Tag: Kinnal Raj

  • ‘ಸಿಂಹರೂಪಿಣಿ’ಯ ಯಶಸ್ವಿ 25ರ ಹೆಜ್ಜೆ

    ‘ಸಿಂಹರೂಪಿಣಿ’ಯ ಯಶಸ್ವಿ 25ರ ಹೆಜ್ಜೆ

    ‘ಕೆಜಿಎಫ್’ (KGF) ಖ್ಯಾತಿಯ ಸಾಹಿತಿ ಕಿನ್ನಾಳ್ ರಾಜ್ (Kinnal Raj) ನಿರ್ದೇಶನದ ‘ಸಿಂಹರೂಪಿಣಿ’ ಸಿನಿಮಾ ಅ.17ರಂದು ರಿಲೀಸ್‌ ಆಗಿತ್ತು. ಇದೀಗ ಈ ಚಿತ್ರ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ದೇವರ ಚಿತ್ರವನ್ನು ಕಮರ್ಷಿಯಲ್ ಅಂಶದೊಂದಿಗೆ ಮಾಸ್ ಆಗಿ ತೋರಿಸಿ ‘ಸಿಂಹರೂಪಿಣಿ’ ಚಿತ್ರ ಗೆದ್ದು ಬೀಗಿದೆ. ಇದನ್ನೂ ಓದಿ:ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್‌ ಬಾಸ್‌’ ಎಲಿಮಿನೇಷನ್‌ ಬಳಿಕ ಧರ್ಮ ರಿಯಾಕ್ಷನ್

    ಇದೇ ಖುಷಿಯಲ್ಲಿ ಈ ಚಿತ್ರಕ್ಕಾಗಿ ಶ್ರಮಿಸಿದ ಕಲಾವಿದರಿಗೆ, ತಂತ್ರಜ್ಞರಿಗೆ ಪಾರಿತೋಷಕ ವಿತರಿಸುವ ಕಾರ್ಯಕ್ರಮವನ್ನು ಸ್ವಪ್ನ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಕೆಜಿಎಫ್’, ‘ಸಲಾರ್’, ‘ಭೈರತಿ ರಣಗಲ್’ ಮುಂತಾದ ಹಿಟ್ ಸಿನಿಮಾಗಳಿಗೆ ಹಾಡುಗಳನ್ನು ಬರೆದಿರುವ ಕಿನ್ನಾಳ್ ರಾಜ್ ಚಿತ್ರ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.

    ಡೈರೆಕ್ಟರ್ ಕಿನ್ನಾಳ್ ರಾಜ್ (Kinnal Raj) ಮಾತನಾಡಿ, ಚಿತ್ರ ಮಾಡಲು ಯೋಗ, ಯೋಗ್ಯತೆ ಅದಕ್ಕಿಂತ ಹೆಚ್ಚಾಗಿ ಅದೃಷ್ಟ ಕೂಡಿ ಬರಬೇಕು. ಇವೆಲ್ಲವೂ ನಮಗೆ ಸಿಕ್ಕಿದೆ. ಎಲ್ಲಾ ಕಲಾವಿದರು ಕಥೆ ಕೇಳಿದೊಡನೆ ಯಾವಾಗ ಬರಲಿ ಅಂತ ಹೇಳುತ್ತಿದ್ದರು. ಎಲ್ಲರೂ ಭಕ್ತಿಯಿಂದ, ಇಷ್ಟದಿಂದ ಸಿನಿಮಾ ಮಾಡಿದ್ದಾರೆ. ವ್ಯವಹಾರಿಕವಾಗಿ ನಿರ್ಮಾಪಕರು ಸೇಫ್ ಆಗಿದ್ದಾರೆ. ಈ ವೇಳೆ, ಮಾಧ್ಯಮದ ಸಹಕಾರ ಎಂದೂ ಮರೆಯುವಂತಿಲ್ಲ. ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಕೋಣ ಏಕೆ ಕಡಿಯುತ್ತಾರೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದೀರಾ ಎಂದರು.

    ಸಿನಿಮಾದ ಸೆಕೆಂಡ್ ಆಫ್ ‘ಕಾಂತಾರ’ ಚಿತ್ರ ಮೀರಿಸುವಂತಿತ್ತು. ಭಕ್ತಿ ಕಥೆಗೆ ‘ಸಿಂಹರೂಪಿಣಿ’ ಸಾಕ್ಷಿಯಾಗಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. 9 ತಿಂಗಳ ಶ್ರಮ ಸಾರ್ಥಕ ಅನಿಸಿದೆ. ಇದೇ ವೇಳೆ, ಬ್ಯಾಂಕಾಕ್ ಫಿಲಂ ಫೆಸ್ಟಿವಲ್‌ದಲ್ಲಿ ಪ್ರಶಸ್ತಿ ಲಭಿಸಿದ್ದು ಖುಷಿಯಾಗಿದೆ. ಈ ಚಿತ್ರದ ಪಾರ್ಟ್ 2 ಮಾಡುವ ಯೋಜನೆ ಇದೆ  ಎಂದಿದ್ದಾರೆ.

    ಈ ಸಮಾರಂಭದಲ್ಲಿ ಯಶಸ್ವಿನಿ, ಅಂಕಿತಾ ಗೌಡ, ಯಶ್ ಶೆಟ್ಟಿ, ಪುನೀತ್ ರುದ್ರನಾಗ್, ಆರವ್ ಲೋಹಿತ್, ಸಾಗರ್, ವಿಜಯ್ ಚೆಂಡೂರು, ಸಂಗೀತ ಸಂಯೋಜಕ ಆಕಾಶ್ ಪರ್ವ, ಛಾಯಾಗ್ರಾಹಕ ಕಿರಣ್ ಕುಮಾರ್, ಸಂಕಲನಕಾರ ಯುಡಿವಿ. ವೆಂಕಿ, ವಿತರಕ ರಮೇಶ್ ಮುಂತಾದವರು ಭಾಗಿಯಾಗಿ ಸಿನಿಮಾದ ಸಕ್ಸಸ್ ಸಂಭ್ರಮಿಸಿದ್ದಾರೆ.

  • ‘ಸಿಂಹರೂಪಿಣಿ’ ದಿವ್ಯಾನುಭೂತಿ : ನಟ ವಿಜಯ್ ಚೆಂಡೂರ್

    ‘ಸಿಂಹರೂಪಿಣಿ’ ದಿವ್ಯಾನುಭೂತಿ : ನಟ ವಿಜಯ್ ಚೆಂಡೂರ್

    ಕೆ.ಎಂ ನಂಜುಂಡೇಶ್ವರ ನಿರ್ಮಾಣ ಮತ್ತು ಕಿನ್ನಾಳ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸಿಂಹರೂಪಿಣಿ’ ಚಿತ್ರ ಈ ವಾರ ಅಂದರೆ, ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಭಕ್ತಿಪ್ರಧಾನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಮರ್ಶಿಯಲ್ ಧಾಟಿಯಲ್ಲಿ, ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂತೆ ನಿರ್ದೇಶಕರು ರೂಪಿಸಿದ್ದಾರಂತೆ. ಬಹುದೊಡ್ಡ ತಾರಾಗಣ ಹೊಂದಿರುವ ಸಿಂಹರೂಪಿಣಿಯ ಸಮ್ಮುಖದಲ್ಲಿ ಘಟಾನುಘಟಿ ನಟ ನಟಿಯರು ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟ ವಿಜಯ್ ಚೆಂಡೂರ್ ಪಾಲಿಗೂ ಒಂದೊಳ್ಳೆ ಪಾತ್ರವೇ ಒಲಿದು ಬಂದಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ತಮಗಾಗಿದ್ದ ರೋಮಾಂಚಕ ಅನುಭೂತಿಯೊಂದನ್ನು ವಿಜಯ್ ಚೆಂಡೂರ್ ತೆರೆದಿಟ್ಟಿದ್ದಾರೆ.

    ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯ್ ಚೆಂಡೂರ್, ಆ ನಂತರದಲ್ಲಿ ನಟನಾಗಿ ನೆಲೆ ಕಂಡುಕೊಂಡವರು. ಅದರಲ್ಲೂ ವಿಶೇಷವಾಗಿ ಹಾರರ್ ಸಿನಿಮಾಗಳ ಮೂಲಕವೇ ಅವರಿಗೆ ಹಂತ ಹಂತವಾಗಿ ವಿಜಯವೆಂಬುದು ಕೈ ಹಿಡಿಯುತ್ತಾ ಬಂದಿದೆ. ಹೀಗೆ ಹಾರರ್ ಮೂವಿಗಳ ಮೂಲಕ ಸದ್ದು ಮಾಡುತ್ತಾ ಬಂದಿರುವ ವಿಜಯ್ ಅವರಿಗೆ ಪರಿಚಿತರು `ನಿಮಗೆ ದೆವ್ವ ಕೈಹಿಡಿದಿದೆ’ ಅಂತ ಕಿಚಾಯಿಸುತ್ತಾರಂತೆ. ಆದರೆ, ಇದೀಗ ಸಿಂಹರೂಪಿಣಿಯ ಭೂಮಿಕೆಯಲ್ಲಿ ಮಾರಮ್ಮ ದೇವಿ ಕೈಹಿಡಿದು ಪೊರೆಯುತ್ತಾಳೆಂಬ ಗಾಢ ನಂಬಿಕೆ ವಿಜಯ್ ಚೆಂಡೂರ್ ಅವರದ್ದು.

    ಅಂಥಾ ನಂಬಿಕೆಗೆ ಕಾರಣವಿದೆ. ವಿಜಯ್ ಚೆಂಡೂರ್ ಈ ಸಿನಿಮಾದಲ್ಲಿ ದೇವಿಯ ಆರಾಧಕನಾಗಿ ಕಾಣಿಸಿಕೊಂಡಿದ್ದಾರೆ. ಅದು ಸಿನಿಮಾದ ಆತ್ಮದಂಥಾ ಪಾತ್ರವೂ ಹೌದು. ಗ್ರಾಮವೊಂದರ ಜನರೆಲ್ಲ ತಮ್ಮ ಕಷ್ಟ ಕಾರ್ಪಣ್ಯಗಳನ್ನು, ಬೇಡಿಕೆಗಳನ್ನು ಮಾರಮ್ಮದೇವಿಯ ಮಡಿಲಿಗೆ ಹಾಕಿ ನಿರಾಳವಾಗುತ್ತಾರೆ. ಅಂಥಾದ್ದನ್ನೆಲ್ಲ ದೇವಿಗೆ ದಾಟಿಸುವ ವಾಹಕವಾಗಿ ಆರಾಧಕರಿರುತ್ತಾರೆ. ಅಂಥಾ ಪಾತ್ರವನ್ನಿಲ್ಲಿ ವಿಜಯ್ ಚೆಂಡೂರ್ ನಿಭಾಯಿಸಿದ್ದಾರೆ. ಇದರ ಜೊತೆ ಜೊತೆಗೇ ನಾಯಕನೊಂದಿಗೆ ಸದಾ ಸಾಥ್ ಕೊಡುತ್ತಾ, ಆತನ ಬೆನ್ನೆಲುಬಾಗಿ ನಿಲ್ಲುವ ಮತ್ತೊಂದು ಬಗೆಯ ಚಹರೆಯೂ ಆ ಪಾತ್ರಕ್ಕಿದೆಯಂತೆ.

