Tag: Katha Sangama

  • ಕಥಾ ಸಂಗಮದಲ್ಲಿದೆ ಕಾಡುವ ಕಥೆಗಳ ಗುಚ್ಛ!

    ಕಥಾ ಸಂಗಮದಲ್ಲಿದೆ ಕಾಡುವ ಕಥೆಗಳ ಗುಚ್ಛ!

    ಸಿದ್ಧ ಸೂತ್ರದ ಸಿನಿಮಾಗಳ ಸದ್ದಿನ ಸರಹದ್ದಿನೊಳಗೇ ಭಿನ್ನ ಪ್ರಯೋಗಗಳು ಅಬ್ಬರಿಸದಿದ್ದರೆ ಯಾವುದೇ ಭಾಷೆಯ ಚಿತ್ರರಂಗವಾದರೂ ನಿಂತ ನೀರಿನಂತಾಗಿ ಬಿಡುತ್ತದೆ. ಈ ಕಾರಣದಿಂದಲೇ ಹೊಸ ಅಲೆಯ ಚಿತ್ರಗಳು, ಹೊಸ ಪ್ರಯೋಗಗಳ ಮೂಸೆಯಲ್ಲರಳಿಕೊಂಡ ಸಿನಿಮಾಗಳು ಮುಖ್ಯವಾಗಿ ಪರಿಗಣಿಸಲ್ಪಡುತ್ತವೆ. ಈ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಸೂತ್ರದಾರಿಕೆಯ ಕಥಾ ಸಂಗಮ ಒಂದು ಪರಿಣಾಮಕಾರಿ ಪ್ರಯತ್ನ. ಈ ಕಾರಣದಿಂದಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರೆಲ್ಲರೂ ತುದಿಗಾಲಲ್ಲಿ ಕಾಯಲಾರಂಭಿಸಿದ್ದರು. ಇದೀಗ ಕಥಾ ಸಂಗಮ ತೆರೆ ಕಂಡಿದೆ. ಒಂದಕ್ಕಿಂತ ಒಂದು ಭಿನ್ನವಾಗಿರುವ, ರುಚಿಕಟ್ಟಾಗಿರುವ ಏಳು ಕಥೆಗಳೊಂದಿಗೆ ತೆರೆಕಂಡಿರುವ ಈ ಚಿತ್ರ ನೋಡುಗರನ್ನೆಲ್ಲ ತೃಪ್ತವಾಗಿಸುವಲ್ಲಿ ಯಶ ಕಂಡಿದೆ.

    ಈ ಸಿನಿಮಾದಲ್ಲಿ ಮೊದಲೇ ಹೇಳಿದಂತೆ ಏಳು ಕಥೆಗಳಿವೆ. ಆ ಪ್ರತೀ ಕಥೆಯನ್ನೂ ಕೂಡಾ ಕಾಡುವಂತೆ, ನೋಡುಗರ ಮನಸುಗಳಿಗೆ ನಾಟುವಂತೆ ಕಟ್ಟಿ ಕೊಟ್ಟಿರೋದು ಈ ಸಿನಿಮಾದ ಪ್ರಧಾನ ಪ್ಲಸ್ ಪಾಯಿಂಟುಗಳು. ಈ ಸಿನಿಮಾ ಆರಂಭವಾಗುವುದು ರೈನ್‍ಬೋ ಲ್ಯಾಂಡ್ ಎಂಬ ಕಥಾನಕದ ಮೂಲಕ. ಅಪ್ಪ ಮಗಳ ಬಾಂಧವ್ಯದ ಹಿತವಾದ ಕಥೆಯೊಂದಿಗೆ ತೆರೆದುಕೊಳ್ಳುವ ಈ ಸಿನಿಮಾದಲ್ಲಿ   ಸತ್ಯಕಥಾ ಪ್ರಸಂಗ, ಗಿರ್‍ಗಿಟ್ಲೆ, ಉತ್ತರ, ಪಡುವಾರಹಳ್ಳಿ, ಸಾಗರ ಸಂಗಮ್ಮ ಮತ್ತು ಲಚ್ಚವ್ವ ಎಂಬ ಕಥೆಗೂ ಸೇರಿಕೊಳ್ಳುತ್ತವೆ. ವಿಶೇಷವೆಂದರೆ ಇವೆಲ್ಲವೂ ಒಂದಕ್ಕೊಂದು ಸೂತ್ರ ಸಂಬಂಧವಿಲ್ಲದ ಕಥೆಗಳು. ಅವೆಲ್ಲವೂ ಪರಿಪೂರ್ಣ ಅನುಭೂತಿ ನೀಡುವಂತೆ ತೆರೆದುಕೊಂಡಿರೋದೇ ಕಥಾ ಸಂಗಮದ ನಿಜವಾದ ಸ್ಪೆಷಾಲಿಟಿ.

