಾಮನಬಿಲ್ಲು ಸ್ಥಲೀಯರಲ್ಲಿ ಆಶ್ಚರ್ಯದ ಜೊತೆ ಕುತೂಹಲ ಮೂಡಿಸಿದೆ. ಸಂಜೆ 6.30ರ ವೇಳೆಗೆ ಗೋಚರವಾದ ಈ ಕಾಮನಬಿಲ್ಲಿಗೆ ಸ್ಥಳೀಯರು ಫಿದಾ ಆಗೋದ್ರ ಜೊತೆ ಕಾಮನಬಿಲ್ಲನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ. ಅಷ್ಟೆ ಅಲ್ಲದೆ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರೋ ಕಾಮನಬಿಲ್ಲು ಹೇಮಾವತಿ ನದಿಯ ಒಡಲಿನ ಮೇಲೆ ಬೆಳಕು ಚೆಲ್ಲಿದಂತೆ ಕಾಣುತ್ತಿದ್ದನ್ನು ಕಂಡು ಸ್ಥಳೀಯರು ಮತ್ತಷ್ಟು ಪುಳಕಿತರಾಗಿದ್ದಾರೆ.

    ಕಳೆದೊಂದು ವಾರದ ಹಿಂದೆ ಇದೇ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸುತ್ತಮುತ್ತ ಸುರಿದ ಭಾರೀ ಮಳೆಗೆ ಜನ ಆತಂಕಕ್ಕೀಡಾಗಿದ್ದರು. ಮಳೆ ಆರಂಭವಾಯಿತು. ಕಳೆದ ವರ್ಷ ಬದುಕನ್ನೇ ನುಂಗಿ ಹಾಕಿದ್ದ ವರುಣದೇವ ಈ ವರ್ಷ ಇನ್ನೇನು ಅನಾಹುತ ಸೃಷ್ಠಿಸಿ ಅವಾಂತರ ಮಾಡುತ್ತಾನೋ ಎಂದು ಸ್ಥಳೀಯರು ಕಂಗಾಲಾಗಿದ್ದರು. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸಂಪೂರ್ಣ ಕ್ಷೀಣಿಸಿದೆ.

    ಮಳೆ ಇಲ್ಲದಿದ್ದರೂ ಸದಾ ತಣ್ಣನೆಯ ಗಾಳಿ ಜೊತೆ ಯಾವಾಗಲು ಮೋಡ ಕವಿದ ವಾತಾವರಣವಿರೋ ಕೊಟ್ಟಿಗೆಹಾರದಲ್ಲಿ ಜುಲೈ ಎರಡನೇ ವಾರದಲ್ಲಿ ಬಿಸಿಲಿನ ಮಧ್ಯೆ ಕಾಮನಬಿಲ್ಲನ್ನು ಕಂಡು ಜನ ಪುಳಕಿತರಾಗಿದ್ದಾರೆ. ಜೊತೆಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಹೋದಂತೆ ಭಾಸವಾಗ್ತಿರೋ ಕಾಮನಬಿಲ್ಲನ್ನ ಕಂಡ ಸ್ಥಳೀಯರು ಸಂತಸ ಪಟ್ಟಿದ್ದಾರೆ.

  • ಹೆಬ್ಬಾಳೆ ಸೇತುವೆ ಮುಳುಗಡೆಗೆ ಒಂದೇ ಅಡಿ ಬಾಕಿ – ಕರಾವಳಿಯಲ್ಲಿ ಮತ್ತೆ ಮುಂಗಾರು ಬಿರುಸು

    ಹೆಬ್ಬಾಳೆ ಸೇತುವೆ ಮುಳುಗಡೆಗೆ ಒಂದೇ ಅಡಿ ಬಾಕಿ – ಕರಾವಳಿಯಲ್ಲಿ ಮತ್ತೆ ಮುಂಗಾರು ಬಿರುಸು

    ಚಿಕ್ಕಮಗಳೂರು/ಮಂಗಳೂರು: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಹೆಬ್ಬಾಳೆ ಸೇತುವೆ ಮುಳುಗಡೆಗೆ ಕೇವಲ ಒಂದೇ ಅಡಿ ಬಾಕಿ ಉಳಿದಿದೆ.

    ಹೆಬ್ಬಾಳೆ ಸೇತುವೆ ಮುಳುಗಡೆಯಾದಲ್ಲಿ ಕಳಸ-ಹೊರನಾಡು ಸಂಪರ್ಕ ಕಡಿತ ಕಡಿತವಾಗಲಿದೆ. ಜೀವ ನದಿಗಳು ಮೈದುಂಬಿ ಹರಿಯುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ಒಳ ಹರಿವಿನಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ.

    ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ, ಬಸ್ರೀಕಟ್ಟೆ, ತನಿಕೋಡು ವ್ಯಾಪ್ತಿಯಲ್ಲಿ ಹಾಗೂ ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕೊಪ್ಪದಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ಇತ್ತ ಕರಾವಳಿ ಭಾಗದಲ್ಲೂ ಮಳೆರಾಯನ ಅಬ್ಬ ಜೋರಾಗಿದ್ದು, ಮುಂದಿನ ಮೂರು ದಿನಗಳ ಕಾಲ ಭಾರೀ ಗಾಳಿ ಬೀಸುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ತೀರ ಪ್ರದೇಶದಲ್ಲಿ ಸಮುದ್ರ 4 ಮೀಟರ್ ಎತ್ತರಕ್ಕೆ ಅಬ್ಬರಿಸುವ ಸಾಧ್ಯತೆ ಇದ್ದು, ಸುಮಾರು 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.