Tag: lorry drivers

  • ಬೆಲೆ ಏರಿಕೆ ವಿರುದ್ಧ ಸಮರ – ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ

    ಬೆಲೆ ಏರಿಕೆ ವಿರುದ್ಧ ಸಮರ – ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ

    ಬೆಂಗಳೂರು: ಡೀಸೆಲ್ ದರ ಏರಿಕೆ (Diesel Price Hike) ಖಂಡಿಸಿ ಏಪ್ರಿಲ್‌ 14ರ ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಸಂಘ (Lorry Owners Association) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ರಾಜ್ಯಾದ್ಯಂತ 6 ಲಕ್ಷ ಲಾರಿಗಳ ಸಂಚಾರ ಬಂದ್‌ ಆಗಲಿದ್ದು, ರಾಜ್ಯಕ್ಕೆ ಬರುವ ಮತ್ತು ಹೊರರಾಜ್ಯಗಳಿಗೆ ತೆರಳುವ ಸರಕು ಸಾಗಣೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.

    ಹೌದು. ಪ್ರಸ್ತುತ ಡಿಸೇಲ್ ದರ ಹೆಚ್ಚಳ, ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ಹಣ ವಸೂಲಿ, ಆರ್‌ಟಿಓ ಬಾರ್ಡರ್ ಚೆಕ್ ಪೋಸ್ಟ್, FC ಶುಲ್ಕ ಹೆಚ್ಚಿಸಿರುವುದು, ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನೋ ಎಂಟ್ರಿ, ಚಾಲಕರ ಮೇಲೆ ಹಲ್ಲೆ ಹೀಗೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆ‌ರ್.ಷಣ್ಮುಖಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ – ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

    ಆಲ್ ಇಂಡಿಯಾ ಮೋಟರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್‌ ದೆಹಲಿ, ಸೌಥ್ ಇಂಡಿಯಾ ಮೋಟರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ಕರ್ನಾಟಕ ಗೂಡ್ಸ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ಏರ್ ಪೋರ್ಟ್ ಟ್ಯಾಕ್ಸಿ ಅಸೋಸಿಯೇಷನ್, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್, ಜಲ್ಲಿ ಕಲ್ಲು, ಮರಳು ಲಾರಿ ಅಸೋಸಿಯೇಷನ್, ರಾಜ್ಯ ಪಡಿತರ ಆಹಾರ ಧಾನ್ಯಗಳ ಸಾಗಾಣಿಕೆದಾರರ ಸಂಘ, ಸೌಥ್ ಜೋನ್ ಲಿಪಿಜಿ ಅಸೋಸಿಯೇಷನ್, ಜಲ್ಲಿ, ಮರಳು ಸಾಗಣೆ ವಾಹನಗಳು, ಗ್ಯಾಸ್ ಟ್ಯಾಂಕ್ ಮಾಲೀಕರ ಸಂಘ ಸಹಿತ 69 ಸಂಘಟನೆಗಳು ಮುಷ್ಕರ ಬೆಂಬಲಿಸಿವೆ. ರಾಜ್ಯದಲ್ಲಿ ಸುಮಾರು 700 ಗೂಡ್ಸ್‌ ಕಚೇರಿಗಳಿದ್ದು, ಬಂದ್ ಆಗಲಿವೆ. ಈ ಬಗ್ಗೆ ಕೈಗಾರಿಕೆ, ಕಾರ್ಖಾನೆ, ಕಂಪನಿಗಳಿಗೆ ಮುಷ್ಕರದ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.

