Tag: Lab

  • ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

    ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

    ಬೀಜಿಂಗ್: ಕೊರೊನಾ ವೈರಸ್ ಚೀನಾದಿಂದ ಹರಡಿದೆ ಎಂದು ಇಡೀ ವಿಶ್ವದ ಇತರ ದೇಶಗಳು ಬೊಟ್ಟು ಮಾಡುತ್ತಿದೆ. ಆದರೆ ಚೀನಾ ಇದನ್ನು ನಿರಾಕರಿಸುತ್ತ ಬಂದಿದೆ. ಇದೀಗ ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾ ಲ್ಯಾಬ್‍ನಿಂದಲೇ ಎಂದು ಸಾಕ್ಷಿ ಸಿಕ್ಕಿದೆ ಎನ್ನುವುದನ್ನು ಯುಎಸ್ ರಿಪಬ್ಲಿಕನ್ ವರದಿ ಮಾಡಿದೆ.

    ಕೊರೊನಾ ವೈರಸ್ ಹರಡಿರುವುದು ಚೀನಾದ ಲ್ಯಾಬ್ ನಿಂದಲೇ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಅಮೆರಿಕಾದ ಹೌಸ್ ಆಫ್ ಫಾರಿನ್ ಅಫೇರ್ಸ್ ಕಮಿಟಿಯ ಸದಸ್ಯ ಮೈಕ್ ಮೆಕಲ್ ತಿಳಿಸಿದ್ದಾರೆ ಎಂದು ಯುಎಸ್ ರಿಪಬ್ಲಿಕನ್ ವರದಿ ಮಾಡಿದೆ. ಆದರೆ ಚೀನಾ ಮಾತ್ರ ಈವರೆಗೆ ಕೊರೊನಾ ವೈರಸ್ ಲ್ಯಾಬ್ ನಿಂದ ಲೀಕ್ ಆಗಿಲ್ಲ. ಅದು ವುಹಾನ್‍ನ ಮಾರುಕಟ್ಟೆಯಿಂದ ಹರಡಿದೆ ಎಂದು ಹೇಳುತ್ತ ಬಂದಿದೆ.   ಇದನ್ನೂ ಓದಿ: ವುಹಾನ್ ಲ್ಯಾಬ್ ತನಿಖೆಗೆ ಮುಂದಾದ WHO – ಚೀನಾದಿಂದ ವಿರೋಧ

    ಹಲವು ದೇಶಗಳು ಮತ್ತು ಸಂಶೋಧನ ತಂಡಗಳು ಚೀನಾದ ಲ್ಯಾಬ್‍ನಿಂದ ಕೊರೊನಾ ವೈರಸ್ ಲೀಕ್ ಆಗಿರುವ ಬಗ್ಗೆ ಈ ಹಿಂದೆ ತಿಳಿಸಿದ್ದರು. ಆದರೆ ಚೀನಾ ಮಾತ್ರ ಇದನ್ನು ತಿರಸ್ಕರಿಸುತ್ತಾ ಬಂದಿದೆ. ಈ ನಡುವೆ ಅಮೆರಿಕದ ಸಂಶೋಧನ ತಂಡವೊಂದು ವೈರಸ್‍ನ ಸತ್ಯಾಂಶ ತಿಳಿಯಲು ಸಾಕ್ಷಿ ಸಂಗ್ರಹಿಸಿದೆ. ಇದನ್ನೂ ಓದಿ: ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    2019ರಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತ್ತು. ಆದರೆ ಚೀನಾ ಇದನ್ನು ಮುಚ್ಚಿಟ್ಟು ಇತರ ದೇಶಗಳಿಗೂ ಹರಡುವಂತೆ ಮಾಡಿತು. ಬಳಿಕ ವೈರಸ್ ಕುರಿತು ಹಲವು ಸಂಶೋಧನೆಯಲ್ಲಿ ಕಂಡುಬಂದ ಅಂಶಗಳ ಕುರಿತು ತನ್ನದೆ ವಾದದ ಮೂಲಕ ನಿರಾಕರಿಸುತ್ತ ಬಂದಿದೆ. ಆದರೆ ಇದೀಗ ಯುಎಸ್ ರಿಪಬ್ಲಿಕನ್ ವರದಿಯ ಪ್ರಕಾರ ಚೀನಾದ ಲ್ಯಾಬ್‍ನಿಂದಲೇ ಕೊರೊನಾ ವೈರಸ್ ಲೀಕ್ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿರುವುದಾಗಿ ತಜ್ಞರ ತಂಡ ತಿಳಿಸಿರುವುದು ಕೂತುಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರುವ ಸಾಧ್ಯತೆ ಇದೆ. ಇದನ್ನೂ ಓದಿ: ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್

  • ಕೋವಿಡ್ ನಿಯಮ ಉಲ್ಲಂಘನೆ – ವಿರಾಜಪೇಟೆ ಡೆಂಟಲ್ ಕಾಲೇಜು ವಿರುದ್ಧ ಎಫ್‍ಐಆರ್

    ಕೋವಿಡ್ ನಿಯಮ ಉಲ್ಲಂಘನೆ – ವಿರಾಜಪೇಟೆ ಡೆಂಟಲ್ ಕಾಲೇಜು ವಿರುದ್ಧ ಎಫ್‍ಐಆರ್

    ಮಡಿಕೇರಿ: ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರ ಈಗಾಗಲೇ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ಆದರೆ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಡೆಂಟಲ್ ಕಾಲೇಜು ಆಡಳಿತ ಮಂಡಳಿ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ಕಾಲೇಜು ನಡೆಸದಂತೆ ಸ್ಪಷ್ಟ ಸೂಚನೆ ಇದ್ದರೂ ಕಾಲೇಜನ್ನು ನಡೆಸುತ್ತಿತ್ತು. ಹಾಗಾಗಿ ಇದೀಗ ಕಾಲೇಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಡೆಂಟಲ್ ಕಾಲೇಜಿನಲ್ಲಿ ತರಗತಿಗಳು ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ತಹಶೀಲ್ದಾರ್ ಆರ್.ಯೋಗಾನಂದ್ ಅವರು ವಿರಾಜಪೇಟೆ ಪಟ್ಟಣ ಪೊಲೀಸರೊಂದಿಗೆ ಕಾಲೇಜಿನ ಮೇಲೆ ಏಕಾಏಕಿ ದಾಳಿ ಮಾಡಿದರು. ಈ ವೇಳೆ ಕಾಲೇಜಿನಲ್ಲಿ ಕೋವಿಡ್ ನಿಯಮಗಳನ್ನು ಮೀರಿ ಆಂತರಿಕ ಪರೀಕ್ಷೆಗಳನ್ನು ನಡೆಸುತ್ತಿರುವುದನ್ನು ಸ್ವತಃ ತಹಶೀಲ್ದಾರ್ ಖುದ್ದು ವೀಕ್ಷಿಸಿದರು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಬ್ ತರಗತಿಗಳನ್ನು ನಡೆಸುತ್ತಿದ್ದನ್ನು ಗಮನಿಸಿದರು. ಈ ವೇಳೆ ಉಪನ್ಯಾಸಕರನ್ನು ವಿಚಾರಿಸಿದಾಗ ನಾವು ಯಾವುದೇ ತರಗತಿ ನಡೆಸುತ್ತಿರಲಿಲ್ಲ. ಸಂಶೋಧನೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೆವು ಎಂದು ಸಮಾಜಾಯಿಷಿ ನೀಡಿದ್ದಾರೆ.

    ಇದೇ ವೇಳೆ ತರಗತಿ ಕೊಠಡಿಗಳಿಂದ ಹೊರಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಕೇಳಿದಾಗ ವಿದ್ಯಾರ್ಥಿಗಳು ಲ್ಯಾಬ್ ತರಗತಿಯಲ್ಲಿ ಇದ್ದೇವು ಎನ್ನೋದನ್ನು ಒಪ್ಪಿಕೊಂಡರು. ಜೊತೆಗೆ ಕಾಲೇಜು ಆವರಣದಲ್ಲಿರುವ ಹೋಟೆಲಿನಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿಯೇ ಊಟ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳು ಒಂದೊಂದು ಟೇಬಲ್‍ನಲ್ಲೂ ಗುಂಪು ಗುಂಪಾಗಿ ಕುಳಿತು ಊಟ ಮಾಡುತ್ತಿದ್ದರು, ಜೊತೆಗೆ ಕ್ಯಾಂಟೀನ್ ನಲ್ಲೂ ವಿದ್ಯಾರ್ಥಿಗಳು ಕುಳಿತು ವಿವಿಧ ತಿನಿಸುಗಳನ್ನು ತಿನ್ನುತಿದ್ದರು.

    ತಕ್ಷಣವೇ ಎಚ್ಚೆತ್ತುಕೊಂಡು ತಹಶೀಲ್ದಾರ್ ಇದ್ದ ಸ್ಥಳಕ್ಕೆ ಬಂದ ಕಾಲೇಜು ಡೀನ್ ತರಗತಿ ನಡೆಸುವುದಕ್ಕೆ ನಮಗೆ ಅವಕಾಶ ಇದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದರೆ ತಹಶೀಲ್ದಾರ್ ಅವರು ಎಲ್ಲವನ್ನೂ ಪರಿಶೀಲಿಸಿ ಕಾಲೇಜು ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸರ್ಕಾರದ ನಿಯಮದ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಕಾಲೇಜಿನಲ್ಲಿ ಹಲವು ವಿಷಯಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಕಾಲೇಜು ವಿರುದ್ಧ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

  • ಲಸಿಕೆ ಸ್ಥಿತಿಗತಿ ತಿಳಿಯಲು ಪುಣೆ ಲ್ಯಾಬ್‍ಗೆ ಭೇಟಿ ನೀಡಲಿದ್ದಾರೆ ಮೋದಿ

    ಲಸಿಕೆ ಸ್ಥಿತಿಗತಿ ತಿಳಿಯಲು ಪುಣೆ ಲ್ಯಾಬ್‍ಗೆ ಭೇಟಿ ನೀಡಲಿದ್ದಾರೆ ಮೋದಿ

    – ಸೀರಮ್ ಲ್ಯಾಬ್ ಭೇಟಿ ನೀಡಲಿದ್ದಾರೆ ಪ್ರಧಾನಿ
    – ಆಕ್ಸ್‍ಫರ್ಡ್ ಕೋವಿಶೀಲ್ಡ್ ಲಸಿಕೆ ಯಶಸ್ವಿಯಾದ ಬೆನ್ನಲ್ಲೇ ಭೇಟಿ

    ನವದೆಹಲಿ: ಲಸಿಕೆ ತಯಾರಿ ಹಾಗೂ ವಿತರಣಾ ವ್ಯವಸ್ಥೆಯ ಕುರಿತು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ವಿತರಣೆ ಭರ್ಜರಿ ತಯಾರಿ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಸಿಎಂ ಹಾಗೂ ಅಧಿಕಾರಿಗಳೊಂದಿಗೆ ಆಗಾಗ ಸಭೆ ನಡೆಸುತ್ತಲೇ ಇದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಲಸಿಕೆ ತಯಾರಿಸುತ್ತಿರುವ ಲ್ಯಾಬ್‍ಗೆ ಭೇಟಿ ನೀಡಲಿದ್ದಾರೆ.

    ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್ ಹೆಸರಿನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜತೆಗೂಡಿ ಸೀರಮ್ ಭಾರತದಲ್ಲಿ ಕೋವಿಡ್ ವೈರಸ್ ನಿಯಂತ್ರಣದ ಲಸಿಕೆ ತಯಾರಿಕೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‍ಐಐ)ದ ಲ್ಯಾಬ್‍ಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆ ಉತ್ಪಾದಿಸುತ್ತೇವೆ: ಸೀರಮ್‌ ಸಿಇಓ

    ಆರಂಭದಲ್ಲಿ ಎಷ್ಟು ಜನರಿಗೆ ವ್ಯಾಕ್ಸಿನ್ ನೀಡಬಹುದು, ಬಿಡುಗಡೆ ಹೇಗೆ, ಉತ್ಪಾದನೆ ಹಾಗೂ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಕುರಿತು ಸೀರಮ್ ಇನ್‍ಸ್ಟಿಟಿಟ್ಯೂಟ್ ಆಫ್ ಇಂಡಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಒಟ್ಟು ಏಳು ಸಂಸ್ಥೆಗಳಿಗೆ ಪ್ರಿ ಕ್ಲಿನಿಕಲ್ ಟೆಸ್ಟ್, ಮರುಪರಿಶೀಲನೆ ಹಾಗೂ ವಿಶ್ಲೇಷಣೆಗಾಗಿ ಕೊರೊನಾ ಲಸಿಕೆ ತಯಾರಿಸಲು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಇವುಗಳ ಪೈಕಿ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‍ಐಐ)ಹಾಗೂ ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್ ಸಹ ಸೇರಿವೆ.

    1 ಸಾವಿರ ರೂ.
    ಕೊರೊನಾ ಲಸಿಕೆ ಕುರಿತು ಎಸ್‍ಐಐ ಸಿಇಓ ಆದರ್ ಪೂನಾವಾಲ ಗುರುವಾರ ಮಾಹಿತಿ ನೀಡಿದ್ದು, ಆಕ್ಸ್‌ಫರ್ಡ್ ನ ಈ ಕೊರೊನಾ ಲಸಿಕೆ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಆರೋಗ್ಯ ಸಿಬ್ಬಂದಿ ಹಾಗೂ ಹಿರಿಯ ನಾಗರಿಕರಿಗೆ ಸಿಗಲಿದೆ. ಏಪ್ರಿಲ್ ವೇಳೆಗೆ ಸಾಮಾನ್ಯ ಜನರಿಗೂ ಸಿಗಲಿದೆ. ಅಗತ್ಯ 2 ಡೋಸ್‍ಗೆ 1 ಸಾವಿರ ರೂ.ಗೆ ವ್ಯಾಕ್ಸಿನ್ ಸಿಗಬಹುದು. ಇದು ಅಂತಿಮ ಪ್ರಯೋಗದ ಫಲಿತಾಂಶ ಹಾಗೂ ನಿಯಂತ್ರಕ ಅನುಮೋದನೆಗಳನ್ನು ಅವಲಂಬಿಸಿರುತ್ತದೆ ಎಂದು ವಿವರಿಸಿದ್ದಾರೆ.

    ವಿಶೇಷ ಎಂಬಂತೆ ಎರಡು ಯುಎಸ್ ಲಸಿಕೆಗಳಾದ ಫೀಜರ್ ಹಾಗೂ ಮಾಡರ್ನಾ ಸಂಸ್ಥೆಗಳು ತಮ್ಮ 3ನೇ ಹಂತದ ಪ್ರಯೋಗಗಳಿಂದ ಕ್ರಮವಾಗಿ ಶೇ.95 ಹಾಗೂ ಶೇ.94.5 ಯಶಸ್ಸಿನ ಪ್ರಮಾಣವನ್ನು ತೋರಿಸಿವೆ.

  • 24 ಗಂಟೆಯಲ್ಲಿ 4,42,031 ಸ್ಯಾಂಪಲ್ ಟೆಸ್ಟ್-ಲ್ಯಾಬ್ ಗಳ ಹೊಸ ದಾಖಲೆ

    24 ಗಂಟೆಯಲ್ಲಿ 4,42,031 ಸ್ಯಾಂಪಲ್ ಟೆಸ್ಟ್-ಲ್ಯಾಬ್ ಗಳ ಹೊಸ ದಾಖಲೆ

    ನವದೆಹಲಿ: ಕಳೆದ 24 ಗಂಟೆಯಲ್ಲಿ 4,42,031 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸುವ ಮೂಲಕ ಸರ್ಕಾರದ ಲ್ಯಾಬ್ ಗಳು ಹೊಸ ದಾಖಲೆಯನ್ನು ಬರೆದಿವೆ.

    ಈ ಮೊದಲು ಒಂದೇ ದಿನ 3,62,153 ಮಾದರಿಯನ್ನು ಪರೀಕ್ಷೆ ಮಾಡಲಾಗಿತ್ತು. ಇತ್ತ ಖಾಸಗಿ ಲ್ಯಾಬ್ ಗಳು 79,878 ಮಂದಿಯ ಕೊರೊನಾ ಪರೀಕ್ಷೆ ಮಾಡಿವೆ. ಕೊರೊನಾ ನಿಯಂತ್ರಣಕ್ಕಾಗಿ ಹೆಚ್ಚು ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಹಾಗಾಗಿ ಕೇಂದ್ರ ಸರ್ಕಾರ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಳ ಮಾಡಿಕೊಳ್ಳುತ್ತಿದೆ.

    ಶನಿವಾರ ದೇಶದಲ್ಲಿ 48 ಸಾವಿರಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಟೆಸ್ಟಿಂಗ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆಯೂ ಸಹ ಏರಿಕೆಯಾಗಿದೆ. ಭಾರತದಲ್ಲಿ ಗುಣಮುಖರಾಗುತ್ತಿರುವ ಪ್ರಮಾಣ ಶೇ.63.53ರಷ್ಟಿದೆ. ದೇಶದ ರಾಜಧಾನಿಯಲ್ಲಿ ರಿಕವರಿ ರೇಟ್ ಶೇ.87.29 ಇದೆ.

  • ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಗೂ 2 ಕೋವಿಡ್ ಟೆಸ್ಟ್ ಲ್ಯಾಬ್: ಸಚಿವ ಸುಧಾಕರ್

    ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಗೂ 2 ಕೋವಿಡ್ ಟೆಸ್ಟ್ ಲ್ಯಾಬ್: ಸಚಿವ ಸುಧಾಕರ್

    ದಾವಣಗೆರೆ: ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದ ಮಾತ್ರ ಕೊರೊನಾ ನಿಗ್ರಹ ಸಾಧ್ಯ. ಜನರ ಜೀವ ಮತ್ತು ಜೀವನವನ್ನು ಸುಸ್ಥಿತಿಗೆ ತರಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ಜನರು ಸಹಕರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

    ಜಿಲ್ಲಾಡಳಿತ ಭವನದದಲ್ಲಿ ಇಂದು ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಕೊರೊನಾ ನಿಗ್ರಹ ಹಿನ್ನೆಲೆ ರಾಜ್ಯದಲ್ಲಿರುವ 60 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸಲು ಸರ್ಕಾರ ಈಗಾಗಲೇ ಆದೇಶಿಸಿದ್ದು, ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲಿ 2 ಪರೀಕ್ಷಾ ಲ್ಯಾಬ್ ಸಿದ್ಧಗೊಳ್ಳುವ ವಿಶ್ವಾಸವಿದೆ. ಅಲ್ಲದೆ ದಾವಣಗೆರೆಯ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಪಿಸಿಆರ್ ಲ್ಯಾಬ್‍ನಲ್ಲಿ ಶನಿವಾರದಿಂದ ಕೋವಿಡ್ ಪರೀಕ್ಷೆ ಆರಂಭಗೊಳ್ಳಲಿದ್ದು, ಅದಕ್ಕೆ ಚಾಲನೆ ನೀಡುತ್ತಿರುವುದು ಸಂತಸದ ವಿಷಯ ಎಂದರು.

    ನಗರದ ಸಿ.ಜಿ.ಆಸ್ಪತ್ರೆಯಲ್ಲಿಯೂ ಕೋವಿಡ್ ಪರೀಕ್ಷೆ ಲ್ಯಾಬ್ ಕಾರ್ಯಾರಂಭಗೊಂಡಿದ್ದು, ಭಾನುವಾರದಿಂದ ಆರ್‍ಟಿಪಿಸಿಆರ್ ಮೆಷಿನ್‍ಗಳನ್ನು ಅಳವಡಿಸಲು ತಿಳಿಸಿದ್ದೇನೆ. ಇನ್ನೊಂದು ಎರಡು ದಿನಗಳಲ್ಲಿ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸಿದ್ಧಗೊಳ್ಳಲಿದ್ದು ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಪರೀಕ್ಷೆಗಾಗಿ ಜನರು ದಿನಗಳಟ್ಟಲೆ ಕಾಯುವುದು ತಪ್ಪುತ್ತದೆ. ಖಾಸಗಿ ಲ್ಯಾಬ್‍ಗಳಿಗೆ ದರ ನಿಗದಿಗೊಳಿಸಿದ್ದು, ಸರ್ಕಾರದ ವತಿಯಿಂದಲೇ ಕಿಟ್‍ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

    ಇಡೀ ಜಗತ್ತನ್ನು ಕಣ್ಣಿಗೆ ಕಾಣದೊಂದು ವೈರಾಣು ನಡುಗಿಸುತ್ತಿದೆ. ವಿಶ್ವದಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಕೊರೊನಾ ನಿಯಂತ್ರಣ ಮಾಡುತ್ತಿದೆ. ದೇಶದಲ್ಲಿ ಸುಮಾರು 60 ಸಾವಿರ ಜನರಿಗೆ ಸೋಂಕು ತಗುಲಿದ್ದು, ನಮ್ಮ ರಾಜ್ಯ ಸೋಂಕಿತರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಂಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತಿದೆ ಎಂದರು.

    ಜೀವ ಉಳಿಸುವ ಜೊತೆಗೆ ಜನಜೀವನ ಸುಧಾರಣೆ ಎರಡೂ ಕೆಲಸಗಳನ್ನು ಸಮತೋಲನದಿಂದ ಸರಿದೂಗಿಸಬೇಕಿದೆ. ಕೊರೊನಾ ಕೂಡ ಇರುತ್ತದೆ. ಆದರೆ ನಾವು ಅದರಿಂದ ದೂರ ಇರಬೇಕು. ನಾಲ್ಕು ಟಿ ಅಂದರೆ ಟ್ರ್ಯಾಕಿಂಗ್, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‍ಮೆಂಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲಾಗುತ್ತಿದೆ. ಕೊರೊನಾ ನಿಯಂತ್ರಣ ಕೇವಲ ಸರ್ಕಾರದ ಕೈಯಲ್ಲಿಲ್ಲ ಬದಲಾಗಿ ಎಲ್ಲ ಜನತೆ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.

    ಅನಗತ್ಯ ಆತಂಕ ಬೇಡ:
    ಕೊರೊನಾ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಎಷ್ಟೋ ಅಂತೆ-ಕಂತೆಗಳು ಆಗಿ ಹೋಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿದಿನ ಹೊಸ ಮಾರ್ಗಸೂಚಿಗಳನ್ನು ನೀಡುವ ಮೂಲಕ ಕೊರೊನಾ ನಿಯಂತ್ರಣದಲ್ಲಿ ಶ್ರಮ ವಹಿಸುತ್ತಿದೆ. ಕೊರೊನಾ ಸಾಮಾಜಿಕ ಕಳಂಕ ಅಲ್ಲ. ಯಾರಿಗೆ ಬೇಕಾದರೂ ಬರಬಹುದು. ಸೋಂಕಿನ ಬಗ್ಗೆ ಭಯ ಬೇಡ. ಯಾವ ವೈರಾಣುವೂ ಜನರನ್ನು ಸೋಲಿಸಿಲ್ಲ. ಬದಲಾಗಿ ಜನರು ವೈರಾಣುವನ್ನು ಸೋಲಿಸಿದ್ದಾರೆ. ಕೊರೊನಾವನ್ನೂ ಸೋಲಿಸಲು ಸ್ವಲ್ಪ ಸಮಯ ಬೇಕು. ಆದ ಕಾರಣ ಜನರು ಅಂತರ ಕಾಯ್ದುಕೊಳ್ಳುವ ಮೂಲಕ, ಸ್ವಚ್ಛತೆ, ಮಾಸ್ಕ್ ಧರಿಸುವ ಮೂಲಕ ಹಾಗೂ ಸರ್ಕಾರದ ನಿಯಮ, ಸೂಚನೆಗಳನ್ನು ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

    ಮಾಹಿತಿ, ಧೈರ್ಯ ತುಂಬಬೇಕು:
    ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಬಂದವರ ಪೈಕಿ ಈಗಾಗಲೇ ಶೇ.50 ಗುಣಮುಖರಾಗಿದ್ದಾರೆ. ಶೇ.80ರಷ್ಟು ಜನರು ಚಿಕಿತ್ಸೆ ಇಲ್ಲದೆಯೇ ಗುಣಮುಖರಾಗುತ್ತಾರೆ. ಮರಣ ಪ್ರಮಾಣ ಶೇ.3.1 ರಷ್ಟಿದ್ದು, ಅದರಲ್ಲೂ ಹೃದಯ ತೊಂದರೆ, ಕ್ಯಾನ್ಸರ್, ಡಯಾಬಿಟಿಕ್ ಇತರೆ ತೊಂದರೆಯಿಂದ ಬಳಲುವವರು ಮರಣಕ್ಕೆ ತುತ್ತಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಜನರಲ್ಲಿ ಭಯ ಬೇಡ. ಆದರೆ ಅಂತರ ಕಾಯ್ದುಕೊಂಡು, ಸ್ವಚ್ಛತೆ ಕಾಪಾಡಿಕೊಂಡು ನಿಯಮಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಿಗೆ ಸಮರ್ಪಕ ಮಾಹಿತಿ ಮತ್ತು ಧೈರ್ಯವನ್ನು ತುಂಬಬೇಕು ಎಂದರು.

    ಆರೋಗ್ಯಸೇತು ಆ್ಯಪ್:
    ಜಿಲ್ಲೆಯ ಎಲ್ಲ ಜನತೆ ಆರೋಗ್ಯಸೇತು ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಆಪ್ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು. ಈ ಆ್ಯಪ್‍ನ ಸಹಾಯದಿಂದ ತಾವು ಸೋಂಕಿತರಿಂದ ಎಷ್ಟು ಅಂತರದಲ್ಲಿದ್ದೀರಿ ಎಂದು ತಿಳಿಯುತ್ತದೆ ಹಾಗೂ ಸೋಂಕಿತರು ಹತ್ತಿರ ಬಂದರೆ ಸೂಚನೆ ನೀಡುತ್ತದೆ. ಆದ್ದರಿಂದ ಎಲ್ಲರೂ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಹಿನ್ನೆಲೆ ಕೆಲಸ ಆಗಬೇಕು. ಇಂದಿನಿಂದಲೇ ನಾನ್ ಕೋವಿಡ್ ಸೇವೆಗಳನ್ನು ಬಾಪೂಜಿ, ಎಸ್‍ಎಸ್ ಇತರೆ ಆಸ್ಪತ್ರೆಗಳಿಗೆ ಕಳುಹಿಸಬೇಕು. ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಹೆರಿಗೆ ವಿಭಾಗವನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ವರ್ಗಾಯಿಸಿ, ಕೋವಿಡ್ ಆಸ್ಪತ್ರೆಯಲ್ಲಿ ಕೇವಲ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಆಗಬೇಕು ಎಂದು ಸೂಚಿಸಿದರು.

  • ತುಮಕೂರು, ಗದಗ, ವಿಜಯಪುರಗಳಲ್ಲೂ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

    ತುಮಕೂರು, ಗದಗ, ವಿಜಯಪುರಗಳಲ್ಲೂ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

    – ಕರ್ನಾಟಕದಲ್ಲಿ ಈಗ 26 ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳು ಕಾರ್ಯನಿರತ
    – ಮೇ ಅಂತ್ಯದೊಳಗೆ ರಾಜ್ಯದಲ್ಲಿ 60 ಕೋವಿಡ್ ಟೆಸ್ಟಿಂಗ್ ಲ್ಯಾಬ್

    ಬೆಂಗಳೂರು: ಗದಗ, ತುಮಕೂರು ಮತ್ತು ವಿಜಯಪುರಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿಗೆ ಕೇಂದ್ರ ಸರ್ಕಾರದ ಅನುಮತಿ ದೊರಕಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೀಗ 26 ಕೋವಿಡ್ ಟೆಸ್ಟಿಂಗ್ ಲ್ಯಾಬ್‍ಗಳು ಕಾರ್ಯ ನಿರ್ವಹಿಸುವಂತಾಗಿದೆ.

    ರಾಜ್ಯದಲ್ಲಿ ಈಗ ದಿನಕ್ಕೆ 5,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಲಭ್ಯವಾದಂತಾಗಿದ್ದು, ವೈದ್ಯಕೀಯ ಸೌಲಭ್ಯ ಹೆಚ್ಚಳ ಮತ್ತು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಪ್ರಸ್ತುತ ಆರ್.ಟಿ.ಪಿ.ಸಿ.ಆರ್ ಲ್ಯಾಬ್ – 15, ಸಿಬಿಎನ್‍ಎಎಟಿ – 03 ಮತ್ತು ಖಾಸಗಿಯ 08 ಲ್ಯಾಬ್ ಗಳು ಕಾರ್ಯ ನಿರ್ವಹಿಸುತ್ತಿವೆ.

    ಇದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಏಪ್ರಿಲ್ ಅಂತ್ಯದೊಳಗೆ ರಾಜ್ಯದಲ್ಲಿ 27 ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು. ಫೆಬ್ರವರಿ ಆರಂಭದಲ್ಲಿ 2 ಲ್ಯಾಬ್‍ಗಳಿದ್ದ ಕರ್ನಾಟಕದಲ್ಲಿ ಈಗ 26 ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿದ್ದು ಮೇ ಅಂತ್ಯದೊಳಗೆ 60 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸಲಿವೆ.

    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ 2 ಪ್ರಯೋಗಾಲಯ ಹೊಂದುವುದು ಸರ್ಕಾರದ ಗುರಿ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ. ಇದರಿಂದಾಗಿ ತ್ವರಿತ ಗತಿಯಲ್ಲಿ ಪಾಸಿಟೀವ್ ಪ್ರಕರಣಗಳನ್ನು ಗುರುತಿಸಿ ಪ್ರತ್ಯೇಕಿಸಲು ಸಾಧ್ಯವಾಗುತ್ತಿದ್ದು, ರಾಜ್ಯದಲ್ಲಿ ಕೊರೋನ ವೈರಾಣು ಹರಡದಂತೆ ತಡೆಗಟ್ಟಲು ಇದು ಬಹಳ ಮಟ್ಟಿಗೆ ಸಹಕಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

    4ಖಿ (ಟ್ರೇಸ್, ಟ್ರ್ಯಾಕ್, ಟೆಸ್ಟ್ ಮತ್ತು ಟ್ರೀಟ್) ಯೋಜನೆಯೊಂದಿಗೆ ಕರ್ನಾಟಕವು ಅತ್ಯಂತ ಸಮರ್ಥವಾಗಿ ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿದ್ದು ಹೆಚ್ಚಿನ ಪ್ರಯೋಗಾಲಯಗಳನ್ನು ಹೊಂದುವುದರಿಂದ ಹೆಚ್ಚು ಟೆಸ್ಟ್ ಗಳನ್ನು ಕಡಿಮೆ ಅವಧಿಯಲ್ಲಿ ನಡೆಸಬಹುದಾಗಿದೆ. ಇದರಿಂದ ಚಿಕಿತ್ಸೆಗೆ ಅನುಕೂಲವಾಗಿದ್ದು ಕೋವಿಡ್ ನಿಯಂತ್ರಿಸುವ ಮತ್ತು ಸೋಂಕಿತರನ್ನು ಗುಣಮುಖರನ್ನಾಗಿ ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.

  • ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    – ಲ್ಯಾಬ್‍ನಲ್ಲಿ ಸೃಷ್ಟಿಯಾಗಿದ್ದಕ್ಕೆ ಯಾವುದೇ ಸಾಕ್ಷಿ ಇಲ್ಲ

    ಬೀಜಿಂಗ್: ಲ್ಯಾಬ್‍ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎರಡು ಬಾರಿ ಹೇಳಿದೆ ಎಂದು ಚೀನಾ ತಿಳಿಸಿದೆ.

    ಇಂದು ಇಡೀ ವಿಶ್ವಕ್ಕೆ ದೊಡ್ಡ ತಲೆನೋವಾಗಿರುವ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಸೋಂಕು ಇಂದು ವಿಶ್ವವ್ಯಾಪಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೆ ಇದನ್ನು ಚೀನಾ ಬಯೋವೆಪನ್ ಆಗಿ ಬಳಸುತ್ತಿದೆ. ಇದು ಚೀನಾದ ಲ್ಯಾಬ್‍ನಲ್ಲಿ ತಯಾರದ ಭಯಾನಕ ವೈರಸ್ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಕೇಳಿ ಬಂದಿದ್ದವು. ಇದನ್ನು ಓದಿ: ಕೊರೊನಾ ವೈರಸ್ ಸೃಷ್ಟಿ ಆಗಿದ್ದು ಎಲ್ಲಿ – ರಹಸ್ಯ ಭೇದಿಸಲು ಹೊರಟ ಅಮೆರಿಕ

    ಈ ಮಾತುಗಳನ್ನು ಚೀನಾ ಮುಂಚೆಯಿಂದಲೂ ತಳ್ಳಿ ಹಾಕಿಕೊಂಡು ಬಂದಿತ್ತು. ಈಗ ಮತ್ತೆ ಈ ವಿಚಾರವಾಗಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝೋವೋ ಲಿಜಿಯಾನ್, ಕೊರೊನಾ ಚೀನಾದ ವೈರಸ್ ಅಲ್ಲ. ಇದು ಯಾವುದೇ ಪ್ರಯೋಗಾಲಯಗಳಲ್ಲಿ ಮಾಡಲ್ಪಟ್ಟ ವೈರಸ್ ಅಲ್ಲ. ಇದಕ್ಕೆ ಯಾವುದೇ ಸಾಕ್ಷಿ ಕೂಡ ಇಲ್ಲ. ಇದೇ ಮಾತನ್ನು ವಿಶ್ವ ಆರೋಗ್ಯ ಸಂಸ್ಥೆ ಎರಡು ಬಾರಿ ಹೇಳಿದೆ ಎಂದು ಹೇಳಿದ್ದಾರೆ.

    ಬುಧವಾರ ಮಾತನಾಡಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸಂಭವಿಸಿರುವ ಈ ಭಯಾನಕ ಪರಿಸ್ಥಿತಿ ಯಾಕೆ ಸೃಷ್ಟಿ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದರು. ಟ್ರಂಪ್ ಅವರ ಪ್ರತಿಕ್ರಿಯೆಗೆ ಮಾಧ್ಯಮಗಳು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಬಳಿ ಈ ಬಗ್ಗೆ ನೀವು ಮಾತನಾಡಿದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಲ್ಯಾಬ್ ಬಗ್ಗೆ ಮಾತನಾಡಿದ ವಿಚಾರವನ್ನು ಚರ್ಚಿಸಲು ಇಷ್ಟ ಪಡುವುದಿಲ್ಲ. ಈ ವಿಚಾರವನ್ನು ಚರ್ಚಿಸುವ ಸರಿಯಾದ ಸಮಯ ಇದಲ್ಲ ಎಂದು ಉತ್ತರಿಸಿದ್ದರು. ಇದನ್ನು ಓದಿ: ಕೊರೊನಾ ಚೀನಾ ವೈರಸ್ ಅನ್ನಬೇಡಿ: ಭಾರತಕ್ಕೆ ಚೀನಾ ಮನವಿ

    ಈ ಹಿಂದೆಯೂ ಕೂಡ ಟ್ರಂಪ್ ಅವರು ಕೊರೊನಾ ವೈರಸ್ ನ್ನು ಚೀನಾ ವೈರಸ್ ಎಂದು ಹೇಳಿದ್ದರು. ಈ ವಿಚಾರವಾಗಿ ಕಿಡಿಕಾರಿದ್ದ ಚೀನಾ ಕೆಲ ಅಮೆರಿಕದವರು ಬೇಕು ಎಂದೇ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಹೇಳುತ್ತಿದ್ದಾರೆ. ಯಾವುದೇ ಒಂದು ವೈರಸ್ ಅನ್ನು ಒಂದು ದೇಶಕ್ಕೆ ಸೀಮಿತಗೊಳಿಸುವುದು ತಪ್ಪು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ ಎಂದು ಜಾಗತಿಕ ಮಟ್ಟದಲ್ಲಿ ಕೊರೊನಾ ಚೀನಾ ವೈರಸ್ ಅಲ್ಲ ಎಂದು ಅಭಿಯಾನ ಆರಂಭಿಸಿತ್ತು.

    ಒಂದು ಭಯಾನಕ ವೈರಸ್ ಅನ್ನು ಒಂದು ದೇಶಕ್ಕೆ ಸೀಮಿತ ಮಾಡಿದರೆ, ಅದೂ ದೇಶದ ಮುಂದಿನ ಬೆಳವಣಿಗೆಗೆ ಮಾರಕವಾಗುತ್ತದೆ. ಈ ಕಾರಣಕ್ಕೆ ಕೊರೊನಾವನ್ನು ಚೀನಾ ವೈರಸ್ ಎನ್ನಬೇಡಿ ಎಂದಿತ್ತು. ಜೊತೆಗೆ ಭಾರತ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯುವ ಸಂಕುಚಿತ ಮನೋಭಾವನೆಯನ್ನು ಹೊಂದಿಲ್ಲ ಎಂದು ಚೀನಾ ರಾಯಭಾರಿ ಅಂದು ಹೇಳಿದ್ದರು.

  • ಖಾಸಗಿ ಲ್ಯಾಬ್‍ಗಳಲ್ಲಿ ಕೊರೊನಾ ಟೆಸ್ಟ್- ಜನರ ಶುಲ್ಕ ಮರುಪಾವತಿಸಬಹುದೇ?

    ಖಾಸಗಿ ಲ್ಯಾಬ್‍ಗಳಲ್ಲಿ ಕೊರೊನಾ ಟೆಸ್ಟ್- ಜನರ ಶುಲ್ಕ ಮರುಪಾವತಿಸಬಹುದೇ?

    – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸುವ ಶುಲ್ಕವನ್ನು ಸರ್ಕಾರ ಭರಿಸಲು ಅಥವಾ ಮರುಪಾವತಿಸಲು ಸಾಧ್ಯವೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ.

    ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲು ಖಾಸಗಿ ಲ್ಯಾಬ್‍ಗಳು ಹೆಚ್ಚಿನ ಹಣ ಪಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮತ್ತು ಎಲ್ಲರಿಗೂ ಉಚಿತವಾಗಿ ಟೆಸ್ಟ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಶಶಾಂಕ್ ದಿಯೋ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಶೋಕ್ ಭೂಷಣ್ ನೇತೃತ್ವದ ದ್ವಿ ಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ಹೀಗೆ ಪ್ರಶ್ನಿಸಿದೆ.

    ದೇಶದಲ್ಲಿ 5000 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಮತ್ತಷ್ಟು ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿದೆ. ಪರೀಕ್ಷೆ ನಡೆಸುವ ಕೆಲ ಖಾಸಗಿ ಲ್ಯಾಬ್ ಗಳು ಹೆಚ್ಚಿನ ಹಣ ಪಡೆಯುವ ಸಾಧ್ಯತೆ ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದರು.

    ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖಾಸಗಿ ಲ್ಯಾಬ್ ಗಳಲ್ಲಿ ಉಚಿತ ಪರೀಕ್ಷೆ ನಡೆಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು. ದೇಶದ 118 ಸರ್ಕಾರಿ ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಇದು ಸಾಕಾಗುತ್ತಿಲ್ಲ. ಈ ಹಿನ್ನೆಲೆ ಖಾಸಗಿ 47 ಲ್ಯಾಬ್ ಗಳಿಗೆ ಪರವಾನಿಗೆ ನೀಡಿದೆ. ದೇಶದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ಖಾಸಗಿ ಲ್ಯಾಬ್ ಗಳಿಗೆ ಅವಕಾಶ ನೀಡಿದೆ ಎಂದು ವಿವರಿಸಿದರು.

    ಖಾಸಗಿ ಲ್ಯಾಬ್ ಗಳು ಹೆಚ್ಚಿನ ಶುಲ್ಕ ವಿಧಿಸದಂತೆ ಎಚ್ಚರಿಕೆ ವಹಿಸಬೇಕು ಮತ್ತು ಈ ಶುಲ್ಕವನ್ನು ಸರ್ಕಾರ ಮರುಪಾವತಿ ಮಾಡುವ ಬಗ್ಗೆ ಪರಿಶೀಲಿಸಿ ಎಂದು ನ್ಯಾ. ಅಶೋಕ್ ಭೂಷಣ್ ಸಲಹೆ ನೀಡಿದರು. ಅಲ್ಲದೇ ಖಾಸಗಿ ಲ್ಯಾಬ್‍ಗಳು ಅಗತ್ಯ ಕಡೆಗಳಿಂದ ಸೂಕ್ತ ಪರವಾನಿಗೆ ಪಡೆದಿವೆಯೋ ಇಲ್ಲವೇ ಅನ್ನೊದು ಖಾತ್ರಿಪಡಿಸಿಕೊಳ್ಳಬೇಕು ಎಂದರು.

    ಈ ವೇಳೆ ಅರ್ಜಿದಾರ ವಕೀಲ ಶಶಾಂಕ್ ದಿಯೋ ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷೆ ಗೆ 4, 500 ಶುಲ್ಕ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿಗದಿ ಮಾಡಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥಿತ ಪರೀಕ್ಷೆಗಳು ನಡೆಯದ ಮತ್ತು ಅಲ್ಲಿ ಜನರ ಸಂಖ್ಯೆ ಹೆಚ್ವಿರುವ ಕಾರಣ ಹೆಚ್ಚಿನವರು ಖಾಸಗಿ ಲ್ಯಾಬ್ ಗಳತ್ತ ಮುಖ ಮಾಡಲಿದ್ದಾರೆ ಎಂದು ವಾದಿಸಿದರು.

  • ರಾಜ್ಯದಲ್ಲಿ ಒಂದೇ ದಿನ 4 ಮಂದಿಗೆ ಕೊರೊನಾ ಸೋಂಕು ದೃಢ: ಕೆ ಸುಧಾಕರ್

    ರಾಜ್ಯದಲ್ಲಿ ಒಂದೇ ದಿನ 4 ಮಂದಿಗೆ ಕೊರೊನಾ ಸೋಂಕು ದೃಢ: ಕೆ ಸುಧಾಕರ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇಂದು ಹೊಸದಾಗಿ 4 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ದೃಢವಾಗಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯು ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದು, ಅವರ ತಿಳಿಸಿರುವ ಪ್ರಕಾರ ಬೆಂಗಳೂರಿನ ಮೂವರು ಹಾಗೂ ಗೌರಿಬಿದನೂರಿನ ಒಬ್ಬರಿಗೆ ಸೋಂಕು ದೃಢವಾಗಿದೆ. ಹೀಗಾಗಿ ರಾಜ್ಯದಲ್ಲಿ 15 ಇದ್ದ ಕೊರೊನಾ ಪೀಡಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

    ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವ್ಯಕ್ತಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಿ, ನಂತರ ಅವರ ತಾಯಿಗೂ ಸೋಂಕು ಇರವ ಬಗ್ಗೆ ಅನುಮಾನವಿದೆ. ಈಗ ಬಂದಿರುವ ಬೆಂಗಳೂರಿನ ಲ್ಯಾಬ್ ವರದಿ ಅವರಿಗೆ ಪ್ರಕಾರ ಪಾಸಿಟಿವ್ ಇದ್ದು, ಪುಣೆಯ ಲ್ಯಾಬ್ ವರದಿಗಾಗಿ ಕಾಯುತ್ತಿದ್ದೇವೆ. ಈ ವರದಿ ಸಂಜೆ ವೇಳೆಗೆ ಸಿಗಲಿದೆ. ಒಂದು ವೇಳೆ ಅವರ ತಾಯಿಗೂ ಸೋಂಕು ದೃಢವಾದರೆ ಕೊರೊನಾ ಪೀಡಿತರ ಸಂಖ್ಯೆ 20ಕ್ಕೆ ಏರಿಕೆಯಾಗಬಹುದು ಎಂದು ಹೇಳಿದರು.