Tag: Karnataka cabinet

  • ಡಿಕೆಶಿ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್‌ ಕೇಸ್‌ ವಾಪಸ್ ಪಡೆದ ಸರ್ಕಾರ

    ಡಿಕೆಶಿ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್‌ ಕೇಸ್‌ ವಾಪಸ್ ಪಡೆದ ಸರ್ಕಾರ

    – ಪೊಲೀಸ್, ಕಾನೂನು ಇಲಾಖೆಗಳ ವಿರೋಧದ ನಡುವೆಯೂ ಕೇಸ್‌ ವಾಪಸ್‌

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಬೆಂಬಲಿಗರ ವಿರುದ್ಧದ 12 ಪ್ರಕರಣವೂ ಸೇರಿ ಒಟ್ಟು 62 ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಸಮಿತಿ (Congress Cabinet) ಒಪ್ಪಿಗೆ ಸೂಚಿಸಿದೆ.

    ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು 2019 ರಲ್ಲಿ ಡಿಕೆಶಿವಕುಮಾರ್‌ ಅವರನ್ನು ಬಂಧಿಸಿದಾಗ ದಾಂಧಲೆ ನಡೆಸಿದ ಬೆಂಗಲಿಗರ ವಿರುದ್ಧ ಸಾತನೂರು, ಕೋಡಿಹಳ್ಳಿಸೇರಿ ರಾಮನಗರ ಜಿಲ್ಲೆಯ ನಾನಾ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ, ರೈತ ಮುಖಂಡರು, ನಾನಾ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕ್ಯಾಬಿನೆಟ್‌ ತೆಗೆದುಕೊಂಡಿತು.

    ಇದರೊಂದಿಗೆ ಬೇರೆ ಬೇರೆ 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ‌ ಬ್ಯಾಲೆಟ್ ಪೇಪರ್ ಎಲೆಕ್ಷನ್: ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ

    ಕೇಸ್‌ ವಾಪಸ್‌ಗೆ ಪೊಲೀಸ್ ಇಲಾಖೆ, ಕಾನೂನು ಇಲಾಖೆ ವಿರೋಧ ವ್ಯಕ್ತಪಡಿಸಿವೆ. ಸಂಪುಟ ಸಭೆಯ ಟಿಪ್ಪಣಿಯಲ್ಲಿ ಎರಡೂ ಇಲಾಖೆಗಳ ಅಭಿಪ್ರಾಯ ಕೇಳಲಾಗಿತ್ತು. ಈ ವೇಳೆ ಇವು ವಾಪಸ್ ಪಡೆಯಲು ಅರ್ಹವಾದ ಪ್ರಕರಣಗಳಲ್ಲ ಎಂದು ಡಿಜಿ ಮತ್ತು ಐಜಿಪಿ ಅಭಿಪ್ರಾಯ ಪಟ್ಟರೆ, ಸಾರ್ವಜನಿಕ ಹಿತಾಸಕ್ತಿ ಇಲ್ಲ, ಕೇಸ್ ಹಿಂದಕ್ಕೆ ಪಡೆಯಲು ಸೂಕ್ತ ಅಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯ ಪಟ್ಟಿದೆ. ಆದಾಗ್ಯೂ ಎರಡೂ ಇಲಾಖೆಯ ಅಭಿಪ್ರಾಯ ಬದಿಗೊತ್ತಿ ಸಂಪುಟ ಸಭೆಯಲ್ಲಿ ಕೇಸ್ ವಾಪಸ್‌ಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ.  ಇದನ್ನೂ ಓದಿ: ಸಮೀರ್‌ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್‌

  • ಗ್ರೇಟರ್‌ ಬೆಂಗಳೂರು, ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿ ಹಲವು ಮಸೂದೆಗಳಿಗೆ ಸಂಪುಟ ಒಪ್ಪಿಗೆ

    ಗ್ರೇಟರ್‌ ಬೆಂಗಳೂರು, ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿ ಹಲವು ಮಸೂದೆಗಳಿಗೆ ಸಂಪುಟ ಒಪ್ಪಿಗೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಗ್ರೇಟರ್‌ ಬೆಂಗಳೂರು, ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿದಂತೆ ಹಲವು ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ.

    2021-22ನೇ ಸಾಲಿನ À RIDF ಟ್ರಾಂಚ್-27ರಡಿ ನಬಾರ್ಡ್‌ನಿಂದ ಅನುಮೋದನೆಗೊಂಡು ನಿರ್ಮಿಸುತ್ತಿರುವ ಕೃಷಿ ಇಲಾಖೆಯ 13 ಶೀತಲ ಘಟಕಗಳ ನಿರ್ಮಾಣ ಕಾಮಗಾರಿಗಳ 171.91 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೆಚ್ಚುವರಿ ಮೊತ್ತ 47.81 ಕೋಟಿಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದಿಂದ ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ.

    ಕಿತ್ತೂರಿಗೆ 100 ಹಾಸಿಗೆ ಆಸ್ಪತ್ರೆ
    ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 100 ಹಾಸಿಗೆಗಳ ತಾಲ್ಲೂಕು ಮಟ್ಟದ ಆಸ್ಪತ್ರೆಯನ್ನು 3378.65 ಲಕ್ಷಗಳ ಅನುದಾನದಲ್ಲಿ ನಿರ್ಮಿಸಲು ಹೊಸದಾಗಿ ಟೆಂಡರ್ ಆಹ್ವಾನಿಸಿ ಕೈಗೊಳ್ಳಲು ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿತು.

    ಮೊಳಕಾಲ್ಮೂರು ಆಸ್ಪತ್ರೆ ಮೇಲ್ದರ್ಜೆಗೆ
    ಮೊಳಕಾಲ್ಮೂರು ತಾಲ್ಲೂಕು ಗಣಿ ಬಾಧಿತ ಪ್ರದೇಶವಾಗಿರುವುದರಿಂದ ಈ ತಾಲ್ಲೂಕಿನಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಪ್ರಸ್ತುತವಿರುವ 100 ಹಾಸಿಗೆ ತಾಲ್ಲೂಕು ಆಸ್ಪತ್ರೆಯನ್ನು 200 ಹಾಸಿಗೆಗಳಿಗೆ ಉನ್ನತೀಕರಿಸಿ ಪ್ರತ್ಯೇಕ ಜಿಲ್ಲಾಮಟ್ಟದ ಆಸ್ಪತ್ರೆಯನ್ನು ಸ್ಥಾಪಿಸಲು ಸಚಿವ ಸಂಪುಟ ಅನುಮೋದಿಸಿದೆ.

    ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸೌಲಭ್ಯ
    ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ಮೂಲಕ ಮುಸ್ಲಿಮೇತರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ಶೇ.50 ರಷ್ಟು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ತೆಗೆದುಹಾಕಲು ಸಚಿವ ಸಂಪುಟ ನಿರ್ಣಯಿಸಿದೆ.

    ಕಾರ್ಮಿಕ ರಾಜ್ಯ ವಿಮಾ ಸೊಸೈಟಿ ಸ್ಥಾಪನೆ
    ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯನ್ನು ESI ಮಾರ್ಗಸೂಚಿಗಳನ್ವಯ ‘ಸೊಸೈಟಿ ನೋಂದಣಿ ಕಾಯ್ದೆ 1860’ ಅಡಿಯಲ್ಲಿ ನೋಂದಾಯಿಸಿ ‘ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ’ಯನ್ನಾಗಿ ರೂಪಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

    ವರದಾ ನದಿಗೆ ನೀರು ತುಂಬಿಸುವ ಯೋಜನೆ
    ಹಾವೇರಿ ಜಿಲ್ಲೆ, ಹಾನಗಲ್‌ ತಾಲ್ಲೂಕಿನ ವರದಾ ನದಿಯಿಂದ ನೆರೆಗಲ್ ಹಾಗೂ ಕುಸನೂರ ಏತ ನೀರಾವರಿ ಮುಖಾಂತರ 111 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 220 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

    ಸೊಕನಾದಗಿ ನೀರಾವರಿ ಯೋಜನೆಗೆ ಅನುಮೋದನೆ
    ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಸೊಕನಾದಗಿ ಗ್ರಾಮ ಮತ್ತು ಸುತ್ತಮುತ್ತಲಿನ 588 ಹೆಕ್ಟೇರ್ ಕ್ಷೇತ್ರಕ್ಕೆ ಏತ ನೀರಾವರಿ ಯೋಜನೆಯ ಮೂಲಕ ನೀರಾವರಿ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ 17 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಯನ್ನು ಕೈಗೊಳ್ಳಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

    ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಹಾಸ್ಟೆಲ್
    ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ವ್ಯತ್ಯಾಸದ ಮೊತ್ತ 265.57 ಲಕ್ಷ ರೂ.ನಂತೆ ಒಟ್ಟು 15 ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ತಗಲುವ ವ್ಯತ್ಯಾಸದ ಹೆಚ್ಚುವರಿ ಮೊತ್ತ 3,983.55 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ಕೈಗೊಳ್ಳಲು ಹಾಗೂ 87.60 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

    ತಲಕಾಡು ಇನ್ನು ಪಟ್ಟಣ ಪಂಚಾಯಿತಿ
    ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮ ಪಂಚಾಯಿತಿಯೊಂದಿಗೆ ಬಿ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಟಿ.ಬೆಟ್ಟಹಳ್ಳಿ ಮತ್ತು ಕೂರುಬಾಳನಹುಂಡಿ ಗ್ರಾಮಗಳನ್ನು ಸೇರ್ಪಡೆಗೊಳಿಸಿ ‘ತಲಕಾಡು ಪಟ್ಟಣ ಪಂಚಾಯಿತಿ’ಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದಿಸಿದೆ.

    ಶಿವ ಸಮತೋಲನ ಜಲಾಶಯ ಯೋಜನೆ ವಿಸ್ತರಣೆ
    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಂದ ಶಿವ ಸಮತೋಲನ ಜಲಾಶಯದಿಂದ ಶಿವ ಸಮತೋಲನ ಜಲಾಶಯದ ಕೊಳವೆ ಮಾರ್ಗಗಳ ಇಂಟೇಕ್ ಬಳಿ ಇರುವ 5ನೇ ಹಂತದ ಕಚ್ಚಾ ನೀರು ಸರಬರಾಜು ಕೊಳವೆ ಮಾರ್ಗದವರೆಗೆ 3200 ಮಿ.ಮೀ ವ್ಯಾಸದ ವಿಸ್ತರಿತ ಹೆಚ್ಚುವರಿ ಕಚ್ಚಾ ನೀರಿನ ಕೊಳವೆ ಮಾರ್ಗವನ್ನು ಅಳವಡಿಸುವ 136.50 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಯನ್ನು ಕೆ.ಟಿ.ಪಿ.ಪಿ ಕಾಯ್ದೆ 1999 ರನ್ವಯ ಅನುಷ್ಟಾನಗೊಳಿಸುವ ಷರತ್ತಿಗೊಳಪಟ್ಟು ಕಾಮಗಾರಿಯ ವಿಸ್ತೃತ ಯೋಜನಾ ವರದಿಗೆ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

    ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ ಇನ್ನು ಆಯುಕ್ತಾಲಯ
    ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ರಚನೆ, ಆಯುಕ್ರ ನೇಮಕಾತಿ ಹಾಗೂ ಅಧಿಕಾರ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಶಾಸನಬದ್ಧ ಅವಕಾಶವನ್ನು ಕಲ್ಪಿಸಲು ಹಾಗೂ ಆಯುಕ್ತಾಲಯ ರಚನೆಯಿಂದ ನಗರಾಭಿವೃದ್ಧಿ ಪ್ರಾಧಿಕಾರಗಳ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣವನ್ನು ಆಯುಕ್ತಾಲಯದ ವ್ಯಾಪ್ತಿಗೆ ಒಳಪಡಿಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ಕ್ಕೆ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024 ಗಳಲ್ಲಿ ತಿದ್ದುಪಡಿ ತರುವುದು ಅವಶ್ಯಕವಿರುವುದರಿಂದ ಈ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

