Tag: Lok Sabha Election 2019

  • ಮೋದಿ ‘ನೀಚ ವ್ಯಕ್ತಿ’-ಹಳೆಯ ಹೇಳಿಕೆಯನ್ನ ಸಮರ್ಥಿಸಿಕೊಂಡ ಮಣಿಶಂಕರ್ ಅಯ್ಯರ್

    ಮೋದಿ ‘ನೀಚ ವ್ಯಕ್ತಿ’-ಹಳೆಯ ಹೇಳಿಕೆಯನ್ನ ಸಮರ್ಥಿಸಿಕೊಂಡ ಮಣಿಶಂಕರ್ ಅಯ್ಯರ್

    ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದಲ್ಲಿದೆ. ಮೇ 19ರ ಕೊನೆಯ ಸುತ್ತಿನ ಬಳಿಕ ಮೇ 23ಕ್ಕೆ ಫಲಿತಾಂಶ ಬರಲಿದೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಮೋದಿ ನೀಚ ವ್ಯಕ್ತಿ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    2017ರ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಣಿಶಂಕರ್ ಅಯ್ಯರ್, ಪ್ರಧಾನಿ ಮೋದಿ ವಿರುದ್ಧ ಹರಿಹಾಯುತ್ತಾ ಅವರೊಬ್ಬ ನೀಚ ವ್ಯಕ್ತಿ ಎಂದು ಹೇಳಿದ್ದರು. ಇದೀಗ ಲೇಖನವೊಂದರಲ್ಲಿ ಮಣಿಶಂಕರ್ ಅಯ್ಯರ್ ಅದೇ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಒಳಪಟ್ಟಿದೆ.

    2017ರಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಮಣಿಶಂಕರ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಂದೋಲನವನ್ನ ಆರಂಭಿಸಿದ್ದರಿಂದ ಕ್ಷಮೆ ಕೇಳಿ ವಿವಾದವನ್ನು ತಣ್ಣಗಾಗಿಸಿದ್ದರು. ಈಗ ಮೋದಿ ಅವರ ಸಮಾವೇಶ ಮತ್ತು ಭಾಷಣಗಳ ಕುರಿತು ಮಾತನಾಡುವಾಗ 2017ರಲ್ಲಿ ನಾನು ಪ್ರಧಾನಿ ಬಗ್ಗೆ ಹೇಳಿದ್ದನು ನೆನಪು ಮಾಡಿಕೊಳ್ಳಿ. ಅಂದು ನಾನು ಹೇಳಿದ್ದ ಮಾತುಗಳು ಇಂದು ನಿಜವಾಗಿವೆ ಅಲ್ವಾ ಎಂದು ಹೇಳಿದ್ದಾರೆ.

    ಅಯ್ಯರ್ ಹೇಳಿಕೆ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರಾ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರೀತಿಯ ರಾಜಕಾರಣ ಕುಟುಂಬದ ‘ಮಣಿ’ಯೊಂದು ಮೋದಿ ವಿರುದ್ಧದ ನೀಚ ಹೇಳಿಕೆಯ್ನು ಸಮರ್ಥಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    2017ರಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಣಿಶಂಕರ್ ಅಯ್ಯರ್ ಬಳಸಿದ ಭಾಷೆ ಸರಿಯಲ್ಲ, ಕಾಂಗ್ರೆಸ್ ಈ ಸಂಸ್ಕೃತಿಯನ್ನು ಬಯಸುವುದಿಲ್ಲ. ಹೀಗಾಗಿ ಮಣಿಶಂಕರ್ ಅಯ್ಯರ್ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿ ನಾನು ಆ ಪದವನ್ನು ಜಾತಿ ಆಧಾರದಲ್ಲಿ ಬಳಸಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಚಾಯ್ ವಾಲಾ ಎಂದು ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಹೆಸರಿನಲ್ಲಿ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.

  • ದೋಸ್ತಿ ಸರ್ಕಾರ ಬೀಳಿಸಲು ಹೊಸ ಮುಹೂರ್ತ ನೋಡಿದ್ರಾ ಬಿಎಸ್‍ವೈ!

    ದೋಸ್ತಿ ಸರ್ಕಾರ ಬೀಳಿಸಲು ಹೊಸ ಮುಹೂರ್ತ ನೋಡಿದ್ರಾ ಬಿಎಸ್‍ವೈ!

    ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿ ಮೇ 23ಕ್ಕೆ ಒಂದು ವರ್ಷವಾಗುತ್ತದೆ. ಸರ್ಕಾರ ರಚನೆಯಾದಗಿನಿಂದಲೂ ರಾಜ್ಯದಲ್ಲಿ ಆಪರೇಷನ್ ಕಮಲದ ಮಾತುಗಳು ಕೇಳಿ ಬರುತ್ತಿವೆ. ಶಾಸಕರನ್ನು ರೆಸಾರ್ಟಿನಲ್ಲಿ ಇರಿಸೋದು, ತೆರೆಮರೆಯಲ್ಲಿ ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರ ಬೀಳಲಿದೆ ಎಂದು ಬಿಜೆಪಿ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೇ 23ರ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಮಲ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ ಸರ್ಕಾರ ಬೀಳಿಸಲು ಹೊಸ ಮುಹೂರ್ತ ನೋಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಲೋಕಸಭಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಧೃವೀಕರಣ ನಡೆಯಲಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಆದ್ರೆ ಯಡಿಯೂರಪ್ಪ ಮೇ 23ರಂದು ಮೈತ್ರಿ ಸರ್ಕಾರದ ಗೂಡಿಗೆ ಕೈ ಹಾಕೋದು ಬೇಡ. ಫಲಿತಾಂಶ ಬಂದ ಎಂಟು ದಿನಗಳ ಕಾಲ ದೋಸ್ತಿಗಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎಂಬುದನ್ನು ಗಮನಿಸೋಣ ಎಂಬ ಸಂದೇಶವನ್ನು ಪಕ್ಷದ ನಾಯಕರಿಗೆ ಯಡಿಯೂರಪ್ಪ ರವಾನಿಸಿದ್ದಾರಂತೆ.

