Tag: Kodagu neighbors

  • ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಗದಗ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಮುಂದೆಯೂ ಅನ್ಯಾಯ ಆಗಲಿದೆ. ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಮತ್ತೊಮ್ಮೆ ಆರೋಪಿಸಿದ್ದಾರೆ.

    ಕೊಡಗು ನೆರೆ ಹಾವಳಿ ಪ್ರಕರಣ ಹಿನ್ನಲೆ ಕುರಿತು ಮಾತನಾಡಿದ ಅವರು ಸರ್ಕಾರ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಲಿಲ್ಲ. ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಜನರ ಪ್ರಾಣಹಾನಿಯನ್ನು ತಡೆಯಬಹುದಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ದಿಂದ ಪ್ರಾಣ ಹಾನಿ, ಪ್ರಾಣಿಗಳ ಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಇಷ್ಟೆಲ್ಲಾ ಘಟನೆ ನಡೆದರೂ ಸಿಎಂ ತಡವಾಗಿ ಭೇಟಿ ನೀಡಿರುವುದು ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.

    ಸಚಿವ ಎಚ್.ಡಿ ರೇವಣ್ಣ ಬಿಸ್ಕೆಟ್ ಎಸೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಮಕ್ಕಳಾದ ರೇವಣ್ಣಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಇರಬೇಕಿತ್ತು. ಸರ್ಕಾರ ಮತ್ತು ಸಚಿವ ಸ್ಥಾನ ಅಹಂಕಾರ ಅವರಲ್ಲಿ ತುಂಬಿಕೊಂಡಿದೆ. ಇದು ಅಧಿಕಾರ ಅಹಂ ಬಹಳ ದಿನ ಉಳಿಯುವುದಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿದ್ದು, ಪ್ರಧಾನಿಗಳು ಕೇರಳ ಹಾಗೂ ಕರ್ನಾಟಕಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ ಎಂದರು.

    ಸರ್ಕಾರ ಮನಸ್ಸು ಮಾಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬಹುದು. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಅಧಿಕೃತ ಆದೇಶ ಹೊರಡಿಸಲಿ. ರೈತರ ಸಾಲಮನ್ನಾ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು!

    ಸರ್ಕಾರ ಮನಸ್ಸು ಮಾಡಿದ್ರೆ ಸುಳ್ಯ ಭಾಗದಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸಬಹುದು!

    ಬೆಂಗಳೂರು: ಕೊಡಗನ್ನು ಸಂಪರ್ಕಿಸುವ ಸಂಪಾಜೆ ಘಾಟಿ ರಸ್ತೆ ಬಂದ್ ಆದ ಪರಿಣಾಮ ಪ್ರತಿನಿತ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮುಂದೆ ಮಡಿಕೇರಿ ಹೋಗುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದು, ಸರ್ಕಾರ ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು.

    ಕೊಡಗು- ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಸುರಿದ ಭಾರೀ ಮಳೆಗೆ ಸಂಪಾಜೆ ಘಾಟಿ ರಸ್ತೆ ಕೊಚ್ಚಿ ಹೋಗಿದ್ದು ಅಲ್ಲಲ್ಲಿ ಗುಡ್ಡಗಳು ಜರಿದು ಬಿದ್ದ ಕಾರಣ ಬಂಟ್ವಾಳ – ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗಿದೆ. ಕೊಡಗಿನ ಗ್ರಾಮಗಳಾದ ಸಂಪಾಜೆ, ಚೆಂಬು, ಪೆರಾಜೆ ಗ್ರಾಮದವರಿಗೆ ವಾಣಿಜ್ಯ ವ್ಯವಹಾರಕ್ಕೆ ಸುಳ್ಯವೇ ಹತ್ತಿರವಾಗಿದ್ದರೂ ಉಳಿದ ಪ್ರತೀ ಕೆಲಸಕ್ಕೂ ತಾಲೂಕು ಮತ್ತು ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ತೆರಳಬೇಕು. ಸಂಪಾಜೆಯಿಂದ ಮುಕ್ಕಾಲು ಗಂಟೆಯಲ್ಲಿ ತಲುಪಬಹುದಾಗಿದ್ದ ಈ ಸ್ಥಳಕ್ಕೆ ಈಗ ಮಾರ್ಗವೇ ಇಲ್ಲದೇ ಜನ ಕಂಗಾಲಾಗಿದ್ದಾರೆ.

     

    ಸುಳ್ಯ, ಪುತ್ತೂರು ತಾಲೂಕಿನ ಹಲವು ಮಂದಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಶಿರಾಡಿ ಘಾಟಿಯಲ್ಲಿ ಸಂಪರ್ಕ ಬಂದ್ ಆದ ಹಿನ್ನೆಲೆಯಲ್ಲಿ ಸಂಪಾಜೆ ಘಾಟಿ ಮೂಲಕವೇ ಮಡಿಕೇರಿ ತಲುಪಿ ಬೆಂಗಳೂರಿಗೆ ಬರುತ್ತಿದ್ದರು. ಆದರೆ ಈಗ ಎರಡು ಘಾಟಿ ರಸ್ತೆಗಳು ಬಂದ್ ಆದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯ ಮೂಲಕವೇ ಬೆಂಗಳೂರು ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.

    ಘಾಟಿ ರಸ್ತೆಗಳು ಬಂದ್ ಆಗಿದ್ದರೂ ಮುಂದೆ ಈ ರೀತಿ ಸಂಪರ್ಕ ಸಮಸ್ಯೆ ಆಗದೇ ಇರಲು ನಾವು ಈಗಲೇ ಪರಿಹಾರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸುಳ್ಯ ಕಡೆಯಿಂದ ಕೊಡಗನ್ನು ಸಂಪರ್ಕಿಸಲು ಕಚ್ಚಾ ರಸ್ತೆಗಳಿದೆ. ಈ ರಸ್ತೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಿದರೆ ಕರಾವಳಿ ಭಾಗದ ಜನರು ಕೊಡಗನ್ನು ಸಂಪರ್ಕಿಸಲು ಸಹಾಯವಾಗುತ್ತದೆ.

    ಯಾವೆಲ್ಲ ರಸ್ತೆಗಳಿವೆ?
    ಮಾರ್ಗ 1: ಕಲ್ಲುಗುಂಡಿ – ಬಾಲಂಬಿ- ದಬ್ಬಡ್ಕ- ಚೆಟ್ಟಿಮಾನಿ- ಮಡಿಕೇರಿ ರಸ್ತೆ
    ಈ ರಸ್ತೆಯ ಮೂಲಕ ಸುಳ್ಯದಿಂದ ಮಡಿಕೇರಿಗೆ ಇರುವ ದೂರ ಕೇವಲ 72 ಕಿಲೋ ಮೀಟರ್. ಕಲ್ಲುಗುಂಡಿಯಿದ್ದ ದಬ್ಬಡ್ಕದವರೆಗೆ ಡಾಂಬರ್ ಹಾಕಲಾಗಿದ್ದು, ಕಾಂತಬೈಲು ಸಮೀಪ ಎರಡು ಕಡೆ ಸಣ್ಣ ಸೇತುವೆಗಳು ನಿರ್ಮಾಣವಾದರೆ ಸುಲಭವಾಗಿ ಚೆಟ್ಟಿಮಾನಿ ತಲುಪಬಹುದು. ಬೇಸಿಗೆ ಸಮಯದಲ್ಲಿ ಈ ರಸ್ತೆಯಲ್ಲಿ ದಬ್ಬಡ್ಕದವರೆಗೂ ಬಸ್ ಸಂಚಾರವಿದೆ. ಲೋಕೋಪಯೋಗಿ ಅಧಿಕಾರಿಗಳು ಮನಸ್ಸು ಮಾಡಿದರೆ ಸುಳ್ಯದಿಂದ ಮಡಿಕೇರಿಗೆ ಒಂದುವರೆ ಗಂಟೆಯಲ್ಲಿ ತಲುಪಬಹುದಾಗಿದೆ.

    ಮಾರ್ಗ 2: ಅರಂತೋಡು-ಮರ್ಕಂಜ- ಎಲಿಮಲೆ- ಸುಬ್ರಹ್ಮಣ್ಯ- ಕಡಮಕಲ್- ಗಾಳಿಬೀಡು- ಮಡಿಕೇರಿ ರಸ್ತೆ
    ಅರಂತೋಡಿನಿಂದ ಕುಕ್ಕೆಸುಬ್ರಹ್ಮಣ್ಯದವರೆಗೆ ಯಾವುದೇ ಸಮಸ್ಯೆ ಇಲ್ಲ. ಸುಬ್ರಹ್ಮಣ್ಯದಿಂದ ಕಡಮಕಲ್ ಮತ್ತು ಗಾಳಿಬೀಡು ನಡುವೆ ಅರಣ್ಯ ಇಲಾಖೆ ಅಳವಡಿಸಿರುವ ಗೇಟ್ ತೆರವುಗೊಳಿಸಿ ಇರುವ ರಸ್ತೆಯನ್ನು ಕೊಂಚ ಅಗಲೀಕರಣ ಮಾಡಿದರೆ ಸುಬ್ರಹ್ಮಣ್ಯದಿಂದ ಮಡಿಕೇರಿಗೆ ಇರುವ 38 ಕಿ.ಮೀ ದೂರವನ್ನು ಮುಕ್ಕಾಲು ಗಂಟೆಯಲ್ಲಿ ಕ್ರಮಿಸಬಹುದು.

    ಮಾರ್ಗ 3: ಸುಳ್ಯ- ಆಲೆಟ್ಟಿ- ಪಾಣತ್ತೂರು- ಕರಿಕೆ- ಭಾಗಮಂಡಲ- ಮಡಿಕೇರಿ ರಸ್ತೆ
    ಸದ್ಯಕ್ಕೆ ಸುಳ್ಯ ಮತ್ತು ಕೊಡಗನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗ. ಆಲೆಟ್ಟಿ ಪಾಣತ್ತೂರು ರಸ್ತೆಯ ಮೂಲಕ ಮಡಿಕೇರಿಗೆ ಪ್ರಯಾಣಿಸಬೇಕಾದರೆ ನೂರೈವತ್ತು ಕಿಲೋ ಮೀಟರ್ ಗಳಿಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಾಗುತ್ತದೆ. ಲಘು ವಾಹನಗಳು ಮಾತ್ರ ಓಡಬಹುದಾಗಿರುವ ಈ ರಸ್ತೆಯಲ್ಲಿ ಘನ ವಾಹನಗಳ ಓಡಾಟ ಕಷ್ಟ.

    ಆಗುತ್ತಾ ರಸ್ತೆ?
    ಸದ್ಯಕ್ಕೆ ಚಾರ್ಮಾಡಿ ಘಾಟಿಯೊಂದೇ ಕರಾವಳಿಯಿಂದ ಬೆಂಗಳೂರಿಗೆ ತೆರಳುವ ಸುಲಭದ ಮಾರ್ಗವಾಗಿದೆ. ಒಂದು ವೇಳೆ ಗುಡ್ಡ ಜರಿದರೆ ಅಥವಾ ವಾಹನಗಳು ಪಲ್ಟಿಯಾದರೆ ರಸ್ತೆ ಸಂಪರ್ಕ ಕಡಿದುಕೊಳ್ಳುತ್ತದೆ. ಈಗಾಗಲೇ ವಾಹನಗಳು ಸಂಚರಿಸಲು ಹರಸಾಹಸ ಪಡುತಿದ್ದು, ಈ ರಸ್ತೆಯೂ ಬಂದ್ ಆದರೆ ಜನರ ಬದುಕು ದುಸ್ತರವಾಗಲಿದೆ. ಹೀಗಾಗಿ ಸರ್ಕಾರ ಪರ್ಯಾಯ ಮಾರ್ಗವನ್ನು ಅಭಿವೃದ್ಧಿ ಪಡಿಸಿದರೆ ಮುಂದೆ ಅಗಲಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದಂತೆ ಆಗುತ್ತದೆ. ಅನಿವಾರ್ಯತೆ ಇರುವ ಕಾರಣ ಜನ ಪ್ರತಿನಿಧಿಗಳು ಮನಸ್ಸು ಮಾಡಿ ಈ ರಸ್ತೆ ನಿರ್ಮಾಣವಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!

    – ಈ ಜಲಪ್ರಳಯದಲ್ಲಿ ಬದುಕಿ ಬಂದಿರುವುದೇ ಹೆಚ್ಚು

    ಮಡಿಕೇರಿ: ಕೊಡಗಿನ 2 ಮನೆಗಳಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಬೇಕಿತ್ತು. ಆದರೆ ಜಲ ಪ್ರವಾಹದ ಎಫೆಕ್ಟ್ ನಿಂದಾಗಿ ಆ ಮನೆಯವರೆಲ್ಲ ಇದೀಗ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.

    ಮಕ್ಕಂದೂರು ಗ್ರಾಮದ ಇಬ್ಬರು ಯುವತಿಯರ ಮದುವೆ ಆಗಸ್ಟ್ 26 ಹಾಗೂ ಸೆಪ್ಟೆಂಬರ್ 12 ಕ್ಕೆ ನಿಗದಿಯಾಗಿತ್ತು. ಮಂಜುಳಾ ಮದುವೆ ಇದೇ 26ಕ್ಕೆ ಕೇರಳದ ಹುಡುಗನ ನಿಶ್ಚಯವಾಗಿತ್ತು. ಮಕ್ಕಂದೂರಿನ ಕಲ್ಯಾಣ ಮಂಟಪದಲ್ಲಿ ಬುಕ್ ಆಗಿತ್ತು. ಮದುವೆ ಸಂಭ್ರಮಕ್ಕೆ ಚಿನ್ನಾಭರಣ, ಬಟ್ಟೆಗಳನ್ನು ಖರೀದಿಸಲಾಗಿತ್ತು.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಂಜುಳ, ಮದುವೆಗಾಗಿ ಎಲ್ಲ ಸಿದ್ಧತೆಗಳು ನಡೆದಿತ್ತು. ಜಲಪ್ರಳಯದಿಂದ ಅವುಗಳೆಲ್ಲವೂ ಇದೆಯೇ ಅಥವಾ ನಾಶವಾಗಿದೆಯೇ ಎನ್ನುವುದು ಗೊತ್ತಿಲ್ಲ. ನಾವು ಬದುಕಿ ಬಂದಿರುವುದೇ ಹೆಚ್ಚು ಎಂದು ಕಣ್ಣೀರು ಹಾಕಿದರು.

    ಇದೇ ರೀತಿ ಸೆಪ್ಟೆಂಬರ್ 12ಕ್ಕೆ ಕೇರಳ ಯುವಕನ ಜೊತೆ ಮದುವೆ ರಂಜಿತಾ ಎಂಬವರ ಮದುವೆ ನಿಗದಿಯಾಗಿದೆ. ಮದುವೆ ಬೇಕಾದ ತಯಾರಿಗಳೆಲ್ಲವೂ ನಡೆದಿರುವ ಕಾರಣ ವರನ ಕಡೆಯವರು ಯಾವುದೇ ಅಭ್ಯಂತರವಿಲ್ಲ. ಸರಳವಾಗಿ ಮದುವೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ನಿಗದಿಯಾಗಿದ್ದ ದಿನಾಂಕದಂದೇ ದೇವಾಲಯದಲ್ಲಿ ಸರಳವಾಗಿ ಇಬ್ಬರ ಮದುವೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದೇಶ್ವರ ಮಠದಿಂದ ಕೊಡಗಿಗಾಗಿ ನಿಧಿ ಸಂಗ್ರಹ ಪಾದಯಾತ್ರೆ

    ಸಿದ್ದೇಶ್ವರ ಮಠದಿಂದ ಕೊಡಗಿಗಾಗಿ ನಿಧಿ ಸಂಗ್ರಹ ಪಾದಯಾತ್ರೆ

    ಚಿಕ್ಕೋಡಿ: ಕೊಡಗು ನೆರೆ ಸಂತ್ರಸ್ತರಿಗಾಗಿ ಸ್ವಾಮೀಜಿಗಳು ಸ್ವತಃ ಬೀದಿಗೆ ಇಳಿದು ಹೆಗಲಿಗೆ ಜೋಳಿಗೆ ಹಾಕಿ ನಿಧಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.

    ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿ ಶ್ರೀ ಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಕೇವಲ ಒಂದು ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹ ಮಾಡಿದ್ದಾರೆ.

    ಅಡವಿ ಸಿದ್ದೇಶ್ವರ ಮಠದಿಂದ ಇಂದು ನಿಧಿ ಸಂಗ್ರಹ ಪಾದಯಾತ್ರೆ ಹುಕ್ಕೇರಿಯಲ್ಲಿ ಪ್ರಾರಂಭವಾಗಿದ್ದು, ಬುಧವಾರ ಸಹ ಮುಂದುವರಿಯಲಿದೆ. ನಾಳೆ ಸಾಯಂಕಾಲ ಸಂಕೇಶ್ವರ ಪಟ್ಟಣದಲ್ಲಿ ಸ್ವಾಮೀಜಿಗಳು ಜೋಳಿಗೆ ಹಾಕಿ ನಿಧಿ ಸಂಗ್ರಹಕ್ಕೆ ಮುಂದಾಗಲಿದ್ದು ಸ್ವಾಮೀಜಿಗಳು ಸೇರಿಸುವ ಹಣವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕೊಡಗಿನ ಜನತೆಗೆ ನೀಡಲಿದ್ದಾರೆ.

    ಈ ವೇಳೆ ಮಾತನಾಡಿದ ಶಿವಲಿಂಗೇಶ್ವರ ಸ್ವಾಮೀಜಿಗಳು ಮತ್ತು ಹುಕ್ಕೇರಿ ಮಠದ ಶಿವಾಚಾರ್ಯ ಸ್ವಾಮೀಜಿಗಳು ದೇವರಿಗೆ ದುಡ್ಡು ಖರ್ಚು ಮಾಡಿ ಅಭಿಷೇಕ ಮಾಡಿಸುವುದು ಕೇವಲ ನಮ್ಮ ಶಾಂತಿಗಾಗಿ, ಆದರೆ ಇಂತಹ ಕಾರ್ಯ ಮಾಡುವುದು ಸಮಾಜದ ಒಳಿತಿಗಾಗಿ ಅಂತ ಹೇಳಿದರು. ಅಲ್ಲದೆ ಈ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಎಲ್ಲ ರಾಜಕಾರಣಿಗಳು ಕೊಡಗಿನ ಜನತೆಯ ಪುನರುಜ್ಜೀವನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv