Tag: Magic Show

  • ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ

    ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ಗೆ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ

    ಮಂಗಳೂರು: ಆಂಧ್ರಪ್ರದೇಶದ ಇಂಡಿಯನ್ ಮ್ಯಾಜಿಕ್ ಅಸೋಶಿಯೇಶನ್ (ಐಎಂಎ) ಸಂಸ್ಥೆಯು ಕರ್ನಾಟಕದ ಜಾದೂ ಕಲಾವಿದ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರಿಗೆ ಪ್ರತಿಷ್ಟಿತ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ. ಕುದ್ರೋಳಿ ಗಣೇಶ್ ಅವರು ಜಾದೂ ರಂಗದಲ್ಲಿ ಮಾಡಿರುವ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿಯ ಸಾಧನೆಗಾಗಿ ಈ ಪ್ರಶಸ್ತಿ ಸಂದಾಯವಾಗಿದೆ.

    ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಜಾದೂ ದಿನಾಚರಣೆಯ ನೆನಪಿಗಾಗಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿಶಾಖಪಟ್ಟಣದ ಲೋಕಸಭಾ ಸದಸ್ಯ ಭರತ್ ಮುತ್ತುಕುಮುಲಿ ಅವರು ಕುದ್ರೋಳಿ ಗಣೇಶ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಐಎಂಎ ಸಂಸ್ಥೆಯ ಅಧ್ಯಕ್ಷ ಖ್ಯಾತ ಜಾದೂಗಾರ ಬಿ.ಎಸ್.ರೆಡ್ಡಿ ಉಪಸ್ಥಿತರಿದ್ದರು.

    ಇಂಡಿಯನ್ ಮ್ಯಾಜಿಕ್ ಅಸೋಸಿಯೇಶನ್ ಸಂಸ್ಥೆಯು ತನ್ನ ದಶಮಾನೋತ್ಸದ ಅಂಗವಾಗಿ ಭಾರತದ ಅಗ್ರಗಣ್ಯ ಜಾದೂಗಾರ ಪಿ.ಸಿ.ಸೊರ್ಕಾರ್ ಜೂನಿಯರ್ ಸೇರಿದಂತೆ ದೇಶ-ವಿದೇಶದ ಹತ್ತು ಜಾದೂ ಸಾಧಕರಿಗೆ ಪ್ರಶಸ್ತಿಯನ್ನು ಕೊಡಮಾಡಿದೆ.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುದ್ರೋಳಿ ಗಣೇಶ್, ಬದಲಾಗುತ್ತಿರುವ ಅಭಿರುಚಿಗೆ ಹೊಂದುವಂತೆ ಪ್ರದರ್ಶನದಲ್ಲಿ ಹೊಸತನವನ್ನು ಜೋಡಿಸಿಕೊಳ್ಳೋಣ ಎಂದು ಭಾರತೀಯ ಜಾದೂಗಾರರಿಗೆ ಕರೆ ನೀಡಿದರು. ಜಾದೂ ಕಲೆಯ ಅಭಿವೃದ್ಧಿಗಾಗಿ ಜಾದೂ ಕಲೆಗೆ ಸಾಂಸ್ಥಿಕ ರೂಪ ದೊರೆಯಬೇಕಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕುದ್ರೋಳಿ ಗಣೇಶ್, ತಾವು ಮುಂದಾಳತ್ವವನ್ನು ವಹಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಜಾದೂಗಾರ ಪಿ.ಸಿ.ಸೊರ್ಕಾರ್ ಅವರಿಗೆ ವಿನಂತಿಸಿದರು.

    ಕುದ್ರೋಳಿ ಗಣೇಶ್ ಅವರು ಮೂವತ್ತಕ್ಕೂ ಅಧಿಕ ವರ್ಷಗಳಿಂದ ಜಾದೂರಂಗದಲ್ಲಿದ್ದು, ದೇಶದಾದ್ಯಂತ ಹಾಗೂ ವಿದೇಶದ 15 ರಾಷ್ಟ್ರಗಳಲ್ಲಿ 2,300 ಕ್ಕೂ ಹೆಚ್ಚು ಜಾದೂ ಪ್ರದರ್ಶನ ನೀಡಿದ್ದಾರೆ. ವಿವಿಧ ಜಾದೂ ಸ್ಪರ್ಧೆಗಳಲ್ಲಿ ಭಾಗವಹಿಸಿ 11 ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜಾದೂ, ಜಾನಪದ, ರಂಗಭೂಮಿ, ಸಂಗೀತಗಳ ಸಮ್ಮಿಳನದ ನವರಸಪೂರ್ಣ ಜಾದೂ ಶೈಲಿಯನ್ನು ಹುಟ್ಟುಹಾಕಿದ್ದಾರೆ. ತುಳುನಾಡು ಜಾದೂ, ತುಳುನಾಡು ತುಡರ್ ಚೆಂಡು, ಹರಿಕಥೆ ಜಾದೂ, ನವದುರ್ಗಾ ವಿಸ್ಮಯ, ಸ್ವಚ್ಛತೆಗಾಗಿ ಜಾದೂ, ಶಿಕ್ಷಣಕ್ಕಾಗಿ ಜಾದೂ, ಮೈಂಡ್ ಮ್ಯಾಜಿಕ್ ಮುಂತಾದ ನವನವೀನ ಜಾದೂ ಪ್ರಯೋಗಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ.

