Tag: Karnataka Election 2018

  • ಜೆಡಿಎಸ್ ರ‍್ಯಾಲಿಗೆ ಬಂದ ನೂರಾರು ಬೈಕ್ ಸವಾರರಿಗೆ 500 ರೂ. ಪೆಟ್ರೋಲ್ ಭಾಗ್ಯ!

    ಜೆಡಿಎಸ್ ರ‍್ಯಾಲಿಗೆ ಬಂದ ನೂರಾರು ಬೈಕ್ ಸವಾರರಿಗೆ 500 ರೂ. ಪೆಟ್ರೋಲ್ ಭಾಗ್ಯ!

    ನೆಲಮಂಗಲ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳುವ ಹಿನ್ನೆಲೆಯಲ್ಲಿ ಕೊನೆಯ ಪ್ರಚಾರದ ಕಸರತ್ತಾಗಿ ಜೆಡಿಎಸ್ ಪಕ್ಷ ಬೈಕ್ ರ‍್ಯಾಲಿ ಆಯೋಜಿಸಿದೆ.

    ಬೈಕ್ ನಲ್ಲಿ ಬಂದ ನೂರಾರು ಕಾರ್ಯಕರ್ತರಿಗೆ ಭರ್ಜರಿ ಪೆಟ್ರೋಲ್ ಭಾಗ್ಯ ನೀಡಿದೆ. ಬೆಂಗಳೂರು ಹೊರವಲಯದ ನೆಲಮಂಗಲ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಶ್ರೀನಿವಾಸಮೂರ್ತಿ ಪ್ರತಿಯೊಬ್ಬರಿಗೂ 500 ರೂ. ಟೋಕನ್ ನೀಡಿ ಕಾರ್ಯಕರ್ತರನ್ನು ಚುನಾವಣಾ ಪ್ರಚಾರಕ್ಕೆ ಮುಂದಾಗುವಂತೆ ತಿಳಿಸಿ ಪಕ್ಷವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದಾರೆ.

    ನೆಲಮಂಗಲದ ಅರಿಶಿನಕುಂಟೆ ಬಳಿ ಇರುವ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ಸರದಿ ಸಾಲಿನಲ್ಲಿ ನಿಂತ ಬೈಕ್ ಸವಾರರು ನಾ ಮುಂದು ತಾ ಮುಂದು ಎಂಬಂತೆ ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ.

  • ಅಳುವ ಗಂಡಸನ್ನು ನಗುವ ಹೆಂಗಸನ್ನು ನಂಬಬಾರದು: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ವ್ಯಂಗ್ಯ

    ಅಳುವ ಗಂಡಸನ್ನು ನಗುವ ಹೆಂಗಸನ್ನು ನಂಬಬಾರದು: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ವ್ಯಂಗ್ಯ

    ರಾಮನಗರ: ಅಳುವ ಗಂಡಸನ್ನ, ನಗುವ ಹೆಂಗಸನ್ನ ನಂಬಬಾರದು ಕಣ್ರೀ. ಗಂಡಸಾದವನು ಎಂತಹ ಸಂದರ್ಭದಲ್ಲೂ ಧೈರ್ಯ, ಶಕ್ತಿ ತುಂಬಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಎಚ್.ಡಿ ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ವಿರುದ್ಧ ಎಚ್.ಸಿ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

    ರಾಮನಗರ ತಾಲೂಕಿನ ಬಿಡದಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ, ಒಳ್ಳೆಯ ಎಂಎಲ್‍ಎ ನನ್ನು ಕರ್ಕೊಂಡ್ ಹೋಗ್ಬಿಟ್ರಿ ಅಂತಾ ಜೆಡಿಎಸ್‍ನವರು ಹೇಳಿದ್ರೆ, ಅಲ್ಲಿನ ಕೆಲವರು ಹಲ್ಲು ಹಲ್ಲು ಕಡಿದುಕೊಂಡು ಕೂತವರೇ ಎಂದು ತಿಳಿಸಿದ್ರು.

    ಜೆಡಿಎಸ್‍ನಲ್ಲಿ ಟಿಕೆಟ್ ಗೊಂದಲದ ಬಗ್ಗೆ ಮಾತನಾಡಿದ ಅವರು, ಇದು ರಾಜಕಾರಣ ಏನ್ರೀ? ಇಂತಹ ರಾಜಕಾರಣದ ಅವಶ್ಯಕತೆ ಇದೆಯೇನ್ರೀ. ಶಿಡ್ಲಘಟ್ಟದಲ್ಲಿ ಟಿಕೆಟ್ ತಗೊಂಡು ನಿಂತಿರುವವರ ಮನೆ ಹಾಳಾಗೋದಿಲ್ವೆನ್ರೀ. ದೇವನಹಳ್ಳಿಯಲ್ಲಿ ಒಬ್ಬನಿಗೆ ಬಿ ಫಾರಂ ಕೊಡ್ತಾರೆ, ಇನ್ನೊಬ್ಬನಿಗೆ ಸಿ ಫಾರಂ ಕೊಡ್ತಾರೆ. ಅವರ ಕುಟುಂಬದವರು ಸೂಸೈಡ್ ಮಾಡ್ಕೊಬೇಕೇನ್ರೀ? ಇವರನ್ನ ನಂಬಿಕೊಂಡು ಸಾಯಂಕಾಲ ಬರ್ತಾರೆ ನಿಮ್ಮ ಮುಂದೆ ಕಣ್ಣೀರು ಹಾಕ್ತಾರೆ ನೋಡಿ ಎಂದು ವ್ಯಂಗ್ಯವಾಡಿದ್ರು.

  • ಗುಜರಿ ವ್ಯಾಪಾರದಿಂದ್ಲೇ ಕೋಟ್ಯಾಧೀಶ- ಎಂಎಲ್‍ಎ ಆಗ್ಬೇಕು ಅಂತ ಅಖಾಡಕ್ಕಿಳಿದ್ರು ಶಿವಸೇನಾ ಅಭ್ಯರ್ಥಿ!

    ಗುಜರಿ ವ್ಯಾಪಾರದಿಂದ್ಲೇ ಕೋಟ್ಯಾಧೀಶ- ಎಂಎಲ್‍ಎ ಆಗ್ಬೇಕು ಅಂತ ಅಖಾಡಕ್ಕಿಳಿದ್ರು ಶಿವಸೇನಾ ಅಭ್ಯರ್ಥಿ!

    ತುಮಕೂರು: ವ್ಯಕ್ತಿಯೊಬ್ಬರು ಗುಜರಿ ವ್ಯಾಪಾರದಿಂದಲೇ ಕೋಟ್ಯಾಧೀಶನಾಗಿದ್ದು, ಇದರ ಜೊತೆಗೆ ತಾನು ಎಂಎಲ್‍ಎ ಆಗಬೇಕು ಎಂದು ಕನಸು ಕಂಡು ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.

    ಜಿಲ್ಲೆಯ ತಿಪಟೂರಿನ ಸಂತೋಷ್ ಭೈರಾಟೆ ಶಿವಸೇನಾ ಅಭ್ಯರ್ಥಿಯಾಗಿ ತಿಪಟೂರು ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ. ಹಿಂದುತ್ವದ ಅಜೆಂಡಾ ಹಿಡಿದುಕೊಂಡು ಮತಬೇಟೆ ಮಾಡುತ್ತಿದ್ದಾರೆ. ತಮ್ಮದೆ ಆದ ಯುವಕರ ತಂಡ ಕಟ್ಟಿಕೊಂಡು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

