Tag: loan

  • ರೈತರ ಸಾಲಮನ್ನಾ ಈಗ ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು

    ರೈತರ ಸಾಲಮನ್ನಾ ಈಗ ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು

    ಮುಂಬೈ: ರೈತರ ಸಾಲಮನ್ನಾ ಮಾಡುವುದು ಈಗ ಫ್ಯಾಶನ್ ಆಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

    ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೀವ್ರ ಸಂದರ್ಭದಲ್ಲಿ ಸಾಲವನ್ನು ಮನ್ನಾ ಮಾಡಬೇಕು. ಆದರೆ ಇದೇ ಅಂತಿಮ ಪರಿಹಾರವಾಗಬಾರದು. ಸರ್ಕಾರಗಳು ರೈತರ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಏರ್ ಇಂಡಿಯಾದ ಉದಾಹರಣೆ ನೀಡಿದ ಅವರು, ಏರ್‍ಇಂಡಿಯಾದಲ್ಲಿ ಏನಾಯ್ತು? ಸರ್ಕಾರವು ಈ ವ್ಯವಹಾರದಲ್ಲಿ ಯಾವುದೇ ವ್ಯವಹಾರವನ್ನು ಹೊಂದಿಲ್ಲ. ಕೇಂದ್ರ ಸರ್ಕಾರ ಹೆಲ್ತ್ ಕೇರ್, ಆಡಳಿತ, ಶಿಕ್ಷಣ ಮತ್ತು ಮೂಲ ಸೌಲಭ್ಯಗಳ ಕ್ಷೇತ್ರಗಳಿಗೆ ಹೆಚ್ಚು ಗಮನಕೊಡಬೇಕಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

    ರೈತರಿಗೆ ಅವಮಾನ: ವೆಂಕಯ್ಯ ನಾಯ್ಡು ಹೇಳಿಕೆಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತರಾಮ್ ಯಚೂರಿ ಪ್ರತಿಕ್ರಿಯಿಸಿ, ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ 36 ರಿಂದ 40 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ಸಾಲಮನ್ನಾ ಮಾಡುವುದನ್ನು ಫ್ಯಾಶನ್ ಎಂದು ಹೇಳುವ ಮೂಲಕ ಅನ್ನದಾತನಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

    ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಸರ್ಕಾರಗಳು ರೈತರ ಸಾಲವನ್ನು ಮನ್ನಾ ಮಾಡಿದ ಬಳಿಕ ಬುಧವಾರ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹಕಾರಿ ಸಂಘಗಳಲ್ಲಿ ರೈತರು ಮಾಡಿದ 50 ಸಾವಿರ ರೂ.ವರೆಗಿನ ಸಾಲವನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

     

    ಇದನ್ನೂ ಓದಿ: ಸಾಲ ಮನ್ನಾ ಮಾಡಿದ ನಂತ್ರ ಮೋದಿಗೆ ಸಿಎಂ ಸವಾಲ್ ಹಾಕಿದ್ದು ಹೀಗೆ

    ಇದನ್ನೂ ಓದಿ:ಯಾವ ರಾಜ್ಯದಲ್ಲಿ ಎಷ್ಟು ಸಾಲಮನ್ನಾ? ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಹೇಳಿದ್ದು ಏನು?

     

     

  • ಯಾವ ರಾಜ್ಯದಲ್ಲಿ ಎಷ್ಟು ಸಾಲಮನ್ನಾ? ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಹೇಳಿದ್ದು ಏನು?

    ಯಾವ ರಾಜ್ಯದಲ್ಲಿ ಎಷ್ಟು ಸಾಲಮನ್ನಾ? ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಹೇಳಿದ್ದು ಏನು?

    ಬೆಂಗಳೂರು: ಕೊನೆಗೂ ರೈತರ ಮತ್ತು ವಿಪಕ್ಷಗಳ ಹೋರಾಟಕ್ಕೆ ಕರ್ನಾಟಕ ಸರ್ಕಾರ ಬಗ್ಗಿದ್ದು, ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿದೆ.

    ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ, ಸಾಲಮನ್ನಾದಿಂದ ರಾಜ್ಯ ಸರ್ಕಾರಕ್ಕೆ 8,165 ಕೋಟಿ ರೂ. ಹೊರೆಯಾಗಲಿದ್ದು, 22,27,506 ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    4ನೇ ರಾಜ್ಯ: ಆರಂಭದಲ್ಲಿ ಉತ್ತರಪ್ರದೇಶದ ಯೋಗಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ, ಜೂನ್ ಎರಡನೇ ವಾರದಲ್ಲಿ ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿತ್ತು. ಇದಾದ ನಂತರ ಪಂಜಾಬ್‍ನಲ್ಲಿರುವ ಕಾಂಗ್ರೆಸ್ ಸರ್ಕಾರ ಸಾಲಮನ್ನಾ ನಿರ್ಣಯ ತೆಗೆದುಕೊಂಡ ಬಳಿಕ ಈಗ ಸಿದ್ದರಾಮಯ್ಯನವರು ಸಹಕಾರಿ ಬ್ಯಾಂಕ್ ಗಳಲ್ಲಿರುವ ಸಾಲವನ್ನು ಮನ್ನಾ ಮಾಡಲು ಮುಂದಾಗಿದ್ದಾರೆ.

    ಉತ್ತರಪ್ರದೇಶ: ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಏಪ್ರಿಲ್ 4ರಂದು ನಡೆಸಿದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಪ್ರಕಟಿಸಿದ್ದರು. 2.25 ಕೋಟಿ ರೈತರಿಗೆ ಇದರಿಂದ ಅನುಕೂಲವಾಗಲಿದ್ದು, ಸರ್ಕಾರಕ್ಕೆ 36 ಸಾವಿರ ಕೋಟಿ ಹೊರೆಯಾಗಲಿದೆ.

