Tag: Kantaraj Committee Report

  • ಕಾಂತರಾಜು ಸಮಿತಿ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ

    ಕಾಂತರಾಜು ಸಮಿತಿ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ

    – ಜಾತಿ ಕಾರಣದಿಂದ ಕನಕದಾಸರನ್ನ ಉಡುಪಿ ಮಠದ ಒಳಗೆ ಬಿಡಲಿಲ್ಲ
    – ʻಕನಕನ ಕಿಂಡಿʼ ಪ್ರಸಂಗ ಉಲ್ಲೇಖಿಸಿದ ಸಿದ್ದರಾಮಯ್ಯ

    ದಾವಣಗೆರೆ: ಸಮಸಮಾಜ ನಿರ್ಮಾಣ ಮಾಡಬೇಕೆಂದರೆ ಜಾತಿ ಜನಗಣತಿಯಿಂದ ಮಾತ್ರ ಸಾಧ್ಯ. ನಾನು ಜಾತಿ ಜನಗಣತಿ ಪರವಾಗಿದ್ದೇನೆ. ಕಾಂತರಾಜು ಸಮಿತಿ ವರದಿಯನ್ನ (Kantaraj Committee Report) ಮುಂದಿನ ಕ್ಯಾಬಿನೆಟ್‌ನಲ್ಲಿಟ್ಟು ಚರ್ಚಿಸುವ ಉದ್ದೇಶವಿದೆ. ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದರು.

    ದಾವಣಗೆರೆಯ (Davanagere) ಹೈಸ್ಕೂಲ್ ಮೈದಾನದಲ್ಲಿ ‌ನಡೆದ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರು ಕುರುಬ ಜಾತಿಯಲ್ಲಿ ಹುಟ್ಟಿ ಜಾತಿ ರಹಿತ ಸಮ‌ಸಮಾಜಕ್ಕಾಗಿ ಹೋರಾಡಿದ, ಜಾತ್ಯತೀತ ಸಂತ. ಮನುಕುಲದ ಏಳೆಗೆಗಾಗಿ ಶ್ರಮಿಸಿ ದಾಸ ಶ್ರೇಷ್ಠರಾದರು ಎಂದು ಸ್ಮರಿಸಿದರು. ಇದನ್ನೂ ಓದಿ: ಆಕ್ಷೇಪಾರ್ಹ ಹೇಳಿಕೆ ಪ್ರಕರಣ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು – CRPF ಭದ್ರತೆ ಕೋರಿದ ಸಿ.ಟಿ ರವಿ

    ಶರಣ ಸಾಹಿತ್ಯದಲ್ಲಿ ಬಸವಣ್ಣ, ದಾಸ ಸಾಹಿತ್ಯದಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಬುದ್ಧನಿಂದ ಕನಕದಾಸರವರೆಗೂ, ಆ ನಂತರವೂ ಬಹಳ ಪುಣ್ಯಾತ್ಮರು ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್, ನಾರಾಯಣಗುರು ಮತ್ತು ಕನಕದಾಸರು ಕೂಡ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆಯ ಕಾರಣಕ್ಕೆ ಅವಮಾನಿತರಾಗಿದ್ದರು. ಯಾರೂ ಜನ್ಮತಃ ದಡ್ಡರಾಗಿರಲು ಸಾಧ್ಯವಿಲ್ಲ. ಕಾಳಿದಾಸರು ಶಾಕುಂತಲಾ ಬರೆದದ್ದು, ವ್ಯಾಸರು ಮಹಾಭಾರತ ಬರೆದದ್ದು, ವಾಲ್ಮೀಕಿ ರಾಮಾಯಣ ಬರೆದದ್ದೇ ಹುಟ್ಟಿನಿಂದ ಯಾರೂ ದಡ್ಡರಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದೆ ಎಂದರು.

    ಶೋಷಿತ ಸಮುದಾಯಗಳು ಜಾತಿ ಸಮ್ಮೇಳನ ಮಾಡುವುದು ತಪ್ಪಲ್ಲ. ಆದ್ರೆ ಮುಂದುವರಿದ ಜಾತಿಗಳು ಜಾತಿ ಹೆಸರಲ್ಲಿ ಸಮ್ಮೇಳನ ನಡೆಸುವುದು ಸಾಮಾಜಕವಾಗಿ ತಪ್ಪಾಗುತ್ತದೆ. ಸಂಘಟನೆ-ಒಗ್ಗಟ್ಟು ಇಲ್ಲದಿದ್ದರೆ ಶೋಷಿತ ಸಮುದಾಯಗಳಿಗೆ ಶಕ್ತಿ ಬರುವುದಿಲ್ಲ.‌ ಮನುಷ್ಯ ಧರ್ಮ ಸ್ಥಾಪನೆ ಆಗುವವರೆಗೂ ನಾವೆಲ್ಲರೂ ಶ್ರಮಿಸುತ್ತಲೇ ಇರಬೇಕು. ನಾನು ಎಲ್ಲಾ ಜಾತಿಯವರನ್ನೂ ಪ್ರೀತಿಸುತ್ತೇನೆ. ಆದರೆ ಜಾತಿ ತಾರತಮ್ಯ ಮಾಡುವವರನ್ನು ವಿರೋಧಿಸುತ್ತೇನೆಯೇ ಹೊರತು ಅವರನ್ನೂ ದ್ವೇಷಿಸುವುದಿಲ್ಲ. ಜಾತಿ ಕಾರಣದಿಂದ ಕನಕದಾಸರನ್ನು ಉಡುಪಿ ಮಠದ ಒಳಗೆ ಬಿಡಲಿಲ್ಲ, ಎನ್ನುತ್ತಾ ಕನಕನ‌ ಕಿಂಡಿ ಸೃಷ್ಟಿಯಾದ ಪ್ರಸಂಗವನ್ನು ವಿವರಿಸಿದರು. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ತಪ್ಪೇನು?- ಎಂ.ಬಿ ಪಾಟೀಲ್ 

  • ಕಾಂತರಾಜು ಸಮಿತಿ ವರದಿಗೆ ಆಗ್ರಹ – ಅ.18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

    ಕಾಂತರಾಜು ಸಮಿತಿ ವರದಿಗೆ ಆಗ್ರಹ – ಅ.18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

    – ಕ್ಯಾಬಿನೆಟ್‌ ತೀರ್ಮಾನ ಅನುಕೂಲಕರವಾಗಿರುತ್ತೆ ಅಂತ ಭಾವಿಸಿದ್ದೇನೆ: ಹರಿಪ್ರಸಾದ್‌

    ಬೆಂಗಳೂರು: ಕಾಂತರಾಜು ಸಮಿತಿ ವರದಿ (Kantaraj Committee Report) ಜಾರಿಗೊಳಿಸುವಂತೆ ಹಿಂದುಳಿದ ವರ್ಗಗಳ ನಾಯಕರು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಅಕ್ಟೋಬರ್ 18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದರು.

    ವಿಧಾನಸೌಧದಲ್ಲಿಂದು (Vidhana Soudha) ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು. ಸಭೆಯಲ್ಲಿ ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್, ಹೆಚ್.ಎಂ ರೇವಣ್ಣ, ಜಯಪ್ರಕಾಶ್ ಹೆಗ್ಡೆ, ಕಾಂತರಾಜು, ಬೋಸರಾಜು, ರಾಘವೇಂದ್ರ ಹಿಟ್ನಾಳ್, ದ್ವಾರಕನಾಥ್, ಬೈರತಿ ಸುರೇಶ್‌, ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಾಂತರಾಜ್ ಸಮಿತಿ ವರದಿ ಜಾರಿ ಮಾಡುವಂತೆ ಒತ್ತಾಯ ಹೇರಲಾಯಿತು. ಇದೇ ವೇಳೆ ಸಿಎಂ ಪರ ಹಿಂದ ವರ್ಗಗಳು ನಿಲ್ಲುವುದಾಗಿ ನಿಯೋಗದಿಂದ ಭರವಸೆಯನ್ನೂ ನೀಡಲಾಯಿತು. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಆತಂಕ ಬೇಡ – ಅನಾರೋಗ್ಯದ ಬಗ್ಗೆ ರತನ್ ಟಾಟಾ ಸ್ಪಷ್ಟನೆ

    ಸಭೆಯ ಬಳಿಕ ಮಾತನಾಡಿದ ಸಿಎಂ, ಕುಮಾರಸ್ವಾಮಿ (HD Kumaraswamy) ಅವರ ಅವಧಿಯಲ್ಲಿ ವರದಿ ಕೊಡಲು ಕಾಂತರಾಜು ಸಮಯ ನಿಗದಿ ಮಾಡಿದ್ದರು. ಆದರೆ ಕುಮಾರಸ್ವಾಮಿ ವರದಿ ತೆಗೆದುಕೊಳ್ಳಲಿಲ್ಲ. ಈಗ ನಮ್ಮ ಅವಧಿಯಲ್ಲಿ ವರದಿ ಜಾರಿಗೆ ಮನವಿ ಮಾಡಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ವರದಿ ಕೊಟ್ಟಿದ್ದಾರೆ. ವರದಿ ಜಾರಿಗೆ ಒತ್ತಾಯ ಇದೆ. ವಾರದ ಹಿಂದೆ ನಾನೇ ಹೇಳಿದ್ದೆ. ವರದಿ ಜಾರಿ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತಿರ್ಮಾನ ಮಾಡ್ತೇನೆ ಅಂದಿದ್ದೆ. ಇವತ್ತು ಹಿಂದುಳಿದ ವರ್ಗಗಳ ನಾಯಕರು ಒತ್ತಾಯ ಮಾಡಿದ್ದಾರೆ. 10 ಸಂಪುಟ ಸಭೆಯಲ್ಲಿ ಇಡಲ್ಲ. ಅ.18ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಇಡ್ತೇನೆ. ಕ್ಯಾಬಿನೆಟ್ ಹೇಗೆ ಹೇಳುತ್ತೋ ಹಾಗೆ ಮಾಡ್ತೇವೆ. ಸಂಪುಟ ನಿರ್ಣಯದಂತೆ ತೀರ್ಮಾನ ಕೈಗೊಳ್ತೀವಿ ಎಂದರು.

    ಇದು ಹಿಂದುಳಿದ ವರ್ಗಗಳ ಸಮೀಕ್ಷೆ ಮಾತ್ರ ಅಲ್ಲ, ಏಳು ಕೋಟಿ ಜನರ ಸಮೀಕ್ಷೆ. ದೇಶದಲ್ಲಿ ಮೊದಲ ಬಾರಿಗೆ ಇಂಥ ಸಮೀಕ್ಷೆ ರಾಜ್ಯದಲ್ಲಿ ನಡೆದಿದೆ. ನಾನು ಈ ವರದಿ ನೋಡಿಲ್ಲ, ಓದಿಲ್ಲ. ಈ ಹಿಂದೆ ವರದಿ ಸ್ವೀಕಾರಕ್ಕೆ ಕುಮಾರಸ್ವಾಮಿ, ನಂತರ ಬಿಜೆಪಿ ಸರ್ಕಾರವೂ ಒಪ್ಪಲಿಲ್ಲ. ಮತ್ತೆ ನಾವು ಅಧಿಕಾರಕ್ಕೆ ಬಂದ ನಂತರ ವರದಿ ಪಡೆದಿದ್ದೇವೆ. ವರದಿ ಜಾರಿಗೆ ಬಹಳ ಒತ್ತಡ ಇದೆ. ಅಕ್ಟೋಬರ್ 18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬಸ್‌ಗೆ ಬೈಕ್ ಅಡ್ಡಬಂದಿದ್ದಕ್ಕೆ ಡ್ರೈವರ್, ನಿರ್ವಾಹಕನ ಜೊತೆ ಬೈಕ್ ಸವಾರನ ಹೊಡೆದಾಟ

