ಮಂಡ್ಯ: ರಾಜ್ಯದ ಹಲವೆಡೆ (Rain) ಮಳೆಯಾಗುತ್ತಿದ್ದರೂ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಸುಳಿವೇ ಇಲ್ಲ. ಇದರಿಂದ ಕನ್ನಂಬಾಡಿ ಒಡಲಲ್ಲಿ (KRS Dam) ನೀರಿನ ಮಟ್ಟ 89 ಅಡಿಗೆ ಕುಸಿತ ಕಂಡಿದೆ.
ದಿನೇ ದಿನೇ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ. ಇದರಿಂದ ಕಾವೇರಿ ನೀರಿಗೆ (Kaveri Water) ಸಮಸ್ಯೆಯಾಗುವ ಭೀತಿ ಎದುರಾಗುತ್ತಿದೆ. ಮುಂಗಾರು ತಡವಾದ್ರೆ ಕುಡಿಯುವ ನೀರಿಗೆ ಸಹ ಕಂಟಕ ಎದುರಾಗುವ ಸಾಧ್ಯತೆ ಇದೆ. ಈಗ ಡ್ಯಾಂನಲ್ಲಿ ಕೇವಲ 15 ಟಿಎಂಸಿ ನೀರು ಮಾತ್ರ ಇದೆ. ಈ 15 ಟಿಎಂಸಿಯಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಉಳಿದ 8 ಟಿಎಂಸಿಯಲ್ಲಿ ಬೆಳೆಗೂ ನೀರು ಕೊಡಬೇಕು ಮತ್ತು ಬೆಂಗಳೂರಿಗೆ ಕುಡಿಯುವ ನೀರು ಒದಗಿಸಬೇಕಾಗಿದೆ. ಇದನ್ನೂ ಓದಿ: ಡೇಂಜರ್ನಲ್ಲಿದ್ದರೂ ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ತನ್ನ ವಾಯುಸೀಮೆ ಬಳಸಲು ನಿರಾಕರಿಸಿದ ಪಾಕ್
ಇಂದಿನ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 89.15 ಅಡಿ.
ಗರಿಷ್ಠ ಸಾಮಥ್ರ್ಯ – 49.452 ಟಿಎಂಸಿ.
ಇಂದಿನ ಸಾಮಥ್ರ್ಯ – 15.437 ಟಿಎಂಸಿ.
ಒಳ ಹರಿವು – 150 ಕ್ಯುಸೆಕ್.
ಹೊರ ಹರಿವು – 347 ಕ್ಯುಸೆಕ್.
ರಾಮನಗರ: ತಮಿಳುನಾಡಿಗೆ (Tamil Nadu) ಕಾವೇರಿ ನೀರು (Kaveri Water) ಹರಿಸುವುದನ್ನು ಖಂಡಿಸಿ ಮಂಗಳವಾರ ಬೆಂಗಳೂರು ಹಾಗೂ ರಾಮನಗರ (Ramanagara) ಬಂದ್ ವಿಚಾರದ ಬಗ್ಗೆ ರಾಮನಗರದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾಷೆ, ಜಲ, ರಾಜ್ಯದ ಬಗ್ಗೆ ಅನ್ಯಾಯವಾದ ವೇಳೆ ಸಂಘಟನೆಗಳು ಬಂದ್ ಮಾಡುವುದು ಸಹಜ. ಹೀಗಾಗಿ ಅವರಿಗೆ ನಮ್ಮಿಂದ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಮಳೆ ಬರುವುದಕ್ಕೂ ಸರ್ಕಾರಕ್ಕೂ ಸಂಬಂಧ ಇದೆಯಾ? ಇದೊಂದು ನೈರ್ಸಗಿಕ ವಿಕೋಪ. ಕಳೆದ ವರ್ಷ 660 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ. ಈಗ ರಾಜ್ಯದಲ್ಲಿ ಮಳೆ ಇಲ್ಲ. ಈ ಬಗ್ಗೆ ಮಾನಿಟರಿಂಗ್ ವಿಂಗ್ಗೆ ಎಲ್ಲವೂ ಗೊತ್ತಿದೆ. ಸುಪ್ರೀಂ ಕೋರ್ಟ್ಗೂ ಸಹ ನೀರಿಲ್ಲದಿರುವ ಬಗ್ಗೆ ಮಾಹಿತಿ ಇದ್ದರೂ ತಡೆ ನೀಡಿಲ್ಲ. ಪ್ರಧಾನಿಗಳಿಗೆ ಮಾಹಿತಿ ಇದ್ದರೂ ಅವರೂ ಸಹ ಮಧ್ಯ ಪ್ರವೇಶ ಮಾಡುತ್ತಿಲ್ಲ. ನೀರಿಗಾಗಿ ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ (BJP) ನಾಯಕರು, ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಆ ಕೆಲಸ ಮಾಡದೇ ಸುಮ್ಮನೆ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ದೇವದುರ್ಗ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲ: ಕರೆಮ್ಮ ನಾಯಕ್
ನಮ್ಮ ಸರ್ಕಾರ ರೈತರಿಗೆ ಮಾತ್ರವಲ್ಲದೇ ಯಾವುದೇ ವರ್ಗಕ್ಕೆ ಮೋಸ ಮಾಡಿಲ್ಲ. ಸುಳ್ಳು ಹೇಳುವುದು, ಮೋಸ ಮಾಡುವುದು ಬಿಜೆಪಿ ಕೆಲಸ. ನಾವು ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೆವೆ. ಬಿಜೆಪಿಗೆ ಮೋಸ ಮಾಡುವುದು ಅವರ ರಕ್ತದಲ್ಲಿಯೇ ಇದೆ. ಬಿಜೆಪಿಯವರು ಇಂಡಿಯಾ (INDIA) ಒಕ್ಕೂಟದ ಬಗ್ಗೆ ಮಾತನಾಡುವ ಮೊದಲು, ಅವರ ಎನ್ಡಿಎ (NDA) ಮೈತ್ರಿ ಕೂಟದಲ್ಲಿ ಅಣ್ಣ ಡಿಎಂಕೆ ಇದ್ದಾರೆ. ಅವರಿಗೆ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿತ್ತು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಂದ್ ಬಿಸಿ ನಡುವೆ ಮಂಗಳವಾರ CWRC ಸಭೆ – ಮತ್ತೆ ನೀರು ಹರಿಸಲು ಸೂಚಿಸುತ್ತಾ ನಿಯಂತ್ರಣ ಸಮಿತಿ?
