Tag: lokayuktha

  • ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?

    ಲೋಕಾಯುಕ್ತರಿಗೆ ಚಾಕು ಇರಿತ ಹೇಗಾಯ್ತು? ಇರಿದ ಆರೋಪಿ ಯಾರು?

    ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ಆರೋಪಿಯಿಂದ ಇರಿತಕ್ಕೆ ಒಳಗಾದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ತುಮಕೂರು ಮೂಲದ ತೇಜ ರಾಜ ಶರ್ಮಾ ಎಂಬಾತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದಿದ್ದ. ಕೂಡಲೇ ವಿಶ್ವನಾಥ್ ಶೆಟ್ಟಿ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ  ಪಾರಾಗಿದ್ದಾರೆ.

    ಘಟನೆ ಹೇಗಾಯ್ತು?
    ತುಮಕೂರಿನ ಎಸ್‍ಎಸ್‍ಪುರಂ ನಿವಾಸಿಯಾಗಿರುವ ತೇಜ ರಾಜ ಶರ್ಮಾ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ವಾಸಂತಿ ಉಪ್ಪಾರ ಹಾಗೂ ಬಾಲಮಂದಿರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ಕೊಟ್ಟಿದ್ದನು. ಅಲ್ಲದೇ ಬಾಲಮಂದಿರದಲ್ಲಿ ಬಟ್ಟೆ ಖರೀದಿಯಲ್ಲಿ ಅವ್ಯವಹಾರ ಸೇರಿದಂತೆ ಹಲವು ಹಗರಣ ವಿರುದ್ಧ ದೂರು ನೀಡಿದ್ದನು. ಅರ್ಜಿ ಲೋಕಾಯುಕ್ತದಲ್ಲಿ ವಜಾಗೊಂಡಿತ್ತು. ಈ ಅರ್ಜಿಯ ಬಗ್ಗೆ ಇಂದು ಮಧ್ಯಾಹ್ನ 12.45ಕ್ಕೆ ಆರೋಪಿ ಲೋಕಾಯುಕ್ತ ಕಚೇರಿಗೆ ಬಂದು ರಿಜಿಸ್ಟ್ರಾರ್ ನಲ್ಲಿ ಸಹಿ ಹಾಕಿ ಲೋಕಾಯುಕ್ತರನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾನೆ. ಮಧ್ಯಾಹ್ನ 1.30ರ ವೇಳೆಗೆ ಲೋಕಾಯುಕ್ತರ ಭೇಟಿಗೆ ಅನುಮತಿ ಸಿಕ್ಕಿದೆ.

    ಕೊಠಡಿಯ ಹೊರಗಡೆ ಇದ್ದ ಪೊಲೀಸರು ತೇಜ ರಾಜ ಶರ್ಮಾನನ್ನು ಒಳಗಡೆ ಬಿಟ್ಟಿದ್ದಾರೆ. ಒಳಗಡೆ ಬಿಟ್ಟ ನಂತರ ಲೋಕಾಯುಕ್ತರು ಮತ್ತು ತೇಜ ರಾಜನ ನಡುವೆ ಏನು ಮಾತುಕತೆ ನಡೆದಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಮಧ್ಯಾಹ್ನ 1.45ರ ವೇಳೆಗೆ ಲೋಕಾಯಕ್ತರಿಗೆ ಆರೋಪಿ ಮೂರು ಬಾರಿ ಚಾಕು ಇರಿದಿದ್ದಾನೆ.

    ಕಿಬ್ಬೊಟ್ಟೆಗೆ 3 ಬಾರಿ ಚಾಕುವಿನಿಂದ ಇರಿದ ಪರಿಣಾಮ ಚಾಕುವೇ ಮುರಿದಿದೆ. ಘಟನೆಯಿಂದಾಗಿ ಲೋಕಾಯುಕ್ತರು ಸ್ಥಳದಲ್ಲೇ ಕುಸಿದು, ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಕೂಡಲೇ ವಿಧಾನ ಸೌಧ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ನ್ಯಾಯಮೂರ್ತಿಗಳನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇತ್ತ ಚಾಕುವಿನಿಂದ ಇರಿದ ಆರೋಪಿ ತೇಜರಾಜ ಶರ್ಮಾನನ್ನು ವಿಧಾನಸೌಧ ಠಾಣೆಯ ಪೊಲೀಸರು ಕೂಡಲೇ ಬಂಧಿಸಿದ್ದಾರೆ.

    ಲೋಕಾಯುಕ್ತ ಕಚೇರಿಯಲ್ಲಿ ಭದ್ರತಾ ಲೋಪವಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಯಾವುದೇ ಒಂದು ಕಚೇರಿಯೊಳಗೆ ವ್ಯಕ್ತಿ ಪ್ರವೇಶ ಮಾಡುವುದಕ್ಕೂ ಮುಂಚೆ ತಪಾಸಣೆ ಮಾಡಲಾಗುತ್ತದೆ. ಅದರಲ್ಲೂ ಸರ್ಕಾರಿ ಕಚೇರಿ ಪ್ರವೇಶಕ್ಕೂ ಮುನ್ನ ಪ್ರವೇಶದ್ವಾರದಲ್ಲಿ ಮೆಟನ್ ಸ್ಕ್ಯಾನರ್ ಅಳವಡಿಸಲಾಗುತ್ತದೆ. ಆದರೆ ಇಲ್ಲಿ ಇರುವ ತಪಸಣಾ ಯಂತ್ರ ಕೆಟ್ಟೊಗಿದ್ದು, ಅದನ್ನು ಸರಿಪಡಿಸುವ ಯತ್ನವಾಗಿಲ್ಲ. ಹೀಗಾಗಿ ಆರೋಪಿ ಈ ಕೃತ್ಯ ಎಸಗಲು ಸಾಧ್ಯವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ತುಮಕೂರು ಎಂ.ಜಿ ರಸ್ತೆಯ ನಿವಾಸಿ ತೇಜ್ ರಾಜ್ ಶರ್ಮಾ ಕರುನಾಡು ಸೇನೆಯ ಸದಸ್ಯನಾಗಿದ್ದ ಎನ್ನುವ ವಿವರ ಈಗ ಲಭ್ಯವಾಗಿದೆ.

    ಲೋಕಾಯುಕ್ತರ ಜೊತೆ ಒಟ್ಟು 5 ನಿಮಿಷ ಮಾತುಕತೆ ನಡೆದಿದ್ದು, ಈ ವೇಳೆ ತಾನು ಕೊಟ್ಟ ದೂರಗಳು ಬಗ್ಗೆ ಮಾತನಾಡಿದ್ದಾನೆ. ಸಾಕಷ್ಟು ಸಾಕ್ಷಿ ಒದಗಿಸಿದ್ದರೂ ದೂರನ್ನು ವಜಾ ಮಾಡಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಾನೆ. ಎಲ್ಲ ಪ್ರಶ್ನೆಗಳಿಗೆ ವಿಶ್ವನಾಥ್ ಶೆಟ್ಟಿ ಅವರು ನಗುತ್ತಾ ಉತ್ತರ ನೀಡಿದ್ದಾರೆ. ಎಷ್ಟೇ ದೂರು ಕೊಟ್ಟರೂ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸಿಟ್ಟಾಗಿ ಚಾಕು ಇರಿದಿದ್ದಾನೆ ಎಂದು ಲೋಕಾಯುಕ್ತ ಕಚೇರಿ ಸಿಬ್ಬಂದಿಯೊಬ್ಬರು ಹೇಳಿಕೆ ನೀಡಿದ್ದಾರೆ.

  • ಇದು ವಿಪರ್ಯಾಸವೇ ಸರಿ: ಸಂತೋಷ್ ಹೆಗ್ಡೆ

    ಇದು ವಿಪರ್ಯಾಸವೇ ಸರಿ: ಸಂತೋಷ್ ಹೆಗ್ಡೆ

    ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

    ಪ್ರಕರಣ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲೋಕಾಯುಕ್ತ ಕಚೇರಿಗೆ ಒಬ್ಬ ವ್ಯಕ್ತಿ ಚಾಕು ಹಿಡಿದುಕೊಂಡು ಹೋಗಿದ್ದಾನೆಂದರೆ ಅಲ್ಲಿನ ಭದ್ರತಾ ವ್ಯವಸ್ಥೆ ಸರಿಯಲ್ಲ ಎಂದರ್ಥ ಅಂತ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ತಪಾಸಣೆ ಮಾಡಿಯೇ ಮಾಡುತ್ತಾರೆ. ಅಂತದ್ದರಲ್ಲಿ ಒಂದು ಲೋಕಾಯುಕ್ತ ಕಚೇರಿಗೆ ಬರುವಾಗ ವ್ಯಕ್ತಿಯೋರ್ವ ಚಾಕು ಹಿಡಿದುಕೊಂಡು ಬರುತ್ತಾನೆ ಎಂದರೆ ಇದು ವಿಪರ್ಯಾಸವೇ ಸರಿ ಅಂತ ಅವರು ಹೇಳಿದ್ರು.  

    ಏನಿದು ಘಟನೆ?: ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ನ್ಯಾ. ವಿಶ್ವನಾಥ್ ಶೆಟ್ಟಿಯವರು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ತೇಜ ರಾಜ ಶರ್ಮಾ ಎಂಬಾತ ಏಕಾಏಕಿ ಕಚೇರಿಗೆ ನುಗಿ ಲೋಕಾಯುಕ್ತರ ಕಿಬ್ಬೊಟ್ಟೆಗೆ ಮೂರು ಬಾರಿ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಲೋಕಾಯುಕ್ತ ಕೂಡಲೇ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶ್ವನಾಥ್ ಶೆಟ್ಟಿ ಅವರನ್ನ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

    ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಆಸ್ಪತ್ರೆಗೆ ದೌಡಾಯಿಸಿದ್ದು, ಆರೋಗ್ಯ ವಿಚಾರಿಸುತ್ತಿದ್ದಾರೆ.

  • ಆರೋಪಿಯೂ ಇವರೇ, ವಿಚಾರಣಾಧಿಕಾರಿಯೂ ಇವರೇ- 8 ಕೇಸ್‍ಗಳಲ್ಲಿ 2 ಕೇಸ್ ಖುಲಾಸೆ

    ಆರೋಪಿಯೂ ಇವರೇ, ವಿಚಾರಣಾಧಿಕಾರಿಯೂ ಇವರೇ- 8 ಕೇಸ್‍ಗಳಲ್ಲಿ 2 ಕೇಸ್ ಖುಲಾಸೆ

    ಬೆಂಗಳೂರು: ತಪ್ಪು ಮಾಡಿದವರು ಆರೋಪಿ ಸ್ಥಾನದಲ್ಲಿದ್ರೆ, ವಿಚಾರಣೆ ಮಾಡಬೇಕಿದ್ದವರು ನ್ಯಾಯಪಾಲಕರ ಸ್ಥಾನದಲ್ಲಿ ಇರ್ತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ. ಇವರ ವಿರುದ್ಧ ಲೋಕಾಯುಕ್ತದಲ್ಲಿ 8 ಕೇಸ್ ದಾಖಲಾಗಿದ್ದು ವಿಚಾರಣೆ ಮಾಡೋದು ಕೂಡ ಇವರೇ.

    ಹೌದು. ಪ್ರಸ್ತುತ ಲೋಕಾಯುಕ್ತದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರೋ ನಾಗೇಶ್ ರೆಡ್ಡಿ ಈ ಹಿಂದೆ ರಾಜಾಜಿನಗರದ ಬಿಬಿಎಂಪಿ ಕಚೇರಿಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಈ ವೇಳೆ ಸಾಕಷ್ಟು ಅವ್ಯವಹಾರ ಮಾಡಿರೋ ಆರೋಪದ ಮೇಲೆ ನಾಗೇಶ್ ವಿರುದ್ಧ ಲೋಕಾಯುಕ್ತದಲ್ಲೇ 8 ದೂರುಗಳಿವೆ. ವಿಪರ್ಯಾಸ ಅಂದ್ರೆ ನಾಗೇಶ್ ರೆಡ್ಡಿ ಈಗ ಲೋಕಾಯುಕ್ತ ಸಂಸ್ಥೆಯಲ್ಲೇ ಸಹಾಯಕ ಎಂಜಿನಿಯರ್ ಆಗಿದ್ದಾರೆ. ತನ್ನ ಮೇಲಿನ ಕೇಸನ್ನ ತಾನೇ ವಿಚಾರಣೆ ಮಾಡಿ 2 ಕೇಸ್‍ಗಳನ್ನು ಖುಲಾಸೆಗೊಳಿಸಿದ್ದಾರೆ.

    ನಾಗೇಶ್ ರೆಡ್ಡಿ ವಿರುದ್ಧ ಲೋಕಾಯುಕ್ತ ರಿಜಿಸ್ಟಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 9 ಪತ್ರಗಳನ್ನ ಬರೆದಿದ್ದಾರೆ. ಇವರ ಸೇವೆ ನಮಗೆ ಅಗತ್ಯವಿಲ್ಲ. ನಾಗೇಶ್ ರೆಡ್ಡಿಯನ್ನ ಸೇವೆಯಿಂದ ಹಿಂಪಡೆಯಬೇಕು ಅಂತ ಮನವಿ ಮಾಡಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಆರ್‍ಟಿಐ ಕಾರ್ಯಕರ್ತ ಭಾಸ್ಕರ್ ಆರೋಪಿಸಿದ್ದಾರೆ.