Tag: machine

  • ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ

    ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ

    ಧಾರವಾಡ: ಚಲಿಸುತ್ತಿದ್ದ ಲಾರಿಯಲ್ಲಿದ್ದ ಮಶಿನ್‍ಗೆ ಏಕಾಏಕಿ ಬೆಂಕಿ ತಗುಲಿದ ಘಟನೆ ಧಾರವಾಡ ಜಿಲ್ಲೆಯ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಪುಣೆಯಿಂದ ಬೆಂಗಳೂರಿನ ಕೈಗಾರಿಕಾ ಪ್ರದೇಶಕ್ಕೆ ಈ ಮಶಿನ್‍ನ್ನು ಲಾರಿ ಹೊತ್ತೊಯ್ಯುತ್ತಿತ್ತು. ತೇಗೂರು ಬಳಿ ಮಿನಿ ಲಾರಿ ಬರುತ್ತಿದ್ದಂತೆ ಲಾರಿಯಲ್ಲಿದ್ದ ಮಶಿನ್‍ಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಬೆಂಕಿ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡ ಲಾರಿ ಚಾಲಕ, ಪಕ್ಕದಲ್ಲೇ ನೀರು ಇರುವುದನ್ನು ಕಂಡು ರಸ್ತೆ ಬದಿ ಲಾರಿ ನಿಲ್ಲಿಸಿ ಕೆಳಗಿಳಿದಿದ್ದಾನೆ.

    ಪಕ್ಕದಲ್ಲೇ ಇದ್ದ ನೀರಿನಿಂದ ಸ್ಥಳದಲ್ಲಿದ್ದ ಜನರೇ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪ್ರಕರಣದ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವನ್ನು ಕಡ್ಡಾಯಗೊಳಿಸಲು ಸಿಎಂಗೆ ಮನವಿ

    ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವನ್ನು ಕಡ್ಡಾಯಗೊಳಿಸಲು ಸಿಎಂಗೆ ಮನವಿ

    ಬೆಂಗಳೂರು: ಸರ್ಕಾರಿ ಕಚೇರಿ, ಶಾಲೆ, ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಕಡ್ಡಾಯಗೊಳಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ.

    ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‍ಗಳನ್ನು ಕಸದೊಂದಿಗೆ ಎಸೆಯುವುದರಿಂದ ಸಾಕಷ್ಟು ಪರಿಸರ ಹಾನಿಯಾಗುತ್ತಿದೆ. ಅಲ್ಲದೆ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಇನ್ನು ಸಾರ್ವಜನಿಕ ಕಟ್ಟಡಗಳಲ್ಲಿ ಶೌಚಾಲಯಕ್ಕೆ ಎಸೆಯುವುದರಿಂದ ತ್ಯಾಜ್ಯ ನೀರು ಹರಿಯುವ ಒಳಚರಂಡಿಗಳು ಕಟ್ಟಿಕೊಳ್ಳುತ್ತವೆ. ಇದರಿಂದಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಸುಡುವ ಇನ್ಸಿನರೇಟರ್ ಯಂತ್ರವನ್ನು ಕಡ್ಡಾಯಗೊಳಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ.

    ಮುಂದಿನ ಬಜೆಟ್‍ನಲ್ಲಿ ಅಗತ್ಯ ಹಣ ತೆಗೆದಿರಿಸುವಂತೆ ಮನವಿ ಮಾಡಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವತಿಯಿಂದ ಸಾಮಾಜಿಕ ಕಾರ್ಯಕರ್ತ ಎಸ್. ಅಮರೇಶ್ ಪತ್ರ ಬರೆದಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಇರುವ ಮಹಿಳಾ ಕಾಲೇಜುಗಳು, ಐಟಿಬಿಟಿ ಕಂಪನಿ, ಗಾರ್ಮೆಂಟ್ಸ್, ಪಿಜಿಗಳು ಹಾಗೂ ಕಾರ್ಖಾನೆಗಳಲ್ಲಿ ಇನ್ಸಿನರೇಟರ್ (incinerators) ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕ್ರಮ ಜಾರಿ ಮಾಡಲು ಮನವಿ ಮಾಡಲಾಗಿದೆ.

