Tag: KPCC President G Parameshwar

  • ಕಾಂಗ್ರೆಸ್ಸಿನಿಂದ ಶಾಸಕ ಭೈರತಿ ಬಸವರಾಜ್ ಬಂಟ ನಾರಾಯಣ ಸ್ವಾಮಿ ಅಮಾನತು

    ಕಾಂಗ್ರೆಸ್ಸಿನಿಂದ ಶಾಸಕ ಭೈರತಿ ಬಸವರಾಜ್ ಬಂಟ ನಾರಾಯಣ ಸ್ವಾಮಿ ಅಮಾನತು

    ಬೆಂಗಳೂರು: ಕೆಆರ್ ಪುರಂ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಬಂಟ ಬೆಂಗಳೂರು ಜಲಮಂಡಳಿ ಸದಸ್ಯನಾಗಿರುವ ನಾರಾಯಣಸ್ವಾಮಿಯನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

    ಈ ಕುರಿತು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ನಾರಾಯಣ ಸ್ವಾಮಿಯನ್ನು ಪಕ್ಷದಿಂದ ಅಮಾನತುಗೊಳಿಸಿದ್ದೇವೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಘಟನೆ ಕುರಿತು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿರುವ ನಾರಾಯಣಸ್ವಾಮಿ, ತಮ್ಮ ಕೃತ್ಯವನ್ನು ಸಮರ್ಥನೆ ಮಾಡಿಕೊಂಡಿದ್ದ. ಅಲ್ಲದೇ ಘಟನೆ ಕುರಿತ ವಿಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡಿದರೆ ತನಗೆ ಯಾವುದೇ ನಷ್ಟವಿಲ್ಲ ಎಂದು ತಿಳಿಸಿದ್ದ.

    ರಾಜ್ಯ ವಿಧಾನಸಭಾ ಚುನಾವಣೆ ಕೇವಲ ಕೆಲ ತಿಂಗಳು ಇರುವ ಕಾರಣ ವೇಳೆ ನಾರಾಯಣಸ್ವಾಮಿ ಅವರ ಘಟನೆ ಪಕ್ಷ ಘನತೆಗೆ ದಕ್ಕೆ ತರುವ ಸಾಧ್ಯತೆ ಇರುವುದರಿಂದ ಪಕ್ಷದ ನಾಯಕರು ಈ ಕ್ರಮ ಕೈಗೊಂಡಿದ್ದಾರೆ.

    ಏನಿದು ಘಟನೆ?: ನಾರಾಯಣಸ್ವಾಮಿ ಎನ್‍ಆರ್‍ಐ ಬಡಾವಣೆಯ ಜಮೀನು ವಿಚಾರದಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಡುವಂತೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪಗೆ ಒತ್ತಡ ಹಾಕಿದ್ದ. ಜಮೀನು ವ್ಯಾಜ್ಯ ಕೋರ್ಟ್‍ನಲ್ಲಿದೆ, ಅಕ್ರಮವಾಗಿ ಖಾತೆ ಮಾಡಿಕೊಡಲ್ಲ ಎಂದು ಚೆಂಗಲ್ ರಾಯಪ್ಪ ಹೇಳಿದ್ದರು. ಹೀಗಾಗಿ ಕಳೆದ ಫೆಬ್ರವರಿ 16ರಂದು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಹೊರಮಾವು ನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿದ ನಾರಾಯಣಸ್ವಾಮಿ, ಎಆರ್‍ಒ ಚೆಂಗಲ್ ರಾಯಪ್ಪ ಮುಂದೆಯೇ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಖಾತೆ ಮಾಡಿಕೊಡದಿದ್ದರೆ ಕಚೇರಿಯಲ್ಲಿರುವ ದಾಖಲೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ – ಸುದ್ದಿ ಪ್ರಸಾರ ಮಾಡಿ: ತನ್ನ ಕೃತ್ಯವನ್ನು ಸಮರ್ಥಿಸಿಕೊಂಡ ನಾರಾಯಣ ಸ್ವಾಮಿ

    ಚೆಂಗಲ್ ರಾಯಪ್ಪ ಖಡಕ್ ಅಧಿಕಾರಿ ಅಂತ ಗುರುತಿಸಿಕೊಂಡಿದ್ದ ವ್ಯಕ್ತಿಯಾಗಿದ್ದು, ಪೆಟ್ರೋಲ್ ಹಾಕೋದಾಗಿ ಬೆದರಿಸಿದ್ರೂ ಅವರು ಹೆದರಲಿಲ್ಲ. ಎರಡು ದಿನಗಳ ಹಿಂದೆ ಚೆಂಗಲ್ ರಾಯಪ್ಪ ಅವರನ್ನ ವರ್ಗಾವಣೆ ಮಾಡಲಾಗಿದೆ. ಸಿಎಂ ಮತ್ತು ಭೈರತಿ ಬಸವರಾಜ್ ಪ್ರಭಾವ ಬಳಸಿ ಚೆಂಗಲ್ ರಾಯಪ್ಪರನ್ನ ನಾರಾಯಣಸ್ವಾಮಿ ವರ್ಗಾವಣೆ ಮಾಡಿಸಿದ್ದಾನೆ ಎನ್ನಲಾಗಿದೆ.  ಇದನ್ನೂ ಓದಿ: ಶಾಸಕ ಭೈರತಿ ಬಸವರಾಜ್ ಬಂಟನ ಗೂಂಡಾಗಿರಿ- ಸರ್ಕಾರಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ತೀನೆಂದು ಬೆದರಿಕೆ

  • ರಮ್ಯಾ ಚುನಾವಣೆಗೆ ಸ್ಪರ್ಧಿಸುತ್ತಾರಾ?: ಪರಮೇಶ್ವರ್ ಈ ಉತ್ತರ ನೀಡಿದ್ರು

    ರಮ್ಯಾ ಚುನಾವಣೆಗೆ ಸ್ಪರ್ಧಿಸುತ್ತಾರಾ?: ಪರಮೇಶ್ವರ್ ಈ ಉತ್ತರ ನೀಡಿದ್ರು

    ಬೆಂಗಳೂರು: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡುವ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ರಮ್ಯಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವನ್ನು ಎಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

    ರಮ್ಯಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಎಲ್ಲೂ ಹೇಳಿಕೆ ನೀಡಿಲ್ಲ, ನಾವು ಹೇಳಿಲ್ಲ. ರಮ್ಯಾ ಯಾರ ಸಂಪರ್ಕದಲ್ಲಿ ಇದ್ದಾರೋ, ಇಲ್ವೋ ಎಂಬುವುದು ತಿಳಿದಿಲ್ಲ. ಅವರ ಹುಟ್ಟು ಹಬ್ಬದ ದಿನದಂದು ಅವರಿಗೆ ಕರೆ ಮಾಡಿ ಶುಭಾಶಯ ಹೇಳಿದ್ದೆ ಎಂದು ತಿಳಿಸಿದ್ದಾರೆ.

    ಇನ್ನು 2018 ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಯಾತ್ರೆ ಕೈಗೊಳ್ಳುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷದವರು ಯಾತ್ರೆ ಮಾಡಿದ ತಕ್ಷಣ ನಾವು ಏಕೆ ಯಾತ್ರೆ ಮಾಡಬೇಕು. ಯಾತ್ರೆ ಮಾಡಿದ ತಕ್ಷಣ ಚುನಾವಣೆಗೆ ತಯಾರಿ ಅಂತ ಏನಿಲ್ಲ. ನಾವು ನಮ್ಮದೇ ರಣತಂತ್ರ ಹೊಂದಿದ್ದೇವೆ. ಈಗಾಗಲೇ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

    ಈ ಬಾರಿಯ ಚುನಾವಣೆಯಲ್ಲಿ ನಾನು ಕೊರಟಗೆರೆಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ ಪರಮೇಶ್ವರ್ ಒಂದು ಕುಟುಂಬದಲ್ಲಿ ಹಲವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಕೋಪಗೊಂಡರು. ಚುನಾವಣೆಯಲ್ಲಿ ಮೂರು ಬಾರಿ ಪರಾಭವಗೊಂಡವರಿಗೆ ಹಾಗೂ ಒಂದು ಕುಟುಂಬದಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎನ್ನುವ ನಿಯಮ ಇದೆ. ಆದರೆ ಇದು ಜಾರಿಯಾಗಿಲ್ಲ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಹೈಕಮಾಂಡ್ ಹೇಗೆ ನಿಯಮ ರೂಪಿಸುತ್ತದೋ ಅದರ ಅನ್ವಯ ಟಿಕೆಟ್ ನೀಡಲಾಗುತ್ತದೆ ಎಂದರು. ಚನ್ನಪಟ್ಟಣದಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಒಳ ಒಪ್ಪಂದ ವಿಚಾರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸುತ್ತೇವೆ ಎಂದರು.

    ರಮ್ಯಾ ಅವರು ಸಂಸದರಾಗಿ ಆಯ್ಕೆಯಾದ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಮಂಡ್ಯದ ಕಾಂಗ್ರೆಸ್ ಅಭಿಮಾನಿಗಳು ಮನವಿ ಮಾಡಿದ್ದರು.