Tag: Kavita Lankesh

  • ‘ಗೌರಿ ದಿನ’ ಕಾರ್ಯಕ್ರಮ ಮೋದಿ, ಸಂಘ ಪರಿವಾರವನ್ನು ತೆಗಳುವ ಕಾರ್ಯಕ್ರಮವಾಯಿತೇ..?

    ‘ಗೌರಿ ದಿನ’ ಕಾರ್ಯಕ್ರಮ ಮೋದಿ, ಸಂಘ ಪರಿವಾರವನ್ನು ತೆಗಳುವ ಕಾರ್ಯಕ್ರಮವಾಯಿತೇ..?

    ಬೆಂಗಳೂರು: ಗೌರಿ ಲಂಕೇಶ್ ಹುಟ್ಟಿದ ದಿನವಾದ ಸೋಮವಾರ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜನೆಗೊಂಡಿದ್ದ ‘ಗೌರಿ ದಿನ’ ಕಾರ್ಯಕ್ರಮ ಮೋದಿಗೆ ಮತ್ತು ಸಂಘ ಪರಿವಾರವನ್ನು ತೆಗಳಲು ಸೀಮಿತವಾಯಿತೇ ಎನ್ನುವ ಪ್ರಶ್ನೆ ಎದ್ದಿದೆ.

    ಕಾರ್ಯಕ್ರಮ ನಡೆಯುವ ಮೊದಲು ಸಹೋದರ ಇಂದ್ರಜಿತ್ ಲಂಕೇಶ್ ಟೌನ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮ ಸರ್ಕಾರಿ ಪ್ರಯೋಜಿತವಾಗಿದ್ದು ಸಿಎಂ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ತಿಳಿಸಿದ್ದರು.

    ಈ ಹೇಳಿಕೆಗೆ ಪುಷ್ಟಿ ಎನ್ನುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಪ್ರಧಾನಿ ಮೋದಿ ಮತ್ತು ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಲು ವೇದಿಕೆಯನ್ನು ಬಳಸಿಕೊಂಡಿದ್ದು ಮಾತ್ರವಲ್ಲದೇ ಸಿಎಂ ಸಿದ್ದರಾಮಯ್ಯಮನವರನ್ನು ಹೊಗಳಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.

    ಗೌರಿ ಹತ್ಯೆಯ ಬಗ್ಗೆ ರಾಜ್ಯ ಸರ್ಕಾರ ನೇಮಿಸಿದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು ಆರೋಪಿಗಳ ರೇಖಾಚಿತ್ರ ಇಂದು ಬಿಡುಗಡೆಯಾಗಿದ್ದು ಬಿಟ್ಟರೆ ಇದೂವರೆಗೂ ಆರೋಪಿಗಳ ಬಂಧನ ಆಗಿಲ್ಲ. ಹೀಗಾಗಿ ಆರೋಪಿಗಳ ಬಂಧಿಸದ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಕೇಂದ್ರದ ವಿರುದ್ಧ ಟೀಕೆ ಮಾಡಿದ್ದು ಎಷ್ಟು ಸರಿ ಎಂದು ಜನ ಕೇಳುತ್ತಿದ್ದಾರೆ.

    ಸಹೋದರಿ ಕವಿತಾ ಲಂಕೇಶ್ ರಾಜ್ಯ ಸರ್ಕಾರ ತನಿಖೆಯಲ್ಲಿ ನಮಗೆ ನಂಬಿಕೆ ಇದೆ. ಈ ಪ್ರಕರಣವನ್ನು ಯಾವುದೇ ಕಾರಣಕ್ಕೆ ಸಿಬಿಐ ತನಿಖೆಗೆ ನೀಡಬಾರದು. ಈಗಾಗಲೇ ನೀಡಿರುವ ಪ್ರಕರಣದಲ್ಲಿ ಯಾವುದೇ ಫಲಿತಾಂಶ ಲಭಿಸಿಲ್ಲ. ಎಸ್‍ಐಟಿ ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಹಂತಕರನ್ನು ಬಂಧಿಸುವ ವಿಶ್ವಾಸವಿದೆ. ಪ್ರಕರಣವನ್ನು ಮತ್ತೆ ಸಿಬಿಐ ಗೆ ವಹಿಸುವುದರಿಂದ ವಿಚಾರಣೆ ಮತ್ತೆ ಒಂದು ವರ್ಷ ಹಿಂದುಳಿಯುವ ಸಂಭವವಿದೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದರು.

    ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಹೀಗಿರುವಾಗ ವೇದಿಕೆಯಲ್ಲಿದ್ದ ಜೆಎನ್‍ಯು ಮುಖಂಡ ಕನ್ಹಯ್ಯ ಕುಮಾರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರೆ, ಗುಜರಾತ್ ಪಕ್ಷೇತರ ಶಾಸಕ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಮೋದಿಯನ್ನು ಟೀಕಿಸುವುದರ ಜೊತೆಗೆ ಸಿದ್ದರಾಮಯ್ಯ ಸರ್ಕಾರವನ್ನು ಹೊಗಳಿದರು.

    ದೊರೆಸ್ವಾಮಿ ನರೇಂದ್ರ ಮೋದಿ ಅವರನ್ನು ದೇಶದಿಂದ ಓಡಿಸಿ ಎಂದು ಕರೆ ನೀಡಿದರೆ, ಕನ್ಹಯ್ಯ ಕುಮಾರ್ ಇಲ್ಲಿ ಸೇರಿದವರೆಲ್ಲ ಗೌರಿ ಪರಿವಾರದವರು, ಇಲ್ಲಿ ಯಾರೂ ಸಂಘ ಪರಿವಾರದವರಿಲ್ಲ. ಗೌರಿ ಪರಿವಾರವು ಸಂಘ ಪರಿವಾರಕ್ಕೆ ಹೊಡೆತ ಕೊಟ್ಟೇ ಕೊಡುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಓಡಿಸಿ: ಮೋದಿ ವಿರುದ್ಧ ದೊರೆಸ್ವಾಮಿ ಗುಡುಗು

    ಗುಜರಾತ್ ಚುನಾವಣೆಯಲ್ಲಿ ನಿಂತು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಜಿಗ್ನೇಶ್ ಮೇವಾನಿ, ಕರ್ನಾಟಕದಲ್ಲೂ ಚುನಾವಣೆ ಬರುತ್ತಿದ್ದು ಚಡ್ಡಿಗಳನ್ನು ಸೋಲಿಸಲು ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಚುನಾವಣೆ ವೇಳೆ ಮೂರು ವಾರ ಕರ್ನಾಟಕದಲ್ಲಿಯೇ ಇದ್ದು ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ಹೇಳಿ ಕರ್ನಾಟಕ ಸರ್ಕಾರಕ್ಕೆ ದಲಿತರ ಬಗ್ಗೆ ಆದಿವಾಸಿಗಳ ಬಗ್ಗೆ ಕಾಳಜಿ ಇದೆ. ಇವರಿಗೆ ಜಮೀನು ನೀಡಿ ಸಹಕರಿಸುತ್ತಿದೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯನವರನ್ನು ಹೊಗಳಿದರು. ಅಷ್ಟೇ ಅಲ್ಲದೇ ಚಡ್ಡಿಗಳು ಅಧಿಕಾರಕ್ಕೆ ಬರಬಾರದು, ಮೋದಿ ಯಾವುದೇ ಕಾರಣಕ್ಕೆ ಮುಂದೆ ಪ್ರಧಾನಿಯಾಗಬಾರದು. ಮೋದಿ ನಿವೃತ್ತಿ ಪಡೆದುಕೊಳ್ಳುವುದು ಉತ್ತಮ ಎಂದರು. ಇದನ್ನೂ ಓದಿ: ಗೌರಿ ದಿನಕ್ಕೆ ಸರ್ಕಾರ ಪ್ರಯೋಜಕತ್ವ ನೀಡಿಲ್ಲ, ಪೊಲೀಸ್ ತನಿಖೆ ತೃಪ್ತಿ ನೀಡಿದೆ : ಕವಿತಾ ಲಂಕೇಶ್

    2017ರ ಸೆಪ್ಟೆಂಬರ್ ನಲ್ಲಿ ಗೌರಿ ಹತ್ಯೆ ಖಂಡಿಸಿ ‘ನಾನು ಗೌರಿ’ ಹೆಸರಿನಲ್ಲಿ ದೊಡ್ಡ ಮಟ್ಟದ ಪ್ರತಿರೋಧ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲೂ ಅತಿಥಿಗಳು ಮೋದಿ, ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಎರಡನೇ ಬಾರಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆದಿದ್ದು ಮತ್ತೊಮ್ಮೆ ಟೀಕೆಗಳು ರಿಪೀಟ್ ಆಗಿದೆ. ಗೌರಿ ಅಭಿಮಾನಿಗಳು ಮೋದಿ, ಸಂಘ ಪರಿವಾರದ ವಿರುದ್ಧ ಟೀಕೆ ಮಾಡಿದರೂ ಸರ್ಕಾರಕ್ಕೆ ಚುನಾವಣೆಯ ಒಳಗಡೆ ಹಂತಕರನ್ನು ಬಂಧಿಸಲೇಬೇಕಾದ ಅನಿವಾರ್ಯತೆಯಲ್ಲಿದೆ. ಒಂದು ವೇಳೆ ಬಂಧನವಾಗದೇ ಇದ್ದರೆ ಚುನಾವಣೆಯಲ್ಲೂ ಈ ವಿಚಾರ ಪ್ರಚಾರದ ವಸ್ತುವಾಗಿ ರಾಜಕೀಯ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೂ ಓದಿ: ಗೌರಿಯನ್ನು ಮೌನ ಮಾಡಿದಾಗ ನಾನು, ನನ್ನಂತಹ ಹಲವರು ಹುಟ್ಟುತ್ತಾರೆ: ಪ್ರಕಾಶ್ ರೈ

    ಗೌರಿ ಹತ್ಯೆ ಹಾಗೂ ಮೋದಿ ಸರ್ಕಾರಕ್ಕೆ ಏನು ಸಂಬಂಧ ಎನ್ನುವುದನ್ನು ಯಾವುದೇ ಭಾಷಣಕಾರರೂ ತಿಳಿಸುವ ಯತ್ನ ಮಾಡಲಿಲ್ಲ. ಜೊತೆಗೆ ರಾಜ್ಯ ಸರ್ಕಾರವನ್ನು, ವಿಚಾರಣೆ ನಡೆಸುತ್ತಿರುವ ಎಸ್‍ಐಟಿಯನ್ನೂ ಪ್ರಶ್ನಿಸಲಿಲ್ಲ ಎನ್ನುವುದು ಮಾತ್ರ ವಿಪರ್ಯಾಸದ ವಿಚಾರ. ಇದನ್ನೂ ಓದಿ: `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್

  • ಗೌರಿ ದಿನಕ್ಕೆ ಸರ್ಕಾರ ಪ್ರಯೋಜಕತ್ವ ನೀಡಿಲ್ಲ, ಪೊಲೀಸ್ ತನಿಖೆ ತೃಪ್ತಿ ನೀಡಿದೆ : ಕವಿತಾ ಲಂಕೇಶ್

    ಗೌರಿ ದಿನಕ್ಕೆ ಸರ್ಕಾರ ಪ್ರಯೋಜಕತ್ವ ನೀಡಿಲ್ಲ, ಪೊಲೀಸ್ ತನಿಖೆ ತೃಪ್ತಿ ನೀಡಿದೆ : ಕವಿತಾ ಲಂಕೇಶ್

    ಬೆಂಗಳೂರು: ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ಗೆ ಜನ್ಮದಿನ ಪ್ರಯುಕ್ತ ಆಚರಿಸಲಾಗಿದ್ದ `ಗೌರಿ ದಿನ’ ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಪ್ರಯೋಜಕತ್ವ ನೀಡಿಲ್ಲ ಎಂದು ಕವಿತಾ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.

    ನಗರದ ಟೌನ್ ಹಾಲ್ ಬಳಿ ಆಯೋಜಿಸಿದ್ದ ಗೌರಿ ದಿನ ಕಾರ್ಯಕ್ರಮದ ಬಳಿಕ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ಗೌರಿಹಬ್ಬ ಎಂದು ರಾಜ್ಯಾದ್ಯಂತ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಗೌರಿ ಹತ್ಯೆ ಆರೋಪಿಗಳನ್ನು ಬಂಧಿಸದ ಕಾರಣ ನಾವು ಇಂದು ವಿಚಾರ ಸಂಕೀರ್ಣವನ್ನು ಮಾತ್ರ ನಡೆಸುತ್ತಿದ್ದೇವೆ ಎಂದರು.

    ಈ ಹಿಂದೆ ಗೌರಿ ಟ್ರಸ್ಟ್ ಸ್ಥಾಪನೆ ವೇಳೆ ಗೌರಿ ಹಬ್ಬ ನಡೆಸುವ ಕುರಿತು ಚರ್ಚೆ ನಡೆಸಲಾಗಿತ್ತು, ಆದರೆ ಟ್ರಸ್ಟ್ ನ ಹಲವರ ಅಭಿಪ್ರಾಯದ ಮೇಲೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅಂತಹ ನಾಯಕರು ಭಾಗವಹಿಸಿದ್ದಾರೆ. ಕಾರ್ಯಕ್ರಮಕ್ಕೆ ಸರ್ಕಾರ ಪ್ರಯೋಜಕತ್ವ ನೀಡಿದೆ ಎಂಬ ಆರೋಪಗಳು ದೊರೆಸ್ವಾಮಿ ಅವರಿಗೆ ಅವಮಾನಿಸುವ ಹಾಗೇ ಆಗುತ್ತದೆ ಎಂದರು.

    ಕಾರ್ಯಕ್ರಮದ ಭಾಗವಹಿಸದಿರುವ ಸಹೋದರ ಇಂದ್ರಜಿತ್ ಲಂಕೇಶ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಮ್ಮ ಸಹೋದರನ ಚಿಂತನೆ, ಅಭಿಪ್ರಾಯ ಭಿನ್ನವಾಗಿದೆ ಅಷ್ಟೇ. ಆದರೆ ನಾವೆಲ್ಲರೂ ಹತ್ಯೆ ಮಾಡಿದವರ ವಿರುದ್ಧ ಹೋರಾಟ ನಡೆಸಿದ್ದೇವೆ. ನಾನು ಮತ್ತು ನಮ್ಮ ಸಹೋದರ ಇಬ್ಬರು ಟ್ರಸ್ಟ್ ನಲ್ಲಿ ಇಲ್ಲ. ಕಾರ್ಯಕ್ರಮಕ್ಕೆ ಖರ್ಚು ಮಾಡಿದ ವಿವರಗಳನ್ನು ಟ್ರಸ್ಟ್ ವತಿಯಿಂದ ಪಡೆಯಬಹುದು. ಮೇವಾನಿ ಹಾಗೂ ಕನ್ನಯ್ಯರನ್ನು ಗೌರಿ ಮಕ್ಕಳಂತೆ ಭಾವಿಸಿದ್ದರು. ಅದೇ ಪ್ರೀತಿಗಾಗಿ ಇವರು ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಗೌರಿಯನ್ನು ಮೌನ ಮಾಡಿದಾಗ ನಾನು, ನನ್ನಂತಹ ಹಲವರು ಹುಟ್ಟುತ್ತಾರೆ: ಪ್ರಕಾಶ್ ರೈ

     

    ಟ್ರಸ್ಟ್ ಮೂಲಕ ನಿರಂತರವಾಗಿ ಗೌರಿ ಅವರ ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮುಂದುವರೆಸುತ್ತೇವೆ. ವಿಶೇಷ ತನಿಖಾ ದಳ ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಿದ್ದು, ಪ್ರತಿ ವಾರ ನಮಗೇ ತನಿಖೆಯ ಪ್ರಗತಿಯನ್ನು ತಿಳಿಸುತ್ತಿದ್ದಾರೆ. ಪೊಲೀಸ್ ತನಿಖೆ ನಮಗೇ ತೃಪ್ತಿ ನೀಡಿದೆ. ಆದರೆ ಕೊಲೆ ನಡೆದಿರುವುದು ವಯಕ್ತಿಕ ಕಾರಣದಿಂದ ಅಲ್ಲ. ಅದ್ದರಿಂದ ತನಿಖೆ ನಡೆಸುಲು ಸಮಯ ತೆಗೆದುಕೊಳ್ಳುತ್ತದೆ ಎಂಬ ಅರಿವಿದೆ ಎಂದರು. ಇದನ್ನೂ ಓದಿ: `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್

    ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಉದ್ದೇಶದ ಹಿಂದೆ ಬೇರೆಯಾದ್ದೆ ಕಾರಣಗಳು ಇರಬಹುದು. ಏಕೆಂದರೆ ಕಳೆದ ಹಲವು ವರ್ಷಗಳಲ್ಲಿ ಸಿಬಿಐಗೆ ವಹಿಸಿದ್ದ ಪ್ರಕರಣಣಗಳಲ್ಲಿ ಯಾವುದೇ ಫಲಿತಾಂಶ ಲಭಿಸಿಲ್ಲ. ವಿಶೇಷ ತನಿಖಾ ದಳದ ವಿಚಾರಣೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಹಂತಕರನ್ನು ಬಂಧಿಸುವ ವಿಶ್ವಾಸವಿದೆ. ಪ್ರಕರಣವನ್ನು ಮತ್ತೆ ಸಿಬಿಐ ಗೆ ವಹಿಸುವುದರಿಂದ ವಿಚಾರಣೆ ಮತ್ತೆ ಒಂದು ವರ್ಷ ಹಿಂದುಳಿಯುವ ಸಂಭವವಿದೆ ಎಂದು ಹೇಳಿದರು.

  • ಗೌರಿ ಲಂಕೇಶ್ ಹತ್ಯೆ ತನಿಖೆ: ಕವಿತಾ ಲಂಕೇಶ್ ಅಸಮಾಧಾನ

    ಗೌರಿ ಲಂಕೇಶ್ ಹತ್ಯೆ ತನಿಖೆ: ಕವಿತಾ ಲಂಕೇಶ್ ಅಸಮಾಧಾನ

    ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಎಸ್‍ಐಟಿ ತನಿಖೆ ವಿಳಂಬವಾಗುತ್ತಿರುವ ಕುರಿತು ಸಹೋದರಿ ಕವಿತಾ ಲಂಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ತಮ್ಮ ಮುಂದಿನ ಚಿತ್ರದ ಸಮ್ಮರ್ ಹಾಲಿಡೇಸ್ ಟ್ರೇಲರ್ ಲಾಂಚ್ ವೇಳೆ ಮಾತನಾಡಿದ ಅವರು, ಸಹೋದರಿ ಗೌರಿ ಲಂಕೇಶ್ ಅವರನ್ನು ನೆನೆದು ಭಾವುಕರಾದರು. ಗೃಹ ಸಚಿವ ರಾಮಲಿಂಗ ರೆಡ್ಡಿ ಅವರು ಕಳೆದ ಎರಡು ತಿಂಗಳಿನಿಂದ ಎರಡು ವಾರದಲ್ಲಿ ತನಿಖೆ ಮುಕ್ತಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆ ಬಗ್ಗೆ ಯಾವುದೇ ಸ್ಪಷ್ಟನೇ ಸಿಕ್ಕಿಲ್ಲ ಎಂದರು.

    ಗೃಹ ಸಚಿವರ ಮೇಲೆ ನಂಬಿಕೆ ಇಡ್ಬೇಕಾ ಬೇಡ್ವಾ ಅನ್ನುವ ಅನುಮಾನ ಕಾಡ್ತಿದೆ. ಎಸ್‍ಐಟಿ ತನಿಖಾಧಿಕಾರಿ ಬಿಕೆ ಸಿಂಗ್ ಅವರು ಇನ್ನು 2 ವಾರಗಳಲ್ಲಿ ತನಿಖೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಅವರ ಹೇಳಿಕೆ ಹಿನ್ನೆಲೆ ನಂಬಿಕೆ ಬಂದಿದೆ ಎಂದು ಹೇಳಿದರು.

    ತಮ್ಮ ಸಮ್ಮರ್ ಹಾಲಿಡೇಸ್ ಸಿನಿಮಾದಲ್ಲಿ ಗೌರಿ ಲಂಕೇಶ್ ಸಾಮಾಜಿಕ ಹೋರಾಟಗಾರ್ತಿಯ ಸಣ್ಣ ಪಾತ್ರವನ್ನು ಮಾಡಿದ್ದಾರೆ. ನಿಜ ಜೀವನದಲ್ಲೂ ಅವರು ಹಾಗೆಯೇ ಇದ್ದರು. ಅವರ ಸಾಮಾಜಿಕ ಹೋರಾಟವೇ ಅವರ ಪ್ರಾಣಕ್ಕೆ ಕಂಟಕವಾಗುತ್ತದೆ ಎಂದು ತಿಳಿದಿಲಿಲ್ಲ. ನಮ್ಮ ತಂದೆ ಲಂಕೇಶ್ ಅವರು ಸರ್ಕಾರ ವಿರುದ್ಧ ಹಲವು ಬರಹಗಳನ್ನು ಪ್ರಕಟಿಸಿದ್ದರು ಎಂದು ನೆನಪಿಸಿಕೊಂಡರು.

    ನಿಮ್ಮ ಹಾಗೂ ಸಹೋದರ ಇಂದ್ರಜಿತ್ ಲಂಕೇಶ್ ಅವರಿಗೆ ಯಾವುದಾರರು ಜೀವ ಬೆದರಿಕೆ ಕುರಿತ ಪ್ರಶ್ನೆಗೆ ಉತ್ತರಿಸದ ಅವರು ನಮಗೇ ಇಂತಹ ಯಾವುದೇ ಜೀವ ಬೆದರಿಕೆ ಇಲ್ಲ, ಆದರೆ ಗೌರಿ ಹತ್ಯೆ ನಂತರ ಅತಂಕಕ್ಕೆ ಒಳಗಾಗಿದ್ದೇವು ಎಂದು ತಿಳಿಸಿದರು.