    ಇದು ಹೇಳಿಕೇಳಿ ಭಕ್ತಿಪ್ರಧಾನ ಚಿತ್ರ. ಆಳವಾದ ನಂಬಿಕೆ, ಭಕ್ತಿ ಭಾವವಿಲ್ಲದೆ ಇಂಥಾ ಚಿತ್ರವನ್ನು ರೂಪಿಸಲು ಸಾಧ್ಯವಿಲ್ಲ ಎಂಬುದನ್ನು ಸಿಂಹರೂಪಿಣಿಯೇ ವಿಜಯ್ ಅವರಿಗೆ ಮನದಟ್ಟು ಮಾಡಿಸಿದ್ದಾಳಂತೆ. ಅಪಾರ ದೈವ ಭಕ್ತಿ ಹೊಂದಿರೋ ನಿರ್ಮಾಪಕರು ಮತ್ತು ನಿರ್ದೇಶಕರ ಶ್ರದ್ಧೆ ಅವರಲ್ಲೊಂದು ಬೆರಗು ಮೂಡಿಸಿತ್ತಂತೆ. ಈ ಪಾತ್ರವನ್ನು ನಿರ್ವಹಿಸುವ ಮುನ್ನ ವಿಜಯ್ ಚೆಂಡೂರ್ ದೇವಿಯ ಮುಂದೆ ನಿಂತು ಅರಿಕೆ ಮಾಡಿಕೊಂಡಿದ್ದರಂತೆ. ನಿರ್ದೇಶಕರ ಇಷಾರೆಯ ಮೇರೆಗೆ ವಿಜಯ್ ಸಂಕಲ್ಪ ಮಾಡುತ್ತಲೇ ದೇವಿಯ ಕಡೆಯಿಂದ ಪಾಸಿಟಿವ್ ಸೂಚನೆ ಸಿಕ್ಕಿತ್ತಂತೆ. ಅದನ್ನು ಕಂಡು ಅಕ್ಷರಶಃ ರೋಮಾಂಚಿತರಾಗಿದ್ದ ವಿಜಯ್ ಚೆಂಡೂರ್, ತಮ್ಮ ಭಾಗದ ಚಿತ್ರೀಕರಣವನ್ನು ಅಂಥಾದ್ದೇ ಅನುಭೂತಿಯೊಂದಿಗೆ, ಭಕ್ತಿ ಭಾವಗಳೊಂದಿಗೆ ಮಾಡಿ ಮುಗಿಸಿದ್ದಾರಂತೆ.

     

    ಸ್ವತಃ ದೈವಭಕ್ತರಾಗಿರುವ ವಿಜಯ್ ಚೆಂಡೂರ್ ಪಾಲಿಗಿದು ಭಿನ್ನ ಅನುಭವ. ಭಕ್ತಿ ಪ್ರಧಾನವಾದ ಚಿತ್ರವನ್ನು ನಿರ್ದೇಶಕ ಕಿನ್ನಾಳ್ ರಾಜ್ ಕಮರ್ಶಿಯಲ್ ಚೌಕಟ್ಟಿಗೆ ಒಗ್ಗಿಸಿದ ರೀತಿ ಅವರಲ್ಲೊಂದು ಬೆರಗು ಮೂಡಿಸಿದೆ. ಇಂಥಾ ಕಥನವನ್ನು ಎಲ್ಲರಿಗೂ ಹಿಡಿಸುವಂತೆ ರೂಪಿಸೋದು ನಿಜಕ್ಕೂ ಸವಾಲಿನ ಸಂಗತಿ. ಬರೀ ಭಕ್ತಿಪ್ರಧಾನ ಚೌಕಟ್ಟಿನಲ್ಲಿದ್ದರೆ ಒಂದು ವರ್ಗಕ್ಕೆ ಮಾತ್ರ ಹಿಡಿಸಬಹುದು. ಕಮರ್ಶಿಯಲ್ ಟಚ್ ಕೊಡಲು ಹೋದರೆ ಭಕ್ತಿ ಭಾವಗಳಿಗೆ ಅಪಮಾನವಾಗಬಹುದು. ಇವೆರಡನ್ನೂ ಸೂಕ್ಷ್ಮವಾಗಿ ಬ್ಲೆಂಡ್ ಮಾಡುವುದು ಅಸಲೀ ಕಸುಬುದಾರಿಕೆ. ಅದನ್ನು ಕಿನ್ನಾಳ್ ರಾಜ್ ಯಶಸ್ವಿಯಾಗಿ ಮಾಡಿದ್ದಾರೆಂಬ ನಂಬಿಕೆ ವಿಜಯ್ ಚೆಂಡೂರ್ ಅವರಲ್ಲಿದೆ. ನಿರ್ಮಾಪಕ ನಂಜುಂಡೇಶ್ವರ ಅವರ ಅಪಾರ ಭಕ್ತಿ ಈ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂಬ ಭಾವ ಹೊಂದಿರುವ ವಿಜಯ್ ಪಾಲಿಗೆ ಓರ್ವ ನಟನಾಗಿ ಇದು ಮಹತ್ವದ ಮೈಲಿಗಲ್ಲು.

  • ನೆಲದ ಘಮಲಿನ ಚಿತ್ರ ‘ಸಿಂಹರೂಪಿಣಿ’ : ನಿರ್ಮಾಪಕ ನಂಜುಂಡೇಶ್ವರ

    ನೆಲದ ಘಮಲಿನ ಚಿತ್ರ ‘ಸಿಂಹರೂಪಿಣಿ’ : ನಿರ್ಮಾಪಕ ನಂಜುಂಡೇಶ್ವರ

    ದ್ಯ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ಲಿನ ಗಾಳಿ ಬಲವಾಗಿ ಬೀಸುತ್ತಿರುವಾಗ, ವಿಶಿಷ್ಟ ರೀತಿಯ ಪ್ರಯತ್ನವಾಗಿ, ಪ್ಯಾನ್ ಇಂಡಿಯಾ ಕಲಾವಿದರನ್ನು ಬಳಸಿಕೊಂಡು ರೂಪಿಸಲ್ಪಟ್ಟಿರುವ ಚಿತ್ರ `ಸಿಂಹರೂಪಿಣಿ’ (Simha Roopini). ಅಕ್ಟೋಬರ್ ೧೭ರಂದು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿರುವವರು ಕೆ.ಎಂ ನಂಜುಂಡೇಶ್ವರ (Nanjundeshwar). ವಿಶೇಷವೆಂದರೆ, ಈ ಚಿತ್ರಕ್ಕೆ ಕಥೆಯನ್ನೂ ಅವರೇ ಒದಗಿಸಿದ್ದಾರೆ. ಸಾಮಾನ್ಯವಾಗಿ, ಸಿನಿಮಾ ನಿರ್ಮಾಣ ಎಂಬುದು ಬ್ಯುಸಿನೆಸ್ ಅಂತಲೇ ಭಾವಿಸಲಾಗುತ್ತದೆ. ಆದರೆ, ಸಿಂಹರೂಪಿಣಿ ನಿರ್ಮಾಣದ ಹಿಂದಿರೋದು ಅಕ್ಷರಶಃ ಭಕ್ತಿ ಎಂಬ ಶಕ್ತಿ. ಈ ಕುರಿತಾದ ಒಂದಷ್ಟು ಮಾಹಿತಿಗಳನ್ನು ಖುದ್ದು ಅವರೇ ತೆರೆದಿಟ್ಟಿದ್ದಾರೆ.

    ದೊಡ್ಡ ಬಳ್ಳಾಪುರದ ಕಲ್ಲುದೇವನಹಳ್ಳಿಯವರು ಕೆ.ಎಂ ನಂಜುಂಡೇಶ್ವರ. ಬದುಕು ಅರಸಿ ಬೆಂಗಳೂರಿಗೆ ಬಂದು ನೆಲೆಗೊಂಡು ಮೂರು ದಶಕಗಳು ಕಳೆದಿವೆ. ಮೆಡಿಕಲ್ ಅಡ್ಮಿನಿಸ್ಟ್ರೇಷನ್ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಂಜುಂಡೇಶ್ವರ ಅವರ ಪಾಲಿಗೆ ಮಾರಮ್ಮದೇವಿ ಆರಾಧ್ಯ ದೇವತೆ. ಅವರ ಬದುಕನ್ನು ಒಂದಷ್ಟು ಸಂಕಷ್ಟಗಳಿಂದ ಪಾರುಮಾಡಿದ ಮಾರಮ್ಮದೇವಿಯ ಆರಾಧಕರಾಗಿಯೂ ಅವರು ಮುಂದುವರೆದು ಬಂದಿದ್ದಾರೆ. ಅವರ ಪಾಲಿಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಬಹು ವರ್ಷಗಳ ಕನಸಾಗಿತ್ತು. ಕಡೆಗೂ ಅದಕ್ಕೊಂದು ಸರಿಕಟ್ಟಾದ ವಾತಾವರಣ ನಿರ್ಮಾಣವಾದ ಘಟ್ಟದಲ್ಲಿ ತನ್ನ ಬದುಕು ಬದಲಿಸಿದ ಮಾರಮ್ಮ ದೇವಿಯ ಕುರಿತಾದ ಸಿನಿಮಾ ನಿರ್ಮಾಣ ಮಾಡಬೇಕೆಂದು ನಂಜುಂಡೇಶ್ವರ ತೀರ್ಮಾನಿಸಿದ್ದರಂತೆ. ಇದಕ್ಕೆ ದೇವಿಯ ಕಡೆಯಿಂದಲೂ ಸಕಾರಾತ್ಮಕ ವಾಗ್ದಾನ ಸಿಗುವ ಮೂಲಕ ಸಿಂಹರೂಪಿಣಿ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು.