    ತೀರ್ಮಾನ ಅನುಕೂಲಕರವಾಗಿರುತ್ತೆ ಅಂತ ಭಾವಿಸಿದ್ದೇನೆ:
    ಸಭೆಯ ಬಳಿಕ ಪರಿಷತ್ ಸದಸ್ಯ ಹರಿಪ್ರಸಾದ್ ಮಾತನಾಡಿ, ಸಿಎಂ ಎಲ್ಲರಿಗೂ ಭರವಸೆ ನೀಡಿದ್ದಾರೆ. ಹಿಂದುಳಿದ ವರ್ಗದ ಆಯೋಗದ ವರದಿಯನ್ನ ಚರ್ಚಿಸೋದಾಗಿ ಹೇಳಿದ್ದಾರೆ. ಕ್ಯಾಬಿನೆಟ್‌ನಲ್ಲಿಟ್ಟು ಅದನ್ನ ಪರಿಶೀಲಿಸಿ ಕ್ರಮ ಜರುಗಿಸೋದಾಗಿ ಹೇಳಿದ್ದಾರೆ. ಕ್ಯಾಬಿನೆಟ್‌ನಲ್ಲಿ ಬರುವ ತೀರ್ಮಾನ ಅನುಕೂಲಕರವಾಗಿರತ್ತೆ ಅಂತ ಭಾವಿಸುತ್ತೇವೆ. 170 ಕೋಟಿ ರೂ.ನಲ್ಲಿ ಈ ಸಮೀಕ್ಷೆ ಆಗಿದೆ. ಇದು ಸಮಗ್ರ ಕರ್ನಾಟಕ ಜನತೆಯನ್ನ ಒಳಗೊಂಡು, ಎಲ್ಲರ ಸ್ಥಿತಿಗತಿಗಳನ್ನ ಶೈಕ್ಷಣಿಕವಾಗಿ ಆರ್ಥಿಕವಾಗಿ ಅಳತೆ ಮಾಡಲಾಗಿದೆ. ಈ ವರದಿಯಲ್ಲಿ ಸಮೀಕ್ಷೆಯಲ್ಲಿ ಎಲ್ಲರ ವಿಚಾರಗಳಿವೆ. ಇದಕ್ಕೆ ಲಿಂಗಾಯತ ದಲಿತರು, ಹೊರತಾಗಿಲ್ಲ. ದುರ್ಬಲ ವರ್ಗದವರಿಗೆ ಮೀಸಲಾತಿ ಕೊಡಲು ಇದರಿಂದ ಸಾಧ್ಯ. ವರದಿ ಜಾರಿ ಆದ ಮೇಲೆ, ಚರ್ಚೆ ಸಮಯದಲ್ಲಿ ಅದು ವೈಜ್ಞಾನಿಕ ವೋ ಇಲ್ಲವೋ ಗೊತ್ತಾಗುತ್ತೆ ಎಂದು ತಿಳಿಸಿದರು.

    ಸಭೆಯ ಬಳಿಕ ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ನಾವು ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡ್ತೇವೆ ಅನ್ನುವ ಸಿಎಂ ನಿಲುವನ್ನು ಸ್ವಾಗತ ಮಾಡ್ತೇವೆ. ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ. ಸಭೆಯಲ್ಲಿ ಬಿಜೆಪಿ ನಿಲುವು ಏನು ಅಂತ ತಿಳಿಸಿದ್ದೇನೆ. ವರದಿ ಸಂಪುಟದಲ್ಲಿ ಚರ್ಚೆ ಆಗಲಿ, ವರದಿಯಲ್ಲಿ ಏನಿದೆ ಅಂತ ಗೊತ್ತಾದ ಮೇಲೆ ಬಿಜೆಪಿ ಮುಂದಿನ ನಡೆ ಇಡಲಿದೆ ಎಂದು ಹೇಳಿದರು.