Tag: Lok Sabha Election 2014

  • 2014ರ ಲೋಕ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಕರ್ನಾಟಕದ ಅಭ್ಯರ್ಥಿಗಳು

    2014ರ ಲೋಕ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಕರ್ನಾಟಕದ ಅಭ್ಯರ್ಥಿಗಳು

    2019ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಇದೇ ತಿಂಗಳ 18 ಮತ್ತು 23ರಂದು ಚುನಾವಣೆ ನಡೆಯಲಿದೆ. 2014ರಲ್ಲಿ ಕರ್ನಾಟಕದ ಲೋಕ ಅಖಾಡದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಹತ್ತು ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    1. ಬಿ.ಎಸ್.ಯಡಿಯೂರಪ್ಪ: 2014 ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಬರೋಬ್ಬರಿ 6,06,216 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ್ ಭಂಡಾರಿ 2,42,911 ಮತ ಪಡೆದಿದ್ದರು. ಈ ಮೂಲಕ 3,63,305(ಶೇ.32.38) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    2. ಅನಂತ್ ಕುಮಾರ್: ಬೆಂಗಳೂರು ದಕ್ಷಿಣ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರು 6,33,816 ಮತಗಳನ್ನು ಪಡೆದಿದ್ದರು. ಇವರ ಎದುರಾಳಿ ಕಾಂಗ್ರೆಸ್ ಪಕ್ಷದ ನಂದನ್ ನಿಲೇಕಣಿ 4,05,241 ಮತ ಪಡೆದಿದ್ದರು. ಅನಂತ್ ಕುಮಾರ್ 2,28,515(ಶೇ.20.66) ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಪಡೆದಿದ್ದರು.

    3. ಡಿ.ವಿ.ಸದಾನಂದ ಗೌಡ:ಬೆಂಗಳೂರು ಉತ್ತರ ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು 7,18,326 ಮತಗಳನ್ನು ಪಡೆದು ಜಯ ಪಡೆದರೆ, ಕಾಂಗ್ರೆಸ್ ಪಕ್ಷದ ಸಿ.ನಾರಾಯಣಸ್ವಾಮಿ 4,88,562 ಮತ ಪಡೆದು 2,29,764 (16.9%) ಮತಗಳ ಅಂತರದಿಂದ ಸೋಲುಂಡಿದ್ದರು.

    4. ಶೋಭಾ ಕರಂದ್ಲಾಜೆ:ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶೋಭಾ ಕರಂದ್ಲಾಜೆ 5,81,168 ಪಡೆದು ಗೆಲುವು ಪಡೆದಿದ್ದರು. ಕಾಂಗ್ರೆಸ್ ಪಕ್ಷದ ಎದುರಾಳಿ ಜಯಪ್ರಕಾಶ್ ಹೆಗ್ಡೆ 3,99,525 ಮತ ಬಿದ್ದಿತ್ತು. ಈ ಮೂಲಕ ಕರಂದ್ಲಾಜೆ ಅವರು 1,81,643(ಶೇ.17.70) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    5. ಅನಂತಕುಮಾರ್ ಹೆಗ್ಡೆ: ಉತ್ತರ ಕನ್ನಡ-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿಯ ಅನಂತಕುಮಾರ್ ಹೆಗ್ಡೆ 5,46,939 ಮತ ಪಡೆದು ಗೆಲುವು ಪಡೆದಿದ್ದರು. ಕಾಂಗ್ರೆಸ್ ಪಕ್ಷದ ಪ್ರಶಾಂತ್ ಆರ್. ದೇಶಪಾಂಡೆ 4,06,239 ಮತ ಗಳಿಸಿ 1,40,700(ಶೇ.14.29) ಮತಗಳ ಅಂತರದಲ್ಲಿ ಸೋತಿದ್ದರು.

    6. ಪಿ.ಸಿ.ಮೋಹನ್: ಬೆಂಗಳೂರು ಸೆಂಟ್ರಲ್-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಪಿಸಿ ಮೋಹನ್ 5,57,130 ಮತ ಪಡೆದು ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ವಿರುದ್ಧ ಗೆಲುವು ಪಡೆದಿದ್ದರು. ಪರಿಣಾಮ 4,19,630 ಮತ ಪಡೆದಿದ್ದ ರಿಜ್ವಾನ್ 1,37,500(ಶೇ.12.90) ಮತಗಳ ಅಂತರದಿಂದ ಸೋಲುಂಡಿದ್ದಾರೆ.

    7. ಧ್ರುವ ನಾರಾಯಣ್: ಚಾಮರಾಜನಗರ ಎಸ್‍ಸಿ ಮೀಸಲು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ 5,67,782 ಮತ ಪಡೆದಿದ್ದು, ಬಿಜೆಪಿ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ 1,41,182 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಬಿಜೆಪಿಯ ಅಭ್ಯರ್ಥಿ 4,26,600(ಶೇ.12.60) ಮತಗಳಿಂದ ಸೋತಿದ್ದರು.

    8. ನಳಿನ್ ಕುಮಾರ್ ಕಟೀಲ್: ದಕ್ಷಿಣ ಕನ್ನಡ (ಮಂಗಳೂರು) ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 6,42,739 ಮತ ಪಡೆದು ಜಯ ಪಡೆದರೆ, ಕಾಂಗ್ರೆಸ್‍ನ ಜನಾರ್ದನ ಪೂಜಾರಿ 4,99,030 ಮತ ಪಡೆದು ಸೋಲುಂಡಿದ್ದರು. ಕಟೀಲ್ ಅವರಿಗೆ 1,43,709(ಶೇ.11.97) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    9. ಪ್ರಹ್ಲಾದ್ ಜೋಶಿ: ಧಾರವಾಡ-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿ ಪಕ್ಷದ ಪ್ರಹ್ಲಾದ್ ಜೋಶಿ 5,45,395 ಮತ ಪಡೆದು ಜಯಗಳಿಸಿದ್ದರು. ಇವರ ಎದುರಾಳಿ ವಿನಯ್ ಕುಲಕರ್ಣಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ 4,31,738 ಮತ ಪಡೆದಿದ್ದರು. ಪರಿಣಾಮ 1,13,657(ಶೇ.11.05) ಮತಗಳ ಅಂತರದ ಜಯ ಜೋಶಿ ಅವರಿಗೆ ಲಭಿಸಿತ್ತು.

    10. ಪಿ.ಸಿ.ಗದ್ದಿಗೌಡರ್: ಬಾಗಲಕೋಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ 5,71,548 ಮತ ಪಡೆದು ಕಾಂಗ್ರೆಸ್ ನ ಅಜಯ್ ಕುಮಾರ್ ಸರ್ ನಾಯ್ಕ್ ಅವರನ್ನು ಸೋಲಿಸಿದ್ದರು. ಅಜಯ್ ಕುಮಾರ್ ಸರ್ ನಾಯ್ಕ್ 4,54,988 ಮತಗಳನ್ನು ಪಡೆದಿದ್ದರು. ಗದ್ದಿಗೌಡರು 1,16,560(ಶೇ.10.91) ಮತಗಳ ಅಂತರದಿಂದ ಜಯಿಸುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು.

  • 2014ರ ಲೋ.ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದ ಮಹಿಳಾ ಅಭ್ಯರ್ಥಿಗಳು

    2014ರ ಲೋ.ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದ ಮಹಿಳಾ ಅಭ್ಯರ್ಥಿಗಳು

    – 20 ಮಹಿಳೆಯರಿಂದ ಸ್ಪರ್ಧೆ, ಜಯಮಾಲೆ ಮಾತ್ರ ಒಬ್ಬರಿಗೆ

    2019ರ ಲೋಕಸಭಾ ಚುನಾವಣೆ ತಯಾರಿ ಎಲ್ಲಡೆ ಭರದಿಂದ ಸಾಗುತ್ತಿದೆ. ಈ ಹಿಂದೆ ಅಂದರೆ 2014ರ ಲೋಕಸಭಾ ಚುನಾವಣೆ ನಡೆದಾಗ ಕರ್ನಾಟಕದಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಒಟ್ಟು 20 ಮಹಿಳಾ ಅಭ್ಯರ್ಥಿಗಳು ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಬೆಂಗಳೂರು ದಕ್ಷಿಣ, ಬೆಳಗಾವಿ, ಬೀದರ್, ದಾವಣಗೆರೆ, ಕಲಬುರಗಿ, ಚಾಮರಾಜನಗರ ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೆ ಕರ್ನಾಟಕದಿಂದ ಸಂಸದೆ ಶೋಭಾಕರಂದ್ಲಾಜೆ ಬಿಟ್ಟು ಉಳಿದ ಯಾರು ಕೂಡ ಆಯ್ಕೆಯಾಗಿಲ್ಲ. ಅವರ ಸಂಪೂರ್ಣ ಮಾಹಿತಿ ಇಲ್ಲಿದೆ.

    ಬೆಂಗಳೂರು ಸೆಂಟ್ರಲ್:
    ಬೆಂಗಳೂರು ಕೇಂದ್ರದಿಂದ ಜೆಡಿಎಸ್‍ನಿಂದ ನಂದಿನಿ ಆಳ್ವಾ, ಸ್ವತಂತ್ರ ಅಭ್ಯರ್ಥಿಯಾಗಿ ಇ. ಸೀತಾ ರಾಮನ್, ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದಿಂದ ಜಾಹೀದಾ ಶೆರೀನ್ ಹಾಗೂ ಸ್ವತಂತ್ರವಾಗಿ ಸುರಯ್ಯ ಜೈಥೂನ್ ಸ್ಪರ್ಧೆ ಮಾಡಿದ್ದರು. ಚುನಾವಣೆಯ ಫಲಿತಾಂಶದಲ್ಲಿ ನಂದಿನಿ ಆಳ್ವಾ ಅವರು 20,387 (1.9%) ಮತಗಳನ್ನು ಪಡೆದುಕೊಂಡಿದ್ದು, ಇ. ಸೀತಾ ರಾಮನ್ 2,543 (0.2%) ಮತ ಗಳಿಸಿದ್ದರು. ಇನ್ನೂ ಜಾಹೀದಾ ಶೆರೀನ್ 1,198 (0.1%) ಮತ್ತು ಸುರಯ್ಯ ಜೈಥೂನ್ 519 (00%) ಮತ ಪಡೆದುಕೊಂಡಿದ್ದರು.

    ಬೆಂಗಳೂರು ಸೆಂಟ್ರಲ್‍ನಿಂದ 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿರುದ್ಧ ಬಿಜೆಪಿಯ ಪಿ.ಸಿ.ಮೋಹನ್ ಗೆಲವು ಸಾಧಿಸಿದ್ದರು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪಿ.ಸಿ.ಮೋಹನ್ ಮತ್ತು ಕಾಂಗ್ರೆಸ್ಸಿನಿಂದ ರಿಜ್ವಾನ್ ಅರ್ಷದ್ ಸ್ಪರ್ಧಿಸಿದ್ದಾರೆ.

    ಬೆಂಗಳೂರು ದಕ್ಷಿಣ:
    ಬೆಂಗಳೂರು ದಕ್ಷಿಣದಲ್ಲಿ 2014ರಲ್ಲಿ ಜೆಡಿಎಸ್‍ನಿಂದ ರುಥ್ ಮನೋರಮಾ, ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದಿಂದ ಎಂ ಉಮಾದೇವಿ ಹಾಗೂ ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಗಾಯಿತ್ರಿ ಸ್ಪರ್ಧಿಸಿದ್ದರು. ಆಗ ರುಥ್ ಮನೋರಮಾ 25,677 (2.3%), ಎಂ ಉಮಾದೇವಿ 918 (0.1%) ಮತ್ತು ಗಾಯಿತ್ರಿ 484 (00%) ಮತ ಗಳಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಬಿಜೆಪಿ ಅಭ್ಯರ್ಥಿ ಅನಂತ್‍ಕುಮಾರ್ ಗೆಲವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ಸಿನಿಂದ ಬಿ.ಕೆ. ಹರಿಪ್ರಸಾದ್, ಬಿಜೆಪಿಯಿಂದ ತೇಜಸ್ವಿ ಸೂರ್ಯ ಕಣದಲ್ಲಿದ್ದಾರೆ.

    ಬೆಳಗಾವಿ:
    ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪರ್ಧೆ ಮಾಡಿ, 4,78,557 (44.4%) ಮತಗಳನ್ನು ಪಡೆದುಕೊಂಡಿದ್ದರು. 2014ರ ಫಲಿತಾಂಶದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರು ಗೆಲವು ಪಡೆದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯಿಂದ ಸುರೇಶ್ ಅಂಗಡಿ ಅವರು ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್ಸಿನಿಂದ ವಿ.ಎಸ್ ಸಾಧುವವರ್ ಸ್ಪರ್ಧೆ ಮಾಡಿದ್ದಾರೆ.

    ಬೀದರ್:
    2014ರ ಲೋಕಸಭಾ ಚುನಾವಣೆಯಲ್ಲಿ ಶ್ಯಾಮಲಾ ಉದನೂರ ಅವರು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, 1,259 (0.1%) ಮತಗಳನ್ನು ಪಡೆದುಕೊಂಡಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಕಾಂಗ್ರೆಸ್ಸಿನ ಧರಂಸಿಂಗ್ ವಿರುದ್ಧ 92,222 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಕಣಕ್ಕಿಳಿದಿದ್ದಾರೆ.

    ಚಾಮರಾಜನಗರ:
    ನಿರ್ಮಲಾ ಕುಮಾರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, 6,604 (0.6%) ಮತಗಳನ್ನು ಪಡೆದುಕೊಂಡಿದ್ದರು. ಆಗ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಕಾಂಗ್ರೆಸ್ಸಿನ ಧ್ರುವನಾರಾಯಣ್ 1,41,182 ಮತಗಳ ಅಂತರದಲ್ಲಿ ಕೆಲವು ಪಡೆದುಕೊಂಡಿದ್ದರು. ಈ ಬಾರಿಯೂ ಕಾಂಗ್ರೆಸ್ಸಿನಿಂದ ಧ್ರುವನಾರಾಯಣ್ ಸ್ಪರ್ಧೆ ಮಾಡಿದ್ದು, ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಸ್ಪರ್ಧೆ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ:
    2014ರ ಲೋಕಸಭಾ ಚುನಾವಣೆಯಲ್ಲಿ ಚಿತ್ರ ಪ್ರಸಾದ್ ಬಿಎಸ್ ಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 6,279 (0.5%) ರಷ್ಟು ಮತಗಳನ್ನು ಪಡೆದುಕೊಂಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶದಲ್ಲಿ ಕಾಂಗ್ರೆಸ್ ಆಭ್ಯರ್ಥಿ ವೀರಪ್ಪ ಮೊಯ್ಲಿ 4,24,800 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‍ನಿಂದ ವೀರಪ್ಪ ಮೊಯ್ಲಿ ಮತ್ತು ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಚಿಕ್ಕಬಳ್ಳಾಪುರ ಕಣದಲ್ಲಿದ್ದಾರೆ.

    ಚಿತ್ರದುರ್ಗ:
    ಚಿತ್ರದುರ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಟಿ. ಭಾವನಾ ಅವರು ಸ್ಪರ್ಧೆ ಮಾಡಿ 3,601 (0.3%) ಮತಗಳನ್ನು ಪಡೆದುಕೊಂಡಿದ್ದರು. ಆಗ ಅಂದರೆ 2014ರ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಜನಾರ್ದನ ಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 1,01,291 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಚಂದ್ರಪ್ಪ ಅವರು ಸ್ಪರ್ಧೆ ಮಾಡಿದ್ದರೆ, ಬಿಜೆಪಿಯಿಂದ ಎ.ನಾರಾಯಣಸ್ವಾಮಿ ಸ್ಪರ್ಧಿಸಿದ್ದಾರೆ.

    ದಾವಣಗೆರೆ:
    2014ರ ಲೋಕಸಭಾ ಚುನಾವಣೆಯಲ್ಲಿ ಮಹಿಮಾ ಜೆ ಪಟೇಲ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, 46911 (4.2%) ಮತಗಳನ್ನು ಗಳಿಸಿದ್ದರು. ಆಗ ಕಾಂಗ್ರೆಸ್ ಆಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಗೆಲುವು ಸಾಧಿಸಿದ್ದರು. ಈ ಬಾರಿಯೂ ಮತ್ತೊಮ್ಮೆ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಜಿ.ಎಂ.ಸಿದ್ದೇಶ್ವರ್ ಮುಖಾಮುಖಿಯಾಗಲಿದ್ದಾರೆ.

    ಕಲಬುರಗಿ:
    ಕಲಬುರಗಿ ಆಪ್ ಅಭ್ಯರ್ಥಿಯಾಗಿ ಬಿ.ಟಿ.ಲಲಿತಾ ನಾಯ್ಕ್ ಅವರು ಸ್ಪರ್ಧೆ ಮಾಡಿದ್ದು, 9,074 (0.9%) ಮತಗಳನ್ನು ಗಳಿಸಿದ್ದರು. ಆಗ 2014ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಗೆಲವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ರೆ, ಬಿಜೆಪಿಯಿಂದ ಉಮೇಶ್ ಜಾಧವ್ ಕಣದಲ್ಲಿದ್ದಾರೆ.

    ಮಂಡ್ಯ:
    ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಸ್ಪರ್ಧೆ ಮಾಡಿ 5,18,852 (43.5%) ಮತಗಳನ್ನು ಗಳಿಸಿದ್ದರು. 2014ರ ಫಲಿತಾಂಶದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರಿಶ್ ಸ್ಪರ್ಧೆ ಮಾಡಿದ್ದಾರೆ.

    ಮೈಸೂರು-ಕೊಡಗು:
    ಮೈಸೂರಿನಿಂದ ಪದ್ಮಮ್ಮ ಎಂ.ವಿ ಅವರು ಆಪ್ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 5,650 (0.5%) ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಕೊಡಗಿನಿಂದ ಕರುನಾಡು ಪಾರ್ಟಿ ಅಭ್ಯರ್ಥಿಯಾಗಿ ರತಿ ಪೂವಯ್ಯ ಸ್ಪರ್ಧೆ ಮಾಡಿ 3,726 (0.3%) ಮತಗಳಿಸಿದ್ದರು. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಚ್.ವಿಶ್ವನಾಥ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 31,608 ಅಂತರದಲ್ಲಿ ಗೆಲವು ಪಡೆದುಕೊಂಡಿದ್ದರು. ಈ ಬಾರಿ ಕಾಂಗ್ರೆಸ್ಸಿನಿಂದ ವಿಜಯ್ ಶಂಕರ್ ಸ್ಪರ್ಧೆ ಮಾಡಿದ್ದಾರೆ.

    ಶಿವಮೊಗ್ಗ:
    2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಶ್ರೀಲತಾ ಶೆಟ್ಟಿ ಸ್ಪರ್ಧೆ ಮಾಡಿದ್ದರು. ಅಂದಿನ ಫಲಿತಾಂಶದಲ್ಲಿ ಗೀತಾ ಶಿವರಾಜ್‍ಕುಮಾರ್ 2,40,636 (21.3%) ಮತ್ತು ಶ್ರೀಲತಾ ಶೆಟ್ಟಿ 2,073 ( 0.2%) ಮತಗಳನ್ನು ಗಳಿಸಿದ್ದರು. ಆಗ ಕಾಂಗ್ರೆಸ್ ಆಭ್ಯರ್ಥಿ ಮಂಜುನಾಥ್ ಭಂಡಾರಿ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿಯಿಂದ ರಾಘವೇಂದ್ರ ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣದಲ್ಲಿದ್ದಾರೆ.

    ಉಡುಪಿ-ಚಿಕ್ಕಮಗಳೂರು:
    ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ ಅವರು ಬಿಜೆಪಿ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, 5,81,168(56.2%) ಮತಗಳನ್ನು ಪಡೆದುಕೊಂಡಿದ್ದರು. ಅಂದಿನ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ 1,81,643 ಅಂತರದಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಸ್ಪರ್ಧೆ ಮಾಡಿದ್ದಾರೆ.