  • ಕಮಲ ಮ್ಯಾಜಿಕ್ ವಿಡಿಯೋ – ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಧ್ವಜ ಬಿಜೆಪಿ ಧ್ವಜವಾಗಿ ಪರಿವರ್ತನೆ

    ಕಮಲ ಮ್ಯಾಜಿಕ್ ವಿಡಿಯೋ – ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಧ್ವಜ ಬಿಜೆಪಿ ಧ್ವಜವಾಗಿ ಪರಿವರ್ತನೆ

    ಲಕ್ನೋ: ಪಕ್ಷದ ಪರವಾಗಿ ನಾಯಕರು ಭಿನ್ನ ಭಿನ್ನ ಪ್ರಚಾರ ನಡೆಸುವುದು ನೀವು ನೋಡಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರೊಬ್ಬರು ಪಕ್ಷದ ಪ್ರಚಾರ ಸಭೆಯಲ್ಲಿ ಮ್ಯಾಜಿಕ್ ಮಾಡಿ ಸುದ್ದಿಯಾಗಿದ್ದಾರೆ.

    ರಾಂಪುರದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅಜಯ್ ದಿವಾಕರ್ ಅವರು ಬಿಎಸ್‍ಪಿ, ಎಸ್‍ಪಿ, ಕಾಂಗ್ರೆಸ್ ಧ್ವಜವನ್ನು ಬಿಜೆಪಿ ಧ್ವಜವನ್ನಾಗಿ ಪರಿವರ್ತಿಸಿ ಮ್ಯಾಜಿಕ್ ಮಾಡಿದ್ದಾರೆ.

    ಆರಂಭದಲ್ಲಿ ವೇದಿಕೆಯ ಮೇಲೆ ಬಂದ ಅಜಯ್ ದಿವಾಕರ್ ಕಾಂಗ್ರೆಸ್, ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷ, ಬಿಜೆಪಿ ಧ್ವಜವನ್ನು ಎತ್ತಿ ತೋರಿಸುತ್ತಾರೆ. ನಂತರ ವೇದಿಕೆ ಮೇಲೆ ಕುಳಿತ ನಾಯಕರ ಬಳಿ ಈ ಧ್ವಜವನ್ನು ಪರಿಶೀಲಿಸುವಂತೆ ಹೇಳುತ್ತಾರೆ. ಆ ವ್ಯಕ್ತಿ ಕೈಯಲ್ಲಿರುವ ಧ್ವಜವನ್ನು ಪರಿಶೀಲಿಸುತ್ತಾರೆ.

    ಇದಾದ ಬಳಿಕ ಅಜಯ್ ದಿವಾಕರ್ ಎಲ್ಲ ಧ್ವಜಗಳನ್ನು ಒಟ್ಟಿಗೆ ಸೇರಿಸಿ ಗಂಟು ಹಾಕುತ್ತಾರೆ. ಮೂರು ಗಂಟು ಹಾಕಿದ ನಂತರ ಬಿಜೆಪಿಯ ಧ್ವಜದಿಂದ ಎಲ್ಲವನ್ನು ಮುಚ್ಚುತ್ತಾರೆ. ನಂತರ ಕೈಯನ್ನು ಮೂರು ನಾಲ್ಕುಬಾರಿ ಮೇಲೆ ಮಾಡಿ ಬಿಡಿಸಿದಾಗ ಬಿಜೆಪಿಯ ಒಂದೇ ಧ್ವಜವನ್ನು ಪ್ರದರ್ಶಿಸುತ್ತಾರೆ. ಧ್ವಜದ ಹಿಂಭಾಗ ಮತ್ತು ಮುಂಭಾಗವನ್ನು ತೋರಿಸಿ ನೋಡಿ ನನ್ನ ಬಳಿ ಒಂದೇ ಧ್ವಜ ಇರುವುದು ಎಂದು ಎಂದು ಹೇಳುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.