Tag: kala

  • ಕಾಳಾ ಸಿನಿಮಾ ನೋಡಿದವರನ್ನು ಸನ್ಮಾನಿಸಿದ ಕನ್ನಡ ಪರ ಹೋರಾಟಗಾರರು

    ಕಾಳಾ ಸಿನಿಮಾ ನೋಡಿದವರನ್ನು ಸನ್ಮಾನಿಸಿದ ಕನ್ನಡ ಪರ ಹೋರಾಟಗಾರರು

    ಬೆಂಗಳೂರು: ನಗರದ ಜಾಲಹಳ್ಳಿಯ ಭಾರತಿ ಚಿತ್ರಮಂದಿರದಲ್ಲಿ ಕಾಳಾ ಸಿನಿಮಾ ನೋಡಿದ ಕೆಲವರಿಗೆ ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿ ಅಣಕು ಪ್ರದರ್ಶನ ಮಾಡಿದ್ದಾರೆ.

    ಕನ್ನಡಪರ ಸಂಘಟನೆಗಳ ಸಾಕಷ್ಟು ವಿರೋಧದ ನಡುವೆಯು ಕೆಲವು ಚಿತ್ರ ಮಂದಿರಗಳಲ್ಲಿ ರಜಿನಿಕಾಂತ್ ಅಭಿನಯದ ಕಾಳಾ ಚಿತ್ರ ಪ್ರದರ್ಶನಗೊಂಡಿದೆ. ಪ್ರತಿಭಟನೆ ಮಾಡಿದರೆ ಪೊಲೀಸರು ಬಂಧಿಸುತ್ತಾರೆ ಎಂದು ಚಿತ್ರ ನೋಡಿ ಹೊರ ಬಂದ ಕೆಲವರಿಗೆ ಮೈಸೂರು ಪೇಟಾ, ಶಾಲು, ಹೂವಿನ ಹಾರ ಹಾಕಿ ಕನ್ನಡ ಪರ ಹೋರಾಟಗಾರರು ಸನ್ಮಾನ ಮಾಡಿ ಅಣಕವಾಡಿದ್ದಾರೆ.

    ಸನ್ಮಾನ ಮಾಡಿದ ನಂತರ ಮಾತನಾಡಿದ ಹೋರಾಟಗಾರರು, ಕನ್ನಡ ದ್ರೋಹಿಗಳನ್ನು ಹುಡುಕುತ್ತಾ ಇದ್ದೀವಿ, ಅದು ನೀವೆ ಅಂತಾ ಸನ್ಮಾನ ಮಾಡಿದ್ದೇವೆ, ಸ್ವಾಭಿಮಾನಕ್ಕಿಂತ ಸಿನಿಮಾನೇ ಜಾಸ್ತಿ ಆಯಿತಾ ಅಂತಾ ಪ್ರಶ್ನಿಸಿದ್ದೇವೆ. ಸನ್ಮಾನ ಸ್ವೀಕರಿಸಿದ ಕೆಲ ಪ್ರೇಕ್ಷಕರು ಕ್ಷಮೆಯಾಚಿಸಿದರು. ಪೊಲೀಸರು ಸನ್ಮಾನ ಮಾಡುತ್ತಾರೆ ಎಂದು ಹೋರಾಟಗಾರರಿಗೆ ಅನುವು ಮಾಡಿಕೊಟ್ಟರು ಅಂತಾ ಹೇಳಿದರು.

    ಜ್ಯುರಾಸಿಕ್ ವಲ್ರ್ಡ್ ಹಾಲಿವುಡ್ ಸಿನಿಮಾ ಟಿಕೆಟ್ ನೀಡಿ ಕಾಳಾ ಚಿತ್ರವನ್ನು ನಗರದ ಊರ್ವಶಿ ಚಿತ್ರಮಂದಿರದಲ್ಲಿ ನಿನ್ನೆ ಪ್ರದರ್ಶನ ಮಾಡಿದ್ದು ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿತ್ತು. ಇದನ್ನೂ ಓದಿ:ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ: ರೊಚ್ಚಿಗೆದ್ದ ಪ್ರೇಕ್ಷಕರಿಂದ ಥಿಯೇಟರ್ ಗೆ ಮುತ್ತಿಗೆ

  • ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ: ರೊಚ್ಚಿಗೆದ್ದ ಪ್ರೇಕ್ಷಕರಿಂದ ಥಿಯೇಟರ್ ಗೆ ಮುತ್ತಿಗೆ

    ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ: ರೊಚ್ಚಿಗೆದ್ದ ಪ್ರೇಕ್ಷಕರಿಂದ ಥಿಯೇಟರ್ ಗೆ ಮುತ್ತಿಗೆ

    ಬೆಂಗಳೂರು: ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ನೀಡಿ ಕಾಲಾ ಚಿತ್ರ ಪ್ರದರ್ಶನ ಮಾಡಿದ್ದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ ಘಟನೆ ನಗರದ ಊರ್ವಶಿ ಚಿತ್ರಮಂದಿರದಲ್ಲಿ ನಡೆದಿದೆ.

    ಚಿತ್ರ ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಥಿಯೇಟರ್ ನಲ್ಲಿ ಕಾಲ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿ, ಜ್ಯುರಾಸಿಕ್   ವರ್ಲ್ಡ್  ಸಿನಿಮಾವನ್ನು ಹಾಕಲಾಗಿತ್ತು. ಅಲ್ಲದೆ ಸಿನಿಮಾದ ಪೋಸ್ಟರ್ ಗಳನ್ನು ಥಿಯೇಟರ್ ನ ತುಂಬಾ ಹಾಕಲಾಗಿತ್ತು.

     

    ಇಂದು ಚಿತ್ರ ವೀಕ್ಷಿಸಲು ಬಂದ ಜನರಿಗೆ ಜ್ಯುರಾಸಿಕ್ ವರ್ಲ್ಡ್ ಟಿಕೆಟ್ ವಿತರಣೆ ಮಾಡಿತ್ತು. ಇನ್ನೆನೂ ಚಿತ್ರ ಪ್ರಾರಂಭವಾಗುತ್ತದೆ ಎನ್ನುವಷ್ಟರಲ್ಲಿ ತಮಿಳಿನ ಕಾಲಾ ಚಿತ್ರ ಪ್ರದರ್ಶನವಾಗಿದೆ. ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಚಿತ್ರಮಂದಿರದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲಾ ಚಿತ್ರವನ್ನು ಪ್ರದರ್ಶನ ಮಾಡಿದ್ದಕ್ಕೆ ಪೇಕ್ಷಕರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದಾರೆ.

    ಊರ್ವಶಿ ಚಿತ್ರಮಂದಿರ ಬುಕ್‍ಮೈ ಶೋನಲ್ಲಿಯೂ ಕೂಡ ಜ್ಯುರಾಸಿಕ್ ವರ್ಲ್ಡ್ ಪ್ರಕಟಿಸಿತ್ತು.

  • ಕಾಲಾ ಬಿಡುಗಡೆಯಾಗಬೇಕೋ? ಬೇಡವೋ?: ಸಿನಿಮಾ ಕುರಿತು ಮೌನ ಮುರಿದ ಎಚ್‍ಡಿಕೆ

    ಕಾಲಾ ಬಿಡುಗಡೆಯಾಗಬೇಕೋ? ಬೇಡವೋ?: ಸಿನಿಮಾ ಕುರಿತು ಮೌನ ಮುರಿದ ಎಚ್‍ಡಿಕೆ

    ಬೆಂಗಳೂರು: ಕಾಲಾ ಸಿನಿಮಾ ಬಿಡುಗಡೆ ಮಾಡಲು ನ್ಯಾಯಾಲಯ ಸೂಚನೆ ನೀಡಿದ್ದು, ಆದರೆ ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ಸಿನಿಮಾ ಬಿಡುಗಡೆ ಮಾಡದಿರುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಸಿಎಂ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.

    ಹೈಕೋರ್ಟ್ ಆದೇಶದ ಬಳಿಕ ಕನ್ನಡ ಪರ ಸಂಘಟನೆಗಳು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚಿತ್ರ ಬಿಡುಗಡೆ ಮಾಡದಿರಲು ಮನವಿ ಮಾಡಿದರು. ಚರ್ಚೆ ಬಳಿಕ ಮಾತನಾಡಿದ ಸಿಎಂ ಕುಮಾರ ಸ್ವಾಮಿ ಅವರು, ಸಿನಿಮಾ ಬಿಡುಗಡೆಯ ಕುರಿತು ಹೋರಾಟಗಾರರು ಹಾಗೂ ಕನ್ನಡ ಚಲನಚಿತ್ರ ಮಂಡಳಿ ಅಧ್ಯಕ್ಷರು ಕುರಿತು ಚರ್ಚೆ ನಡೆಸಿದ್ದಾರೆ. ಆದರ ನ್ಯಾಯಾಲಯದ ಸೂಚನೆಯ ಅನ್ವಯ ಚಿತ್ರ ಬಿಡುಗಡೆಗೆ ಬೇಕಾದ ಭದ್ರತೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

    ಇದೇ ವೇಳೆ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ ಕುಮಾರಸ್ವಾಮಿ ಅವರು, ನಾನು ಸಿನಿಮಾ ನಿರ್ಮಾಣ, ಹಂಚಿಕೆ ಕುರಿತು ಅನುಭವ ಹೊಂದಿದ್ದೇನೆ. ಆದರೆ ಸಾಮಾನ್ಯ ವ್ಯಕ್ತಿಯಾಗಿ ತಾನು ಕನ್ನಡಿಗರ ಪರ ಇದ್ದೇನೆ. ಇದು ಭಾವನಾತ್ಮಕ ಅಂಶವಾಗಿರುವುದರಿಂದ ಸಿನಿಮಾ ಬಿಡುಗಡೆ ಮಾಡುವವರು ಚಿಂತನೆ ನಡೆಸಬೇಕಿದೆ. ಆದರೆ ಇಂತಹ ಸಮಯದಲ್ಲಿ ಚಿತ್ರ ಬಿಡುಗಡೆ ಸೂಕ್ತವಲ್ಲ. ಅಲ್ಲದೇ ಹೋರಾಟಗಾರರು ಚರ್ಚೆಯ ವೇಳೆ 2016 ರಲ್ಲಿ ನಾಗರಹಾವು ಸಿನಿಮಾ ಬಿಡುಗಡೆಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.

     

     

  • ಕರಿ`ಕಾಲಾ’ನ ಬೀದಿ ನಾಯಿ `ಮಣಿ’ಗೆ ಕೋಟಿ ಕೋಟಿ ಬೆಲೆ!

    ಕರಿ`ಕಾಲಾ’ನ ಬೀದಿ ನಾಯಿ `ಮಣಿ’ಗೆ ಕೋಟಿ ಕೋಟಿ ಬೆಲೆ!

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ `ಕಾಲಾ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಬೀದಿ ನಾಯಿ `ಮಣಿ’ ಗೆ ಈಗ ಕೋಟಿ ಕೋಟಿ ಬೆಲೆ ಬಂದಿದೆ.

    ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ `ಕಾಲಾ’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಮಣಿ ಹೆಸರಿನ ಬೀದಿ ನಾಯಿ ಸದ್ಯ ಎಲ್ಲಿಲ್ಲದ ಬೇಡಿಕೆ ಪಡೆದುಕೊಂಡಿದೆ. ನಾಯಿಯನ್ನು ಪಡೆಯಲು ಸೂಪರ್ ಸ್ಟಾರ್ ಅಭಿಮಾನಿಗಳು ಪ್ರಯತ್ನಿಸುತ್ತಿದ್ದು, ಕೋಟಿ ಗಟ್ಟಲೇ ಹಣ ನೀಡಿ ಖರೀದಿಸಲು ಮುಂದಾಗಿದ್ದಾರೆ ಎನ್ನುವ ವಿಚಾರ ಕಾಲಿವುಡ್ ಅಂಗಳದಿಂದ ಕೇಳಿ ಬಂದಿದೆ.

    ಪ್ರಸ್ತುತ `ಮಣಿ’ ಮಾಲೀಕರಾಗಿರುವ ಪ್ರಾಣಿಗಳ ತರಬೇತುದಾರ ಸೈಮನ್ ಈ ನಾಯಿ ಯನ್ನು ಚೆನ್ನೈನ ಬೀದಿಯಿಂದ ಹಿಡಿದು ತಂದು ತರಬೇತಿಯನ್ನು ನೀಡುತ್ತಿದ್ದರು. ಈ ವೇಳೆ ರಜಿನಿಕಾಂತ್ ಅವರ ಸಿನಿಮಾಗಾಗಿ ನಾಯಿ ಆಯ್ಕೆ ಮಾಡಲು ಆಡಿಷನ್ ನಡೆಸಲಾಗುತಿತ್ತು. ಚಿತ್ರದ ಆಡಿಷನ್ ಗೆ ಬಂದಿದ್ದ 30 ಕ್ಕೂ ಹೆಚ್ಚು ನಾಯಿಗಳನ್ನು ರಜನಿಕಾಂತ್ ನಿರಾಕರಿಸಿದ್ದರು.

    ಹಲವು ನಾಯಿಗಳನ್ನು ತೋರಿಸಿದರೂ ಯಾವ ನಾಯಿಯೂ ಆಯ್ಕೆಯಾಗದಿರುವುದು ಕಂಡ ಸೈಮನ್ ಅವರಿಗೆ ರಜನಿ ಅವರ ಜೊತೆ ಸಿನಿಮಾದಲ್ಲಿ ಭಾಗವಹಿಸುವ ಅವಕಾಶ ಕೈ ತಪ್ಪುವ ಭಯ ಉಂಟಾಗಿತ್ತು. ಆದರೆ ಮಣಿಯನ್ನು ಅವರಿಗೆ ತೋರಿಸಿದ ನಂತರ ಅದನ್ನು ಆಯ್ಕೆ ಮಾಡಲಾಯಿತು. ಚಿತ್ರೀಕರಣದ ವೇಳೆ ರಜನಿ ಹಾಗೂ ಮಣಿ ಅವರ ನಡುವೆ ಉತ್ತಮ ಸ್ನೇಹ ಏರ್ಪಟಿದೆ ಎಂದು ಸೈಮನ್ ಹೇಳಿದ್ದಾರೆ.

    ಸಿನಿಮಾದಲ್ಲಿ ರಜನಿ ಅವರ ಪಕ್ಕ ಕಾಣಿಸಿಕೊಳ್ಳುವ ನಾಯಿಯಾದ ಕಾರಣ ಇದರ ಆಯ್ಕೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅಲ್ಲದೇ ಚಿತ್ರೀಕರಣದ ಸಮಯದಲ್ಲಿ ಚಿತ್ರ ತಂಡದ ಇತರೇ ನಟರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿತ್ತು. ಈ ಎಲ್ಲಾ ಅಂಶಗಳ ನಡುವೆ ಮಣಿ ನಾಯಿಯನ್ನು ಚಿತ್ರಕ್ಕೆ ಆಯ್ಕೆ ಮಾಡಲಾಯಿತು ಎಂದು ಸೈಮನ್ ವಿವರಿಸಿದ್ದಾರೆ.

    ಸೈಮನ್ ಇದುವರೆಗೆ ಸುಮಾರು 1000 ಕ್ಕೂ ಹೆಚ್ಚು ಸಿನಿಮಾಗಳಿಗೆ ಪ್ರಾಣಿಗಳ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ರಜನಿ ಅವರ ಕಾಲಾ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಮಣಿಗೆ ಹೆಚ್ಚಿನ ಬೇಡಿಕೆ ಬಂದಿದ್ದು ಸುಮಾರು 2 ರಿಂದ 3 ಕೋಟಿ ರೂ. ನೀಡುವುದಾಗಿ ಹಲವು ಅಭಿಮಾನಿಗಳು ಮುಂದೆ ಬಂದಿದ್ದಾರೆ. ಆದರೆ ಮಣಿಯನ್ನು ಮಾರಾಟ ಮಾಡುವ ಯಾವುದೇ ಯೋಚನೆಯನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಅಂದಹಾಗೇ ಮಣಿಗೆ 2.6 ವರ್ಷ ವಯಸ್ಸಾಗಿದ್ದು, ಈಗಾಗಲೇ ತಮಿಳಿನ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಮಣಿಯನ್ನ ಖರೀದಿಸಲು ಭಾರತದಿಂದ ಅಲ್ಲದೇ ಮಲೇಷಿಯಾ ಸೇರಿದಂತೆ ಹಲವು ದೇಶಗಳಿಂದ ಅಭಿಮಾನಿಗಳು ಕರೆ ಮಾಡಿದ್ದಾರೆ ಎಂದು ಸೈಮನ್ ಹೇಳಿದ್ದಾರೆ.