    ಮಹಾರಾಷ್ಟ್ರ: ಸಾಲಮನ್ನಾ ಮಾಡುವಂತೆ ರೈತರು ಪ್ರತಿಭಟನೆ ತೀವ್ರವಾದ ಬಳಿಕ ಸಿಎಂ ಫಡ್ನಾವಿಸ್ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಈ ಸಂಬಂಧ ಜೂನ್ 11 ರಂದು ಸಾಲಮನ್ನಾ ಮಾನದಂಡಕ್ಕೆ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ. ಕಡಿಮೆ ಭೂಮಿ ಹೊಂದಿರುವ ರೈತರ ಸಾಲವನ್ನು ಅಕ್ಟೋಬರ್ 31ರ ಒಳಗಡೆ ಮನ್ನಾ ಮಾಡುತ್ತೇವೆ ಅದರ ಜೊತೆ ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡ ರೈತರ ದಂಡ ಹಾಗೂ ಬಡ್ಡಿಯನ್ನು ಪಾವತಿಸುತ್ತೇವೆ ಎಂದು ಫಡ್ನಾವಿಸ್ ಹೇಳಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ 30 ಸಾವಿರ ಕೋಟಿ ಹೊರೆ ಬೀಳಲಿದೆ.

    ಪಂಜಾಬ್: ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜೂನ್ 20 ರಂದು 10 ಲಕ್ಷ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದೆ. 5 ಎಕರೆ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ 2 ಲಕ್ಷ ರೂ.ವರೆಗಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ. ಅಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಧನವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗುವುದು ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ. ಸಾಲಮನ್ನಾದಿಂದಾಗಿ ಪಂಜಾಬ್ ಸರ್ಕಾರಕ್ಕೆ 24 ಸಾವಿರ ಕೋಟಿ ಹೊರೆ ಬೀಳಲಿದೆ.

    ಕೇಂದ್ರ ಸರ್ಕಾರ ಹೇಳಿದ್ದು ಏನು?
    ಸಾಲಮನ್ನಾ ಮಾಡಬೇಕೋ? ಬೇಡವೋ ಎನ್ನುವುದು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಈ ವಿಚಾರವನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ, ಇದನ್ನು ಬಿಟ್ಟು ಹೊಸದಾಗಿ ಏನು ಹೇಳುವುದಿಲ್ಲ ಎಂದು ಜೂನ್ ಮೂರನೇ ವಾರದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

    ಆರ್‍ಬಿಐ ಏನು ಹೇಳುತ್ತೆ?
    ರೈತರ ಸಾಲಮನ್ನಾ ಮಾಡಿದರೆ ಹಣಕಾಸು ಸ್ಥಿತಿ ಬಿಗಡಾಯಿಸಬಹುದು. ದೇಶದ ಆರ್ಥಿಕ ಸ್ಥಿತಿ ಕೈ ತಪ್ಪಿ ಹೋಗಬಹುದು. ಈ ಯೋಜನೆಗಳನ್ನು ಪ್ರಕಟಿಸುವ ಮೊದಲು 100 ಬಾರಿ ಯೋಚಿಸಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆರ್‍ಬಿಐ ಗವರ್ನರ್ ಉರ್ಜಿತ್ ಪಟೇಲ್ ಈ ಹಿಂದೆ ಎಚ್ಚರಿಕೆ ನೀಡಿದ್ದರು.

    ಇದನ್ನೂ ಓದಿ: ಸಾಲ ಮನ್ನಾ ಮಾಡಿದ ನಂತ್ರ ಮೋದಿಗೆ ಸಿಎಂ ಸವಾಲ್ ಹಾಕಿದ್ದು ಹೀಗೆ

  • ಸಾಲ ಮನ್ನಾ ಮಾಡಿದ ನಂತ್ರ ಮೋದಿಗೆ ಸಿಎಂ ಸವಾಲ್ ಹಾಕಿದ್ದು ಹೀಗೆ

    ಸಾಲ ಮನ್ನಾ ಮಾಡಿದ ನಂತ್ರ ಮೋದಿಗೆ ಸಿಎಂ ಸವಾಲ್ ಹಾಕಿದ್ದು ಹೀಗೆ

    ಬೆಂಗಳೂರು: ಕೊನೆಗೂ ಮುಖ್ಯಮಂತ್ರಿಗಳು ರೈತರ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಿದ್ದು, ಇದೀಗ ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

    ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಅಂತೆಯೇ ನೀವೂ ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಮನವಿ ಮಾಡಿದ್ದಾರೆ.

    ನೀವು ವಾಣಿಜ್ಯ ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿಯವರಿಗೆ ಟ್ವಿಟ್ಟರ್ ಮೂಲಕ ಸಿಎಂ ಪರೋಕ್ಷವಾಗಿಯೇ ಚಾಲೆಂಜ್ ಹಾಕಿದ್ದಾರೆ.

    ರೈತರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದ ಅಲ್ಪವಾಧಿ 50 ಸಾವಿರ ಸಾಲವನ್ನು ಮನ್ನಾ ಮಾಡಲಾಗುವುದು. 2017ರ ಜೂನ್ 20ಕ್ಕೆ ಕೊನೆಗೊಂಡಂತೆ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಒಟ್ಟು 8165 ಕೋಟಿ ರೂ. ಅಲ್ಪವಾಧಿ ಸಾಲ ಮನ್ನಾವಾಗಲಿದ್ದು ಇದರಿಂದಾಗಿ 22 ಲಕ್ಷ ರೈತರಿಗೆ ಸಹಾಯವಾಗಲಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