    ಗದಗ-ಬೆಟಗೇರಿ ಅಧ್ಯಾದೇಶ ಬದಲಿಗೆ ವಿಧೇಯಕ
    ಅಧ್ಯಾದೇಶವನ್ನು ಬದಲಿ ವಿಧೇಯಕವನ್ನಾಗಿ ವಿದಾಯಿಸುವ ಪ್ರಕ್ರಿಯೆ ಜೊತೆಗೆ ಅಧ್ಯಾದೇಶದಲ್ಲಿ ಒಳಗೊಂಡಿರದ ಇಬ್ಬರು ಹೆಚ್ಚುವರಿ ಸದಸ್ಯರನ್ನು ಸಹ ಕಾಯ್ದೆಗೆ ಸೇರ್ಪಡೆಗೊಳಿಸಿ ಸಿದ್ದಪಡಿಸಿರುವ ಪರಿಷ್ಕೃತ ಗದಗ-ಬೆಟಗೇರಿ ವ್ಯಾಪಾರ ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ (ಅನುಬಂಧದಲ್ಲಿರುವಂತೆ); ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಧರಿಸಿದೆ.

    ಹುಣಸೂರು ನಾಲೆಗಳ ಆಧುನೀಕರಣ
    ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಟ್ಟೆಮಳವಾಡಿ ಆಣೆಕಟ್ಟು ನಾಲೆ ಮತ್ತು ವಡಕೆಕಟ್ಟೆ ಹೈಲೆವೆಲ್ ನಾಲೆಗಳ ಆಧುನೀಕರಣ ಕಾಮಗಾರಿಗಳ ಹಾಗೂ ಅಡ್ಡಮೋರಿಗಳ ಅಭಿವೃದ್ಧಿ ಕಾಮಗಾರಿಗಳ 49.85 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

    ಮರೂರು ಶಾಖಾ ನಾಲೆ ಆಧುನೀಕರಣ
    ಹಾರಂಗಿ ಬಲದಂಡೆ ನಾಲೆಯಡಿ ಬರುವ ಮರೂರು ಶಾಖಾ ನಾಲಾ ಹಾಗೂ ಅದರಡಿ ಬರುವ ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಯ (Modernization of Marur Branch Canal and its distributaries under HRBC) 90.00 ಕೋಟಿ ಮೊತ್ತದ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

    ಹೇಮಾವತಿ ಡಿಸ್ಟ್ರಿಬ್ಯೂಟರಿ-64ಕ್ಕೆ ಆಧುನೀಕರಣ
    ಹೇಮಾವತಿ ಎಡದಂಡೆ ಕಾಲುವೆ ಅಡಿಯಲ್ಲಿ ಡಿಸ್ಟ್ರಿಬ್ಯೂಟರಿ-64 ಮತ್ತು ಅದರ ಉಪ ಕಾಲುವೆಗಳ ಸಿಸಿ ಲೈನಿಂಗ್ ಮತ್ತು ಪುನರ್‌ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

    ನವಿಲುತೀರ್ಥದಿಂದ ರಾಮದುರ್ಗದ 8 ಕೆರೆ ಭರ್ತಿ
    ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಆಣೆಕಟ್ಟಿನಿಂದ ಮಲಪ್ರಭಾ ನದಿಯ ನೀರು ಎತ್ತುವ ಮೂಲಕ ರಾಮದುರ್ಗ ತಾಲ್ಲೂಕಿನ ಚಂದರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

    ಮದ್ದೂರು ಕಾಲುವೆಗಳ ಆಧುನೀಕರಣ ಕಾಮಗಾರಿ
    ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮದ್ದೂರು ಕೆರೆ ಅಡಿಯಲ್ಲಿನ ಚಾಮನಹಳ್ಳಿ ಬೈರಾನ್ ಹಾಗೂ ವೈದ್ಯನಾಥಪುರ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿ, ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಮದ್ದೂರು ಕೆರೆ ಅಡಿಯಲ್ಲಿನ ಚಾಮನಹಳ್ಳಿ ಬೈರಾನ್ ಹಾಗೂ ವೈದ್ಯನಾಥಪುರ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು 49.50 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.

    ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಯಮಗಳಿಗೆ ತಿದ್ದುಪಡಿ
    ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ತಿದ್ದುಪಡಿ) ನಿಯಮಗಳು, 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
    ಆಯೋಗದ ಅಧ್ಯಕ್ಷರ ವಯೋಮಿತಿಯನ್ನು ಕನಿಷ್ಠ 40 ವರ್ಷ ಹಾಗೂ ಸದಸ್ಯರ ವಯೋಮಿತಿಯನ್ನು ಕನಿಷ್ಠ 35 ವರ್ಷ ಎಂದು ನಿಗದಿಪಡಿಸಲಾಗಿದೆ. ಮಕ್ಕಳ ಕ್ಷೇತ್ರದಲ್ಲಿ ಅವರಿಗೆ ಇರಬೇಕಾದ ಅನುಭವದ ಅವಧಿಯನ್ನು ಐದು ವರ್ಷಗಳಿಂದ 10 ವರ್ಷಗಳಿಗೆ ಹೆಚ್ಚಿಸಲಾಗಿದೆ. ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ನೀಡುವ ಬಗ್ಗೆ ತಿಳಿಸಲಾಗಿದೆ. ಆಯೋಗವು ಕೇಂದ್ರ ಸ್ಥಾನದಲ್ಲಿ ಸಭೆ ನಡೆಸುವ ಕುರಿತು ಹಾಗೂ ಕೇಂದ್ರ ಸ್ಥಾನದ ಹೊರಗೆ ಇತರೆ ಜಿಲ್ಲೆ / ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನಾ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಇರಬೇಕಾದ ಸದಸ್ಯರ ಉಪಸ್ಥಿತಿ (Quoram) ಬಗ್ಗೆ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದೆ. ಆಯೋಗದ ಕಾರ್ಯದರ್ಶಿಗಳು ಆಯೋಗದ ಆಡಳಿತದ ವ್ಯವಹಾರಗಳನ್ನು ಸುಲಲಿತವಾಗಿ ನಡೆಸಲು ವಿವರವಾದ ಮಾರ್ಗಸೂಚಿಯನ್ನು ನೀಡಲಾಗಿದೆ.

    ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ
    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.
    ಸಮೀಕ್ಷೆಯನ್ನು ಡಿಜಿಟಲ್ ಕೈಗೊಳ್ಳುವುದು ಮತ್ತು ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಮಾಡಲು ತಂತ್ರಾಂಶದ ಅಭಿವೃದ್ಧಿ ಮತ್ತು ಉಸ್ತುವಾರಿಯನ್ನು ಇ-ಆಡಳಿತ ಇಲಾಖೆ ಮೂಲಕ ಕೈಗೊಳ್ಳಲು, ಸಮೀಕ್ಷೆಯಲ್ಲಿ ನಮೂದಿಸಲಾಗುವ 6 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲು ಹಾಗೂ ನ್ಯಾ.ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿರುತ್ತಾರೆ. ಅದೇ ರೀತಿಯಾಗಿ ಹಿಂದುಳಿದ ವರ್ಗಗಳ ಆಯೋಗವು ನಡೆಸುವ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿಕೊಂಡು ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲು ಮತ್ತು ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆಯೋಗದ ಮೇಲುಸ್ತುವಾರಿಯಲ್ಲಿ ಅಗತ್ಯವಿರುವ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳು ಕೆಲಸ ಮಾಡುವರು.

    ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಅನುಮೋದನೆ ಪಡೆದು, ಘನತೆವೆತ್ತ ರಾಜ್ಯಪಾಲರ ಒಪ್ಪಿಗೆಗೆ ಸಲ್ಲಿಸಿ, ರಾಜ್ಯಪಾಲರ ಅವಲೋಕನಗೊಳಗಾಗಿ ಹಿಂದಿರುಗಿಸಲ್ಪಟ್ಟ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2024ನ್ನು ಹಿಂಪಡೆಯಲು; ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

    ಕರ್ನಾಟಕ ಸಹಕಾರ ಸಂಘಗಳು (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಅನುಮೋದನೆ ಪಡೆದು ಘನತೆವೆತ್ತ ರಾಜ್ಯಪಾಲರ ಒಪ್ಪಿಗೆಗೆ ಸಲ್ಲಿಸಿ, ರಾಜ್ಯಪಾಲರ ಅವಲೋಕನೆಗೊಳಗಾಗಿ ಹಿಂದಿರುಗಿಸಲ್ಪಟ್ಟ ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ 2024’ನ್ನು ಹಿಂಪಡೆಯಲು ಹಾಗೂ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಧ್ಯಕ್ಷರ ಹುದ್ದೆಗೆ ನಡೆಯುವ ಚುನಾವಣೆಗೆ ಮೀಸಲಾತಿ ಇರಲಿದೆ. ಸಹಕಾರಿ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯವನ್ನು ತರಲು ಇದು ನೆರವಾಗಲಿದೆ.

    ಕರ್ನಾಟಕ ಬಂದರು (ಲ್ಯಾಂಡಿಂಗ್ & ಶಿಪ್ಪಿಂಗ್ ಫೀಸ್) (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಮೊದಲನೇ ಅನುಸೂಚಿಯ ಐಟಂ 28ರ ಪರಂತುಕದನ್ವಯ ಕರ್ನಾಟಕ ಬಂದರುಗಳ (ಲ್ಯಾಂಡಿಂಗ್ & ಶಿಪ್ಪಿಂಗ್ ಫೀಸ್) ಆಕ್ಟ್, 1961ರ ಸೆಕ್ಷನ್ 3 ಮತ್ತು ಸೆಕ್ಷನ್ 10ನ್ನು ಮಾರ್ಪಡಿಸಿ ಕರ್ನಾಟಕ ಬಂದರು (ಲ್ಯಾಂಡಿಂಗ್ & ಶಿಪ್ಪಿಂಗ್ ಫೀಸ್) (ಅಮೆಂಡ್‌ಮೆಂಟ್) ಆಕ್ಟ್, 2025ರನ್ನು ಹೊರಡಿಸಲು; ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.

    ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ (ತಿದ್ದುಪಡಿ) ವಿಧೇಯಕ, 2025ಕ್ಕೆ ಹಾಗೂ ಸದರಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

    ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಹಾಗೂ ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ವಿವಿಧ ಕಲಂಗಳಿಗೆ ತಿದ್ದುಪಡಿ ಮಾಡಲು ಅನುಬಂಧದಲ್ಲಿರುವಂತೆ ತಿದ್ದುಪಡಿ ತರಲು ಮತ್ತು ಸದರಿ ಕರಡು ವಿಧೇಯಕವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

    ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಹಾಗೂ ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ವಿವಿಧ ಕಲಂ ಗಳಿಗೆ ತಿದ್ದುಪಡಿ ಮಾಡಲು ಅನುಬಂಧದಲ್ಲಿರುವಂತೆ ತಿದ್ದುಪಡಿ ತರಲು ಮತ್ತು ಸದರಿ ಕರಡು ವಿಧೇಯಕವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

    ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

    ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ಅನುಸೂಚಿ 01ರ ಕ್ರಮ ಸಂಖ್ಯೆ: 1ರ ಅನ್ವಯ ಗ್ರೇಟರ್ ಬೆಂಗಳೂರು ಅಧಿನಿಯಮ, 2024ರ ಕಲಂ 8, 14 ಮತ್ತು 35ಕ್ಕೆ ತಿದ್ದುಪಡಿ ತರುವ ಉದ್ದೇಶದ ಅನುಬಂಧ-1 ರಲ್ಲಿನ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿದೆ.

    ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ 2013ಕ್ಕೆ ತಿದ್ದುಪಡಿ ಮಾಡಲು ಇದರೊಂದಿಗೆ ಲಗತ್ತಿಸಿರುವ, ಅನುಬಂಧದಲ್ಲಿರುವಂತೆ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ವಿಧೇಯಕ 2025ನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟದ ಅನುಮೋದನೆ ನೀಡಿದೆ.

    ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ದೇವದಾಸಿಯರ (ಸಮರ್ಪಣ ನಿಷೇಧ) ಅಧಿನಿಯಮ, 1982 ಹಾಗೂ ಕರ್ನಾಟಕ ದೇವದಾಸಿಯರ (ಸಮರ್ಪಣ ನಿಷೇಧ) (ತಿದ್ದುಪಡಿ) ಅಧಿನಿಯಮ, 2009 ರದ್ದುಪಡಿಸಿ ಅನುಬಂಧ-1 ರಲ್ಲಿ ಇರಿಸಲಾದ ಸಮಗ್ರವಾದ ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಕಾಯ್ದೆ, 2025”ರ ಕರಡು ಪ್ರಸ್ತಾವನೆಗೆ ಅನುಮೋದನೆ ನೀಡುವುದು ಮತ್ತು ಸದರಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟದ ಅನುಮೋದನೆ ನೀಡಿದೆ.

    ಕರ್ನಾಟಕ ಅಪರಾಧ ಮುಕ್ತಗೊಳಿಸುವಿಕೆ (ಉಪಬಂಧಗಳ ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಸರ್ಕಾರದ (ವ್ಯವಹಾರಗಳ ನಿರ್ವಹಣೆ) ನಿಯಮಗಳು, 1977 ಷೆಡ್ಯೂಲ್-1ರ ಪ್ಯಾರ-1ರನ್ವಯ ಅನುಬಂಧದಲ್ಲಿ ಲಗತ್ತಿಸಿರುವ The Karnataka Decriminalisation (Amendment of Provisions) Bill, 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

    ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ
    ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2024”ನ್ನು ಕೈಬಿಡಲು; ಮತ್ತು ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025ಕ್ಕೆ ಹಾಗೂ ಮೇಲೆ ತಿಳಿಸಿರುವ, ನೋಂದಣಿ (ಕರ್ನಾಟಕ ತಿದ್ದುಪಡಿ) ಕಾಯ್ದೆ 2025”ರ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

    ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಅನುಕೂಲತೆ ಮತ್ತು ನಿಯಂತ್ರಣಾ) (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    Karnataka Tourism Trade (Facilitation and Regulation) Act, 2015, 2015 ಕ್ಕೆ ತಿದ್ದುಪಡಿ ತಂದು, ಸದರಿ ಅಧಿನಿಯಮದ ಸೆಕ್ಷನ್-3ರ ನಂತರ “3-A. District Level Monitoring Committee”” ಅನ್ನು ರಚಿಸಿ, ಉಪಬಂಧ ಕಲ್ಪಿಸುವ ಸಂಬAಧ ಅನುಬಂಧದಲ್ಲಿರುವ The Karnataka Tourism Trade (Facilitation and Regulation) (Amendment) Bill, 2025 ರ ಅನುಮೋದನೆಗಾಗಿ ಮತ್ತು ಸದರಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

    ಕರ್ನಾಟಕ ಪುರಸಭೆಗಳ ಹಾಗೂ ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ
    ಕರ್ನಾಟಕ ಪೌರಸಭೆಗಳ ಹಾಗೂ ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

    ಯಲಬುರ್ಗಾ, ಜೇವರ್ಗಿ ಹಾಗೂ ಯಾದಗಿರಿಯಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜು
    ಯಲಬುರ್ಗಾ, ಜೇವರ್ಗಿ ಹಾಗೂ ಯಾದಗಿರಿಯಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜುಗಳಿಗೆ ಒಟ್ಟು 41.91 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಪ್ರಾರಂಭ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

    ಆ.16ಕ್ಕೆ ವಿಶೇಷ ಸಚಿವ ಸಂಪುಟ ಸಭೆ
    ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್‌ದಾಸ್ ಅವರ ಆಯೋಗವನ್ನು ನೇಮಕ ಮಾಡಿದ್ದು, ವರದಿ ಸಲ್ಲಿಕೆಯಾಗಿದೆ. ಶ್ರಮವಹಿಸಿ ಕಡಿಮೆ ಸಮಯದಲ್ಲಿ ವೈಜ್ಞಾನಿಕವಾದ ಅಧ್ಯಯನ ಮಾಡುವ ಮೂಲಕ ಶೇ 95 ರಷ್ಟು ಸಮುದಾಯದ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಿ ವರದಿ ಸಲ್ಲಿಸಿದ್ದಾರೆ. ಸದರಿ ವರದಿಯನ್ನು ಎಲ್ಲಾ ಸಚಿವರಿಗೆ ನೀಡಲಾಗಿದೆ. ಸಚಿವ ಸಂಪುಟ ವರದಿಯನ್ನು ಸ್ವೀಕರಿಸಿದೆ. ಈ ಬಗ್ಗೆ ಅಧ್ಯಯನ ಮಾಡಿ ಆಗಸ್ಟ್ 16 ರಂದು, ಶನಿವಾರ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದು ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.

  • ಸಚಿವ ಸಂಪುಟ ಪುನರ್ ರಚನೆ ಹೈಕಮಾಂಡ್ ತೀರ್ಮಾನವೇ ಅಂತಿಮ: ಸಲೀಂ ಅಹಮದ್

    ಸಚಿವ ಸಂಪುಟ ಪುನರ್ ರಚನೆ ಹೈಕಮಾಂಡ್ ತೀರ್ಮಾನವೇ ಅಂತಿಮ: ಸಲೀಂ ಅಹಮದ್

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆ (Karnataka Cabinet Reshuffle) ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್ (Congress High Command) ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ (Salim Ahmed) ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ಇಲ್ಲ. 3-4 ರಾಜ್ಯಗಳ ಚುನಾವಣೆ ಇದೆ. ಹೀಗಾಗಿ ಸಂಪುಟ ಪುನರ್ ರಚನೆ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕಂತೂ ಸಂಪುಟ ವಿಸ್ತರಣೆ ಇಲ್ಲ. ಆದರೂ ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದ್ದಾರೆ.

    ಎಷ್ಟು ದಿನ ನಾನು ಸಚಿವನಾಗಿ ಇರುತ್ತೇನೋ ಎಂಬ ಸಚಿವ ಜಮೀರ್ ಹೇಳಿಕೆ ವಿಚಾರವಾಗಿ, ಜಮೀರ್ ಅಹಮದ್ ಹೇಳಿಕೆ ನನಗೆ ಗೊತ್ತಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

    ಇದೇ ವೇಳೆ ಪತ್ರಕರ್ತರು ನೀವು ಸಚಿವ ಸ್ಥಾನದ ಆಕಾಂಕ್ಷಿಯೇ? ಎಂದು ಪ್ರಶ್ನಿಸಿದರು. ಇದಕ್ಕೆ, ಸಂಪುಟ ವಿಸ್ತರಣೆ ಸದ್ಯಕ್ಕೆ ಇಲ್ಲ ಎಂದು ಜಾರಿಕೊಂಡರು.

  • ನೀಟ್ ರದ್ದತಿ, ಒಂದು ರಾಷ್ಟ್ರ ಒಂದು ಚುನಾವಣೆ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ

    ನೀಟ್ ರದ್ದತಿ, ಒಂದು ರಾಷ್ಟ್ರ ಒಂದು ಚುನಾವಣೆ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ

    -ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಒಟ್ಟು 4 ನಿರ್ಣಯ

    ಬೆಂಗಳೂರು: ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಾಲ್ಕು ಮಹತ್ವದ ನಿರ್ಣಯಗಳು ಮಂಡನೆ ಆಗಿದ್ದು, ಎಲ್ಲವೂ ಅಂಗೀಕಾರ ಆಗಿವೆ. ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿರುವಾಗಲೇ ನಾಲ್ಕು ನಿರ್ಣಯಗಳನ್ನ ಮಂಡಿಸಿ, ಸದನದ ಅಂಗೀಕಾರ ಪಡೆಯಲಾಯ್ತು. ಸಿಎಂ ಸಿದ್ದರಾಮಯ್ಯ (CM Siddaramaiah) ಅನುಪಸ್ಥಿತಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಎರಡು ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಯ್ತು.

    1971ರ ಜನಗಣತಿ ಆಧರಿಸಿಯೇ ಲೋಕಸಭಾ, ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ನಿರ್ಣಯ, ಒಂದು ರಾಷ್ಟ್ರ ಒಂದು ಚುನಾವಣೆ (One Nation Onee Election) ವಿರೋಧಿಸಿ, ಆ ವ್ಯವಸ್ಥೆ ಬೇಡ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯ್ತು. ಇನ್ನೂ ನೀಟ್ ವಿರೋಧಿಸಿ, ನೀಟ್ (NEET) ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ನಿರ್ಣಯ ಮಂಡಿಸಿ ಸದನದ ಅಂಗೀಕಾರ ಪಡೆಯಲಾಯ್ತು. ಅಲ್ಲದೇ ಪಾರಂಪರಿಕ ಅರಣ್ಯ ವಾಸಿಗಳ ನಿಯಮಗಳನ್ನ ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಣಯ ಮಂಡಿಸಿ, ಸದನದ ಅಂಗೀಕಾರ ಪಡೆಯಲಾಯ್ತು. ಈ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ, ನೀಟ್ ರದ್ದತಿ ನಿರ್ಣಯಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿದ ನಿರ್ಣಯದ ಪರ ನಾವು ಇದ್ದೇವೆ. ಚರ್ಚೆ ನಡೆಸಬೇಕು ಮುಂದಕ್ಕೆ ಹಾಕಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು.

    ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿದ ನಿರ್ಣಯದ ಅಂಶಗಳು:
    “ಕರ್ನಾಟಕ ವಿಧಾನಸಭೆಯು, 2026ರಲ್ಲಿನ ಅಥವಾ ಅದರ ನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯನ್ನು ನಡೆಸಬಾರದೆಂದು ಜನಸಂಖ್ಯೆಯನ್ನು ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ, ಪ್ರತೀ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಒಟ್ಟು ಸಂಖ್ಯೆಯನ್ನು 1971ರ ಜನಗಣತಿಯನ್ನಾಧರಿಸಿ ನಿರ್ಧರಿಸಬೇಕೆಂದು ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ”.

    ಒಂದು ರಾಷ್ಟ ಒಂದು ಚುನಾವಣೆ ವಿರೋಧಿಸಿದ ನಿರ್ಣಯದ ಅಂಶಗಳು:
    ಭಾರತವು ವಿಶ್ವದ ಅತಿದೊಡ್ಡ ಒಕ್ಕೂಟ ಪ್ರಜಾಪುಭುತ್ವವಾಗಿದೆ. ಭಾರತ ಸಂವಿಧಾನದ ಭಾಗ ಆಗಿರಲಿ ಎಂದು ಪ್ರತಿಪಾದಿಸಿರುವ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯ ತತ್ವವು ಈ ಪ್ರಜಾಪ್ರಭುತ್ವದ ಆತ್ಮವಾಗಿದೆ. `ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವವು ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ. ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳು ಅವುಗಳದ್ದೇ ಆದ ಅಧಿಕಾರ ಅವಧಿಗಳನ್ನು ಹೊಂದಿರುತ್ತವೆ. ಮತ್ತು ಏಕರೂಪ ಚುನಾವಣಾ ವೇಳಾಪಟ್ಟಿಯು ರಾಷ್ಟ್ರೀಯ ವಿಷಯಗಳ ಮೇಲೆ ಹೆಚ್ಚಾಗಿ ಗಮನಹರಿಸುವ ಮತ್ತು ಸ್ಥಳೀಯ ಕಾಳಜಿಗಳನ್ನು ನಿರ್ಲಕ್ಷಿಸುವ ಮೂಲಕ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಬಹುದು. ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು, ಚುನಾವಣಾ ಸಿಬ್ಬಂದಿಯನ್ನು ನಿರ್ವಹಿಸುವುದು, ಮತದಾರರ ಬೇಸರ, ಕಡಿಮೆಗೊಂಡ ಸರ್ಕಾರದ ಉತ್ತರದಾಯಿತ್ವ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಅಡತಡೆಗಳು ಏಕಕಾಲಿಕ ಚುನಾವಣೆಗಳಿಗೆ ಸಂಬAಧಿಸಿದ ಗುರುತರ ಗಂಡಾAತರಗಳಾಗಿವೆ. ಹಾಗಾಗಿ ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮತ್ತು ಒಕ್ಕೂಟ ಸಮಗ್ರತೆಯನ್ನು ರಕ್ಷಿಸಲು ಕಠೋರ ನೀತಿಯನ್ನು ಅನುಷ್ಠಾನಗೊಳಿಸಬಾರದೆಂದು ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ.

    ನೀಟ್ ರದ್ದತಿ ಬಗ್ಗೆ ನಿರ್ಣಯದ ಅಂಶಗಳು:
    “ನೀಟ್ ಪರೀಕ್ಷಾ ವ್ಯವಸ್ಥೆಯು, ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು ಹಾಗೂ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುವುದು ಮಾತ್ರವಲ್ಲದೆ, ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಅದನ್ನು ರದ್ದುಪಡಿಸಬೇಕೆಂದು ಕೋರಲಾಗಿದೆ.

    ಈ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕೆಂದು ಹಾಗೂ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನಾಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ನೀಡಬೇಕೆಂದು ಮತ್ತು ನೀಟ್ ಪರೀಕ್ಷೆಗಳಲ್ಲಿ ಆಗುತ್ತಿರುವ ಪುನರಾವರ್ತಿತ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ವ್ಯವಸ್ಥೆಯನ್ನು ರದ್ದುಪಡಿಸುವ, ಹಾಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ, 2019 (2019ರ ಕೇಂದ್ರ ಅಧಿನಿಯಮ 30)ರಲ್ಲಿ ಅಗತ್ಯ ತಿದ್ದುಪಡಿಗಳನ್ನೂ ಸಹ ಮಾಡುವಂತೆ ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ.”

    ಪಾರಂಪರಿಕ ಅರಣ್ಯವಾಸಿಗಳ ನಿಯಮ ಮಾರ್ಪಾಡಿಗೆ ಆಗ್ರಹಿಸಿದ ನಿರ್ಣಯದ ಅಂಶಗಳು:
    ಅರಣ್ಯವಾಸಿ ಅನುಸೂಚಿತ ಬುಡಕಟ್ಟುಗಳಿಗೆ ಸಮಾನವಾಗಿ ಇತರ ಪಾರಂಪರಿಕ ಅರಣ್ಯ ವಾಸಿಗಳನ್ನು ಪರಿಗಣಿಸುವ ಹಾಗೆ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ, 2006 (2007 ರ ಕೇಂದ್ರ ಅಧಿನಿಯಮ 02) ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಮಾರ್ಪಡಿಸುವಂತೆ ಕೇಂದ್ರ ಸರ್ಕಾರವನ್ನು ಈ ಸದನವು ಒತ್ತಾಯಿಸುತ್ತದೆ.”

  • ಇನ್ನೂ ಖಾತೆ ಹಂಚಿಕೆ ಆಗಿಲ್ಲ; ನಕಲಿ ಪಟ್ಟಿ ಹಂಚಿಕೊಳ್ಳಬೇಡಿ – ಕಾಂಗ್ರೆಸ್‌ ಸ್ಪಷ್ಟನೆ

    ಇನ್ನೂ ಖಾತೆ ಹಂಚಿಕೆ ಆಗಿಲ್ಲ; ನಕಲಿ ಪಟ್ಟಿ ಹಂಚಿಕೊಳ್ಳಬೇಡಿ – ಕಾಂಗ್ರೆಸ್‌ ಸ್ಪಷ್ಟನೆ

    ಬೆಂಗಳೂರು: 34 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪಟ್ಟಿ ನಕಲಿಯಾಗಿದೆ. ಇನ್ನೂ ಸಹ ಖಾತೆ ಹಂಚಿಕೆಯಾಗಿಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ.

    ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಖಾತೆ ಹಂಚಿಕೆಯಾಗಿರುವ ಬಗ್ಗೆ ನಕಲಿ ಪಟ್ಟಿ ವೈರಲ್ ಆಗಿದೆ. ಇನ್ನೂ ಸಹ ಖಾತೆ ಹಂಚಿಕೆಯಾಗಿರುವುದಿಲ್ಲ. ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಹಾಗೂ ನಕಲಿ ಸುದ್ದಿಗಳನ್ನು ಹಂಚಬೇಡಿ ಎಂದು ಮನವಿ ಮಾಡಿದೆ.

    ಸರ್ಕಾರ ಅಧಿಕೃತವಾಗಿ ಖಾತೆ ಹಂಚಿಕೆಯ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.

    ಕರ್ನಾಟಕ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಇದರ ಬೆನ್ನಲ್ಲೇ 34 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂಬ ಪಟ್ಟಿ ವೈರಲ್‌ ಆಗಿತ್ತು. ಆದರೆ ಅದು ನಕಲಿ ಪಟ್ಟಿ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಸ್ಪಷ್ಟಪಡಿಸಿದೆ.

  • ಸಹಕಾರಿ ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಿಗ್ನಲ್: ಮಾರ್ಗಸೂಚಿ ಏನು?ಯಾರಿಗೆ ಅನ್ವಯ ಆಗಲ್ಲ?

    ಸಹಕಾರಿ ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಿಗ್ನಲ್: ಮಾರ್ಗಸೂಚಿ ಏನು?ಯಾರಿಗೆ ಅನ್ವಯ ಆಗಲ್ಲ?

    ಬೆಂಗಳೂರು: ಸಾಲಮನ್ನಾ ವಿಚಾರದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಮೊದಲ ಹಂತದ ಸಾಲಮನ್ನಾಕ್ಕೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಸಹಕಾರಿ ಸಂಘಗಳಲ್ಲಿನ ರೈತರ ಚಾಲ್ತಿ ಸಾಲಮನ್ನಾಕ್ಕೆ ಒಪ್ಪಿಗೆ ಪಡೆದಿದ್ದಾರೆ.

    ಒಂದು ಕುಟುಂಬದಲ್ಲಿ ಎಷ್ಟು ಮಂದಿ ಸಾಲಪಡೆದಿರುತ್ತಾರೋ ಅವರ ಸಾಲಮನ್ನಾವನ್ನೂ ಕೂಡ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರದಿಂದಲೇ ಸಾಲಮನ್ನಾ ಯೋಜನೆ ಜಾರಿಯಾಗಲಿದೆ. ರೈತರಿಗೆ ಯಾವುದೇ ಒತ್ತಡ ಹೇರದಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ.

    ಒತ್ತಾಯ ಪೂರ್ವಕವಾಗಿ ಮರುಪಾವತಿ ಮಾಡಿದವರಿಗೂ ಹಾಗೂ ಸಾಲ ಕಟ್ಟಿದವರಿಗೂ ಸಾಲಮನ್ನ ಯೋಜನೆ ಅನ್ವಯ ಆಗಲಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಒಂದು ವಾರ ವಿಳಂಬವಾಗಲಿದೆ. ಆಗಸ್ಟ್ 15 ಅಥವಾ ಗಣೇಶ ಹಬ್ಬಕ್ಕೆ 2ನೇ ಹಂತದ ಸಾಲಮನ್ನಾವಾಗಲಿದೆ ಅಂತ ಕ್ಯಾಬಿನೆಟ್ ನಿರ್ಧರಿಸಿದೆ.  ಇದನ್ನು ಓದಿ: ರಾತ್ರೋರಾತ್ರಿ ಸಾಲಮನ್ನಾ ಹಣವನ್ನ ಜಮೆ ಮಾಡಲು ದುಡ್ಡಿನ ಮರ ಬೆಳೆದಿಲ್ಲ: ಎಚ್‍ಡಿಕೆ

     

     

    ಸಾಲಮನ್ನಾ ಹೇಗೆ?
    ಒಟ್ಟು 20.38 ಲಕ್ಷ ರೈತರ ಸಹಕಾರಿ ಬ್ಯಾಂಕ್‍ನ 1 ಲಕ್ಷ ರೂಪಾಯಿವರೆಗಿನ ರೈತರ ಚಾಲ್ತಿ ಸಾಲ ಮನ್ನಾವಾಗಲಿದೆ. 10,734 ಕೋಟಿ ಸಾಲದಲ್ಲಿ 9,448 ಕೋಟಿ ರೂ. ಸಾಲಮನ್ನಾ ಆಗುತ್ತದೆ.

    ಮಾರ್ಗಸೂಚಿ ಏನು?
    * ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್‍ಗಳು, ಪಿಕಾರ್ಡ್ ಬ್ಯಾಂಕ್‍ಗಳು ವಿತರಿಸಿದ ಅಲ್ಪಾವಧಿ ಸಾಲದ ಪೈಕಿ 10.07.2018ಕ್ಕೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ
    * ಒಂದು ರೈತ ಕುಟುಂಬಕ್ಕೆ ಗರಿಷ್ಠ 1 ಲಕ್ಷ ರೂ.ವರೆಗಿನ ಸಾಲ ಮಾತ್ರ ಮನ್ನಾ
    * 10.07.2018 ಅವಧಿಯಲ್ಲಿ ಸಾಲ ಪಡೆದು ರೈತ ಮೃತ ಪಟ್ಟಿದ್ದರೆ ವಾರಸುದಾರರಿಗೂ ಈ ಸೌಲಭ್ಯ
    * ಹೊರಬಾಕಿ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತ ರೈತರ ಖಾತೆಗೆ ಜಮೆ
    * ಸಾಲಮನ್ನಾ ಆಗುವ ಅನುದಾನವನ್ನು ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ

    ಯಾರಿಗೆ ಅನ್ವಯ ಆಗಲ್ಲ?
    * ಬೆಳೆಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಇತರೆ ಕ್ಷೇತ್ರದ ನೌಕರರಾಗಿಬಾರದು
    * 20 ಸಾವಿರಕ್ಕಿಂತ ಹೆಚ್ಚಿನ ವೇತನ, ಪಿಂಚಣಿ ಪಡೆಯುತ್ತಿದ್ದಲ್ಲಿ ಅಂಥಹ ರೈತರಿಗೆ ಅನ್ವಯಿಸಲ್ಲ
    * 3 ವರ್ಷಗಳಲ್ಲಿ 1 ವರ್ಷ ಆದಾಯ ತೆರಿಗೆ ಪಾವತಿಸಿದ್ದಲ್ಲಿ ಅಂಥವರಿಗೆ ಅನ್ವಯವಾಗಲ್ಲ
    * ಕೃಷಿ ಉತ್ಪನ್ನ, ಚಿನ್ನಾಭರಣ, ವಾಹನ ಖರೀದಿ, ಪಶು ಭಾಗ್ಯ ಯೋಜನೆ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲಗಳಿಗೆ ಅನ್ವಯ ಆಗಲ್ಲ
    * ಸಹಕಾರ ಸಂಘ, ಬ್ಯಾಂಕ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ಸಾಲ ಪಡೆದಿವರಿಗೆ ಇದು ಅನ್ವಯಿಸಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews