Tag: land crack

  • ಕೊಡಗಿನ ಬೆಟ್ಟ ಪ್ರದೇಶದಲ್ಲಿ ಮತ್ತೆ ಬಾಯ್ದೆರೆದ ಭೂಮಿ- ಗ್ರಾಮಸ್ಥರಲ್ಲಿ ಅತಂಕ

    ಕೊಡಗಿನ ಬೆಟ್ಟ ಪ್ರದೇಶದಲ್ಲಿ ಮತ್ತೆ ಬಾಯ್ದೆರೆದ ಭೂಮಿ- ಗ್ರಾಮಸ್ಥರಲ್ಲಿ ಅತಂಕ

    ಮಡಿಕೇರಿ: ಕೊಡಗಿನಲ್ಲಿ ಮಳೆ ಅಬ್ಬರ ಕಡಿಮೆಯಾದರೂ ಇದುವರೆಗೆ ಸುರಿದಿರುವ ಮಳೆಯಿಂದ ಆಗುತ್ತಿರುವ ಅನಾಹುತಗಳು ಮಾತ್ರ ತಪ್ಪಿಲ್ಲ. ಬೆಟ್ಟ ಕುಸಿದ ಜಾಗದಲ್ಲಿ ಮತ್ತೆ ಭೂಮಿ ಬಾಯ್ದೆರೆಯುತ್ತಿದ್ದು, ಗ್ರಾಮಸ್ಥರನ್ನು ನಿದ್ದೆಗೆಡಿಸುತ್ತಿದೆ.

    ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ತೋಜಿಯಲ್ಲಿ ಭೂಮಿ ಮತ್ತೆ ಬಾಯ್ದೆರೆದಿದೆ. ಇದರಿಂದಾಗಿ ಐದು ಕುಟುಂಬಗಳು ಅಪಾಯ ಎದುರಿಸುತ್ತಿವೆ. ಭೂಮಿ ಬಾಯ್ದೆರೆದಿರುವುದರಿಂದ ಖಾದರ್ ಮತ್ತು ರಾಜಣ್ಣ ಇಬ್ಬರ ಮನೆಗಳ ಗೋಡೆಗಳು ಸಂಪೂರ್ಣ ಬಿರುಕುಬಿಟ್ಟಿವೆ. ಕರ್ತೋಜಿ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275 ತಡೆಗೋಡೆ ಕಾಮಗಾರಿಗೆ ಕರ್ತೋಜಿ ಬೆಟ್ಟದಿಂದ ಸಾವಿರಾರು ಲೋಡ್ ಮಣ್ಣು ತೆಗೆದಿದ್ದೇ ಈಗ ಕರ್ತೋಜಿ ಗ್ರಾಮದಲ್ಲಿ ಭೂಮಿ ಮತ್ತೆ ಬಾಯ್ದೆರೆಯೋದಕ್ಕೆ ಕಾರಣ ಎನ್ನಲಾಗಿದೆ.

    ಭೂಮಿ ಬಾಯ್ದೆರೆದು ಮನೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಖಾದರ್ ಮತ್ತು ರಾಜಣ್ಣ ಅವರ ಎರಡು ಕುಟುಂಬಗಳು ಮನೆ ಖಾಲಿ ಮಾಡಿ ಬೇರೆಡೆಗೆ ತೆರಳಿದ್ದಾರೆ. ಮಂಗಳವಾರ ಸಂಜೆಯೇ ಭೂಮಿ ಬಾಯ್ದೆರೆದಿರುವ ವಿಷಯವನ್ನು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಇತ್ತ ಸುಳಿದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಷ್ಟಪಟ್ಟು ಮನೆಯೊಂದನ್ನು ಮಾಡಿಕೊಂಡು ಹೇಗೋ ಬದುಕು ನಡೆಸುತ್ತಿದ್ದೆವು. ಆದರೆ ಯಾರೋ ಮಾಡಿದ ತಪ್ಪಿಗೆ ನಾವು ಮನೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನ ಆಗಿಲ್ಲ ಎಂಬುದು ಸ್ಥಳೀಯರ ಆರೋಪ.

  • ಸಿದ್ದಾಪುರದಲ್ಲಿ ಭೂ ಕುಸಿತ – ಡ್ಯಾಂ ಒಡೆದು ರಸ್ತೆ ಜಲಾವೃತ

    ಸಿದ್ದಾಪುರದಲ್ಲಿ ಭೂ ಕುಸಿತ – ಡ್ಯಾಂ ಒಡೆದು ರಸ್ತೆ ಜಲಾವೃತ

    ಕಾರವಾರ: ಭಾರೀ ಮಳೆ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದ್ದು, ಎಲ್ಲೆಂದರಲ್ಲಿ ಭೂಮಿ ಕುಸಿದು ರಸ್ತೆಗಳು ಬಂದ್ ಆಗಿರುವುದು ಹಾಗೂ ಹೊಲಕ್ಕೆ ಹೊಲವೇ ಕುಸಿದಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಚೆಕ್ ಡ್ಯಾಂ ಒಡೆದು ಮುಂಡುಗೋಡು ಭಾಗದ ಹಳ್ಳಿಗಳಲ್ಲಿನ ಮನೆಗಳು ಜಲಾವೃತಗೊಂಡಿವೆ.

    ಸಿದ್ದಾಪುರ ತಾಲೂಕಿನ ಭಾನ್ಕುಳಿ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿ ಸಂಪೂರ್ಣ ಬಿರುಕು ಬಿಟ್ಟಿದ್ದು, ಆಳಕ್ಕೆ ಕುಸಿದಿದೆ. ಭೂಮಿ ಬಿರುಕು ಬಿಟ್ಟು ಕ್ಷಣ ಕ್ಷಣಕ್ಕೂ ಕುಸಿಯುತ್ತಿದ್ದು, ಇನ್ನೂ ಹೆಚ್ಚಿನ ಭಾಗ ಕುಸಿಯುವ ಹಂತ ತಲುಪಿದೆ. ಭೂಮಿ ಕುಸಿತದಿಂದ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ನಾಲ್ಕು ಎಕರೆ ಭೂಮಿ ಪೂರ್ತಿ ಇದೇ ರೀತಿ ಆಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಗ್ರಾಮದಲ್ಲಿನ ಮನೆಗಳೂ ಕುಸಿದರೆ ಏನು ಗತಿ ಎಂಬ ಭಯದಲ್ಲೇ ಗ್ರಾಮಸ್ಥರು ಬದುಕುತ್ತಿದ್ದಾರೆ.

    ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್ ಒಡೆದ ಪರಿಣಾಮ 1,150 ಎಕರೆ ಕೃಷಿ ಜಮೀನು ಸಂಪೂರ್ಣ ಜಲಾವೃತವಾಗಿದ್ದು, ಹುಬ್ಬಳ್ಳಿ-ಮುಂಡಗೋಡು-ಶಿರಸಿ ರಾಜ್ಯ ಹೆದ್ದಾರಿ ಜಲಾವೃತವಾಗಿದೆ.

    ಚೆಕ್ ಡ್ಯಾಂ ಒಡೆದ ಹಿನ್ನೆಲೆಯಲ್ಲಿ ಮುಂಡಗೋಡು ಭಾಗದ ಚೌಡಳ್ಳಿ, ಕೋಡಂಬಿ, ಹನುಮಾಪುರ, ಅಂದಲಗಿ, ಅಜ್ಜಳ್ಳಿ, ಜೋಗೇಶ್ವರಹಳ್ಳ ಪ್ರದೇಶದ 40ಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಒಡೆದ ಚೆಕ್ ಡ್ಯಾಂನಿಂದ 0.3 ಟಿಎಂಸಿ ನೀರು ಹೊರ ಬರುತ್ತಿದ್ದು, ಆರು ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದೆ. ಪ್ರವಾಹ ವೀಕ್ಷಿಸಲು ಜನ ತಂಡೋಪ ತಂಡವಾಗಿ ಬರುತ್ತಿದ್ದು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮೂರು ತಾಸಿನಲ್ಲಿ ಪ್ರವಾಹದ ಮಟ್ಟ ಇಳಿಯಲಿದ್ದು ಪ್ರವಾಹ ಸಂಪೂರ್ಣ ಇಳಿಮುಖವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಸಿಇಓ ರೋಷನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    20 ಮೀಟರ್ ಎತ್ತರ, 830 ಮೀಟರ್ ಅಗಲವಿರುವ ಡ್ಯಾಂ 6,800 ಕ್ಯೂಸೆಕ್ ನೀರನ್ನು ಹಿಡಿದಿಡುವ ಸಾಮಥ್ರ್ಯ ಹೊಂದಿತ್ತು. ಚೆಕ್ ಡ್ಯಾಂ ಸುತ್ತಲಿನ ಗ್ರಾಮಗಳಲ್ಲಿ ಕೃತಕ ಪ್ರವಾಹ ಉಂಟಾಗಿದ್ದು ಎರಡು ದಿನಗಳ ಕಾಲ ಈ ನೀರಿನಿಂದ ಜನರು ಪರದಾಡಲಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಭೇಟಿ ನೀಡಿದ್ದು, ಸ್ಥಳೀಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.