    ಈ ಏಳು ಕಥೆಗಳನ್ನು ಏಳು ಮಂದಿ ನಿರ್ದೇಶಕರು ರೂಪಿಸಿದ್ದಾರೆ. ಇವೆಲ್ಲವೂ ಸಹ ಯಾವುದು ಹೆಚ್ಚು ಯಾವುದು ಕಡಿಮೆ ಎಂಬ ಅಂದಾಜೇ ಸಿಗದಷ್ಟು ಚೆಂದಗೆ ಮೂಡಿ ಬಂದಿವೆ. ಪ್ರೇಕ್ಷಕರ ಗಮನ ಆಚೀಚೆ ಚದುರದಂತೆ ಈ ಏಳು ಕಥೆಗಳನ್ನು ನಿರೂಪಿಸಿರುವ ರೀತಿಯೇ ಯಾರನ್ನಾದರೂ ಸೆಳೆಯುವಂತಿದೆ. ಈ ಏಳು ಕಥೆಗಳಲ್ಲಿನ ದೃಷ್ಯಾವಳಿಗಳು, ಪಾತ್ರಗಳು ಪ್ರೇಕ್ಷಕರ ಮನಸಲ್ಲುಳಿಯುವಂತೆ ಮೂಡಿ ಬಂದಿವೆ. ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಯಜ್ಞಾ ಶೆಟ್ಟಿ, ಹರಿ ಸಮಷ್ಠಿ, ಅವಿನಾಶ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಅವರ ಅಭಿನಯವೇ ಕಥಾ ಸಂಗಮಕ್ಕೆ ಮತ್ತಷ್ಟು ಕಸುವು ತುಂಬುವಂತೆ ಮೂಡಿ ಬಂದಿದೆ. ಅವರೆಲ್ಲರೂ ತಂತಮ್ಮ ಪಾತ್ರಗಳನ್ನು ಒಳಗಿಳಿಸಿಕೊಂಡು ನಟಿಸಿದ್ದಾರೆ. ಇದರೊಂದಿಗೆ ಪ್ರತೀ ಸನ್ನಿವೇಶಗಳೂ ಶಕ್ತವಾಗುವಂತೆ ನೋಡಿಕೊಂಡಿದ್ದಾರೆ.

    ಇದು ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಾಗುವಂಥಾ ಪ್ರಯತ್ನ. ಅದು ನಿಜಕ್ಕೂ ಫಲ ಕೊಡುವಂತೆಯೇ ಮೂಡಿ ಬಂದಿದೆ. ಈಗ್ಗೆ ನಾಲಕ್ಕು ದಶಕಗಳ ಹಿಂದೆ ಪುಟ್ಟಣ್ಣ ಕಣಗಾಲ್ ಕಥಾ ಸಂಗಮ ಎಂಬ ಸಿನಿಮಾದ ಮೂಕಕ ನಾಲಕ್ಕು ಕಥೆಗಳನ್ನು ಹೇಳಿದ್ದರು. ಅದು ಕನ್ನಡ ಚಿತ್ರರಂಗದ ಹೆಮ್ಮೆಯಂಥಾ ಚಿತ್ರ. ಇದೀಗ ರಿಷಬ್ ಶೆಟ್ಟಿ ಸೂತ್ರಧಾರಿಕೆಯ ಈ ಚಿತ್ರದಲ್ಲಿ ಏಳು ಸಮೃದ್ಧವಾದ ಕಥೆಗಳನ್ನು ಹೇಳಲಾಗಿದೆ. ಈ ಚಿತ್ರವನ್ನು ರಿಷಬ್ ಮತ್ತು ಅವರ ತಂಡ ಪುಣ್ಣ ಕಣಗಾಲರಿಗೆ ಅರ್ಪಿಸಿದೆ. ಒಂದು ವೇಳೆ ಕಣಗಾಲರು ಈಗೇನಾದರೂ ಬದುಕಿದ್ದರೆ ಖಂಡಿತಾ ಈ ಚಿತ್ರವನ್ನು, ಅದರ ಸೂತ್ರಧಾರರನ್ನು ಮೆಚ್ಚಿ ಕೊಂಡಾಡುತ್ತಿದ್ದರು. ಅಷ್ಟೊಂದು ಚೆಂದಗೆ ಮೂಡಿ ಬಂದಿರೋ ಈ ಸಿನಿಮಾವನ್ನು ಸಾಕಾರಗೊಳಿಸಿದ ರಿಷಬ್ ಶೆಟ್ಟಿ ಮತ್ತವರ ತಂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ.

    ರೇಟಿಂಗ್: 4/5

  • ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

    ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

    ನ್ನಡದ ಪ್ರೇಕ್ಷಕರು ವೈವಿಧ್ಯತೆ ಬಯಸುವ ಮನಸ್ಥಿತಿ ಹೊಂದಿರುವವರು. ಈ ಕಾರಣದಿಂದಲೇ ಇಲ್ಲಿ ಹೊಸ ಆಲೋಚನೆ, ಪ್ರಯೋಗಗಳ ಚಿತ್ರಗಳು ಸೋಲುವುದಿಲ್ಲ. ಅದೆಂಥಾ ಸವಾಲುಗಳೆದುರಾದ ಘಳಿಗೆಯಲ್ಲಿಯೂ ಪ್ರೇಕ್ಷಕರು ಅಂಥಾ ಸಿನಿಮಾಗಳನ್ನು ಕೈ ಬಿಡುವುದಿಲ್ಲ. ಬಹುಶಃ ಪ್ರೇಕ್ಷಕರ್ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಮೂಡಿ ಬಂದು ತೆರೆಗಾಣಲು ಸಜ್ಜುಗೊಂಡಿರೋ ಕಥಾ ಸಂಗಮ ಚಿತ್ರ ರೂಪುಗೊಂಡಿದ್ದರ ಹಿಂದೆಯೂ ಪ್ರೇಕ್ಷಕರ ಔದಾರ್ಯವಿದೆ. ಇಂಥಾ ಸೂಕ್ಷ್ಮಗಳನ್ನು ಖಚಿತವಾಗಿಯೇ ಅರ್ಥ ಮಾಡಿಕೊಂಡಿರುವ ರಿಷಬ್ ಶೆಟ್ಟಿ ವರ್ಷಗಳ ಹಿಂದೆಯೇ ಕಥಾ ಸಂಗಮವೆಂಬ ಕನಸಿಗೆ ಕಾವು ಕೊಟ್ಟಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾ ಟ್ರೇಲರ್‍ಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲವೇ ಮಹಾ ಗೆಲುವೊಂದರ ಮುನ್ಸೂಚನೆಯಂತೆ ಕಾಣಿಸುತ್ತಿದೆ. ಇದರ ಬೆನ್ನಲ್ಲಿಯೇ ಹೊರ ಬಿದ್ದಿರುವ ಪೂರಕ ಮಾಹಿತಿಗಳು ಕಥಾ ಸಂಗಮದತ್ತ ಮತ್ತಷ್ಟು ಪ್ರೇಕ್ಷಕರು ಆಕರ್ಷಿತರಾಗುವಂತಿವೆ.

