Tag: letter

  • ನಂಗೆ ಮುಜುಗರವಾಗುತ್ತಿದೆ – ಅಧಿಕಾರಿಗಳಿಗೆ ಮೇಯರ್ ಲೆಟರ್

    ನಂಗೆ ಮುಜುಗರವಾಗುತ್ತಿದೆ – ಅಧಿಕಾರಿಗಳಿಗೆ ಮೇಯರ್ ಲೆಟರ್

    ಬೆಂಗಳೂರು: ನನಗೆ ಮುಜುಗರವಾಗುತ್ತಿದೆ ಎಂದು ಸಾರ್ವಜನಿಕವಾಗಿ ಅಧಿಕಾರಿಗಳಿಗೆ ಪತ್ರ ಬರೆದು ಬಿಬಿಎಂಪಿ ಮೇಯರ್ ಸುದ್ದಿ ಆಗಿದ್ದಾರೆ.

    ಬಿಬಿಎಂಪಿಯ ಆಗುಹೋಗು, ಬಿಬಿಎಂಪಿಯಿಂದ ಸರ್ಕಾರಕ್ಕೆ ಹೋಗುವ ಕಡತ ಸೇರಿದಂತೆ ಬಿಬಿಎಂಪಿಯಲ್ಲಿ ಆಗುವ ಯಾವ ಕೆಲಸದ ಬಗ್ಗೆಯೂ ಮೇಯರ್ ಗೌತಮ್ ಕುಮಾರ್ ಅವರಿಗೆ ಮಾಹಿತಿ ಹೋಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಮೇಯರ್ ನನಗೆ ಮುಜುಗರವಾಗುತ್ತಿದೆ. ಮಾಧ್ಯಮದ ಜೊತೆ ಮಾತಾನಾಡುವಾಗ ನನ್ನ ಬಳಿ ಮಾಹಿತಿಯೇ ಇರಲ್ಲ, ನನಗೆ ಇನ್ಮುಂದೆ ಎಲ್ಲಾ ಬಿಬಿಎಂಪಿಯ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸಿಟ್ಟಿಗೆದ್ದು ಪತ್ರ ಬರೆದಿದ್ದಾರೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೊರಗೆ ಚನ್ನಾಗಿ ನಗುನಗುತ್ತಾ ಪೋಸ್ ಕೊಡುವ ಬೆಂಗಳೂರು ಮೇಯರ್ ಕಮೀಷನರ್ ಒಳಗೊಳಗೆ ಕಿತ್ತಾಡ್ತಾರೆ ಎನ್ನುವ ಸುದ್ದಿ ಬಿಬಿಎಂಪಿಯಲ್ಲಿ ಹೆಚ್ಚಾಗಿದೆ. ಹೀಗಾಗಿ ಯೋಜನೆ ವಿವರ, ಗುತ್ತಿಗೆ ಮಾಹಿತಿ, ಅದರ ವ್ಯಾಜ್ಯಗಳು, ಕಾನೂನು ಕೋಶದ ಮಾಹಿತಿ ಯಾವುದು ಇರಲ್ಲ ಎಂದು ಪತ್ರವನ್ನು ಕಮೀಷನರ್‍ಗೂ ರವಾನಿಸಿದ್ದಾರೆ.

    ಮೇಯರ್ ಬಹಿರಂಗ ಪತ್ರ ಈಗ ನಾನಾ ವಿವಾದವನ್ನು ಸೃಷ್ಟಿಸಿದೆ. ಬಿಬಿಎಂಪಿಯಲ್ಲಿ ಮೇಯರ್ ಮಾತೇ ನಡೆಯಲ್ಲ. ಇನ್ನು ಈ ಅಧಿಕಾರಿಗಳು ನಮ್ಮ ಮಾತು ಕೇಳ್ಳುತ್ತಾರಾ ಎಂದು ಬೆಂಗಳೂರು ಜನ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ.

  • ಬಿಎಸ್‍ವೈ ನಾಯಕತ್ವದ ವಿರುದ್ಧ ಪಕ್ಷದೊಳಗೆ ಭಾರೀ ಅಸಹನೆ?- 4 ಪುಟಗಳ ಅನಾಮಧೇಯ ಪತ್ರ ವೈರಲ್

    ಬಿಎಸ್‍ವೈ ನಾಯಕತ್ವದ ವಿರುದ್ಧ ಪಕ್ಷದೊಳಗೆ ಭಾರೀ ಅಸಹನೆ?- 4 ಪುಟಗಳ ಅನಾಮಧೇಯ ಪತ್ರ ವೈರಲ್

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ 6 ತಿಂಗಳಾಗಿದೆ. ಆದರೆ ಈ ಆರು ತಿಂಗಳಲ್ಲಿ ನಡೆದ ವಿದ್ಯಮಾನಗಳು ಹತ್ತುಹಲವು. ಯಡಿಯೂರಪ್ಪ ಅವರಿಗೆ ಈಗಿನ ಸರ್ಕಾರ ನಡೆಸುವುದು ಕತ್ತಿ ಮೇಲಿನ ನಡಿಗೆಯಂತಾಗಿದೆ. ಒಂದು ಕಡೆ ಬಿಜೆಪಿ ಹೈಕಮಾಂಡ್ ಅಸಹಕಾರ. ಇನ್ನೊಂದು ಕಡೆ ಸ್ವಪಕ್ಷೀಯರ ಅಸಹಕಾರ, ಅಸಹನೆ. ಇನ್ನೊಂದು ಕಡೆ ಆರ್ಥಿಕ ದುಸ್ಥಿತಿ. ಮತ್ತೊಂದು ಕಡೆ ವಲಸಿಗರನ್ನು ನಿಭಾಯಿಸೋ ತಲೆನೋವು. ಸಚಿವಾಕಾಂಕ್ಷಿಗಳ ಒತ್ತಡ ಲಾಬಿ. ಇಷ್ಟೆಲ್ಲವನ್ನೂ ಸಂಭಾಳಿಸಿಕೊಂಡು ಸಿಎಂ ಯಡಿಯೂರಪ್ಪ ಆಡಳಿತ ನಡೆಸುವ ಅನಿವಾರ್ಯತೆಗೆ ಸಿಕ್ಕಿಬಿದ್ದಿದ್ದಾರೆ.

