Tag: Kapila

  • ಮೈಸೂರು ಜಿಲ್ಲೆಯಲ್ಲಿ ಪ್ರವಾಹ- ನಾಲ್ಕೈದು ತಾಲೂಕು ರಸ್ತೆ ಸಂಪರ್ಕ ಕಡಿತ, ಸಂತ್ರಸ್ತರ ನೆರವಿಗೆ ಗಂಜಿ ಕೇಂದ್ರ ಆರಂಭ

    ಮೈಸೂರು ಜಿಲ್ಲೆಯಲ್ಲಿ ಪ್ರವಾಹ- ನಾಲ್ಕೈದು ತಾಲೂಕು ರಸ್ತೆ ಸಂಪರ್ಕ ಕಡಿತ, ಸಂತ್ರಸ್ತರ ನೆರವಿಗೆ ಗಂಜಿ ಕೇಂದ್ರ ಆರಂಭ

    ಮೈಸೂರು: ನೆರೆ ರಾಜ್ಯ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮೈಸೂರು ನಲುಗಿ ಹೋಗಿದೆ. ಮೈಸೂರು ಜಿಲ್ಲೆಯ ನಾಲ್ಕೈದು ತಾಲೂಕುಗಳಲ್ಲಿ ಪ್ರವಾಹ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ದೇವರಿಗೂ ಸಹ ಜಲದಿಗ್ಭಂದನ ಉಂಟಾಗಿದ್ದು, ಸಂತ್ರಸ್ತರ ನೆರವಿಗೆ ಮೈಸೂರು ಜಿಲ್ಲಾಡಳಿತ ಗಂಜಿ ಕೇಂದ್ರ ತೆರೆಯಲು ಮುಂದಾಗಿದೆ.

    ಕೆಲ ದಿನಗಳಿಂದ ಕೇರಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾಮಳೆಗೆ ಮೈಸೂರು ಜಿಲ್ಲೆಯ ಹಲವು ಗ್ರಾಮಗಳು ಅಕ್ಷರಶಃ ನಲುಗಿ ಹೋಗಿವೆ. ಕಬಿನಿಯಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಕಾರಣ ನಂಜನಗೂಡು, ಹೆಚ್.ಡಿ ಕೋಟೆ ಭಾಗದಲ್ಲಿ ಪ್ರವಾಹ ಉಂಟಾಗಿದೆ.

    ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಹೆಚ್.ಡಿ ಕೋಟೆಯ ಗಡಿಭಾಗದ ಗ್ರಾಮಗಳಾದ ಮಚ್ಚೂರು, ಡಿ.ಬಿ ಕುಪ್ಪೆ, ವಡಕನಮಾಳ, ಆನೆಮಾಳ ಸೇರಿ ಅಕ್ಕಪಕ್ಕದ ಗ್ರಾಮಗಳ 35ಕ್ಕೂ ಹೆಚ್ಚು ಜನರನ್ನ ತೆಪ್ಪದ ಮೂಲಕ ಸುರಕ್ಷಿತವಾದ ಸ್ಥಳಕ್ಕೆ ಬಿಡಲಾಗಿದೆ. ಇವರಿಗಾಗಿ ತಾಲೂಕು ಆಡಳಿತದಿಂದ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.

    ದಕ್ಷಿಣ ಕಾಶೀ ಎಂದೇ ಕರೆಸಿಕೊಳ್ಳುವ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಆವರಣಕ್ಕೆ ನೀರು ನುಗ್ಗಿದ್ದು, ದೇವಾಲಯದ ಆವರಣದಲ್ಲಿರುವ ಮಳಿಗೆಗಳು ಹಾಗೂ ನಂಜುಂಡೇಶ್ವರ ದೇವಾಲಯದ ಅಕ್ಕಪಕ್ಕದ ಅಯ್ಯಪ್ಪ ಸ್ವಾಮಿ, ಪರಶುರಾಮ, ಹದಿನಾರು ಕಲುಮಂಟಪ್ಪ, ಮನೆಗಳಿಗೆ ನೀರು ನುಗ್ಗಿದೆ.