    ಡೀಸೆಲ್ ದರವನ್ನು 2024ರ ಜೂನ್‌ನಲ್ಲಿ 3 ರೂ. ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಮತ್ತೆ 2 ರೂ. ಹೆಚ್ಚಳ ಮಾಡಿದೆ. ಈ ಏರಿಕೆ ಕೈಬಿಡುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಅನ್ಯಧರ್ಮೀಯ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು – 6 ಆರೋಪಿಗಳು ಅರೆಸ್ಟ್

    ರಾಜ್ಯದಲ್ಲಿ 18 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲಿಯೂ ರಾಜ್ಯ ಹೆದ್ದಾರಿಗೆ ಟೋಲ್‌ ಇಲ್ಲ. ಹಾಗಾಗಿ ರಾಜ್ಯದಲ್ಲಿ ಟೋಲ್ ಸಂಗ್ರಹ ಕೈಬಿಡಬೇಕು. ಗಡಿ ಚೆಕ್‌ಪೋಸ್ಟ್‌ಗಳನ್ನು ರದ್ದುಮಾಡಬೇಕು. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ನವೀಕರಣಕ್ಕೆ ಶುಲ್ಕವನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಿರುವುದು, ಕೇವಲ 5 ಗಂಟೆ ಅವಕಾಶ ನೀಡಿರುವುದನ್ನು ತೆಗೆದುಹಾಕಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದ್ದಾರೆ.

    ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಯ?
    ಸದ್ಯ ರಾಜ್ಯಾದ್ಯಂತ 6 ಲಕ್ಷ ಸರಕು ಲಾರಿಗಳ ಕಾರ್ಯಾಚರಣೆ ಬಂದ್‌ ಆಗುವುದರಿಂದ ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಏರ್ ಪೋರ್ಟ್ ಟ್ಯಾಕ್ಸಿ, ಟೂರಿಸ್ಟ್ ಟ್ಯಾಕ್ಸಿ ಸಿಗೋದು ಸಹ ಅನುಮಾನವಿದೆ. ಇದರಿಂದ ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆ, ಎಲ್‌ಪಿಜಿ ಸಿಲಿಂಡರ್‌ ಸರಬರಾಜು ಹಾಗೂ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಡಿಸೇಲ್ ವ್ಯತ್ಯಯ ಸಾಧ್ಯತೆ ಇದೆ ಎಂದು ಸಹ ಲಾರಿ ಮಾಲೀಕರು ತಿಳಿಸಿದ್ದಾರೆ. ಇದನ್ನೂ ಓದಿ: 2,000 ಕೋಟಿ ಅಕ್ರಮ, 400 ಕೋಟಿ ಕಮಿಷನ್ ಆರೋಪ – ಡಿಕೆಶಿ, ಡಿಕೆಸು ವಿರುದ್ಧ ರಾಜ್ಯಪಾಲರಿಗೆ ಮುನಿರತ್ನ ದೂರು

  • ಏ.15 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – 9 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಬಂದ್‌

    ಏ.15 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – 9 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಬಂದ್‌

    – ಏರ್‌ಪೋರ್ಟ್‌ ಟ್ಯಾಕ್ಸಿ, ಗೂಡ್ಸ್ ವಾಹನಗಳೂ ಬಂದ್

    ಬೆಂಗಳೂರು: ಡೀಸೆಲ್ ದರ ಏರಿಕೆ (Diesel Price Hike) ಖಂಡಿಸಿ ಇದೇ ಏಪ್ರಿಲ್ 15 ರಿಂದ ಲಾರಿ ಮಾಲೀಕರ ಸಂಘ (Lorry Owners Association) ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಂದು ರಾಜ್ಯಾದ್ಯಂತ ಎಲ್ಲಾ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಗೂಡ್ಸ್ ವಾಹನಗಳು, ಏರ್‌ಪೋರ್ಟ್‌ ಟ್ಯಾಕ್ಸಿಗಳೂ (Airport Taxi) ಸಹ ಸಂಪೂರ್ಣ ಬಂದ್‌ ಆಗಲಿದೆ.