    ಫಲಿತಾಂಶ ಬಂದ ಎಂಟನೇ ದಿನ ಅಂದ್ರೆ ಮೇ 31ರಂದು ನಮ್ಮ ಮುಂದಿನ ನಡೆಯನ್ನು ನಿರ್ಧರಿಸೋಣ. ಅಲ್ಲಿಯವರೆಗೂ ಎಲ್ಲ ನಾಯಕರು ಶಾಂತಿಯುತವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂಬ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ ಎನ್ನಲಾಗಿದೆ.

    ಮೇ 23ರಿಂದ ಮೇ 31ರವರೆಗೆ ಕಾಂಗ್ರೆಸ್ ಅತೃಪ್ತರನ್ನು ಸೆಳೆಯುವುದು. ಈ ತಂತ್ರ ಯಶಸ್ವಿಯಾದ ಬಳಿಕ ಎಲ್ಲ ಕೈ ಬಂಡಾಯ ಶಾಸಕರನ್ನು ಒಂದೆಡೆ ಸೇರಿಸಿ ಮೇ 31ರ ಶುಭ ಶುಕ್ರವಾರ ಸಂಜೆ 5 ಗಂಟೆಗೆ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ ಎಂಬುದನ್ನ ರಾಜ್ಯದ ಜನತೆಯ ಮುಂದೆ ಹೇಳಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಸಿದ್ದು ಸಿಎಂ ಕೂಗು ಬೆನ್ನಲ್ಲೇ ಅಖಾಡಕ್ಕಿಳಿದ ರಾಜಕೀಯ ಗುರು

    ಸಿದ್ದು ಸಿಎಂ ಕೂಗು ಬೆನ್ನಲ್ಲೇ ಅಖಾಡಕ್ಕಿಳಿದ ರಾಜಕೀಯ ಗುರು

    ಬೆಂಗಳೂರು: ದೋಸ್ತಿ ಕಾಂಗ್ರೆಸ್‍ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಕೂಗು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಸಹ ಯಾವುದೇ ಪ್ರತಿಕ್ರಿಯೆ ನೀಡದೇ ತೆರೆಮರೆಯಲ್ಲಿ ಸಿಎಂ ಕುರ್ಚಿಯತ್ತ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಶಿಷ್ಯ ಸಿದ್ದರಾಮಯ್ಯರ ಏಟಿಗೆ ತಿರುಗೇಟು ನೀಡಲು ಸ್ವತಃ ಗುರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಅಖಾಡಕ್ಕೆ ಇಳಿದಿದ್ದಾರೆ.

    ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ದೊಡ್ಡ ರಾಜಕೀಯ ಆಟವನ್ನು ದೇವೇಗೌಡರು ಸಿದ್ಧತೆ ನಡೆಸಿಕೊಂಡಿದ್ದಾರೆ. 2004ರಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿರುದ್ಧ ಕಾಂಗ್ರೆಸ್ ರಚಿಸಿದ್ದ ತಂತ್ರವನ್ನೇ ದೇವೇಗೌಡರು ಪ್ರಯೋಗಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ತಂತ್ರವನ್ನೇ ಪ್ರಯೋಗಿಸಿ ಶಿಷ್ಯ ಸಿದ್ದರಾಮಯ್ಯರಿಗೆ ಶಾಕ್ ನೀಡಲು ದೊಡ್ಡಗೌಡರು ಪ್ಲಾನ್ ಮಾಡಿ, ಮೈತ್ರಿ ಸರ್ಕಾರ ಉಳಿಸಲು ರಣವ್ಯೂಹ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಏನಿದು ಪ್ಲಾನ್?
    2004ರಲ್ಲಿ ಎಸ್.ಎಂ.ಕೃಷ್ಣ ಸೋತಾಗ ಅಂದು ಅವರನ್ನು ಕಾಂಗ್ರೆಸ್ ರಾಜ್ಯಪಾಲರನ್ನಾಗಿ ಮಾಡಿ ಮಹಾರಾಷ್ಟ್ರಕ್ಕೆ ಕಳುಹಿಸಲಾಗಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ದೇವೇಗೌಡರು ನಾಂದಿ ಹಾಡಿದ್ದರು. ಈಗ ಇದೇ ಅಸ್ತ್ರವನ್ನು ಪ್ರಯೋಗಿಸಿ ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೇಳುವ ಸಾಧ್ಯತೆಯಿದೆ. ಲೋಕ ಫಲಿತಾಂಶದಲ್ಲಿ ಮೋದಿ ವಿರುದ್ಧ ಜನಾದೇಶ ಬಂದು ಎನ್‍ಡಿಎಗೆ ಹಿನ್ನಡೆಯಾದರೆ ಆಗ ಗೌಡರ ತಮ್ಮ ದಾಳವನ್ನು ಉರುಳಿಸಲು ಆರಂಭಿಸಲಿದ್ದಾರೆ ಎನ್ನಲಾಗಿದೆ.

    ಚಂದ್ರಬಾಬು ನಾಯ್ಡು, ಶರದ್ ಪವಾರ್ ಮುಂದಿಟ್ಟುಕೊಂಡು ದೇವೇಗೌಡರ ಚದುರಂಗದಾಟ ಆಡಲು ಮುಂದಾಗಿದ್ದು, ಸಿದ್ದರಾಮಯ್ಯರನ್ನು ದೆಹಲಿ ರಾಜಕೀಯಕ್ಕೆ ಕರೆಸಿಕೊಳ್ಳಿ ಅಂತಾ ಕೈ ನಾಯಕರ ಮೇಲೆ ಒತ್ತಡ ಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ. ಒಂದು ವೇಳೆ ಮೋದಿ ಮತ್ತೆ ಪಿಎಂ ಆದ್ರೂ ಕರ್ನಾಟಕ ಕಾಂಗ್ರೆಸ್‍ಗೆ ದೋಸ್ತಿ ಅನಿವಾರ್ಯ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸೇಫ್ ಆಗಿರಬೇಕಾದ್ರೆ ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗುವುದು ಉತ್ತಮ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಮನದಟ್ಟು ಮಾಡಲು ದೇವೇಗೌಡರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

  • ಜೈ ಶ್ರೀರಾಮ್ ಹೇಳೋ ಬಿಜೆಪಿ ಬಾಬುಗಳೇ ಒಂದಾದ್ರೂ ರಾಮಮಂದಿರ ಕಟ್ಟಿದ್ರಾ?: ಮಮತಾ ಬ್ಯಾನರ್ಜಿ

    ಜೈ ಶ್ರೀರಾಮ್ ಹೇಳೋ ಬಿಜೆಪಿ ಬಾಬುಗಳೇ ಒಂದಾದ್ರೂ ರಾಮಮಂದಿರ ಕಟ್ಟಿದ್ರಾ?: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತಿನ ಸಮರ ನಡೆಯುತ್ತಲೇ ಇದೆ. ಇಬ್ಬರು ನಾಯಕರು ತಮ್ಮ ಪ್ರಚಾರದ ಸಮಾವೇಶದಲ್ಲಿ ಒಬ್ಬರ ಮೇಲೋಬ್ಬರು ಹರಿಹಾಯುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಬಿಜೆಪಿ ನಾಯಕರೇ ಇದುವರೆಗೆ ಒಂದಾದರೂ ರಾಮಮಂದಿರವನ್ನು ಕಟ್ಟಿದ್ದೀರಾ ಎಂದು ಮಮತಾ ಪ್ರಶ್ನೆ ಮಾಡಿದ್ದಾರೆ.

    ಪಶ್ಚಿಮ ಬಂಗಾಳದ ವಿಷ್ಣುಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಬಾಬುಗಳು ಜೈ ಶ್ರೀರಾಮ್ ಎಂದು ಹೇಳುತ್ತಾರೆ. ಚುನಾವಣೆ ಸಮಯದಲ್ಲಿ ಶ್ರೀ ರಾಮಚಂದ್ರ ತಮ್ಮ ಪಕ್ಷದ ಏಜೆಂಟ್ ನನ್ನಾಗಿ ಮಾಡಿಕೊಳ್ಳುತ್ತೀರಿ. ನೀವು ಘೋಷಣೆ ಕೂಗುವುದರ ಜೊತೆಗೆ ಬೇರೆಯವರ ಮೇಲೆಯೂ ಒತ್ತಡ ಹಾಕುತ್ತೀರಿ. ಆದರೆ ಇದುವರೆಗೆ ಒಂದಾದರೂ ರಾಮಮಂದಿರವನ್ನ ಕಟ್ಟಿದ್ದೀರಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಮಿದಾನಪುರ ಜಿಲ್ಲೆಯಲ್ಲಿ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಕೆಲ ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಘೋಷಣೆ ಕೇಳುತ್ತಿದ್ದಂತೆಯೇ ಕಾರು ನಿಲ್ಲಿಸಿದ ಮಮತಾ ಬ್ಯಾನರ್ಜಿ, ಯುವಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಸೋಮವಾರ ಪಶ್ಚಿಮ ಬಂಗಾಳದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಮೋದಿ, ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್ ಅನ್ನೋದು ದೊಡ್ಡ ಅಪರಾಧವಾಗಿದೆ. ಜೈ ಶ್ರೀರಾಮ್ ಘೋಷಣೆ ಕೂಗುವವರನ್ನು ಇಲ್ಲಿ ಜೈಲಿಗೆ ಹಾಕಲಾಗುತ್ತದೆ ಎಂದು ಆರೋಪಿಸಿದ್ದರು.

  • ಇಂದು ಐದನೇ ಹಂತದ ಮತದಾನ-ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಚುನಾವಣೆ

    ಇಂದು ಐದನೇ ಹಂತದ ಮತದಾನ-ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಚುನಾವಣೆ

    ನವದೆಹಲಿ: ಸೋಮವಾರ ಐದನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯಲಿದ್ದು ಇಂದು ಘಟಾನುಘಟಿ ನಾಯಕರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಇದಕ್ಕಾಗಿ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು 51 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು 674 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿಲಿದ್ದಾರೆ.

    ಉತ್ತರ ಪ್ರದೇಶದ 14 ಕ್ಷೇತ್ರ, ರಾಜಸ್ತಾನದ 12, ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲಿ ತಲಾ ಏಳು ಹಾಗೂ ಬಿಹಾರದಲ್ಲಿನ 5, ಜಾರ್ಖಂಡ್ ನಲ್ಲಿನ 4 ಹಾಗೂ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಹಾಗೂ ಲಡಾಖ್ ಸೇರಿ ಒಟ್ಟು 7 ರಾಜ್ಯಗಳ 51 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಐದನೇ ಹಂತದ ಚುನಾವಣೆಯಲ್ಲಿ ಸುಮಾರು 8.75 ಕೋಟಿ ಮತದಾರರು ಮತ ಚಲಾಯಿಸುವ ಮೂಲಕ 674 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 51 ಲೋಕಸಭಾ ಕ್ಷೇತ್ರಗಳಲ್ಲಿ 96 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಐದನೇ ಹಂತದ ಮತದಾನದಲ್ಲಿ ದೇಶದ ರಾಜಕೀಯ ಘಟಾನುಘಟಿಗಳು ಕಣದಲ್ಲಿದ್ದಾರೆ. ವಯನಾಡ್ ನಿಂದ ಸ್ವರ್ಧೆ ಎದುರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮತ್ತೊಂದು ಅಗ್ನಿ ಪರೀಕ್ಷೆ. ಈಗಾಗಲೇ ಮೂರು ಬಾರಿ ಅಮೇಥಿಯಿಂದ ಆಯ್ಕೆಯಾಗಿರುವ ರಾಹುಲ್ ಗಾಂಧಿ ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ರಾಹುಲ್ ಗಾಂಧಿ ಗೆ ಟಕ್ಕರ್ ಕೊಡಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಸಾಕಷ್ಟು ಬೆವರು ಹರಿಸಿದ್ದಾರೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿ ಹಲವು ನಾಯಕರು ಅಮೇಥಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈಗಾಗಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ರಾಹುಲ್ ಗಾಂಧಿಗೆ ತಮ್ಮ ನಂಬಿಕಸ್ಥ ಕ್ಷೇತ್ರದಲ್ಲಿ ಇಂದು ನಡೆಯಲಿರುವ ಮತದಾನ ಅತಿ ಮುಖ್ಯವಾಗಿದೆ.

    ಕಾಂಗ್ರೆಸ್ ಅಧಿನಾಯಕಿ ಯುಪಿಎ ಒಕ್ಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಸಂಕಷ್ಟ ತಪ್ಪಿದಲ್ಲ. ನಾಲ್ಕು ಬಾರಿ ರಾಯ್ ಬರೇಲಿಯಿಂದ ಸಂಸದೆಯಾಗಿರುವ ಸೋನಿಯಾಗಾಂಧಿಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೊಟಿ ನೀಡಿದೆ. ಬಿಜೆಪಿಯ ಪರಿಷತ್ ಸದಸ್ಯ ದಿನೇಶ್ ಪ್ರತಾಪ್ ಸಿಂಗ್ ಸೋನಿಯಾಗಾಂಧಿ ವಿರುದ್ಧ ಸೆಣಸಲಿದ್ದಾರೆ.

    ಅದೃಷ್ಟದ ಕ್ಷೇತ್ರ ಲಕ್ನೊದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶತುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಮಹಾಘಟಬಂಧನ್ ಅಭ್ಯರ್ಥಿಯಾಗಿ ಸ್ವರ್ಧೆ ಮಾಡಿದ್ದಾರೆ. ಅಲ್ಲದೇ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಸೇರಿ ಇತರ ಘಟಾನುಘಟಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

    ವಿವಾದಿತ ರಾಮ ಜನ್ಮಭೂಮಿ ಸ್ಥಳ ಅಯೋಧ್ಯೆ ಒಳಗೊಂಡ ಫೈಜಬಾದ್ ನಲ್ಲಿ ಮತದಾನ ನಡೆಯಲಿದ್ದು ಕುತೂಹಲ ಮೂಡಿಸಿದ್ದು ಉತ್ತರ ಪ್ರದೇಶದಲ್ಲಿ ಐದನೇ ಹಂತದಲ್ಲಿ ನಡೆಯುತ್ತಿರುವ ಈ 14 ಕ್ಷೇತ್ರಗಳಲ್ಲಿ ರಾಯ್‍ಬರೇಲಿ, ಅಮೇಠಿ ಹೊರತುಪಡಿಸಿ ಬಿಜೆಪಿ 12 ಕ್ಷೇತ್ರಗಳಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ ಈ ಬಾರಿ ಮಹಾಘಟಬಂಧನ್ ತೀವ್ರ ಪೈಪೋಟಿ ನೀಡಿದ್ದು ಇಂದಿನ ಮತದಾನದ ಮೇಲೆ ಎಲ್ಲರ ಕುತೂಹಲ ಕಣ್ಣಿದೆ.

  • ಮೋದಿ ಗೆಲುವು ನಿಶ್ಚಿತ: ವಿವೇಕ್ ಓಬೇರಾಯ್

    ಮೋದಿ ಗೆಲುವು ನಿಶ್ಚಿತ: ವಿವೇಕ್ ಓಬೇರಾಯ್

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲುವು ನಿಶ್ಚಿತ ಎಂದು ನಟ ವಿವೇಕ್ ಓಬೇರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ಇಂಡಿಯಾ ಗೇಟ್ ಬಳಿಯ ‘ಏಳು ಕ್ಷೇತ್ರ ಮೋದಿಗೆ ನೀಡಿ’ ಎಂಬ ಬಿಜೆಪಿ ಅಭಿಯಾನದಲ್ಲಿ ವಿವೇಕ್ ಓಬೇರಾಯ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್, ಭಾರತವನ್ನು ಆಳಿದ ಬಹುತೇಕ ರಾಜರು ಅಥವಾ ವಿದೇಶಿಗರು ನಮ್ಮ ದೇಶವನ್ನು ದೋಚುವ ಕೆಲಸ ಮಾಡಿದ್ದಾರೆ. ಇದೀಗ ದೇಶದ ಪ್ರತಿಯೊಬ್ಬ ನಾಗರಿಕರನು ಚೌಕಿದಾರ್ ಆಗಿದ್ದಾರೆ. ಮತ್ತೊಮ್ಮೆ ದೇಶವನ್ನು ಲೂಟಿ ಮಾಡುವವರ ಕೈಗೆ ನೀಡಲ್ಲ. ಮೋದಿ ಅವರ ಗೆಲುವು ನಿಶ್ಚಿತವಾಗಿದ್ದು, ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದರು.

    ಪಿಎಂ ನರೇಂದ್ರ ಮೋದಿ ಚಿತ್ರದಲ್ಲಿ ಪ್ರಧಾನಿ ಪಾತ್ರದಲ್ಲಿ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಏಪ್ರಿಲ್ 11ರಂದು ಸಿನಿಮಾ ಬಿಡುಗಡೆಯಾಗಲು ಸಿದ್ಧಗೊಂಡಿತ್ತು. ಆದರೆ ಚುನಾವಣಾ ಆಯೋಗ ಸಿನಿಮಾ ಬಿಡುಗಡೆ ತಡೆ ನೀಡಿತ್ತು. ಚುನಾವಣಾ ಫಲಿತಾಂಶ ಮರುದಿನ ಮೇ 24ರಂದು ಚಿತ್ರ ಬಿಡುಗಡೆಯಾಗಲಿದೆ.

  • ಸಿಎಂ ‘ಪಂಚ್’ತಂತ್ರಕ್ಕೆ ಪ್ರತ್ಯಸ್ತ್ರ-ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಚದುರಂಗದಾಟ

    ಸಿಎಂ ‘ಪಂಚ್’ತಂತ್ರಕ್ಕೆ ಪ್ರತ್ಯಸ್ತ್ರ-ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಚದುರಂಗದಾಟ

    ಬೆಂಗಳೂರು: ಕಾಂಗ್ರೆಸ್ ಮುಖಂಡರ ವಿರುದ್ಧವೇ ಸಿಎಂ ಪಂಚ್‍ತಂತ್ರ ದಾಳ ಉರುಳಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿವೆ. ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಪಂಚ್‍ತಂತ್ರಕ್ಕೆ ತಿರುಗುಬಾಣವನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಮಂಡ್ಯ ಕ್ಷೇತ್ರದ ರೆಬಲ್ ಕೈ ಮುಖಂಡರು ಸುಮಲತಾ ಅಂಬರೀಶ್ ಜೊತೆ ಸಭೆ ನಡೆಸಿದ ವಿಡಿಯೋ ಲೀಕ್ ಆಗಿದ್ದಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಮೆಗಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ನಾಯಕರ ಕೆಲಸದ ವೈಖರಿಯ ಮಾಹಿತಿಯನ್ನು ಸಿದ್ದರಾಮಯ್ಯರು ತರಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಬಂದಾಗ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸ್ಥಳೀಯ ಮುಖಂಡರು ಇದೀಗ ಸಚಿವ ಜಿ.ಟಿ.ದೇವೇಗೌಡರಿಗೆ ಆಪ್ತರಾಗಿದ್ದಾರಂತೆ. ಹಾಗಾಗಿ ಜಿ.ಟಿ.ದೇವೇಗೌಡರೇ ಸ್ವಕ್ಷೇತ್ರ ಧರ್ಮ ಪಾಲಿಸಿಲ್ಲ ಎಂದು ತಿರುಗೇಟು ನೀಡಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಪಂಚಕರ್ಮ ಚಿಕಿತ್ಸೆಯ ಬಳಿಕ ‘ಕೈ’ ಮುಖಂಡರ ವಿರುದ್ಧ ಸಿಎಂ ‘ಪಂಚತಂತ್ರ’ದ ಬಲೆ

    ಮಂಡ್ಯದಲ್ಲಿ ಮೈತ್ರಿ ಪಾಲನೆ ಆಗಿಲ್ಲ ಎಂದು ದಳಪತಿಗಳು ಆರೋಪಿಸಿದರೆ, ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನಾಯಕರ ನಡೆಯನ್ನು ಪ್ರಶ್ನಿಸಲು ಕಾಂಗ್ರೆಸ್ ಸಿದ್ಧಗೊಂಡಿದೆ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‍ನಿಂದಲೇ ಮೈತ್ರಿ ಪಾಲನೆಯಾಗಿಲ್ಲ ಎಂಬ ಅಸ್ತ್ರವನ್ನೇ ಸಿದ್ದರಾಮಯ್ಯ ಪ್ರಯೋಗಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಅವರಿಗೆ ಹಿನ್ನಡೆಯಾದರೆ ಈ ವಿಚಾರವನ್ನು ಮುಂದಿಟ್ಟುಕೊಂಡು ದಳ ನಾಯಕರಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.

  • ಪಂಚಕರ್ಮ ಚಿಕಿತ್ಸೆಯ ಬಳಿಕ ‘ಕೈ’ ಮುಖಂಡರ ವಿರುದ್ಧ ಸಿಎಂ ‘ಪಂಚತಂತ್ರ’ದ ಬಲೆ

    ಪಂಚಕರ್ಮ ಚಿಕಿತ್ಸೆಯ ಬಳಿಕ ‘ಕೈ’ ಮುಖಂಡರ ವಿರುದ್ಧ ಸಿಎಂ ‘ಪಂಚತಂತ್ರ’ದ ಬಲೆ

    ಬೆಂಗಳೂರು: ಕಳೆದ ಒಂದು ವಾರದಿಂದ ಮೈತ್ರಿ ಸರ್ಕಾರದ ದೋಸ್ತಿಗಳಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಬಹಿರಂಗವಾಗಿ ಹೇಳಿಕೆಯನ್ನು ನೀಡಲಾರಂಭಿಸಿದ್ದಾರೆ. ಸಚಿವ ಜಿ.ಟಿ.ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪ್ರಯೋಜನವಿಲ್ಲ ಎಂದು ಹೇಳುವ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಪಂಚಕರ್ಮ ಚಿಕಿತ್ಸೆ ಬಳಿಕ ಸಿಎಂ ಕುಮಾರಸ್ವಾಮಿ ಹೊಸ ಹುಮ್ಮಸ್ಸಿನಲ್ಲಿ ದೋಸ್ತಿ ನಾಯಕರ ವಿರುದ್ಧವೇ ‘ಪಂಚ್‍ತಂತ್ರ’ದ ದಾಳ ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪಂಚ್‍ತಂತ್ರ 1:
    * ಸುಮಲತಾ ಜೊತೆ ಕಾಣಿಸಿಕೊಂಡ ಮಂಡ್ಯ ರೆಬೆಲ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ
    * ಚಲುವರಾಯಸ್ವಾಮಿ ಮೇಲೆ ಕ್ರಮಗೊಳ್ಳಿ, ಆಮೇಲೆ ಮಾತಾಡಿ – ‘ಕೈ’ಗೆ ಒತ್ತಡ


    ಚಲುವರಾಯಸ್ವಾಮಿ ಅಂಡ್ ಟೀಮ್ ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೊದಲ ಪಂಚ್ ಕೊಡಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜೊತೆ ಸಭೆ ನಡೆಸಿದ ಚಲುವರಾಯಸ್ವಾಮಿ ಹಾಗೂ ಮಂಡ್ಯದ ಇತರೆ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಕೈ ಕೊಟ್ಟಿದ್ದಾರೆ. ಈಗ ಸುಮಲತಾ ಜೊತೆ ಬಹಿರಂಗವಾಗಿ ಕಾಣಿಸಿಕೊಂಡು ತಮ್ಮ ಬೆಂಬಲ ಯಾರಿಗೆ ಇತ್ತು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಿ ಆಮೇಲೆ ಮಾತನಾಡಿ ಎಂದು ಪಟ್ಟು ಹಿಡಿಯಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಪಂಚ್‍ತಂತ್ರ 2:
    * ಮಾಜಿ ಸಿಎಂ ಸಿದ್ದರಾಮಯ್ಯರನ್ನು ನಿಯಂತ್ರಣದಲ್ಲಿಡಿ
    * ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂತ್ರ
    ಮಂಡ್ಯ ಬೆಳವಣಿಗೆ, ಶಾಸಕರ ಪ್ರತ್ಯೇಕ ಸಭೆಯ ಯತ್ನ ಇದೆಲ್ಲದರ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಾರೆ ಎನ್ನುವುದು ಕುಮಾರಸ್ವಾಮಿಯವರ ಅನುಮಾನ. ಸಹಜವಾಗಿಯೆ ಮೈತ್ರಿ ಗಟ್ಟಿಯಾಗಬೇಕಾದರೆ ಸಿದ್ದರಾಮಯ್ಯರನ್ನ ನಿಯಂತ್ರಣದಲ್ಲಿ ಇಡಿ ಎಂಬ ದೂರನ್ನ ಕಾಂಗ್ರೆಸ್ ಹೈಕಮಾಂಡ್ ಗೆ ತಲುಪಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

    ಪಂಚ್‍ತಂತ್ರ 3:
    * ಮೈತ್ರಿ ಸರ್ಕಾರ ಉಳಿಸಿಕೊಳ್ಳಬೇಕು ಎಂಬುದು ನಮ್ಮ ನಿಲುವು.
    * ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ ಅಸಹಕಾರದ ಬಗ್ಗೆ ದೂರು
    ರಾಜ್ಯ ಕಾಂಗ್ರೆಸ್ ನಾಯಕರುಗಳು ಲೋಕಸಭಾ ಫಲಿತಾಂಶದ ನಂತರ ಹೇಗೆ ನಡೆದುಕೊಳ್ಳುತ್ತಾರೆ ಅಂತ ಹೇಳೋದು ಕಷ್ಟ. ಆದ್ದರಿಂದ ಫಲಿತಾಂಶಕ್ಕೂ ಮುನ್ನವೇ ರಾಜ್ಯ ಕಾಂಗ್ರೆಸ್ ನಾಯಕರುಗಳ ವರ್ತನೆ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಗೆ ದೂರು ನೀಡಲು ನಿರ್ಧಾರ. ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಮೈತ್ರಿ ಸೂತ್ರ ಪಾಲಿಸಿದ್ರು? ಎಷ್ಟರ ಮಟ್ಟಿಗೆ ಅಸಹಕಾರ ತೋರಿದ್ರು? ಎಲ್ಲಿ ಏನೇನು ಸಮಸ್ಯೆ ಆಯ್ತು ಅನ್ನೋದನ್ನ ವಿವರವಾಗಿ ಕಾಂಗ್ರೆಸ್ ಹೈ ಕಮಾಂಡ್‍ಗೆ ದೂರು ನೀಡಲು ಸಿಎಂ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಂಚತಂತ್ರ 4:
    * ಕಾಂಗ್ರೆಸ್ ಶಾಸಕರ ಒಗ್ಗಟ್ಟು ಮುರಿಯುವುದು.
    * ಸಿದ್ದರಾಮಯ್ಯ ಗ್ಯಾಂಗ್ ಕಡೆಗಣಿಸಿ, ಉಳಿದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು.
    ಸಮಾನ ಮನಸ್ಕ ಶಾಸಕರ ಹೆಸರಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಮುಂದಾದ ಶಾಸಕರ ಒಗ್ಗಟ್ಟನ್ನ ಮುರಿಯುವುದು. ಎಸ್.ಟಿ.ಸೋಮಶೇಖರ್, ಬೈರತಿ ಬ್ರದರ್ಸ್, ಆನೇಕಲ್ ಶಿವಣ್ಣ, ಅಖಂಡ ಶ್ರೀನಿವಾಸ ಮೂರ್ತಿಯಂತವರನ್ನ ಕಡೆಗಣಿಸಿ ಬಿಸಿ ಮುಟ್ಟಿಸುವುದು. ಇದೇ ವೇಳೆ ಅಜಯ್ ಸಿಂಗ್, ಮುನಿರತ್ನ, ಹ್ಯಾರಿಸ್, ಶಿವರಾಮ ಹೆಬ್ಬಾರ್‍ರಂತಹ ಶಾಸಕರನ್ನ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಕಾರ್ಯ ಮಾಡಿಸಿಕೊಡುವುದು.

    ಪಂಚ್‍ತಂತ್ರ 5:
    * ‘ಕೈ’ ವಿರುದ್ಧ ಪ್ರತಿದಾಳಿ ಮೂಲಕ ವಿವಾದದ ಕಾವು ಉಳಿಸಿಕೊಳ್ಳುವುದು.
    * ‘ಲೋಕ’ ಅಸಹಕಾರದ ಮೂಲಕ ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸ್ತಿಲ್ಲ ಎಂದು ಬಿಂಬಿಸುವುದು
    ಎಲ್ಲದಕ್ಕಿಂತ ಮುಖ್ಯವಾಗಿ ಸಿಎಂ ಬತ್ತಳಿಕೆಯಲ್ಲಿರುವ ಇನ್ನೊಂದು ಅಸ್ತ್ರವೆಂದರೆ ಎದ್ದಿರುವ ವಿವಾದದ ಕಾವನ್ನ ಹಾಗೇ ಉಳಿಸಿಕೊಳ್ಳುವುದು. ಮಂಡ್ಯದಲ್ಲಿ ಕಾಂಗ್ರೆಸಿಗರು ಕೈ ಕೊಟ್ಟರು, ಮೈಸೂರಲ್ಲಿ ಜೆಡಿಎಸ್ ನ್ನ ವಿಶ್ವಾಸಕ್ಕೆ ತಗೆದುಕೊಳ್ಳಲಿಲ್ಲ ಎಂಬ ವಿವಾದದ ಕಾವು ತಣ್ಣಗಾಗದಂತೆ ನೋಡಿಕೊಂಡು ಪರಸ್ಪರ ಮಾತಿನ ದಾಳಿ ಪ್ರತಿದಾಳಿ ಮೂಲಕ ವಿವಾದದ ಕಾವು ಹೆಚ್ಚಿಸುವುದು. ಆ ಮೂಲಕ ಕಾಂಗ್ರೆಸ್ ನವರೇ ಮೈತ್ರಿಯಲ್ಲಿ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಬಿಂಬಿಸುವುದು ಹೆಚ್ ಡಿಕೆ ಮಾಸ್ಟರ್ ಪ್ಲಾನ್ ಎನ್ನಲಾಗುತ್ತಿದೆ.

  • ಮೈಸೂರು-ಕೊಡಗು ಲೋಕ ಅಖಾಡ: ದೋಸ್ತಿ, ಬಿಜೆಪಿ ಸಮೀಕ್ಷೆಯಲ್ಲಿ ಯಾರಿಗೆ ಮುನ್ನಡೆ?

    ಮೈಸೂರು-ಕೊಡಗು ಲೋಕ ಅಖಾಡ: ದೋಸ್ತಿ, ಬಿಜೆಪಿ ಸಮೀಕ್ಷೆಯಲ್ಲಿ ಯಾರಿಗೆ ಮುನ್ನಡೆ?

    ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದೋಸ್ತಿಗಳಿಗೆ ಆಂತರಿಕ ಕಲಹಕ್ಕೆ ಸಾಕ್ಷಿಯಾಗಿತ್ತು. ಕೊನೆ ಕ್ಷಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರವನ್ನು ಕೈ ವಶ ಮಾಡಿಕೊಂಡು, ಆಪ್ತ ವಿಜಯ್ ಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇತ್ತ ಬಿಜೆಪಿಯಿಂದ ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. ಹಾಗಾಗಿ ಮೈಸೂರು-ಕೊಡಗು ಹಲವು ಚುನಾವಣಾ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು.

    ಚುನಾವಣೆ ಅಂತ್ಯಗೊಂಡು ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರ ಪೆಟ್ಟಿಗೆಯಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಮ್ ಸೇರಿಕೊಂಡಿದೆ. ಇತ್ತ ಎರಡೂ ಪಕ್ಷಗಳು ಖಾಸಗಿ ಏಜೆನ್ಸಿಗಳ ಮೂಲಕ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ್ದು, ಸರ್ವೆಯ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದೋಸ್ತಿ ಲೆಕ್ಕ: ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ದಾಖಲಿಸುತ್ತಾರೆ. ವಿಜಯ್ ಶಂಕರ್ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಅಲ್ಪ ಹಿನ್ನಡೆ ಕಂಡರೂ ಗೆಲುವು ದಾಖಲಿಸುತ್ತಾರೆ. ಮಡಿಕೇರಿಯಲ್ಲಿ 6 ಸಾವಿರ, ವಿರಾಜಪೇಟೆಯಲ್ಲಿ 10 ಸಾವಿರ, ಚಾಮುಂಡೇಶ್ವರಿಯಲ್ಲಿ 9 ಸಾವಿರ, ಕೃಷ್ಣರಾಜದಲ್ಲಿ 16 ಸಾವಿರ ಮತ್ತು ಚಾಮರಾಜದಲ್ಲಿ 12 ಸಾವಿರ ಮತಗಳ ಹಿನ್ನಡೆಯನ್ನು ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಕಾಣಲಿದ್ದಾರೆ. ಉಳಿದ ಕ್ಷೇತ್ರಗಳಾದ ಪಿರಿಯಾಪಟ್ಟಣದಲ್ಲಿ 24 ಸಾವಿರ, ಹುಣಸೂರು 26 ಸಾವಿರ ಮತ್ತು ನರಸಿಂಹರಾಜದಲ್ಲಿ 46 ಸಾವಿರ ಮತಗಳ ಅಂತರ ಕಾಯ್ದುಕೊಂಡು ಒಟ್ಟಾರೆಯಾಗಿ 43 ಸಾವಿರ ಮತಗಳ ಲೀಡ್‍ನಿಂದ ವಿಜಯ್ ಶಂಕರ್ ಗೆಲ್ಲುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳುತ್ತಿದೆ.

    ಬಿಜೆಪಿ ಲೆಕ್ಕ: ಕಮಲ ನಾಯಕರ ಸಮೀಕ್ಷೆ ಪ್ರತಾಪ್ ಸಿಂಹ ಗೆಲುವು ಪಡೆಯಲಿದ್ದಾರೆ ಎಂದು ಹೇಳಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಲಿದ್ದಾರೆ. ಪಿರಿಯಾಪಟ್ಟಣದಲ್ಲಿ 25 ಸಾವಿರ, ಹುಣಸೂರಿನಲ್ಲಿ 25 ಸಾವಿರ ಮತ್ತು ನರಸಿಂಹಹರಾಜ ಕ್ಷೇತ್ರದಲ್ಲಿ 50 ಸಾವಿರ ಮತಗಳ ಹಿನ್ನಡೆಯನ್ನು ಪ್ರತಾಪ್ ಸಿಂಹ ಹೊಂದಲಿದ್ದಾರೆ. ಉಳಿದಂತೆ ಮಡಿಕೇರಿಯಲ್ಲಿ 70 ಸಾವಿರ, ವಿರಾಜಪೇಟೆಯಲ್ಲಿ 30 ಸಾವಿರ, ಚಾಮುಂಡೇಶ್ವರಿಯಲ್ಲಿ 20 ಸಾವಿರ, ಕೃಷ್ಣರಾಜದಲ್ಲಿ 19 ಸಾವಿರ, ಚಾಮರಾಜದಲ್ಲಿ 20 ಸಾವಿರ ಮುನ್ನಡೆ ಪಡೆದು ಅಂದಾಜು 65 ಸಾವಿರ ಮತಗಳ ಅಂತರದಿಂದ ಪ್ರತಾಪ್ ಸಿಂಹ ಗೆಲುವು ಕಾಣುತ್ತಾರೆ ಎಂದು ಬಿಜೆಪಿ ಸಮೀಕ್ಷೆ ತಿಳಿಸಿದೆ

  • ಕಲಬುರಗಿ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕದಲ್ಲಿ ಯಾರಿಗೆ ಎಷ್ಟು ಅಂತರದ ಗೆಲುವು?

    ಕಲಬುರಗಿ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕದಲ್ಲಿ ಯಾರಿಗೆ ಎಷ್ಟು ಅಂತರದ ಗೆಲುವು?

    – ಗುಪ್ತಚರ ವರದಿ ಏನ್ ಹೇಳುತ್ತೆ?

    ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿತ್ತು. ಸೋಲಿಲ್ಲದ ಸರದಾರ ಖ್ಯಾತಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಕೈ ನಾಯಕ ಉಮೇಶ್ ಜಾಧವ್ ಅವರನ್ನೇ ಹೈಜಾಕ್ ಮಾಡಿಕೊಂಡು ಕಣಕ್ಕಿಳಿಸಿತ್ತು. ಹಾಗಾಗಿ ಮೊದಲಿಗಿಂತಲೂ ಈ ಬಾರಿ ಕಲಬುರಗಿ ಕ್ಷೇತ್ರ ಕೊಂಚ ದೇಶದ ಗಮನವನ್ನೇ ಸೆಳೆದಿತ್ತು.

    ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ಖಾಸಗಿ ಏಜೆನ್ಸಿ ಮುಖಾಂತರ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇತ್ತ ರಾಜ್ಯ ಸರ್ಕಾರ ಗುಪ್ತಚರ ಇಲಾಖೆಯ ಸಮೀಕ್ಷೆ ಸಹ ತನ್ನ ವರದಿಯನ್ನು ಸಿಎಂ ಮುಂದೆ ನೀಡಿದೆ.

    ದೋಸ್ತಿ ಲೆಕ್ಕ: ಕಲಬುರಗಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳಲಿದ್ದು, ಅಫಜಲಪುರ ಹಾಗೂ ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಉಮೇಶ್ ಜಾಧವ್ ಸಮಬಲದ ಮತ ಪಡೆಯುವ ಸಾಧ್ಯತೆಗಳಿವೆ ಎಂದು ದೋಸ್ತಿ ನಾಯಕರು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಕಲಬುರಗಿ ದಕ್ಷಿಣದಲ್ಲಿ 3 ಸಾವಿರ, ಕಲಬುರಗಿ ಉತ್ತರದಲ್ಲಿ 25 ಸಾವಿರ, ಕಲಬುರಗಿ ಗ್ರಾಮಾಂತರದಲ್ಲಿ 5 ಸಾವಿರ, ಸೇಡಂನಲ್ಲಿ 10 ಸಾವಿರ, ಗುರುಮಠಕಲ್ ನಲ್ಲಿ 3 ಸಾವಿರ, ಚಿತ್ತಾಪುರದಲ್ಲಿ 10 ಸಾವಿರ ಮುನ್ನಡೆ ಪಡೆದು ಒಟ್ಟು 70 ಸಾವಿರ ಮತಗಳ ಅಂತರದಲ್ಲಿ ಮಲ್ಲಿಕಾರ್ಜುನ ಖರ್ಗೆ 12ನೇ ಬಾರಿ(ವಿಧಾನಸಭಾ + ಲೋಕಸಭಾ ಸೇರಿ) ಗೆಲುವು ದಾಖಲಿಸುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳಿದೆ.

    ಬಿಜೆಪಿ ಲೆಕ್ಕ: ಕಮಲ ನಾಯಕರು ನಡೆಸಿರುವ ಸಮೀಕ್ಷೆ ಪ್ರಕಾರ, ಕಲಬುರಗಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉಮೇಶ್ ಜಾಧವ್ 5ರಲ್ಲಿ ಮುನ್ನಡೆ ಪಡೆದು ಗೆಲುವು ಕಾಣುತ್ತಾರೆ. ಉಳಿದ ಮೂರು ಕ್ಷೇತ್ರಗಳಾದ ಕಲಬುರಗಿ ಉತ್ತರದಲ್ಲಿ 20 ಸಾವಿರ, ಗುರುಮಿಠಕಲ್ ನಲ್ಲಿ 4 ಸಾವಿರ, ಚಿತ್ತಾಪುರದಲ್ಲಿ 5 ಸಾವಿರ ಲೀಡ್ ನಲ್ಲಿ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳುತ್ತಾರೆ ಎನ್ನುವ ವರದಿ ನೀಡಿದೆ.

    ಕಲಬುರಗಿ ದಕ್ಷಿಣದಲ್ಲಿ 10 ಸಾವಿರ, ಕಲಬುರಗಿ ಗ್ರಾಮೀಣದಲ್ಲಿ 10 ಸಾವಿರ, ಸೇಡಂನಲ್ಲಿ 10 ಸಾವಿರ, ಜೇವರ್ಗಿಯಲ್ಲಿ 10 ಸಾವಿರ ಮತ್ತು ಅಫಜಲಪುರದಲ್ಲಿ 12 ಸಾವಿರ ಮತಗಳ ಲೀಡ್ ಉಮೇಶ್ ಜಾಧವ್ ಪಡೆದುಕೊಂಡು ಕನಿಷ್ಠ 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಸಮೀಕ್ಷೆ ಹೇಳಿದೆ.

    ಗುಪ್ತಚರ ವರದಿ: ಗುಪ್ತಚರ ಇಲಾಖೆ ಮಲ್ಲಿಕಾರ್ಜುನ ಖರ್ಗೆಯವರ ಗೆಲುವು ನಿಶ್ಚಿತ ಎಂದು ಹೇಳಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿನಲ್ಲಿ ಮೂರರಲ್ಲಿ ಉಮೇಶ್ ಜಾಧವ್ ಮತ್ತು 5ರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

    ಕಲಬುರಗಿ ದಕ್ಷಿಣದಲ್ಲಿ 5 ಸಾವಿರ, ಜೇವರ್ಗಿಯಲ್ಲಿ 7 ಸಾವಿರ, ಅಫಜಲಪುರದಲ್ಲಿ 8 ಸಾವಿರ ಮತಗಳ ಮುನ್ನಡೆಯನ್ನು ಉಮೇಶ್ ಜಾಧವ್ ಕಾಣಲಿದ್ದಾರೆ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ದಕ್ಷಿಣದಲ್ಲಿ 15 ಸಾವಿರ, ಕಲಬುರಗಿ ಗ್ರಾಮೀಣದಲ್ಲಿ 5 ಸಾವಿರ, ಸೇಡಂನಲ್ಲಿ 10 ಸಾವಿರ, ಗುರುಮಿಠಕಲ್ ನಲ್ಲಿ 35 ಸಾವಿರ ಮತ್ತು ಚಿತ್ತಾಪುರದಲ್ಲಿ 10 ಸಾವಿರ ಮತಗಳ ಮುನ್ನಡೆ ಪಡೆದುಕೊಂಡು ಸುಮಾರು 55 ಸಾವಿರ ಲೀಡ್ ನಲ್ಲಿ ಸಂಸದೀಯ ನಾಯಕ 12ನೇ ಗೆಲುವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಗುಪ್ತಚರ ವರದಿಯಲ್ಲಿ ತಿಳಿಸಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.