Tag: Kadala Theerada Bhargava

  • `ಮನವೆಂಬ ಕಡಲ ತೀರದ’ ಚಿತ್ರಣ

    `ಮನವೆಂಬ ಕಡಲ ತೀರದ’ ಚಿತ್ರಣ

    ಮ್ಮ ಸಿನಿಮಾದ ಹೆಸರು `ಕಡಲ ತೀರದ ಭಾರ್ಗವ’ (Kadala Theerada Bhargava) ಅಂತಿದೆ. ಹಾಗಂತ ಇದು ಸಾಹಿತಿ ಕೋಟ ಶಿವರಾಮ ಕಾರಂತರ ಸಿನಿಮಾವಲ್ಲ. ಅಥವಾ ಅವರ ಯಾವುದೇ ಕೃತಿಗೂ ಸಂಬಂಧಿಸಿದ್ದಲ್ಲ. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯ ಸಿನಿಮಾ. ಮನುಷ್ಯನ ಮನಸ್ಸು ಒಂಥರಾ ಕೊನೆಯಿರದ ಕಡಲಿನಂತೆ. ಅದರ ಆಳ, ಅಗಲ ಎಲ್ಲವೂ ಕಡಲಿನಂತೆ, ಅಳತೆಗೆ ನಿಲುಕದ್ದು. ಅಂಥದ್ದೇ ಮನಸ್ಸಿನ ಚಿತ್ರಣ ಈ ಸಿನಿಮಾದ ಕಥಾವಸ್ತು. ಹಾಗಾಗಿ ಸಿನಿಮಾದ ಸಬ್ಜೆಕ್ಟ್‌ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ, ನಮ್ಮ ಸಿನಿಮಾಕ್ಕೆ ಈ ಟೈಟಲ್ ಇಟ್ಟಿದ್ದೇವೆ ಇದು ತೆರೆ ಕಾಣಲು ರೆಡಿಯಾಗಿರುವ `ಕಡಲ ತೀರದ ಭಾರ್ಗವ’ ಸಿನಿಮಾದ ಬಗ್ಗೆ ನಿರ್ದೇಶಕ ಪನ್ನಗ ಸೋಮಶೇಖರ್ (Pannaga Somashekar) ಮಾತನಾಡಿದ್ದಾರೆ.

    ಸದ್ಯ ತನ್ನ ಟೈಟಲ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಸಿನಿಮಾ `ಕಡಲ ತೀರದ ಭಾರ್ಗವ’ ಇದೇ ಮಾ.3ಕ್ಕೆ ತೆರೆಗೆ ಬರುತ್ತಿದೆ. ಇದೇ ವೇಳೆ ಸಿನಿಮಾದ ಬಗ್ಗೆ ಮಾತಿಗೆ ಸಿಕ್ಕ ನಿರ್ದೇಶಕ ಪನ್ನಗ ಸೋಮಶೇಖರ್, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ.

    `ಕಡಲ ತೀರದ ಭಾರ್ಗವ’ ಸುಮಾರು ನಾಲ್ಕು ವರ್ಷಗಳ ಹಿಂದಿನ ಕನಸು. ಇದೇ ಕಥೆಯನ್ನು ಮೊದಲು ಶಾರ್ಟ್ ಮೂವಿ ಮಾಡಿದ್ದೆವು. ಬಳಿಕ ಅದನ್ನೇ ಪೂರ್ಣ ಪ್ರಮಾಣದ ಸಿನಿಮಾವಾಗಿ ಮಾಡಿದ್ದೇವೆ. ಎಲ್ಲರ ಮನಮುಟ್ಟುವಂಥ ಕಥೆ ಈ ಸಿನಿಮಾದಲ್ಲಿದೆ. ಭಾರ್ಗವ ಎಲ್ಲರಿಗೂ ಇಷ್ಟವಾಗುತ್ತಾನೆ ಎಂಬುದು ನಿರ್ದೇಶಕ ಪನ್ನಗ ಅವರ ಭರವಸೆಯ ಮಾತು.

    ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ `ಕಡಲ ತೀರದ ಭಾರ್ಗವ’ ಸಿನಿಮಾದ ಮೂಲಕ ಭರತ್ ಗೌಡ (Bharath Gowda) ಮತ್ತು ವರುಣ್ ರಾಜು ಪಟೇಲ್ (Varun Patel Raju) ನಾಯಕ ನಟರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಜೊತೆಗೆ ನಿರ್ಮಾಪಕರಾಗಿ ಬಂಡವಾಳ ಹೂಡಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರುತಿ ಪ್ರಕಾಶ್ (Shruthi Prakash) ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀಧರ್, ರಾಘವ ನಾಗ್, ಅಶ್ವಿನ್ ಹಾಸನ್ ಮೊದಲಾದವರು `ಕಡಲ ತೀರದ ಭಾರ್ಗವ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ʻಜೊತೆ ಜೊತೆಯಲಿʼ ನಟಿಯ ಹೊಸ ಫೋಟೋಶೂಟ್‌

    ಒಟ್ಟಾರೆ ತನ್ನ ಕಂಟೆಂಟ್, ಟ್ರೇಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿರುವ `ಕಡಲ ತೀರದ ಭಾರ್ಗವ’ನ ಕಥೆ ಏನೆಂಬುದು ಮಾರ್ಚ್ 3ಕ್ಕೆ ಅನಾವರಣವಾಗಲಿದೆ.

  • ಖಡಕ್ ಟ್ರೇಲರ್ ನೊಂದಿಗೆ ಬಂದ ಕಡಲ ತೀರದ ಭಾರ್ಗವ!

    ಖಡಕ್ ಟ್ರೇಲರ್ ನೊಂದಿಗೆ ಬಂದ ಕಡಲ ತೀರದ ಭಾರ್ಗವ!

    ಬೆಂಗಳೂರು: ಒಂದು ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸಿ, ಅದನ್ನು ನೋಡಲೇ ಬೇಕೆಂಬ ತುಡಿತ ಮೂಡಿಸುವಲ್ಲಿ ಟ್ರೇಲರ್ ಪಾತ್ರ ಮಹತ್ವದ್ದು. ಆದರೆ ಒಂದಿಡೀ ಸಿನಿಮಾ ಸಾರವನ್ನು ಸೆಕೆಂಡು, ನಿಮಿಷಗಳ ಬೊಗಸೆಯಲ್ಲಿ ಹಿಡಿದಿಡುವುದು ಬಲು ಕಷ್ಟದ ಕೆಲಸ. ಅದರಲ್ಲಿ ಗೆದ್ದವರು ಸಿನಿಮಾ ಮೂಲಕ ಗೆಲ್ಲುವುದೂ ನಿಶ್ಚಿತ ಎಂಬಂಥಾ ನಂಬಿಕೆ ಇದೆ. ಈ ಆಧಾರದಲ್ಲಿ ಹೇಳೋದಾದರೆ ಕಡಲ ತಡಿಯ ಭಾರ್ಗವ ಎಂಬ ಸಿನಿಮಾ ಗೆಲುವಿನ ಹಾದಿಯಲ್ಲಿದೆ. ಯಾಕೆಂದರೆ ಇದೀಗ ಲಾಂಚ್ ಆಗಿರೋ ಈ ಸಿನಿಮಾ ಟ್ರೇಲರ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

    ಅಷ್ಟಕ್ಕೂ ಕಡಲ ತೀರದ ಭಾರ್ಗವ ಅಂದಾಕ್ಷಣವೇ ಕನ್ನಡಿಗರೆಲ್ಲರ ಮನಸಲ್ಲಿ ಮೇರು ಸಾಹಿತಿ ಶಿವರಾಮ ಕಾರಂತರ ಚಿತ್ರ ಮೂಡಿಕೊಳ್ಳುತ್ತದೆ. ಈ ಸಿನಿಮಾ ಆರಂಭಿಕವಾಗಿ ಗಮನ ಸೆಳೆದದ್ದರ ಹಿಂದೆಯೂ ಶಿವರಾಮ ಕಾರಂತರೆಂಬ ಮಾಯೆಯಿದ್ದದ್ದು ಸುಳ್ಳಲ್ಲ. ಪ್ರತಿಭೆಯ ವಿರಾಟ್ ರೂಪದಂತಿದ್ದ ವರ್ಣರಂಜಿತ ವ್ಯಕ್ತಿತ್ವದ ಕಾರಂತರಿಗೂ ಈ ಸಿನಿಮಾಗೂ ಸಂಬಂಧವಿದೆಯಾ ಎಂಬ ಪ್ರಶ್ನೆಗೆ ಚಿತ್ರತಂಡ ಇಲ್ಲ ಎಂಬ ನಿಖರ ಉತ್ತರವನ್ನೇ ರವಾನಿಸಿತ್ತು. ಇದೀಗ ಟ್ರೇಲರ್ ಮೂಲಕ ಬೇರೆಯದ್ದೇ ಕಥೆಯ ದಿಕ್ಕು ತೋರಿಸೋ ಮೂಲಕ ಚಿತ್ರತಂಡ ಕಾರಂತರ ವಿಚಾರವಾಗಿ ಹುಟ್ಟಿಕೊಂಡಿದ್ದ ಕೌತುಕಕ್ಕೆ ನಿಖರವಾದ ಉತ್ತರವನ್ನೇ ಕೊಟ್ಟಿದೆ.

    https://www.youtube.com/watch?v=2freW2IGokw

    ಈ ಟ್ರೇಲರ್ ನೋಡಿದವರ್ಯಾರೂ ಕಡಲ ತೀರದ ಭಾರ್ಗವ ಚಿತ್ರದತ್ತ ಆಕರ್ಷಿತರಾಗದಿರಲು ಸಾಧ್ಯವೇ ಇಲ್ಲ. ಪ್ರೀತಿ ಪ್ರೇಮ, ನಶೆ, ದ್ವೇಷ ಸೇರಿದಂತೆ ಬೇರೆಯದ್ದೇ ಛಾಯೆಗಳಿಂದ ಈ ಟ್ರೇಲರ್ ಹೊರ ಬಂದಿದೆ. ಅದುವೇ ಈ ಸಿನಿಮಾದ ದೃಶ್ಯ ವೈಭವಕ್ಕೆ, ಭಿನ್ನ ಬಗೆಯ ಕಥಾನಕಕ್ಕೆ ಕನ್ನಡಿ ಹಿಡಿದಂತಿದೆ. ಇದು ಪನ್ನಗ ಸೋಮಶೇಖರ್ ನಿರ್ದೇಶನ ಮಾಡಿರೋ ಚಿತ್ರ. ಈಗಾಗಲೇ ಹಲವಾರು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರೋ ಪನ್ನಗ ಕಿರುತೆರೆ ಕ್ಷೇತ್ರದಲ್ಲಿಯೂ ಒಂದಷ್ಟು ಅನುಭವ ಹೊಂದಿದ್ದಾರೆ. ಭರತ್ ಗೌಡ ಮತ್ತು ವರುಣ್ ರಾಜ್ ಜೋಡಿಯಾಗಿ ನಟಿಸಿರೋ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದಾರೆ. ಇಷ್ಟರಲ್ಲಿಯೇ ಈ ಸಿನಿಮಾದ ಬಿಡುಗಡೆ ದಿನಾಂಕ ಹೊರಬೀಳಲಿದೆ.