    ಬಸ್‌ ಟಿಕೆಟ್‌, ಮೆಟ್ರೋ, ಹಾಲು, ವಿದ್ಯುತ್‌ ಬಳಿಕ ಡಿಸೇಲ್‌ ದರ ಏರಿಕೆ ಮಾಡಿ ಕರ್ನಾಟಕ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಲಾರಿ ಮಾಲೀಕರ ಸಂಘ ಡೀಸೆಲ್ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ. ಈ ಸಂಬಂಧ ಚಾಮರಾಜಪೇಟೆಯ ಖಾಸಗಿ ಹೋಟೆಲ್‌ನಲ್ಲಿಂದು (Private Hotel) ವಾಣಿಜ್ಯ ವಾಹನಗಳ ಮಾಲೀಕರ ಸಂಘ ಸಭೆ ನಡೆಸಿದ್ದು, ಸಭೆಯ ಬಳಿಕ ಹೋರಾಟಕ್ಕೆ ಕರೆ ನೀಡಿದೆ. ಇದೇ ಏಪ್ರಿಲ್‌ 15ರ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

    ಈ ಕುರಿತು ಮಾತನಾಡಿರುವ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ, ಡಿಸೇಲ್ ಬೆಲೆ 7 ತಿಂಗಳಲ್ಲಿ 5 ರೂ ಏರಿಕೆಯಾಗಿದೆ. ಇದು ಲಾರಿ ಸೇರಿದಂತೆ ವಾಣಿಜ್ಯ ವಾಹನಗಳ ಮಾಲೀಕರು ನೇಣು ಹಾಕಿಕೊಳ್ಳುವ ಸ್ಥಿತಿ ಬಂದಿದೆ. ಏನಾದರೂ ಫ್ರೀ ಕೊಡಲಿ, ಆದರೆ ಹೊಟ್ಟೆ ಮೇಲೆ ಹೊಡೆದು ದರ ಏರಿಕೆ ಮಾಡೋದು ಸರಿಯಲ್ಲ. ಫಿಟ್ನೆಸ್ ಫೀಸ್, ಬಾರ್ಡರ್ ಚೆಕ್ ಪೋಸ್ಟ್, ಡಿಸೇಲ್ ದರ ಸೇರಿದಂತೆ ಪ್ರಮುಖ ಬೇಡಿಕೆಗಳನ್ನ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. 14ನೇ ತಾರೀಖು ಅಂಬೇಡ್ಕರ್ ಜಯಂತಿ ರಾತ್ರಿಯಿಂದಲೇ ಹೋರಾಟ ಶುರು ಮಾಡಲಿದ್ದೇವೆ. ಬೇಡಿಕೆ ಈಡೇರುವವರೆಗೆ ಕರ್ನಾಟಕದ ಒಳಗೆ ಯಾರೂ ಬರಲ್ಲ. ಇದಕ್ಕೆ ಪೆಟ್ರೋಲ್ ಮಾಲೀಕರು ಬೆಂಬಲಕೊಟ್ಟಿದ್ದಾರೆ, ಏರ್ಪೋಟ್ ಟ್ಯಾಕ್ಸಿ, ಜಲ್ಲಿ ಮರಳು, ಸೇರಿದಂತೆ ಗೂಡ್ಸ್ ವಾಹನಗಳು ಬಂದ್ ಆಗಲಿವೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳ 9 ಲಕ್ಷ ವಾಹನಗಳು ಸ್ಥಗಿತವಾಗಲಿವೆ ಎಂದು ತಿಳಿಸಿದ್ದಾರೆ.