    ಈ ಟ್ರೇಲರ್‌ನಲ್ಲಿ ಏಳೂ ಕಥೆಗಳ ಝಲಕ್ಕುಗಳನ್ನು ಜಾಹೀರು ಮಾಡುತ್ತಲೇ ಪಾತ್ರಗಳ ಪರಿಚಯವನ್ನೂ ಮಾಡಿಸಲಾಗಿದೆ. ಅದರಲ್ಲಿ ಎಂಥವರೂ ಆಹ್ಲಾದಗೊಳ್ಳುವಂಥಾ ತಾಜಾ ತಾಜ ಸನ್ನಿವೇಶಗಳು, ನಿಗೂಢ ಕಥೆಗಳ ಮುನ್ಸೂಚನೆಗಳೆಲ್ಲ ಗೋಚರಿಸುತ್ತಾ ಲಕ್ಷ ಲಕ್ಷ ವೀಕ್ಷಣೆಯೊಂದಿಗೆ ಟ್ರೆಂಡಿಂಗ್‍ನಲ್ಲಿದೆ. ಶ್ರೀದೇವಿ ಎಂಟರ್‍ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಅಪರೂಪದ ಕಥೆಗಳ ಮಹಾ ಸಂಗಮವಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಪ್ರತೀ ಪ್ರೇಕ್ಷಕರಿಗೂ ಮನವರಿಕೆ ಮಾಡಿ ಕೊಡುವಲ್ಲಿ ಈ ಟ್ರೇಲರ್ ಗೆದ್ದಿದ್ದಾರೆ. ಈ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ.

    ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದು ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರೂಪಿಸೋದೇ ಕಷ್ಟದ ಸಂಗತಿ. ಅಂಥಾದ್ದರಲ್ಲಿ ಏಳು ಕಥೆಗಳ ಸೂತ್ರ ಹಿಡಿದು ಎಲ್ಲಿಯೂ ಗೊಂದಲ ಉಂಟಾಗದಂತೆ ರೂಪಿಸೋದೊಂದು ಸಾಹಸ. ನಿರ್ದೇಶಕ ರಿಷಬ್ ಶೆಟ್ಟಿ ಏಳು ಮಂದಿ ಪ್ರತಿಭಾನ್ವಿತ ಯುವ ನಿರ್ದೇಶಕರ ಬೆಂಬಲದೊಂದಿಗೆ ಅದನ್ನು ಸಾಧ್ಯವಾಗಿಸಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ ದಾಖಲೆ ಸೃಷ್ಟಿಸುವಂತಿದೆ ಎಂಬ ನಂಬಿಕೆಯಂತೂ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದೆ. ರಿಷಬ್ ಶೆಟ್ಟಿ ಯಾವ ಚಿತ್ರ ಮಾಡಿದರೂ ಅಲ್ಲೊಂದು ಹೊಸತನ ಇರುತ್ತದೆ. ಆದರೆ ಈ ಬಾರಿ ಹೊಸತನವೇ ಕಥಾ ಸಂಗಮವಾಗಿ ಮೈದಾಳಿದೆ. ಚೆಂದದ ಏಳು ಕಥೆ, ಚಿತ್ರವಿಚಿತ್ರವಾದ ಪಾತ್ರಗಳನ್ನು ಒಡಲಲ್ಲಿಟ್ಟುಕೊಂಡಿರೋ ಈ ಚಿತ್ರ ವಾರದೊಪ್ಪತ್ತಿನಲ್ಲಿಯೇ ತೆರೆಗಾಣಲಿದೆ.

  • ‘ಕಥಾ ಸಂಗಮ’ ಡಿಸೆಂಬರ್ 6ರಂದು ರಿಲೀಸ್

    ‘ಕಥಾ ಸಂಗಮ’ ಡಿಸೆಂಬರ್ 6ರಂದು ರಿಲೀಸ್

    ರಿಷಬ್ ಶೆಟ್ಟಿ ಫಿಲಂಸ್ ಹಾಗೂ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ, ಕೆ.ಹೆಚ್ ಪ್ರಕಾಶ್ ಹಾಗೂ ಪ್ರದೀಪ್ ಎನ್.ಆರ್ ಅವರು ನಿರ್ಮಿಸಿರುವ ‘ಕಥಾ ಸಂಗಮ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಏಳು ಕಥೆಗಳ ಸಂಗಮವಾಗಿರುವ ಈ ಚಿತ್ರವನ್ನು ಏಳು ಜನ ನಿರ್ದೇಶಕರು ನಿರ್ದೇಶಿಸಿದ್ದಾರೆ. ಮೊದಲ ಕಥೆಯನ್ನು ಶಶಿಕುಮಾರ್ ನಿರ್ದೇಶಿಸಿದ್ದಾರೆ. ಜಯಂತ್ ಸೀಗೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ರಾಜ್ ಬಿ ಶೆಟ್ಟಿ, ಅನಿರುದ್ಧ್ ಮಹೇಶ್ ಬರೆದಿದ್ದಾರೆ. ಗೊಮಟೇಶ್ ಉಪಾಧ್ಯೆ ಛಾಯಾಗ್ರಹಣ, ದಾಸ್ ಮೊಡ್ ಸಂಗೀತ ನಿರ್ದೇಶನ ಹಾಗೂ ಆರ್ಯ ಅವರ ಸಂಕಲನವಿದೆ. ರಾಜ್.ಬಿ.ಶೆಟ್ಟಿ, ಅಮೃತ ನಾಯಕ್, ಜೆ.ಪಿ ತುಮ್ಮಿನಾಡ್ ತಾರಾಬಳಗದಲ್ಲಿದ್ದಾರೆ.

    ಎರಡನೇ ಕಥೆಯನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿದ್ದಾರೆ. ಕಿಶೊರ್, ಯಜ್ಞ ಶೆಟ್ಟಿ, ಬಾಬು ಮೃದುನಿಕ ನಟಿಸಿರುವ ಈ ಕಥೆಗೆ ಗಗನ್ ಬಡೇರಿಯ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಹಾಗೂ ರಿತ್ವಿಕ್ ರಾವ್ ಸಂಕಲನ ಈ ಚಿತ್ರಕ್ಕಿದೆ.

    ಮೂರನೇ ಕಥೆಗೆ ಮಾಧುರಿ ಎನ್ ರಾವ್ ಹಾಗೂ ಕರಣ್ ಅನಂತ್ ಕಥೆ, ಚಿತ್ರಕಥೆ ಬರೆದಿದ್ದು, ಕರಣ್ ಅನಂತ್ ನಿರ್ದೇಶಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಸೌಮ್ಯ, ಜಗನ್‍ಮೂರ್ತಿ, ವಸು ದೀಕ್ಷಿತ್ ಅಭಿನಯಿಸಿದ್ದಾರೆ. ದೀಪಕ್ ಛಾಯಾಗ್ರಹಣ, ವಸು ದೀಕ್ಷಿತ್ ಸಂಗೀತ ನಿರ್ದೇಶನ ಹಾಗೂ ಭರತ್ ಎಂ.ಸಿ ಅವರ ಸಂಕಲನ ಈ ಚಿತ್ರಕ್ಕಿದೆ.

    ನಾಲ್ಕನೇ ಕಥೆಯ ತಾರಾಬಳಗದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ಬಾಲಾಜಿ ಮನೋಹರ್ ಇದ್ದಾರೆ. ರಾಹುಲ್ ಪಿ.ಕೆ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಂದೀಪ್ ಅವರ ಛಾಯಾಗ್ರಹಣ, ಅಜ್ಞಾತ್ ಅವರ ಸಂಗೀತ ನಿರ್ದೇಶನ, ವಿನಾಯಕ್ ಗುರುನಾರಾಯಣ್ ಅವರ ಸಂಕಲನವಿದೆ.

    ಐದನೇ ಕಥೆಯನ್ನು ಜಮದಗ್ನಿ ಮನೋಜ್ ನಿರ್ದೇಶಿಸಿದ್ದಾರೆ. ಅವಿನಾಶ್, ಹರಿ ಸಮಶ್ಟಿ ಅಭಿನಯಿಸಿದ್ದಾರೆ. ರಘುನಾಥ್ ಛಾಯಾಗ್ರಹಣ, ಅಭಿಷೇಕ್ ಅವರ ಸಂಕಲನ ಹಾಗೂ ಗಿರೀಶ್ ಹಾತೂರ್ ಅವರ ಸಂಗೀತ ನಿರ್ದೇಶನವಿದೆ.

    ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ನಟನೆಯ ಆರನೇ ಕಥೆಯನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರೂಬಿ (ನಾಯಿ) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ, ರಿತ್ವಿಕ್ ರಾವ್ ಅವರ ಸಂಕಲನ ಹಾಗೂ ನೊಬಿನ್ ಪಾಲ್ ಅವರ ಸಂಗೀತ ನಿರ್ದೇಶನವಿದೆ.

    ಏಳನೇ ಕಥೆಯಲ್ಲಿ ಪ್ರಣವ್, ರಾಘವೇಂದ್ರ, ಬೀರೇಶ್ ಪಿ ಬಂಡೆ, ನಿಧಿ ಹೆಗ್ಡೆ ಅಭಿನಯಿಸಿದ್ದು, ಜೈ ಶಂಕರ್ ಅವರ ರಚನೆ ಹಾಗೂ ನಿರ್ದೇಶನವಿದೆ. ಸೌರವ್ ಪ್ರತೀಕ್ ಸನ್ಯಾಲ್ ಛಾಯಾಗ್ರಹಣ, ಚಂದನ್ ಸಂಕಲನ ಹಾಗೂ ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ.

  • ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ಕಣಗಾಲರ ಹಾದಿಯಲ್ಲೊಂದು ಕನಸಿನಂಥಾ `ಕಥಾ ಸಂಗಮ’!

    ನ್ನಡ ಚಿತ್ರರಂಗವನ್ನು ತಮ್ಮ ವಿಭಿನ್ನ ಆಲೋಚನೆಗಳ ಮೂಲಕವೇ ಬೆಳಗಿದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಚಿತ್ರರಂಗ ಒಂದೇ ಬಿಂದುವಿನ ಸುತ್ತ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ ಹೊಸ ಸಾಧ್ಯತೆಗಳ ಬ್ರಹ್ಮಾಂಡವನ್ನೇ ಬಿಚ್ಚಿಟ್ಟವರು ಪುಟ್ಟಣ್ಣ ಕಣಗಾಲ್. ಇದರೊಂದಿಗೆ ಪರಭಾಷಾ ಚಿತ್ರರಂಗದ ಮಂದಿಯೇ ಬೆರಗಾಗುವಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕಣಗಾಲರ ಪ್ರಯೋಗಶೀಲತೆಗೆ ಕಥಾ ಸಂಗಮ ಕಿರೀಟವಿದ್ದಂತೆ. ಇದೀಗ ಈಗಿನ ತಲೆಮಾರಿನ ಕ್ರಿಯಾಶೀಲ ನಿರ್ದೇಶಕ ರಿಷಬ್ ಶೆಟ್ಟಿ ಆ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸುವಂತಹ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿ ರೂಪುಗೊಂಡಂತಿರುವ ಹೊಸ `ಕಥಾ ಸಂಗಮ’ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ.

    ಶ್ರೀದೇವಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮವೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಒಂದು ಸಿನಿಮಾ ನಿರ್ದೇಶನಕ್ಕಿಳಿದರೆಂದರೆ ಅಲ್ಲೇನೋ ಹೊಸತನ ಇದ್ದೇ ಇರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಚಿತ್ರವನ್ನವರು ರೂಪಿಸಿದ್ದ ರೀತಿಯೇ ಅವರೆಂತಹ ಭಿನ್ನ ನಿರ್ದೇಶಕ ಎಂಬುದಕ್ಕೆ ಸ್ಪಷ್ಟ ಸಾಕ್ಷಿ. ಈ ಕಥಾ ಸಂಗಮದಲ್ಲಂತೂ ಅವರು ಕನ್ನಡ ಚಿತ್ರರಂಗದ ಘನತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತಹ ಪ್ರಯತ್ನ ಮಾಡಿದ್ದಾರೆ. ಎಪ್ಪತ್ತರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ ಚಿತ್ರದಲ್ಲಿ ನಾಲ್ಕು ಕಥೆಗಳನ್ನು ಹೇಳಿದ್ದರು. ರಿಷಬ್ ಶೆಟ್ಟರು ಈ ಕಥಾ ಸಂಗಮದಲ್ಲಿ ಏಳು ಕಥೆಗಳನ್ನು ಹೇಳಿದ್ದಾರೆ. ಇಲ್ಲಿ ಏಳು ಜನ ನಿರ್ದೇಶಕರು, ಏಳು ಮಂದಿ ಛಾಯಾಗ್ರಾಹಕರು ಮತ್ತು ಏಳು ಜನ ಸಂಗೀತ ನಿರ್ದೇಶಕರು ಸೇರಿ ಈ ಸಿನಿಮಾವನ್ನು ನಿರ್ವಹಿಸಿದ್ದಾರೆ. ರಿಷಬ್ ಶೆಟ್ಟಿ ಅದರ ಸೂತ್ರ ಹಿಡಿದು ಮುನ್ನಡೆಸಿದ್ದಾರೆ. ಈ ಸಿನಿಮಾಗೀಗ ಸೆನ್ಸಾರ್ ಮಂಡಳಿ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

    ಈ ಮೂಲಕ ಒಂದೇ ಸಿನಿಮಾದಲ್ಲಿ ಏಳು ಸಿನಿಮಾ ನೋಡುವ ಸದಾವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಸೇರಿದಂತೆ ಹಲವು ಬಗೆಯ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅಪರೂಪದ ಕ್ಷಣಗಳು ಹತ್ತಿರವಾಗುತ್ತಿವೆ. ನಿರ್ದೇಶಕ ರಿಷಬ್ ಶೆಟ್ಟಿ ಸದಾ ಸಿನಿಮಾ ಧ್ಯಾನದಲ್ಲಿಯೇ ತಲ್ಲೀನರಾಗಿರುವವರು. ಕಥಾ ಸಂಗಮದಂತಹ ಗುಂಗೀಹುಳ ಅವರ ಮನಸ್ಸು ಹೊಕ್ಕು ಕೆಲಸ ಶುರುವಿಟ್ಟುಕೊಂಡಿದ್ದದ್ದು ವರ್ಷಗಳ ಹಿಂದೆ. ನಂತರ ಪಟ್ಟು ಬಿಡದೇ ಏಳು ಮಂದಿ ಪ್ರತಿಭಾವಂತರನ್ನು ಹುಡುಕಿ, ಚೆಂದದ ಕಥೆಗಳನ್ನು ಆಯ್ಕೆ ಮಾಡಿಕೊಂಡು ಈ ರಿಸ್ಕಿ ಸಾಹಸಕ್ಕೆ ಕೈ ಹಾಕಿದ್ದರು. ಪುಟ್ಟಣ್ಣ ಕಣಗಾಲರ ಸ್ಫೂರ್ತಿಯಿಂದಲೇ ತಯಾರಾದ ಈ ಸಿನಿಮಾವನ್ನು ಅವರಿಗೇ ಅರ್ಪಿಸುವ ಮೂಲಕ ಗೌರವ ತೋರಿಸಲಾಗಿದೆ. ಕಣಗಾಲರ ಕೀರ್ತಿಯನ್ನು ಮತ್ತಷ್ಟು ಮಿರುಗಿಸುವಂತೆಯೇ ಈ ಸಿನಿಮಾ ಮೂಡಿ ಬಂದಿದೆ ಅನ್ನೋದು ಈಗಾಗಲೇ ಸ್ಪಷ್ಟಗೊಂಡಿದೆ.

    ಕಥಾ ಸಂಗಮದ ಮೂಲಕ ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ರಿಷಬ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್ ಮುಂತಾದವರು ಈ ಏಳೂ ಕಥೆಗಳ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಏಳೂ ಕಥೆಗಳ ಪ್ರತೀ ಪಾತ್ರಗಳೂ ಅದೆಷ್ಟು ಭಿನ್ನವಾಗಿವೆ ಅನ್ನೋದಕ್ಕೆ ಮೊನ್ನೆ ಬಿಡುಗಡೆಗೊಂಡಿರೋ ಟ್ರೇಲರ್‍ನಲ್ಲಿ ಸಾಕ್ಷಿಗಳಿವೆ. ವಾರದೊಪ್ಪತ್ತಿನಲ್ಲಿಯೇ ಕಥಾ ಸಂಗಮ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.

