Tag: Leaders

  • ಎಲೆಕ್ಷನ್ ಹೊತ್ತಲ್ಲೇ ಡೀಲ್‍ಗಿಳಿದ್ರಾ ಬಿಜೆಪಿ ಮುಖಂಡರು?

    ಎಲೆಕ್ಷನ್ ಹೊತ್ತಲ್ಲೇ ಡೀಲ್‍ಗಿಳಿದ್ರಾ ಬಿಜೆಪಿ ಮುಖಂಡರು?

    ರಾಮನಗರ: ಮಾಗಡಿ ಶಾಸಕ ಎ ಮಂಜುನಾಥ್ ರಿಂದ ತೆರವಾಗಿದ್ದ ಕುದೂರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ವಾಪಾಸ್ಸು ತೆಗೆದುಕೊಳ್ಳಲು ಡೀಲ್ ನಡೆದಿದೆ ಎನ್ನುವ ಆರೋಪವೊಂದು ಕೇಳಿ ಬಂದಿದೆ.

    ಕುದೂರು ಜಿ.ಪಂ ನ ಬಿಜೆಪಿ ಅಭ್ಯರ್ಥಿಯಾಗಿ ಹೇಮಂತ್ ನಾಮಪತ್ರ ಸಲ್ಲಿಸಿದ್ರು. ಆದ್ರೆ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಹಾಗೂ ತಾಲೂಕು ಅಧ್ಯಕ್ಷ ರಂಗಧಾಮಯ್ಯ ಒತ್ತಡ ಹೇರಿ ನಾಮಪತ್ರ ವಾಪಾಸ್ಸು ತೆಗೆದುಕೊಳ್ಳುವಂತೆ ಮಾಡಿದ್ದಾರೆ ಎನ್ನುವ ಆರೋಪ ಬಂದಿದೆ.

    ನಾಮಪತ್ರ ಸಲ್ಲಿಸುವುದು ಬೇಡ ಎಂದು ಜೆಡಿಎಸ್ ಮುಖಂಡರು ಧಮ್ಕಿ ಕೂಡ ಹಾಕಿದ್ರು. ಆನಂತರ ರುದ್ರೇಶ್ ಹಾಗೂ ರಂಗಧಾಮಯ್ಯ ಕಾಂಗ್ರೆಸ್- ಜೆಡಿಎಸ್ ನಾಯಕರ ಜೊತೆ ಡೀಲ್ ಮಾಡಿಕೊಂಡಿದ್ದಾರೆ. ಹಣ ನೀಡುವುದು ಬೇಡ ನಾನು ಬರಿಗೈನಲ್ಲೆ ಮತಯಾಚನೆ ಮಾಡುತ್ತೇನೆ ಎಂದರೂ ಬಿಡಲಿಲ್ಲ. ಹೀಗಾದ್ರೆ ಯಾಕೆ ಬೇಕು ಬಿಜೆಪಿ ಸಹವಾಸ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ದೂರ ಉಳಿಯುವುದಾಗಿ ನಾಮಪತ್ರ ಸಲ್ಲಿಸಿದ್ದ ಹೇಮಂತ್ ಸ್ನೇಹಿತನೋರ್ವನ ಬಳಿ ಅಳಲು ತೋಡಿಕೊಂಡಿದ್ದಾರೆ.

    ಇದೀಗ ಇಬ್ಬರು ಡೀಲ್ ವಿಚಾರದ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು ಬಿಜೆಪಿ ಮುಖಂಡರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈ ಮುಗಿದು ಕೇಳ್ಕೊತೀನಿ, ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ: ಡಿಕೆಶಿ

    ಕೈ ಮುಗಿದು ಕೇಳ್ಕೊತೀನಿ, ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ: ಡಿಕೆಶಿ

    ಬೆಂಗಳೂರು: ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಪಕ್ಷಗಳ ಮುಖಂಡರುಗಳಲ್ಲಿ ಕೈ ಮುಗಿದು ಕೇಳಿಕೊಂಡರು.

    ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಹಿತ ಕಾಪಾಡಲು, ನಾವು ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧರಿದ್ದು, ಮಹದಾಯಿಗಾಗಿ ಹೋರಾಟ ಮಾಡಲು ನಾವು ಬದ್ಧರಾಗಿದ್ದೇವೆ. ಈ ಕುರಿತು ಎಲ್ಲಾ ಪಕ್ಷದ ಮುಖಂಡರಿಗೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಹಾದಾಯಿಗಾಗಿ ಎಲ್ಲರೂ ಪಕ್ಷಭೇದ ಮರೆತು ಹೋರಾಟ ಮಾಡೋಣ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಮುಂದುವರಿಯಬೇಕಾಗಿದೆ. ಒಂದು ತೊಟ್ಟು ನೀರನ್ನು ಉಳಿಸಿಕೊಳ್ಳಲು, ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ಐ-ತೀರ್ಪಿನಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ವಾರದಲ್ಲಿ ಹಿರಿಯ ಅಧಿಕಾರಿಗಳ ತಂಡದ ಜೊತೆ ಮಹಾದಾಯಿಗೆ ಭೇಟಿ ಮಾಡಿ ಪರಿಶೀಲನೆ ನಡೆಸುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿಗಳೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಬೇರೆ ರಾಜ್ಯದ ನಡೆ ನಮಗೆ ಬೇಡದ ವಿಚಾರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹದಾಯಿ ನ್ಯಾಯಾಧೀಕರಣದ ಐತೀರ್ಪಿಗೆ ಗೋವಾ-ಮಹಾರಾಷ್ಟ್ರ ವಿರೋಧ

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಹೋಗುತ್ತೀರಾ ಎಂದು ಪ್ರಶ್ನಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡದೇ ಪ್ರಶ್ನೆ ಕೇಳುತ್ತಲೇ ಸ್ಥಳದಿಂದ ತರಾತುರಿಯಲ್ಲಿ ಸಚಿವರು ಹೊರಟು ಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳೆ ಸಾಲಮನ್ನಾ ಕೇವಲ ರೈತರ ಮೂಗಿಗೆ ತುಪ್ಪಸವರುವಂತಿದೆ: ಕೋಡಿಹಳ್ಳಿ ಚಂದ್ರಶೇಖರ್

    ಬೆಳೆ ಸಾಲಮನ್ನಾ ಕೇವಲ ರೈತರ ಮೂಗಿಗೆ ತುಪ್ಪಸವರುವಂತಿದೆ: ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ಸಿಎಂ ಕುಮಾರಸ್ವಾಮಿಯವರು ಬೆಳೆ ಸಾಲಮನ್ನಾ ಮಾಡಿ ಕೇವಲ ರೈತರ ಮೂಗಿಗೆ ತುಪ್ಪಸವರುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.

    ಸಂಪೂರ್ಣ ಸಾಲಮನ್ನಾ ಕುರಿತು ಕರೆದಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಿಎಂ ಕುಮಾರಸ್ವಾಮಿಯವರು ಬೆಳೆ ಸಾಲಮನ್ನಾ ಮಾಡಿ ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಸಾಲಮನ್ನಾ ಹೇಳಿಕೆಯು ಲೋಕಸಭೆ ಚುನಾವಣೆಯ ಗಿಮಿಕ್ ಎನ್ನುವುದು ನಮಗೆ ಈಗ ಅರ್ಥವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಿಎಂ ಸಾಲ ಮನ್ನಾದ ವಿಚಾರ ಪ್ರಸ್ತಾಪವಾದಗೆಲ್ಲ ಸಿಡಿಮಿಡಿಗೊಳ್ಳುತ್ತಾರೆ. ಕೊಪ್ಪಳದಲ್ಲಿ ರೈತ ಮುಖಂಡರಿಗೆ ತರಾಟೆಗೆ ತೆಗೆದುಕೊಂಡು, ಇವರು ವೋಟ್ ಹಾಕಿಲ್ಲ ಸಾಲ ಮನ್ನಾ ಮಾಡಿ ಅಂತಾ ಕೇಳುತ್ತಾರೆ ಎಂದು ಬಹಿರಂಗ ಹೇಳಿಕೆಯನ್ನು ನೀಡುತ್ತಿದ್ದಾರೆ. ಕುಮಾರಸ್ವಾಮಿಯವರ ಬಗ್ಗೆ ಮಾತಾನಾಡೋಕೆ ನನಗೆ ಯಾವ ಭಯವೂ ಇಲ್ಲ, ಅವರು ನನ್ನ ಚಿಕ್ಕಪ್ಪನ ಮಗನೂ ಅಲ್ಲ, ದೊಡ್ಡಪ್ಪನೂ ಮಗನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಮೊದಲು ಸಾಲ ಮನ್ನಾದ ವಿಚಾರಕ್ಕೆ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾದಾಗ ಸಾಕಷ್ಟು ಸತಾಯಿಸಿ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ನನ್ನ ಜೊತೆ ಸಿಟ್ಟಿನಲ್ಲಿ ಮಾತಾನಾಡಿದ್ದರು. ರೈತರಿಗೆ ವೋಟು ಹಾಕೋವಾಗ ಈ ಜ್ಞಾನ ಇರಲ್ವಾ? ಸಾಲ ಮನ್ನಾಕ್ಕೆ ಕೇಳೋಕೆ ಬರ್ತೀರಾ ಅಂತಾ ನನ್ನನ್ನೆ ಪ್ರಶ್ನಿಸಿದ್ದರು. ನಾನು ಅವರ ಮನವೊಲಿಕೆ ಮಾಡಿದ ನಂತರ ಸಿಎಂ ನಾನು ನಿಮ್ಮ ಬಗ್ಗೆ ಮಾತಾಡಿಲ್ಲ ಅಂತ ಹೇಳಿದ್ದರು. ಹಾಗಾದರೆ ಅವರು ಬೇರೆ ರೈತ ಮುಖಂಡರ ಬಗ್ಗೆ ಟಾರ್ಗೆಟ್ ಮಾಡಿ ನನ್ನನ್ನು ನಿಂದಿಸಿ ಮಾತನಾಡಿದ್ದಾರೆ. ಸಿಎಂ ಬಹಳ ದಂದ್ವ ನೀತಿಯಲ್ಲಿ ಇರುವಂತಿದೆ ಎಂದು ರೈತರ ಬಳಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

    ಸಿಎಂ ಕುಮಾರಸ್ವಾಮಿಯವರು ಸಾಲಮನ್ನಾ ಘೋಷಣೆ ಬಳಿಕವು, ವಿಮೆ ಕಡಿತ ಸೇರಿದಂತೆ ಸಾಲ ಪಾವತಿಗಾಗಿ ಬ್ಯಾಂಕುಗಳು ಪದೇ ಪದೇ ನೋಟಿಸ್ ಕಳುಹಿಸುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಭೆಯಲ್ಲಿ ರೈತರು ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಬಾಗಿಲು ತಟ್ಟಿದ ‘ಕೈ’ ನಾಯಕರು!

    ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಬಾಗಿಲು ತಟ್ಟಿದ ‘ಕೈ’ ನಾಯಕರು!

    ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಮೂವರು ಕೈ ನಾಯಕರುಗಳು ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ.

    ನಗರದ ಶಾಸಕರುಗಳಾದ ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಹಾಗೂ ಮುನಿರತ್ನರವರು ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ನೇಮಕಕ್ಕೆ ಹೈಕಮಾಂಡ್ ಬಾಗಿಲು ತಟ್ಟಿದ್ದಾರೆ. ಶುಕ್ರವಾರ ಶಾಸಕರು ಏಕಾಏಕಿ ದೆಹಲಿ ಪ್ರವಾಸ ಕೈಗೊಂಡು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನೇರವಾಗಿ ಭೇಟಿ ಮಾಡಿ ಮನವಿ ಸಲ್ಲಿಸುತ್ತಾರೆ ಎನ್ನಲಾಗಿದೆ. ಅಲ್ಲದೇ ರಾಹುಲ್ ಗಾಂಧಿ ಬಳಿ ತಮ್ಮ ಮನವಿವನ್ನು ಪರಿಗಣಿಸುವಂತೆ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾದಾಗಿನಿಂದಲೂ ಸಚಿವ ಸ್ಥಾನ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಯಗಳ ನೇಮಕ ವಿಚಾರ ಕಾಂಗ್ರೆಸ್ ವಲಯದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ನಾಯಕರುಗಳು ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳ ನಿಗಮಕ್ಕೆ ಖುದ್ದು ಹೈಕಮಾಂಡ್ ಬಾಗಿಲು ತಟ್ಟಿ, ಲಾಭಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

  • ಸಿಎಂ ಕುಮಾರಸ್ವಾಮಿ ಕಣ್ಣೀರು ವಿಚಾರ: ಕೆಪಿಸಿಸಿಯಿಂದ ಕೈ ನಾಯಕರಿಗೆ ನೋಟಿಸ್

    ಸಿಎಂ ಕುಮಾರಸ್ವಾಮಿ ಕಣ್ಣೀರು ವಿಚಾರ: ಕೆಪಿಸಿಸಿಯಿಂದ ಕೈ ನಾಯಕರಿಗೆ ನೋಟಿಸ್

    ಬೆಂಗಳೂರು: ಸಿಎಂ ಕುಮಾರಸ್ವಾಮಿಯವರು ಕಣ್ಣೀರ ವಿಚಾರಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂಬ ಹೇಳಿಕೆ ನೀಡಿದ್ದ ಇಬ್ಬರು ಕೈ ನಾಯಕರಿಗೆ ಕೆಪಿಸಿಸಿ ನೋಟಿಸ್ ಜಾರಿಗೊಳಿಸಿದೆ.

    ರಾಮನಗರದಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿಯವರು ಕಣ್ಣೀರು ಹಾಕಿದ್ದರ ಕುರಿತು ಪ್ರತಿಕ್ರಿಯಿಸಿದ್ದ ಕೈ ನಾಯಕರುಗಳಾದ ಮಾಜಿ ಸ್ಪೀಕರ್ ಕೋಳಿವಾಡ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣನವರಿಗೆ ಕೆಪಿಸಿಸಿ ನೋಟಿಸ್ ಜಾರಿಗೊಳಿಸಿದೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆ ಕಣ್ಣೀರಿಗೆ ಕಾಂಗ್ರೆಸ್ಸಿಗರೇ ಕಾರಣ: ಮಾಜಿ ಸ್ಪೀಕರ್ ಕೋಳಿವಾಡ

    ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ಮೈತ್ರಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಟೀಕೆ ನಡೆಸಿದ್ದರು. ಅಲ್ಲದೇ ಮಾಜಿ ಸ್ಪೀಕರ್ ಕೋಳಿವಾಡ ಸಹ ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂಬುದಾಗಿ ಹೇಳಿಕೆ ನೀಡಿದ್ದರು. ಇವರ ಈ ಹೇಳಿಕೆಯಿಂದಾಗಿ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗಿತ್ತು. ಇದನ್ನೂ ಓದಿ: ಸಂಪುಟ ರಚನೆಯಾದ ಒಂದು ವಾರದಲ್ಲೇ ಸಮ್ಮಿಶ್ರ ಸರ್ಕಾರ ಪತನ : ಕೈ ಮಾಜಿ ಶಾಸಕ ರಾಜಣ್ಣ ಭವಿಷ್ಯ

    ಈ ಹಿನ್ನೆಲೆಯಲ್ಲಿ ಕೆಪಿಸಿಸಿಯು ಇಬ್ಬರೂ ನಾಯಕರುಗಳಿಗೆ ನೀವು ಪಕ್ಷಕ್ಕೆ ಮುಜುಗರ ತರುವಂತೆ ಹೇಳಿಕೆ ನೀಡುತ್ತಿದ್ದು, ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಾರದು ಯಾಕೆ ಎಂದು ಕಾರಣ ಕೇಳಿ ನೋಟಿಸ್ ನೀಡಿದೆ. ಅಲ್ಲದೇ ಈ ನೋಟಿಸ್ ಗೆ ಒಂದು ವಾರದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.

  • ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ!

    ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ!

    ಕೊಪ್ಪಳ: ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿ ಉಳಿದಿದೆ ಅನ್ನೋದಕ್ಕೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮುಖಂಡರು ಕಾರಣವಾಗಿದ್ದಾರೆ.

    ಜಿಲ್ಲೆಯ ಕನಕಗಿರಿ ಕ್ಷೇತ್ರದಲ್ಲಿ ಬಿಜೆಪಿಯ ನೂತನ ಶಾಸಕರಾಗಿ ಇದೇ ಮೊದಲ ಬಾರಿಗೆ ಬಸವರಾಜ ದಡೆಸುಗುರು ಜಯಶಾಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಶಾಸಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗಾಗಿ ಇಂದು ಕನಕಗಿರಿ ಕ್ಷೇತ್ರದ ಗುಂಡೂರು ಗ್ರಾಮದಲ್ಲಿ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಸನ್ಮಾನ ಮಾಡುವ ನೆಪದಲ್ಲಿ ಬಿಜೆಪಿ ಮುಖಂಡರು, ಶಾಸಕರಿಗೆ ಅವಮಾನ ಮಾಡಿದ್ದಾರೆ. ಗಣ್ಯರಿಗೆ ಕುಳಿತುಕೊಳ್ಳಲು ವೇದಿಕೆಯಲ್ಲಿ ಕುರ್ಚಿಗಳನ್ನು ಹಾಕಲಾಗಿತ್ತು. ಅದರಲ್ಲಿ ವಿಶೇಷವಾಗಿ 2 ದರ್ಬಾರ್ ಕುರ್ಚಿಗಳನ್ನು ವೇದಿಕೆಯ ಮಧ್ಯಭಾಗದಲ್ಲಿ ಹಾಕಲಾಗಿದೆ. ಆ ದರ್ಬಾರ್ ಕುರ್ಚಿಗಳಲ್ಲಿ ಬಿಜೆಪಿ ಮುಖಂಡರಾದ ಸಾಲೋಣಿ ನಾಗಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಕೂತಿದ್ದರು. ಅವರ ಪಕ್ಕದಲ್ಲೇ ಬೇರೆ ಕುರ್ಚಿಯಲ್ಲಿ ಕ್ಷೇತ್ರದ ಶಾಸಕರನ್ನು ಕೂರಿಸಲಾಗಿತ್ತು.

    ಶಾಸಕ ಬಸವರಾಜ ದಡೆಸುಗುರು ಅವರು ದಲಿತರು ಎಂಬ ಕಾರಣಕ್ಕಾಗಿ ಅವರನ್ನು ಬೇರೆ ಕುರ್ಚಿಯನ್ನು ಹಾಕಿ ಕೂರಿಸಲಾಗಿತ್ತು. ಬಿಜೆಪಿ ಮುಖಂಡರ ಈ ತಾರತಮ್ಯ ನೀತಿ, ಕಾರ್ಯಕ್ರಮಕ್ಕೆ ಬಂದಿದ್ದ ಜನರಿಗೆ ಎದ್ದು ಕಾಣುವಂತಿತ್ತು.

  • ಯಡಿಯೂರಪ್ಪಗೆ ವಯಸ್ಸಾಗಿದೆ ಏನೇನೋ ಮಾತಾಡ್ತಾರೆ: ರಾಮಲಿಂಗಾರೆಡ್ಡಿ

    ಯಡಿಯೂರಪ್ಪಗೆ ವಯಸ್ಸಾಗಿದೆ ಏನೇನೋ ಮಾತಾಡ್ತಾರೆ: ರಾಮಲಿಂಗಾರೆಡ್ಡಿ

    ಚಿಕ್ಕಬಳ್ಳಾಪುರ: ಮಾಜಿ ಸಿಎಂ ಯಡಿಯೂರಪ್ಪಗೆ ವಯಸ್ಸಾಗಿದೆ, ಹೀಗಾಗಿ ಅವರು ಏನೇನೋ ಮಾತಾಡುತ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

    ಮಹದಾಯಿ ವಿಚಾರದಲ್ಲಿ ನೀರು ಬಿಡದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒತ್ತಡ ಇದೆ ಎನ್ನುವ ಯಡಿಯೂರಪ್ಪನವರ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಹೀಗಾಗಿ ಏನೇನೋ ಮಾತಾಡ್ತಾರೆ. ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದು, ಅವರದ್ದು ಡ್ರಾಮಾ ಟ್ರೂಪ್ ಇದ್ದಂತೆ. ರಾಜ್ಯದ ನಾಯಕರು ಕೇವಲ ಪಾತ್ರಧಾರಿಗಳು. ಡ್ರಾಮಾ ಟ್ರೂಪ್ ನ ಹೆಡ್ ದೆಹಲಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಹದಾಯಿ ವಿಚಾರದಲ್ಲಿ ಸದ್ಯ ಗೋವಾ ಸಿಎಂ ಪರಿಕ್ಕರ್ ಗೆ ಸಿದ್ದರಾಮಯ್ಯ ಪತ್ರ ಬರೆದರೆ ಪ್ರತ್ಯುತ್ತರ ಇಲ್ಲ. ಆದರೆ ಯಡಿಯೂರಪ್ಪ ಪತ್ರ ಬರೆದ ಮಾರನೇ ದಿನವೇ ಪತ್ರ ಬರುತ್ತೆ. ಇದೆಲ್ಲಾ ಅಮಿತ್ ಶಾ ಹಾಗೂ ರಾಜ್ಯದ ಬಿಜೆಪಿ ನಾಯಕರು ನಡೆಸಿರೋ ಚುನಾವಣಾ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.

  • ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ, ಕರ್ನಾಟಕದಲ್ಲಿ ಯಾಕಿಲ್ಲ – ಧಾರ್ಮಿಕ ಮುಖಂಡರ ಪ್ರಶ್ನೆ

    ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ, ಕರ್ನಾಟಕದಲ್ಲಿ ಯಾಕಿಲ್ಲ – ಧಾರ್ಮಿಕ ಮುಖಂಡರ ಪ್ರಶ್ನೆ

    ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿವಾದಕ್ಕೆ ಈಗ ತಿರುವು ಸಿಗುತ್ತದೆ. ಮಹಾರಾಷ್ಟ್ರ ಕ್ಯಾಬಿನೆಟ್‍ನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಮ್ಮತಿ ಇದೆ. ಆದರೆ ಕರ್ನಾಟಕದಲ್ಲಿ ಯಾಕಿಲ್ಲ ಎಂದು ಧಾರ್ಮಿಕ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಂದಿನ ಕಾಂಗ್ರೆಸ್ ಸರ್ಕಾರ 2014 ರಲ್ಲೇ ಒಪ್ಪಿಗೆ ಸೂಚಿಸಿದೆ. ಒಪ್ಪಿಗೆ ಸೂಚಿಸುವ ಮುಂಚೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವನ್ನು ಚರ್ಚೆ ಮಾಡುವುದಕ್ಕೆ ಒಂದು ಕ್ಯಾಬಿನೆಟ್ ಸಮಿತಿ ರಚನೆ ಮಾಡಿದ್ದು, ನಂತರ ಗ್ರೀನ್ ಸಿಗ್ನಲ್ ನೀಡಿತ್ತಂತೆ. ಅಂದಿನ ಮಹಾರಾಷ್ಟ್ರದ ಸರ್ಕಾರದ ಗ್ರೀನ್ ಸಿಗ್ನಲ್ ಆಧಾರವಾಗಿಟ್ಟುಕೊಂಡು ಕರ್ನಾಟಕದಲ್ಲೂ ಪ್ರತ್ಯೇಕ ಧರ್ಮ ಮಾಡಬೇಕು ಎಂದು ಲಿಂಗಾಯತ ಸಮುದಾಯದ ಮುಖಂಡರು ಹಠಕ್ಕೆ ಬಿದ್ದಿದ್ದಾರೆ.

    ಇನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ 10 ಮಂದಿ ತಜ್ಞರ ಸಮಿತಿ ರಚನೆಗೆ ಲಿಂಗಾಯಿತ ಮುಖಂಡರು ಪುನಃ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಪದೇ ಪದೇ ಸಮಿತಿಗಳ ರಚನೆಯಿಂದ ಯಾವುದೇ ಅಂತಿಮ ನಿರ್ಧಾರ ಹೊರಬರುವುದಿಲ್ಲ. ಆದ್ದರಿಂದ ಅಂತಿಮ ನಿರ್ಧಾರವನ್ನು ಸರ್ಕಾರದ ಮುಂದೆ ಇಡಬೇಕು ಎಂದು ಸಮುದಾಯಗಳ ಮುಖಂಡರು ವಾದಿಸಿದ್ದಾರೆ.

    ಲಿಂಗಾಯುತ ಧರ್ಮದ ಮುಖಂಡರು ಈ ಹೊಸ ದಾಖಲೆಯನ್ನು ಹುಡುಕಿ ಎಲ್ಲರ ಮುಂದೆ ಇಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಉಪಪಂಗಡಗಳನ್ನು ಒಟ್ಟಾಗಿ ಸೇರಿಸಿ ಕ್ಯಾಬಿನೆಟ್‍ನಲ್ಲಿ ಒಂದು ನೋಟ್ ರೆಡಿ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾಕೆ ಈ ರೀತಿ ಮಾಡುತ್ತಿಲ್ಲ ಎಂದು ಇದರ ಮೂಲಕ ಹೋರಾಟ ಮಾಡಲು ಮುಂದಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ವೀರಶೈವ ಲಿಂಗಾಯತ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ಎರಡು ಬಾರಿ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಲಿಂಗಾಯತ ಧರ್ಮ ಅಂತ ಹೋಗುವುದು ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.