  • ನಾವು ಮಲ್ಯನ ಥರ ಅಲ್ಲ, ಸಾಲ ಮಾಡಿ ಓಡಿ ಹೋಗಲ್ಲ- ವಸೂಲಿಗೆ ಬಂದವರ ವಿರುದ್ಧ ರೈತರ ಆಕ್ರೋಶ

    ನಾವು ಮಲ್ಯನ ಥರ ಅಲ್ಲ, ಸಾಲ ಮಾಡಿ ಓಡಿ ಹೋಗಲ್ಲ- ವಸೂಲಿಗೆ ಬಂದವರ ವಿರುದ್ಧ ರೈತರ ಆಕ್ರೋಶ

    ಚಾಮರಾಜನಗರ: ಒಂದು ಕಡೆ ಜಿಲ್ಲಾಧಿಕಾರಿ ಬೆಳೆ ಬೆಳೆಯಿರಿ ಇಲ್ಲವಾದ್ರೆ ನೋಟಿಸ್ ಕೊಡ್ತೀನಿ ಎನ್ನುತ್ತಾರೆ. ಇನ್ನೊಂದೆಡೆ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಿ ಮಾಡಲು ಮನೆಗೆ ಬರುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೈತರು, ನಾವು ಸಾಲ ಮಾಡಿ ಓಡಿಹೋಗಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೊಸ ಸಾಲ ನೀಡ್ತೀವಿ, ಹಳೇ ಸಾಲ ತೀರಿಸಿ ಎಂದು ವಿಜಯ ಬ್ಯಾಂಕ್ ಅಧಿಕಾರಿಗಳು ಚಾಮರಾಜನಗರ ತಾಲೂಕಿನ ಹಾಲೂರು ಗ್ರಾಮದಲ್ಲಿ  ಬೆಳ್ಳಂಬೆಳ್ಳಿಗೆ ರೈತರ ಮನೆ ಬಾಗಿಲಿಗೆ ಹೋಗಿ ಸಾಲ ವಸೂಲಾತಿಗೆ ಮುಂದಾಗಿದ್ದಾರೆ.

    ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದು ಯಾವ ಬೆಳೆಯನ್ನು ಬೆಳೆದಿಲ್ಲ. ಹೀಗಿರುವಾಗ ನಾವು ಹಳೇ ಸಾಲ ಹೇಗೆ ತೀರಿಸುವುದು. ನಮಗೆ ಹೊಸ ಸಾಲವೇನೂ ಬೇಡ. ನಾವು ಬೆಳೆ ಬೆಳೆದು ಹಳೇ ಸಾಲವನ್ನು ತೀರಿಸುತ್ತೀವಿ. ನಮಗೇನೂ ಹೊಸ ಸಾಲದ ಅಗತ್ಯವಿಲ್ಲ. ನಮಗೂ ಸ್ವಾಭಿಮಾನ ಇದೆ. ನಾವೇನು ಮಲ್ಯ ರೀತಿ ದೇಶ ಬಿಟ್ಟು ಹೋಗಲ್ಲ. ಸಾಲ ತೀರಿಸುತ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ಹಾಲೂರಿನಲ್ಲಿರುವ ವಿಜಯಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ರು.

  • ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

    ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

    -ಬ್ಯಾಂಕ್‍ನಿಂದ ರೈತನಿಗೆ ಸ್ಥಿರಾಸ್ಥಿ ಜಪ್ತಿ ವಾರೆಂಟ್

    -ಸಿಎಂ ಆದೇಶ ಮೀರಿ ಬಲವಂತದ ವಸೂಲಿಗೆ ಮುಂದಾಗಿರುವ ಬ್ಯಾಂಕ್

    ರಾಯಚೂರು: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು ರೈತರು ಸಾಲದ ಸುಳಿಯಲ್ಲಿ ನಲುಗಿ ಹೋಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನೋಟಿಸ್ ನೀಡಬಾರದು ಎಂದು ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ಬಡ್ಡಿಗೆ ಬಡ್ಡಿ ಹಾಕಿ ರೈತನ ಮನೆ, ಜಮೀನಿನ ಹರಾಜಿಗೆ ಬ್ಯಾಂಕ್ ಮುಂದಾಗಿದೆ.

    ದೇವದುರ್ಗದ ಗೂಗಲ್ ಗ್ರಾಮದ ರೈತ ದೊಡ್ಡವಿರುಪಾಕ್ಷಪ್ಪ ಬ್ಯಾಂಕ್ ನೋಟಿಸ್‍ಗಳನ್ನ ಹಿಡಿದು ಸಹಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.

    ಐದು ಎಕರೆ 12 ಗುಂಟೆ ಜಮೀನು ಹೊಂದಿರುವ ದೊಡ್ಡವಿರುಪಾಕ್ಷಪ್ಪ ಕೃಷಿ ಚಟುವಟಿಕೆಗಳಿಗಾಗಿ ಇಲ್ಲಿನ ಕೊಪ್ಪರ ಶಾಖೆಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನಲ್ಲಿ 5 ಲಕ್ಷ ಸಾಲ ಪಡೆದಿದ್ದರು. ಆದ್ರೆ ಸಾಲದ ಮೊತ್ತವನ್ನ 10 ಲಕ್ಷ 81 ಸಾವಿರ ಅಂತ ಹೇಳುತ್ತಿರುವ ಬ್ಯಾಂಕ್ ಈಗ ಬಡ್ಡಿಗೆ ಬಡ್ಡಿ ಸೇರಿಸಿ 24 ಲಕ್ಷ 42 ಸಾವಿರ ಕಟ್ಟುವಂತೆ ನೋಟೀಸ್ ನೀಡಿದೆ. ಸಾಲ ಪಾವತಿಸದಿದ್ದರೆ ಚಿರಾಸ್ಥಿಗಳಾದ ಮನೆ, ಜಮೀನನ್ನ ಹರಾಜು ಹಾಕುವುದಾಗಿ ವಾರೆಂಟ್ ನೀಡಿದೆ. ಇದರಿಂದ ದಿಗಿಲುಗೊಂಡಿರುವ ರೈತ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತಿದ್ದಾರೆ.

