Tag: Malabar Gold and Diamonds

  • ಜ್ಞಾನದೀವಿಗೆ ಸರ್ಕಾರಿ ಮಕ್ಕಳ ದಾರಿದೀಪ- ಮಲಬಾರ್ ಗೋಲ್ಡ್ ಸಾಮಾಜಿಕ ಕಾಳಜಿಗೆ ಉಡುಪಿ ಡಿಸಿ ಮೆಚ್ಚುಗೆ

    ಜ್ಞಾನದೀವಿಗೆ ಸರ್ಕಾರಿ ಮಕ್ಕಳ ದಾರಿದೀಪ- ಮಲಬಾರ್ ಗೋಲ್ಡ್ ಸಾಮಾಜಿಕ ಕಾಳಜಿಗೆ ಉಡುಪಿ ಡಿಸಿ ಮೆಚ್ಚುಗೆ

    ಉಡುಪಿ: ಮೊಬೈಲ್, ಟಿವಿ ಇಲ್ಲದ ಸಾಕಷ್ಟು ಕುಟುಂಬಗಳು ಉಡುಪಿ ಜಿಲ್ಲೆಯಲ್ಲಿವೆ. ಸಂಕಷ್ಟದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆ ಸಹಯೋಗದ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ಮಲಬಾರ್ ಗೋಲ್ಡ್ ಸಂಸ್ಥೆ ಕೈಜೋಡಿಸಿರುವುದು ನಮಗೆ ಸಂತಸ ಮತ್ತು ಹೆಮ್ಮೆಯ ವಿಷಯ ಎಂದು ಡಿಸಿ ಜಿ. ಜಗದೀಶ್ ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿ ಸುದ್ದಿವಾಹಿನಿ ಮತ್ತು ರೋಟರಿ ಇಂಟರ್ ನ್ಯಾಷನಲ್ ಸಹಯೋಗದ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣಾ ಅಭಿಯಾನಕ್ಕೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆ ಕೈಜೋಡಿಸಿದೆ. ಉಡುಪಿ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳಿಗೆ 100 ಟ್ಯಾಬ್ ಗಳನ್ನು ವಿತರಣೆ ಮಾಡಿದೆ.

    ಕುಂದಾಪುರ ತಾಲೂಕು, ಸಿದ್ದಾಪುರ ಸರ್ಕಾರಿ ಶಾಲೆಯ 100 ಮಕ್ಕಳಿಗೆ, ಸರ್ಕಾರಿ ಪ್ರೌಢಶಾಲೆ ಹೆಬ್ರಿಯ 100 ಮಕ್ಕಳಿಗೆ ಉಪಯೋಗವಾಗುವ ಟ್ಯೂಬ್ ಗಳನ್ನು ಮಲಬಾರ್ ಗೋಲ್ಡ್ ಸಂಸ್ಥೆ ನೀಡಿದೆ. 3,45,000 ರೂಪಾಯಿ ಮೊತ್ತದ ಟ್ಯೂಬ್ ಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಣೆ ಮಾಡಲಾಯಿತು. ಮಲಬಾರ್ ಗೋಲ್ಡ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಭಾಗವಹಿಸಿ ಮಾತನಾಡಿದರು.

    ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಅವರ ಸಮಾಜಮುಖಿ ಕಾರ್ಯ ಶ್ಲಾಘನೀಯ. ಮಕ್ಕಳ ಶಿಕ್ಷಣಕ್ಕೆ ದೇಣಿಗೆ ದೊಡ್ಡ ಮಟ್ಟದ ನೀಡಿದ್ದು, ತಂತ್ರಜ್ಞಾನ ಕೈಗೆಟುಕದ ಮಕ್ಕಳಿಗೆ ಬಹಳ ಉಪಯೋಗ ಆಗಲಿದೆ. ಹಳ್ಳಿಯ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ, ಮಕ್ಕಳ ಏಳಿಗೆಗಾಗಿ ಕೈಗೊಂಡ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಟ್ಯಾಬ್ ಗಳು ಪೂರಕವಾಗಲಿ. ಸಮಾಜದಲ್ಲಿ ಯಾರಿಗೆಲ್ಲಾ ಕೊಡುಗೆ ನೀಡಲು ಸಾಧ್ಯವೋ ಅವರು ಈ ಅಭಿಯಾನಕ್ಕೆ ಕೈಜೋಡಿಸಬೇಕು. ವಿದ್ಯಾದಾನ ಕೆಲಸ ಬಹಳ ಪುಣ್ಯದ ಕಾರ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ಕೊರೊನಾ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಹಳ್ಳಿಯ ಸರ್ಕಾರಿ ಬಡಮಕ್ಕಳಿಗೆ ಆನ್‍ಲೈನ್ ತರಗತಿಗಳು ಕೈಗೆಟುಕಲಿಲ್ಲ. ನಮ್ಮ ಲಾಭಾಂಶದ ಐದು ಶೇಕಡಾವನ್ನು ಸಾಮಾಜಿಕ ಚಟುವಟಿಕೆಗಳಿಗೆ ನಾವು ಆರಂಭದಿಂದಲೂ ನೀಡುತ್ತಾ ಬಂದಿದ್ದೇವೆ. ಶೈಕ್ಷಣಿಕ , ವೈದ್ಯಕೀಯ, ಪರಿಸರ, ಹೆಣ್ಣುಮಕ್ಕಳಿಗೆ ಚಿನ್ನ ಕೊಟ್ಟು ಮದುವೆ ಮಾಡಿಸುವ ಕೆಲಸದಲ್ಲಿ ಮಲಬಾರ್ ಗೋಲ್ಡ್ ತೊಡಗಿಸಿಕೊಂಡಿದೆ. ಈವರೆಗೆ ಮಲಬಾರ್ ಗೋಲ್ಡ್ ಸಂಸ್ಥೆ ಭಾರತದಲ್ಲಿ 130 ಕೋಟಿ ರೂಪಾಯಿಯಷ್ಟು ಸಹಾಯ ಮಾಡಿದ್ದೇವೆ. ಮುಂದೆಯೂ ಸಮಾಜಮುಖಿ ಕಾರ್ಯ ವಿಸ್ತರಿಸುತ್ತೇವೆ ಎಂದು ಸಂಸ್ಥೆಯ ಉಡುಪಿ ಹೆಡ್ ಹಫೀಜ್ ರೆಹಮಾನ್ ಹೇಳಿದರು.

