Tag: lingasaguru

  • ಕೊರೊನಾ ಭೀತಿ ನಡುವೆಯೂ ಜೋರಾಗಿ ನಡೆದ ಜಾತ್ರೆ: ಸಾವಿರಾರು ಭಕ್ತರು ಭಾಗಿ

    ಕೊರೊನಾ ಭೀತಿ ನಡುವೆಯೂ ಜೋರಾಗಿ ನಡೆದ ಜಾತ್ರೆ: ಸಾವಿರಾರು ಭಕ್ತರು ಭಾಗಿ

    -ಜನ ಸೇರುವುದನ್ನ ತಡೆಯಲು ವಿಫಲವಾದ ತಾಲೂಕು ಆಡಳಿತ

    ರಾಯಚೂರು: ಶ್ರಾವಣ ಮಾಸ ಹಿನ್ನೆಲೆ ಉತ್ತರ ಕರ್ನಾಟಕದಲ್ಲಿ ಜಾತ್ರೆಗಳು ಜೋರಾಗೇ ನಡೆಯುತ್ತವೆ. ಆದ್ರೆ ಕೊರೊನಾ ಸೋಂಕು ಹರಡುವಿಕೆ ತಡೆಯಲು ಜನ ಸೇರುವುದನ್ನ ನಿಯಂತ್ರಿಸಲು ಜಾತ್ರೆಗಳಿಗೆ ನಿರ್ಭಂದ ಹೇರಲಾಗಿದೆ. ಇದೆಲ್ಲಾ ನಿಯಮಗಳನ್ನ ಗಾಳಿಗೆ ತೂರಿ ರಾಯಚೂರಿನ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಯನ್ನ ಜೋರಾಗಿ ಮಾಡಲಾಗಿದೆ. ಜಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.

    ಕೊರೊನಾ ಭೀತಿ ಮರೆತು ಜೋರಾಗಿ ನಡೆದ ವೀರಭದ್ರೇಶ್ವರ ದೇವರ ಜಾತ್ರೆಯಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನ ಪಾಲ್ಗೊಂಡಿದ್ದರು. ಕೊರೊನಾ ಸೋಂಕು ಹರಡುವಿಕೆ ಭಯವೇ ಇಲ್ಲದೇ ಜಾತ್ರೆಯಲ್ಲಿ ನಾನಾ ಸಂಪ್ರದಾಯ ಆಚರಣೆ ಮಾಡಲಾಗಿದೆ.

    ಪುರವಂತಿಕೆ ಸೇವೆ, ಕಳಸಾರೋಹಣ, ಬಾಯಿಗೆ ಶಸ್ತ್ರ ಹಾಕಿಸಿಕೊಂಡು ವೀರಭದ್ರೇಶ್ವರ ಭಕ್ತರು ಭಕ್ತಿ ಮೆರೆದಿದ್ದಾರೆ. ಸಾವಿರಾರು ತೆಂಗಿನಕಾಯಿ ಒಡೆದು ಭಕ್ತರು ಹರಕೆ ತೀರಿಸಿದ್ದಾರೆ. ಜಾತ್ರೆ ಆಚರಣೆಯಲ್ಲಿ ಜನ ಸೇರುವುದನ್ನ ತಡೆಯುವಲ್ಲಿ ಲಿಂಗಸೂಗುರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.

  • ಕರ್ತವ್ಯನಿರತ ಬಸ್ ನಿರ್ವಾಹಕ ಆತ್ಮಹತ್ಯೆಗೆ ಶರಣು

    ಕರ್ತವ್ಯನಿರತ ಬಸ್ ನಿರ್ವಾಹಕ ಆತ್ಮಹತ್ಯೆಗೆ ಶರಣು

    ರಾಯಚೂರು: ಕರ್ತವ್ಯ ನಿರತ ಸಾರಿಗೆ ಬಸ್ ಕಂಡಕ್ಟರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಲಿಂಗಸಗೂರಿನ ಲಕ್ಷ್ಮಿ ಗುಡಿ ಹಳ್ಳದ ಬಳಿ ನಡೆದಿದೆ. ಈರಣ್ಣ(32) ಆತ್ಮಹತ್ಯೆಗೆ ಶರಣಾದ ಎನ್.ಇ.ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ.

    ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ನಿರ್ವಾಹಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈರಣ್ಣ ಡ್ರೈವರ್ ಕಂ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿದ್ದ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಡಿಪೋಕ್ಕೆ ಸೇರಿದ್ದ ಬಸ್ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದರು. ಯಲಬುರ್ಗಾದಿಂದ ಕಲಬುರಗಿ ಮಾರ್ಗ ಹೋಗುವ ಬಸ್ ನಲ್ಲಿ ಕರ್ತವ್ಯದಲ್ಲಿದ್ದ ಈರಣ್ಣ ಲಿಂಗಸುಗೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಡ್ರೈವರ್ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ನಿನ್ನೆಯಷ್ಟೇ ಬಸ್ ನಲ್ಲಿ ಪ್ರಯಾಣಿಕನೋರ್ವ ಟಿಕೆಟ್ ತೆಗೆದುಕೊಳ್ಳದ ಕಾರಣ ತಪಾಸಣಾ ಅಧಿಕಾರಿಯಿಂದ ಈರಣ್ಣನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದ್ರೆ ಈರಣ್ಣ ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ. ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತನ ಕುಟುಂಬದವರು ಬಂದ ಮೇಲೆ ಪ್ರಕರಣ ದಾಖಲಾಗಲಿದೆ.

  • SSLC ಕನ್ನಡ ಪರೀಕ್ಷೆ: ರಾಯಚೂರಿನಲ್ಲಿ ಸಾಮೂಹಿಕ ನಕಲು

    SSLC ಕನ್ನಡ ಪರೀಕ್ಷೆ: ರಾಯಚೂರಿನಲ್ಲಿ ಸಾಮೂಹಿಕ ನಕಲು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ವೇಳೆ ಎಗ್ಗಿಲ್ಲದೆ ಸಾಮೂಹಿಕ ನಕಲು ನಡೆದಿದೆ. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಹಾಳೆಯಲ್ಲಿ ಪ್ರಶ್ನೆಗಳನ್ನು ಬರೆದು ವಿದ್ಯಾರ್ಥಿಗಳು ಹೊರಗೆ ಎಸೆದಿದ್ದಾರೆ. ಹೊರಗಡೆ ನಿಂತವರು ಉತ್ತರಗಳ ಚೀಟಿಗಳನ್ನ ಕಿಟಕಿ ಮೂಲಕ ನೀಡಿದ್ದು ಸಾಮೂಹಿಕ ನಕಲು ಭರ್ಜರಿಯಾಗಿ ನಡೆದಿದೆ.

    ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಎದುರಲ್ಲೇ ಸಾಮೂಹಿಕ ನಕಲು ನಡೆದರು ತಡೆಯಲು ಸಾಧ್ಯವಾಗಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ಯಾವುದೇ ಭದ್ರತೆಯಿಲ್ಲದಿರುವುದೇ ಸಾಮೂಹಿಕ ನಕಲು ನಡೆಯಲು ಕಾರಣವಾಗಿದೆ.

    ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಮಾಧ್ಯಮಗಳ ಪ್ರವೇಶ ನಿಷೇಧಿಸಲಾಗಿದ್ದು, ಸಾಮೂಹಿಕ ನಕಲಿಗೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ. ಕನ್ನಡ ವಿಷಯದ ಪರೀಕ್ಷೆಗೇ ಸಾಮೂಹಿಕ ನಕಲು ನಡೆದಿದ್ದು ಇನ್ನೂ ಗಣಿತ ಹಾಗೂ ವಿಜ್ಞಾನ ವಿಷಯದ ಪರೀಕ್ಷೆ ವೇಳೆ ಹೆಚ್ಚಿನ ಪ್ರಮಾಣದ ಪರೀಕ್ಷಾ ಅಕ್ರಮ ನಡೆಯುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿ ವರದಿ ಬಳಿಕ ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 26,066ವಿದ್ಯಾರ್ಥಿಗಳಲ್ಲಿ 25,144 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 922 ವಿದ್ಯಾರ್ಥಿಗಳು ಗೈರಾಗಿದ್ದಾರೆ.

     

  • ರಥೋತ್ಸವ ವೇಳೆ ನೂಕುನುಗ್ಗಲು : ರಥದ ಚಕ್ರಕ್ಕೆ ಸಿಲುಕಿ ಮೂವರ ಕಾಲು ಮುರಿತ

    ರಥೋತ್ಸವ ವೇಳೆ ನೂಕುನುಗ್ಗಲು : ರಥದ ಚಕ್ರಕ್ಕೆ ಸಿಲುಕಿ ಮೂವರ ಕಾಲು ಮುರಿತ

    -ಮಹಿಳೆಯರಿಂದಲೇ ಎಳೆಯಲ್ಪಡುವ ದುರ್ಗಮ್ಮಾದೇವಿ ತೇರು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಿರೇಅಂತರಗಂಗೆ ಗ್ರಾಮದಲ್ಲಿ ದುರ್ಗಮ್ಮ ದೇವಿ ಜಾತ್ರೆ ವೇಳೆ ತೇರಿನ ಗಾಲಿ ಹರಿದು ಮೂರು ಜನ ಭಕ್ತರ ಕಾಲು ಮುರಿದಿವೆ.

    ಈರಮ್ಮ, ಸುನಿತಾ, ಈರಮ್ಮ ಕಾಲು ಮುರಿದು ತೀವ್ರ ಗಾಯಗೊಂಡಿರುವ ಮಹಿಳೆಯರು. ಹೊಸದಾಗಿ ನಿರ್ಮಿಸಿದ್ದ ತೇರನ್ನ ಜಾತ್ರೆಯ ನಿಮಿತ್ತ ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯರು ರಥದ ಚಕ್ರಕ್ಕೆ ಸಿಲುಕಿದ್ದಾರೆ.

    ಹಿಂದಿನಿಂದಲೂ ಮಹಿಳೆಯರಿಂದಲೇ ನಡೆಯುತ್ತಿರುವ ಜಾತ್ರೆಯಲ್ಲಿ ಮಹಿಳೆಯರೇ ತೇರನ್ನ ಎಳೆಯುತ್ತಾರೆ. ದುರಾದೃಷ್ಠವಶಾತ್ ಈ ಬಾರಿ ಮೂವರು ಮಹಿಳೆಯರು ಕಾಲು ಕಳೆದುಕೊಳ್ಳುವ ಸ್ಥಿತಿ ಎದುರಿಸುತ್ತಿದ್ದಾರೆ. ಗಾಯಾಳುಗಳನ್ನ ಮಸ್ಕಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.

    ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರ ಯೋಗಕ್ಷೇಮ ವಿಚಾರಿಸಿದರು. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ರಾಯಚೂರಿನಲ್ಲಿ ಲವ್ ಜಿಹಾದ್…!?

    ರಾಯಚೂರಿನಲ್ಲಿ ಲವ್ ಜಿಹಾದ್…!?

    -ಸುಳ್ಳು ದಾಖಲೆ ಸೃಷ್ಠಿಸಿ ಅಪ್ರಾಪ್ತೆಯನ್ನ ಮದುವೆಯಾಗಲು ಮುಂದಾದ ಯುವಕ

    -ಬೀದರ್ ಯುವತಿಯ ನಕಲಿ ದಾಖಲೆಗಳು ಲಿಂಗಸುಗೂರಿನಲ್ಲಿ ಸೃಷ್ಠಿ

    ರಾಯಚೂರು: ರಾಯಚೂರಿನಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಳ್ಳು ದಾಖಲೆಗಳನ್ನ ಸೃಷ್ಠಿಸಿ ಅಪ್ರಾಪ್ತ ಹಿಂದೂ ಹುಡುಗಿಯನ್ನ ಮುಸ್ಲಿಂ ಹುಡುಗ ಮದುವೆಯಾಗಲು ಮುಂದಾಗಿರುವುದು ಬಯಲಾಗಿದೆ. ಸಂಬಂಧವೇ ಇಲ್ಲದ ಗ್ರಾಮದ ಸುಳ್ಳು ದಾಖಲೆಗಳನ್ನ ಸೃಷ್ಠಿಸಿರುವ ಈ ದೊಡ್ಡ ಜಾಲದ ಬಗ್ಗೆ ಅನುಮಾನ ಮೂಡಿಸಿದೆ. ಸದ್ಯ ಹುಡುಗನ ವಿರುದ್ದ ಹುಡುಗಿ ಪೋಷಕರು ಬೀದರ್‍ನಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ.

    ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಮದುವೆ ನೋಂದಣಿ ಕಚೇರಿಯಲ್ಲಿ ಮಾರ್ಚ್ 6, 2017 ರಂದು ವಿವಾಹಕ್ಕೆ ಅರ್ಜಿಹಾಕಿ ನಾಪತ್ತೆಯಾಗಿರುವ ಯುವಕ-ಯುವತಿ ಮೂಲತಃ ಬೀದರ್ ನವರು. ಆದ್ರೆ ಆಧಾರ್ ಕಾರ್ಡ್ ಹಾಗೂ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಪ್ರಕಾರ ಅಪ್ರಾಪ್ತೆಯಾಗಿರುವ ಯುವತಿಯ ನಕಲಿ ದಾಖಲೆಗಳನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆ ಹಾಗೂ ಇಲ್ಲಿನ ಮೆದಕಿನಾಳ ಗ್ರಾಮ ಪಂಚಾಯ್ತಿಯಲ್ಲಿ ಸೃಷ್ಠಿಸಲಾಗಿದೆ. ಅಲ್ಲದೆ ಮೆದಕಿನಾಳ ಗ್ರಾಮದ ಮತದಾರರ ಪಟ್ಟಿಗೆ ಸೇರಿಸುವಂತೆಯೂ ಅರ್ಜಿ ಸಲ್ಲಿಸಿದ್ದಾರೆ.

    ಯುವತಿ ನಾಪತ್ತೆಯಾದ ದಿನವೇ ಸೃಷ್ಠಿಯಾದ ಈ ಸುಳ್ಳು ದಾಖಲೆಗಳಿಂದ ಯುವತಿಗೆ 19 ವರ್ಷಗಳಾಗಿವೆ ಅಂತ ಮದುವೆಗೆ ಅರ್ಜಿ ಸಲ್ಲಿಸಲಾಗಿದೆ. ಬೀದರ್‍ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಶೇಖ್ ಜಮೀಲ್ ಅಪ್ರಾಪ್ತೆಯನ್ನ ಮದುವೆಯಾಗಲು ಮುಂದಾಗಿದ್ದಾನೆ. ಸುಳ್ಳು ದಾಖಲೆ ಸೃಷ್ಠಿಸಿ ಬಡ ಯುವತಿಯ ಮನ ಪರಿವರ್ತಿಸಿ ಲವ್ ಜಿಹಾದ್ ನಡೆದಿದೆ ಅಂತ ಗ್ರಾಮಸ್ಥರು, ಯುವತಿ ಪೋಷಕರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.

    ನಮಗೆ ಅರಿವಿಲ್ಲದೆ ಸುಳ್ಳು ದಾಖಲೆಯನ್ನ ಪಡೆದಿದ್ದಾರೆ ಅಂತ ಮೆದಕಿನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಬಿಲ್ ಕಲೆಕ್ಟರ್ ತಪ್ಪೊಪ್ಪಿಕೊಂಡಿದ್ದಾರೆ. ಮಾರ್ಚ್ 2 ರಂದು ನಕಲಿ ವಾಸಸ್ಥಳ ಪ್ರಮಾಣ ಪತ್ರ ಪಡೆದಿದ್ದು ಮೆದಕಿನಾಳ ಗ್ರಾ.ಪಂ.ನ ಸಿಸಿಟಿವಿ ಕ್ಯಾಮೆರಾದ ಅಂದಿನ ದೃಶ್ಯಾವಳಿಗಳನ್ನ ಅಳಿಸಿ ಹಾಕಲಾಗಿದೆ. ಇದೊಂದು ವ್ಯವಸ್ಥಿತ ಜಾಲದ ಕೆಲಸವೇನೋ ಅನ್ನೋ ಅನುಮಾನ ಮೂಡಿವೆ. ಬೀದರ್‍ನ ಮಹಿಳಾ ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತೆಯನ್ನ ಪೀಡಿಸುತ್ತಿದ್ದ ಶೇಖ್ ಜಮೀಲ್ ಮಾರ್ಚ್ 2 ರಂದು ಅವಳನ್ನ ಅಪಹರಿಸಿದ್ದಾನೆ ಅಂತ ಯುವತಿಯ ಪೋಷಕರು ಬೀದರ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಒಟ್ಟಿನಲ್ಲಿ, ಇಷ್ಟವಿಲ್ಲದಿದ್ದರೂ ಬಡ ಯುವತಿಯ ಮನವೊಲಿಸಿ ಅಥವಾ ಒತ್ತಾಯಪೂರ್ವಕವಾಗಿ ಶೇಖ್ ಜಮೀಲ್ ಲವ್ ಜಿಹಾದ್‍ಗೆ ಮುಂದಾಗಿದ್ದಾನೆ ಅಂತ ಆರೋಪ ಕೇಳಿಬಂದಿವೆ. ಸುಳ್ಳುದಾಖಲೆಗಳ ಸೃಷ್ಠಿ ಹಾಗೂ ಒಟ್ಟಾರೆ ಪ್ರಕರಣವನ್ನ ನೋಡಿದಾಗ ನಿಜಕ್ಕೂ ಲವ್ ಜಿಹಾದ್ ಜಾಲ ರಾಯಚೂರು ಹಾಗೂ ಬೀದರ್‍ನಲ್ಲಿ ಕೆಲಸ ಮಾಡುತ್ತಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿ ಮೂಡಿವೆ.