    2006 ರಿಂದ 9 ಕಂತುಗಳಲ್ಲಿ ಐದು ಲಕ್ಷ ರೂಪಾಯಿ ಸಾಲ ಪಡೆದ ರೈತ ಈಗಲೂ ಸಾಲ ತೀರಿಸಲು ಸಿದ್ಧರಿದ್ದಾರೆ. ಆದ್ರೆ ನ್ಯಾಯಯುತವಾದ ಮೊತ್ತವನ್ನ ನಿಗದಿ ಪಡಿಸಿ ಕಂತುಗಳಲ್ಲಿ ಕಟ್ಟಲು ಅವಕಾಶ ಕೊಡಿ ಅಂತ ಕೇಳುತ್ತಿದ್ದಾರೆ. ಇನ್ನೂ ರೈತನ ಬೆಂಬಲಕ್ಕೆ ನಿಂತಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬ್ಯಾಂಕ್‍ನ ನಡೆಯನ್ನ ಖಂಡಿಸಿದೆ. ರೈತನ ಸ್ಥಿರಾಸ್ಥಿ ಜಪ್ತಿಗೆ ಮುಂದಾದ್ರೆ ಪರಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತ ರೈತ ಮುಖಂಡ ಚಾಮರಸ ಮಾಲೀಪಾಟೀಲ್ ಎಚ್ಚರಿಸಿದ್ದಾರೆ.

    ಒಟ್ಟಿನಲ್ಲಿ, ಸತತ ಮೂರು ವರ್ಷಗಳ ಬರಗಾಲ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತ ವಿರುಪಾಕ್ಷಪ್ಪನಿಗೆ ಬ್ಯಾಂಕ್‍ನ ಸ್ಥಿರಾಸ್ಥಿ ಜಪ್ತಿ ವಾರೆಂಟ್ ದಿಕ್ಕುಕಾಣದಂತೆ ಮಾಡಿದೆ. ಕನಿಷ್ಠ ಈಗಲಾದ್ರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಸಾಲ ತೀರಿಸಲು ಬ್ಯಾಂಕ್ ಅನುವುಮಾಡಿಕೊಡಬೇಕಿದೆ.

  • ಮಂಡ್ಯ: ಮಳೆ-ಗಾಳಿ ರಭಸಕ್ಕೆ ನೆಲಕಚ್ಚಿದ ಬಾಳೆ

    ಮಂಡ್ಯ: ಮಳೆ-ಗಾಳಿ ರಭಸಕ್ಕೆ ನೆಲಕಚ್ಚಿದ ಬಾಳೆ

    ಮಂಡ್ಯ: ಇಷ್ಟು ದಿನ ಭೀಕರ ಬರಗಾಲದಿಂದ ತತ್ತರಿಸಿದ್ದ ಮಂಡ್ಯ ರೈತರು, ಇದೀಗ ಮಳೆಗಾಳಿಯ ರಭಸಕ್ಕೆ ಬೆಳೆ ನಾಶವಾಗಿ ಕಂಗಾಲಾಗಿದ್ದಾರೆ.

    ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹಡೇನಹಳ್ಳಿ ಗ್ರಾಮದಲ್ಲಿ ಬಾಳೆ ತೋಟ ಬಹುತೇಕ ನಾಶವಾಗಿದೆ. ಗ್ರಾಮದ ಮಾಯಣ್ಣಗೌಡ ಎಂಬುವರಿಗೆ ಸೇರಿದ 8.5 ಎಕರೆ ತೋಟದಲ್ಲಿ ಬಾಳೆ ಬೆಳೆದಿದ್ದರು.

    ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬಾಳೆ ನೆಲ ಕಚ್ಚಿರೋದ್ರಿಂದ ರೈತ ಮಾಯಣ್ಣಗೌಡರಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಮಾಯಣ್ಣಗೌಡ ಮನವಿ ಮಾಡಿಕೊಂಡಿದ್ದಾರೆ.

     

  • ಅರೆಸ್ಟ್ ಆದ ಮೂರೇ ಗಂಟೆಗಳಲ್ಲಿ ಮಲ್ಯಗೆ ಜಾಮೀನು

    ಅರೆಸ್ಟ್ ಆದ ಮೂರೇ ಗಂಟೆಗಳಲ್ಲಿ ಮಲ್ಯಗೆ ಜಾಮೀನು

    ಲಂಡನ್: ಮದ್ಯ ದೊರೆ ವಿಜಯ್ ಮಲ್ಯ ಇಂದು ಬೆಳಿಗ್ಗೆ ಲಂಡನ್‍ನಲ್ಲಿ ಬಂಧನವಾದ ಮೂರೇ ಗಂಟೆಗಳಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.

    ಗಡೀಪಾರು ವಾರೆಂಟ್ ಮೇಲೆ ಲಂಡನ್‍ನ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ 9.30ರ ವೇಳೆಗೆ ಮಲ್ಯರನ್ನು ಬಂಧಿಸಲಾಗಿತ್ತು. ನಂತರ ಲಂಡನ್‍ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಾಜರುಪಡಿಸಲಾಗಿದ್ದು, ಮಲ್ಯಗೆ ಜಾಮೀನು ಸಿಕ್ಕಿದೆ.

    ಜಾಮೀನು ಸಿಕ್ಕ ಬಳಿಕ ಮಲ್ಯ ಟ್ವೀಟ್ ಮಾಡಿದ್ದು, ಇದು ಎಂದಿನ ಭಾರತೀಯ ಮಾಧ್ಯಮಗಳ ಹೈಪ್. ಅಂದುಕೊಂಡಂತೆ ಕೋರ್ಟ್‍ನಲ್ಲಿ ಗಡೀಪಾರು ವಿಚಾರಣೆ ಇಂದು ಆರಂಭವಾಗಿದೆ ಎಂದು ಹೇಳಿದ್ದಾರೆ.

    ಮಲ್ಯ ಬಂಧನದ ಬಗ್ಗೆ ಬ್ರಿಟಿಷ್ ಅಧಿಕಾರಿಗಳು ಸಿಬಿಐಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಲಂಡನ್‍ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಗಡೀಪಾರು ಮಾಡ್ತಾರಾ?: ಇಂಗ್ಲೆಂಡಿನ ಮ್ಯೂಚುವಲ್ ಲೀಗಲ್ ಅಸಿಸ್ಟೆನ್ಸ್ ಟ್ರೀಟಿಯ ಪ್ರಕಾರ ಮಲ್ಯರನ್ನ ಭಾರತಕ್ಕೆ ಗಡೀಪಾರು ಮಡಲಾಗುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಭಾರತಕ್ಕೆ ಕರೆತಂದ ನಂತರ ಪ್ರವೆಂನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ ಅಡಿ ಮಲ್ಯ ವಿಚಾರಣೆ ನಡೆಯಲಿದೆ.

    ವಿಜಯ್ ಮಲ್ಯ 17 ಬ್ಯಾಂಕ್‍ಗಳ ಒಕ್ಕೂಟಕ್ಕೆ ಸುಮಾರು 9 ಸಾವಿರ ಕೋಟಿ ರೂ. ಸಾಲ ಹಿಂದಿರುಗಿಸಬೇಕಿದ್ದು, ಕಳೆದ ವರ್ಷ ಮಾರ್ಚ್ 2ರಂದು ಭಾರತ ತೊರೆದು ಲಂಡನ್‍ಗೆ ಹೋಗಿ ನೆಲೆಸಿದ್ದರು.

  • ಕೊಪ್ಪಳದಲ್ಲಿ ಲೋನ್ ಮಾಫಿಯಾ; ರೈತರ ಹೆಸರಲ್ಲಿ ಹಣ ಗುಳಂ ಮಾಡುತ್ತಿರುವ ಏಜೆಂಟ್ ಗಳು!

    ಕೊಪ್ಪಳದಲ್ಲಿ ಲೋನ್ ಮಾಫಿಯಾ; ರೈತರ ಹೆಸರಲ್ಲಿ ಹಣ ಗುಳಂ ಮಾಡುತ್ತಿರುವ ಏಜೆಂಟ್ ಗಳು!

    ಕೊಪ್ಪಳ: ಭೀಕರ ಬರಕ್ಕೆ ತುತ್ತಾದ ರೈತರು ಮಾಡಿದ ಸಾಲ ಹೇಗೇ ತೀರಿಸೋದಪ್ಪ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ರೆ, ಕೆಲ ಖದೀಮರು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲೇ ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿದ್ದಾರೆ. ಈ ಮೂಲಕ ರೈತರಿಗೆ ವಂಚಿಸಿದ್ದಲ್ಲದೇ ಸರ್ಕಾರಕ್ಕೂ ಮೋಸ ಮಾಡುವ ದಂಧೆ ಹಿಂದುಳಿದ ಜಿಲ್ಲೆ ಎಂದೇ ಹಣೇ ಪಟ್ಟಿ ಹೊತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿದೆ.

    ಭತ್ತದ ಕಣಜ ಎಂಬ ಖ್ಯಾತಿಯ ಗಂಗಾವತಿ ತಾಲೂಕಿನಲ್ಲಿ ಲೋನ್ ಮಾಫಿಯಾ ಹೆಚ್ಚು ನಡೆಯುತ್ತಿದ್ದು, ಕೆಲ ಪ್ರಕರಣ ಬೆಳಕಿಗೆ ಬಂದಿವೆ. ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿ ಮಹಮ್ಮದ್ ಅಬ್ದುಲ್ ಮಾಜೀದ್ ಎಂಬಾತ ತನ್ನ ಹೆಸರಿನಲ್ಲಿ 1 ಗುಂಟೆ 20 ಎಕರೆ ಜಮೀನಿದ್ದು, ಅದನ್ನೆ 21 ಎಕರೆ 20 ಗುಂಟೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಒಂದೇ ತಿಂಗಳಲ್ಲಿ ಮೂರು ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಗಂಗಾವತಿ ನಗರದ ಎಸ್‍ಬಿಎಚ್ ಬ್ಯಾಂಕ್ ನಲ್ಲಿ ಮೂರು ತಿಂಗಳಲ್ಲಿ ಮೂರು ಭಾರಿ ಸಾಲ ಮಾಡಿದ್ದು ಅದರ ಮೊತ್ತ 22 ಲಕ್ಷ ರೂ. ಇದೆ. ಅದರಂತೆ ಸಿದ್ದಾಪುರ ಶಾಖೆಯ ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ 15 ಲಕ್ಷ ರೂಪಾಯಿ ಸಾಲ ಮಾಡಿದ್ದಾನೆ. ಒಬ್ಬ ವ್ಯಕ್ತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಇಷ್ಟೊಂದು ಸಾಲ ಮಾಡಿದ್ದಾನೆಂದ್ರೆ ಇದಕ್ಕೆ ಬ್ಯಾಂಕಿನ ಸಿಬ್ಬಂದಿ ಸಾಥ್ ಕೊಟ್ಟಿರುವುದು ಕಾಣುತ್ತದೆ. ಈ ಬಗ್ಗೆ ಸ್ಥಳೀಯರಾದ ಮೆಹೆಬೂಬ್ ಸಾಬ್ ಎಂಬವರು ಬ್ಯಾಂಕ್ ಗಳಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ.

    ಗಂಗಾವತಿ ತಾಲೂಕಿನಾದ್ಯಾಂತ ಲೋನ್ ಮಾಫಿಯಾ ಜೋರಾಗಿದೆ. ಮಾಫಿಯಾದಲ್ಲಿ ಬ್ಯಾಂಕ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ನಕಲಿ ದಾಖಲೆ ಸೃಷ್ಟಿ ಮಾಡುವವರು ಶಾಮೀಲಾಗಿದ್ದಾರೆ. ಎಂ.ಎ.ಮನನ್ ಎಂಬಾತ ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಬಳಿ ಕೇಳೋಕೆ ಹೋದ್ರೆ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ನಾವೇನು ಮಾಡಿಲ್ಲ ಎಂದು ಕೇಳಿದವರಿಗೇ ಜೋರು ಮಾಡಿ ಹೇಳಿಕೆ ನೀಡಲು ನಿರಾಕರಿಸುತ್ತಿದ್ದಾರೆ.

    ಬ್ಯಾಂಕ್ ಗಳು ಸಾಲ ಕೊಡುವ ಮುನ್ನ ಎಲ್ಲಾ ರೀತಿಯ ಪೂರ್ವಾ ಪರ ಯೋಚಿಸಿ ಸಾಲ ನೀಡಬೇಕು. ಜನ ಸಾಮಾನ್ಯರ ಪ್ರಕರಣದಲ್ಲಿ ಅಗತ್ಯಕ್ಕೂ ಹೆಚ್ಚು ದಾಖಲೆಗಳನ್ನು ಎಲ್ಲ ಮ್ಯಾನೇಜರ್ ಗಳೂ ಕೇಳುತ್ತಾರೆ. ಗಂಗಾವತಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಯಾರೊಬ್ಬರಿಗೂ ಮಾಹಿತಿಯೇ ಇಲ್ಲ ಎಂಬುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಬದಲಾಗಿ ಬ್ಯಾಂಕ್ ಅಧಿಕಾರಿಗಳು ಜೇಬು ತುಂಬಿಸುಕೊಳ್ಳುವ ತಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ.

     

  • ಉತ್ತರಪ್ರದೇಶ ರೈತರ ಸಾಲ ಮನ್ನಾ- ಸಂಸತ್ತಿನಲ್ಲಿ ಮೋದಿ ಸರ್ಕಾರ ಹೇಳಿಕೆ

    ಉತ್ತರಪ್ರದೇಶ ರೈತರ ಸಾಲ ಮನ್ನಾ- ಸಂಸತ್ತಿನಲ್ಲಿ ಮೋದಿ ಸರ್ಕಾರ ಹೇಳಿಕೆ

    ನವದೆಹಲಿ: ರೈತರ ಸಾಲ ಮನ್ನಾ ಮಾಡಬೇಕೆಂಬ ವಿಷಯ ರಾಜಕೀಯ ನಾಯಕರಿಗೆ ಲಾಭ-ನಷ್ಟಗಳ ಲೆಕ್ಕಾಚಾರವಾಗಿದೆ. ಈ ನಡುವೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿರುವ ಹೇಳಿಕೆ ಸಾಲ ಮನ್ನಾ ವಿಚಾರಕ್ಕೆ ಹೊಸ ತಿರುವು ನೀಡಿದೆ.

    ಉತ್ತರಪ್ರದೇಶದಲ್ಲಿ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ. ಅದರ ಭಾರವನ್ನೆಲ್ಲಾ ಕೇಂದ್ರ ಸರ್ಕಾರ ಭರಿಸಲಿದೆ ಎಂದು ಕೇಂದ್ರ ಕೃಷಿ ಸಚಿವ ರಾಧ ಮೋಹನ್ ಸಿಂಗ್ ಹೇಳಿದ್ದಾರೆ.

    ಲೋಕಸಭೆಯಲ್ಲಿ ರಾಷ್ಟ್ರೀಯ ಲೋಕದಳದ ನಾಯಕ ದುಶ್ಯಂತ್ ಚೌಟಾಲ ಕೇಳಿದ ಪ್ರಶ್ನೆಗೆ ಕೃಷಿ ಸಚಿವರು ಈ ಉತ್ತರ ನೀಡಿದ್ದಾರೆ. ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದ್ರೆ ಸಾಲ ಮನ್ನಾ ಮಾಡಿದ್ರೆ ಅದರಿಂದ ದುಷ್ಪರಿಣಾಮ ಬೀರಲಿದೆ ಎಂದು ಆರ್‍ಬಿಐ ಅಭಿಪ್ರಾಯಪಟ್ಟಿರುವುದಾಗಿ ಹಣಕಾಸು ಇಲಾಖೆ ಹೇಳಿದೆ ಎಂದು ಚೌಟಾಲ ಪ್ರಶ್ನಿಸಿದ್ರು.

    ಇದಕ್ಕೆ ಉತ್ತರಿಸಿದ ರಾಧ ಮೋಹನ್ ಸಿಂಗ್, ಕೆಲವು ರಾಜ್ಯಗಳಲ್ಲಿ 3 % ಬಡ್ಡಿಯನ್ನು ನಾವು ಭರಿಸುತ್ತೇವೆ. ಜೊತೆಗೆ ರಾಜ್ಯಗಳು ಉಳಿದ 4% ಬಡ್ಡಿಯನ್ನು ಭರಿಸುತ್ತವೆ. ಉತ್ತರಪ್ರದೇಶದಲ್ಲಿ ಸರ್ಕಾರ ರಚನೆಯಾದ್ರೆ ರೈತರ ಸಾಲ ಮ್ನನಾ ಮಾಡುವುದಾಗಿ ಹೇಳಿದ್ದೆವು. ಕೇಂದ್ರ ಸರ್ಕಾರ ಇದರ ಭಾರವನ್ನ ಭರಿಸಲಿದೆ ಎಂದು ಹೇಳಿದ್ರು.

    ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಒಂದು ವೇಳೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ವಾಗ್ದಾನ ನೀಡಿತ್ತು. ಈಗ ಬಿಜೆಪಿ ಮೈತ್ರಿಕೂಟ 325 ಶಾಸಕರೊಂದಿಗೆ ಚುಕ್ಕಾಣಿಗೇರಿದೆ.

