Tag: lesson

  • 7 ಸಾಹಿತಿಗಳ ಪಠ್ಯಗಳನ್ನು ಕೈಬಿಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ

    7 ಸಾಹಿತಿಗಳ ಪಠ್ಯಗಳನ್ನು ಕೈಬಿಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ

    ಬೆಂಗಳೂರು: ರೋಹಿತ್ ಚಕ್ರತೀರ್ಥ (Rohit Chakratirtha) ಸಮಿತಿ ಮಾಡಿಕೊಟ್ಟಿದ್ದ ಪಠ್ಯ ಪರಿಷ್ಕರಣೆಯನ್ನು ಖಂಡಿಸಿ ನಾಡಿನ ಹಲವು ಪ್ರಗತಿಪರ ಚಿಂತಕರು ಪಠ್ಯವಾಪ್ಸಿ ಚಳುವಳಿ ನಡೆಸಿದ್ದರು. ಸರ್ಕಾರಕ್ಕೆ ಪತ್ರ ಬರೆದು ತಮ್ಮ ಪಠ್ಯ/ಪದ್ಯವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಇದೀಗ ತಡವಾಗಿ ಸ್ಪಂದಿಸಿದೆ.

    ಶೈಕ್ಷಣಿಕ ವರ್ಷದಲ್ಲಿ (Academic Year) ಅರ್ಧ ಭಾಗ ಮುಗಿದ ಬಳಿಕ ಇದೀಗ 7 ಸಾಹಿತಿಗಳ ಪಠ್ಯಗಳನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದೆ. 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ.ಜಿ ರಾಮಕೃಷ್ಣ ಅವರ ಭಗತ್ ಸಿಂಗ್ ಪಾಠ, ಈರಪ್ಪ ಕಂಬಳಿ ಅವರ ಹೀಗೊಂದು ಟಾಪ್ ಪಯಣ, ಸತೀಶ್ ಕುಲಕರ್ಣಿಯ ಕಟ್ಟುತ್ತೇವೆ ನಾವು ಪದ್ಯ, ಸುಕನ್ಯ ಮಾರುತಿ ಅವರ ಏಣಿ ಪದ್ಯವನ್ನು ಕೈಬಿಡಲಾಗಿದೆ. ಇದನ್ನೂ ಓದಿ:  CET ಬಿಕ್ಕಟ್ಟು ಶಮನ – ಸರ್ಕಾರದ ಸಮನ್ವಯ ಸೂತ್ರಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

    9ನೇ ತರಗತಿಯಲ್ಲಿದ್ದ ರೂಪಾ ಹಾಸನ ಅವರ ಅಮ್ಮನಾಗುವುದೆಂದರೇ ಪದ್ಯ, 6ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿದ್ದ ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ ಡಾ. ರಾಜಕುಮಾರ್ ಗದ್ಯವನ್ನು ಕೈಬಿಡಲಾಗಿದೆ. 7 ಸಾಹಿತಿಗಳ ಪಠ್ಯಗಳನ್ನು ಬೋಧನೆ ಮಾಡದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದನ್ನೂ ಓದಿ: ಗ್ರಾಹಕರಿಗೆ ಕರೆಂಟ್ ಶಾಕ್ – ಅಕ್ಟೋಬರ್‌ನಿಂದ 43 ಪೈಸೆ ಏರಿಕೆ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಶಾಸಕನಿಂದ ಮಕ್ಕಳಿಗೆ ಪಾಠ

    ಬಿಜೆಪಿ ಶಾಸಕನಿಂದ ಮಕ್ಕಳಿಗೆ ಪಾಠ

    – ಹೃದಯಕ್ಕೆ ಹತ್ತಿರವಾದ ಕೆಲಸವೆಂದ ಎಂಎಲ್‍ಎ
    – ಮಕ್ಕಳ ಕಷ್ಟ ನೋಡಲಾಗದೆ ಪಾಠ

    ದಿಸ್ಪುರ್: ಕೊರೊನಾ ಸಂದರ್ಭದಲ್ಲಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದ್ದ ಅಸ್ಸಾಂನ ವಿಶ್ವನಾಥ್ ಜಿಲ್ಲೆಯ ವಿಶ್ವನಾಥ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಮೋದ್ ಬೋರ್ತಕೂರ್, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಮುಂದಾಗಿದ್ದಾರೆ.

    ತಮ್ಮ ಇತರ ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದು, ಇದು ಅವರ ಹೃದಯಕ್ಕೆ ಹತ್ತಿರವಾದ ಕೆಲಸ ಎಂದು ಹೇಳಿಕೊಂಡಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಧೈರ್ಯ ತುಂಬುತ್ತಿದ್ದಾರೆ.

    ಕೊರೊನಾದಿಂದಾಗಿ ಕಲಿಕೆಗೆ ತೀವ್ರ ಅಡ್ಡಿಯುಂಟಾಗಿದ್ದರಿಂದ ಅವರಿಗೆ ಸಹಾಯ ಮಾಡುವುದು ಶಾಸಕರ ಉದ್ದೇಶವಾಗಿದೆ. ಇತ್ತೀಚೆಗೆ ಬೋರ್ತಕೂರ್ ಅವರು ವಿಶ್ವನಾಥ್ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಮಾಜ ಅಧ್ಯಯನವನ್ನು ಬೋಧಿಸಿದ್ದಾರೆ. ಈ ಮೊದಲು ಬೋರ್ತಕೂರ್ ಅವರು ವಿಶ್ವನಾಥ್ ಚರಿಯಾಲಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಅರ್ಥಶಾಸ್ತ್ರ ಶಿಕ್ಷಕರಾಗಿದ್ದರು. ಬಳಿಕ 2016ರಲ್ಲಿ ವಿಶ್ವನಾಥ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.

    ಶಾಸಕನಾದ ಬಳಿಕ ಸಹ ನನ್ನ ಶಾಲೆಗೆ ತುಂಬಾ ಸಲ ಭೇಟಿ ನೀಡಿ ಮಕ್ಕಳಿಗೆ ಸಹಾಯವಾಗಲು ಪಾಠ ಮಾಡಿದ್ದೇನೆ. ಶಿಕ್ಷಕನಾಗಿ ವಿದ್ಯಾರ್ಥಿಗಳಿಗೆ ಯಾವಾಗಲೂ ಸಹಾಯ ಮಾಡಲು ಇಚ್ಛಿಸುತ್ತೇನೆ. ಇತ್ತೀಚೆಗೆ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ನಾನು ಅರ್ಥಶಾಸ್ತ್ರ ಬೋಧಿಸಿದ್ದೇನೆ. ಇಂದು 9ನೇ ತರಗತಿ ವಿದ್ಯಾರ್ಥಿಗಳಿಗೆ ಸಮಾಜ ಅಧ್ಯಯನ ತರಗತಿಯನ್ನು ತೆಗೆದುಕೊಂಡಿದ್ದೇನೆ ಎಂದು ಪ್ರಮೋದ್ ಬೋರ್ತಕೂರ್ ತಿಳಿಸಿದ್ದಾರೆ.

    ಕೊರೊನಾದಿಂದಾಗಿ ಎಂಟು ತಿಂಗಳ ಬಳಿಕ ಅಸ್ಸಾಂ ಸರ್ಕಾರ ಮರಳಿ ಶಾಲಾ-ಕಾಲೇಜುಗಳನ್ನು ತೆರೆದಿದೆ. ನವೆಂಬರ್ 2ರಿಂದ ಆಫ್‍ಲೈನ್ ತರಗತಿಗಳನ್ನು ಸರ್ಕಾರ ಪ್ರಾರಂಭಿಸಿದೆ.

  • ದಾಖಲಾತಿ 9 ಸಾವಿರ, ಹಾಜರಾತಿ 300- ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ನೀರಸ ಪ್ರತಿಕ್ರಿಯೆ

    ದಾಖಲಾತಿ 9 ಸಾವಿರ, ಹಾಜರಾತಿ 300- ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ನೀರಸ ಪ್ರತಿಕ್ರಿಯೆ

    ಉಡುಪಿ: ಕೊರೊನಾ ಸಾಂಕ್ರಾಮಿಕ ನಂತರ ರಾಜ್ಯಾದ್ಯಂತ ಕಾಲೇಜುಗಳು ಓಪನ್ ಆಗಿದ್ದು ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 9,072 ವಿದ್ಯಾರ್ಥಿಗಳ ಪೈಕಿ ಸುಮಾರು 300 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಬರುತ್ತಿದ್ದಾರೆ. ಈ ಪೈಕಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳದ್ದೇ ಸಿಂಹಪಾಲು.

    ಕೊರೊನಾದ ನಡುವೆ ರಾಜ್ಯಾದ್ಯಂತ ಪದವಿ ಕಾಲೇಜುಗಳನ್ನು ಸರ್ಕಾರ ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ತೀರಾ ನೀರಸ ಪ್ರತಿಕ್ರಿಯೆಯನ್ನು ತೋರಿದ್ದಾರೆ. ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳು ಸೇರಿ ಜಿಲ್ಲೆಯಲ್ಲಿ 55 ಕಾಲೇಜುಗಳಿವೆ. ಅಂತಿಮ ಪದವಿ ವಿಭಾಗದಲ್ಲಿ 9,072 ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಮಾಡಿಕೊಂಡಿದ್ದಾರೆ. ಈ ಪೈಕಿ ಕೇವಲ 307 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದಾರೆ.

    ಈ ಮೂಲಕ ರೆಗ್ಯುಲರ್ ಕ್ಲಾಸ್ ಬೇಡ, ನಮಗೆ ಮನಸ್ಸಿಲ್ಲ ಎಂಬೂದನ್ನು ಪ್ರದರ್ಶನ ಮಾಡಿದಂತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ 36 ಖಾಸಗಿ ಕಾಲೇಜಿನಲ್ಲಿ 3,766 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಕೇವಲ 38 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 9 ಸರ್ಕಾರಿ ಕಾಲೇಜುಗಳಿದ್ದು 2,829 ವಿದ್ಯಾರ್ಥಿಗಳ ಪೈಕಿ 232 ಮಂದಿ ಹಾಜರಾಗಿದ್ದಾರೆ.

    ಅನುದಾನಿತ ಕಾಲೇಜುಗಳು ಲೆಕ್ಕಾಚಾರ ನೋಡೋದಾದರೆ ಜಿಲ್ಲೆಯ 10 ಅನುದಾನಿತ ಕಾಲೇಜಲ್ಲಿ 2,577 ವಿದ್ಯಾರ್ಥಿಗಳ ಪೈಕಿ ಕೇವಲ 37 ಜನ ಮಾತ್ರ ತರಗತಿಗೆ ಬಂದಿದ್ದಾರೆ. ಕೆಲ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿ ಬಾರದ ಉದಾಹರಣೆ ಇದೆ. ಜಿಲ್ಲೆಯಲ್ಲಿ 6,000 ವಿದ್ಯಾರ್ಥಿಗಳ ಕೊರೊನಾ ಟೆಸ್ಟ್ ಆಗಿದ್ದು, 7 ಜನರಲ್ಲಿ ಕೊರೊನಾ ಕಾಣಿಸಿದೆ. ಸಾಂಕ್ರಾಮಿಕ ರೋಗದ ಅಬ್ಬರ ಇಳಿಕೆಯಾದರೂ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಮನಸ್ಸು ಮಾಡುತ್ತಿಲ್ಲ. ಆನ್‍ಲೈನ್ ಕ್ಲಾಸಿಗೆ ಒಗ್ಗಿಕೊಂಡಂತೆ ಕಾಣುತ್ತಿದೆ.

    ಕಳೆದ ಮೂರ್ನಾಲ್ಕು ತಿಂಗಳಿಂದ ಆನ್‍ಲೈನ್ ಮೂಲಕ ಪಾಠಗಳು ನಡೆಯುತ್ತಿದ್ದು, ಈಗ ಆಫ್‍ಲೈನ್ ಕ್ಲಾಸ್‍ಗಳು ಆರಂಭವಾಗಿದೆ. ಬೇರೆ ಅವಕಾಶಗಳು ಇಲ್ಲದ ಕಾರಣ ಅದಕ್ಕೆ ಒಗ್ಗಿ ಕೊಂಡಿದ್ದೆವು. ಈಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ತರಗತಿಗೆ ಹಾಜರಾಗಿದ್ದೇವೆ. ಆ ಸಂದರ್ಭದಲ್ಲಿ ಆಡಿಯೋ ಸಮಸ್ಯೆ ನೆಟ್‍ವರ್ಕ್ ಸಮಸ್ಯೆಗಳು ಇತ್ತು. ಕ್ಲಾಸ್‍ನಲ್ಲಿ ಡೌಟ್‍ಗಳಿದ್ದರೆ ನೇರವಾಗಿ ನಾವು ಪರಿಹರಿಸಿಕೊಳ್ಳಬಹುದು. ಆರೋಗ್ಯ ಸಮಸ್ಯೆಗಳು ಇದ್ದರೆ ಆನ್‍ಲೈನ್ ಮೂಲಕ ಶಿಕ್ಷಣ ಪಡೆದುಕೊಳ್ಳುವುದು ಒಳ್ಳೆಯದು. ನಮ್ಮ ಕ್ಲಾಸ್‍ನಲ್ಲಿ 150 ವಿದ್ಯಾರ್ಥಿಗಳು ಇದ್ದಾರೆ. ಆದರೆ ಈಗ 12 ಜನ ಮಾತ್ರ ತರಗತಿಗೆ ಹಾಜರಾಗಿದ್ದಾರೆ. ಆನ್‍ಲೈನ್ ಕ್ಲಾಸ್‍ಗಿಂತ ಆಫ್ ಲೈನ್ ಕ್ಲಾಸೆ ನಮಗೆ ಬೆಟರ್ ಅಂತ ಅನಿಸುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದೆ ಸರ್ಕಾರಿ ಮತ್ತು ಅನುದಾನಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರುವುದು ಅನಿವಾರ್ಯ ಆಗಿದೆ. ನಮ್ಮ ಕಾಲೇಜಿನಲ್ಲಿ ಮಾನವ ಸಂಪನ್ಮೂಲ ಜಾಸ್ತಿ ಇರುವುದರಿಂದ ಸೌಕರ್ಯಗಳು ಜಾಸ್ತಿ ಇರುವುದರಿಂದ ನೇರವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಸೋಮವಾರದ ನಂತರ ಮಕ್ಕಳ ಹಾಜರಾತಿ ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಜಿ ಶಂಕರ್ ಸರ್ಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಮಚಂದ್ರ ಅಡಿಗ ಹೇಳಿದ್ದಾರೆ.

  • ಡ್ಯೂಟಿಗೆ ತೆರಳುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡ್ತಿರೋ ಪೊಲೀಸ್

    ಡ್ಯೂಟಿಗೆ ತೆರಳುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡ್ತಿರೋ ಪೊಲೀಸ್

    – ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಗರು ಪಿಧಾ

    ಬೆಂಗಳೂರು: ಡ್ಯೂಟಿಗೆ ಹೋಗುವ ಮುನ್ನ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಪ್ಪ ಜಡೆಮ್ಮನವರ್, ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‍ಫೋನ್ ಮತ್ತು ಲ್ಯಾಪ್‍ಟಾಪ್‍ಗಳು ಇಲ್ಲದ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಓದಿ: 3 ಕಿ.ಮೀ ಕಾಲುವೆಯನ್ನು 30 ವರ್ಷ ಅಗೆದು ಗ್ರಾಮಕ್ಕೆ ನೀರು ಹರಿಸಿದ ರೈತ

    ಪ್ರತಿದಿನ ಶಾಂತಪ್ಪ ಅವರು ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತೆರಳುತ್ತಾರೆ. ಆದರೆ ಇದಕ್ಕೂ ಮುಂಚೆ ಅವರು, ಪಶ್ಚಿಮ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿರುವ ಕಾರ್ಮಿಕರ ಮಕ್ಕಳಿಗೆ ಪಾಠ ಮಾಡುತ್ತಾರೆ. ಸುಮಾರು 30 ಮಕ್ಕಳಿಗೆ ಒಂದು ಗಂಟೆ ಪಾಠ ಮಾಡಿ ಕೆಲಸಕ್ಕೆ ಹೋಗುತ್ತಾರೆ. ಶಾಲೆಯ ಪಠ್ಯಕ್ಕೆ ಅನುಗುಣವಾಗಿ ಪಾಠ ಮಾಡಲು ಸಾಧ್ಯವಾಗದೇ ಇರುವ ಕಾರಣ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಗಣಿತದ ಬಗ್ಗೆ ಪಾಠವನ್ನು ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಶಾಂತಪ್ಪ, ನಾನು 20 ದಿನಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಇಲ್ಲಿರುವ ಕಾರ್ಮಿಕರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಪಡೆದುಕೊಳ್ಳುವ ಸೌಲಭ್ಯವಿಲ್ಲ. ಈ ಕಾರಣದಿಂದ ನಾನು ಡ್ಯೂಟಿಗೆ ಹೋಗುವ ಒಂದು ಗಂಟೆ ಮುಂಚಿತವಾಗಿ ಇಲ್ಲಿಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡುತ್ತೇನೆ ಎಂದಿದ್ದಾರೆ. ಶಾಂತಪ್ಪ ಪಾಠ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

    ಬೆಂಗಳೂರಿಗೆ ಹೆಚ್ಚು ಕಾರ್ಮಿಕರು ಬರುವುದು ಉತ್ತರ ಕರ್ನಾಟಕ ಬಳ್ಳಾರಿ, ಗದಗ, ಕೊಪ್ಪಳ ಮತ್ತು ರಾಯಚೂರು ಭಾಗಗಳಿಂದ. ನಾನು ಅದೇ ಭಾಗದವನಾದ ಕಾರಣ ಅಲ್ಲಿನ ಕಾರ್ಮಿಕರ ಮಕ್ಕಳ ಕಷ್ಟಗಳೇನು ಎಂಬುದು ನನಗೆ ಚೆನ್ನಾಗಿ ಗೊತ್ತು. ಈ ಕಾರಣಕ್ಕೆ ನಾನು ಈ ಮಕ್ಕಳಿಗೆ ಪಾಠ ಮಾಡಲೂ ನಿರ್ಧಾರ ಮಾಡಿದ್ದೇನೆ ಎಂದು ಶಾಂತಪ್ಪ ತಿಳಿಸಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚಿ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಇವರನ್ನು ಭೇಟಿ ಮಾಡಿದ್ದಾರೆ.

  • ಸೆಪ್ಟಂಬರ್‌ವರೆಗೆ ಶಾಲೆ ಆರಂಭ ಇಲ್ಲ- ಇಂದಿನಿಂದ ಚಂದನ ವಾಹಿನಿಯಲ್ಲಿ ಆನ್‍ಲೈನ್ ಕ್ಲಾಸ್

    ಸೆಪ್ಟಂಬರ್‌ವರೆಗೆ ಶಾಲೆ ಆರಂಭ ಇಲ್ಲ- ಇಂದಿನಿಂದ ಚಂದನ ವಾಹಿನಿಯಲ್ಲಿ ಆನ್‍ಲೈನ್ ಕ್ಲಾಸ್

    – 4 ಗಂಟೆಯಲ್ಲಿ 8 ವಿಷಯಗಳ ಬೋಧನೆ

    ಬೆಂಗಳೂರು: ಮಹಾಮಾರಿ ಕೊರೊನಾದಿಂದ ಸದ್ಯಕ್ಕೆ ಸೆಪ್ಟಂಬರ್‌ವರೆಗೂ ಶಾಲೆಗಳ ಪ್ರಾರಂಭ ಇಲ್ಲ. ಹೀಗಾಗಿ ಇಂದಿನಿಂದ ಮಕ್ಕಳಿಗೆ ಇ-ಕ್ಲಾಸ್ ಆರಂಭವಾಗಲಿದೆ.

    ಚಂದನ ವಾಹಿನಿಯಲ್ಲಿ ಸೇತುಬಂದ ಕಾರ್ಯಕ್ರಮಗಳು ಆರಂಭವಾಗುತ್ತಿವೆ. ಇಂದಿನಿಂದ 8-10ನೇ ತರಗತಿವರೆಗಿನ ಪಾಠಗಳು ಪ್ರಸಾರವಾಗುತ್ತೆ. ಮಕ್ಕಳ ಹಿತ ದೃಷ್ಠಿಯಿಂದ ಇಂದಿನಿಂದ ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತಿದೆ. ಜುಲೈ 20 ರಿಂದ 31ರ ವರೆಗೆ ಬ್ರಿಡ್ಜ್ ಕೋರ್ಸ್ ನಡೆಯಲಿದ್ದು, ಈಗಾಗಲೇ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಶಾಲೆಗಳ ಪ್ರಾರಂಭ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಸೆಪ್ಟೆಂಬರ್‌ನಲ್ಲಿ ಶಾಲೆ ಪ್ರಾರಂಭ ಆಗುತ್ತೆ ಎಂಬ ನಿರ್ಣಯವನ್ನು ಸರ್ಕಾರ ವ್ಯಕ್ತಪಡಿಸಿಲ್ಲ. ಕೊರೊನಾ ಸಂದರ್ಭದಲ್ಲಿನ ಶಿಕ್ಷಣ ಕ್ಷೇತ್ರದ ಆದ್ಯತೆಗಳು ಬೇರೆ ಇದೆ. ಅವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ತನ್ನನ್ನು ತೊಡಗಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದ ಮುಕ್ತ ವಾತಾವರಣದ ಸೃಷ್ಟಿಯಾದ ಮೇಲೆ ಮಾತ್ರ ಶಾಲೆಗಳಿಗೆ ಹಾಜರಾಗುತ್ತಾರೆ. ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆ ನಾವು ಯಾವುದೇ ಯೋಚನೆ, ನಿರ್ಣಯ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನವಶ್ಯಕ ಆತಂಕ ಬೇಡ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ವರ್ಷ ಇ ಕ್ಲಾಸ್ ಹಾಗೂ ಆನ್‍ಲೈನ್ ಕ್ಲಾಸ್‍ಗಳು ಮಾತ್ರನ ಅಂತ ಬಹುತೇಕ ಪೋಷಕರ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಶಾಲೆಗಳ ಓಪನ್ ಆಗುವ ಸಾಧ್ಯತೆ ಕಡಿಮೆ ಇದೆ.

    ಇತ್ತೀಚೆಗೆ ಸಚಿವ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಕೂಡ ಈ ವಿಚಾರ ಪ್ರಸ್ತಾಪ ಮಾಡಿದ್ದು, ಮಕ್ಕಳು, ವೃದ್ಧರನ್ನ ಹೊರಗೆ ಕಳಿಸದೇ ರಕ್ಷಣೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದರು. ಜೊತೆಗೆ ಮಕ್ಕಳ ತಜ್ಞರಿಂದಲೂ ಶಾಲೆ ಓಪನ್ ಮಾಡದೇ ಇರುವುದೇ ಉತ್ತಮ ಎಂಬ ಸಲಹೆ ಬಂದಿತ್ತು.

  • ಆನ್‍ಲೈನ್ ಶಿಕ್ಷಣಕ್ಕೆ ಸೆಡ್ಡು ಹೊಡೆದ ಆಡಳಿತ ಮಂಡಳಿ- ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ

    ಆನ್‍ಲೈನ್ ಶಿಕ್ಷಣಕ್ಕೆ ಸೆಡ್ಡು ಹೊಡೆದ ಆಡಳಿತ ಮಂಡಳಿ- ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ

    – ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ಭೇಟಿ
    – ಪಾಠದ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿ

    ಬೆಳಗಾವಿ/ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಶಾಲೆಗಳನ್ನ ಯಾವಾಗ ಆರಂಭ ಮಾಡಬೇಕು ಎನ್ನುವ ಗೊಂದಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೊಂದಲದಲ್ಲಿವೆ. ಕೆಲ ಶಾಲೆಗಳು ಸರ್ಕಾರ ಬೇಡ ಎಂದರೂ ಆನ್‍ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿವೆ. ಆದರೆ ಇಲ್ಲೊಂದು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ವಿಭಿನ್ನವಾಗಿ ಪಾಠ ಮಾಡುವ ಹೊಸ ಐಡಿಯಾ ಕಂಡು ಕೊಂಡಿದೆ.

    ಬೈಕ್ ಮೇಲೆ ಹಾಗೂ ನಡೆದುಕೊಂಡು ಶಾಲಾ ಮಕ್ಕಳ ಮನೆಗಳಿಗೆ ತೆರಳಿ ಶಿಕ್ಷಕರು ಪಾಠ ಮಾಡುತ್ತಿರುವ ಹೊಸ ಐಡಿಯಾವನ್ನ ಮಾಡಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆಡಳಿತ ಮಂಡಳಿ ಮಾಡಿದೆ. ಮಹಾಮಾರಿ ಕೊರೊನಾದಿಂದ ವಿದ್ಯಾರ್ಥಿಗಳು ಪಾಠ ಬಿಟ್ಟು ಕೇವಲ ಆಟ ಆಡಿ ಕಾಲಹರಣ ಮಾಡುವುದನ್ನ ಗಮನಿಸಿ ಹಾಗೂ ಆನ್‍ಲೈನ್ ಶಿಕ್ಷಣದಿಂದ ಮಕ್ಕಳಿಗೆ, ಪಾಲಕರಲ್ಲಿ ತೊಂದರೆಯಾಗುವುದನ್ನ ಮನಗಂಡು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ತೆರಳಿ ಪಾಠ ಹೇಳುವ ಹೊಸ ಐಡಿಯಾ ಕಂಡುಕೊಂಡಿದೆ.

    600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರೇ ಖುದ್ದಾಗಿ ತೆರಳಿ ಪಾಠ ಮಾಡುತ್ತಿದ್ದಾರೆ. ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ತೆರಳಿ ಹೋಂವರ್ಕ್ ಕೊಟ್ಟು ಬರುತ್ತಾರೆ. ಬಳಿಕ ಮತ್ತೆ ಮೂರು ದಿನಗಳ ಬಳಿಕ ಹೋಂವರ್ಕ್ ಚೆಕ್ ಮಾಡಿ ಹೊಸ ಹೋಂವರ್ಕ್ ಕೊಟ್ಟು ಬರುವ ಕೆಲಸವನ್ನ ಶಿಕ್ಷಕರು ಮಾಡುತ್ತಿದ್ದಾರೆ. 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ 28 ಶಿಕ್ಷಕರ ತಂಡ ದಿನನಿತ್ಯ ಹೋಗಿ ಪಾಠ ಮಾಡಿ ಬರುತ್ತಿದ್ದಾರೆ. ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಪಾಲಕರು ಸಂತಸ ವ್ಯಕ್ತಪಡಿಸಿದ್ದು, ಲಾಕ್‍ಡೌನ್‍ನಿಂದ ನಮ್ಮ ಮಕ್ಕಳು ವಿದ್ಯಾಭ್ಯಾಸ ಮರೆತು ಬಿಟ್ಟಿದ್ದರು. ಆದರೆ ಈ ಹೊಸ ವ್ಯವಸ್ಥೆಯಿಂದ ದಿನನಿತ್ಯ ಅಭ್ಯಾಸದ ಕಡೆಗೆ ಗಮನ ಕೊಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

    ಅನುದಾನಿತ ಶಾಲೆ ಆದರೂ ಶಿಕ್ಷಕರು ಹೆಚ್ಚು ಇರುವ ಈ ಶಾಲೆಯಲ್ಲಿ ಶಾಲೆಗಳು ಬಂದ ಆಗಿದ್ದ ಕಾರಣ ವೇತನವಿಲ್ಲದೇ ಪರದಾಡುತ್ತಿದ್ದರು. ಇದನ್ನ ಗಮನಿಸಿದ ಆಡಳಿತ ಮಂಡಳಿ ಈಗ ಶಿಕ್ಷಕರಿಗೆ ಹೊಸ ಕಾಯಕ ನೀಡಿ ವೇತನ ನೀಡುತ್ತಿರುವುದಕ್ಕೆ ಶಿಕ್ಷಕರ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ. ಅಲ್ಲದೇ ದಿನನಿತ್ಯ ಶಿಕ್ಷಕರು ಪಾಠ ಮಾಡುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿಗಳ ಮನೆಯವರ ಆರೋಗ್ಯದ ಮಾಹಿತಿ ಪಡೆದು, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ ಅವರಿಗೆ ಸಲಹೆ ನೀಡಿ ಆಸ್ಪತ್ರೆಗೆ ಕಳಿಸಿಕೊಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಪಾಠದ ಜೊತೆಗೆ ಆರೋಗ್ಯದ ಕಡೆಯೂ ಈ ಶಾಲೆಯ ಶಿಕ್ಷಕರು ಕಾಳಜಿವಹಿಸುತ್ತಿದ್ದಾರೆ.

    ಕೊರೊನಾ ಮಹಾಮಾರಿಗೆ ಶಿಕ್ಷಣ ವ್ಯವಸ್ಥೆಯೇ ಅದಲು ಬದಲಾಗಿದೆ. ಆನ್‍ಲೈನ್ ಶಿಕ್ಷಣ ಬೇಕಾ ಅಥವಾ ಶಾಲೆ ಆರಂಭಿಸಬೇಕಾ ಎನ್ನುವ ಗೊಂದಲದಲ್ಲಿ ಸರ್ಕಾರ ಇದೆ. ಆದರೆ ಈ ಎಲ್ಲ ಗೊಂದಲಗಳನ್ನ ಬದಿಗಿಟ್ಟು ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯು ಕಂಡುಕೊಂಡಿರುವ ಈ ಹೊಸ ಐಡಿಯಾ ಇತರರಿಗೂ ಮಾದರಿಯಾಗಿದೆ.

  • ಟ್ಯೂಷನ್ ದತ್ತ ಮೇಷ್ಟ್ರೇ ನಿಮಗೊಂದು ಸಲಾಂ: ಸಚಿವ ಸುರೇಶ್ ಕುಮಾರ್

    ಟ್ಯೂಷನ್ ದತ್ತ ಮೇಷ್ಟ್ರೇ ನಿಮಗೊಂದು ಸಲಾಂ: ಸಚಿವ ಸುರೇಶ್ ಕುಮಾರ್

    – ನಿಮ್ಮೊಳಗಿರೋ ಶಿಕ್ಷಕ ಸದಾ ಹಸಿರಾಗಿರಲಿ ಮೇಷ್ಟ್ರೇ

    ಚಿಕ್ಕಮಗಳೂರು: ಫೇಸ್‍ಬುಕ್ ಲೈವ್ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪಾಠ ಮಾಡುತ್ತಿರೋ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತರ ಸೇವೆಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಿದಾ ಆಗಿದ್ದಾರೆ. ದತ್ತ ಅವರಿಗೆ ಪತ್ರ ಬರೆಯುವ ಮೂಲಕ ಅವರ ಸೇವೆಗೆ ಧನ್ಯವಾದ ತಿಳಿಸಿದ್ದಾರೆ.

    ವೃತ್ತಿ ಹಾಗೂ ಮಕ್ಕಳ ಮೇಲಿರುವ ನಿಮ್ಮ ಪ್ರೀತಿಗೆ ನನ್ನದೊಂದು ಸಲಾಂ ಎಂದು ಪತ್ರದಲ್ಲಿ ಬರೆದಿದ್ದಾರೆ. ದತ್ತ ಮೇಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪ್ರತಿ ದಿನ ಸಂಜೆ 7.30 ರಿಂದ 8.30ರವರೆಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡುತ್ತಿದ್ದಾರೆ. ಒಂದು ವಾರ ಭೌತಶಾಸ್ತ್ರ ಹಾಗೂ ಮತ್ತೊಂದು ವಾರ ಗಣಿತ ಪಾಠ ಮಾಡುತ್ತಿದ್ದಾರೆ. ಕೊರೊನಾ ಭಯದಿಂದ ಮುಂದಕ್ಕೆ ಹೋಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದತ್ತ ಮೆಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪುನರ್ ಮನನ ಮಾಡುವ ಉದ್ದೇಶದಿಂದ ಫೇಸ್‍ಬುಕ್ ಲೈವ್‍ನಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

    ಫೇಸ್‍ಬುಕ್‍ನಲ್ಲಿ ದತ್ತ ಮೇಷ್ಟ್ರ ಪಾಠ ನೋಡಿದ ಎಲ್ಲರೂ ನಾನು ನಿಮ್ಮ ಸ್ಟೂಡೆಂಟ್ ಆಗಬೇಕಿತ್ತು ಸರ್ ಎಂದು ಕಾಮೆಂಟ್ ಮಾಡಿದವರು ಇದ್ದಾರೆ. ಮಾಜಿ ಶಾಸಕ ವೈ.ಎಸ್.ವಿ ದತ್ತಾಗೆ ಶಿಕ್ಷಕ ವೃತ್ತಿ ಹೊಸತೇನಲ್ಲ. ಅವರು ಮೂಲತಃ ಶಿಕ್ಷಕರು. ಶಾಸಕರಾಗುವ ಮುನ್ನ ಬೆಂಗಳೂರಿನಲ್ಲಿ ಟ್ಯೂಷನ್ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಅವರು ಟ್ಯೂಷನ್ ದತ್ತಮೇಷ್ಟ್ರು ಎಂದೇ ಖ್ಯಾತಿ ಪಡೆದಿದ್ದಾರೆ. ಅವರಿಂದ ಕಲಿತವರು ಬೆಂಗಳೂರಿನ ದಶದಿಕ್ಕುಗಳಲ್ಲೂ ಇದ್ದಾರೆ.

    ಈಗ ಕೊರೊನಾನ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಮತ್ತೊಮ್ಮೆ ಫೇಸ್‍ಬುಕ್ ಮೂಲಕ ಮಕ್ಕಳಿಗೆ ಪಾಠ ಮಾಡುವ ಮೂಲಕ ಮಕ್ಕಳೊಂದಿಗೆ ಮಕ್ಕಳಾಗಿದ್ದಾರೆ. ರಾಜಕೀಯ ಮರೆತು ದತ್ತ ಮೇಷ್ಟ್ರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಬೆಂಗಳೂರಿನ ರಸ್ತೆಯಲ್ಲಿ ಸಿಕ್ಕಾಗ ಇಬ್ಬರು ಮಾತನಾಡಿದ ಕುಶಲೋಪರಿಯನ್ನ ಪತ್ರದ ಮೂಲಕ ಮತ್ತೊಮ್ಮೆ ನೆನೆದಿದ್ದಾರೆ. ಪತ್ರದ ತುಂಬಾ ದತ್ತರವರನ್ನ ಹಾಡಿ ಹೊಗಳಿರೋ ಸುರೇಶ್ ಕುಮಾರ್ ನಿಮ್ಮೊಳಗಿರುವ ನೈಜ ಶಿಕ್ಷಕ ಸದಾ ಹಸಿರಾಗಿರಲಿ, ನಿಮ್ಮ ನಿಸ್ವಾರ್ಥ ಸೇವೆಗೆ, ಟ್ಯೂಷನ್ ಮೇಷ್ಟ್ರಿಗೆ ನನ್ನದೊಂದು ಸಲಾಂ ಎಂದಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    – ನನಗೆ ಶಿಕ್ಷಕ ಎಂದು ಹೇಳಿಕೊಳ್ಳಲು ಹೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ.

    ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ನಡೆಯುವ ಹಿನ್ನೆಲೆ, ದತ್ತ ಮೇಷ್ಟ್ರು ಫೇಸ್‍ಬುಕ್ ನಲ್ಲಿ ಈಗಾಗ್ಲೇ ಮಕ್ಕಳಿಗೆ ಗಣಿತ ಪಾಠವನ್ನು ಆರಂಭಿಸಿದ್ದಾರೆ.

    https://www.facebook.com/ysvDattaofficial/videos/1161467544194546/

    ಎರಡು ವಾರಗಳ ಕಾಲ ಮಕ್ಕಳಿಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡಲಿದ್ದಾರೆ. ವೈ.ಎಸ್.ವಿ ದತ್ತ ಫೇಸ್‍ಬುಕ್ ಖಾತೆಯಿಂದ ದಿನ ಸಂಜೆ 7.30 ರಿಂದ 8.30ರವರಗೆ ಒಂದು ಗಂಟೆ ಮಕ್ಕಳಿಗೆ ಪಾಠ ಮಾಡಲಿದ್ದಾರೆ. ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮೂಲತಃ ಶಿಕ್ಷಕರು. ನಂತರ ಶಿಕ್ಷಕ ವೃತ್ತಿಯಿಂದ ರಾಜಕಾರಣಕ್ಕೆ ಬಂದಿದ್ದರು. ಈ ಹಿಂದೆ ಅವರು ಶಾಸಕರಾಗಿದ್ದಾಗಲೂ ಕೂಡ ಶಿಕ್ಷಕರ ದಿನಾಚರಣೆಯಂದು ಮಕ್ಕಳಿಗೆ ಪಾಠ ಮಾಡಿದ್ದರು.

    ಈಗ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಮೇಲೆ 10ನೇ ತರಗತಿಯ ಪರೀಕ್ಷೆ ಕೂಡ ಮುಂದೂಡಲಾಗಿತ್ತು. ಈಗ ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇರುವ ಕಾರಣ ಮಕ್ಕಳಿಗೆ ಪುನರ್ ಮನನ ತರಗತಿ ಅಗತ್ಯವೆಂದು ವರ್ಷಗಳ ಬಳಿಕ ಕೈಯಲ್ಲಿ ಮತ್ತೆ ಚಾಕ್‍ಪೀಸ್ ಹಿಡಿದು ಬದಲಾದ ಜಗದಲ್ಲಿ ಫೇಸ್‍ಬುಕ್ ಮೂಲಕ ಮತ್ತೆ ಶಿಕ್ಷಕ ವೃತ್ತಿಗೆ ಕಾಲಿಟ್ಟಿದ್ದಾರೆ.

  • ಜಿ.ಪಂ ಸಿಇಒ ರಿಂದ SSLC ವಿದ್ಯಾರ್ಥಿಗಳಿಗೆ ಪಾಠ

    ಜಿ.ಪಂ ಸಿಇಒ ರಿಂದ SSLC ವಿದ್ಯಾರ್ಥಿಗಳಿಗೆ ಪಾಠ

    ಯಾದಗಿರಿ: ನಗರದ ಸ್ಟೇಷನ್ ಬಜಾರ್ ಪ್ರೌಢಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಪರಿಶೀಲನೆ ಜೊತೆಗೆ ಭೋದನೆ ಕೂಡ ಮಾಡಿದ್ದಾರೆ.

    ಸಿಇಒ ಶಿಲ್ಪಾ ಶರ್ಮಾ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಪರಿಶೀಲನೆ ವೇಳೆ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ಸೂತ್ರಗಳ ಬಗ್ಗೆ ಪ್ರಶ್ನಿಸಿದರು. ಸಿಇಓ ಕೇಳಿದ ಪ್ರಶ್ನೆಗಳಿಗೆ ಬಹುತೇಕ ವಿದ್ಯಾರ್ಥಿಗಳು ಸಮರ್ಪಕ ಉತ್ತರ ನೀಡಿದರು. ಆದರೆ ಕೆಲವು ಮಕ್ಕಳು ಉತ್ತರ ಹೇಳುವುದರಲ್ಲಿ ಎಡವಿದ್ದರಿಂದ ವಿಷಯ ಶಿಕ್ಷಕರನ್ನು ಎಷ್ಟು ಅಧ್ಯಾಯ ಪಾಠ ಮಾಡಿದ್ದೀರಾ ಎಂದು ಕ್ಲಾಸ್ ತೆಗೆದುಕೊಂಡರು.

    ಬೋರ್ಡ್ ಪರೀಕ್ಷೆ ಫಲಿತಾಂಶದಲ್ಲಿ ಯಾದಗಿರಿ ಅತೀ ಹಿಂದುಳಿದ ಜಿಲ್ಲೆಯಾಗಿದೆ. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ಹಲವಾರು ಯೋಜನೆ ಹಾಕಿಕೊಂಡಿದೆ. ಹೀಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೆಲವೇ ದಿನಗಳು ಬಾಕಿರುವ ಹಿನ್ನೆಲೆಯಲ್ಲಿ ಫಲಿತಾಂಶ ಸುಧಾರಣೆ ಸಮಿತಿ ಅಧ್ಯಕ್ಷರಾಗಿರುವ ಸಿಇಒ, ವಿವಿಧ ಪ್ರೌಢಶಾಲೆಗಳಿಗೆ ತೆರಳಿ SSLC ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯನ್ನು ಗಮನಿಸುತ್ತಿದ್ದಾರೆ.

  • ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕೊಪ್ಪಳ: ಜೀವನದ ಯಾವುದೋ ಒಂದು ಸಮಯದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ ಕೈದಿಗಳ ಜೀವನದಲ್ಲಿ ಹೊಸ ಪುಟವನ್ನು ತೆರೆಯುವ ಕೆಲಸವನ್ನು ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ಮಾಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಅಕ್ಷರ ಕಲಿಕೆಯ ವಿಶೇಷ ಕಾರ್ಯಕ್ರಮವನು ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ಕಾರಾಗೃಹದಲ್ಲಿರುವ ಅಕ್ಷರಸ್ಥ ಕೈದಿಗಳಿಂದಲೇ ಅನಕ್ಷರಸ್ಥ ಕೈದಿಗಳಿಗೆ ಪಾಠ ಮಾಡಲಾಗುತ್ತಿದೆ. ನಿತ್ಯ ಅನಕ್ಷರಸ್ಥ ಕೈದಿಗಳಿಗೆ 1 ಗಂಟೆ ಅಕ್ಷರಗಳ ಸಾಮಾನ್ಯ ಜ್ಞಾನ ಹೇಳಿಕೊಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಸುಮಾರು 300 ಜನ ವಿಚಾರಣಾಧೀನ ಕೈದಿಗಳಿದ್ದಾರೆ. ಅದರಲ್ಲಿ ಸುಮಾರು 90 ಕ್ಕೂ ಹೆಚ್ಚು ಜನರಿಗೆ ಅಕ್ಷರ ಜ್ಞಾನ ಇಲ್ಲ. ಹೀಗಾಗಿ ಅನಕ್ಷರಸ್ಥ ಕೈದಿಗಳಿಗೆ ಜೈಲಿನಲ್ಲಿರುವ ಅಕ್ಷರಸ್ಥ ಕೈದಿಗಳಿಂದ ಪಾಠ ಮಾಡಿಸಲಾಗುತ್ತಿದೆ. ಪ್ರತಿ 10 ಅನಕ್ಷರಸ್ಥರನ್ನು ಒಂದು ತಂಡ ಮಾಡಿ ನಿತ್ಯ 1 ಗಂಟೆ ಅವರಿಗೆ ಪಾಠ ಮಾಡಲಾಗುತ್ತಿದೆ.

    ಕೈದಿಗಳಿಗೆ ಶಿಕ್ಷಣ ನೀಡುವ ಈ ಕಾರ್ಯಕ್ಕೆ ಜಿಲ್ಲಾ ವಯಸ್ಕ ಶಿಕ್ಷಣ ಇಲಾಖೆ ಕೂಡಾ ಸಾಥ್ ನೀಡಿದ್ದು, ಕೈದಿಗಳಿಗೆ ಅಗತ್ಯ ಪುಸ್ತಕಗಳನ್ನು ನೀಡಿದೆ. ವಿವಿಧ ಅಪರಾಧದಲ್ಲಿ ಭಾಗಿಯಾದ ಬಂದ ಕೈದಿಗಳು ಇಲ್ಲಿಂದ ಹೊರಗಡೆ ಹೋದಾಗ ಅಕ್ಷರ ಕಲಿತು ಹೋಗಲಿ ಎಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಾರಾಗೃಹ ಅಧೀಕ್ಷಕರಾದ ಬಿ.ಎಮ್.ಕೊಟ್ರೇಶ್ ತಿಳಿಸಿದ್ದಾರೆ.

    ಮೊದಲಿಗೆ ಅಕ್ಷರ ಜ್ಞಾನ ಹೊಂದಿರುವ ಕೈದಿಗಳಿಗೆ ಕೆಲ ಮಾರ್ಗದರ್ಶನಗಳನ್ನು ನೀಡಿ ಆ ಬಳಿಕ ಇತರೇ ಕೈದಿಗಳಿಗೆ ಕಲಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಈ ಕಾರ್ಯಕ್ರಮ ಮೊದಲ ಭಾಗವಾಗಿ 6 ತಿಂಗಳ ಕಾಲ ನಡೆಯಲಿದೆ. ಇದು ಕೈದಿಗಳ ಜೀವನಕ್ಕೆ ನೆರವಾಗಲಿ. ಅಕ್ಷರ ಕಲಿತ ಕೈದಿಗಳು ಮನ ಪರಿವರ್ತನೆ ಮಾಡಿಕೊಂಡು ಹೊಸ ದಾರಿ ರೂಪಿಸಿಕೊಳ್ಳಿ ಎಂಬುವುದು ನಮ್ಮ ಗುರಿಯಾಗಿದೆ ಎಂದರು. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.