     

  • ಅಚ್ಚರಿಯ ಲೋಕಕ್ಕೆ ಕರೆದೊಯ್ಯುವ ಕಥಾ ಸಂಗಮ ಹಾಡು!

    ಅಚ್ಚರಿಯ ಲೋಕಕ್ಕೆ ಕರೆದೊಯ್ಯುವ ಕಥಾ ಸಂಗಮ ಹಾಡು!

    ನಿರ್ದೇಶಕ ರಿಷಬ್ ಶೆಟ್ಟಿ ಯಾವುದೇ ಸಿನಿಮಾ ಆರಂಭಿಸಿದರೂ ಅಲ್ಲೊಂದು ಹೊಸತನ, ಹೊಸ ಪ್ರಯೋಗ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಆದರೀಗ ಅವರು ಕಥಾ ಸಂಗಮವೆಂಬ ಸಿನಿಮಾ ಮೂಲಕ ಎಲ್ಲರ ನಿರೀಕ್ಷೆಯನ್ನು ಮೀರಿದ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕಥಾ ಸಂಗಮದಲ್ಲಿ ಏಳು ಮಂದಿ ನಿರ್ದೇಶಕರ ಏಳು ಕಥೆಗಳನ್ನು ರಿಷಬ್ ಶೆಟ್ಟಿ ಒಂದೇ ಸಿನಿಮಾ ಫ್ರೇಮಿನಲ್ಲಿ ಕಟ್ಟಿ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಏಳು ಭಿನ್ನ ಕಥೆಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಈ ಮೂಲಕ ಪ್ರೇಕ್ಷಕರ ಪಾಲಿಗೆ ಬಂದೊದಗಿದೆ. ಇತ್ತೀಚೆಗಷ್ಟೇ ಆಡಿಯೋ ಲಾಂಚ್ ಮಾಡಿದ್ದ ಚಿತ್ರತಂಡ ಇದೀಗ ಇಡೀ ಕಥೆಯ ಹೊಳಹು ನೀಡುತ್ತಲೇ ಬೇರೆಯದ್ದೊಂದು ಅನೂಹ್ಯ ಜಗತ್ತಿಗೆ ಕೈ ಹಿಡಿದು ಕರೆದೊಯ್ಯವಂಥಾ ಅದ್ಭುತ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ.

    ಮನೆಯೊಂದಿರುವುದು ಇಲ್ಲಿ, ಮನವೇ ನಿಲ್ಲದು ನೋಡಿ. ಹೆಜ್ಜೆಯು ಮುಗಿಯಲೇ ಇಲ್ಲ ಗೋಡೆಯ ಜಾಗದಲಿ ಬರೀ ಬಾಗಿಲೇ ಇರಬಹುದೇ… ಎಂಬ ಚೆಂದದ ಸಾಹಿತ್ಯವಿರೋ ಈ ಹಾಡು ಅದಿತಿ ಸಾಗರ್ ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಮಾಯಸಂದ್ರ ಕೃಷ್ಣಪ್ರಸಾದ್ ಅವರು ಬರೆದಿರುವ ಈ ಹಾಡು ನಿಗೂಢಾರ್ಥಗಳೊಂದಿಗೆ ಇಡೀ ಕಥೆಯ ಸಾರವನ್ನು ತನ್ನೊಳಗೆ ಹಿಡಿದಿಟ್ಟುಕೊಂಡಂತಿದೆ. ಈ ಹಾಡಿನ ಭಾವಕ್ಕೆ ತಕ್ಕುದಾಗಿ ಕಥಾ ಸಂಗಮದ ಏಳು ಕಥೆಗಳ ಪದರಗಳೂ ತೆರೆದುಕೊಳ್ಳುತ್ತವೆ. ಪಾತ್ರಗಳ ಚಹರೆ ಕಣ್ಣೆದುರು ಅನಾವರಣಗೊಳ್ಳುತ್ತವೆ. ಇಲ್ಲಿ ಪ್ರತೀ ಪ್ರೇಕ್ಷಕರೂ ಅಚ್ಚರಿಗೊಳ್ಳುವಂಥ ಏಳು ಕಥೆಗಳ ಗುಚ್ಛವಿದೆ ಅನ್ನೋದನ್ನು ಈ ಹಾಡು ಸಮರ್ಥವಾಗಿಯೇ ಪ್ರೇಕ್ಷಕರಿಗೆ ಮನವರಿಕೆ ಮಾಡಿ ಕೊಟ್ಟಿದೆ.

    ಈ ಹಾಡೂ ಕೂಡಾ ರಿಷಬ್ ಶೆಟ್ಟಿ ಮತ್ತವರ ತಂಡದ ಹೊಸತನದ ಹಂಬಲದ ಪ್ರತಿಫಲ. ಟ್ರೇಲರ್ ಮತ್ತು ಟೀಸರ್‍ನಂಥವುಗಳ ಮೂಲಕ ಕಥೆಯ ಹೂರಣದ ಸುಳಿವು ಕೊಡುವುದು ಮಾಮೂಲು. ಆದರೆ ಕಥಾ ಸಂಗಮ ಅದನ್ನು ಈ ಹಾಡಿನ ಮೂಲಕವೇ ಮಾಡಿದೆ. ಮತ್ತದು ತುಂಬಾನೇ ಪರಿಣಾಮಕಾರಿಯಾಗಿದೆ. ಇಲ್ಲಿ ಏಳು ಮಂದಿ ಯುವ ನಿರ್ದೇಶಕರ ಏಳು ಕಥೆಗಳಿವೆ. ಅವೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿರುವಂಥವುಗಳು. ಒಂದೇ ಸಿನಿಮಾದಲ್ಲಿ ಏಳು ಸಿನಿಮಾ ತೋರಿಸೋ ಮಹತ್ವದ ಪ್ರಯತ್ನವೂ ಈ ಚಿತ್ರದಲ್ಲಿದೆ. ಏಳು ಮಂದಿ ನಿರ್ದೇಶಕರು, ಏಳು ಕಥೆ, ಏಳು ಜನ ಛಾಯಾಗ್ರಾಹಕರು ಈ ಸಿನಿಮಾದ ಪ್ರಧಾನ ಅಂಶಗಳಂತಿದ್ದಾರೆ. ಪ್ರತೀ ಕಥೆಗಳಲ್ಲಿಯೂ ಭಿನ್ನ ಪಾತ್ರಗಳು ಪ್ರೇಕ್ಷಕರನ್ನು ಚಕಿತಗೊಳಿಸಲು ತಯಾರಾಗಿವೆ.

    ಲವ್, ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಕ್ರೈಂ ಜಾನರಿನಡಿ ಬರುವಂಥಾ ಕಥೆಗಳು ಇಲ್ಲಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಕಥಾ ಸಂಗಮದತ್ತ ಪ್ರತೀ ಪ್ರೇಕ್ಷಕರೂ ಕಣ್ಣಿಟ್ಟು ಕಾಯುವಂತೆ ಮಾಡಿ ಬಿಟ್ಟಿದೆ. ಆ ಟ್ರೇಲರ್‍ಗೆ ಸಿಕ್ಕಿರೋ ಪ್ರತಿಕ್ರಿಯೆ ಮತ್ತು ವೀಕ್ಷಣೆಗಳೇ ಎಲ್ಲವನ್ನೂ ಹೇಳುವಂತಿವೆ. ಪುಟ್ಟಣ್ಣ ಕಣಗಾಲರು ದಶಕಗಳ ಹಿಂದೆಯೇ ಇಂಥಾದ್ದೊಂದು ಪ್ರಯತ್ನ ಮಾಡಿದ್ದರು. ಇದೀಗ ರಿಷಬ್ ಶೆಟ್ಟಿ ಮತ್ತು ತಂಡ ಸಂಪೂರ್ಣ ಹೊಸತನದೊಂದಿಗೆ ಕಥಾ ಸಂಗಮದ ಮೂಲಕ ಕಮಾಲ್ ಮಾಡ ಹೊರಟಿದ್ದಾರೆ. ಅದರ ಮಜವೇನನ್ನೋದು ಇದೀಗ ಬಿಡುಗಡೆಯಾಗಿರೋ ಹಾಡಿನ ಮೂಲಕವೇ ಸ್ಪಷ್ಟಗೊಂಡಿದೆ.

  • ರಿಷಬ್ ಶೆಟ್ಟರ ಕಥಾ ಸಂಗಮದ ಸಂಗೀತ ಸಮಾಗಮ!

    ರಿಷಬ್ ಶೆಟ್ಟರ ಕಥಾ ಸಂಗಮದ ಸಂಗೀತ ಸಮಾಗಮ!

    ಬೆಂಗಳೂರು: ವರ್ಷಾಂತರಗಳ ಹಿಂದೆ ಪುಟ್ಟಣ್ಣ ಕಣಗಾಲರು ನಿರ್ದೇಶನ ಮಾಡಿದ್ದ ಕಥಾ ಸಂಗಮ ಚಿತ್ರವನ್ನು ಕನ್ನಡದ ಪ್ರೇಕ್ಷಕರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ಅದು ಆ ಕಾಲಕ್ಕೊಂದು ಹೊಸ ಪ್ರಯೋಗ. ಅದೊಂದು ಸಾಹಸ. ಈಗ ಕಾಲಘಟ್ಟ ಬದಲಾಗಿದೆ. ಕನ್ನಡ ಚಿತ್ರರಂಗದಲ್ಲಿಯೂ ಹೊಸ ಹರಿವು ಜೋರಾಗಿದೆ. ಈ ಅಲೆಯಲ್ಲಿ ಮುಂಚೂಣಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಕಥಾ ಸಂಗಮವೆಂಬ ಶೀರ್ಷಿಕೆಯಲ್ಲಿಯೇ ಚಿತ್ರವೊಂದನ್ನು ಅಣಿಗೊಳಿಸಿದ್ದಾರೆ. ಏಳು ಮಂದಿ ನಿರ್ದೇಶಕರ ಏಳು ಕಥೆಗಳನ್ನೊಳಗೊಂಡಿರುವ ಈ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೀಗ ಮುಹೂರ್ತ ನಿಗದಿಯಾಗಿದೆ. ಕಥಾಸಂಗಮ ಎಂಬುದು ಎಷ್ಟು ಹೊಸತನದ ಪ್ರಯೋಗವೋ ಅದಕ್ಕೆ ತಕ್ಕುದಾಗಿಯೇ ರಿಷಬ್ ಶೆಟ್ಟಿ ಮತ್ತವರ ಸಂಗಡಿಗರು ಧ್ವನಿಸುರುಳಿ ಕಾರ್ಯಕ್ರಮವನ್ನೂ ರೂಪಿಸಿದ್ದಾರೆ.

