Tag: localites

  • ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಗೂಸ

    ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಗೂಸ

    ಬೆಂಗಳೂರು: ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನೊಬ್ಬನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಗೂಸ ಕೊಟ್ಟಿದ್ದಲ್ಲದೆ, ಕೆಳಗೆ ಹಾಕ್ಕೊಂಡು ತುಳಿದು ಧರ್ಮದೇಟು ಕೊಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬ್ಯಾಂಕ್ ನಿಂದ ಹಣ ತೆಗೆದುಕೊಂಡು ಬರುವ ಜನರ ಗಮನ ಬೇರೆಡೆಗೆ ಹೋಗುವಂತೆ ಮಾಡಿ, ಹಣ ಲಪಟಾಯಿಸೋದರಲ್ಲಿ ಓಜಿಕುಪ್ಪಂ ಗ್ಯಾಂಗ್ ಸದಸ್ಯರು ನಿಸ್ಸೀಮರು. ಗುರುವಾರ ಹಣ ಲಪಟಾಯಿಸಲು ಹೋಗಿ ಸಿಕ್ಕಿಬಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯನಿಗೆ ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಆತನನ್ನು ಕೆಳಗೆ ಬೀಳಿಸಿ ಒದೆ ಕೊಟ್ಟಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಅಲ್ಲದೆ ಖತರ್ನಾಕ್ ಖದೀಮ ಹೇಗೆ ಹಣ ದೋಚಲು ಹೊಂಚು ಹಾಕಿದ್ದ, ಸ್ಥಳೀಯರ ಕೈಗೆ ಸಿಕ್ಕಿಬಿದ್ದ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ದರೊಬ್ಬರು ಬ್ಯಾಂಕ್‍ನಿಂದ ಹಣ ತೆಗೆದುಕೊಂಡು ಚೀಲವನ್ನು ಹಿಡಿದುಕೊಂಡು ಬರುತ್ತಿರುತ್ತಾರೆ. ಇವರ ಹಿಂದೆಯೇ ನಡೆದುಕೊಂಡು ಬಂದು ಫಾಲೊ ಮಾಡೊ ಓಜಿಕುಪ್ಪಂ ಗ್ಯಾಂಗ್ ಸದಸ್ಯ, ಬ್ಯಾಂಕ್‍ನಿಂದ ಸ್ವಲ್ಪ ದೂರ ವೃದ್ಧ ಬರುತ್ತಿದ್ದ ಹಾಗೆ ನಿಮ್ಮ ಶರ್ಟ್ ಮೇಲೆ ಗಲೀಜು ಬಿದ್ದಿದೆ ನೋಡಿ ಎಂದು ವೃದ್ಧನಿಗೆ ಹೇಳಿದ್ದಾನೆ.

    ಕ್ಷಣಾರ್ಧದಲ್ಲಿ ಅವರ ಗಮನ ಬೇರೆಡೆಗೆ ಹೋಗುವಂತೆ ಮಾಡಿ, ವೃದ್ಧರ ಹಣದ ಬ್ಯಾಗ್ ಕಸಿದು ಓಜಿಕುಪ್ಪಂ ಗ್ಯಾಂಗ್‍ನ ಮತ್ತೊಬ್ಬ ಕಳ್ಳ ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಕಳ್ಳ ಬೈಕಿನಲ್ಲಿ ಆತನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ. ಆದರೆ ಆಗ ಬೈಕ್ ಸ್ವಲ್ಪ ಮುಂದೆ ಹೋಗಿದ್ದರಿಂದ ಹಣ ಕಸಿದ ಕಳ್ಳ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಗ ಅಲ್ಲಿಂದ ಎಸ್ಕೇಪ್ ಆಗಲು ಹಣದ ಚೀಲ ಎಸೆದು ಕಳ್ಳ ಓಡಿದ್ದಾನೆ. ಈ ವೇಳೆ ಆತನನ್ನು ಬೆನ್ನಟ್ಟಿದ ಸ್ಥಳೀಯರು ಆತನನ್ನು ಹಿಡಿದು, ಕಂಬಕ್ಕೆ ಕಟ್ಟಿ ಥಳಿಸಿ, ಚಳಿ ಬಿಡಿಸಿದ್ದಾರೆ.

    ಹಲವು ಕಳ್ಳತನ ಪ್ರಕರಣದಲ್ಲಿ ಓಜಿಕುಪ್ಪಂ ಗ್ಯಾಂಗ್ ಭಾಗಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಈ ಗ್ಯಾಂಗ್‍ನ ಸದಸ್ಯನನ್ನು ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು ಸರಿಯಾಗೇ ಥಳಿಸಿ ಪಾಠ ಕಲಿಸಿದ್ದಾರೆ.

  • ಕರುನಾಡ ಜೀವನದಿಗೆ ಒಡಲಲ್ಲೇ ಕಂಟಕ – ಕೊಡಗಿನಲ್ಲೇ ವಿಷವಾಗುತ್ತಿದ್ದಾಳೆ ಕಾವೇರಿ!

