Tag: madivala gurupeeta

  • ಪ್ರಶಸ್ತಿಯೊಂದಿಗೆ ಬಂದ 1 ಲಕ್ಷಕ್ಕೆ ತಾನೇ 1 ಲಕ್ಷ ಹಣ ಸೇರಿಸಿ ಮಠಕ್ಕೆ ವಾಪಸ್‌ ಕೊಟ್ಟ ಸಿದ್ದರಾಮಯ್ಯ

    ಪ್ರಶಸ್ತಿಯೊಂದಿಗೆ ಬಂದ 1 ಲಕ್ಷಕ್ಕೆ ತಾನೇ 1 ಲಕ್ಷ ಹಣ ಸೇರಿಸಿ ಮಠಕ್ಕೆ ವಾಪಸ್‌ ಕೊಟ್ಟ ಸಿದ್ದರಾಮಯ್ಯ

    ಚಿತ್ರದುರ್ಗ: ಮಡಿವಾಳ ಗುರುಪೀಠದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಅವರ ನಾಲ್ಕನೇ ಪೀಠಾರೋಹಣ ಹಾಗೂ 38ನೇ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಚಿದೇವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ ಪ್ರಶಸ್ತಿಯೊಂದಿಗೆ ನೀಡಿದ್ದ ನಗದಿನೊಂದಿಗೆ ತಾವೇ 1 ಲಕ್ಷ ರೂ. ಸೇರಿಸಿ ಮಠಕ್ಕೆ ಹಿಂತಿರುಗಿಸಿದ್ದಾರೆ.

    ಪ್ರಶಸ್ತಿಯು 1 ಲಕ್ಷ ನಗದು ಒಳಗೊಂಡಿರುವುದಾಗಿ ಶಾಸಕ ಭೀಮಾನಾಯ್ಕ ಗಮನಕ್ಕೆ ತಂದಿದ್ದಾರೆ. ಇದಕ್ಕೆ ವೈಯಕ್ತಿಕವಾಗಿ 1 ಲಕ್ಷ ಸೇರಿಸಿ ಮಠಕ್ಕೆ ಮರಳಿಸುತ್ತೇನೆ. ಮಠದಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಇದನ್ನು ವಿನಿಯೋಗಿಸಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಇಡಿಯಿಂದ ಸ್ಯಾಂಡಲ್‌ವುಡ್‌ ನಿರ್ಮಾಪಕ ಆನಂದ್ ಅಪ್ಪುಗೋಳ್ ಅರೆಸ್ಟ್

    ಇದಕ್ಕೆ ಸಂತಸದಿಂದ ಪ್ರತಿಕ್ರಿಯಿಸಿದ ಬಸವ ಮಾಚಿದೇವ ಸ್ವಾಮೀಜಿ, ಇದನ್ನು ಬಡಮಕ್ಕಳ ವಿದ್ಯಾನಿಧಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಈ ವೇಳೆ ಶಾಸಕರಾದ ಬೈರತಿ ಸುರೇಶ್‌, ಟಿ.ರಘುಮೂರ್ತಿ, ಭೀಮಾನಾಯ್ಕ್‌, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್‌ ಇದ್ದರು.

    ಹಿಂದುತ್ವದ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಂದ ಜಾತಿ ವ್ಯವಸ್ಥೆ ಪೋಷಣೆ:
    ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದುತ್ವದ ಹೆಸರಿನಲ್ಲಿ ಜಾತಿ ವ್ಯವಸ್ಥೆಯನ್ನು ಪೋಷಣೆ ಮಾಡುತ್ತಿವೆ. ಸ್ವಾರ್ಥ ಸಾಧನೆಗೆ ಜಾತಿಯನ್ನು ಬಳಸಿಕೊಳ್ಳುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

    ಇಲ್ಲಿನ ಮಡಿವಾಳ ಗುರುಪೀಠದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಅವರ ನಾಲ್ಕನೇ ಪೀಠಾರೋಹಣ ಹಾಗೂ 38ನೇ ಜನ್ಮದಿನದ ಅಂಗವಾಗಿ ಗುರುವಾರ ನಡೆದ ‘ಕಾಯಕ ಜನೋತ್ಸವ’ದಲ್ಲಿ ‘ಮಾಚಿದೇವಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನಾವೆಲ್ಲರೂ ಹಿಂದೂಗಳೇ. ನಾನು ಹಿಂದೂ ಆಗದೇ ಇದ್ದಿದ್ದರೆ ನಮ್ಮಪ್ಪ ಸಿದ್ದರಾಮಯ್ಯ ಅಂತ ಹೆಸರು ಇಡುತ್ತಿರಲಿಲ್ಲ. ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ ಎಂದರು. ಇದನ್ನೂ ಓದಿ: ಎಂಜಿನಿಯರ್ ಕೈಯಿಂದ ಫೈಲ್ ಕಿತ್ತುಕೊಂಡು ಓಡಿ ಹೋದ ಕಂಟ್ರಾಕ್ಟರ್

    ಹಿಂದೂ ಧರ್ಮದಲ್ಲಿನ ಪಟ್ಟಭದ್ರರು ಶ್ರೇಣಿಕೃತ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ. ಚಾತುರ್ವರ್ಣ ನಿರ್ಮಿಸಿ ಮನುಸ್ಮೃತಿಯ ಮೂಲಕ ಧಾರ್ಮಿಕ ಚೌಕಟ್ಟು ಹಾಕಿದ್ದಾರೆ. ಶೂದ್ರರು ಮತ್ತು ಪಂಚಮರನ್ನು ಹೊರತುಪಡಿಸಿ ಉಳಿದವರು ಮಾತ್ರ ಶಿಕ್ಷಣ, ಆಸ್ತಿ ಹಕ್ಕು ಅನುಭವಿಸಿದರು. ನೂರಾರು ವರ್ಷ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವ ಪರಿಣಾಮ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅಸಮಾನತೆ ಎದುರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

    ಜಾತಿ ವ್ಯವಸ್ಥೆ ಅಳಿದು ಮಾನವೀಯ ಸಮಾಜ ರೂಪುಗೊಳ್ಳಬೇಕಿದೆ. ನಾನು ಜಾತಿ ವ್ಯವಸ್ಥೆಯ ಕಡು ವಿರೋಧಿ. ಆದರೆ ಜಾತಿಯನ್ನು ಗುರುತಿಸಿ ಸಬಲೀಕರಣ ಮಾಡುವ ಮೂಲಕವೇ ಈ ವ್ಯವಸ್ಥೆಯನ್ನು ಕಿತ್ತುಹಾಕಬೇಕಿದೆ. ಜಾತಿ ಸಮ್ಮೇಳನ, ಜಾತಿ ಮಠ ಇಲ್ಲದಿದ್ದರೆ ಸಮುದಾಯ ಸಂಘಟನೆ ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯ ಗುಲಾಮಗಿರಿಯಿಂದ ಹೊರಬರಲು ಅಂಬೇಡ್ಕರ್‌ ಮಾರ್ಗವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

    ಬಸವಣ್ಣನವರು ಶೋಷಿತ ಸಮುದಾಯಗಳ ಪರವಾಗಿ ಹೋರಾಟ ಮಾಡಿದರು. ಬುದ್ಧ, ಬಸವ, ಅಂಬೇಡ್ಕರ್‌ ಸೇರಿ ಮಹನೀಯರೆಲ್ಲರೂ ಸಮಸಮಾಜದ ಕನಸು ಕಂಡಿದ್ದರು. ಶ್ರೇಣಿಕೃತ ವ್ಯವಸ್ಥೆ ಅಳಿಯಬೇಕು ಎಂದು ಶ್ರಮಿಸಿದ್ದರು. ಬಸವಣ್ಣನವರ ಆಶಯಗಳು ಅನುಷ್ಠಾನಕ್ಕೆ ಬಾರದಂತೆ ಕೆಲ ಶಕ್ತಿಗಳು ಕೆಲಸ ಮಾಡುತ್ತಿವೆ. ಧರ್ಮ, ಜಾತಿಯ ನೆಪದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಅಸ್ಪೃಶ್ಯರನ್ನು ದೂರ ಇಡುವುದು ಅಮಾನವೀಯ ಅಲ್ಲವೇ ಎಂದು ಪ್ರಶ್ನಿಸಿದರು.