    ಈ ಯಂತ್ರದೊಳಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಹಾಕಿದಾಗ, ಇವು ಸುಟ್ಟು ಭಸ್ಮವಾಗುತ್ತವೆ. ಇದರಿಂದ ವಾಯು ಮಾಲಿನ್ಯವಾಗುವುದಿಲ್ಲ. ವಾಸನೆಯೂ ಬರುವುದಿಲ್ಲ. ಅತ್ಯಾಧುನಿಕ ಇನ್ಸಿನರೇಟರ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಮರೇಶ್, ಇತರೆ ಕಸದೊಂದಿಗೆ ಸ್ಯಾನಿಟರಿ ವೇಸ್ಟ್ ಕೂಡ ಮಿಶ್ರವಾಗುತ್ತಿದೆ. ಇದನ್ನು ವಿಂಗಡಿಸಲಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಉದ್ಯೋಗ ಮಾಡುವ ಜಾಗದಲ್ಲಿ, ಶಾಲಾ ಕಾಲೇಜುಗಳಲ್ಲಿ ಪರಿಹಾರ ಕಂಡುಕೊಳ್ಳಲು ಈ ಇನ್ಸಿನೇಟರ್ ಬಳಸುವಂತೆ ಮಾಡಲು ಮನವಿ ಮಾಡಲಾಗಿದೆ ಎಂದರು.

  • ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು

    ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನಿಗೆ ಯಂತ್ರ ತಗುಲಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ತಾಲೂಕಿನ ಗೊಲ್ಲರಹೊಸಹಳ್ಳಿ ಗ್ರಾಮದ ಚನ್ನಕೇಶವ (40) ಮೃತ ಕಾರ್ಮಿಕ. ಹಲವು ವರ್ಷಗಳಿಂದ ಕಾರ್ಖಾನೆಯ ಮೆಕ್ಯಾನಿಕಲ್ ವಿಭಾಗದಲ್ಲಿ (ಪಿಟ್ಟರ್) ಕಾರ್ಮಿಕನಾಗಿ ಚನ್ನಕೇಶವ ಕೆಲಸ ಮಾಡಿಕೊಂಡು ಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದರು. ಎಂದಿನಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಯಂತ್ರ ತಗುಲಿ ಈ ಘಟನೆ ಸಂಭವಿಸಿದೆ.

    ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟಿರುವ ಕಾರ್ಮಿಕರಿಗೆ ಕಾರ್ಖಾನೆಯ ಆಡಳಿತ ಮಂಡಳಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತ ಮುಖಂಡ ಉಮೇಶ್ ನೇತೃತ್ವದಲ್ಲಿ ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆ ಮಾಡಿದರು.

  • ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಕೋಲಾರ: ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಕೈ ಅರ್ಧ ತುಂಡಾದ ಘಟನೆ ಕೋಲಾರದ ನತಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ನಹಾರ್ಸ್ ಎಂಜಿನಿಯರಿಂಗ್ ಇಂಡಿಯಾ ಕಂಪನಿಯಲ್ಲಿಂದು ಈ ಘಟನೆ ನಡೆದಿದೆ. ಹೈದರ್ ಎಂಬ ಕಾರ್ಮಿಕನ ಕೈ ತುಂಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಕಾರ್ಖಾನೆಯ ಆಡಳಿತ ಮಂಡಳಿಯಿಂದ ಸೂಕ್ತ ಚಿಕಿತ್ಸೆ ಹಾಗೂ ಭದ್ರತೆ ನೀಡದ ಆರೋಪ ಕೇಳಿಬಂದಿದೆ. ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಭದ್ರತೆ ಹಾಗೂ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದರು. ಗಾಯಾಳುಗೆ ಸೂಕ್ತ ಪರಿಹಾರ ನೀಡುವಂತೆ, ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‍ಐ ನೀಡುವಂತೆ ಆಗ್ರಹ ಮಾಡಿದರು.

    ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಇಂದಿರಾ ಕ್ಯಾಂಟೀನ್‍ನಲ್ಲಿ ಹಸಿ ಕಸದಿಂದ ರಸವನ್ನು ತೆಗೆಯುವ ಯಂತ್ರ ಅಳವಡಿಕೆ

    ಇಂದಿರಾ ಕ್ಯಾಂಟೀನ್‍ನಲ್ಲಿ ಹಸಿ ಕಸದಿಂದ ರಸವನ್ನು ತೆಗೆಯುವ ಯಂತ್ರ ಅಳವಡಿಕೆ

    ರಾಮನಗರ: ಹಸಿ ಕಸವನ್ನು ಬಳಸಿಕೊಂಡು ರಸವನ್ನು ತಯಾರಿಸುವಂತಹ ಯಂತ್ರವನ್ನು ಇದೀಗ ರಾಮನಗರದ ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿದೆ. ಫುಡ್ ವೇಸ್ಟ್ ಡೈಜೆಸ್ಟರ್ ಎಂಬ ಯಂತ್ರವನ್ನು ಇದೀಗ ಇಂದಿರಾ ಕ್ಯಾಂಟೀನ್‍ನಲ್ಲಿ ಅಳವಡಿಸಲಾಗಿದೆ.