ಬೆಂಗಳೂರು ಬಂದ್ಗೆ (Bengaluru Bandh) ಬಿಎಂಟಿಸಿ ಬೆಂಬಲ ನೀಡುವ ವಿಚಾರದ ಕುರಿತು ಮಾತನಾಡಿ, ಬಿಎಂಟಿಸಿ, ಕೆಎಸ್ಆರ್ಟಿಸಿ ಯೂನಿಯನ್ಗಳಿವೆ. ಅವರು ಬಂದ್ ಬಗ್ಗೆ ನಿರ್ಣಯ ಮಾಡುತ್ತಾರೆ. ಬಂದ್ಗೆ ನಮ್ಮ ವಿರೋಧ ಇಲ್ಲ. ಆದರೆ ಎರಡು ದಿನ ಬಂದ್ ಮಾಡುವುದರಿಂದ ಜನರಿಗೆ ಸಮಸ್ಯೆ ಆಗಲಿದೆ. ಈ ಬಗ್ಗೆ ಸಂಘಟನೆಗಳು ಚಿಂತನೆ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿ – ಜೆಡಿಎಸ್ನಲ್ಲಿಅಸಮಾಧಾನವಿಲ್ಲ ಎಂದ ಖಾಶೆಂಪೂರ್
3 ಡಿಸಿಎಂ ಹುದ್ದೆ ಬಗ್ಗೆ ಕಾಂಗ್ರೆಸ್ನಲ್ಲಿ ಚರ್ಚೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಮಯದಲ್ಲಿ ಡಿಸಿಎಂ ಹುದ್ದೆ ಬಗ್ಗೆ ಚರ್ಚೆ ಅನಾವಶ್ಯಕ. ವೇಣುಗೋಪಾಲ್ ಅವರು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಾವಶ್ಯಕ ಗೊಂದಲ ಸೃಷ್ಟಿಸುವುದು ಬೇಕಿಲ್ಲ. ಡಿಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ. ಯಾರೂ ಡಿಸಿಎಂ ವಿಚಾರವಾಗಿ ಮಾತನಾಡಬಾರದು ಎಂದು ಸ್ವಪಕ್ಷೀಯ ಸಚಿವರಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಶಾಂತಿಯುತ ಬಂದ್ಗೆ ಸರ್ಕಾರ ಅಡಚಣೆ ಮಾಡಲ್ಲ: ಡಿಕೆಶಿ
ಮಂಡ್ಯ: ಕೆಆರ್ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ (Tamil Nadu) ಬಿಡುತ್ತಿರುವ ನೀರಿನಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಡ್ಯಾಂನಿಂದ ಭಾನುವಾರ 3,838 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಶನಿವಾರ 2,973 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಇಂದು 900 ಕ್ಯೂಸೆಕ್ನಷ್ಟು ನೀರು ಹೆಚ್ಚಳವಾಗಿದೆ. ಅತ್ತ ಕಬಿನಿ ಡ್ಯಾಂನಿಂದಲೂ ತಮಿಳುನಾಡಿಗೆ 1,600 ಕ್ಯೂಸೆಕ್ನಷ್ಟು ನೀರು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಕೆಆರ್ಎಸ್ ಡ್ಯಾಂನಲ್ಲಿ 20.405 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 96.80 ಅಡಿ ನೀರು ಇದೆ. ಇದನ್ನೂ ಓದಿ: KPSC ಸದಸ್ಯರಾಗಿ ಮುಸ್ತಫಾ ನೇಮಕ
ಇಂದು ಡ್ಯಾಂಗೆ 6,156 ಕ್ಯೂಸೆಕ್ ನೀರು ಒಳಹರಿವಿದ್ದು, ಡ್ಯಾಂನಿಂದ ಹೊರಹರಿವು 6,874 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ. ನಾಲೆ ಹಾಗೂ ನದಿಗೆ ಸೇರಿ 6,874 ಕ್ಯೂಸೆಕ್ ನೀರು ಹೊರಹರಿವು ಇದೆ. ಇದನ್ನೂ ಓದಿ: ಕಾವೇರಿ, ಹೇಮಾವತಿ ನೀರಿಗಾಗಿ ಮಂಗಳವಾರ ಕೆಆರ್ ಪೇಟೆ ಬಂದ್
ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ (Kuruburu Shanthakumar) ನೇತೃತ್ವದಲ್ಲಿ ಜಲ ಸಂರಕ್ಷಣಾ ಸಮಿತಿಯಿಂದ (Water Conservation Committee) ಮಂಗಳವಾರ ಬಂದ್ಗೆ ಕರೆ ನೀಡಲಾಗಿದ್ದು, ಕನ್ನಡ ಪರ ಸಂಘಟನೆಗಳು (Pro-Kannada Organization) ಈ ವಿಚಾರವಾಗಿ ತಟಸ್ಥ ಧೋರಣೆ ತಾಳಿವೆ.
ಮಂಗಳವಾರ ಬಂದ್ಗೆ ನಮ್ಮ ಬೆಂಬಲವಿಲ್ಲ ಎಂದು ಪ್ರವೀಣ್ ಶೆಟ್ಟಿ (Praveen Shetty) ಬಣ ಹೇಳಿದೆ. ಸದ್ಯಕ್ಕೆ ಕನ್ನಡ ಸಂಘಟನೆಗಳಿಂದ ಮಂಗಳವಾರ ಬಂದ್ ಬಗ್ಗೆ ಬೆಂಬಲವಿಲ್ಲ. ಬೇರೆ ದಿನಾಂಕದಂದು ಬಂದ್ ಘೋಷಣೆಯಾಗಬೇಕಿತ್ತು. ಮಂಗಳವಾರ ಕರೆ ನೀಡಿದ್ದು ಬಹಳ ಬೇಗ ಆಯ್ತು. ಎಲ್ಲರನ್ನೂ ಒಟ್ಟುಗೂಡಿಸಲು ಕಷ್ಟ ಆಗಬಹುದು ಎಂದು ಕನ್ನಡ ಸಂಘಟನೆಗಳ ಮುಖಂಡರು ಹೇಳುತ್ತಿದ್ದಾರೆ. ಇದನ್ನೂ ಓದಿ: ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ
ಬೆಂಗಳೂರು: ಸಂಕಷ್ಟದ ಪರಿಸ್ಥಿತಿಯಲ್ಲಿ ಕಾವೇರಿ (Kaveri) ಸಮಸ್ಯೆಗೆ ಮೇಕೆದಾಟು (Meke Datu) ಯೋಜನೆಯೊಂದೇ ಪರಿಹಾರವಾಗಿದೆ. ನ್ಯಾಯಾಲಯ ಈ ವಿಚಾರವಾಗಿ ಕೆಳಹಂತದಲ್ಲೇ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದ್ದು, ಈಗ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅಗತ್ಯ ಎಲ್ಲಾ ಇಲಾಖೆಗಳ ಅನುಮತಿ ನೀಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರಿನ (Bengaluru) ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ತಮಿಳುನಾಡು (Tamil Nadu) ಪಾಲಿನ ನೀರು ಹರಿಸಲು ನಾವು ಬದ್ಧರಾಗಿದ್ದೇವೆ. ಗುರುವಾರ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಹ ನಿಮ್ಮ ಪಾಲಿನ ನೀರು ನಿಮಗೆ ಸಿಗಲಿದೆ. ಹೀಗಿರುವಾಗ ಕರ್ನಾಟಕದವರು ಎಷ್ಟಾದರೂ ಅಣೆಕಟ್ಟೆ ಕಟ್ಟಿಕೊಳ್ಳಲಿ ಬಿಡಿ. ನೀವೇಕೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದೀರಿ? ಈ ವಿಚಾರವಾಗಿ ಕೆಳಹಂತದಲ್ಲೇ ತೀರ್ಮಾನ ಮಾಡಿ ಎಂದು ತಿಳಿಸಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ (BJP) ಸ್ನೇಹಿತರು ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಒತ್ತಡ ಹಾಕಲಿ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರ ನೀರಿನ ಗ್ಯಾರಂಟಿ ಕೊಡಲಿ, ಶನಿವಾರ ಬೃಹತ್ ಪ್ರತಿಭಟನೆ ಮಾಡ್ತೇವೆ: ಬೊಮ್ಮಾಯಿ
ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು 24,000 ಕ್ಯೂಸೆಕ್ ನೀರು ಹರಿಸುವಂತೆ ಆಗ್ರಹ ಮಾಡಿತ್ತು. ನಮ್ಮ ಅಧಿಕಾರಿಗಳು ತಾಂತ್ರಿಕ ಸಮಿತಿ ಮುಂದೆ, ನಾವು ಕೇವಲ 3,000 ಕ್ಯೂಸೆಕ್ ನೀರು ಬಿಡಲಷ್ಟೇ ಶಕ್ತವಾಗಿದ್ದೇವೆ ಎಂದು ಸಮರ್ಥವಾಗಿ ವಾದ ಮಂಡಿಸಿದರು. ಇದರ ಪರಿಣಾಮವಾಗಿ 10,000 ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಮೊದಲು ಆದೇಶ ನೀಡಿತು. ನಂತರ 5,000 ಕ್ಯೂಸೆಕ್ಗೆ ಇಳಿಕೆಯಾಗಿದೆ ಎಂದರು.
ನಾವು ಉತ್ತಮ ಮಳೆ ನಿರೀಕ್ಷೆ ಮಾಡಿದ್ದೆವು. ಆದರೆ ಮಳೆ ಅಭಾವ ಎದುರಾಗಿದೆ. ಈ ಮಧ್ಯೆ ಮಂಡ್ಯ ಹಾಗೂ ಇತರೆ ಭಾಗದ ರೈತರ ಬೆಳೆ ಉಳಿಸುವ ಉದ್ದೇಶದಿಂದ ಜಮೀನಿಗೆ ನೀರು ಹರಿಸಿ ಅವರ ರಕ್ಷಣೆ ಮಾಡಿದ್ದೇವೆ. ನಾವು ಮೇಲ್ಮನವಿ ಸಲ್ಲಿಸುವ ಮುನ್ನ ಸರ್ವಪಕ್ಷ ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ವಿಚಾರಣೆಗೂ ಮುನ್ನ ಸರ್ವಪಕ್ಷ ನಾಯಕರ ಸಭೆ ಮಾಡಿದ್ದೆವು. ಆದರೆ ನ್ಯಾಯಾಲಯ ಎರಡೂ ರಾಜ್ಯಗಳ ಅರ್ಜಿ ಹಾಗೂ ಎರಡೂ ರಾಜ್ಯಗಳ ರೈತರ ಅರ್ಜಿಗಳನ್ನು ತಿರಸ್ಕರಿಸಿ, ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನೂ ಓದಿ: ಎನ್ಡಿಎ ಒಕ್ಕೂಟಕ್ಕೆ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆ
ಆ ಮೂಲಕ ಈ ತಿಂಗಳು 27ರವರೆಗೂ ನೀರು ಹರಿಸುವ ಪರಿಸ್ಥಿತಿ ಬಂದಿದೆ. ಈ ಹಿಂದೆ ಬಿಜೆಪಿ, ದಳದ ಸರ್ಕಾರ ಇದ್ದಾಗಲೂ ಇಂತಹ ಪರಿಸ್ಥಿತಿ ಎದುರಾಗಿತ್ತು. ಆಗಲೂ ರಾಜ್ಯ ನೀರು ಹರಿಸಿದೆ. ಬಿಜೆಪಿ ಸರ್ಕಾರ ಈ ಹಿಂದೆ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 10,000 ಕ್ಯೂಸೆಕ್ ನೀರು ಹರಿಸುವುದಾಗಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದ ದಾಖಲೆಯೂ ನಮ್ಮ ಬಳಿ ಇದೆ. ಆದರೂ ಇಂದು ಯಡಿಯೂರಪ್ಪನವರು ಹಾಗೂ ಬೊಮ್ಮಾಯಿ ಅವರು ಮಾತನಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಜಕಾರಣ ಮಾತನಾಡಲು ನನಗೆ ಇಚ್ಛೆ ಇಲ್ಲ. ನಾನು ರಾಜಕಾರಣ ಮಾಡಬಹುದು. ಎಲ್ಲರಿಗೂ ಉತ್ತರ ನೀಡುವಷ್ಟು ಶಕ್ತಿ ಜನ ನಮಗೆ ನೀಡಿದ್ದಾರೆ. ಕುಮಾರಣ್ಣ, ಯಡಿಯೂರಪ್ಪ, ಬೊಮ್ಮಾಯಿ ಅವರ ಪ್ರತಿ ಮಾತಿಗೂ ಅವರ ಸರ್ಕಾರದ ಸಮಯದಲ್ಲಿ ಏನಾಗಿತ್ತು ಎಂದು ದಾಖಲೆ ಸಮೇತ ಉತ್ತರ ನೀಡಬಲ್ಲೆ ಎಂದು ಹರಿಹಾಯ್ದರು.
ಚಿತ್ರರಂಗ, ಕನ್ನಡಪರ ಸಂಘಟನೆಗಳು ಈಗ ಬಹಳ ಚೆನ್ನಾಗಿ ರೋಷಾವೇಶ ತೋರುತ್ತಿವೆ. ಬಹಳ ಸಂತೋಷ. ಅವರ ವಿಚಾರಗಳು ಈಗ ಹೊರಗೆ ಬರುತ್ತಿರುವುದಕ್ಕೆ ಸಂತೋಷವಾಗಿದೆ. ಆದರೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ನೀರಿಗಾಗಿ ನಾವು ಹೆಜ್ಜೆ ಹಾಕಿದಾಗ ಇವರೆಲ್ಲ ಎಲ್ಲಿದ್ದರು? ಎಲ್ಲಿಗೆ ಹೋಗಿದ್ದರು? ಆಗಲೂ ಕೆಲವು ಸ್ವಾಮೀಜಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದರು. ನಾನು ಆ ಹೋರಾಟವನ್ನು ನನ್ನ ಸ್ವಾರ್ಥಕ್ಕೆ ಮಾಡಿದ್ದೆನಾ? ಆಗ್ಯಾಕೆ ಇವರು ಧ್ವನಿ ಎತ್ತಲಿಲ್ಲ? ವಿರೋಧ ಪಕ್ಷದಲ್ಲಿರುವವರು ನಮ್ಮನ್ನು ದೂಷಣೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಜನರು ಹಾಗೂ ರೈತರ ರಕ್ಷಣೆಗೆ ಬದ್ಧವಾಗಿದ್ದು, ನಮ್ಮ ಕಾನೂನು ತಜ್ಞರ ವಾದ ನಮಗೆ ತೃಪ್ತಿ ಇದೆ. ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರು ಯಾವ ವಕೀಲರನ್ನು ನೇಮಿಸಿದ್ದರೋ ಅದೇ ವಕೀಲರನ್ನು ಇಟ್ಟುಕೊಂಡೇ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಕಾವೇರಿ ವಿಷಯ ಉಲ್ಬಣವಾಗಲು ಡಿಕೆಶಿ ಕಾರಣ, ತಕ್ಷಣ ರಾಜೀನಾಮೆ ನೀಡಲಿ: ಈಶ್ವರಪ್ಪ ಆಗ್ರಹ
ನಾವು ವಿಳಂಬವಾಗಿ ಹೋರಾಟ ಮಾಡಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅದಕ್ಕೇ ಆದ ಪ್ರಕ್ರಿಯೆಗಳಿವೆ. ಕೆಳ ಹಂತದಲ್ಲಿ ನಮಗೆ ನ್ಯಾಯ ಸಿಗಲಿಲ್ಲ ಎಂದಾಗ ನಾವು ಉನ್ನತ ನ್ಯಾಯಾಲಯದ ಮೊರೆ ಹೋಗಬೇಕು. ಸುಪ್ರೀಂ ಕೋರ್ಟ್ ಎರಡು ಬಾರಿಯೂ ನಾನು ಈ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿದೆ. ಮತ್ತೆ ಪ್ರಾಧಿಕಾರದ ಬಳಿ ಚರ್ಚೆ ಮಾಡಲು ಹೇಳಿದೆ. ಈಗ ಮರುಪರಿಶೀಲನೆ ಅರ್ಜಿ ಹಾಕಿದರೂ ಇಷ್ಟೇ ತಾನೇ ಆಗುವುದು. ತಮ್ಮ ರಾಜ್ಯ ರಾಜಸ್ಥಾನದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಕೇಂದ್ರ ಜಲಶಕ್ತಿ ಸಚಿವರು ಹೇಳುತ್ತಿದ್ದರು. ದೇಶದಲ್ಲಿ ಮಳೆ ಬಾರದೇ ಇದ್ದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾವೇರಿ ಕೊಳ್ಳದಲ್ಲಿ ಈ ವರ್ಷದ ಆಗಸ್ಟ್ ತಿಂಗಳ ಮಳೆ ಕೊರತೆ ಕಳೆದ 130 ವರ್ಷಗಳಲ್ಲೇ ದಾಖಲೆ ಮಟ್ಟದ್ದಾಗಿದೆ. ಈ ಹಿಂದೆ ಕೆಆರ್ಎಸ್ನಲ್ಲಿ ಹೋಮ, ಹವನ ಮಾಡಿಸಿದ ಘಟನೆಗಳನ್ನು ನಾವು ನೋಡಿದ್ದೇವೆ. ನಮ್ಮ ರಾಜ್ಯದ ಬಿಜೆಪಿಯ ಕೇಂದ್ರ ಸಚಿವರು ಸರ್ವಪಕ್ಷ ಸಂಸದರ ಸಭೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದರು. ಹೊರಗೆ ಮಾಧ್ಯಮಗಳ ಮುಂದೆ ಬಂದು ರಾಜಕಾರಣ ಹೇಳಿಕೆ ನೀಡಿದರು. ಇಲ್ಲೂ ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳದು ಇದೇ ಧೋರಣೆ. ಅವರ ರಾಜಕಾರಣ ಅವರು ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ನಾವು ಹಾಗೂ ತಮಿಳುನಾಡು ಇಬ್ಬರೂ ಮೇಲ್ಮನವಿ ಸಲ್ಲಿಕೆ ಮಾಡಿದ್ದೆವು. ಎರಡನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಸಚಿವನಾಗಿ ಕೆಲವು ವಿಚಾರವನ್ನು ಬಿಚ್ಚಿಡಲು ಆಗುವುದಿಲ್ಲ. ಅದರ ಪರಿಣಾಮದ ಬಗ್ಗೆ ನಾನು ಅರಿತು ಮಾತನಾಡಬೇಕು. ಕೇಂದ್ರ ಸಚಿವರು ರಾಜ್ಯ ಸರ್ಕಾರದ ಮನವಿಗೆ ಅವರು ನಮ್ಮ ಶಕ್ತಿ ಅನುಸಾರ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಎರಡೂ ರಾಜ್ಯದವರನ್ನು ಕರೆದು ಮಾತುಕತೆ ನಡೆಸುವಂತೆ ಕೇಳಿದ್ದೇವೆ. ಎಲ್ಲ ವಿಚಾರವನ್ನೂ ಅವರ ಗಮನಕ್ಕೆ ತಂದಿದ್ದೇವೆ. ಮುಖ್ಯಮಂತ್ರಿಗಳು ಸೇರಿದಂತೆ ಸಚಿವರುಗಳು ಸೇರಿ ಮೂರು ದಿನಗಳ ಕಾಲ ಎಲ್ಲಾ ಸಂಸದರು, ಸಚಿವರುಗಳ ಜತೆ ಚರ್ಚೆ ಮಾಡಿದ್ದೇವೆ. ಅವರು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಮಂಡ್ಯ ಬಂದ್ನಿಂದಾಗಿ ಯಾವುದೇ ಪ್ರಯೋಜನವಿಲ್ಲ. ಅನಗತ್ಯವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು. ಸರ್ಕಾರ ನಿಮ್ಮ ಪರವಾಗಿ ಹೋರಾಟ ಮಾಡುತ್ತಿದೆ. ಇಷ್ಟು ದಿನಗಳ ಕಾಲ ನಿಮ್ಮ ರಕ್ಷಣೆ ಮಾಡಿದ್ದು, ಮುಂದಿನ ದಿನಗಳಲ್ಲೂ ಮಾಡುತ್ತೇವೆ. ಬಂದ್ನಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಹೀಗಾಗಿ ಬಂದ್ ಕೈಬಿಡಿ. ನಾವು ಅಧಿಕಾರದಲ್ಲಿದ್ದೇವೆ. ನಿಮ್ಮ ಹೋರಾಟವನ್ನು ನಾವು ಬೇಡ ಎನ್ನುವುದಿಲ್ಲ. ಆದರೆ ಜನರಿಗೆ ತೊಂದರೆಯಾಗುವುದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಕಾವೇರಿ ಸಮಸ್ಯೆ ಪರಿಹಾರಕ್ಕೆ ಕೂಡಲೇ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು: ಹೆಚ್ಡಿ ರೇವಣ್ಣ
ಮೇಕೆದಾಟು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯ ಈ ವಿಚಾರವಾಗಿ ಪ್ರಾಧಿಕಾರದ ಹಂತದಲ್ಲಿ ಬಗೆಹರಿಸಿಕೊಳ್ಳಲು ಹೇಳಿದೆ. ನಾವು ಆದಷ್ಟು ಬೇಗ ಮೇಕೆದಾಟು ಯೋಜನೆ ಜಾರಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು. ಪ್ರಧಾನಮಂತ್ರಿಗಳ ಮಧ್ಯ ಪ್ರವೇಶದ ಬಗ್ಗೆ ವಿರೋಧ ಪಕ್ಷಗಳು ಕೇಂದ್ರದತ್ತ ಬೆರಳು ಮಾಡುವ ಪ್ರಯತ್ನ ಎನ್ನುತ್ತಿವೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರದಲ್ಲಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ಕಾವೇರಿ ಪ್ರಾಧಿಕಾರದ ಸಭೆ ಕರೆದಿದ್ದರು. ಇಷ್ಟು ದಿನಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳುತ್ತಿದ್ದರು. ಈಗ ನ್ಯಾಯಾಲಯವೇ ಈ ವಿಚಾರ ಬಗೆಹರಿಸಿಕೊಳ್ಳಲು ಹೇಳಿದೆ. ಕೇಂದ್ರ ಸರ್ಕಾರ ಯಾವಾಗ ದಿನಾಂಕ ನಿಗದಿ ಮಾಡುತ್ತದೋ ಅಂದು ಹೋಗಿ ಚರ್ಚೆ ಮಾಡಲು ನಾವು ಸಿದ್ಧ ಎಂದು ಹೇಳಿದರು.
ಸಚಿವ ಸಂಪುಟದ ಕೆಲ ಸಚಿವರು ಡಿಸಿಎಂ ಬಗ್ಗೆ ಮಾತನಾಡಿದ್ದಾರೆ. ಅನೇಕರು ಆಸೆ ಪಡುತ್ತಾರೆ. ಆಸೆ ಪಡುವವರಿಗೆ ಉತ್ತರ ನೀಡಲು ಬೇರೆಯವರು ಇದ್ದಾರೆ. ಅವರು ಕೊಡುತ್ತಾರೆ. ನಾನು ಈ ವಿಚಾರದಲ್ಲಿ ಮೆತ್ತಗಾಗುತ್ತೇನೋ ಇಲ್ಲವೋ ಎಂಬುದು ನಿಮಗೂ ಗೊತ್ತಿದೆ, ಅವರಿಗೂ ಗೊತ್ತಿದೆ. ಬಿಜೆಪಿ ಹಾಗೂ ದಳದವರಿಗೂ ಗೊತ್ತಿದೆ. ನನ್ನ ರಾಜಕೀಯ ಜೀವನದ ಹಾದಿ ನೋಡಿ. 1975ರಿಂದ ನನ್ನನ್ನು, ನನ್ನ ಹೋರಾಟ ನೋಡಿದ್ದೀರಿ. ಇದನ್ನು ನೋಡಿಯೇ ಪಕ್ಷ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದೆ. ಇದನ್ನೂ ಓದಿ: ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ
ಜಲಶಕ್ತಿ ಸಚಿವರು ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಮೇಕೆದಾಟು ಯೋಜನೆಗೆ ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಪರಿಹಾರ ಹಾಗೂ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬಹುದು. ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳುವ ವಿಚಾರವಾಗಿ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಂಗಾರಪ್ಪ ಸಿಎಂ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು: ಮಧು ಬಂಗಾರಪ್ಪ
ರಾಯಚೂರು: ಕಾವೇರಿ ನೀರಿನ (Kaveri Water) ವಿಚಾರದಲ್ಲಿ ಬಂಗಾರಪ್ಪನವರು (S Bangarappa) ಮುಖ್ಯಮಂತ್ರಿ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಉತ್ತರ ಕೊಟ್ಟಿದ್ದರು. ಬಂಗಾರಪ್ಪನವರ ಕಾಲದ ಕಾನೂನು ಬೇರೆ, ಈಗ ಬೇರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಸಿದ್ದರಾಮಯ್ಯನವರು (Siddaramaiah) ಬಂಗಾರಪ್ಪ ತೆಗೆದುಕೊಂಡ ತೀರ್ಮಾನ ತೆಗೆದುಕೊಂಡರೆ ಅವರ ಜೊತೆ ಇರುತ್ತೇವೆ. ಪ್ರಾಧಿಕಾರ ವಿರುದ್ಧ ಹೋಗಿದ್ದಕ್ಕೆ ಹೈಕೋರ್ಟ್ನಲ್ಲಿ ಆಗ ನಮಗೆ ಛೀಮಾರಿ ಹಾಕಿದ್ದರು. ಅಷ್ಟರೊಳಗೆ ನಮ್ಮ ತಂದೆಯವರು ಏನೇನು ಮಾಡಬೇಕೋ ಮಾಡಿ ಮುಗಿಸಿದ್ದರು ಎಂದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ
ಶಿಕ್ಷಕರ ವರ್ಗಾವಣೆಯಿಂದ ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಸಮಸ್ಯೆಯಾಗಿದೆ. ಖಾಲಿಯಿರುವ ಹುದ್ದೆಗಳಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಸದ್ಯಕ್ಕೆ ಈ ಭಾಗದಲ್ಲಿ ಅಂತರ್ ವಿಭಾಗಕ್ಕೆ ವರ್ಗಾವಣೆಯಾದ ಶಿಕ್ಷಕರನ್ನು ಅತಿಥಿ ಶಿಕ್ಷಕರು ಬರುವವರೆಗೆ ಬಿಡುಗಡೆ ಮಾಡದಂತೆ ಸೂಚಿಸಲಾಗಿದೆ. ಕೆಲ ಅಧಿಕಾರಿಗಳು ಹಣ ಪಡೆದು ಶಿಕ್ಷಕರನ್ನು ಬಿಡುಗಡೆ ಮಾಡಿರುವ ಆರೋಪ ಹಿನ್ನೆಲೆ ಅಂತಹ ಘಟನೆ ನಡೆದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಬೆಂಗ್ಳೂರಿಗರು ಭಾಗಿಯಾಗದ್ದಕ್ಕೆ ಆಕ್ರೋಶ- ಕಾವೇರಿ ನೀರು ಸರಬರಾಜು ಮಾಡೋ ಪಂಪ್ ಹೌಸ್ಗೆ ಮುತ್ತಿಗೆ
ಖಾಯಂ ಶಿಕ್ಷಕರ ನೇಮಕಾತಿ ಶೀಘ್ರದಲ್ಲೇ ಆಗುತ್ತದೆ. ನ್ಯಾಯಾಲಯದಲ್ಲಿ ಆದಷ್ಟು ಬೇಗ ತೀರ್ಮಾನ ಆಗುತ್ತದೆ ಎಂದರು. ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ 8,500 ಕೊಠಡಿಗಳನ್ನು ಕೊಡಬೇಕು ಎಂದು ತೀರ್ಮಾನವಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 25%ರಷ್ಟು ಅನುದಾನ ಶಾಲೆಗಳ ಅಭಿವೃದ್ಧಿಗೆ ಬಳಸಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಬಂದ್ಗೆ ಕರೆ – ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್
ನವದೆಹಲಿ: ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದರೂ ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಪರ ನಿಲ್ಲುವುದಾಗಿ ಸರ್ವಪಕ್ಷಗಳ ಸಂಸದರು ಮಾತುಕೊಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ದೆಹಲಿಯ (New Delhi) ಖಾಸಗಿ ಹೋಟೆಲ್ನಲ್ಲಿ ಸರ್ವಪಕ್ಷ ಸಂಸದರ ಸಭೆಯ (All Party MP Meeting) ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾವೇರಿ (Kaveri) ವಿಚಾರವಾಗಿ ಸಂಸತ್ ಅಧಿವೇಶನದಲ್ಲಿ ದನಿ ಎತ್ತುವುದಾಗಿ ಎಲ್ಲಾ ಸಂಸದರು ಭರವಸೆ ನೀಡಿದ್ದಾರೆ ಎಂದರು. ಮಂಗಳವಾರ ತಡ ರಾತ್ರಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ (Pralhad Joshi) ಅವರನ್ನು ಮುಖ್ಯಮಂತ್ರಿಗಳು ಹಾಗೂ ನಾನು ಭೇಟಿಯಾಗಿ ಚರ್ಚೆ ನಡೆಸಿದ್ದೇವೆ. ಅವರು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಪರಿಸ್ಥಿತಿ ವಿವರಿಸುವುದಾಗಿ ಭರವಸೆ ನೀಡಿದ್ದಾರೆ. ಮಳೆ ಕಡಿಮೆ ಬಿದ್ದಾಗ ನೀರನ್ನು ಎಷ್ಟು ಹಂಚಿಕೆ ಮಾಡಬೇಕು ಎನ್ನುವ ಬಗ್ಗೆ ಕಾವೇರಿ ನೀರು ನಿರ್ವಹಣಾ ಸಮಿತಿ (CWMC) ಸರಿಯಾದ ಸೂತ್ರ ಹಂಚಿಕೆ ಮಾಡಿಲ್ಲ. 5,000 ಕ್ಯೂಸೆಕ್ ನೀರು ಹರಿಸಿ ಎಂದು ಹೇಳಿರುವುದು ಅವೈಜ್ಞಾನಿಕ ಎಂದು ಹೇಳಿದರು. ಇದನ್ನೂ ಓದಿ: ಕಾವೇರಿ ವಿಚಾರವಾಗಿ CWMA ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದೇವೆ: ಸಿಎಂ ಸಿದ್ದರಾಮಯ್ಯ
ಸುಪ್ರೀಂನಲ್ಲಿ ನ್ಯಾಯ ಸಿಗುವ ಭರವಸೆ:
ರಾಜ್ಯದಲ್ಲಿ ಕಾವೇರಿ ನೀರಿನ ಲಭ್ಯತೆ ಅತ್ಯಂತ ಕಡಿಮೆ ಇದ್ದು, ಇದನ್ನು ಸುಪ್ರೀಂ ಕೋರ್ಟಿಗೆ (Supreme Court) ಮನವರಿಕೆ ಮಾಡುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಭರವಸೆಯಿದೆ. ಕಳೆದ 120 ವರ್ಷಗಳಲ್ಲೇ ಅತ್ಯಂತ ಕಷ್ಟದ ಸಂದರ್ಭವನ್ನು ಕರ್ನಾಟಕ ಎದುರಿಸುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 5,000 ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶ ನೀಡಿದ್ದು ಇಷ್ಟೆಲ್ಲಾ ಸಂಕಷ್ಟಗಳಿಗೆ ದಾರಿ ಮಾಡಿಕೊಟ್ಟಿದೆ ಎಂದರು. ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ಸಂಕಷ್ಟ – ದಿಲ್ಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾದ ಡಿಕೆಶಿ
ರಾಜ್ಯದ ನೆಲ-ಜಲದ ಸಂರಕ್ಷಣೆಗೆ ಸದಾ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದು ಸಭೆಗೆ ಬಂದಿದ್ದ ಬಿಜೆಪಿ, ಕಾಂಗ್ರೆಸ್, ಜನತಾ ದಳ ಮತ್ತು ಪಕ್ಷೇತರ ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ಕರ್ನಾಟಕ ಸರ್ಕಾರ ಅಭಾರಿಯಾಗಿರುತ್ತದೆ ಎಂದು ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಹಳೆ ಸಂಸತ್ ಭವನದ ಮುಂದಿನ ಕಥೆ ಏನು?
ಬೆಂಗಳೂರು: ಕಾವೇರಿ ನದಿ (Kaveri Water) ನೀರು ವಿಚಾರವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ (New Delhi) ರಾಜ್ಯದ ಎಲ್ಲಾ ಸಂಸದರ ಸಭೆ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ಸದಾಶಿವನಗರ (Sadashivanagar) ನಿವಾಸದ ಬಳಿ ದೆಹಲಿಗೆ ಹೊರಡುವ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ (Supreme Court) ವಿಚಾರಣೆ ನಡೆಯಲಿದ್ದು, ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರನ್ನು ಭೇಟಿ ಮಾಡಲು ಮುಖ್ಯಮಂತ್ರಿ ನಾನು, ಸಿಎಂ ಸಿದ್ದರಾಮಯ್ಯ, ಸಚಿವರಾದ ಚೆಲುವರಾಯಸ್ವಾಮಿ, ಮಹದೇವಪ್ಪ, ಹೆಚ್.ಕೆ ಪಾಟೀಲ್ ಹಾಗೂ ರಾಜ್ಯದ ಪ್ರತಿನಿಧಿಗಳು ದೆಹಲಿಗೆ ತೆರಳುತ್ತಿದ್ದೇವೆ ಎಂದರು. ಇದನ್ನೂ ಓದಿ: ವರುಣಾದಲ್ಲಿ ಕುಕ್ಕರ್ ಹಂಚಿಕೆ : ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದ ಬೊಮ್ಮಾಯಿ
ನವದೆಹಲಿ: ಕಾವೇರಿ ನೀರು (Kaveri Water) ವಿಚಾರದಲ್ಲಿ ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯ ದುರಂತ. ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡರು ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು (HD Deve Gowda) ಹೇಳಿದ್ದಾರೆ.
ತಮಿಳುನಾಡಿಗೆ (Tamil Nadu) ನಿತ್ಯ 5,000 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ವಿಚಾರವಾಗಿ ನವದೆಹಲಿಯಲ್ಲಿ (New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಇವತ್ತಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಮಹತ್ತರವಾದ ಪೆಟ್ಟು. ಬೆಂಗಳೂರಿಗೆ (Bengaluru) ಕುಡಿಯುವ ನೀರು ಬೇಕು. ಮುಂದೇನು ಆಗುತ್ತೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳ ದೇವಾಲಯಗಳು ಸೇರ್ಪಡೆ
ನಾವು ಎಲ್ಲೋ ಒಂದು ಕಡೆ ಎಡವಿದ್ದೇವೆ. ನಮ್ಮ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯಕ್ಕೆ ಮೊದಲು ಧರಣಿ ಮಾಡಿದ್ದೆ. ಧರಣಿ ಕೂತು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಇಂದು ಸದನದಲ್ಲಿ ಕಾವೇರಿ ವಿಚಾರ ಎತ್ತಿದ್ದೇನೆ. ಕರ್ನಾಟಕ, ತಮಿಳುನಾಡಿಗೆ ಸಂಬಂಧ ಇಲ್ಲದ ಅಧಿಕಾರಿಗಳನ್ನು ಗ್ರೌಂಡ್ಗೆ ಕಳುಹಿಸಲಿ. ವಾಸ್ತವಿಕ ವರದಿಯನ್ನು ಅಧಿಕಾರಿಗಳ ತಂಡ ಸಲ್ಲಿಸಲಿ. ನಾವು ಒಪ್ಪಿಕೊಳ್ಳುತ್ತೇವೆ, ಆದರೆ ತಮಿಳುನಾಡು ಒಪ್ಪಿಕೊಳ್ಳುತ್ತಿಲ್ಲ. ತಮಿಳುನಾಡಿನ ರಾಜಕಾರಣಿಗಳಲ್ಲಿ ಒಗ್ಗಟ್ಟು ಇದೆ. ನಮ್ಮ ರಾಜಕಾರಣಿಗಳಲ್ಲಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಳೆ ಸಂಸತ್ ಭವನಕ್ಕೆ ಬೀಳ್ಕೊಡುಗೆ – ನೆಹರೂ ಸ್ಮರಿಸಿದ ಪ್ರಧಾನಿ ಮೋದಿ
ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನ್ಯಾವತ್ತೂ ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿಯಾಗಲ್ಲ. ಇಂಡಿಯಾ (INDIA) ಸಭೆಗೆ ಕರೆಯುವುದೇ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಿತೀಶ್ ಕುಮಾರ್ಗೆ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಮೈತ್ರಿ ವಿಚಾರವಾಗಿ ನಾನು ಯಾರನ್ನೂ ಭೇಟಿಯಾಗಲ್ಲ. ಚರ್ಚೆಗೆ ಬಂದಾಗ ಮಾತನಾಡುತ್ತೇವೆ. ಈಗ ಎಲ್ಲಿದ್ದೇವೆ ಅಲ್ಲೇ ಇರುತ್ತೇವೆ. ಈಗ ಮೈತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದರು. ಇದನ್ನೂ ಓದಿ: ಕರ್ನಾಟಕ ಸರ್ಕಾರಕ್ಕೆ ಮತ್ತೆ ಕಾವೇರಿ ಶಾಕ್ – ತ.ನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸಲು ಆದೇಶ
ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸಿನಂತೆ ನಿತ್ಯ 5,000 ಕ್ಯೂಸೆಕ್ ಕಾವೇರಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶ ಪಾಲಿಸಲು ಸಾಧ್ಯವಾಗದ ಆಜ್ಞೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯ ಪಟ್ಟಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಿಡಬ್ಲುಆರ್ ಸಿ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವುದು ಇದೊಂದು ಪಾಲನೆ ಮಾಡಲು ಸಾಧ್ಯವಿಲ್ಲದ ಒಂದು ಆಜ್ಞೆ.
ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ ಗೆ ಹೋಗಿ ನೀರನ್ನು ಬಿಡಲು ಸಾಧ್ಯವಿಲ್ಲದ ಕಾರಣವನ್ನು ಮನವರಿಕೆ…
ಈ ಸಂಬಂಧ ಟ್ವೀಟ್ (Tweet) ಮಾಡಿರುವ ಬೊಮ್ಮಾಯಿ, ಕಾನೂನು ಹೋರಾಟ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಆದೇಶದಂತೆ ತಮಿಳುನಾಡಿಗೆ (Tamil Nadu) ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವುದು ಪಾಲನೆ ಮಾಡಲು ಸಾಧ್ಯವಿಲ್ಲದ ಒಂದು ಆಜ್ಞೆ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕ ಸರ್ಕಾರಕ್ಕೆ ಮತ್ತೆ ಕಾವೇರಿ ಶಾಕ್ – ತ.ನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸಲು ಆದೇಶ
ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ಗೆ ಹೋಗಿ ನೀರನ್ನು ಬಿಡಲು ಸಾಧ್ಯವಿಲ್ಲದ ಕಾರಣವನ್ನು ಮನವರಿಕೆ ಮಾಡಿಕೊಡಬೇಕು. ಈ ಆಜ್ಞೆ ಬರುವ ಮುಂಚೆ ನೀರು ಬಿಡಲು ಪ್ರಾರಂಭ ಮಾಡಿರುವ ರಾಜ್ಯ ಸರ್ಕಾರ ತನ್ನ ಕೈಯನ್ನು ತಾನೇ ಕಟ್ಟಿಕೊಂಡಿದೆ. ಕೂಡಲೇ ನೀರು ನಿಲ್ಲಿಸಿ ಸುಪ್ರೀಂ ಕೋರ್ಟ್ನಲ್ಲಿ (Supreme Court) ರಾಜ್ಯದ ಜನತೆಗೆ ನ್ಯಾಯ ಒದಗಿಸಲು ಕಾನೂನಾತ್ಮಕ ಹೋರಾಟ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ರಿಲೀಫ್ – ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