Tag: kangana ranuat

  • ಕಂಗನಾಗೆ ಎದುರಾಯ್ತು ಮತ್ತೊಂದು ಕಂಟಕ – 10 ದಿನದಲ್ಲಿ 3 ಎಫ್‍ಐಆರ್

    ಕಂಗನಾಗೆ ಎದುರಾಯ್ತು ಮತ್ತೊಂದು ಕಂಟಕ – 10 ದಿನದಲ್ಲಿ 3 ಎಫ್‍ಐಆರ್

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈನಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿದೆ. 10 ದಿನಗಳಲ್ಲಿ ರಣಾವತ್ ವಿರುದ್ಧ ಮೂರು ಎಫ್‍ಐಆರ್ ದಾಖಲು ಮಾಡಲಾಗಿದೆ. ಈ ಬಾರಿ ನ್ಯಾಯಾಂಗ ನಿಂದನೆ ಮತ್ತು ನಿಂದನೀಯ ಪೋಸ್ಟ್ ಮಾಡಿರುವ ಆರೋಪಗಳು ಕಂಗನಾ ವಿರುದ್ಧ ಕೇಳಿ ಬಂದಿವೆ. ಮುಂಬೈ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ. ನಟಿ ಧರ್ಮದ ವಿಷಯವಾಗಿ ಸಮುದಾಯಗಳ ನಡುವೆ ಕಲಹ ಮತ್ತು ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ದೇಶಮುಖ್ ಅರ್ಜಿಯಲ್ಲೇನಿದೆ?: ನಟಿ ಕಂಗನಾ ರಣಾವತ್ ದೇಶದೊಳಗೆ ವಿಂಗಡನೆ ಮತ್ತು ಕಾನೂನುಗಳನ್ನ ಅಗೌರವದಿಂದ ಕಾಣುತ್ತಿದ್ದಾರೆ. ನ್ಯಾಯಾಲಯದ ಆದೇಶಗಳನ್ನು ಹಾಸ್ಯ ಮಾಡುತ್ತಿದ್ದಾರೆ. ಬಾಂದ್ರಾ ಕೋರ್ಟ್ ಎಫ್‍ಐಆರ್ ದಾಖಲಿಸಲು ಆದೇಶ ನೀಡಿದ್ರೆ, ‘ಪಪ್ಪು ಸೇನಾ’ ಪದದ ಬಳಸುವ ಮೂಲಕ ನ್ಯಾಯಾಲಯದ ವಿರುದ್ಧ ದುರುದ್ದೇಶ ಮತ್ತು ನಿಂದನಾತ್ಮಕ ಟ್ವೀಟ್ ಮಾಡಿದ್ದಾರೆ ಎಂದು ದೇಶ್‍ಮುಖ್ ಅರ್ಜಿಯಲ್ಲಿ ಹೇಳಿದ್ದಾರೆ. ನವೆಂಬರ್ 10ರಂದು ಅಂಧೇರಿಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ 

    ಸಾಹಿಲ್ ಆಶ್ರಫ್ ಅಲಿ ಸೈಯದ್ ಎಂಬವರು ಕಂಗನಾ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನ ಸಲ್ಲಿಸಿದ್ದರು. ಕಂಗನಾ ರಣಾವತ್ ಕಳೆದ ಕೆಲ ತಿಂಗಳುಗಳಿಂದ ಸ್ವಜನಪಕ್ಷಪಾತ ಮತ್ತು ಫೇವರಿಟಿಸಂ ಹೆಸರಲ್ಲಿ ಬಾಲಿವುಡ್ ನ್ನು ಅವಮಾನಿಸುತ್ತಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆ ಮತ್ತು ಖಾಸಗಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂದು ಕಲಾವಿದರನ್ನ ವಿಂಗಡನೆ ಮಾಡುವ ಮೂಲಕ ಉದ್ಯಮವನ್ನ ಇಬ್ಭಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಸಾಹಿಲ್ ಅರ್ಜಿಯಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಕೋರ್ಟ್ ಆದೇಶದಂತೆ ತುಮಕೂರಲ್ಲಿ ಕಂಗನಾ ವಿರುದ್ಧ ಎಫ್‍ಐಆರ್

    ಕಂಗನಾ ಹಲವು ವಿವಾದಾತ್ಮಕ ಮತ್ತು ಸಮಾಜದ ಸ್ವಾಸ್ಥ್ಯ ಕದಡುವ ರೀತಿಯಲ್ಲಿ ಟ್ವೀಟ್ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಇದರ ಜೊತೆ ಬಾಲಿವುಡ್ ನಲ್ಲಿರುವ ಹಲವು ಸಹದ್ಯೋಗಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿರುವ ಸಾಹಿಲ್ ನ್ಯಾಯಾಲಯಕ್ಕೆ ಕಂಗನಾ ಮಾಡಿರುವ ಟ್ವೀಟ್ ಸಾಕ್ಷ್ಯ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕಂಗನಾ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ

    ಬಾಂದ್ರಾ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಜಯದೇವ್ ವೈ. ಗುಲೆ, ನಟಿ ಕಂಗನಾ ರಣಾವತ್ ವಿರುದ್ಧ ಸಿಆರ್ ಪಿಸಿ 156 (3) ಪ್ರಕಾರ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಂಗನಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

  • ಕಂಗನಾ ಮನೆಯ ಸುತ್ತಮುತ್ತ ಗುಂಡಿನ ಸದ್ದು

    ಕಂಗನಾ ಮನೆಯ ಸುತ್ತಮುತ್ತ ಗುಂಡಿನ ಸದ್ದು

    -ನಾನು ಹೆದರಲ್ಲ ಎಂದ ಕಂಗನಾ

    ಶಿಮ್ಲಾ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮನೆಯ ಬಳಿ ಶುಕ್ರವಾರ ರಾತ್ರಿ ಗುಂಡಿನ ಸದ್ದು ಕೇಳಿದ್ದು, ಈ ಸಂಬಂಧ ಮನಾಲಿಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಂಗನಾ ಆಪ್ತರು ದೂರು ದಾಖಲಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಸುಳಿತು ದೊರೆತಿಲ್ಲ. ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬೆದರಿಸಲು ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.

    ರಾತ್ರಿ ಸುಮಾರು 11.30ಕ್ಕೆ ಬೆಡ್ ರೂಮಿನಲ್ಲಿದ್ದಾಗ ಪಟಾಕಿ ಸಿಡಿಸಿದ ಹಾಗೆ ಸದ್ದು ಕೇಳಿಸಿತು. ಮೊದಲಿಗೆ ಪಟಾಕಿ ಎಂದು ಸುಮ್ಮನಾದೆ. ಎರಡನೇ ಬಾರಿ ಸದ್ದು ಕೇಳಿದಾಗ ಇದು ಗುಂಡಿನ ಶಬ್ಧ ಎಂದು ಖಚಿತವಾಯ್ತು. ಆದರೆ ಮನಾಲಿಗೆ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಹಾಗಾಗಿ ಈ ಶಬ್ಧ ಏನು ಅಂತ ತಿಳಿದುಕೊಳ್ಳಲು ಮನೆಯ ಸೆಕ್ಯೂರಿಟಿಯನ್ನ ಕೇಳಿದ್ರೆ ಬಹುಶಃ ಗುಂಡಿನ ಸದ್ದು ಇರಬಹುದು ಎಂದು ಹೇಳಿದೆ. ಸೆಕ್ಯೂರಿಗೆ ಇದುವರೆಗೂ ಗುಂಡಿನ ಸದ್ದು ಕೇಳಿಲ್ಲ. ಸೇಬು ತೋಟದ ಮಾಲೀಕರು ಪ್ರಾಣಿಗಳನ್ನು ಓಡಿಸಲು ಕೆಲವೊಮ್ಮೆ ಗುಂಡು ಚಲಾಯಿಸುತ್ತಾರೆ. ಬೆಳಗ್ಗೆ ಅವರನ್ನು ಕೇಳಿದಾಗ ತಾವು ಗುಂಡು ಹಾರಿಸಿಲ್ಲ ಎಂದರು. ಎಂಟು ಸೆಕೆಂಡ್ ಅಂತರದಲ್ಲಿ ಮನೆಯ ಬಳಿ ಎರಡು ಗುಂಡು ಹಾರಿಸಲಾಗಿದೆ ಎಂದು ಕಂಗನಾ ರಣಾವತ್ ಹೇಳಿಕೆ ದಾಖಲಿಸಿದ್ದಾರೆ.

    ದೇಶದಲ್ಲಿ ಗುಂಡಾ ವರ್ತನೆ ಬಹಿರಂಗವಾಗಿ ನಡೆಯುತ್ತಿದೆ. ಇಂತಹ ಧಮ್ಕಿಗಳಿಂದ ನಾನು ಪ್ರಶ್ನೆ ಮಾಡೋದನ್ನ ನಿಲ್ಲಿಸಲ್ಲ. ಕೆಲವರು ಸ್ಥಳೀಯರನ್ನ ಬಳಸಿಕೊಂಡು ಕೆಲಸ ಮಾಡಿರುವ ಸಾಧ್ಯತೆಗಳಿವೆ. ಸುಶಾಂತ್ ಸಹ ಇಂತಹ ಬೆದರಿಕೆಗಳಿಂದಲೇ ಇಂದು ನಮ್ಮೊಂದಿಗೆ ಇಲ್ಲ. ನನ್ನ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳುವದಿಲ್ಲ ಎಂದು ಕಂಗನಾ ಕಿಡಿಕಾರಿದ್ದಾರೆ.