    ಮತ್ತೊಂದು ಕಡೆ ನಂಜನಗೂಡು ಮೂಲಕ ಊಟಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಉಕ್ಕಿ ಹರಿಯುತ್ತಿರುವುದರಿಂದ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ನಂಜನಗೂಡಿಗೆ ಭೇಟಿ ಕೊಟ್ಟು ಸ್ಥಳೀಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ಕೊಟ್ಟಿದ್ದಾರೆ.

    ಅಲ್ಲದೇ ಕೆ.ಆರ್ ನಗರದ ಕಪ್ಪಡಿಯ ಸಿದ್ದಪಾಜಿ-ರಾಚಪಾಜಿ ದೇಗುಲಕ್ಕೆ ಕಾವೇರಿ ನದಿ ನೀರು ನುಗ್ಗಿದ್ದು ಭಕ್ತರು ದೇಗುಲಕ್ಕೆ ಆಗಮಿಸಲು ಪರದಾಡುತ್ತಿದ್ದಾರೆ. ಈ ಮಧ್ಯೆ ಮೈಸೂರು ಜಿಲ್ಲಾಡಳಿತ ಮಹಾನಗರ ಪಾಲಿಕೆಯ ಜೊತೆಗೂಡಿ ಕೊಡಗಿನ ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದೆ.

    ಮೈಸೂರಿನ ಟೌನ್‍ಹಾಲ್‍ನಲ್ಲಿ 24*7 ಗಂಜಿ ನೆರವು ಕೇಂದ್ರ ಆರಂಭಿಸಿದೆ. ಈ ಕೇಂದ್ರದ ಮೂಲಕ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕೊಡಗಿನ ನೆರೆ ಸಂತ್ರಸ್ಥರಿಗೆ ಆಹಾರ ಪದಾರ್ಥ ಸೇರಿ ಬಟ್ಟೆಗಳನ್ನ ನೀಡಬಹುದಾಗಿದೆ. ಇಲ್ಲಿ ಸಂಗ್ರಹವಾದ ಆಹಾರ ಮತ್ತು ಇತರೆ ಪದಾರ್ಥಗಳನ್ನು ಪಾಲಿಕೆ ವಾಹನದ ಮೂಲಕವೇ ಕೊಡಗಿಗೆ ರವಾನೆ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ಒಟ್ಟಾರೆ ನೆರೆ ರಾಜ್ಯದ ವರುಣನ ಎಫೆಕ್ಟ್ ಮೈಸೂರು ಜಿಲ್ಲೆಯಲ್ಲಿ ಭಾರೀ ಅನಾಹುತವನ್ನುಂಟು ಮಾಡಿದೆ. ಆದರೆ ಮಳೆರಾಯ ಯಾವಾಗ ಬಿಡುವು ಕೊಡ್ತಾನೆ? ನಮ್ಮ ಈ ಸಮಸ್ಯೆ ಯಾವಾಗ ನಿವಾರಣೆಯಾಗತ್ತೆ ಅಂತಾ ಜನ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಲ ದಿಗ್ಬಂಧನದ ಭೀತಿಯಲ್ಲಿ ನಂಜುಂಡೇಶ್ವರ ದೇಗುಲ: ಅರ್ಧ ಕಿಲೋಮೀಟರ್ ವ್ಯಾಪ್ತಿಯ ಜನರ ಸ್ಥಳಾಂತರ

    ಜಲ ದಿಗ್ಬಂಧನದ ಭೀತಿಯಲ್ಲಿ ನಂಜುಂಡೇಶ್ವರ ದೇಗುಲ: ಅರ್ಧ ಕಿಲೋಮೀಟರ್ ವ್ಯಾಪ್ತಿಯ ಜನರ ಸ್ಥಳಾಂತರ

    ಮೈಸೂರು: ಕಪಿಲ ನದಿಯಲ್ಲಿ ನೀರು ಹೆಚ್ಚಾದ ಪರಿಣಾಮ ಮತ್ತೊಮ್ಮೆ ದಕ್ಷಿಣ ಕಾಶಿ ನಂಜನಗೂಡಿನ ಜನವಸತಿ ಪ್ರದೇಶಕ್ಕೆ ಪ್ರವಾಹದ ನೀರು ನುಗ್ಗಿದೆ.