    ಆದರೆ ಈಗ ಯಡಿಯೂರಪ್ಪರಿಗೆ ಆಘಾತಕಾರಿ ತರುವ ಬೆಳವಣಿಗೆಯೊಂದು ಸ್ಪಪಕ್ಷೀಯರಿಂದಲೇ ನಡೆದಿದೆ. ಯಡಿಯೂರಪ್ಪ ನಾಯಕತ್ವದ ವಿರುದ್ಧವೇ ವಿರೋಧಿ ಬಣ ತೆರೆ ಹಿಂದೆಯೇ ನಿಂತುಕೊಂಡು ದನಿ ಎತ್ತಿದೆ. ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಪಕ್ಷದ ಒಳಗಿನವರಲ್ಲೇ ಅಸಹನೆ, ಅತೃಪ್ತಿ ಮನೆ ಮಾಡಿದೆಯಾ ಎಂಬ ಅನುಮಾನ ಬಲವಾಗಿ ಮೂಡಿದೆ. ಇದಕ್ಕೆ ಕಾರಣವಾಗಿರೋದು ಆ ನಾಲ್ಕು ಪುಟಗಳ ಅನಾಮಧೇಯ ಪತ್ರ.

    ಹೌದು. ಕಳೆದ ಕೆಲವು ದಿನಗಳಿಂದಲೂ ರಾಜ್ಯ ಬಿಜೆಪಿ ಪಾಳಯದಲ್ಲಿ ನಾಲ್ಕು ಪುಟಗಳ ಆ ಅನಾಮಧೇಯರು ಬರೆದ ಅನಾಮಧೇಯ ಪತ್ರವೊಂದು ಹರಿದಾಡ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಪತ್ರ ಭಾರೀ ಸದ್ದು ಮಾಡ್ತಿದೆ ಎನ್ನಲಾಗಿದೆ. ಸಿಎಂ ಯಡಿಯೂರಪ್ಪರ ಕಾರ್ಯವೈಖರಿ, ಪುತ್ರ ವಿಜಯೇಂದ್ರರ ಬಗ್ಗೆ ಈ ಅನಾಮಧೇಯ ಪತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಯಡಿಯೂರಪ್ಪರನ್ನು ಒಂದೆಡೆ ಹೊಗಳಲಾಗಿದ್ದರೆ, ಇನ್ನೊಂದೆಡೆ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಲಾಗಿದೆ. ಇತ್ತ ಆಡಳಿತದಲ್ಲಿ ಮೂಗು ತೂರಿಸುತ್ತಿರುವ ಪುತ್ರ ವಿಜಯೇಂದ್ರರ ಬಗ್ಗೆನೂ ಆಕ್ಷೇಪ ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ.

    ಅನಾಮಧೇಯ ಪತ್ರದಲ್ಲಿ ಏನಿದೆ..?
    ಯಡಿಯೂರಪ್ಪ ರಾಜಕೀಯವಾಗಿ ನಿವೃತ್ತಿ ತೆಗೆದುಕೊಂಡು ಪಕ್ಷದಲ್ಲಿ ಹಿರಿಯ ಮಾರ್ಗದರ್ಶಕರಾಗಿ ಮುಂದುವರಿಯಲಿ ಅನ್ನೋದು ಈ ಪತ್ರದ ಪ್ರಮುಖ ಆಗ್ರಹ. ಯಡಿಯೂರಪ್ಪ ಮಾರ್ಗದರ್ಶಕರಾದರೂ ಆಗಲಿ ಅಥವಾ ಯಾವುದಾದರೊಂದು ರಾಜ್ಯದ ರಾಜ್ಯಪಾಲರಾಗಲಿ. ಆದರೆ ಸದ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ಬೇಡ ಅನ್ನೋ ಭಾವನೆಯನ್ನು ಅನಾಮಧೇಯರು ಪತ್ರದ ಮೂಲಕ ರವಾನಿಸಿದ್ದಾರೆ. ನಾವು ಯಡಿಯೂರಪ್ಪ ಅವರ ನಿಷ್ಠಾವಂತ ಬಳಗದಲ್ಲಿರುವವರು. ಆದರೆ ನಮ್ಮ ನೋವು ಯಾರ ಬಳಿ ತೋಡಿಕೊಳ್ಳುವುದು? ಹೈಕಮಾಂಡ್ ಬಳಿ ಹೋದರೆ ಸ್ವಲ್ಪ ದಿನ ಕಾಯಿರಿ ಅಂತಾರೆ ಎಂದು ಅನಾಮಧೇಯರು ತಮ್ಮ ಬೇಗುದಿಯನ್ನು ಈ ಪತ್ರದಲ್ಲಿ ಹೊರ ಹಾಕಿದ್ದಾರೆ. ಯಡಿಯೂರಪ್ಪ ಅವರ ದೈಹಿಕ ಅಸಮರ್ಥತೆಯಿಂದ ಸರ್ಕಾರ ನಿಷ್ಕ್ರಿಯವಾಗಿದೆ. ಹಾಗಾಗಿ ಸಿಎಂ ಸ್ಥಾನ ತ್ಯಜಿಸಲಿ. ಯಡಿಯೂರಪ್ಪ ತಮ್ಮ ಸಮುದಾಯದ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ. ಅಸೂಯೆ ಮತ್ತು ದ್ವೇಷಗಳನ್ನು ಯಡಿಯೂರಪ್ಪ ಮೈಗೂಡಿಸಿಕೊಂಡಿದ್ದಾರೆ. ಯಡಿಯೂರಪ್ಪ ಪಕ್ಷ ಸಿದ್ಧಾಂತ ಮತ್ತು ಸಂವಿಧಾನ ವಿರುದ್ಧ ನಡೆದುಕೊಳ್ತಿದ್ದಾರೆ. ಇಂತಹ ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಿವೃತ್ತಿಗೊಳಿಸಲಿ. ಅವರ ಅನುಭವದ ಮೇರೆಗೆ ಮಾರ್ಗದರ್ಶಕರಾಗಿ ಮಾಡಲಿ ಎಂದು ಹೈಕಮಾಂಡ್ಗೆ ಅನಾಮಧೇಯರು ಒತ್ತಾಯ ಮಾಡಿದ್ದಾರೆ.

