Tag: Kusuma H.

  • ಲೀಡರ್, ವರ್ಕರ್ ಪ್ರಾಬ್ಲಂ ಇಲ್ಲ, ವಿ ಹ್ಯಾವ್ ಫೇಲ್ : ಡಿಕೆಶಿ

    ಲೀಡರ್, ವರ್ಕರ್ ಪ್ರಾಬ್ಲಂ ಇಲ್ಲ, ವಿ ಹ್ಯಾವ್ ಫೇಲ್ : ಡಿಕೆಶಿ

    – ಹಣ ಹಂಚಿಕೆ ಬಗ್ಗೆ ಈಗ ಹೇಳಲ್ಲ
    – ಸೋಲು ಗೆಲುವಿನ ಬುನಾದಿ

    ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮತದಾರರು ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಚುನಾವನೆಯಲ್ಲಿ ಏನಾಯ್ತು? ಸೋಲು ಆಗಿದ್ದೇಕೆ ಎಂಬುದಕ್ಕೆ ಉತ್ತರ ಕೊಂಡುಕೊಳ್ಳುತ್ತೇನೆ. ಅಧ್ಯಕ್ಷನಾಗಿ ಚುನಾವಣೆ ಎದುರಿಸಿದ್ದರಿಂದ ವೈಯಕ್ತಿಕವಾಗಿ ಬೇಸರವಾಗಿದೆ ಎಂದರು.

    ಉಪ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ಗೌರವಯುತವಾಗಿ ಒಪ್ಪುತ್ತೇವೆ. ಫಲಿತಾಂಶ ಯಾಕೆ ಹೀಗಾಯ್ತು? ಏನಾಯ್ತು ಎಂಬುದನ್ನ ಮುಂದಿನ ದಿನಗಳಲ್ಲಿ ನಾವು ಪಕ್ಷದೊಳಗೆ ಚರ್ಚೆ ನಡೆಸಿ ಉತ್ತರ ಹುಡುಕಿಕೊಂಡು ಸರಿ ಮಾಡಿಕೊಳ್ಳುತ್ತೇವೆ. ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಯಾರೂ ಧೃತಿಗೆಡಬೇಕಿಲ್ಲ. ಬೈ ಎಲೆಕ್ಷನ್ ಗಳಲ್ಲಿ ಅಧಿಕಾರದಲ್ಲಿದ್ದ ಆಡಳಿತ ಪಕ್ಷಕ್ಕೆ ಶೇ.30ರಷ್ಟು ಅನುಕೂಲ ಆಗುತ್ತೆ ಅನ್ನೋದು ನಮಗೆ ಗೊತ್ತಿದೆ. ಬಳ್ಳಾರಿ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯ ಅನುಭವ ನಮಗಿದೆ. ಹಾಗಾಗಿ ಕಾರ್ಯಕರ್ತರು ಮತ್ತು ನಮ್ಮ ಮತದಾರರು ಬೇಸರ ಆಗೋದ ಬೇಡ ಎಂದು ಹೇಳಿದರು. ಇದನ್ನೂ ಓದಿ: ಇದು ಬಿಎಸ್‍ವೈ ಸರ್ಕಾರದ ಜನಪರ ಕಾರ್ಯಗಳಿಗೆ ಜನ ನೀಡಿದ ಬೆಂಬಲ – ಸುಧಾಕರ್ ಬಣ್ಣನೆ

    ನಮ್ಮ ಕ್ಷೇತ್ರ, ರಾಜ್ಯದ ಕಾರ್ಯಕರ್ತರು ಶಕ್ತಿ ಮೀರಿ ಅಭ್ಯರ್ಥಿ ಗೆಲ್ಲುವಿಗೆ ಶ್ರಮ ಪಟ್ಟಿದ್ದಾರೆ. ಮತದಾರ ಸಂಪೂರ್ಣ ಮತ ಹಾಕದಿರಬಹುದು. ಇಷ್ಟು ದೊಡ್ಡ ಮಟ್ಟದ ಅಂತರ ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ದಿನಗಳನ್ನ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಯನ್ನ ಸೂಚಿಸಿದ್ದೇವೆ. ಕುಸುಮಾ ಅವರು ಸಹ ಒಳ್ಳೆಯ ಹೋರಾಟ ನಡೆಸಿದ್ದಾರೆ. ಶಿರಾ ಕ್ಷೇತ್ರದ ಮೇಲಿನ ನಿರೀಕ್ಷೆ ಹೆಚ್ಚು ಕಡಿಮೆ ಆಗಿದ್ದು, ಈ ಅಂತರದ ಗೆಲುವು ನಿರೀಕ್ಷೆ ಇರಲಿಲ್ಲ. ಮತ್ತೆ ಕ್ಷೇತ್ರದಲ್ಲಿ ನಮ್ಮ ಪಕ್ಷ ಕಟ್ಟುವ ಕೆಲಸ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಇದನ್ನೂ ಓದಿ: ಚುನಾವಣೆ ಗೆಲುವಿಗೆ ಬಂಡೆ ಅಡ್ಡಿಬರಲೇ ಇಲ್ಲ- ಡಿಕೆಶಿ ಕುಟುಕಿದ ಕೋಟ

    ಸೋಲು ಗೆಲುವಿನ ಬುನಾದಿ: ನಾನು ಮೊದಲ ಚುನಾವಣೆಯಲ್ಲಿ ಸೋತಿದ್ದೇನೆ. ನಂತರ ಗೆಲುವು ದಾಖಲಿಸಿಕೊಂಡು ಬಂದಿದ್ದೇನೆ. ಸೋಲು ಗೆಲುವಿನ ಬುನಾದಿ ಅನ್ನೋ ತತ್ವದಲ್ಲಿ ನಂಬಿಕೆ ಇಟ್ಟುಕೊಂಡ ವ್ಯಕ್ತಿ. ಉಪ ಚುನಾವಣೆ ಮೂಲಕ ಆಡಳಿತ ಸರ್ಕಾರಕ್ಕೆ ಒಂದು ಸಂದೇಶ ಕೊಡುವ ಪ್ರಯತ್ನ ಆಗಿದೆ. ನಮ್ಮ ಸಿದ್ಧಾಂತಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದರು. ಇದನ್ನೂ ಓದಿ: ಮತದಾರರ ತೀರ್ಪಿಗೆ ತಲೆ ಬಾಗುತ್ತೇವೆ, ಕಾರ್ಯಕರ್ತರು ಧೃತಿಗೆಡಬಾರದು: ಡಿ.ಕೆ.ಸುರೇಶ್

    ಇಷ್ಟು ದೊಡ್ಡ ಮಟ್ಟದ ಅಂತರ ನಿರೀಕ್ಷೆ ಮಾಡಿರಲಿಲ್ಲ. ಚುನಾವಣೆ ಸೋಲಿಗೆ ಲೀಡರ್, ವರ್ಕರ್ ಪ್ರಾಬ್ಲಂ ಅಲ್ಲ. ಹಣ ಹಂಚಿಕೆ ಬಗ್ಗೆ ಈಗ ಏನು ಹೇಳಲ್ಲ. ಸೋತಿದ್ದೇವೆ ಅನ್ನೋದನ್ನ ನಾವು ಒಪ್ಪಿಕೊಳ್ಳುತ್ತೇನೆ. ಗೆಲುವು ಸಿಗುವಷ್ಟು ಮತಗಳನ್ನ ಮತದಾರರ ನಮಗೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಅಧ್ಯಕ್ಷನಾಗಿ ಸೋತಿದಕ್ಕೆ ವೈಯಕ್ತಿಕವಾಗಿ ಬೇಸರ ತಂದಿದೆ. ಆದ್ರೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದೇನೆ. ಅಧ್ಯಕ್ಷನಾಗಿರೋದರಿಂದ ಚುನಾವಣೆ ಸೋಲಿನ ಹೊಣೆಯನ್ನ ನಾನೇ ತೆಗೆದುಕೊಳ್ಳುತ್ತೇನೆ. ಯಾರ ಮೇಲೆಯೋ ಸೋಲಿನ ಶಾಲು ಹಾಕಲ್ಲ. ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಜನ ಯಾರನ್ನು ನೋಡಿ ಮತ ಹಾಕಿದ್ದಾರೆ ಎಂಬುವುದು ಗೊತ್ತಿಲ್ಲ. ಹಾಗಾಗಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಲ್ಲ. ಕಾಂಗ್ರೆಸ್ ಹೊಸಬರಿಗೆ ಅವಕಾಶ ನೀಡುತ್ತಿದೆ. ಮುಂದಿನ ಚುನಾವಣೆಗಳಿಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ಚಿಂತನೆ ನಡೆಸುತ್ತೇವೆ. ಇಂದು ನಾವು ಆಯ್ಕೆ ಮಾಡಿದ್ದ ಅಭ್ಯರ್ಥಿ ಮುಂದಿನ ದಿನದಲ್ಲಿ ವಿಧಾನಸೌಧಕ್ಕೆ ಬರುತ್ತಾರೆ ಎಂದ ಭರವಸೆ ಹೊಂದಿದ್ದೇವೆ ಎಂದರು.

    ಬಿಹಾರ್ ಚುನಾವಣೆಯಲ್ಲಿ ಮಹಾಘಟಬಂಧನ್ ಗೆಲ್ಲುತ್ತೆ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಹತ್ತಿರದ ನಂಬರ್ಸ್ ಸಿಕ್ಕಿದೆ. ಬಿಹಾರದ ಜನತೆಯ ತೀರ್ಪು ನೋಡಿದ್ರೆ ಉತ್ತರ ಭಾರತದಲ್ಲಿ ಎನ್‍ಡಿಎ ವಿರುದ್ಧದ ಆಡಳಿತ ಅಲೆ ಶುರುವಾಗಿದೆ ಅನ್ನೋದನ್ನು ಇದು ತೋರಿಸುತ್ತಿದೆ ಎಂದರು.

  • ಬೈ ಎಲೆಕ್ಷನ್ ರಿಸಲ್ಟ್- ಆರ್.ಆರ್. ನಗರದಲ್ಲಿ ನಾಳೆ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ

    ಬೈ ಎಲೆಕ್ಷನ್ ರಿಸಲ್ಟ್- ಆರ್.ಆರ್. ನಗರದಲ್ಲಿ ನಾಳೆ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ

    – ವಿಜಯೋತ್ಸವ, ಮೆರವಣಿಗೆ ನಡೆಸುವಂತಿಲ್ಲ

    ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆ ಮತ ಎಣಿಕೆಗೆ ಸಿದ್ಧತೆ ಮುಕ್ತಾಯವಾಗಿದೆ. ಬಿಬಿಎಂಪಿ, ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರತಿಷ್ಠೆಯ ಕಣವಾಗಿರೋ ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಬಿಜೆಪಿಯ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ ಹಾಗೂ ಜೆಡಿಎಸ್‍ನ ಕೃಷ್ಣಮೂರ್ತಿ ಭವಿಷ್ಯ ನಾಳೆ ಪ್ರಕಟವಾಗಲಿದೆ.

    ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಮತ ಎಣಿಕೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಇಡೀ ಕ್ಷೇತ್ರ ವ್ಯಾಪಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟಕ್ಕೂ ನಿರ್ಬಂಧ ಹಾಕಲಾಗಿದೆ. ಪೊಲೀಸರ ಹದ್ದಿನ ಕಣ್ಣಿನಲ್ಲಿ ಮತ ಎಣಿಕೆ ನಡೆಯಲಿದೆ.

    ಆರ್.ಆರ್.ನಗರದಲ್ಲಿ 25 ಸುತ್ತು ಮತ ಎಣಿಕೆ: ಆರ್.ಆರ್.ನಗರ ಮಿನಿ ಕದನದಲ್ಲಿ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಸೇರಿ ಕಣದಲ್ಲಿ ಒಟ್ಟು 16 ಅಭ್ಯರ್ಥಿಗಳು ಇದ್ದಾರೆ. ಕ್ಷೇತ್ರದಲ್ಲಿ 412 ಅಂಚೆ ಹಾಗೂ 04 ಇಟಿಪಿಬಿಎಸ್ ಸೇರಿದಂತೆ 2,09,828 ಮತ ಚಲಾವಣೆ ಆಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಮೊದಲು ಅಂಚೆ ಹಾಗೂ ಇಟಿಪಿಬಿಎಸ್ ಮತಗಳನ್ನ ಎಣಿಕೆ ಹಾಕಲಾಗುವುದು. ಇವಿಎಂ ಮತ ಎಣಿಕೆ ಬೆಳಗ್ಗೆ 8.30 ಕ್ಕೆ ಪ್ರಾರಂಭವಾಗಲಿದೆ. ಒಟ್ಟು 25 ಸುತ್ತು ಮತ ಎಣಿಕೆ ಇರಲಿದೆ.

    ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ಪ್ರತಿ ಸುತ್ತಿನಲ್ಲಿ 28 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಕೊಠಡಿಯಲ್ಲಿ 7 ಎಣಿಕಾ ಟೇಬಲ್ ಗಳಂತೆ ಒಟ್ಟು 4 ಕೊಠಡಿಯಲ್ಲಿ 28 ಎಣಿಕಾ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ 3 ಸಹಾಯಕ ಚುನಾವಣೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 250 ಸಿಬ್ಬಂದಿ ನೇಮಕ ಮಾಡಲಾಗಿದ್ದು, 2 ಹಂತದ ತರಬೇತಿ ನೀಡಲಾಗಿದೆ. ಚುನಾವಣೆ ಸಿಬ್ಬಂದಿಗೆ ನಾಳೆ ಮೊಬೈಲ್ ನಿಷೇಧ ಮಾಡಲಾಗಿದೆ. ಮಾಧ್ಯಮಗಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಸಿಬ್ಬಂದಿ ಸೇರಿದಂತೆ ಎಣಿಕೆ ಕೇಂದ್ರದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ.

    ಪೊಲೀಸ್ ಸರ್ಪಗಾವಲು: ಮತ ಎಣಿಕೆ ಕಾರ್ಯ ಪೊಲೀಸ್ ಭದ್ರತೆಯಲ್ಲಿ ನಡೆಯಲಿದೆ. ಮತ ಎಣಿಕೆ ಕೇಂದ್ರ ಮತ್ತು ಆರ್.ಆರ್.ನಗರ ಕ್ಷೇತ್ರದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಸುಮಾರು 1,800 ಪೊಲೀಸರ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 4 ಹಂತದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಎರಡೂ ಕಡೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧವಿದ್ದು, ಚುನಾವಣಾ ಆಯೋಗದಿಂದ ಪಾಸ್ ಪಡೆದವರಿಗೆ ಮಾತ್ರ ಒಳಗೆ ಅವಕಾಶ ನೀಡಲಾಗುತ್ತದೆ.

    ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 3 ಜನ ಡಿಸಿಪಿ, ಎಸಿಪಿ ಸೇರಿ 900 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. 36 ಕೆ.ಎಸ್.ಆರ್.ಪಿ/ಸಿ.ಎ.ಆರ್ ಫೋರ್ಸ್, ಒಂದು ಅಗ್ನಿಶಾಮಕ ದಳ, ಒಂದು ಆಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿದೆ. ಕೋವಿಡ್ ಇರುವ ಕಾರಣ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನ ಸೇರುವಂತಿಲ್ಲ. ಮತ ಕೇಂದ್ರದ ಬಳಿ ಸಂಭ್ರಮಾಚರಣೆ, ಪಟಾಕಿ ಹಚ್ಚುವ ಹಾಗಿಲ್ಲ. ಮತ ಎಣಿಕೆ ಕೇಂದ್ರದ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಇರುವುದಿಲ್ಲ. ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

    ಹೈವೋಲ್ಟೇಜ್ ಮತ ಎಣಿಕೆ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ ಮಧ್ಯಾಹ್ನ 1 ಗಂಟೆ ಒಳಗೆ ವಿಜಯಲಕ್ಷ್ಮಿ ಯಾರಿಗೆ ಅನ್ನೋದು ತಿಳಿಯಲಿದ್ದು, ಶಾಂತಿಯುತ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.