    ಮಾನವನ ಜೀರ್ಣಾಂಗ ವ್ಯವಸ್ಥೆಯಂತೆ ಈ ಯಂತ್ರ ಹಸಿಕಸವನ್ನ ಜೀರ್ಣ ಮಾಡಿ ನೀರನ್ನು ಹೊರ ಹಾಕುತ್ತಿದೆ. ಈ ಹಸಿ ಕಸದ ನೀರು ವಿಟಮಿನ್ ಹಾಗೂ ಪ್ರೊಟಿನ್‍ನಿಂದ ಕೂಡಿದ್ದು ಸಸ್ಯಗಳಿಗೆ ಹಾಕಿದರೆ ಉತ್ತಮವಾಗಿ ಬೆಳೆಯಲಿವೆ. ಅಲ್ಲದೇ ಪ್ರಾಣಿಗಳಿಗೆ ಈ ನೀರನ್ನು ಕುಡಿಸಿದರೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.

    ಇದೀಗ ಪ್ರಾಯೋಗಿಕವಾಗಿ 9 ಲಕ್ಷ ವೆಚ್ಚದ ಈ ಯಂತ್ರವನ್ನು ರಾಮನಗರದ ಇಂದಿರಾ ಕ್ಯಾಂಟೀನ್‍ನಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲೂ ಸಹ ಅಳವಡಿಸುವ ಪ್ರಯತ್ನವನ್ನು ನಡೆಸಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಎತ್ತುಗಳಿಲ್ಲದೇ 2 ಎಕರೆ ಕಳೆ ತೆಗೆದ ರೈತ

    ಎತ್ತುಗಳಿಲ್ಲದೇ 2 ಎಕರೆ ಕಳೆ ತೆಗೆದ ರೈತ

    ಕೊಪ್ಪಳ: ಸಾಮಾನ್ಯವಾಗಿ ಹೊಲಗಳಲ್ಲಿ ಕಳೆ ತಗೆಯಲು ಎತ್ತುಗಳು ಬೇಕು. ಆದರೆ ರೈತರೊಬ್ಬರು ಎತ್ತುಗಳಿಲ್ಲದೆ ಬೆಳೆಗಳ ಮಧ್ಯೆ ಬೆಳೆದ ಕಳೆಯನ್ನ ತೆಗೆದಿದ್ದಾರೆ

    ಹೌದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ರೈತ ಶಿವಾನಂದ ಕರೆಯಣ್ಣವರ ಎತ್ತುಗಳಿಲ್ಲದೆ ಕಳೆ ತೆಗೆದಿದ್ದಾರೆ. ಕೃಷಿ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿರುವ ಕೈ ಚಾಲಿತ ಯಂತ್ರದಲ್ಲಿ ಶಿವಾನಂದ ತನ್ನ ಹೊಲದಲ್ಲಿ ಬೆಳೆದ ಕಳೆ ತಗೆಯಲು ಮುಂದಾಗಿದ್ದಾರೆ. ಎತ್ತುಗಳಿಲ್ಲದ ಕಾರಣ ಬಾಡಿಗೆ ಎತ್ತು ತಂದು ಕಳೆ ತಗೆಯಲು ಹಣವಿರದ ಕಾರಣ ಕೈ ಚಾಲಿತ ಯಂತ್ರದ ಮೊರೆ ಹೋಗಿದ್ದರು.

    ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಕಳೆ(ಕಸ) ತಗೆಯಲು ಎತ್ತುಗಳಿಗೆ 500 ರಿಂದ 1000 ಬಾಡಿಗೆ ನೀಡಬೇಕಾಗುತ್ತದೆ. ಬಾಡಿಗೆ ನೀಡಿದರೂ ಎತ್ತುಗಳು ಸರಿಯಾದ ಸಮಯಕ್ಕೆ ಸಿಗೋದಿಲ್ಲ. ಇದರಿಂದ ರೋಸಿಗೋದ ಶಿವಾನಂದ ಕೃಷಿ ಸಂಪರ್ಕ ಕೇಂದ್ರದ ಸಹಾಯ ಕೇಳಿದ್ದಾರೆ.