    ಪ್ರವಾಹದ ನೀರು ನಂಜುಂಡೇಶ್ವರ ಸ್ವಾಮಿಯ ದೇಗಲದತ್ತ ಹರಿದು ಬರುತ್ತಿದ್ದು, ದೇಗುಲ ಜಲ ದಿಗ್ಬಂಧನದ ಭೀತಿಯಲ್ಲಿದೆ. ಈಗಾಗಲೇ ನಂಜುಂಡೇಶ್ವರ ಸ್ವಾಮಿ ದೇಗುಲದ ಸಮೀಪದಲ್ಲಿರುವ ದಾಸೋಹ ಭವನ ಮತ್ತು ವಾಣಿಜ್ಯ ಮಳಿಗೆಗಳ ಕಟ್ಟಡಗಳು ಜಲಾವೃತಗೊಂಡಿವೆ. ಅಷ್ಟೇ ಅಲ್ಲದೇ ಕಪಿಲ ನದಿ ತೀರದಲ್ಲಿರುವ ಪರಶುರಾಮ, ಚಾಮುಂಡೇಶ್ವರಿ, ಅಯ್ಯಪ್ಪಸ್ವಾಮಿ, ಕಾಶಿ ವಿಶ್ವನಾಥ ಸ್ವಾಮಿ, ಸತ್ಯನಾರಾಯಣ ಸ್ವಾಮಿ ದೇಗುಲ ಸೇರಿದಂತೆ ನದಿ ತೀರದ ಎಲ್ಲಾ ದೇಗುಲಗಳು ಜಲಾವೃತವಾಗುವ ಸಾಧ್ಯತೆ ಇದೆ.

    ಹದಿನಾರು ಕಾಲು ಮಂಟಪ ಶೇಕಡ 90% ಮುಳುಗಡೆಯಾಗಿದೆ. ಇತ್ತ ನಂಜನಗೂಡು ಮತ್ತು ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗೂ ನೀರು ನುಗ್ಗಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ನಂಜನಗೂಡು ಚಾಮರಾಜನಗರ, ಗುಂಡ್ಲುಪೇಟೆ, ಕೇರಳ, ತಮಿಳುನಾಡು ನಡುವಿನ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

    ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ದೇವಾಲಯದ ಸುತ್ತಮುತ್ತಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಸಂಜೆ ವೇಳೆಗೆ ಕಬಿನಿಯಿಂದ ಮತ್ತಷ್ಟು ನೀರನ್ನು ನದಿಗೆ ಬಿಡುವ ಸಾಧ್ಯತೆ ಇದ್ದು, ಕಬಿನಿ ಹೊರ ಹರಿವು 90 ಸಾವಿರ ಕ್ಯೂಸೆಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ ದೇವಾಲಯದ ಸುತ್ತಮುತ್ತಲ ಸುಮಾರು ಅರ್ಧ ಕಿಲೋಮೀಟರ್ ಸುತ್ತ ವಾಸವಿರುವ ನಿವಾಸಿಗಳು ಮತ್ತು ತಗ್ಗು ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಬೇರೆಡೆಗೆ ತೆರಳಲು ಜಿಲ್ಲಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿ ಸೂಚನೆ ನೀಡಿದ್ದಾರೆ. ಈಗಾಗಲೇ ದೇವಾಲಯದ ಸುತ್ತಮುತ್ತಲಿರುವ ಹಲವು ಮನೆಗಳು ಜಲಾವೃತವಾಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರ ದುಸ್ಸಾಹಸ – ಕೊಚ್ಚಿ ಹೋದ ಯುವಕ

    ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರ ದುಸ್ಸಾಹಸ – ಕೊಚ್ಚಿ ಹೋದ ಯುವಕ

    ಮೈಸೂರು: ಜಿಲ್ಲೆಯ ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಮೂವರು ಯುವಕರು ನದಿಯಲ್ಲಿ ಸ್ವಿಮ್ಮಿಂಗ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದರು. ಆದರೆ ಅವರಲ್ಲಿ ಒಬ್ಬ ಯುವಕ ನಾಪತ್ತೆಯಾಗಿದ್ದಾನೆ.

    ಎಚ್.ಡಿ ಕೋಟೆ ತಾಲೋಕಿನ ಮಾದಾಪುರ ಸೇತುವೆ ಬಳಿ ಈ ಘಟನೆ ನಡೆದಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿಗೆ ಮೂವರು ಬಿದ್ದಿದ್ದರು. ಆದರೆ 24 ವರ್ಷದ ಉಮೇಶ್ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ. ಜೊತೆಯಲ್ಲಿದ್ದ ಚಿಕ್ಕನಾಯ್ಕ, ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಉಮೇಶ್‍ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ಭೋರ್ಗರೆದು ಹರಿಯುತ್ತಿರುವ ನೀರಿನಲ್ಲಿ ಯುವಕರು ಸ್ವಿಮ್ಮಿಂಗ್ ಮಾಡಲು ಪ್ರಾಣಾಪಾಯವನ್ನು ಲೆಕ್ಕಿಸದೇ ಇಂತಹ ದುಸ್ಸಾಹಸಕ್ಕೆ ಇಳಿದಿದ್ದರು. ಜಲಾಶಯ ತುಂಬಿದ್ದ ಪರಿಣಾಮ ಕಪಿಲಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿತ್ತು.

    ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ತುಂಬಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರ ದುಸ್ಸಾಹಸ!

    ಮೈಸೂರು: ಜಿಲ್ಲೆಯ ನಂಜನಗೂಡಿನ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರು ನದಿಯಲ್ಲಿ ಸ್ವಿಮ್ಮಿಂಗ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದಾರೆ.

    ಭೋರ್ಗರೆದು ಹರಿಯುತ್ತಿರುವ ನೀರಿನಲ್ಲಿ ಯುವಕರು ಸ್ವಿಮ್ಮಿಂಗ್ ಮಾಡುತ್ತಿದ್ದು, ಪ್ರಾಣಾಪಾಯವನ್ನು ಲೆಕ್ಕಿಸದೇ ಇಂತಹ ದುಸ್ಸಾಹಸಕ್ಕೆ ಇಳಿದಿದ್ದಾರೆ. ಜಲಾಶಯ ತುಂಬಿದ್ದ ಪರಿಣಾಮ ಕಪಿಲಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.

    ಬುಧವಾರ ಇದೇ ರೀತಿ ಕಪಿಲ ನದಿಯಲ್ಲಿ ಈಜಲು ತೆರಳಿದ್ದ ಓರ್ವ ಯುವಕ ಜಲಸಮಾಧಿಯಾಗಿದ್ದ. ಇಂತಹ ಅವಘಡಗಳು ಸಂಭವಿಸುತ್ತಿದ್ದರೂ, ಯುವ ಜನತೆ ಎಚ್ಚರಗೊಳ್ಳದೆ, ಕೇವಲ ಕ್ರೇಜ್ ಗಾಗಿ ತಮ್ಮ ಜೀವವನ್ನೆ ಕಳೆದುಕೊಳ್ಳುತ್ತಿದ್ದಾರೆ. ಇಂದು ಪುನಃ ಯುವಕರು ಈಜಲು ನೀರಿಗೆ ಧುಮುಕಿದ್ದಾರೆ.