Tag: Karnataka by-election results

  • ಕೊನೆಯ ಚುನಾವಣೆ ಎಂದ ಕೋಳಿವಾಡಗೆ ಭಾರೀ ಮುಖಭಂಗ – ರಾಣೇಬೆನ್ನೂರಲ್ಲಿ ಬಿಜೆಪಿ ಮೇಲುಗೈ

    ಕೊನೆಯ ಚುನಾವಣೆ ಎಂದ ಕೋಳಿವಾಡಗೆ ಭಾರೀ ಮುಖಭಂಗ – ರಾಣೇಬೆನ್ನೂರಲ್ಲಿ ಬಿಜೆಪಿ ಮೇಲುಗೈ

    ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದ್ದು, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡಗೆ ಭಾರೀ ಮುಖಭಂಗವಾಗಿದೆ. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಅಚ್ಚರಿಯ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಐದು ದಶಕದ ರಾಜಕೀಯ ಧುರೀಣ ಕೆ.ಬಿ ಕೋಳಿವಾಡ ಪರಾಜಿತಗೊಂಡಿದ್ದು, ಮುಖಭಂಗವಾಗಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇತ್ತು. ಆದರೆ, ಮತದಾರ ಪ್ರಭುಗಳು ಅಂತಿಮವಾಗಿ ಬಿಜೆಪಿಯ ಅರುಣ್ ಅವರ ಭವಿಷ್ಯ ಬರೆದಿದ್ದಾರೆ. ಕೋಳಿವಾಡ ಇನ್ನೇನು ಗೆದ್ದೇ ಬಿಡ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ ಅಖಾಡಕ್ಕೆ ದುಮುಕಿ ಇಡೀ ಚಿತ್ರಣವನ್ನೇ ಬದಲಾಯಿಸಿದ್ದರು.

    ರಾಣೇಬೆನ್ನೂರು ಅಂದರೆ ಕೋಳಿವಾಡ, ಕೋಳಿವಾಡ ಅದರೆ ರಾಣೇಬೆನ್ನೂರು ಅಂತ ಇದ್ದ ವಾತಾವರಣವನ್ನ ಬೊಮ್ಮಾಯಿ ಅವರು ಅಚ್ಚುಕಟ್ಟಾಗಿ ಬಿಜೆಪಿ ತೆಕ್ಕೆಗೆ ತಂದುಕೊಂಡರು. ಅರುಣ್ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ಮತ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಅಧಿಕವಾಗಿದ್ದು, ಯಡಿಯೂರಪ್ಪ ಅವುಗಳನ್ನ ಯಶಸ್ವಿಯಾಗಿ ಬಳಸಿಕೊಂಡರು. ಇನ್ನು ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಅನ್ನೋ ಲೆಕ್ಕಾಚಾರ ರಾಜಕೀಯ ವಲಯದಲ್ಲಿದ್ದರೂ ಬೊಮ್ಮಾಯಿ ಆಂಡ್ ಟೀಂ ಕುರುಬ ಮತಬೇಟೆಗೆ ಸಖತ್ ಪ್ಲಾನ್ ಮಾಡಿದ್ದರು. ಹೇಗಿದ್ದರು ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ, ಒಂದು ವೇಳೆ ಬಂದರೂ ಸಿದ್ದರಾಮಯ್ಯ ಸಿಎಂ ಆಗೋದಿಲ್ಲ, ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಇರೋದಿಲ್ಲ. ಅದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಕುರುಬ ಸಮುದಾಯದ ನಾಲ್ವರು ಸಚಿವರಾಗ್ತಾರೆ ಅನ್ನೋ ಬ್ರಹ್ಮಾಸ್ತ್ರ ಬಿಜೆಪಿಗೆ ವರವಾಗಿದೆ.

    ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೋಳಿವಾಡ ಸೋತ ತಕ್ಷಣ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮದ್‍ಗೆ ಟಿಕೆಟ್ ತಪ್ಪಿಸಿದ್ದು ಮುಸ್ಲಿಂ ಸಮುದಾಯಕ್ಕೆ ಬೇಸರ ಉಂಟುಮಾಡಿತ್ತು. ಅದೇ ಕಾರಣಕ್ಕೆ ಕುರುಬ ಸಮುದಾಯದ ಹೆಚ್ಚು ಮತಗಳಿರುವ ಮೆಡ್ಲೇರಿ ಮತ್ತು ತುಮ್ಮಿನಕಟ್ಟೆ ಕಾಂಗ್ರೆಸ್‍ಗೆ ಕೈಎತ್ತಿ ಕಮಲ ಹಿಡಿದಿದೆ.

    ಕೋಳಿವಾಡರ 4 ದಶಕದ ರಾಜಕೀಯ ನೋಡಿದ್ದ ಕ್ಷೇತ್ರದ ಜನ ಯುವ ನಾಯಕ ಅರುಣ್‍ಗೆ ಒಂದು ಅವಕಾಶ ಕೊಟ್ಟು ನೋಡೋಣ ಅಂತ ಕಮಲದ ಕೈ ಹಿಡಿದಿದ್ದಾರೆ. ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್, ಗೋವಿಂದ ಕಾರಜೋಳ ಆದಿಯಾಗಿ ಹಾಲಿ, ಮಾಜಿ ಸಚಿವರು, ಶಾಸಕರು, ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಟೀಂ ವರ್ಕ್ ಮಾಡಿದ್ದರ ಪರಿಣಾಮ ಬಿಜೆಪಿ ನಿರೀಕ್ಷೆಗೂ ಮೀರಿದ ಮತ ಗಳಿಕೆ ಮಾಡಿದೆ.

    ರಾಣೇಬೆನ್ನೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಅಚ್ಚರಿಯ ಅಭ್ಯರ್ಥಿಯಾಗಿ ಅಚ್ಚರಿಯ ಫಲಿತಾಂಶವನ್ನು ಕಂಡಿದ್ದಾರೆ. ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಸಿಎಂ ಯಡಿಯೂರಪ್ಪನವರ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

  • ಹುಟ್ಟೂರಲ್ಲಿ ಕಮಲ ಅರಳಿದ್ದು ಖುಷಿಯಾಗಿದೆ, ಗೆದ್ದ ಎಲ್ಲರಿಗೂ ಮಂತ್ರಿಗಿರಿ – ಸಿಎಂ

    ಹುಟ್ಟೂರಲ್ಲಿ ಕಮಲ ಅರಳಿದ್ದು ಖುಷಿಯಾಗಿದೆ, ಗೆದ್ದ ಎಲ್ಲರಿಗೂ ಮಂತ್ರಿಗಿರಿ – ಸಿಎಂ

    ಬೆಂಗಳೂರು: ಕೆ.ಆರ್ ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ನನಗೆ ತುಂಬಾ ಖುಷಿಯಾಗಿದೆ. ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಭರವಸೆ ಕೊಟ್ಟಂತೆ ಸಚಿವ ಸ್ಥಾನ ನೀಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಗೆಲುವಿನ ಸಂತೋಷ ಹಂಚಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈವರೆಗೆ ಮಂಡ್ಯದಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಆದರೆ ಈ ಬಾರಿ ನಾರಾಯಣಗೌಡರು ಕೆ.ಆರ್ ಪೇಟೆಯಿಂದ ಗೆಲುವು ಸಾಧಿಸಿದ್ದಾರೆ. ನನ್ನ ಹುಟ್ಟೂರಲ್ಲಿ ಕಮಲ ಅರಳಿದ್ದು ನನಗೆ ತುಂಬಾ ಖುಷಿಯಾಗಿದೆ. ಅಲ್ಲದೆ ಸಂಘಟಿತವಾಗಿ ಈ ಗೆಲುವು ಸಾಧಿಸಲು ಕೆಲಸ ಮಾಡಿದ ನಮ್ಮ ಕಾರ್ಯಕರ್ತರಿಗೆ, ರಾಜ್ಯಾಧ್ಯಕ್ಷರಿಗೆ ಎಲ್ಲಾ ಬೆಂಬಲಿಗರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    15ರಲ್ಲಿ 12 ಕ್ಷೇತ್ರಗಳಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುವಂತೆ ಮತದಾರರು ಆಶೀರ್ವಾದ ಮಾಡಿದ್ದಾರೆ. ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ಕಾರ್ಯಕರ್ತರು, ಮುಖಂಡರು ಕೆಲಸ ಮಾಡಿದ್ದಾರೆ ಅವರೆಲ್ಲರ ಪರಿಶ್ರಮದಿಂದ ಇಂದು ನಾವು 15ರಲ್ಲಿ 12 ಸೀಟು ಗೆದ್ದಿದ್ದೇವೆ ಎಂದು ಹೇಳಿದರು.

    ಮುಂದೆ ಬಹಳ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅಸ್ತಿರತೆ ಇದೆ ಎಂದು ಗೊಂದಲ ಉಂಟುಮಾಡುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿದ್ದವು. ಅವರಿಗೆ ನಾನು ವಿನಂತಿ ಮಾಡುತ್ತೇನೆ, ಇನ್ನಾದರೂ ಮೂರುವರೆ ವರ್ಷ ನಮಗೆ ಸಹಕರಿಸಿ, ಅಭಿವೃದ್ಧಿ ಪರ ಸರ್ಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರಲ್ಲಿ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ನಾನು ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ, ಟಿಪ್ಪಣಿ ಮಾಡಲು ಇಷ್ಟಪಡಲ್ಲ. ಮತದಾರ ತನ್ನ ಅಭಿಪ್ರಾಯ ವ್ಯಕ್ತಪಡಿಸಾಗಿದೆ. ಫಲಿತಾಂಶ ಬಂದಾಗಿದೆ. ರಾಜ್ಯದ ಅಭಿವೃದ್ಧಿ ಕಡೆ ಗಮನಕೊಡುವುದು ಮಾತ್ರ ಇನ್ನು ಉಳಿದಿದೆ. ನಾನಂತು ಈ ಮೂರುವರೆ ವರ್ಷ ಸಚಿವರು, ಶಾಸಕರ ಬೆಂಬಲದಿಂದ ಒಳ್ಳೆಯ ಆಡಳಿತ ನಡೆಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಬಿಜೆಪಿ 150 ಸೀಟು ಗೆಲ್ಲುವ ರೀತಿ ಕೆಲಸ ಮಾಡುತ್ತೇನೆ. ಈ ಮೂಲಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

    ಈಗಾಗಲೇ ಲೋಕಸಭೆಯಲ್ಲಿ 25 ಸ್ಥಾನವನ್ನು ಗೆದ್ದಿದ್ದೇವೆ. ಅಲ್ಲದೆ ಉಪಚುನಾವಣೆ ಗೆಲುವು ಕೂಡ ನಮ್ಮ ನಾಯರಿಕೆ ಖುಷಿತಂದಿದೆ ಎಂದು ನಾನು ಭಾವಿಸಿದ್ದೇನೆ. ಇನ್ನು ಮೂನಾಲ್ಕು ದಿನಗಳಲ್ಲಿ ದೆಹಲಿಗೆ ಹೋಗಿ ಇಲ್ಲಿನ ವಿವರಗಳನ್ನು ಅವರಿಗೆ ಮೋದಿ, ಶಾ ಅವರಿಗೆ ತಿಳಿಸುತ್ತೇನೆ. ನಮಗಾಗಿ ರಾಜಿನಾಮೆ ಕೊಟ್ಟವರಿಗೆ ನಾವೇನು ಭರವಸೆ ನೀಡಿದ್ದೇವೆ ಅದರಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಗೆಲುವು ಸಾಧಿಸಿದ ಎಲ್ಲಾ ನನ್ನ ಸ್ನೇಹಿತರಿಗೆ ಸಚಿವ ಸ್ಥಾನವನ್ನು ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ರಾಜ್ಯದಲ್ಲಿ ಏನೆಲ್ಲಾ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಬಗ್ಗೆ ಕೇಂದ್ರಕ್ಕೂ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ ಎಂದರು.