    ಡಿಡಿಪಿಐ ಹೆಚ್‍ಎನ್ ನಾಗೂರ, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಉಡುಪಿಯ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಈ ಸಂದರ್ಭದಲ್ಲಿ ಮಾತನಾಡಿದರು. ಟ್ಯಾಬ್ ಪಡೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸುವುದಾಗಿ ಭರವಸೆ ಕೊಟ್ಟರು. ವಿದ್ಯಾರ್ಥಿಗಳಿಗೆ ಸಂಸ್ಥೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಲಬಾರ್ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಸಿಸಿಟಿವಿ ಕ್ಯಾಮೆರಾ ಇದ್ದರೂ 16.3 ಗ್ರಾಂ ಚಿನ್ನಾಭರಣ ಎಗರಿಸಿದ ಕಳ್ಳ: ವಿಡಿಯೋ ನೋಡಿ

    ಸಿಸಿಟಿವಿ ಕ್ಯಾಮೆರಾ ಇದ್ದರೂ 16.3 ಗ್ರಾಂ ಚಿನ್ನಾಭರಣ ಎಗರಿಸಿದ ಕಳ್ಳ: ವಿಡಿಯೋ ನೋಡಿ

    ಮೈಸೂರು: ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ನಗರದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಡೆದಿದ್ದು, ಕಳ್ಳನ ಕೈಚಳಕ ತಡವಾಗಿ ಬೆಳಕಿಗೆ ಬಂದಿದೆ.

    ಜೂನ್ 27ರಂದು ಘಟನೆ ನಡೆದಿದ್ದು, ಜುಲೈ 3ರಂದು ಲೆಕ್ಕಹಾಕುತ್ತಿದ್ದಾಗ 50 ಸಾವಿರ ಮೌಲ್ಯದ 16.3 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿರುವುದು ಗೊತ್ತಾಗಿದೆ. ತಕ್ಷಣವೇ ಅಂಗಡಿಯ ಎಲ್ಲ ಸಿಸಿಟಿವಿ ಕ್ಯಾಮೆರಾ ವಿಡಿಯೋ ನೋಡಿದಾಗ ಕಳ್ಳನ ಕೈಚಳಕ ಬಯಲಾಗಿದೆ.

    ನಡೆದಿದ್ದು ಏನು?
    ಊಟದ ಸಮಯದಲ್ಲಿ ವ್ಯಕ್ತಿಯೊಬ್ಬನು ಗ್ರಾಹಕನಂತೆ ಚಿನ್ನದ ಅಂಗಡಿಗೆ ಬಂದಿದ್ದನು. ಸಿಬ್ಬಂದಿ ಊಟಕ್ಕೆ ಹೋಗಿದ್ದರು, ಹೀಗಾಗಿ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು, ಪಕ್ಕದಲ್ಲಿಯೇ ಗ್ರಾಹಕರಿದ್ದರೂ, ಅವರಿಗೆ ಗೊತ್ತಾಗದಂತೆ ತನ್ನ ಎದುರಿಗಿದ್ದ ಬಾಕ್ಸ್‍ನಿಂದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾನೆ. ಅಷ್ಟೇ ಅಲ್ಲದೇ ಅನುಮಾನ ಬಾರದಂತೆ ಮತ್ತೆ ಖಾಲಿಯಾಗಿದ್ದ ಜಾಗವನ್ನು ಸರಿಪಡಿಸಿದ್ದಾನೆ. ಮಳಿಗೆಯಲ್ಲಿ 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಕಳ್ಳ ಅದನ್ನು ಗಮನಿಸದೇ ಈ ಕೃತ್ಯ ಎಸಗಿದ್ದಾನೆ.

    ಕಳ್ಳತನ ಮಾಡಿರುವ ವ್ಯಕ್ತಿ ವೃತ್ತಿಪರ ಕಳ್ಳನೆಂದು ಶಂಕೆ ವ್ಯಕ್ತವಾಗಿದೆ. ಮಳಿಗೆಯ ಸಹಾಯಕ ಮ್ಯಾನೆಜರ್ ಇರ್ಷದ್ ಅವರು ನಗರದ ಲಷ್ಕರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

    https://youtu.be/3mm43iHUUwA