    ಕರುನಾಡ ಜೀವನದಿಗೆ ಒಡಲಲ್ಲೇ ಕಂಟಕ – ಕೊಡಗಿನಲ್ಲೇ ವಿಷವಾಗುತ್ತಿದ್ದಾಳೆ ಕಾವೇರಿ!

    ಮಡಿಕೇರಿ: ಕಾವೇರಿ ನದಿ ಕೋಟ್ಯಂತರ ಜನರ ಬದುಕನ್ನ ಬಂಗಾರವಾಗಿಸಿರುವ ಜೀವದಾತೆ. ಆದೆ ಕರುನಾಡ ಜೀವನದಿಗೆ ಇದೀಗ ಒಡಲಲ್ಲೇ ಕಂಟಕ ಎದುರಾಗಿದೆ. ಕೋಟ್ಯಂತರ ಜನರ ಪಾಲಿಗೆ ಜೀವಜಲವಾಗಿರುವ ಕಾವೇರಿ ನೀರು ಎಲ್ಲಿ ವಿಷಜಲವಾಗುತ್ತದೋ ಎನ್ನುವ ಭಯ ಆರಂಭವಾಗಿದೆ.

    ಹೌದು, ಇದೀಗ ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಪಲ್ಪರ್ ನಡೆಯುತ್ತಿದ್ದು, ಕೆಲವು ಕಾಫಿ ತೋಟದ ಮಾಲೀಕರು ಅದರಿಂದ ಬರುವ ತ್ಯಾಜ್ಯವನ್ನ ನೇರವಾಗಿ ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಇದರಿಂದ ತಲಕಾವೇರಿಯಿಂದ ಪರಿಶುದ್ಧವಾಗಿ ಹರಿದು ಬರುವ ಕಾವೇರಿ, ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಬರುತ್ತಲೇ ಕಲುಷಿತಗೊಳ್ಳುತ್ತಿದ್ದಾಳೆ. ಈ ಭಾಗದಲ್ಲಿರೋ ಕಾಫಿ ತೋಟದ ಮಾಲೀಕರು ನೇರವಾಗಿ ಕಾಫಿ ಪಲ್ಪರ್ ನೀರನ್ನ ಕಾವೇರಿ ನದಿಗೆ ಬಿಡುತ್ತಿದ್ದಾರೆ.

    ಕೆಲವು ಕಾಫಿ ತೋಟದ ಮಾಲೀಕರು ಪ್ರಭಾವಿಗಳಾಗಿರುವುದರಿಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಗ್ರಾಮ ಪಂಚಾಯತಿಯವರು ಮೀನಾಮೇಷ ಎಣಿಸುತ್ತಿದ್ದಾರೆ ಅನ್ನೋ ಆರೋಪ ಕೂಡ ಇದೆ. ಹೀಗೆ ರಾಜರೋಷವಾಗಿ ಕಲುಷಿತ ನೀರು ಕಾವೇರಿ ನದಿಯನ್ನ ಸೇರುತ್ತಿದ್ದರೂ ಸಿದ್ದಾಪುರ ಗ್ರಾಮ ಪಂಚಾಯ್ತಿ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣ ಕುರುಡರಾಗಿ ಏನೂ ಗೊತ್ತಿಲ್ಲದಂತೆ ಮೂಕ ಪ್ರೇಕ್ಷಕರಾಗಿದ್ದಾರೆ. ಈ ಬಗ್ಗೆ ಸ್ಥಳೀಯರು ದೂರುಗಳ ಸುರಿಮಳೆಗೈದರೂ ಯಾವುದೇ ಪ್ರಯೋಜನವಾಗ್ತಿಲ್ಲ.

    ಕೇವಲ ಕಾಫಿ ಪಲ್ಪರ್ ನೀರು ಮಾತ್ರವಲ್ಲದೇ ಇಡೀ ಗ್ರಾಮದ ಶೌಚಾಲಯದ ನೀರು ಇದರ ಜೊತೆಗೆ ಪ್ಲಾಸ್ಟಿಕ್ ಸೇರಿದಂತೆ ಕೆಲ ವಿಷತ್ಯಾಜ್ಯಗಳು ನದಿಯ ಒಡಲನ್ನ ನಿರಂತರವಾಗಿ ಸೇರುತ್ತಲೇ ಇದೆ. ಹೀಗೆ ಕಾವೇರಿ ಸಂಪೂರ್ಣ ವಿಷಮಯವಾಗ್ತಿದ್ದು, ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊಡಗು ಜಿಲ್ಲಾಡಳಿತ ಇನ್ನಾದರೂ ಇತ್ತ ಗಮನಹರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಜೀವಜಲ ವಿಷಜಲವಾಗುತ್ತಿರುವುದನ್ನು ತಡೆಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv