ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಮಳೆಗಾಲ ಶುರುವಾದ್ರೆ ಸಾಕು ಎಲ್ಲಿ, ಯಾವಾಗ, ಯಾವ ಬೆಟ್ಟ ಕುಸಿಯುತ್ತದೆಯೋ? ಎನ್ನುವ ಆತಂಕ ಶುರುವಾಗಿ ಬಿಡುತ್ತದೆ. ಇದರ ನಡುವೆ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ಬೆಟ್ಟದ ನಿವಾಸಿಗಳಿಗೆ ಭೂಕುಸಿತ (Landslide) ಉಂಟಾಗುವ ಅತಂಕ ಎದುರಾಗಿದ್ರೂ ಬೆಟ್ಟದಲ್ಲಿಯೇ ಬದುಕು ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಡಿಕೇರಿ (Madikeri) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 2-3 ದಿನಗಳಿಂದ ನಿರಂತರ ಮಳೆಯಾಗುತ್ತಿರೋದ್ರಿಂದ (Heavy Rain) ಮೇಕೇರಿ ಗ್ರಾಮದಲ್ಲಿ ನವಗ್ರಾಮ ಹಾಗೂ ಶಕ್ತಿ ನಗರದಲ್ಲಿ ಭೂಕುಸಿತದ ಅತಂಕ ಮನೆ ಮಾಡಿದೆ. ಈ ವ್ಯಾಪ್ತಿಯ ಬೆಟ್ಟದ ತಪ್ಪಲಿನಲ್ಲಿರುವ ಸುಮಾರು 13 ಮನೆಗಳು ಅಪಾಯದ ಅಂಚಿನಲ್ಲಿದ್ದು ಕೆಲ ಮನೆಗಳ ಹಿಂಭಾಗದ ನೆಲ ಬಿರುಕು ಬಿಟ್ಟಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಟ್ಟದ ಮೇಲಿರುವ ಮನೆಗಳ ಹಿಂಬದಿಯ ಗುಡ್ಡಗಳು ಜರುಗುತ್ತಿದೆ.
ಇದೀಗ ಮಳೆ ಹೆಚ್ಚಾದ ಹಿನ್ನೆಲೆ ನೆಲ ಕೂಡ ಬಿರುಕುಬಿಟ್ಟಿದೆ. ಇನ್ನೂ ಬೆಟ್ಟದಲ್ಲಿ ಭೂಕುಸಿತದ ಭೀತಿ ಇರುವುದರಿಂದ ಈಗಾಗಲೇ ಅಲ್ಲಿನ ಮೂರು ಮನೆಗಳಿಗೆ ತೆರಳಲು ಇದ್ದ ಸಣ್ಣ ಕಾಲು ದಾರಿ ಕೂಡ ಮುಚ್ಚಿಹೋಗಿದೆ. ಮುಂಜಾಗ್ರತಾ ಕ್ರಮವಾಗಿ 3 ಕುಟುಂಬಗಳೂ ಸದ್ಯ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇದನ್ನೂ ಓದಿ: ಬೇಲ್ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ
ಇನ್ನೂ ಈ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಹತ್ತಾರು ಕುಟುಂಬಗಳು 2018 ರಿಂದಲ್ಲೇ ಬೆಟ್ಟದ ಮೇಲೆ ಆತಂಕ ನಡುವೆ ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ಕಳೆದ ವರ್ಷದಿಂದ ಈ ವರ್ಷದ ಮಳೆಗಾಲದಿಂದ ಹಲವೆಡೆ ಚಿಕ್ಕಪುಟ್ಟ ಭೂಕುಸಿತಗಳು ಆಗಿವೆ. ಹೀಗಾಗಿ ಇಲ್ಲಿನ ಜನರು ನಿತ್ಯ ಭಯದಲ್ಲೇ ಜೀವನ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿಎಂ ನಿತೀಶ್ ಕುಮಾರ್ ಪಕ್ಷದ ನಾಯಕನ ಬರ್ಬರ ಹತ್ಯೆ – ನಾಲ್ಕೇ ದಿನಗಳಲ್ಲಿ 2ನೇ ರಾಜಕೀಯ ಹತ್ಯೆ
ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರನ್ನು ಕೇಳಿದ್ರೆ. ಹಲವಾರು ವರ್ಷಗಳಿಂದ ಇಲ್ಲಿನ ಜನರು ಭಯದ ವಾತಾವರಣದಲ್ಲೇ ಮಳೆಗಾಲವನ್ನು ಕಳೆಯುತ್ತಿದ್ದಾರೆ. ಇವರ ಸಮಸ್ಯೆ ಬಗ್ಗೆ ಅನೇಕ ಬಾರಿ ಜಿಲ್ಲಾಡಳಿತ ಹಾಗೂ ಶಾಸಕರ ಬಳಿ ಇಲ್ಲಿನ ಸಮಸ್ಯೆ ಬಗ್ಗೆ ಗಮನ ಸೇಳೆಯಲಾಗಿದೆ. ಶಾಸಕ ಎ.ಎಸ್ ಪೋನ್ನಣ್ಣ ಅವರು ಮುಂದಿನ ದಿನಗಳಲ್ಲಿ ಸ್ಪಂದಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಭೀಮಾತೀರದ ಹಂತಕನ ಮಾಜಿ ಶಿಷ್ಯ ಸುಶೀಲ್ ಕಾಳೆ ಹತ್ಯೆ ಕೇಸ್ – ಪರಾರಿಯಾಗಿದ್ದ ನಾಲ್ವರು ಅರೆಸ್ಟ್
ಪಂಚಾಯಿತಿ ಪಿಡಿಓ ಇದಕ್ಕೆ ಪ್ರತಿಕ್ರಿಯಿಸಿದ್ದು, ಬೆಟ್ಟದ ನಿವಾಸಿಗಳು ಡೇಂಜರ್ ಪರಿಸ್ಥಿತಿಯಲ್ಲಿದ್ದಾರೆ. ಈ ಭಾಗದ ಜನರ ಪರಿಸ್ಥಿತಿ ಬಗ್ಗೆ ಸಂಬಂಧಪಟ್ಟ ಇಲಾಖೆಯ ಆದಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಅವರ ಜೀವದ ರಕ್ಷಣೆ ನಮ್ಮ ಹೋಣೆಯಾಗಿರುವುದರಿಂದ ಅವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದೇವೆ ಬಾರೀ ಮಳೆಯಾಗುವ ಸಂದರ್ಭದಲ್ಲಿ ಒತ್ತಾಯ ಪೂರ್ವಕವಾಗಿ ಕಾಳಜಿ ಕೇಂದ್ರಗಳಿಗೆ ಕರೆತರಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: India’s Cleanest City: ದೇಶದ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ಇಂದೋರ್ ನಂ.1 – ಮೈಸೂರಿಗೆ 3ನೇ ಸ್ಥಾನ
ದೇವರನಾಡು ಕೇರಳದ (Kerala) ಮೇಲೆ ನಿಸರ್ಗಮಾತೆ ಮುನಿಸಿಕೊಂಡಿದ್ದಾಳೆ. ವಯನಾಡಿನಲ್ಲಿ (Wayanad) ಮುಂಡಕ್ಕೈ, ಚುರಲ್ಮಲದಲ್ಲಿ ಸಂಭವಿಸಿದ ದುರಂತದಿಂದ ಆಸ್ತಿಪಾಸ್ತಿ ಹಾನಿ, ಪ್ರಾಣಹಾನಿ ವರದಿಯಾಗುತ್ತಲೇ ಇದೆ. ನಿಸರ್ಗದೇವಿಯ ಕೋಪಕ್ಕೀಡಾಗಿರುವ ಜನ ತಮ್ಮನ್ನು ತಾವು ಸುರಕ್ಷಿತ ನೆಲೆಗಳಿಗೆ ಪಾರು ಮಾಡಿಕೊಳ್ಳಲು ಹೋರಾಡುತ್ತಿರುವ ದೃಶ್ಯಗಳಂತು ಎದೆ ಝಲ್ ಎನಿಸುತ್ತಿವೆ. ಕೇಂದ್ರ ಹಾಗೂ ರಾಜ್ಯಗಳ ನೈಸರ್ಗಿಕ ವಿಕೋಪ ನಿರ್ವಹಣಾ ಪಡೆಗಳು, ಸೇನೆ, ನೌಕಾಪಡೆ ಮತ್ತು ವಾಯುಪಡೆ ಯೋಧರು ಜೀವ ಉಳಿಸಿಕೊಳ್ಳಲು ಹಾತೊರೆಯುತ್ತಿದ್ದವರನ್ನ ಹುಡುಕಿ ಮೇಲಕ್ಕೆತ್ತಿದ್ದಾರೆ. ಮಣ್ಣಿನಡಿ ಜೀವ ಬಿಟ್ಟವರನ್ನ ಭೂಮಿ ಬಗೆದು ಹೊರಕ್ಕೆ ತೆಗೆಯುತ್ತಿದ್ದಾರೆ. ಇನ್ನೂ ಕಣ್ಣಿಗೆ ಕಾಣದ ಅದೆಷ್ಟೋ ಶವಗಳು ಮಣ್ಣಿನಲ್ಲಿ ಊತು ಹೋಗಿವೆ. ಸತತ 9ನೇ ದಿನವೂ ಸೇನಾ (Army) ಕಾರ್ಯಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿವೆ.
Wayanad landslides
ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ ತೀರ ಅಸಹಜವಾದುದ್ದೇನಲ್ಲ. ನೀಲಗಿರಿ ಬೆಟ್ಟಗಳಲ್ಲಿಯೂ (Nilgiri Hills) ನೂರಾರು ವರ್ಷಗಳಿಂದ ಭೂಕುಸಿತವಾದ ದಾಖಲೆಗಳಿವೆ. 2009ರ ನವೆಂಬರ್ನಲ್ಲಿ ಕೇವಲ 5 ದಿನಗಳಲ್ಲಿ 1,150 ಭೂಕುಸಿತ ಸಂಭವಿಸಿತ್ತು. ಇದನ್ನು ಅಧ್ಯಯನ ಮಾಡಿರುವ ತಜ್ಞರು ಮೊದಲು ಕೈತೋರಿಸಿದ್ದು ವ್ಯಾಪಕವಾಗಿ ತಲೆ ಎತ್ತಿದ್ದ ಟೀ ತೋಟಗಳತ್ತ. ಅದಕ್ಕಾಗಿ ಮಾಡಿರುವ ಅರಣ್ಯ ಆಕ್ರಮಣದತ್ತ. ನೀಲಗಿರಿ ಕೂಡ ಭೂಕಂಪನ ವಲಯದಲ್ಲೇ ಇದ್ದರೂ ಅದರಿಂದ ಆಗಿರುವ ನಷ್ಟಕ್ಕಿಂತ ಭೂಕುಸಿತ ತಂದಿರುವ ನಷ್ಟವೇ ಹೆಚ್ಚು ಎಂಬುದು ತಜ್ಞರ ಅಭಿಪ್ರಾಯ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿ ಅತ್ಯಂತ ಸೂಕ್ಷ್ಮ ಪರ್ವತ ಸಾಲುಗಳಲ್ಲಿ ಒಂದು. ಇದು ಇಡೀ ದಖ್ಖನ್ ಪ್ರಸ್ಥಭೂಮಿಯ ಜೀವಸೆಲೆ ಇಡೀ ಭರತ ಖಂಡದ ಹವಾಮಾನ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಪೂರ್ವ ಹಿಮಾಲಯವನ್ನು ಬಿಟ್ಟರೆ ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ 2ನೇ ಭಂಡಾರವಾಗಿದೆ. ಜಗತ್ತಿನ 8 ಜೀವ ವೈವಿಧ್ಯತೆಯ ಸೂಕ್ಷ್ಮ ಪರಿಸರ ತಾಣಗಳಲ್ಲಿ ಪಶ್ಚಿಮ ಘಟ್ಟವನ್ನು ಒಂದು ಪ್ರಮುಖ ತಾಣವೆಂದು ಪರಿಗಣಿಸಲಾಗಿದೆ.
ಇಂತಹ ಹೊತ್ತಿನಲ್ಲಿ ಕಳೆದ ಕೆಲ ವರ್ಷಗಳಲ್ಲಿ ದಕ್ಷಿಣ ಭಾರತವನ್ನ ಕಾಡಿದ ಭೂಕುಸಿತಗಳು ನಮ್ಮ ಕಣ್ಣಿಗೆ ಕಟ್ಟಿದಂತಿವೆ. ಕೇರಳದ ವಯನಾಡಿನ ಕಳೆದ ಜುಲೈ 30 ರಂದು ಸಂಭವಿಸಿದ ಭೂಕುಸಿತ, ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಉಂಟಾದ ಗುಡ್ಡ ಕುಸಿತ ದುರಂತ ಹಾಗೂ 2018ರಲ್ಲಿ ಸಂಭವಿಸಿದ ಕೊಡಕು ಭೂಕುಸಿತ ಇಡೀ ದಕ್ಷಿಣ ಭಾರತದ ಜನರ ಕಣ್ಣಿಗೆ ಕಟ್ಟಿದಂತಿವೆ. ಅವುಗಳ ಬಗ್ಗೆ ತಿಳಿಯಲು ಒಮ್ಮೆ ಕಣ್ಣು ಹಾಯಿಸೋಣ…
ಕೊಡಗಿಗೆ ʻಆಗಸ್ಟ್ ಆತಂಕʼ
2018ರ ಆಗಸ್ಟ್ 13 ರಿಂದ 17ರ ತನಕ ಕೊಡಗು (Kodagu) ಅಕ್ಷರಶಃ ತತ್ತರಿಸಿ ಹೋಗಿತ್ತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಅನೇಕ ಕಡೆಗಳಲ್ಲಿ ಮಹಾಮಳೆ ಸುರಿದ ಬೆನ್ನಲ್ಲೇ ಬೆಟ್ಟಗಳು ಕುಸಿದು ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಸಾವಿರಕ್ಕೂ ಅಧಿಕ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದರು. ಹಲವರು ಜೀವ ಕಳೆದುಕೊಂಡರು. ಬೆಟ್ಟ ಕುಸಿತದಿಂದ ತೋಟಗಳೂ ನಾಶವಾಗಿ ಜನರ ಬದುಕನ್ನೇ ಮೂರಾಬಟ್ಟೆ ಮಾಡಿಬಿಟ್ಟಿತು. ಅಂದಿನ ದುರಂತದಲ್ಲಿ 20 ಜನ ಸಾವನ್ನಪ್ಪಿದರು, 4,056 ಮನೆಗಳಿಗೆ ಹಾನಿಯಾಯಿತು ಮತ್ತು ಕೊಡಗಿನಲ್ಲಿ 18,000 ಜನರನ್ನು ಸ್ಥಳಾಂತರಿಸಲಾಗಿತ್ತು. ಇದು ಜಿಲ್ಲೆಯು ಅನುಭವಿಸಿದ ಮೊದಲ ಬೃಹತ್ ದುರಂತ ಮತ್ತು ಕರ್ನಾಟಕದಲ್ಲಿ ಮೊದಲ ಮಹತ್ವದ ಭೂಕುಸಿತ ಸಂಬಂಧಿತ ವಿಪತ್ತು ಆಗಿತ್ತು. ಭೂಕುಸಿತದ ಆರ್ಭಟಕ್ಕೆ ಮನೆಗಳು ಆಟಿಕೆಗಳಂತೆ ತೇಲಿ ಹೋಗಿದ್ದವು. ದುಃಸ್ವಪ್ನದಂತೆ ಕಳೆದು ಹೋದ ಆ ದುರ್ಘಟನೆಗೆ ಕಾರಣವಾದ ವೈಜ್ಞಾನಿಕ ಅಂಶಗಳ ಬಗ್ಗೆ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಹಾನಿಗೀಡಾದ ಜಾಗವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಕೃತಿ ತನ್ನ ಕೆಲಸವನ್ನು ಸದ್ದಿಲ್ಲದೆ ನಡೆಸುತ್ತಿದೆ.
ಇಂತಹ ಹೊತ್ತಿನಲ್ಲಿ ಕೊಡಗಿನಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಈ ಹಿಂದೆ ಅಪಾಯ ಸಂಭವಿಸಿದ ಪ್ರದೇಶಗಳ ಆಧಾರದಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳನ್ನು ‘ಮ್ಯಾಪಿಂಗ್’ ಮಾಡಲಾಗಿದ್ದು, ಅಪಾಯದ ಸ್ಥಳದಲ್ಲಿರುವ 2,995 ಕುಟುಂಬಗಳು ಸ್ಥಳಾಂತರಕ್ಕೆಂದು ಗುರುತು ಮಾಡಲಾಗಿದೆ. ಮಳೆಗಾಲದಲ್ಲಿಯೂ ಗ್ರಾಮೀಣ ಪ್ರದೇಶಗಳ ಜನತೆ ಭೂಕುಸಿತ, ಪ್ರವಾಹದ ಭಯದಲ್ಲಿ ದಿನದೂಡಬೇಕಾದ ಪರಿಸ್ಥಿತಿ ಬಂದಿದ್ದು, ಪ್ರಕೃತಿ ಮುನಿಯದಿರಲಿ ಎಂಬ ಪ್ರಾರ್ಥನೆ ಮೊಳಗುತ್ತಿದೆ.
ಅಭಿವೃದ್ಧಿಯೇ ಕೊಡಗನ್ನು ಕಾಡುತ್ತಿದೆಯೇ?
ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಕಷ್ಟ-ನಷ್ಟ ಸಾವು-ನೋವುಗಳನ್ನು ಅಧಿಕ ಮಳೆಯಲ್ಲಿ ಅನುಭವಿಸಿದ ಪ್ರದೇಶ ಕೊಡಗು ಜಿಲ್ಲೆ. ಪರಿಸರ ಪ್ರಿಯರು ನಿರಂತರವಾಗಿ ಕೊಡಗಿನಲ್ಲಿ ಜಾರಿಯಾಗಿರುವ, ಜಾರಿಯಾಗುತ್ತಿರುವ ಹಲವಾರು ಯೋಜನೆಗಳ ವಿರುದ್ಧ ಧ್ವನಿಯೆತ್ತಿ ಪ್ರತಿಭಟಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ತೀರಾ ಇತ್ತೀಚೆಗೆ ಕೊಡಗಿನ ಮೂಲಕ ಹಾದು ಹೋಗಲಿರುವ ಎರಡು ರೈಲ್ವೇ ಮಾರ್ಗ ನಿರ್ಮಾಣ ಯೋಜನೆಗಳಿಗೆ ಸಂಘಟಿತವಾಗಿ ವಿರೋಧ ವ್ಯಕ್ತವಾಗಿತ್ತು. ಒಂದು ರೈಲ್ವೇ ಮಾರ್ಗ ಕೇರಳದ ತಲಶ್ಶೇರಿಯಿಂದ ದಕ್ಷಿಣ ಕೊಡಗಿನ ಮೂಲಕ ಮೈಸೂರಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಯೋಜನೆ. ಮತ್ತೊಂದು ಹುಣಸೂರಿನಿಂದ ಪಿರಿಯಾಪಟ್ಟಣ ಮಾರ್ಗವಾಗಿ ಕುಶಾಲನಗರ ಮೂಲಕ ಮಂಗಳೂರು ತಲುಪುವ ಯೋಜನೆ. ಈ ಎರಡೂ ಯೋಜನೆಗಳಿಗೆ ಪಶ್ಚಿಮ ಘಟ್ಟಗಳ ಹಲವಾರು ಗುಡ್ಡಗಳನ್ನು ಕಡಿದೇ ರೈಲು ಮಾರ್ಗ ನಿರ್ಮಾಣ ಮಾಡಬೇಕಾಗುತ್ತದೆ. ಈ ಯೋಜನೆಗಳಿಗೆ ಎರಡು ಲಕ್ಷ ಮರಗಳು ಬಲಿಯಾಗುತ್ತವೆಂಬ ಆತಂಕವನ್ನು ಪರಿಸರ ಕಾರ್ಯಕರ್ತರು ವ್ಯಕ್ತಪಡಿಸಿದ್ದರು. ಈ ಅರಣ್ಯ ನಾಶದಿಂದ ಆನೆ, ಕರಡಿಗಳಿಗೆ ಅಡಚಣೆಯುಂಟಾಗಿ ವನ್ಯಜೀವಿ ಮಾನವ ಸಂಘರ್ಷ ಮತ್ತಷ್ಟು ಉಲ್ಬಣಿಸಲಿದೆ ಎಂಬ ಆತಂಕನ್ನು ತಜ್ಞರು ವ್ಯಕ್ತಪಡಿಸಿದ್ದರು. ಈ ಸಂಘರ್ಷ ಕೊಡಗಿನಲ್ಲಿ ಅನೇಕ ಜನರ ಜೀವ ಬಲಿ ಪಡೆದಿದೆ.
ಸ್ಥಳೀಯ ಮೂಲಗಳ ಪ್ರಕಾರ, ಕೊಡಗು ಜಿಲ್ಲೆಯಲ್ಲಿ ಅಂದಾಜು 4 ಸಾವಿರಕ್ಕೂ ಅಧಿಕ ಹೋಂಸ್ಟೇಗಳಿವೆ. ಅಧಿಕೃತ ಹೋಮ್ಸ್ಟೇಗಳಿಗಿಂತ ಅನಧಿಕೃತ ಹೋಮ್ಸ್ಟೇಗಳೇ ಹತ್ತಾರು ಪಟ್ಟು ಹೆಚ್ಚಾಗಿವೆ. ಇದಲ್ಲದೇ ಅನೇಕ ಐಷಾರಾಮಿ ರೆಸಾರ್ಟ್ಗಳು ಖಾಸಗಿ ವಿಲ್ಲಾಗಳು ಕಾರ್ಯಾಚರಣೆ ನಡೆಸುತ್ತಿವೆ. ರಜಾ ದಿನಗಳಲ್ಲಿ ಪ್ರವಾಸಿಗರ ಮಹಾ ಪ್ರವಾಹದ ಕಾಲ್ತುಳಿತಕ್ಕೆ ಕೊಡಗಿನ ಪರಿಸರ ತತ್ತರಿಸಿ ಹೋಗುತ್ತಿದೆ. ಪ್ರವಾಸಿಗರ ಆಕರ್ಷಣೆಗೆ, ಅನುಕೂಲಕ್ಕೆ ಓಡಾಟ ಹಾಗೂ ಮೋಜು-ಮಸ್ತಿಗೆ ಕೊಡಗಿನ ಪರಿಸರವನ್ನ ಕೊಚ್ಚೆಗುಂಡಿ ಮಾಡಿ ಹಾಳುಗೆಡವಲಾಗುತ್ತಿದೆ. ಸುಮಾರು ಎಂಟು ವರ್ಷಗಳ ಹಿಂದೆ ಕೇರಳ ರಾಜ್ಯದ ಕೋಝಿಕ್ಕೋಡ್ಗೆ ಮೈಸೂರು, ಕೊಡಗು ಮೂಲಕ ಎಳೆಯಲಾದ ಹೈಟೆಶ್ಶನ್ ವಿದ್ಯುತ್ ಮಾರ್ಗಕ್ಕೆ ಅಂದಾಜು 56,000 ಮರಗಳು ಬಲಿಯಾಗಿವೆ.
ಕೊಡಗಿನ ಮೂಲಕ 4 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಕೊಡಗಿನ ಅರಣ್ಯ ಪ್ರದೇಶದ ಮೇಲೆ ವ್ಯಾಪಕ ದುಷ್ಪರಿಣಾಮ ಉಂಟಾಗಿದೆ. ಅಭಯಾರಣ್ಯಗಳಿಂದ ಹೊರದೂಡಿಸಿಕೊಂಡ ವಸತಿ ಹೀನರಿಗೆ ಕೊಡಗಿನ ಗುಡ್ಡಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಕೃಷಿ ಭೂಮಿಯ ಹಾಗೂ ಎಸ್ಟೇಟ್ ಗಳ ಪಕ್ಕದಲ್ಲಿ ವ್ಯಾಪಕ ಒತ್ತುವರಿ ನಡೆಯುತ್ತಿದೆ. ಇಂಥ ಅಪಾಯಕಾರಿ ಯೋಜನೆಗಳಿಂದಾಗಿ ಕೊಡಗಿನ ಅರಣ್ಯ ಪ್ರದೇಶ 102 ಚದರ ಕಿಮೀ ಕಡಿಮೆಯಾಗಿದೆ ಎಂದು ಭಾರತೀಯ ಅರಣ್ಯ ಸರ್ವೇಕ್ಷಣ ಇಲಾಖೆಯ ವಾರ್ಷಿಕ ವರದಿ ಹೇಳಿದೆ.
ಮೇಲಿನ ಎಲ್ಲ ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕಾವೇರಿ ನದಿಯು ಬೇಸಿಗೆಯ ಮೂರು ತಿಂಗಳು ಬತ್ತಿ ಹೋಗುತ್ತಿದೆ. ನದಿಯ ಅಂಚಿನಲ್ಲಿ ರೆಸಾರ್ಟ್ ಹೋಂಸ್ಟೇ ನಿರ್ಮಿಸಲು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿದು ಗುಡ್ಡಗಳ ಇಳಿಜಾರಿನ ಪ್ರದೇಶಗಳನ್ನು ಕಟ್ಟಡ ನಿರ್ಮಾಣಕ್ಕೆ ಸಿದ್ಧಪಡಿಸಲು ಅಸ್ಥಿರಗೊಳಿಸಲಾಗಿದೆ. ಮಣ್ಣಿಗೆ ಸ್ಥಿರತೆಯನ್ನು ನೀಡಿ ಅಂತರ್ಜಲ ವರ್ಧನೆ ಮಾಡುತ್ತಿದ್ದ ಕಾಡುಜಾತಿಯ ಮರಗಳನ್ನು ತೆಗೆದು ಬರೀ ಸಿಲ್ವರ್ ಓಕ್ನಂಥ ಮರಗಳನ್ನು ನೆಡಲಾಗುತ್ತಿದೆ. ಈ ರೀತಿಯ ಚಟುವಟಿಕೆಗಳಿಂದಲೂ ವ್ಯಾಪಕ ಅರಣ್ಯನಾಶವಾಗಿ ಗುಡ್ಡ ಗುಡ್ಡಗಳೇ ಕುಸಿದು ಕಣ್ಮರೆಯಾಗುವ ಪರಿಸ್ಥಿತಿಯನ್ನು ವಿನಾಶಕಾರಿ ಅಭಿವೃದ್ಧಿ ಯೋಜನೆಗಳು ಕೊಡಗಿನಲ್ಲಿ ಸೃಷ್ಟಿಸಿವೆ ಎಂದು ಪರಿಸರ ತಜ್ಞರು ಹೇಳುತ್ತಾರೆ.
ಕೇರಳವನ್ನು ನಡುಗಿಸಿದ ಭೂಕುಸಿತಗಳು
ಕೇರಳಕ್ಕೆ ಪ್ರವಾಹ ಅಪ್ಪಳಿಸಿರುವುದು ಇದೇ ಮೊದಲೇನಲ್ಲ. 2019ರ ಆಗಸ್ಟ್ 6ರಂದು ಪುತ್ತುಮಲ ಸಮೀಪದಲ್ಲಿ ಭೂಕುಸಿತ ಉಟಾಗಿ 17 ಜನ ಸಾವಿಗೀಡಾಗಿದ್ದರು. ಈ ಪೈಕಿ ಐವರ ಮೃತದೇಹಗಳು ಪತ್ತೆಯಾಗಲೇ ಇಲ್ಲ. 65 ಮನೆಗಳು ಸಂಪೂರ್ಣ ಹಾನಿಗೆ ಒಳಗಾದವು. ಆದ್ರೆ ಇದಕ್ಕೂ ಮುನ್ನ ಕೇರಳದಲ್ಲಿ 2018ರಲ್ಲಿ ಕೇರಳ ಶತಮಾನಗಳಲ್ಲೇ ಅತೀ ಭೀಕರ ಪ್ರವಾಹವೊಂದನ್ನು ಎದುರಿಸಿತ್ತು. ಸುಮಾರು 483 ಮಂದಿ ಜೀವ ಕಳೆದುಕೊಂಡಿದ್ದರು. ವ್ಯಾಪಕ ಹಾನಿಯನ್ನುಂಟುಮಾಡಿತ್ತು ಈ ಪ್ರವಾಹ.
2020 – ಪೆಟ್ಟಿಮುಡಿ: ಪೆಟ್ಟಿಮುಡಿಯಲ್ಲಿ 2020ರ ಆಗಸ್ಟ್ 6 ರಂದು ರಾತ್ರಿ 10:30ರ ವೇಳೆಗೆ ದುರಂತ ಸಂಭವಿಸಿದ ಸ್ವಲ್ಪ ಸಮಯದಲ್ಲೇ ಎಲ್ಲವೂ ನೆಲದಡಿಯಲ್ಲಿ ಹೂತುಹೋಗಿದ್ದವು. ಅಂದು ಕೆಲಸ ಮುಗಿಸಿ ನಿದ್ರೆಗೆ ಜಾರಿದ್ದ ಜನರ ಮನೆಗಳ ಮೇಲೆ ಬಂಡೆಗಳು ಉರುಳಿ ಬಿದ್ದಿದ್ದವು. ಇದಾದ 10 ಗಂಟೆಗಳ ನಂತರ ಅನಾಹುತ ಸಂಭವಿಸಿರುವುದು ಹೊರಜಗತ್ತಿಗೆ ತಿಳಿದಿತ್ತು. ವಿಪತ್ತು ನಿರ್ವಹಣಾ ಪಡೆಗಳು ಮತ್ತು ವಿವಿಧ ಇಲಾಖೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. 500ಕ್ಕೂ ಹೆಚ್ಚು ಜನ ಕೋವಿಡ್ ಅನ್ನೂ ನಿರ್ಲಕ್ಷಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಸುಮಾರು 19 ದಿನಗಳ ಕಾಲ ಶವಗಳಿಗಾಗಿ ಹುಡುಕಾಟ ನಡೆಯಿತು. ಶೋಧದ ವೇಳೆ 14 ಕಿ.ಮೀ ದೂರದಿಂದ ಮೃತದೇಹಗಳು ಪತ್ತೆಯಾಗಿದ್ದವು. ರೀ ಮಳೆ, ಕೆಸರು, ವಿಪರೀತ ಚಳಿ ಮತ್ತು ಹಿಮವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು. ಅಂತಿಮವಾಗಿ 70 ಮಂದಿಗಳು ಜೀವ ಕಳೆದುಕೊಂಡಿದ್ದು ಪೂರ್ಣ ಕಾರ್ಯಾಚರಣೆ ಬಳಿಕ ಬೆಳಕಿಗೆ ಬಂದಿತು. 2024ರ ಜುಲೈ 30ರಂದು ವಯನಾಡಿನ ಮುಂಡಕ್ಕೈನಲ್ಲಿ ಸಂಭವಿಸಿದ ದುರಂತವೂ ಇದೀಗ ಇ ಕಹಿ ಘಟನೆಗಳನ್ನು ನೆನಪಿಸಿದೆ.
ಮರೆಯಲಾಗದ ಶಿರೂರು ಗುಡ್ಡ ಕುಸಿತ
ಜುಲೈ 15 ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುತ್ತಿದ್ದ ಎಲ್ಪಿಜಿ ಟ್ಯಾಂಕರ್ ಮೇಲೆ ಗುಡ್ಡ ಕುಸಿದು ಬಿದ್ದಿತ್ತು. ಈ ದುರ್ಘಟನೆಯಲ್ಲಿ ಹಲವಾರು ಜನ ಮೃತಪಟ್ಟಿದ್ದರು. ಹಲವರ ಶವವನ್ನು ಪತ್ತೆ ಮಾಡಿ ಹೊರತೆಗೆಯಲಾಗಿತ್ತು. ಇನ್ನು ಹಲವರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನದಿಯಲ್ಲಿ ತೇಲಿ ಹೋಗಿರಬಹುದೂ ಎಂಬ ಅನುಮಾನ ಇದೆ. ಈ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಶಿರೂರು ಗುಡ್ಡ ಕುಸಿತಕ್ಕೆ ಕಾರಣ ಏನು?
ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಗುಡ್ಡ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯ ಅವೈಜ್ಞಾನಿಕವಾಗಿ ಗುಡ್ಡ ಕೊರೆದಿರುವುದು ಒಂದು ಕಾರಣವಾದರೆ, ಗುಡ್ಡದ ಮೇಲಿನ ಪ್ರದೇಶದಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಇಂಗಿ ಗುಡ್ಡದಿಂದ ಒಸರುತ್ತಿರುವುದು ಮತ್ತೊಂದು ಕಾರಣ ಆಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ʻಗುಡ್ಡದ ಮೇಲೆ ಅರಣ್ಯ ಪ್ರದೇಶವಿದ್ದರೂ ನೀರು ಇಂಗಲು ಬಯಲು ಸೃಷ್ಟಿಯಾದಂತಿದೆ. ಅರಣ್ಯ ನಾಶ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಮೀಕ್ಷೆ ನಡೆಸುವುದು ಸೂಕ್ತ’ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ. ಹೆದ್ದಾರಿ ವಿಸ್ತರಣೆಗೆ ಗುಡ್ಡವನ್ನು ಲಂಬಕೋನದಲ್ಲಿ ಕತ್ತರಿಸಿದ್ದು ಅವಘಡಕ್ಕೆ ಕಾರಣವಾಗಬಹುದು ಎಂದು ಕೆಲ ತಿಂಗಳ ಹಿಂದೆ ಎಚ್ಚರಿಸಲಾಗಿತ್ತು. ಹೆದ್ದಾರಿ ನಿರ್ಮಾಣಕ್ಕೆ ಯಂತ್ರೋಪಕರಣಗಳ ನಿರಂತರ ಬಳಕೆಯಿಂದ ಗುಡ್ಡಗಳಿಗೆ ಹಾನಿ ಆಗಿರಬಹುದು. ಡ್ರಿಲ್ಲಿಂಗ್, ಬ್ಲಾಸ್ಟಿಂಗ್ ಸೇರಿ ಮಿತಿಮೀರಿ ಕಾಮಗಾರಿ ನಡೆದಿದೆ. ಈಗ ಎಲ್ಲವೂ ಕಂಪಿಸಿ, ಮಳೆಗಾಲದಲ್ಲಿ ಅಡ್ಡ ಪರಿಣಾಮ ಬೀರಿದೆ’ ಎಂದು ಪರಿಸರ ತಜ್ಞ ವಿ.ಎನ್.ನಾಯಕ ತಿಳಿಸಿದ್ದಾರೆ.
ಮಡಿಕೇರಿ: ದೇವರನಾಡು ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಜಲಸ್ಫೋಟ-ಗುಡ್ಡ ಕುಸಿತದ (Wayanad Landslides) ನಂತರ ಕೊಡಗು (Kodagu) ಜಿಲ್ಲೆಯಲ್ಲೂ ಆತಂಕದ ಕರಿಛಾಯೆ ಆವರಿಸಿದೆ. 2018ರಲ್ಲಿ ಸಂಭವಿಸಿದ ದುರಂತಗಳು ಕಣ್ಣ ಮುಂದೆ ಬರುತ್ತಿವೆ. ‘ಗುಡ್ಡದ ಭೂತ’ದ ಭಯವೂ ಮೂಡಿದೆ. ಮುಂಗಾರು ಅಬ್ಬರಿಸಿ ಬೊಬ್ಬಿರಿಯುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಬೆಟ್ಟ-ಗುಡ್ಡ, ನದಿ ಅಂಚಿನಲ್ಲಿ ಸೇರಿದಂತೆ ಅಪಾಯದ ಸ್ಥಳದಲ್ಲಿ ನೆಲೆನಿಂತಿರುವವರ ಸ್ಥಳಾಂತರ ಒಂದೇ ಪರಿಹಾರ ಎಂಬ ಚರ್ಚೆಯೂ ಎದ್ದಿದೆ.
ಕಳೆದ ಜು.31 ರಂದು ಕಂದಾಯ ಸಚಿವ ಕೃಷ್ಣಬೈರೇಗೌಡ (krishna byre gowda) ಅವರು ನೀಡಿರುವ ನಿರ್ದೇಶನವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ. ವಿಜ್ಞಾನಿಗಳ ವರದಿ, ಈ ಹಿಂದೆ ಅಪಾಯ ಸಂಭವಿಸಿದ ಪ್ರದೇಶಗಳ ಆಧಾರದಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳನ್ನು ‘ಮ್ಯಾಪಿಂಗ್’ ಮಾಡಲಾಗಿದ್ದು, ಅಪಾಯದ ಸ್ಥಳದಲ್ಲಿರುವ 2,995 ಕುಟುಂಬಗಳು ಸ್ಥಳಾಂತರಕ್ಕೆಂದು ಗುರುತು ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ
ʻಆಗಸ್ಟ್ ಆಂತಕʼ
ಜಿಲ್ಲೆಯಲ್ಲಿ ವಾಡಿಕೆಗಿಂತ 24% ಹೆಚ್ಚಿನ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ‘ಆಗಸ್ಟ್ ಆತಂಕ’ವೂ ಹುಟ್ಟಿಕೊಂಡಿದೆ. ಆಗಸ್ಟ್ ಬಂತೆಂದರೆ ಜಿಲ್ಲೆಯ ಜನರಲ್ಲಿ ಆತಂಕ, ದುಗುಡ ಹೆಚ್ಚಾಗುತ್ತದೆ. ಬಿರುಸಿನ ಮಳೆ, ಮೈಕೊರೆಯುವ ಚಳಿಯಲ್ಲಿಯೂ ಬೆವರುವಂತಹ ಭಯ ಸೃಷ್ಟಿಯಾಗುತ್ತದೆ. 2018 ಆಗಸ್ಟ್ 16 ರಂದು ಜಿಲ್ಲೆಯಲ್ಲಿ ಹಿಂದೆಂದು ಕಾಣದಂತೆ ಸುರಿದ ಮಹಾಮಳೆ, ಸಂಭವಿಸಿದ ಪ್ರಾಕೃತಿಕ ವಿಕೋಪ ಇವೆಕ್ಕಲ್ಲ ಕಾರಣವಾಗಿವೆ. ಈ ವರ್ಷವೂ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಅಪಾಯದಂಚಿನಲ್ಲಿರುವವರು ಮುಂದೇನು? ಎಂಬ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ.
ವಯನಾಡಿನಲ್ಲಿ ನಡೆದ ದುರ್ಘಟನೆಯ ನಂತರ ಗುಡ್ಡ, ನದಿಯಂಚಿನಲ್ಲಿ ವಾಸಿಸುತ್ತಿರುವವರನ್ನು ಮಳೆಗಾಲದ ಸಂದರ್ಭದಲ್ಲಿ ಸ್ಥಳಾಂತರಿಸಬೇಕೆಂಬ ಚರ್ಚೆ ಮುನ್ನಲೆಗೆ ಬಂದಿದೆ. ‘ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ’ ವಿಪತ್ತು ಸಂಭವನೀಯ ಪ್ರದೇಶಗಳ ಪಟ್ಟಿ ನೀಡಿದೆ. ಇದರೊಂದಿಗೆ ಈ ಹಿಂದೆ ಪ್ರಕೃತಿ ದುರಂತ ಸಂಭವಿಸಿದ ಪ್ರದೇಶಗಳನ್ನು ಸೇರಿಸಿ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ ಅಂತಿಮಗೊಳಿಸಿರುವ ಜಿಲ್ಲಾಡಳಿತ ಸ್ಥಳಾಂತರ ಮಾಡಬೇಕಾದ ಕುಟುಂಬಗಳನ್ನು ಪಟ್ಟಿ ಮಾಡಿಕೊಂಡಿದೆ.
2,995 ಕುಟುಂಬಗಳ ಗುರುತು
104 ಸಂಭವನೀಯ ವಿಪತ್ತು ಪ್ರದೇಶಗಳ 2,995 ಕುಟುಂಬಗಳನ್ನು ಗುರುತಿಸಲಾಗಿದೆ. ಇವರೆಲ್ಲ ಸ್ಥಳಾಂತರ ಪಟ್ಟಿಯಲ್ಲಿದ್ದು, ಯಾವ ಕ್ಷಣದಲ್ಲಾದರೂ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಅಪಾಯದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನೋಟಿಸ್ ನೀಡಿ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಕೆಲವರು ಸಂಬಂಧಿಕರ ಮನೆಗಳಲ್ಲಿ ನೆಲೆನಿಂತಿದ್ದಾರೆ. ಹಲವರು ಅಪಾಯದ ನಡುವೆಯೇ ಜೀವನ ಮುಂದುವರಿಸಿದ್ದಾರೆ ಸ್ಥಳಾಂತರವಾಗಿ ಎಂದರೆ ಎಲ್ಲಿಗೆ ಹೋಗುವುದು? ಎಂಬ ಪ್ರಶ್ನೆಯನ್ನು ನಿವಾಸಿಗಳು ಮಾಡುತ್ತಿದ್ದಾರೆ.
ಹೆಚ್ಚುವರಿ 95 ಕಾಳಜಿ ಕೇಂದ್ರ:
ಸಂಭವನೀಯ ವಿಪತ್ತು ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯುವ ಸಂಬಂಧವೂ ಸ್ಥಳವನ್ನು ಜಿಲ್ಲಾಡಳಿತ ಗುರುತು ಮಾಡಿಟ್ಟುಕೊಂಡಿದೆ. ಸದ್ಯ 10 ಕಾಳಜಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 95 ಕಡೆಗಳಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆಯಾಗಿದೆ. ಆದರೆ, ಜಾನುವಾರುಗಳಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂಬ ದೂರಿದೆ. ಈ ಬಗ್ಗೆಯೂ ಜಿಲ್ಲಾಡಳಿತ ಕ್ರಮವಹಿಸಬೇಕಾಗಿದೆ. ಒಟ್ಟಾರೆಯಾಗಿ ಪ್ರತಿ ಮಳೆಗಾಲದಲ್ಲಿಯೂ ಗ್ರಾಮೀಣ ಪ್ರದೇಶಗಳ ಜನತೆ ಭೂಕುಸಿತ, ಪ್ರವಾಹದ ಭಯದಲ್ಲಿ ದಿನದೂಡಬೇಕಾದ ಪರಿಸ್ಥಿತಿ ಬಂದಿದ್ದು, ಪ್ರಕೃತಿ ಮುನಿಯದಿರಲಿ ಎಂಬ ಪ್ರಾರ್ಥನೆ ಮೊಳಗುತ್ತಿದೆ.