    ಯಡಿಯೂರಪ್ಪ ಅವರನ್ನು ರಾಜ್ಯಪಾಲರಾಗಿ ಮಾಡಲಿ. ಯಡಿಯೂರಪ್ಪ ಸಿಎಂ ಆಗಿ ಆಡಳಿತ ನಡೆಸಲು ದೈಹಿಕವಾಗಿ ಅಸಮರ್ಥರು. ಅವರಿಗೆ ಆಡಳಿತ ನಡೆಸಲು ದೇಹದ ಆರೋಗ್ಯ ಸ್ಪಂದಿಸುತ್ತಿಲ್ಲ. ಯಡಿಯೂರಪ್ಪ ವಯೋಸಹಜ ದೈಹಿಕ ಅಸಮರ್ಥತೆಯಿಂದ ನರಳುತ್ತಿದ್ದಾರೆ. ಯಡಿಯೂರಪ್ಪ ಸುತ್ತ ಒಂದು ಕೊಟೆಯೇ ಸೃಷ್ಟಿಯಾಗಿದೆ. ಅವರ ವಂಶದ ನಾಲ್ಕು ತಲೆಮಾರಿನವರೇ ಯಡಿಯೂರಪ್ಪ ಸುತ್ತ ಇದ್ದಾರೆ ಎಂದು ಪತ್ರದಲ್ಲಿ ಅಸಮಾಧಾನ ಹೊರ ಹಾಕಲಾಗಿದೆ.

    ವಿಜಯೇಂದ್ರ ವಿರುದ್ಧವೂ ಅಸಮಧಾನ:
    ವಿಜಯೇಂದ್ರ ಸೂಪರ್ ಸಿಎಂ, ಡೀಫ್ಯಾಕ್ಟೋ ಸಿಎಂ ಅಂತ ವಿಪಕ್ಷ ಮತ್ತು ಸ್ವಪಕ್ಷದಲ್ಲೇ ಹೇಳುತ್ತಿದ್ದಾರೆ. ಶಿವಾನಂದ ಸರ್ಕಲ್ ಬಳಿ ಇರುವ ವಿಜಯೇಂದ್ರರ ಅಪಾರ್ಟ್‍ಮೆಂಟ್ ಮತ್ತೊಂದು ಪವರ್ ಸೆಂಟರ್ ಆಗಿದೆ ಎಂದು ಪತ್ರದಲ್ಲಿ ಕಿಡಿ ಕಾರಿದ್ದಾರೆ. ಯಡಿಯೂರಪ್ಪ ಭೇಟಿಗೆ ಬರೋರು ಮೊದಲು ವಿಜಯೇಂದ್ರರ ಭೇಟಿ ಮಾಡುವ ಅಗತ್ಯ ಇದೆ. ತಮ್ಮ ಭೇಟಿಗೆ ಬರೋರನ್ನು ವಿಜಯೇಂದ್ರ ಬಳಿ ಖುದ್ದು ಯಡಿಯೂರಪ್ಪ ಕಳಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರ ಬಗ್ಗೆ ಗುಣಗಾನ ರೂಪದಲ್ಲಿರುವ ಪತ್ರದ ಮಾತುಗಳು ಪರೋಕ್ಷವಾಗಿ ಅಣಕಿಸುವಂತಿವೆ.

    ಸದ್ಯ ಈ ಅನಾಮಧೇಯ ಪತ್ರ ಬಿಜೆಪಿ ಪಾಳಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಯಡಿಯೂರಪ್ಪ ಸಹ ಪತ್ರದ ಬಗ್ಗೆ ಗಂಭೀರವಾಗಿದ್ದು, ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.  ಪತ್ರದ ಜನಕರ ಪತ್ತೆಗೆ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

  • ಶಾಲಾ ಪಠ್ಯದಲ್ಲಿ ವ್ಯವಸಾಯ ಶಾಸ್ತ್ರ ಸೇರಿಸಿ, ನಿರುದ್ಯೋಗ ಓಡಿಸಿ – ರೈತನ ಮಗನ ಪತ್ರ ವೈರಲ್

    ಶಾಲಾ ಪಠ್ಯದಲ್ಲಿ ವ್ಯವಸಾಯ ಶಾಸ್ತ್ರ ಸೇರಿಸಿ, ನಿರುದ್ಯೋಗ ಓಡಿಸಿ – ರೈತನ ಮಗನ ಪತ್ರ ವೈರಲ್

    ಬೆಂಗಳೂರು: ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಹಲವು ವಿಧಾನಗಳಲ್ಲಿ ಸಾರ್ವಜನಿಕರು, ರೈತರು ಸರ್ಕಾರಕ್ಕೆ ಪತ್ರಗಳನ್ನ ಬರೆಯುವುದನ್ನ ನೋಡಿದ್ದೇವೆ. ಆದರೆ ರೈತರ ಮಗನೋರ್ವ ಪತ್ರದ ಮೂಲಕ ಒಂದು ವಿಶೇಷ ಒತ್ತಾಯ ಮಾಡಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಈ ಪತ್ರದಲ್ಲಿ ವಿನಂತಿ ಮಾಡಿರುವ ವಿಷಯ ನಿಜಕ್ಕೂ ವಿಷೇಶವಾಗಿದ್ದು, ಶಾಲಾ ಪಠ್ಯಪುಸ್ತಕಗಳಲ್ಲಿ ಗಣಿತ ಶಾಸ್ತ್ರ, ವಿಜ್ಞಾನ, ಸಮಾಜಶಾಸ್ತ್ರ ಇರುವಂತೆ ವ್ಯವಸಾಯ ಶಾಸ್ತ್ರವನ್ನು ಒಂದು ವಿಷಯವನ್ನಾಗಿ ಸೇರಿಸಿ. ಹೀಗೆ ಮಾಡುವುದರಿಂದ ಈಗಿನ ಮಕ್ಕಳಲ್ಲಿ ಕೃಷಿ ಬಗ್ಗೆ ತಿಳುವಳುಕೆ ಮೂಡುತ್ತೆ. ಮಕ್ಕಳು ಬೆಳೆದಂತೆ ಆಸಕ್ತಿ ಇರೋರು ವ್ಯವಸಾಯಕ್ಕೆ ಬರುತ್ತಾರೆ. ಇದರಿಂದ ನಿರುದ್ಯೋಗದ ಸಮಸ್ಯೆ ಸಹ ಬಗೆಹರಿಯುತ್ತೆ. ಜೊತೆಗೆ ಮಕ್ಕಳಿಗೆ ವ್ಯವಸಾಯ ಏನು ಎನ್ನುವ ತಿಳುವಳಿಕೆ ಮೂಡುತ್ತೆ ಎಂದು ಪತ್ರದಲ್ಲಿ ಬರೆಯಲಾಗಿದೆ.

    ಈಗಾಗಲೇ ಹಳ್ಳಿಗಳನ್ನ ತೊರೆದು ಯುವಕರು ಕೆಲಸ ಅರಸಿ ಸಿಟಿಗಳನ್ನು ಸೇರಾಗಿದೆ. ಈ ರೀತಿ ಮುಂದುವರಿದರೆ ಎಲ್ಲರೂ ಕಷ್ಟಕ್ಕೆ ಸಿಲುಕಬೇಕಾಗುತ್ತೆ. ಆದ್ದರಿಂದ ಕೃಷಿ ಬಗ್ಗೆ ತಿಳುವಳಿಕೆಯನ್ನ ಶಾಲಾ ಪಠ್ಯಗಳಿಂದ ನೀಡಬೇಕು ಎಂಬ ಒತ್ತಾಯದ ಈ ಪತ್ರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಪತ್ರ ಯಾರೇ ಬರೆದಿದ್ದರೂ ಉದ್ದೇಶ ಮಾತ್ರ ಒಳ್ಳೆಯದ್ದಾಗಿದೆ ಎಂದು ನೆಟ್ಟಿಗರು ಪತ್ರದ ವಿಷಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹಣ ಕಳುಹಿಸಿದ್ದ ಅಭಿಮಾನಿಯನ್ನ ಭೇಟಿ ಮಾಡಿದ ರಿಷಬ್

    ಹಣ ಕಳುಹಿಸಿದ್ದ ಅಭಿಮಾನಿಯನ್ನ ಭೇಟಿ ಮಾಡಿದ ರಿಷಬ್

    ಮೈಸೂರು: ತನಗೆ ಹಣ ಕಳುಹಿಸಿದ್ದ ಅಭಿಮಾನಿಯನ್ನು ನಟ, ನಿರ್ದೇಶಕ ರಿಷಬ್‍ ಶೆಟ್ಟಿ ಭೇಟಿಯಾಗಿದ್ದು, ಅಪರೂಪದ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ.

    ರಿಷಬ್ ಶೆಟ್ಟಿ ಅಭಿಮಾನಿ ಭರತ್ ರಾಮಸ್ವಾಮಿಯನ್ನು ಭೇಟಿ ಮಾಡಿದ್ದಾರೆ. ಮೈಸೂರಿನ ಅಂಬೇಡ್ಕರ್ ರಸ್ತೆಯಲ್ಲಿ ಭರತ್ ರಾಮಸ್ವಾಮಿ ನಡೆಸುತ್ತಿರುವ ಸಮಾನತೆ ಪ್ರಕಾಶನ ಸಂಸ್ಥೆಗೆ ಭೇಟಿ ನೀಡಿ, ಪತ್ರ ಹಾಗೂ ಹಣ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

    ಈ ವೇಳೆ ಮಾತನಾಡಿದ ರಿಷಬ್ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನೋಡಿ 200 ರೂ. ಕಳುಹಿಸಿದ್ದ ಅಭಿಮಾನಿ ಭರತ್ ರಾಮಸ್ವಾಮಿರನ್ನ ಭೇಟಿ ಮಾಡಬೇಕು ಅಂತ ಯೋಚಿಸಿದ್ದೆ. ಇಂದು ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಬಂದಿದ್ದೆ. ಹೀಗಾಗಿ ಅವರನ್ನ ಭೇಟಿಯಾದೆ. ಇಂತಹ ಅಭಿಮಾನಿಗಳಿಂದ ಒಳ್ಳೆ ಚಿತ್ರಗಳು ಗೆಲ್ಲುತ್ತವೆ ಎಂದು ಹೇಳಿದರು.

    ಪತ್ರ ನೋಡಿ ಬಂದ ನಟ ರಿಷಬ್ ಶೆಟ್ಟಿಯನ್ನು ನೋಡಿ ಅಭಿಮಾನಿ ಭರತ್ ರಾಮಸ್ವಾಮಿ ಖುಷಿ ವ್ಯಕ್ತಪಡಿಸಿದರು. ನಂತರ ರಿಷಬ್ ಶೆಟ್ಟಿ ಕೆಲಕಾಲ ಅಭಿಮಾನಿಯ ಜೊತೆ ಕಾಲಕಳೆದು ಬೆಂಗಳೂರಿಗೆ ವಾಪಸ್ಸಾದರು.

    ನಟ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ 2018ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಈಗ ನೋಡಿದ ಮೈಸೂರಿನ ಭರತ್ ರಾಮಸ್ವಾಮಿ ರಿಷಬ್ ಶೆಟ್ಟಿಗೆ ಪತ್ರ ಬರೆದು ಕ್ಷಮೆ ಕೇಳಿ ಜೊತೆಗೆ 200 ರೂ. ಹಣವನ್ನು ಕಳುಹಿಸಿಕೊಟ್ಟಿದ್ದರು.

  • ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

    ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

    ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನೋಡಿ ಅಭಿಮಾನಿಯೋರ್ವ ಅವರಿಗೆ ಪತ್ರ ಬರೆದು ಜೊತೆಗೆ 200 ರೂ. ದುಡ್ಡನ್ನು ಕಳುಹಿಸಿಕೊಟ್ಟಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ 2018 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಈಗ ನೋಡಿದ ಮೈಸೂರಿನ ಅಭಿಮಾನಿಯೋರ್ವ ರಿಷಬ್ ಶೆಟ್ಟಿಗೆ ಪತ್ರ ಬರೆದು ಕ್ಷಮೆ ಕೇಳಿ ಜೊತೆಗೆ 200 ರೂ. ದುಡ್ಡನ್ನು ಕಳುಹಿಸಿಕೊಟ್ಟಿದ್ದಾರೆ.

    ರಿಷಬ್‍ಗೆ ಪತ್ರ ಬರೆದಿರುವ ಮೈಸೂರಿನ ಅಭಿಮಾನಿ ಭರತ್ ರಾಮಸ್ವಾಮಿ, ನನ್ನ ಹೆಸರು ಭರತ್ ರಾಮಸ್ವಾಮಿ, ನಾನು ಮೈಸೂರಿನವನು. ವೃತ್ತಿಯಲ್ಲಿ ಒಬ್ಬ ಪುಸ್ತಕ ಪ್ರಕಾಶಕ. ನಾನು ಜನವರಿ 12 ರಂದು ನೀವು ನಿರ್ದೇಶನ ಮಾಡಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಎಂಬ ಸಿನಿಮಾವನ್ನು ಒಂದು ವೆಬ್‍ಸೈಟಿನಲ್ಲಿ ನೋಡಿದೆ. ಈ ಚಿತ್ರ ನನ್ನ ಊಹೆಗೂ ಮೀರಿದ್ದಾಗಿತ್ತು. ನಾನೊಬ್ಬ ಚಿತ್ರ ರಸಿಕ. ನಿಮ್ಮ ನಿರೂಪಣಾ ಶೈಲಿ ಮತ್ತು ಸ್ಕ್ರೀನ್ ಪ್ಲೇ ಅತ್ಯದ್ಭುತವಾಗಿದೆ ಎಂದು ಹೊಗಳಿದ್ದಾರೆ.

    ಕನ್ನಡದ ಅಸ್ಮಿತೆ ಮತ್ತು ಕನ್ನಡದ ಮೇಲೆ ನಮಗಿರುವ ಭಾವನೆಗಳನ್ನು ಅನಂತ್ ನಾಗ್ ಅವರು ಮಾಡಿರುವ ಪಾತ್ರದ ಮೂಲಕ ಹೇಳಿಸಿದ ಶೈಲಿ ಮನ ಮುಟ್ಟುವಂತಿತ್ತು. ಇಂತಹ ರಚನಾತ್ಮಕ ಆಲೋಚನೆಗಳಿಂದ ಕೂಡಿದ ಸಿನಿಮಾವನ್ನು ಇಷ್ಟು ತಡವಾಗಿ ನೋಡಿದ ಮತ್ತು ದುಡ್ಡು ಕೊಟ್ಟು ಚಿತ್ರಮಂದಿರದಲ್ಲಿ ನೋಡದ ಪಾಪ ಪ್ರಜ್ಞೆ ನನ್ನನ್ನು ಕಾಡುತ್ತಿದೆ. ಆದ್ದರಿಂದ ಈ ಪತ್ರದೊಡನೆ 200 ರೂಪಾಯಿ ಟಿಕೆಟ್ ದರವನ್ನು ನನ್ನ ಮೆಚ್ಚುಗೆಯ ಸಂಕೇತವಾಗಿ ಕಳುಹಿಸಿರುತ್ತೇನೆ ಎಂದು ಪತ್ರದಲ್ಲಿ ಭರತ್ ತಿಳಿಸಿದ್ದಾರೆ.

    ಈ ನನ್ನ ಕ್ರಿಯೆ ನಿಮಗೆ ಹಾಸ್ಯಾಸ್ಪದವೆನಿಸಿದರೂ ನನ್ನೊಳಗಿನ ಸಿನಿಮಾ ರಸಿಕನಿಗೆ ತೃಪ್ತಿ ತರುವಂತಾಗಿದೆ. ಮುಂದೆಯೂ ಇಂತಹುದೇ ಪ್ರಗತಿಪರ ಸಿನಿಮಾಗಳನ್ನು ನಿಮ್ಮ ಮೂಲಕ ತಯಾರಾಗಲಿ ಎಂದು ಆಶಿಸುತ್ತೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

    ಅಭಿಮಾನಿಯ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಸಮೇತ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ಇಂತಹ ಚಿತ್ರಪ್ರೇಮಿಗಳಿರುವ ತನಕ ಒಳ್ಳೆಯ ಕನ್ನಡ ಚಿತ್ರಗಳಿಗೆ ಎಂದಿಗೂ ಸೋಲಿಲ್ಲ. ಪ್ರೇಕ್ಷಕರ ಒಲವೇ ಚಿತ್ರದ ನಿಜವಾದ ಗೆಲುವು. ಭರತ್ ರಾಮಸ್ವಾಮಿ ಅವರಿಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ಸ್ವೀಕರಿಸುತ್ತೇವೆ. (ಜೊತೆಗೆ ಚಿತ್ರದ ಕಲೆಕ್ಷನ್ ತಿದ್ದುಪಡಿ ಮಾಡಿಕೊಳ್ಳುತ್ತೇವೆ) ಎಂದು ಬರೆದುಕೊಂಡಿದ್ದಾರೆ.

    2018 ಆಗಸ್ಟ್ 24 ರಂದು ಬಿಡುಗಡೆಗೊಂಡಿದ್ದ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಮಕ್ಕಳ ಜೊತೆ ಹಿರಿಯ ನಟ ಅನಂತ್ ನಾಗ್ ಅವರು ಮನಮಿಡಿಯುವಂತೆ ಅಭಿನಯಿಸಿದ್ದರು. ಕನ್ನಡ ಭಾಷೆ, ಕನ್ನಡ ಮಾಧ್ಯಮ ಶಾಲೆಯ ಅವಶ್ಯಕತೆಯನ್ನು ಮಕ್ಕಳ ಮೂಲಕ ಮನಮುಟ್ಟುವಂತೆ ಹೇಳಿದ್ದ ಈ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ.

  • ‘ಜನ ಕೊಡಿ ಕೆಲಸ ಮಾಡ್ತೀವಿ!’- ಸರ್ಕಾರಕ್ಕೆ ಪತ್ರ ಬರೆದ ಲೋಕಾಯುಕ್ತರು

    ‘ಜನ ಕೊಡಿ ಕೆಲಸ ಮಾಡ್ತೀವಿ!’- ಸರ್ಕಾರಕ್ಕೆ ಪತ್ರ ಬರೆದ ಲೋಕಾಯುಕ್ತರು

    ಬೆಂಗಳೂರು: ಮೊದಲೇ ಹಲ್ಲಿಲ್ಲದ ಹಾವಿನಂತಿರುವ ಲೋಕಾಯುಕ್ತ ಈಗ ಸಿಬ್ಬಂದಿಯೂ ಇಲ್ಲದೆ ಸೊರಗಿ ಹೋಗಿದೆ. ಮಾಡಕೋ ಸಾಕಷ್ಟು ಕೆಲಸ ಇದೆ. ಆದರೆ ಸಂಸ್ಥೆಯಲ್ಲಿ ಸಿಬ್ಬಂದಿ ಮಾತ್ರ ಇಲ್ಲ. ಹೀಗಿರೋವಾಗ ಕೆಲಸ ಮಾಡೋಕೆ ಹೇಗೆ ಸಾಧ್ಯ ಮೊದಲು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಡಿ ಎಂದು ಲೋಕಾಯುಕ್ತ ನ್ಯಾ. ವಿಶ್ವನಾಥಶೆಟ್ಟಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಈಗಿರುವ ಸಿಬ್ಬಂದಿಗಳು ಎಲ್ಲಾ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಕೆಲ ರಾಜಕಾರಣಿಗಳು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ನೀಡಿದ್ದಾರೆ. ಇದನ್ನ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲು ಸಿಬ್ಬಂದಿಗಳ ಕೊರತೆ ಇದೆ. ಹಾಗೆ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ವಿಭಾಗದ ಸಿಬ್ಬಂದಿಗಳು ಇಲ್ಲ. ಬಹುಮುಖ್ಯವಾಗಿ ಅಡಿಷನಲ್ ರಿಜಿಸ್ಟ್ರಾರ್ ಹುದ್ದೆಯೂ ಖಾಲಿ ಇದೆ. ಇದಕ್ಕೆ ತಕ್ಕಂತೆ ಹೈಕೋರ್ಟ್ ನಿವೃತ್ತ ನ್ಯಾಯಾಮೂರ್ತಿಗಳನ್ನು ನೇಮಕ ಮಾಡಬೇಕಾಗುತ್ತೆ. ಇದುವರೆಗೂ ಸರ್ಕಾರ ಯಾರನ್ನೂ ನೇಮಕ ಮಾಡಿಲ್ಲ.

    ಕೂಡಲೇ ಸಿಬ್ಬಂದಿಗಳ ನೇಮಕ ಮಾಡಿದ್ದಲ್ಲಿ ಹಳೆ ಪ್ರಕರಣಕ್ಕೂ ಮುಕ್ತಿ ಹಾಡಬಹುದು. ಈ ಹಿಂದೆಯೂ ಸಿಬ್ಬಂದಿ ನೇಮಕಕ್ಕೆ ಮನವಿ ಮಾಡಿದ್ದರೂ ಸರ್ಕಾರ ಸ್ಪಂಧಿಸಿಲ್ಲ. ಈ ಬಾರಿ ಅಗತ್ಯವಾಗಿ ಸಿಬ್ಬಂದಿಗಳ ನೇಮಕ ಮಾಡಿ ಎಂದು ಪತ್ರದ ಮೂಲಕ ವಿಶ್ವನಾಥ್ ಶೆಟ್ಟಿ ಮನವಿ ಮಾಡಿದ್ದಾರೆ.

  • ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ಕೊಪ್ಪಳ: ಮಾಮೂಲಿ ಕೊಡಲು ನಿರಾಕರಿಸಿದ ವ್ಯಕ್ತಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಮಾಧ್ಯಮಗಳಿಗೆ ಅಥವಾ ಅಧಿಕಾರಿಗಳಿಗೆ ದೂರು ಕೊಟ್ಟರೆ ಶೂಟ್ ಮಾಡುತ್ತೇನೆ ಎಂದು ಪಿಎಸ್‍ಯ ಒಬ್ಬರು ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಜಿಲ್ಲೆಯ ಕಾರಟಗಿ ಪಿಎಸ್‍ಐ ವಿಜಯಕೃಷ್ಣ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಮುಕ್ಕುಂದ ಗ್ರಾಮದ ಭಾಷಾಸಾಬ್ ಅವರಿಗೆ ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಭಾಷಾಸಾಬ್ ‘ನನ್ನ ಜೀವಕ್ಕೆ ಏನಾದರು ಆದರೆ ಅದಕ್ಕೆ ವಿಜಯಕೃಷ್ಣ ಕಾರಣ’ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಮರಳು ಸಾಗಾಟ ವಿಚಾರದಲ್ಲಿ ಭಾಷಾಸಾಬ್ ಹಾಗೂ ಕಾರಟಗಿ ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ತಮ್ಮ ಠಾಣಾ ವ್ಯಾಪ್ತಿ ಮೀರಿ ಪೊಲೀಸರು ಭಾಷಾಸಾಬ್ ಟ್ರ್ಯಾಕ್ಟರ್ ಸೀಜ್ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಭಿತ್ತರವಾಗುತ್ತಿದ್ದಂತೆ ರಿವೇಂಜ್ ತಗೆದುಕೊಂಡ ಪೊಲೀಸರು ಭಾಷಾಸಾಬ್ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಈ ವಿಷಯ ಮಾಧ್ಯಮದವರಿಗೆ ತಿಳಿಸಿದರೆ ರಿವಾಲ್ವರ್ ಇಟ್ಟು ಶೂಟ್ ಮಾಡುತ್ತೇನೆ ಎಂದು ಪಿಎಸ್‍ಐ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಜೀವಭಯದಲ್ಲಿರುವ ಭಾಷಾಸಾಬ್ ವಿಜಯಕೃಷ್ಣ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ.

    ಈ ಘಟನೆಗೆ ಪ್ರಮುಖ ಕಾರಣ ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮ ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದಾರೆ.

    ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡುತಿದ್ದು, ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದಾರೆ. ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್‍ಗೆ ಧಮ್ಕಿ ಹಾಕಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

  • ಅಭಿಮಾನಿಗಳಿಗೆ ಬಿಗ್ ಮನೆಯಿಂದ್ಲೇ ಶೈನ್ ಶೆಟ್ಟಿ ಪತ್ರ

    ಅಭಿಮಾನಿಗಳಿಗೆ ಬಿಗ್ ಮನೆಯಿಂದ್ಲೇ ಶೈನ್ ಶೆಟ್ಟಿ ಪತ್ರ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಒಂದು ವಾರದಲ್ಲಿ ಫಿನಾಲೆ ತಲುಪಲಿದೆ. ಇದೀಗ ಬಿಗ್‍ಮನೆಯಿಂದಲೇ ಶೈನ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಪತ್ರವನ್ನು ಬರೆದಿದ್ದಾರೆ.

    ಶುಕ್ರವಾರ ಬಿಗ್ ಮನೆಗೆ ಅತಿಥಿಯಾಗಿ ‘ಪುಟ್ಟಗೌರಿ ಮದುವೆ’ ಸೀರಿಯಲ್ ಖ್ಯಾತಿಯ ನಟಿ ರಂಜನಿ ಹೋಗಿದ್ದರು. ಅವರು ಬರುವ ಮುನ್ನ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಒಂದು ಪತ್ರ ಬರೆಯುವಂತೆ ಹೇಳಿದ್ದರು. ಅಂದರೆ 100 ದಿನಗಳನ್ನು ಮುಗಿಸಿದ್ದೀರಿ. ಅಲ್ಲದೇ ಈ ಬಿಗ್‍ಬಾಸ್ ಮನೆಯಲ್ಲಿ ನಿಮ್ಮ ಪಯಣದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಏನಾದರೂ ಹೇಳಲು ಇಚ್ಛಿಸುವವರು ಈ ಪತ್ರದಲ್ಲಿ ನಿಮ್ಮ ಅನಿಸಿಕೆಯನ್ನು ಬರೆದುಕೊಡಿ. ಅದನ್ನು ನಿಮ್ಮ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಇತ್ಯಾದಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದರು.

    ಅದರಂತೆಯೇ ಸ್ಪರ್ಧಿಗಳು ತಮಗೆ ಅನಿಸಿಕೆಯನ್ನು ಪತ್ರದ ಮೂಲಕ ಬರೆದು ತಿಳಿಸಿದ್ದಾರೆ.

    ಶೈನ್ ಪತ್ರದಲ್ಲಿ ಏನಿದೆ?
    “103 ದಿನಗಳ ಕಳೆದು, 112 ದಿನದತ್ತ ಸಾಗುತ್ತಿದ್ದೇನೆ. ಜೀವನದಲ್ಲಿ ಕಳೆದುಕೊಂಡಿದ್ದು, ಪಡೆದುಕೊಂಡಿದ್ದು ಎರಡು ಇದೆ. ಆದರೆ ಈ ಹೊಸ ತಿರುವಿನಲ್ಲಿ ನಾನು ಕೇವಲ ಗಳಿಸಿದ್ದೇನೆ. ಸ್ನೇಹಿತರು, ಜೀವದ ಗೆಳೆಯ, ಸುಂದರ ನೆನಪುಗಳನ್ನು ಗಳಿಸಿದ್ದೇನೆ. ಬರೀ ಪಾತ್ರವಾಗಿ ಪರಿಚಿತನಾಗಿದ್ದ ನನ್ನನ್ನು ಎಲ್ಲಾ ಕಲಾಭಿಮಾನಿಗಳಿಗೆ ಶೈನ್ ಶೆಟ್ಟಿಯಾಗಿ ಪರಿಚಿತನಾಗಲು ಅವಕಾಶವಾಗಿದ್ದೇ ಈ ‘ಬಿಗ್‍ಬಾಸ್’ ವೇದಿಕೆಯಿಂದ”

    “ಈ ಸುಂದರವಾದ ಅನುಭವವನ್ನು ಅನುಭವಿಸಿ, ನನ್ನ ಪಯಣವನ್ನು ಸಾಧನೆಯತ್ತ ಕೊಂಡ್ಯೊಯಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಕಾರಣ ನೀವು, ನಿಮ್ಮ ಪ್ರೀತಿ, ನಿಮ್ಮ ಬೆಂಬಲ, ನಿನ್ನ ವೋಟುಗಳು. ಉಸಿರಿರುವವರೆಗೂ ನಿಮ್ಮನ್ನೆಲ್ಲಾ ಕಲಾ ಸೇವೆಯ ಮೂಲಕ ರಂಜಿಸುತ್ತೇನೆ. ನಿಮ್ಮ ಅಗಾಧವಾದ ಪ್ರೀತಿ, ಹಾರೈಕೆ ಹಾಗೂ ಅಭಿಮಾನಕ್ಕೆ ಸದಾ ಚಿರಋಣಿಯಾಗಿರುವ ನಿಮ್ಮ ನಲ್ಮೆಯ ಶೈನ್ ಶೆಟ್ಟಿ” ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.

  • ನ್ಯಾಯಾಲಯಕ್ಕೆ ಬನ್ನಿ – ಸಿದ್ದುಗೆ ಪತ್ರ ಬರೆದು ಸವಾಲೆಸೆದ ಹಿರಿಯ ವಕೀಲ

    ನ್ಯಾಯಾಲಯಕ್ಕೆ ಬನ್ನಿ – ಸಿದ್ದುಗೆ ಪತ್ರ ಬರೆದು ಸವಾಲೆಸೆದ ಹಿರಿಯ ವಕೀಲ

    ಮೈಸೂರು: ಫ್ರೀ ಕಾಶ್ಮೀರ ಫಲಕ ಪ್ರದರ್ಶನ ವಿಚಾರದಲ್ಲಿ ಆರೋಪಿ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಹಿರಿಯ ವಕೀಲ ಪಿ.ಜೆ. ರಾಘವೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ.

    ಇತ್ತೀಚೆಗೆ ಸಿದ್ದರಾಮಯ್ಯ ಅವರು ಫ್ರೀ ಕಾಶ್ಮೀರ ಫಲಕ ಹಿಡಿದರೆ ಅದು ದೇಶದ್ರೋಹವಲ್ಲ ಎಂದು ಹೇಳಿದ್ದರು. ಹೀಗಾಗಿ ಹಿರಿಯ ನ್ಯಾಯಾವದಿ ಪಿ.ಜೆ. ರಾಘವೇಂದ್ರ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ನ್ಯಾಯಾಲಯಕ್ಕೆ ಆಹ್ವಾನಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಫ್ರೀ ಕಾಶ್ಮೀರ ಫಲಕ ಹಿಡಿದರೆ ದೇಶದ್ರೋಹವಲ್ಲ ಎಂದಿದ್ದಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯನವರೂ ಕಾನೂನು ಪದವೀಧರರು, ವಕೀಲರಾಗಿದ್ದವರು. ಈಗಲೂ ವಕೀಲರಾಗಿ ಕಾರ್ಯ ನಿರ್ವಹಿಸಬಲ್ಲವರು.

    ಫ್ರೀ ಕಾಶ್ಮೀರ ಫಲಕ ಹಿಡಿದರೆ ದೇಶದ್ರೋಹವಲ್ಲ ಎಂದು ಸಿದ್ದರಾಮಯ್ಯನವರು ಮಾಧ್ಯಮಗಳ ಮುಂದೆ ಗುಡುಗುವ ಬದಲಾಗಿ ಅವರೇ ಕರಿಕೋಟು ಧರಿಸಿ ನ್ಯಾಯಾಲಯದಲ್ಲಿ ಆಪಾದಿತೆಯಾದ ನಳಿನಿಯ ಪರವಾಗಿ ವಕಾಲತ್ತು ವಹಿಸಲಿ. ಆಕೆಯ ವಿರುದ್ಧ ದಾಖಲಾದ ಪ್ರಕರಣವನ್ನೇ ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ವಾದ ಮಂಡಿಸುವುದರ ಜೊತೆಗೆ ಈ ಪ್ರಕರಣವನ್ನು ದಾಖಲಿಸಿದ ಪೊಲೀಸರು ಮತ್ತು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ ಆ ದಂಡದ ಮೊತ್ತವನ್ನು ಪರಿಹಾರದ ರೂಪದಲ್ಲಿ ಆಪಾದಿತೆ ನಳಿನಿಗೆ ದೊರಕಿಸುವಂತೆ ಸಂವಿಧಾನಬದ್ಧವಾಗಿ ಹೋರಾಟ ನಡೆಸಲಿ ಎಂದು ಬರೆದಿದ್ದಾರೆ.

  • ಸೇನಾ ತರಬೇತಿಯಲ್ಲಿದ್ದ ಕೊಡಗಿನ ಯುವಕ ಆತ್ಮಹತ್ಯೆ

    ಸೇನಾ ತರಬೇತಿಯಲ್ಲಿದ್ದ ಕೊಡಗಿನ ಯುವಕ ಆತ್ಮಹತ್ಯೆ

    ಮಡಿಕೇರಿ: 22ರ ಹರೆಯದ ಕೊಡಗಿನ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯ ವಸತಿ ಗೃಹದಲ್ಲಿ ನಡೆದಿದೆ.

    ಬೋಪಣ್ಣ (22) ಆತ್ಮಹತ್ಯೆ ಮಾಡಿಕೊಂಡ ಯೋಧ. ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದವರಾಗಿರುವ ಬೋಪಣ್ಣ ಪುಣೆಯ ಸೇನಾ ತರಬೇತಿ ಶಿಬಿರದಲ್ಲಿದ್ದರು. ಪುಣೆಯ ವಸತಿಗೃಹದಲ್ಲಿ ಬೋಪಣ್ಣ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಬೋಪಣ್ಣ ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿದೆ. ಆ ಪತ್ರದಲ್ಲಿ, “ನಾನು ನನ್ನ ಸ್ವಇಚ್ಛೆಯಿಂದ ಸಾಯುತ್ತಿದ್ದೇನೆ. ಇದಕ್ಕೆ ಯಾರೂ ಹೊಣೆಯಲ್ಲ. ಯಾರಿಗೂ ಶಿಕ್ಷಿಸಬೇಕಾಗಿಲ್ಲ” ಎಂದು ಬರೆದಿದ್ದಾರೆ. ಬೋಪಣ್ಣ ಕೇವಲ ಎರಡು ಲೈನ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ತುಂಬಾ ಬಡಕುಟುಂಬದಿಂದ ಹೋದ ಬೋಪಣ್ಣ ಸೇನೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಹೇಳುತ್ತಿದ್ದರು. ಅಲ್ಲದೆ ಬೋಪಣ್ಣರಿಗೆ ದೇಶದ ಮೇಲೆ ತುಂಬಾ ಅಭಿಮಾನ ಇತ್ತು ಎನ್ನಲಾಗಿದೆ. ಆದರೆ ಬೋಪಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದ್ದಕ್ಕೆ ನಿಖರವಾದ ಕಾರಣ ಮಾತ್ರ ತಿಳಿದು ಬಂದಿಲ್ಲ.