    ಅಧಿಕಾರಿಗಳು ಕೈ ಚಾಲಿತ ಯಂತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಎತ್ತುಗಳ ಬದಲಿಗೆ ಇದೆ ಒಳ್ಳೆಯದು ಅಂದುಕೊಂಡ ರೈತ ಶಿವಾನಂದ ಇದೀಗ ಕೈ ಚಾಲಿತ ಯಂತ್ರದಿಂದ ಕಳೆ ತೆಗೆದಿದ್ದಾರೆ. ಎತ್ತುಗಳಿಂದ ದಿನವಿಡಿ ಕೆಲಸ ಮಾಡಿದರೂ ಒಂದು ಎಕರೆ ಕಳೆ ತಗೆಯಲು ಸಾಧ್ಯವಿಲ್ಲ. ಆದರೆ ಈ ಯಂತ್ರದಿಂದ ಒಂದು ದಿನಕ್ಕೆ ಎರಡರಿಂದ ಮೂರು ಎಕರೆ ಕಳೆ ತಗೆಯಬಹುದು ಎಂದು ಶಿವಾನಂದ ಹೇಳಿದ್ದಾರೆ.

  • ಬಿಬಿಎಂಪಿ ಜಲ್ಲಿ ಸಮಮಾಡುವ ಯಂತ್ರಕ್ಕೆ ಬಾಲಕ ಬಲಿ!

    ಬಿಬಿಎಂಪಿ ಜಲ್ಲಿ ಸಮಮಾಡುವ ಯಂತ್ರಕ್ಕೆ ಬಾಲಕ ಬಲಿ!

    ಬೆಂಗಳೂರು: ಬಿಬಿಎಂಪಿಯ ಜಲ್ಲಿಕಲ್ಲು ಸಮಮಾಡುವ ಯಂತ್ರ ಹರಿದು ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೆಮ್ಮಿಗೆಪುರ ವಾರ್ಡ್ 198 ರಲ್ಲಿನ ರಸ್ತೆಗೆ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ 11 ವರ್ಷದ ಮನು ಎಂಬ ಬಾಲಕ ಸೈಕಲ್ ತುಳಿಯುತ್ತಾ ಬಂದಿದ್ದಾನೆ. ಆದ್ರೆ ಇದನ್ನು ಗಮನಿಸದ ಚಾಲಕ, ಬಾಲಕನ ಮೇಲೆ ಜಲ್ಲಿ ಸಮ ಮಾಡುವ ಯಂತ್ರವನ್ನ ಹರಿಸಿದ್ದಾನೆ.

    ಪರಿಣಾಮ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸುಬ್ರಹ್ಮಣ್ಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ವಿಡಿಯೋ: ಕಾರ್ಮಿಕನ ಕೈ ಯಂತ್ರಕ್ಕೆ ಸಿಲುಕಿ ನರಳಾಟ

    ವಿಡಿಯೋ: ಕಾರ್ಮಿಕನ ಕೈ ಯಂತ್ರಕ್ಕೆ ಸಿಲುಕಿ ನರಳಾಟ

    ಕೋಲಾರ: ಕಾರ್ಖಾನೆಯಲ್ಲಿ ಕಾರ್ಮಿಕನ ಕೈ ಯಂತ್ರಕ್ಕೆ ಸಿಲುಕಿ ನರಳಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

    ಕೋಲಾರ ಜಿಲ್ಲೆ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದ್ವಿಚಕ್ರ ವಾಹನದ ಬಿಡಿಭಾಗಗಳನ್ನು ತಯಾರಿಸುವ ಸಾಯಿನಾಥ ಇಂಡಸ್ಟ್ರೀಸ್‍ನಲ್ಲಿ ಘಟನೆ ನಡೆದಿದೆ. ಆದ್ರೆ ಇದರ ಬಗ್ಗೆ ಎಲ್ಲೂ ಬಾಯಿ ಬಿಡದಂತೆ ಕಾರ್ಖಾನೆ ನೌಕರರಿಗೆ ಮಾಲೀಕರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

    ಬಿಹಾರ ಮೂಲದ ಈ ಕಾರ್ಮಿಕನಿಗೆ ಗಾಯವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=ncV-kx-M9dQ&feature=youtu.be