    ಏಪ್ರಿಲ್‌ 14ರ ವರೆಗೆ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ, 14ರ ರಾತ್ರಿಯಿಂದಲೇ ಹೋರಾಟ ಶುರು ಮಾಡಲಿದ್ದೇವೆ. ಹೋರಾಟ ಶುರುವಾದ ಬಳಿಕ ಯಾವುದೇ ರಾಜ್ಯದಿಂದ ಕರ್ನಾಟಕ ಒಳಗೆ ವಾಣಿಜ್ಯ ವಾಹನ ಸಂಚಾರ ಮಾಡಲ್ಲ. ಚೆಕ್ ಪೋಸ್ಟ್‌ಗಳಲ್ಲಿ ಖುದ್ದು ನಾವುಗಳೇ ನಿಲ್ಲುತ್ತೇವೆ. ಯಾವುದೇ ವಾಣಿಜ್ಯ ವಾಹನಗಳನ್ನ ಒಳಗಡೆ ಬಿಡದಂತೆ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಯಾವೆಲ್ಲಾ ವಾಹನಗಳು ಬಂದ್‌?
    ಏಪ್ರಿಲ್‌ 15ರಿಂದ ಏರ್ ಪೋರ್ಟ್ ಟ್ಯಾಕ್ಸಿ, ಜಲ್ಲಿ ಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ 6 ಲಕ್ಷ ಲಾರಿಗಳ ಸಂಚಾರ ಬಂದ್‌ ಆಗಲಿದೆ. ಜೊತೆಗೆ ಅಕ್ಕಿ ಲೊಡ್, ಗೂಡ್ಸ್, ಪೆಟ್ರೋಲ್ ಡಿಸೇಲ್ ಲಾರಿಗಳನ್ನೂ ಬಂದ್‌ ಮಾಡಲಾಗುತ್ತದೆ. ಇದಕ್ಕೆ ಚಾಲಕರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳ 9 ಲಕ್ಷ ವಾಹನಗಳ ಸಂಚಾರ ಸ್ಥಗಿತವಾಗಲಿವೆ ಎಂದು ತಿಳಿಸಿದ್ದಾರೆ.

  • ಲಾಕ್‍ಡೌನ್ ಪರಿವೇ ಇಲ್ಲದೇ ಬೀದಿಯಲ್ಲಿ ಹೊಡೆದಾಡಿಕೊಂಡ ಲಾರಿ ಚಾಲಕರು

    ಲಾಕ್‍ಡೌನ್ ಪರಿವೇ ಇಲ್ಲದೇ ಬೀದಿಯಲ್ಲಿ ಹೊಡೆದಾಡಿಕೊಂಡ ಲಾರಿ ಚಾಲಕರು

    – ವಾಹನ ಬಿಟ್ಟು ಚಾಲಕರು ಪರಾರಿ

    ಕಾರವಾರ: ಲಾಕ್‍ಡೌನ್ ನಡುವೆಯೂ ಅನುಮತಿಯಿಲ್ಲದೇ ಲಾರಿ ಚಲಾಯಿಸಿ ನಂತರ ಅದರ ಪರಿವೇ ಇಲ್ಲದೇ ಬೀದಿಯಲ್ಲಿ ನಿಂತುಕೊಂಡು ಚಾಲಕರು ಹೊಡೆದಾಡಿಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.

    ಇಡೀ ರಾಜ್ಯದಲ್ಲಿ ಲಾಕ್‍ಡೌನ್ ಇದೆ. ವಾಹನ ಸಂಚಾರಕ್ಕೂ ನಿಷೇಧವಿದೆ. ಆದರೆ ಇದರ ನಡುವೆಯೂ ಹಾವೇರಿ ಇಂದ ಕಾರವಾರ ನಗರಕ್ಕೆ ಯಾವುದೇ ಪರವಾನಿಗೆ ಇಲ್ಲದೇ ಕಾಲಿ ಟಾರ್ ಲಾರಿಯನ್ನು ಚಲಾಯಿಸಿಕೊಂಡು ಬಂದ ಇಬ್ಬರು ಚಾಲಕರು, ನಗರ ಪ್ರವೇಶಿಸುವ ಕುರಿತು ಒಬ್ಬರಿಗೊಬ್ಬರು ಹೆದ್ದಾರಿಯಲ್ಲೇ ಬಡಿದಾಡಿಕೊಂಡ ಘಟನೆ ಕಾರವಾರ ನಗರದ ಬೈತಖೋಲ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

    ಲಾರಿಗೆ ನಗರ ಪ್ರವೇಶಿಸಲು ಯಾವುದೇ ಪರವಾನಿಗೆ ಸಹ ಇಲ್ಲ. ಇದಲ್ಲದೇ ಮಾಸ್ಕ್ ಕೂಡ ಹಾಕಿಕೊಳ್ಳದ ಇಬ್ಬರು ಚಾಲಕರು ನಗರ ಪ್ರವೇಶಿಸುತ್ತಿದ್ದರು. ಈ ವೇಳೆ ಓರ್ವ ಚಾಲಕ ಲಾರಿ ಚಲಾಯಿಸುತಿದ್ದ ನಾಸಿರ್ ನಿಗೆ ಗಾಡಿ ನಿಲ್ಲಿಸಲು ಹೇಳಿದ್ದಾನೆ. ಆದರೆ ಆತ ಒಪ್ಪದೇ ಚಲಾಯಿಸಿದ್ದು, ಈ ವೇಳೆ ಇಬ್ಬರೂ ಹೆದ್ದಾರಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಘಟನೆ ಕುರಿತು ಕಾರವಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಈ ವೇಳೆ ಇಬ್ಬರು ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

  • ಅಗತ್ಯ ವಸ್ತು ಸಾಗಿಸುವ ವಾಹನ ಚಾಲಕರ ಮೇಲೆ ಪೊಲೀಸರಿಂದ ಹಲ್ಲೆ

    ಅಗತ್ಯ ವಸ್ತು ಸಾಗಿಸುವ ವಾಹನ ಚಾಲಕರ ಮೇಲೆ ಪೊಲೀಸರಿಂದ ಹಲ್ಲೆ

    – ರಕ್ಷಣೆಗಾಗಿ ಜಿಲ್ಲಾಧಿಕಾರಿಗೆ ಮನವಿ

    ಧಾರವಾಡ: ನೈರುತ್ಯ ರೇಲ್ವೆ ವಲಯದಿಂದ ಪರವಾನಿಗೆ ಪಡೆದು ಅಗತ್ಯ ವಸ್ತುಗಳ ಸಾಮಾಗ್ರಿ ಸಾಗಿಸುತ್ತಿದ್ದ ವಾಹನಗಳ ಚಾಲಕರಿಗೆ ಪೊಲೀಸರು ಮನಸೋ ಇಚ್ಛೆ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ನವಲೂರು ಬಳಿ ಇರುವ ರೇಲ್ವೆ ಗೂಡ್ಸ್ ಶೆಡ್‍ಗೆ ಪ್ರತಿದಿನ ಬರುವ ಅಗತ್ಯ ವಸ್ತುಗಳಾದ ಅಕ್ಕಿ, ಗೋಧಿ ಮತ್ತು ರಸಗೊಬ್ಬರಗಳನ್ನು ಸಾಗಿಸಲು 20ಕ್ಕೂ ಹೆಚ್ಚು ಲಾರಿಗಳಿಗೆ ಅವಕಾಶ ನೀಡಲಾಗಿತ್ತು. ಲಾರಿ ಚಾಲಕರು ಅವರಿಗೆ ನೀಡಿರುವ ಅಧಿಕೃತ ಪಾಸಗಳನ್ನು ಹಾಕಿಕೊಂಡು ಕ್ರೂಸರ್‍ನಲ್ಲಿ ಲಾರಿ ಬಳಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

    ಹತ್ತಕ್ಕೂ ಹೆಚ್ಚು ಲಾರಿ ಚಾಲಕರನ್ನು ತಡೆದ ಪೊಲೀಸರು, ಪಾಸ್ ತೋರಿಸಿದ್ರೂ ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಥಳಿತಕ್ಕೊಳಗಾದ ಲಾರಿ ಚಾಲಕರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸದ್ದಾರೆ. ಅಲ್ಲದೆ ಅಗತ್ಯ ವಸ್ತುಗಳ ಸಾಗಾಟದ ಲಾರಿ ಚಾಲಕರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

  • ಲೋಕೋಪಯೋಗಿ ಇಲಾಖೆ ಜೊತೆ ಮಾತುಕತೆ ಯಶಸ್ವಿ- ಟ್ಯಾಂಕರ್ ಮಾಲೀಕರ ಮುಷ್ಕರ ಅಂತ್ಯ

    ಲೋಕೋಪಯೋಗಿ ಇಲಾಖೆ ಜೊತೆ ಮಾತುಕತೆ ಯಶಸ್ವಿ- ಟ್ಯಾಂಕರ್ ಮಾಲೀಕರ ಮುಷ್ಕರ ಅಂತ್ಯ

    ಬೆಂಗಳೂರು: ಪೆಟ್ರೋಲ್ ಪೂರೈಕೆ ಮಾಡೋ ಲಾರಿ ನೌಕರರು ಮುಷ್ಕರ ಕೈಗೊಂಡ ಕುರಿತಂತೆ ತೈಲ ಕಂಪನಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಸಫಲವಾಗಿದೆ. ಹೀಗಾಗಿ ಸದ್ಯ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ಕೈ ಬಿಟ್ಟಿದ್ದಾರೆ.

    ಮಾತುಕತೆಯಲ್ಲಿ ಅಧಿಕಾರಿಗಳು ಹದಗೆಟ್ಟ ರಸ್ತೆ ರಿಪೇರಿ ಮಾಡುವ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮುಷ್ಕರ ಅಂತ್ಯವಾಗಿದ್ದು, ವಾಹನ ಸವಾರರಿಗೆ ರಿಲೀಫ್ ಸಿಕ್ಕಿದೆ.

    ಮುಷ್ಕರ ಯಾಕೆ?: ನಗರದ ಹೊಸಕೋಟೆ ಬಳಿಯ ದೇವನಗುಂಡಿ ತೈಲ ಘಟಕ ಹಾಗೂ ಟರ್ಮಿನಲ್ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವಂತೆ ಲಾರಿ ಚಾಲಕರು ಕಳೆದ ಎರಡು ವರ್ಷಗಳ ಹಿಂದೆಯೂ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ತೈಲ ಪೂರೈಕೆ ಸಂಸ್ಥೆಗಳು ಚಾಲಕರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಟ್ಯಾಂಕರ್ ಪಲ್ಟಿಯಾಗಿ ಚಾಲಕರೊಬ್ಬರು ಮೃತಪಟ್ಟಿದ್ದರು. ಇದರಿಂದ ಅನಿವಾರ್ಯವಾಗಿ ಚಾಲಕರು ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು.

    ಕಳೆದ ಬಾರಿ ಪ್ರತಿಭಟನೆ ನಡೆಸಿದ ವೇಳೆ ರಸ್ತೆ ದುರಸ್ಥಿ ಕಾರ್ಯ ನಡೆಸುವ ಭರವಸೆ ನೀಡಿದ್ದ ತೈಲ ಪೂರೈಕೆ ಸಂಸ್ಥೆಗಳು 500 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದವು. ಆದರೆ ಹಣ ಇದ್ದರು ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿರಲಿಲ್ಲ.


    ಪ್ರತಿಭಟನೆ ನಡೆಸುವ ಮೊದಲು ಟ್ಯಾಂಕರ್ ಚಾಲಕರ ಮನವೊಲಿಸಲು ತೈಲ ಕಂಪನಿಗಳು ಸಭೆ ನಡೆಸಿದ್ದವು. ಆದರೆ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭವಾಗುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾನಿರತರು ತಿಳಿಸಿದ್ದರು. ಹೀಗಾಗಿ ದೇವನಗುಂದಿ ಸಮೀಪದ ತೈಲ ಘಟಕದ ಬಳಿ 1500ಕ್ಕೂ ಹೆಚ್ಚು ಟ್ಯಾಂಕರ್ ಚಾಲಕರು ಪ್ರತಿಭಟನೆ ಕೈಗೊಂಡಿದ್ದರು. ಈ ಹಿನ್ನೆಲೆಯಂದಾಗಿ ಇಂದು ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ತೈಲ ಪೂರೈಕೆ ಸ್ಥಗಿತವಾಗಲಿದೆ ಎಂಬುದಾಗಿ ವರದಿಯಾಗಿತ್ತು.