    ಆದ್ರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಒಂದು ರಾಜ್ಯದಲ್ಲಷ್ಟೇ ಅಲ್ಲ ದೇಶದಾದ್ಯಂತ ರೈತರ ಸಾಲ ಮನ್ನಾ ಮಾಡಬೇಕು ಎಂದು ಚೌಟಾಲ ಹೇಳಿದ್ದಾರೆ.

  • ರಾಯಚೂರಿನಲ್ಲಿ ವಯೋವೃದ್ಧರ ಗ್ರಾಮಗಳ ನಿರ್ಮಾಣ : ಖಾತ್ರಿಯಿಲ್ಲದ ಉದ್ಯೋಗದಿಂದ ಯುವಕರು ನಗರಪಾಲು

    ರಾಯಚೂರಿನಲ್ಲಿ ವಯೋವೃದ್ಧರ ಗ್ರಾಮಗಳ ನಿರ್ಮಾಣ : ಖಾತ್ರಿಯಿಲ್ಲದ ಉದ್ಯೋಗದಿಂದ ಯುವಕರು ನಗರಪಾಲು

    -ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ವೈಫಲ್ಯ
    -ಕೆಲಸವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೊರಟ ಜನ

    ವಿಜಯ್ ಜಾಗಟಗಲ್

    ರಾಯಚೂರು: ಹೆಗಲ ಮೇಲೊಂದು ಕೈಯಲ್ಲೊಂದು ಮೂಟೆ ಹಿಡಿದು ಬೆಂಗಳೂರು, ಪುಣೆ, ಮುಂಬೈ ಬಸ್‍ಗಾಗಿ ಜನ ಕಾಯುತ್ತಿದ್ದಾರೆ. ಈಗ ಬಸ್ ಹತ್ತಿದವರು ಕೈಯಲ್ಲೊಂದಿಷ್ಟು ಕಾಸು ಸಂಪಾದಿಸಿಕೊಂಡು ಎರಡೋ, ಮೂರೋ ತಿಂಗಳ ಬಳಿಕವಷ್ಟೇ ತಮ್ಮ ಗ್ರಾಮಗಳಿಗೆ ಮರುಳುತ್ತಾರೆ. ಅಲ್ಲಿಯವರೆಗೆ ಇಡೀ ಗ್ರಾಮವನ್ನ ಕಾಯುವವರು ವಯೋವೃದ್ಧರು ಹಾಗೂ ಬಾಗಿಲಿಗೆ ಹಾಕಿದ ಬೀಗಗಳು ಮಾತ್ರ. ಇವರು ಮರಳಿ ಬರುವವರೆಗೆ ಮನೆಗಳಲ್ಲಿ ಯಾವ ಶುಭಕಾರ್ಯಗಳೂ ಇಲ್ಲ. ಯಾಕಂದ್ರೆ ಇವರ ಬಳಿ ಮೂರು ಹೊತ್ತು ಸರಿಯಾಗಿ ಊಟಮಾಡಲು ಸಹ ಹಣವಿಲ್ಲ. ಇದು ರಾಯಚೂರಿನ ಗ್ರಾಮೀಣ ಭಾಗದ ಕೃಷಿ ಕೂಲಿಕಾರ್ಮಿಕರು ಹಾಗೂ ಸಣ್ಣ ಮತ್ತು ಅತೀಸಣ್ಣ ರೈತರ ಪ್ರತಿ ವರ್ಷದ ಪರಿಸ್ಥಿತಿ.

    ಕಳೆದ ನಾಲ್ಕೈದು ವರ್ಷಗಳಿಂದ ಬೆಂಬಿಡದೆ ಭೂತದಂತೆ ಕಾಡುತ್ತಿರುವ ಬರಗಾಲ ರೈತರನ್ನ ಇನ್ನಷ್ಟು ಬಡತನಕ್ಕೆ ತಳ್ಳುತ್ತಿದ್ದು ದೊಡ್ಡ ಸಾಲಗಾರರನ್ನಾಗಿ ಮಾಡುತ್ತಿದೆ. ಹೀಗಾಗಿ ಜನ ಬೇಸಿಗೆ ಆರಂಭದಲ್ಲೆ ನಗರ ಪ್ರದೇಶಗಳಲ್ಲಿನ ಕೂಲಿ ಕೆಲಸಗಳ ಕಡೆ ಆಕರ್ಷಿತರಾಗುತ್ತಿದ್ದಾರೆ. ಆದ್ರೆ ಗುಳೆ ತಪ್ಪಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ಶುರುವಾದ ಕಾಮ್ ಮಾಂಗೋ ಅಭಿಯಾನ ಸಹ ಗ್ರಾಮೀಣ ಜನರ ಕೈಹಿಡಿದಿಲ್ಲ. ಬರಗಾಲದಲ್ಲಿ ಕೆಲಸವಿಲ್ಲದೆ ಗುಳೆ ಹೊರಡುವ ಜನರಿಗೆ ಕೆಲಸ ನೀಡಲು ಅರ್ಜಿ ಕೇಳಿದ ಅಭಿಯಾನ ಸೋತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಕೊರತೆಯಿಂದ ಹಳ್ಳ ಹಿಡಿದಿದೆ.

    ರಾಯಚೂರು ತಾಲೂಕಿನ ಯಾಪಲದಿನ್ನಿ, ಆತ್ಕೂರು, ಉಡುಮಗಲ್-ಖಾನಪುರ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಅಡಿ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ. ಇನ್ನು ಅರ್ಜಿ ಸ್ವೀಕಾರವಾದ ಕಡೆಗಳಲ್ಲಿ ಕಾಮಗಾರಿ ಮಾಡಿದರೆ ಹಣ ಬಿಡುಗಡೆ ಮಾಡುತ್ತಿಲ್ಲ. ಬೇಸಿಗೆಯಲ್ಲಿ ಉದ್ಯೋಗ ಪಡೆದವರು ಶೇಕಡಾ 75 ರಷ್ಟು ಕಾಮಗಾರಿ ಪೂರ್ಣಗೊಳಿಸಿದರೂ ಸಂಪೂರ್ಣ ಹಣ ನೀಡಬೇಕು ಅನ್ನೋ ನಿಯಮವನ್ನೇ ಗಾಳಿಗೆ ತೂರಲಾಗಿದೆ. ಹೀಗಾಗಿ ಜನ ಸರ್ಕಾರದ ಯೋಜನೆಯನ್ನ ನಂಬದೇ ಗುಳೆ ಹೊರಟಿದ್ದಾರೆ. ರಾಯಚೂರು ತಾಲೂಕಿನ ಮರ್ಚಡ, ಗಾಜರಾಳ, ನಾನದೊಡ್ಡಿ ಗ್ರಾಮಗಳಿಂದ ಪ್ರತಿನಿತ್ಯ 20ಕ್ಕೂ ಹೆಚ್ಚು ಜನ ನಗರ ಪ್ರದೇಶಗಳ ಬಸ್ ಹತ್ತುತ್ತಿದ್ದಾರೆ.

    ಪ್ರಮುಖವಾಗಿ ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ರಾಯಚೂರು ತಾಲೂಕುಗಳಿಂದ ಹೆಚ್ಚೆಚ್ಚು ಜನ ಬರಕ್ಕೆ ಹೆದರಿ ಚಿಕ್ಕಮಕ್ಕಳನ್ನ ಕಟ್ಟಿಕೊಂಡು ಗುಳೆ ಹೋಗುತ್ತಿದ್ದಾರೆ. 2016-17ರ ಸಾಲಿನಲ್ಲಿ ಯೋಜನೆಗೆ 99 ಕೋಟಿ 68 ಲಕ್ಷ ರೂ. ಖರ್ಚು ಮಾಡಲಾಗಿದೆ ಅಂತ ಸರ್ಕಾರಿ ದಾಖಲೆಗಳು ಹೇಳುತ್ತವೆ. ಆದ್ರೆ ಕೂಲಿ ಹಣ ಸಿಗದೆ ಫಲಾನುಭವಿಗಳು ಕಂಗಾಲಾಗಿದ್ದಾರೆ. ಯೋಜನೆಯಡಿ ಜಿಲ್ಲೆಯ ಐದು ತಾಲೂಕುಗಳಲ್ಲಿ 7431 ಕುಟುಂಬಗಳು 100 ಮಾನವ ದಿನಗಳನ್ನ ಪೂರೈಸಿದ್ದರೆ, 82 ಕುಟುಂಬಗಳು 150 ದಿನಗಳ ಕೂಲಿ ಕೆಲಸವನ್ನ ಪೂರೈಸಿವೆ. ಕೃಷಿ ಹೊಂಡ, ಒಡ್ಡು ನಿರ್ಮಾಣ, ತೋಟಗಾರಿಕೆ ಸಸಿ ನೆಡುವುದು ಸೇರಿ 8633 ಕಾಮಗಾರಿಗಳು ಪೂರ್ಣಗೊಂಡಿದ್ದು, 447 ಕಾಮಗಾರಿಗಳು ಪ್ರಗತಿಯಲ್ಲಿವೆ.

    ಗುಳೆ ಹೋಗುವವರಲ್ಲಿ ಎರಡು ವಿಧ: ವೃತ್ತಿಪರ ಕೂಲಿ ಕೆಲಸಗಾರರು ಹಾಗೂ ವೃತ್ತಿಪರರಲ್ಲದ ಕೆಲಸಗಾರರು ಇದ್ದಾರೆ. ನರೇಗಾ ಅಡಿ ಪ್ರತಿದಿನ 233 ರೂಪಾಯಿ ಕೂಲಿ ನೀಡಲಾಗುತ್ತೆ. ಆದ್ರೆ ವೃತ್ತಿಪರ ಕೂಲಿಕಾರರು ನಗರ ಪ್ರದೇಶಗಳಲ್ಲಿ 500 ರಿಂದ 600 ರೂಪಾಯಿ ದುಡಿಯುತ್ತಾರೆ. ಹೀಗಾಗಿ ವೃತ್ತಿಪರ ಕೂಲಿಕಾರರ ಗುಳೆ ತಡೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಂತ ರಾಯಚೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ. ಇನ್ನು ವೃತ್ತಿಪರರಲ್ಲದ ಕೂಲಿಕಾರರಿಗಾಗಿ ಯೋಜನೆಯಡಿ ಕೆಲಸ ನೀಡುತ್ತಿದ್ದೇವೆ. ಈಗಾಗಲೇ 58 ಲಕ್ಷ ಮಾನವ ದಿನಗಳ ಸೃಜನೆ ಮಾಡಿದ್ದೇವೆ ಅಂತ ತಿಳಿಸಿದ್ದಾರೆ.

    ಕೇವಲ ಉದ್ಯೋಗ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆ, ಬೆಳೆ ಹಾನಿ, ಸಾಲ ತೀರಿಸಲಾಗದೆ ಜನ ಗುಳೆ ಹೋಗುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರ ಪರಿಹಾರವನ್ನ ಸಮರ್ಪಕವಾಗಿ ವಿತರಿಸದೇ ಪರಸ್ಪರ ಆರೋಪಗಳಲ್ಲಿ ತೊಡಗಿದ್ದು, ಸರ್ಕಾರದ ಮೇಲಿನ ವಿಶ್ವಾಸವನ್ನ ಜನ ಕಳೆದುಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಇನ್ನೂ ಭೀಕರ ಬರಗಾಲದ ಮುನ್ಸೂಚನೆಯಿರುವುದರಿಂದ ರೈತರು ಮಾರ್ಚ್ ಆರಂಭದಲ್ಲೇ ಗುಳೆ ಹೋಗುತ್ತಿದ್ದಾರೆ.