    ಆ ನಂತರದಲ್ಲಿ ನಿರ್ದೇಶನಕ್ಕೆ ಕಿನ್ನಾಳ್ ರಾಜ್ ವರಿಂದ ಮೊದಲ್ಗೊಂಡು ಎಲ್ಲ ಆಯ್ಕೆಗಳಿಗೂ ಮಾರಮ್ಮದೇವಿಯ ವಾಗ್ದಾನದ ಮೊರೆ ಹೋಗಲಾಗಿದೆ. ದೇವಿಯ ಆಣತಿಯೊಂದಿಗೇ ಪ್ರತೀ ಹೆಜ್ಜೆಯನ್ನಿಟ್ಟಿರುವ ಧನ್ಯತಾ ಭಾವವೊಂದು ನಿರ್ಮಾಪಕ ನಂಜುಂಡೇಶ್ವರರಲ್ಲಿದೆ. ಈಗೊಂದು ಮೂವತ್ತು ವರ್ಷಗಳ ಹಿಂದೆ ಹಳ್ಳಿ ವಾತಾವರಣವೇ ಬೇರೆಯದ್ದಿತ್ತು. ಇಂಥಾ ದೇವರು, ದೇವಿಯರ ಮಹಾತ್ಮೆಗಳ ಬಗ್ಗೆ ಹಿರೀಕರು ಒಂದಷ್ಟು ಕಥೆಗಳನ್ನು ಹೇಳುತ್ತಿದ್ದರು. ಆ ಮೂಲಕ ನೆಲಮೂಲದ ಕಥಾನಕಗಳು ಹೊಸ ತಲೆಮಾರಿಗೆ ದಾಟಿಕೊಳ್ಳುತ್ತಿದ್ದವು. ಈವತ್ತಿಗೂ ನಮ್ಮ ನಡುವಲ್ಲಿರುವ ನಂಬಿಕೆಗಳು ಹಾಗೆ ಹಿರಿಯರಿಂದ ದಾಟಿಕೊಂಡವುಗಳೇ. ಆದರೀಗ, ಅಂಥಾ ಕಥೆಗಳನ್ನು ಹೇಳುವವರೂ ಇಲ್ಲ. ಕೇಳಲು ಪುರಸೊತ್ತಿರುವವರೂ ಇಲ್ಲ. ಈ ಕೊರತೆ ನೀಗಿಸುತ್ತಲೇ, ನೆಲದ ನಂಟಿನ ಮಾರಮ್ಮದೇವಿಯ ಕಥೆಯನ್ನು ಅಜರಾಮರವಾಗಿಸುವ ಸದುದ್ದೇಶದೊಂದಿಗೆ ಸಿಂಹರೂಪಿಣಿ ಚಿತ್ರವನ್ನು ನಿರ್ಮಾಣ ಮಾಡಿದ್ದಾಗಿ ನಂಜುಂಡೇಶ್ವರ ಹೇಳಿಕೊಳ್ಳುತ್ತಾರೆ.