    ಸಂತೋಷ್ ಭೈರಾಟೆ ಕಳೆದ ಹತ್ತು ವರ್ಷಗಳಿಂದ ಗುಜರಿ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಈ ವ್ಯಾಪಾರದಿಂದಲೇ ಕೋಟಿ ಕೋಟಿ ಹಣ ಸಂಪಾದನೆ ಮಾಡಿ ರಾಜಕೀಯಕ್ಕೆ ಧುಮುಕಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ಸ್ಥಿರ ಹಾಗೂ ಚರಾಸ್ಥಿಯನ್ನು 1.2 ಕೋಟಿ ರೂ. ಎಂದು ಘೋಷಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಂತೋಷ್ ಭೈರಾಟೆ, ಈ ಬಾರಿ ತಿಪಟೂರಿನ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನಾ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ಚಹಾ ಮಾರಿ ಪ್ರಧಾನಿ ಆಗಿದ್ದಾರೆ ಅಂದರೆ ನಾನು ಗುಜರಿ ವ್ಯಾಪಾರ ಮಾಡಿ ಮೇಲೆ ಬಂದಿದ್ದೇನೆ. ಆದ್ದರಿಂದ ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನಗೆ ತಮ್ಮ ತಂಡದ ಅಭ್ಯರ್ಥಿಗಳೇ ಸ್ಫೂರ್ತಿಯಾಗಿದ್ದಾರೆ. ನಮ್ಮ ತಂಡದ ಯುವಕರಿಗೆ ಬೆಂಬಲಿಸಿ ಅಂತ ಹೇಳಿ ಮತದಾರರ ಬಳಿ ಮನವಿ ಮಾಡಿಕೊಂಡಿದ್ದಾರೆ ಅಂತ ಹೇಳಿದ್ರು.

  • ಇತಿಹಾಸ ಹೇಳುವುದರ ಮೂಲಕ ಚಾಮುಂಡಿ ಬೆಟ್ಟದ ಮೇಲೆ ಮತದಾನದ ಜಾಗೃತಿ ಮೂಡಿಸಿದ ಯದುವೀರ್ ಒಡೆಯರ್

    ಇತಿಹಾಸ ಹೇಳುವುದರ ಮೂಲಕ ಚಾಮುಂಡಿ ಬೆಟ್ಟದ ಮೇಲೆ ಮತದಾನದ ಜಾಗೃತಿ ಮೂಡಿಸಿದ ಯದುವೀರ್ ಒಡೆಯರ್

    ಮೈಸೂರು: ಕರ್ನಾಟಕ ವಿಧಾನಸಭಾ ಚುನವಾಣೆ ಇನ್ನೇನು ಹತ್ತಿರ ಬರುತ್ತಿದ್ದಂತೆ ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡುವಂತೆ ಮಹಾರಾಜ ಯದುವೀರ್ ಒಡೆಯರ್ ಮನವಿ ಮಾಡಿದ್ದು, ಆ ವಿಡಿಯೋವನ್ನು ತಮ್ಮ ಫೇಸ್‍ಬುಕ್ ಹಾಗೂ ಇನ್ಸ್ ಸ್ಟಾಗ್ರಾಂ ನಲ್ಲಿ  ಪೋಸ್ಟ್ ಮಾಡಿದ್ದಾರೆ.

    “ನಮ್ಮ ಪೂರ್ವಜರ ಮಹೋನ್ನತ ಆದರ್ಶಗಳನ್ನು ಒಳಗೂಡಿಸಿಕೊಂಡು ನಮ್ಮ ನಾಡನ್ನು ಸ್ಥಾಪಿಸಿದ್ದಾರೆ. ಅವರ ಆಕಾಂಕ್ಷೆಗಳಂತೆ ನಮ್ಮ ರಾಜ್ಯ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ವಿಜ್ಞಾನ, ಪ್ರಕೃತಿಯ ಸಂರಕ್ಷಣೆ, ಸ್ವಶ್ಚತೆ ಹಾಗು ಹುತಾತ್ಮಕರ ಯೋಜನೆಗಳು ಇವುಗಳೆಲ್ಲ ನಮ್ಮ ಅಭಿವೃದ್ಧಿ ಬಿಂದು. ಸಂಸ್ಕೃತಿ ರಾಜ್ಯದ ರಾಯಭಾರಿಗಳಾಗಿ ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಅವುಗಳನ್ನು ರಕ್ಷಿಸಬೇಕು.

    ನಮ್ಮ ಹಿರಿಯರ ಆಕಾಂಕ್ಷೆಗಳನ್ನು ಎತ್ತಿ ಹಿಡಿಯಬೇಕು. ನಮ್ಮ ಊರಿನ ಅನನ್ಯತೆ ಹಾಗೂ ಅಭಿವೃದ್ಧಿಗೆ ಪ್ರಜಾಪ್ರಭುತ್ವ ನೀಡಿರುವ ಮಾರ್ಗವೇ ಮತದಾನ. ಹೀಗಾಗಿ ಇದೇ ಮೇ 12ರಂದು ತಪ್ಪದೇ ಮತ ಚಲಾಯಿಸಿ ನಮ್ಮ ಪೂರ್ವಜರ ಆಕಾಂಕ್ಷೆಗಳನ್ನು ಎತ್ತಿಹಿಡಿಯಬೇಕೆಂದು ಹಾರೈಸುತ್ತೇನೆ ಎಂದು ಯದುವೀರ್ ಒಡೆಯರ್ ಮನವಿ ಮಾಡಿದ್ದಾರೆ.

    https://www.instagram.com/p/Bijg7JrAk1-/?hl=en&taken-by=ykcwadiyar

  • ಪ್ರಧಾನಿ ಮೋದಿ ಬೇಕಾಬಿಟ್ಟಿಯಾಗಿ ಮಾತನಾಡೋದನ್ನ ಬಿಡ್ಬೇಕು: ಮಲ್ಲಿಕಾರ್ಜುನ್ ಖರ್ಗೆ

    ಪ್ರಧಾನಿ ಮೋದಿ ಬೇಕಾಬಿಟ್ಟಿಯಾಗಿ ಮಾತನಾಡೋದನ್ನ ಬಿಡ್ಬೇಕು: ಮಲ್ಲಿಕಾರ್ಜುನ್ ಖರ್ಗೆ

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಬೇಕಾಬಿಟ್ಟಿಯಾಗಿ ಮಾತನಾಡೋದನ್ನು ಬಿಡಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

    ಕಲಬುರಗಿ ಗಂಗಾ ನಗರದಲ್ಲಿ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಖರ್ಗೆ, ಮೋದಿ ತಾವೊಬ್ಬರೇ ಬುದ್ಧಿವಂತ ಅಂತ ಅಂದುಕೊಂಡಿದ್ದಾರೆ. ಅವರಿಗಿಂತ ಬುದ್ಧಿವಂತರು ದೇಶದಲ್ಲಿ ಕೋಟ್ಯಾಂತರ ಜನರಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಮೋದಿ ಸಾಕಷ್ಟು ಕಲಿಯಬೇಕಾಗಿದೆ ಅಂತ ಸಲಹೆ ನೀಡಿದ್ರು.

    ಇದೇ ವೇಳೆ ಕಾಂಗ್ರೆಸ್ ಡೀಲ್ ಪಕ್ಷವೆಂಬ ಬಿಜೆಪಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್ ಖರ್ಗೆ, ವಿಜಯ್ ಮಲ್ಯ, ನೀರವ್ ಮೋದಿ ಅಂತವರು ದೇಶವನ್ನು ಕೊಳ್ಳೆ ಹೊಡೆದು ಹೋಗಿದ್ದಾರೆ. ದೇಶವನ್ನು ಲೂಟಿ ಮಾಡಿದವರಿಗೆಲ್ಲ ಮೋದಿ ಸಹಾಯ ಮಾಡಿದ್ದಾರೆ ಅಂತಾ ಆರೋಪಿಸಿದ್ರು.

  • ಮದ್ವೆ ಮೆರವಣಿಗೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ

    ಮದ್ವೆ ಮೆರವಣಿಗೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ

    ಯಾದಗಿರಿ: ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶಹಾಪೂರ ನಗರದ ಹಳಿಸಗರದ ಬಡಾವಣೆಯಲ್ಲಿ ನಡೆದಿದೆ.

    ಬಿಜೆಪಿ ಅಭ್ಯರ್ಥಿ ಗುರುಪಾಟೀಲ್ ಶಿರವಾಳ ಬೆಂಬಲಿಗರಾದ ಶರಣು ರತ್ತಾಳ, ಬಸ್ಸು ರತ್ತಾಳ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಶರಣ ಬಸಪ್ಪಾ ದರ್ಶನಾಪೂರ ಬೆಂಬಲಿಗರು ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಲಾಗಿದೆ.

    ಇನ್ನೂ ಶಹಾಪೂರ ಮತಕ್ಷೇತ್ರದಲ್ಲಿ ಜಿದ್ದಾಜಿದ್ದಿ ರಾಜಕೀಯ ಇರುವುದರಿಂದ ಈ ಘಟನೆ ನಡೆದಿದೆ. ಸದ್ಯ ಗಾಯಳುಗಳನ್ನು ಶಹಾಪೂರ ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಶಾಸಕ ಗುರುಪಾಟೀಲ್ ಭೇಟಿ ನೀಡಿದ್ದಾರೆ.

    ಈ ಘಟನೆಯ ಕುರಿತು ಶಹಾಪೂರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿದ್ದರಾಮಯ್ಯ ಹಿಂದೆ ನಾನೇ ಇದ್ದೀನಿ: ಡಿ.ಕೆ ಶಿವಕುಮಾರ್

    ಸಿದ್ದರಾಮಯ್ಯ ಹಿಂದೆ ನಾನೇ ಇದ್ದೀನಿ: ಡಿ.ಕೆ ಶಿವಕುಮಾರ್

    ರಾಯಚೂರು: ನಾನೇನಾದರೂ ಆಗಬೇಕಲ್ವಾ, ಹೊರಗಡೆಯಿಂದ ಬಂದವರಿಗೆಲ್ಲ ಸಹಾಯ ಮಾಡಿದ್ದೀನಿ. ಸಿಎಂ ಸಿದ್ದರಾಮಯ್ಯನವರದ್ದು ಮುಗಿಯಲಿ ಅವರ ಹಿಂದೆ ನಾನಿದ್ದೇನೆ ಎಂದು ಸಿಎಂ ಆಗುವ ಆಸೆಯನ್ನ ಇಂಧನ ಸಚಿವ ಡಿ.ಕೆ ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.

    ರಾಮನಗರ ತಾಲೂಕಿನ ಬಿಡದಿಯ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಸಿ ಬಾಲಕೃಷ್ಣ ಪರವಾಗಿ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, 45 ಸ್ಥಾನ ಪಡೆದಿರುವ ಬಿಜೆಪಿ 150 ಸ್ಥಾನ ಪಡೆಯುವುದಾಗಿ ಹೇಳುತ್ತಿದ್ದಾರೆ. ಆದರೆ 30 ಸ್ಥಾನ ಪಡೆದಿರುವ ಜೆಡಿಎಸ್ ಸಹ 115 ಸ್ಥಾನ ಗಳಿಸುವುದಾಗಿ ಹೇಳುತ್ತಿದೆ. ತಾವು ಪ್ರವಾಸ ಮಾಡಿದ್ದು, ಜೆಡಿಎಸ್ 30 ರಲ್ಲಿ 10 ಸ್ಥಾನ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

    ಶಿಡ್ಲಘಟ್ಟ, ದೇವನಹಳ್ಳಿ, ಮಾಲೂರು, ಕೆಆರ್ ಪೇಟೆನಲ್ಲಿ ಗೆಲ್ಲುವುದಿಲ್ಲ. ಅಲ್ಲೂ ಸಿ ಫಾರಂ, ಬಿ ಫಾರಂ ಗೊಂದಲ ಇದೆ. ಅಲ್ಲದೇ ಎಚ್‍ಡಿಕೆ ಮುಖ್ಯಮಂತ್ರಿ ಆಗುತ್ತೀನಿ ಅಂದ್ರೆ ಎಂಎಲ್‍ಎ ಗಳು ಬೇಕಲ್ವಾ. ಎಚ್.ಡಿ ಕುಮಾರಸ್ವಾಮಿಯವರನ್ನ ಎಂಪಿ ಮಾಡಿದ್ದೀರಿ, ಸಿಎಂ ಮಾಡಿದ್ದೀರಿ. ದೇವೇಗೌಡರನ್ನ ಸಿಎಂ ಮಾಡಿ, ಪ್ರಧಾನಿಯಾಗಿಯೂ ಮಾಡಿದ್ದೀರಿ. ಅಧಿಕಾರದಲ್ಲಿದ್ದಾಗ ಏನಾದರೂ ಶಾಶ್ವತವಾಗಿರುವಂತಹದ್ದು ಮಾಡಬೇಕಲ್ವಾ ಎಂದ್ರು.

    ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ರನ್ನ ಗಂಡು ಮಾಡಿದ್ದು ನಾನು, ನನ್ನ ಸಹೋದರ ಸುರೇಶ್. ನೂರು ಮಂಜರನ್ನ ತಯಾರು ಮಾಡಬಹುದು. ಬಾಲಕೃಷ್ಣರಂತಹವರನ್ನ ಸೃಷ್ಟಿ ಮಾಡಲಾಗಲ್ಲ ಅವರು ರೆಡಿಮೆಡ್ ಗಂಡು. ಮಂಜು ಸ್ವಿಚ್ ಆಫ್ ಮಂಜು ಎಂದು ವ್ಯಂಗ್ಯವಾಡಿದರು.

  • ನನ್ನ ವಿರುದ್ಧ ಪ್ರಚಾರ ನಡೆಸಲು ಪ್ರಧಾನಿ ಮೋದಿ ಬರಬೇಕಿತ್ತು: ಕಾಂಗ್ರೆಸ್ ಅಭ್ಯರ್ಥಿ

    ನನ್ನ ವಿರುದ್ಧ ಪ್ರಚಾರ ನಡೆಸಲು ಪ್ರಧಾನಿ ಮೋದಿ ಬರಬೇಕಿತ್ತು: ಕಾಂಗ್ರೆಸ್ ಅಭ್ಯರ್ಥಿ

    ಬಳ್ಳಾರಿ: ಜಿಲ್ಲೆಯ ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದ್ರೆ ಚೆನ್ನಾಗಿರುತ್ತಿತ್ತು. ಯಾಕಂದ್ರೆ ನನ್ನನ್ನೂ ಸೋಲಿಸಲು ಪ್ರಧಾನಿ ಬಂದಿದ್ರೂ ಅನ್ನೋ ಇತಿಹಾಸವಾದ್ರೂ ನಿರ್ಮಾಣವಾಗುತ್ತಿತ್ತು ಅಂತಾ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಲೇವಡಿ ಮಾಡಿದ್ದಾರೆ.

    ಬುಧವಾರ ಹೊಸಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಆನಂದ್ ಸಿಂಗ್, ಪ್ರಧಾನಿ ಮೋದಿ ಬರುವ ಬದಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಂದೂ ಪ್ರಚಾರ ಮಾಡಿದ್ದಾರೆ. ಇದ್ರಿಂದ ಏನೂ ಬದಲಾವಣೆ ಆಗಲ್ಲ ಅಂತ ಕಿಡಿಕಾರಿದ್ದಾರೆ.

    ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದ್ದು, ನನ್ನ ಹಿಂದೆ ಕೆಲ ತೋಳಗಳು ಕೆಲಸ ಮಾಡುತ್ತಿವೆ. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಈ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಮುಂದಿನ 2019ರಲ್ಲಿ ಕೆಂಪುಕೋಟೆ ಮೇಲೆ ಕಾಂಗ್ರೆಸ್ ಬಾವುಟ ಏರಿಸುತ್ತೆವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹೊಸಪೇಟೆಯನ್ನು ಜಿಲ್ಲೆಯನ್ನಾಗಿ ಮಾಡಲಾಗುವುದೆಂದು ಆನಂದಸಿಂಗ್ ಘೋಷಣೆ ಮಾಡಿದ್ರು.

  • ಅಂಬರೀಶ್ ಜೊತೆಗಿನ ಮಾತುಕತೆಯ ಗುಟ್ಟು ಜೆಡಿಎಸ್ ಅಭ್ಯರ್ಥಿಯಿಂದ ಬಯಲು!

    ಅಂಬರೀಶ್ ಜೊತೆಗಿನ ಮಾತುಕತೆಯ ಗುಟ್ಟು ಜೆಡಿಎಸ್ ಅಭ್ಯರ್ಥಿಯಿಂದ ಬಯಲು!

    ಮಂಡ್ಯ: ಶಾಸಕ ಅಂಬರೀಶ್ ಈ ಚುನಾವಣೆಯಲ್ಲಿ ಪರೋಕ್ಷವಾಗಿ ನನ್ನ ಪರವಾಗಿದ್ದಾರೆ ಎಂದು ಮಂಡ್ಯ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಹೇಳಿದ್ದಾರೆ.

    ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಅಂಬರೀಶ್ ಅವರನ್ನು ಭರಪೂರ ಹೊಗಳುವುದರ ಜೊತೆಗೆ ಅಂಬಿ ಇಲ್ಲದಿರುವುದು ಈ ಚುನಾವಣೆಯಲ್ಲಿ ನನಗೆ ಪ್ಲಸ್ ಪಾಯಿಂಟ್ ಎಂದಿದ್ದಾರೆ.

    ಮಂಡ್ಯದಲ್ಲಿ ಕೈಗೆಟುಕುವ ವ್ಯಕ್ತಿ ನಾನು ಆಗಿದ್ದೇನೆ. ಯಾರಾದರು ಬಂದರೆ ಅವರನ್ನು ಸತ್ಕರಿಸುವ ಔದಾರ್ಯ ನನಗೆ ಶ್ರೀರಕ್ಷೆಯಾಗಿದೆ ಎಂದು ತಿಳಿಸಿದರು.

    ಅಂಬರೀಶ್ ಹಿರಿಯ ಕಲಾವಿದರು. ಕಳೆದ ಬಾರಿ ಅವರ ವಿರುದ್ಧ ಸೋತಿದ್ದರೂ ಕೂಡ ನನ್ನ ಅವರ ಬಾಂಧವ್ಯ ಹದಗೆಟ್ಟಿರಲಿಲ್ಲ. ಚುನಾವಣೆಗೆ ಮಾತ್ರ ನಮ್ಮ ಹೋರಾಟ ಸೀಮಿತವಾಗಿತ್ತು. ಉಳಿದ ವಿಷಯಗಳಲ್ಲಿ ಕಲಾವಿದರಿಗೆ ಕೊಡಬೇಕಾಗಿದ್ದ ಗೌರವ ಕೊಟ್ಟಿದ್ದೆ. ಆ ಗೌರವ ಇಂದು ನಮಗೆ ಶ್ರೀರಕ್ಷೆಯಾಗಿದೆ ಎಂದು ತಿಳಿಸಿದ್ದರು.

    ಅಷ್ಟೇ ಅಲ್ಲದೇ ಅಂಬರೀಶ್ ಅವರು ಕೂಡ ನನ್ನ ಬೆಂಬಲಿಸಿದ್ದಾರೆ. ನನ್ನ ಪರ ಪ್ರಚಾರಕ್ಕೆ ಬರುವುದು ಅವರ ಇಚ್ಚೆಗೆ ಬಿಟ್ಟದ್ದು. ನಾನು ಅವರನ್ನು ಕೇಳಿಕೊಂಡಿದ್ದೇನೆ. ಆಗ ಅಂಬರೀಶ್ ದೇವರು ನಿನಗೆ ಒಳ್ಳೆದು ಮಾಡುತ್ತಾನೆ ಹೋಗು ಎಂದಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

    ಅಂಬರೀಶ್ ಅವರನ್ನು ನೇರವಾಗಿ ಭೇಟಿ ಮಾಡಿದ್ದೀರಾ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಿದ್ದೀರಾ ಎನ್ನುವ ಪ್ರಶ್ನೆಗೆ ಶ್ರೀನಿವಾಸ್ ಉತ್ತರ ನೀಡಲು ನಿರಾಕರಿಸಿದರು.

  • ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಪೊಲೀಸರಿಂದ ವಶ!

    ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಪೊಲೀಸರಿಂದ ವಶ!

    ಧಾರವಾಡ: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ ಧಾರವಾಡದಲ್ಲಿ ಬರೋಬ್ಬರಿ 4.5 ಕೆ.ಜಿ ಚಿನ್ನ ಸಿಕ್ಕಿದೆ. ವಿಚಾರಣೆ ನಡೆಸಿದ ವೇಳೆ ಪತ್ತೆಯಾದ ಚಿನ್ನ ನಕಲಿ ಎನ್ನುವ ವಿಚಾರ ಪತ್ತೆಯಾಗಿದೆ.

    ಹೌದು. ಗುಜರಾತ್ ಮೂಲದ ವ್ಯಾಪಾರಿಯೊಬ್ಬ ಈ ಚಿನ್ನವನ್ನ ಅಹದಾಬಾದ್‍ದಿಂದ ಹುಬ್ಬಳ್ಳಿ ತೆಗೆದುಕೊಂಡು ಹೋಗುತ್ತಿದ್ದ. ಚುನಾವಣೆ ಇರುವ ಹಿನ್ನೆಲೆ ಧಾರವಾಡ ನರೇಂದ್ರ ಕ್ರಾಸ್ ಬಳಿ ಪೊಲೀಸರು ತಪಾಸಣೆ ಮಾಡಿದರು. ನಂತರ ಈ ಚಿನ್ನವನ್ನು ವಶಕ್ಕೆ ಪಡೆದಿದ್ದರು.

    ನಂತರ ಇದನ್ನು ತೂಕ ಮಾಡಿದಾಗ 4.5 ಕೆಜಿ ಇತ್ತು. ಇದನ್ನು ನೋಡಿದ ಚುನಾವಣಾಧಿಕಾರಿಗಳು ಚಿನ್ನವನ್ನು ಪರಿಶೀಲನೆ ಮಾಡಿದಾಗ ಅದು ನಕಲಿ ಚಿನ್ನ ಎಂದು ಗೊತ್ತಾಗಿದೆ. ಇನ್ನು ಈ ರೋಲ್ಡ್ ಗೋಲ್ಡ್ ನ್ನು ತೆಗೆದುಕೊಂಡು ಹೋಗುತ್ತಿದ್ದ ವ್ಯಾಪಾರಿಗೆ ಕೇಳಿದರೆ ಇದು 5 ಸಾವಿರದ ನಕಲಿ ಚಿನ್ನವಾಗಿದ್ದು, ಸ್ಯಾಂಪಲ್ ತೋರಿಸಲು ಹೊರಟಿದ್ದೆ ಎಂದು ಉತ್ತರಿಸಿದ್ದಾನೆ.

    ಸದ್ಯ ಪೊಲೀಸರು ಆ ವ್ಯಾಪಾರಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.