    ನವೆಂಬರ್ 21ರಂದು ಸಂಜೆ 5.30ಕ್ಕೆ ರವೀಂದ್ರ ಕಲಾ ಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಕಥಾಸಂಗಮದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನೆರವೇರಲಿದೆ. ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಿಗೆ, ಧ್ವನಿ ಸುರುಳಿ ಬಿಡುಗಡೆಯಂಥಾದ್ದಕ್ಕೆ ಒಂದಷ್ಟು ಚೌಕಟ್ಟು, ಸಿದ್ಧ ಸೂತ್ರಗಳಿವೆ. ಆದರೆ ಕಥಾಸಂಗಮದ ಧ್ವನಿ ಸುರುಳಿ ಕಾರ್ಯಕ್ರಮವನ್ನು ರೂಪಿಸಿರೋ ರೀತಿಯೇ ನಿಜಕ್ಕೂ ಆಹ್ಲಾದಕರವಾಗಿದೆ. ನಾಟಕ, ಸಾಹಿತ್ಯ ಕಾರ್ಯಕ್ರಮಗಳ ಮೂಲಕ ರಂಗೇರಿಕೊಳ್ಳುವ ರವೀಂದ್ರ ಕಲಾಕ್ಷೇತ್ರದ ಪರಿಸರವನ್ನು ಸಿನಿಮಾ ಕಾರ್ಯಕ್ರಮದ ಮೂಲಕ ಕಳೆಗಟ್ಟಿಸುವಂತೆ ರಿಷಬ್ ಶೆಟ್ಟಿ ಮತ್ತು ತಂಡ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.

    ಇದರ ಆಹ್ವಾನ ಪತ್ರಿಕೆ ಗಮನಿಸಿದರೇನೇ ಈ ಧ್ವನಿ ಸುರುಳಿ ಬಿಡುಗಡೆ ಸಮಾರಂಭದ ವೈಶಿಷ್ಟ್ಯವೇನೆಂಬುದು ಅರ್ಥವಾಗುತ್ತದೆ. ಇದನ್ನೂ ಒಂದು ಸಾಹಿತ್ಯದ ಕಾರ್ಯಕ್ರಮದಂತೆ, ಸಂಗೀತದ ಹಬ್ಬದಂತೆ ನಡೆಸಲು ನೀಲನಕ್ಷೆ ರೆಡಿ ಮಾಡಿಕೊಳ್ಳಲಾಗಿದೆ. ಅಂದು ಸಂಸ ಬಯಲು ರಂಗಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಥಾಸಂಗಮದ ಧ್ವನಿಸುರುಳಿಯನ್ನು ಸಂಜೆ ಆರು ಗಂಟೆಗೆ ಲೋಕಾರ್ಪಣೆಗೊಳಿಸಲಿದ್ದಾರೆ. ಆ ನಂತರ 6.15ರಿಂದ ಪ್ರದೀಪ್ ಬಿ.ವಿ ಮತ್ತು ಸಂಗಡಿಗರಿಂದ ಪುಟ್ಟಣ್ಣ ಕಣಗಾಲ್ ಚಿತ್ರಗಳಿಂದ ಆಯ್ದ ಗೀತೆಗಳ ಸಂಗೀತ ಸುಧೆ ಹರಿಯಲಿದೆ. 7.15ರಿಂದ ಕಥಾ ಸಂಗಮ ಚಿತ್ರದ ದೃಶ್ಯ ಗೀತೆ, ದೃಶ್ಯದ ತುಣುಕು ಮತ್ತು ತೆರೆಯ ಹಿಂದಿನ ಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ. 7.30ರಿಂದ ಎಂಟು ಗಂಟೆಯವರೆಗೆ ಸಂಗೀತಾ ಕಟ್ಟಿ, ವಾಸು ದೀಕ್ಷಿತ್, ಡಾಸ್ ಮೋಡ್, ರಾಜ್ ಬಿ ಶೆಟ್ಟಿ ಮತ್ತು ಅದಿತಿ ಸಾಗರ್ ಮುಂತಾದವರಿಂದ ಕಥಾ ಸಂಗಮ ಚಿತ್ರದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

    ಇದು ನಿಜಕ್ಕೂ ಹೊಸ ರೀತಿಯ ಬೆಳವಣಿಗೆ. ಸಿನಿಮಾ ಸಂಬಂಧಿ ಕಾರ್ಯಕ್ರಮಗಳೂ ಸಾಹಿತ್ಯಾತ್ಮಕ ಗಂಧ ಮೆತ್ತಿಕೊಂಡು ನಡೆಯುವುದು ಖುಷಿಯ ವಿಚಾರ. ಇದಕ್ಕೆ ಕಾರಣರಾದ ರಿಷಬ್ ಶೆಟ್ಟಿ ಮತ್ತು ತಂಡವನ್ನು ಅಭಿನಂದಿಸಲೇ ಬೇಕು. ಈ ಕಾರ್ಯಕ್ರಮ ಎಷ್ಟು ವಿಶಿಷ್ಟವಾಗಿ ನಡೆಯಲಿದೆಯೋ ಅದಕ್ಕೆ ತಕ್ಕುದಾದ ರೀತಿಯಲ್ಲಿಯೇ ಕಥಾ ಸಂಗಮ ಚಿತ್ರ ಮೂಡಿ ಬಂದಿದೆಯಂತೆ. ವಿಶೇಷವೆಂದರೆ ಇದರಲ್ಲಿ ಏಳು ಮಂದಿ ಬರೆದ ಏಳು ಕಥೆಗಳಿವೆ. ಅದನ್ನು ಒಟ್ಟುಗೂಡಿಸಿ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ರಿಷಬ್ ಶೆಟ್ಟಿ ಹೊತ್ತುಕೊಂಡಿದ್ದಾರೆ. ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ, ಹರಿಪ್ರಿಯಾ, ಯಜ್ಞಾ ಶೆಟ್ಟಿ, ಕಿಶೋರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಲವತ್ತು ಮಂದಿ ತಂತ್ರಜ್ಞರು ಸೇರಿ ರೂಪಿಸಿರೋ ಈ ಸಿನಿಮಾ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದ ಮೂಲಕ ಮತ್ತಷ್ಟು ಕಳೆಗಟ್ಟಿಕೊಳ್ಳಲಿದೆ.