    ಈ ಸಿನಿಮಾದಲ್ಲಿ ಯಾವುದನ್ನೂ ಅತಿಶಯವೆಂಬಂತೆ ಹೇಳಲಾಗಿಲ್ಲ. ಯಾವ ದೃಷ್ಯಗಳೂ ಡ್ರಾಮಾ ಸ್ವರೂಪ ಪಡೆಯದಂತೆ, ಅತ್ಯಂತ ನೈಜವಾಗಿ ಚಿತ್ರೀಕರಿಸಲಾಗಿದೆಯಂತೆ. ವಿಶೇಷವೆಂದರೆ, ನೈಜ ಘಟನೆಗಳನ್ನೇ ಒಟ್ಟು ಸೇರಿಸಿ, ಅದನ್ನು ಕಮರ್ಶಿಯಲ್ ಹಾದಿಯಲ್ಲಿ ನಿರೂಪಿಸಲಾಗಿದೆಯಂತೆ. ಇದರ ಚಿತ್ರೀಕರಣದ ಹಂತದಲ್ಲಿ ಪ್ರತಿಯೊಬ್ಬರಿಗೂ ರೋಮಾಂಚಕ ಅನುಭವಗಳಾಗಿವೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಂತೂ ಹಲವರಿಗೆ ಶಕ್ತಿಯ ಆವಾಹನೆಯಾದಂತಾಗಿ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತಂತೆ. ಆ ಹಂತದಲ್ಲಿ ನಡೆದ ಘಟನಾವಳಿಗಳನ್ನು ಮೂರು ಕ್ಯಾಮೆರಾಗಳಲ್ಲಿ ಶೂಟ್ ಮಾಡಿಕೊಂಡು ಅದನ್ನು ಹಾಗೆಯೇ ತೋರಿಸಲಾಗಿದೆ. ಅದರ ಮೂಲಕ ರೋಮಾಂಚನವೊಂದು ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳಲಿದೆ. ಅದನ್ನು ಸ್ವೀಕರಿಸುವ ಬಗೆ ಪ್ರೇಕ್ಷಕರಿಗೆ ಬಿಟ್ಟಿದ್ದೆನ್ನುವ ಅಭಿಪ್ರಾಯ ನಂಜುಂಡೇಶ್ವರರದ್ದು.

     

    ಇದು ಪ್ಯಾನಿಂಡಿಯಾ ಭರಾಟೆಯ ಕಾಲ. ಇಂಥಾ ಹೊತ್ತಿನಲ್ಲಿ ದೇವಿಯ ಮೇಲೆ ನಂಬಿಕೆ ಇಟ್ಟು, ಅಪ್ಪಣೆಯೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಧನ್ಯತಾ ಭಾವ ನಂಜುಂಡೇಶ್ವರ ಅವರಲ್ಲಿದೆ. ಓರ್ವ ನಿರ್ಮಾಪಕನಾಗಿ ಪ್ರತಿಯೊಂದರಲ್ಲಿಯೂ ಭಾಗಿಯಾಗಿ, ಒಟ್ಟಾರೆ ಚಿತ್ರವನ್ನು ರೂಪಿಸಿದ  ತೃಪ್ತಿ ಅವರಲ್ಲಿದೆ. ಇದು ಭಕ್ತಿಯಿಂದ ಚಿತ್ರೀಕರಿಸಿರುವ ಸಿನಿಮಾ. ಎಲ್ಲ ವರ್ಗದವರಿಗೂ ಇಷ್ಟವಾಗಬಲ್ಲಂತೆ ಮೂಡಿ ಬಂದಿದೆ. ಬಹು ದಿನಗಳ ನಂತರ ಕುಟುಂಬ ಸಮೇತರಾಗಿ ನೋಡಿ ಮುದಗೊಳ್ಳಬಹುದಾದ ಚಿತ್ರ ಸಿಂಹರೂಪಿಣಿ. ಈ ಸಿನಿಮಾ ನೋಡುವ ಸರ್ವರಿಗೂ ದೇವಿಯ ಕೃಪಾಶೀರ್ವಾದ ಸಿಗುವಂತಾಗಲಿ ಎಂಬ ಸದಾಶಯ ನಂಜುಂಡೇಶ್ವರ ಅವರದ್ದು. ಈ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಿದೆ.