Tag: Kabul

  • ಮಿಲಿಟರಿ ಹೊರಠಾಣೆ ಮೇಲೆ ಟಿಟಿಪಿ ದಾಳಿ – 25 ಪಾಕ್‌ ಸೈನಿಕರು ಸಾವು

    ಮಿಲಿಟರಿ ಹೊರಠಾಣೆ ಮೇಲೆ ಟಿಟಿಪಿ ದಾಳಿ – 25 ಪಾಕ್‌ ಸೈನಿಕರು ಸಾವು

    ಕಾಬೂಲ್/ಇಸ್ಲಾಮಾಬಾದ್: ದಕ್ಷಿಣ ವಜಿರಿಸ್ತಾನದಲ್ಲಿರುವ ಪಾಕಿಸ್ತಾನಿ ಮಿಲಿಟರಿ ಹೊರಠಾಣೆ ಮೇಲೆ ನಡೆದ ಭೀಕರ ದಾಳಿಯಲ್ಲಿ 25 ಪಾಕ್‌ ಸೈನಿಕರು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಹೇಳಿಕೊಂಡಿದೆ.

    ಸೋಮವಾರ ತಡರಾತ್ರಿ ತನ್ನ ಸೇನೆಯು ಮಿಲಿಟರಿ ಹೊರಠಾಣೆ ಮೇಲೆ ಭೀಕರ ದಾಳಿ ನಡೆಸಿದೆ. ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಡ್ರೋನ್‌ಗಳನ್ನು (Pakistani Army Drone) ನಾಶಪಡಿಸಿದ್ದಾಗಿ ಟಿಟಿಪಿ ಉಗ್ರರ ಗುಂಪು ಹೇಳಿಕೊಂಡಿದೆ. ದಾಳಿಯ ನಂತರ ಮಿಲಿಟರಿ ಠಾಣೆಯನ್ನ ಟಿಟಿಪಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

    ಅಫ್ಘಾನಿಸ್ತಾನದ ಗಡಿಯಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಟಿಟಿಪಿ ಆಗಾಗ್ಗೆ ಪಾಕಿಸ್ತಾನಿ ಭದ್ರತಾಪಡೆಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಾ ಬರುತ್ತಿದೆ. ಪಹಲ್ಗಾಮ್‌ ದಾಳಿ ಬಳಿಕ ಒಂದೆಡೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾಗಲೂ ಟಿಟಿಪಿ ಪಾಕ್‌ನ ಸೇನಾ ಠಾಣೆಯ ಮೇಲೆ ದಾಳಿ ನಡೆಸಿ ಹತ್ತಾರು ಮಂದಿ ಸೈನಿಕರನ್ನ ಕೊಂದಿತ್ತು. ಆದ್ರೆ ಇದು ಇತ್ತೀಚಿನ ತಿಂಗಳಲ್ಲಿ ನಡೆಸಿದ ಭೀಕರ ದಾಳಿಯಲ್ಲಿ ಒಂದಾಗಿದೆ ಎಂದು ಹೇಳಲಾಗ್ತಿದೆ. ಪಾಕಿಸ್ತಾನ ಸೇನೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

  • ಪಾಕಿಸ್ತಾನದ 58 ಸೈನಿಕರ ಹತ್ಯೆ, 30 ಮಂದಿಗೆ ಗಾಯ: ಅಫ್ಘಾನಿಸ್ತಾನ

    ಪಾಕಿಸ್ತಾನದ 58 ಸೈನಿಕರ ಹತ್ಯೆ, 30 ಮಂದಿಗೆ ಗಾಯ: ಅಫ್ಘಾನಿಸ್ತಾನ

    ಕಾಬೂಲ್‌: ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಪಾಕಿಸ್ತಾನದ (Pakistan) 58 ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಅಫ್ಘಾನಿಸ್ತಾನ (Afgainistan) ಹೇಳಿಕೊಂಡಿದೆ.

    ಇಸ್ಲಾಮಿಕ್ ಎಮಿರೇಟ್ ಪಡೆಗಳು ವಿವಾದಿತ ಡುರಾಂಡ್ ಗಡಿ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಭದ್ರತಾ ಪಡೆಗಳ ವಿರುದ್ಧ ಕಾರ್ಯಾಚರಣೆ ನಡೆಸಿವೆ. ಇದರಿಂದಾಗಿ ಗಮನಾರ್ಹ ಸಾವುನೋವುಗಳು ಸಂಭವಿಸಿವೆ ಎಂದು ಅಫ್ಘಾನಿಸ್ತಾನ ತಾಲಿಬಾನ್ (Taliban) ವಕ್ತಾರ ಜಬಿಹುಲ್ಲಾ ಮುಜಾಹಿದ್ ಭಾನುವಾರ ಹೇಳಿದ್ದಾರೆ.

    ಕಾರ್ಯಾಚರಣೆಯ ಸಮಯದಲ್ಲಿ 58 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ. ಹಲವಾರು ಶಸ್ತ್ರಾಸ್ತ್ರಗಳನ್ನು ತಾತ್ಕಾಲಿಕವಾಗಿ ವಶಪಡಿಸಿಕೊಳ್ಳಲಾಗಿದೆ ಮತ್ತು 20 ಪಾಕಿಸ್ತಾನಿ ಭದ್ರತಾ ಠಾಣೆಗಳನ್ನು ನಾಶಪಡಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ:  12 ಪಾಕ್‌ ಸೈನಿಕರನ್ನು ಹತ್ಯೆ – ಅಫ್ಘಾನ್‌ ಮೇಲೆ ಮತ್ತೆ ಏರ್‌ಸ್ಟ್ರೈಕ್‌

    ಅಫ್ಘಾನ್ ಕಡೆಯಿಂದ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಗಾಯಗೊಂಡಿದ್ದಾರೆ. ಕತಾರ್ ಮತ್ತು ಸೌದಿ ಅರೇಬಿಯಾದ ಮನವಿಯ ಮೇರೆಗೆ ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎಂದು ಅವರು ಹೇಳಿದರು.

    ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯವು ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆ ಐಸಿಸ್-ಕೆಗಾಗಿ ತರಬೇತಿ ಕೇಂದ್ರಗಳನ್ನು ಹೊಂದಿದೆ ಎಂದು ಮುಜಾಹಿದ್ ಆರೋಪಿಸಿದ್ದಾರೆ.

    ಇರಾನ್ ಮತ್ತು ಮಾಸ್ಕೋದಲ್ಲಿ ದಾಳಿಗಳನ್ನು ಈ ಕೇಂದ್ರಗಳಿಂದಲೇ ನಡೆದಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ದಾಳಿಗಳನ್ನು ಸಹ ಈ ನೆಲೆಗಳಿಂದಲೇ ಯೋಜಿಸಲಾಗಿತ್ತು. ಪ್ರಮುಖ ಐಸಿಸ್-ಕೆ ಸದಸ್ಯರನ್ನು ನಮಗೆ ಹಸ್ತಾಂತರಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿದರು.

    ಪಾಕಿಸ್ತಾನವು ಕಾಬೂಲ್‌ಗೆ ನಿಯೋಗವನ್ನು ಕಳುಹಿಸಲು ಪ್ರಯತ್ನಿಸಿತ್ತು. ಆದರೆ ಗುರುವಾರ ರಾತ್ರಿ ನಡೆಸಿದ ಪಾಕಿಸ್ತಾನಿ ವೈಮಾನಿಕ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇಸ್ಲಾಮಿಕ್ ಎಮಿರೇಟ್ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.

  • ಕಾಬೂಲ್ ರಾಯಭಾರ ಕಚೇರಿ 4 ವರ್ಷದ ಬಳಿಕ ಪುನಾರಂಭಕ್ಕೆ ಭಾರತ ನಿರ್ಧಾರ – ಎಸ್.ಜೈಶಂಕರ್ ಘೋಷಣೆ

    ಕಾಬೂಲ್ ರಾಯಭಾರ ಕಚೇರಿ 4 ವರ್ಷದ ಬಳಿಕ ಪುನಾರಂಭಕ್ಕೆ ಭಾರತ ನಿರ್ಧಾರ – ಎಸ್.ಜೈಶಂಕರ್ ಘೋಷಣೆ

    ನವದೆಹಲಿ: ಕಾಬೂಲ್ (Kabul) ರಾಯಭಾರ ಕಚೇರಿಯನ್ನು 4 ವರ್ಷಗಳ ಬಳಿಕ ಪುನಾರಂಭಿಸಲು ಭಾರತ ನಿರ್ಧರಿಸಿದೆ. ವಿದೇಶಾಂಗ ಸಚಿವ ಜೈಶಂಕರ್ (S.Jaishankar) ಮತ್ತು ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Amir Khan Muttaqi) ನಿಯೋಗದ ಸಭೆಯ ಬಳಿಕ ಭಾರತ ಈ ಬಗ್ಗೆ ಘೋಷಣೆ ಮಾಡಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್, ಕಾಬೂಲ್‌ನಲ್ಲಿರುವ ಭಾರತದ ತಾಂತ್ರಿಕ ಮಿಷನ್‌ನ್ನು ಭಾರತದ ರಾಯಭಾರ ಕಚೇರಿಯ ಸ್ಥಾನಮಾನಕ್ಕೆ ಉನ್ನತೀಕರಿಸಲಾಗಿದೆ. ಈ ನಿರ್ಧಾರ ಅಫ್ಘಾನಿಸ್ತಾನದೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸುವ ನಮ್ಮ ಉದ್ದೇಶವನ್ನು ಎತ್ತಿ ತೋರಿಸುತ್ತದೆ. ಅಲ್ಲದೇ ಇದು ಅಫ್ಘಾನ್ ಜನರು ಮತ್ತು ಅವರ ಭವಿಷ್ಯದ ಬಗ್ಗೆ ಭಾರತದ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್‌ ಬಂದ್‌

    ಭಾರತವು ಅಫ್ಘಾನಿಸ್ತಾನದ ಮೂಲಸೌಕರ್ಯ ಉಪಕ್ರಮಗಳಿಗೆ ಬೆಂಬಲವನ್ನು ನೀಡುತ್ತಿದೆ. ಇದರ ಜೊತೆ ಈಗಾಗಲೇ ನಡೆಯುತ್ತಿರುವ ಇತರ ಯೋಜನೆಗಳನ್ನು ಪೂರ್ಣಗೊಳಿಸುವ ಕ್ರಮಗಳನ್ನು ನಾವು ಚರ್ಚಿಸಬಹುದು. ಇದರ ಜೊತೆ ಭಾರತವು ಆರು ಹೊಸ ಅಭಿವೃದ್ಧಿ ಯೋಜನೆಗಳನ್ನು ಸಹ ಪ್ರಾರಂಭಿಸಲಿದೆ. ಅವುಗಳ ವಿವರಗಳನ್ನು ಮಾತುಕತೆಯ ನಂತರ ಅಂತಿಮಗೊಳಿಸಲಾಗುವುದು.

    ಎರಡೂ ರಾಷ್ಟ್ರಗಳು ಗಡಿಯಾಚೆಗಿನ ಭಯೋತ್ಪಾದನೆಯ ಬೆದರಿಕೆ ಎದುರಿಸುತ್ತಿದೆ. ಭಯೋತ್ಪಾದನೆಯನ್ನು ಎದುರಿಸಲು ನಾವು ಪ್ರಯತ್ನ ಮುಂದುವರಿಸಬೇಕು ಎಂದು ಅವರು ಹೇಳಿದರು. ಇದೇ ವೇಳೆ ಪಹಲ್ಗಾಮ್‌ ದಾಳಿಯ ನಡುವೆ ಎರಡು ದೇಶಗಳ ನಡುವಿನ ಸಂಬಂಧ ಹಾಗೂ ಮುಂದುವರಿದಿದ್ದ ವ್ಯಾಪಾರದ ವಿಚಾರ ಚರ್ಚೆಯಾಯಿತು.

    ಭಾರತವು ಅಫ್ಘಾನ್ ಆಸ್ಪತ್ರೆಗಳಿಗೆ MRI ಮತ್ತು CT ಸ್ಕ್ಯಾನ್ ಯಂತ್ರಗಳನ್ನು ಒದಗಿಸಲಿದೆ. ರೋಗನಿರೋಧಕ ಮತ್ತು ಕ್ಯಾನ್ಸರ್ ಔಷಧಿಗಳಿಗೆ ಲಸಿಕೆಗಳನ್ನು ಒದಗಿಸಲಿದೆ. 20 ಆಂಬ್ಯುಲೆನ್ಸ್ ದೇಣಿಗೆಯ ಭಾಗವಾಗಿ ಐದು ಆಂಬ್ಯುಲೆನ್ಸ್‌ಗಳನ್ನು ಅಫ್ಘಾನ್ ನಿಯೋಗಕ್ಕೆ ಇದೇ ವೇಳೆ ಅವರು ಹಸ್ತಾಂತರಿಸಿದರು.

    ಇತ್ತೀಚಿಗೆ ಅಫ್ಘಾನ್‌ನಲ್ಲಿ ಭೂಕಂಪ ಸಂಭವಿಸಿದ್ದಾಗ ಭಾರತವು ಕೆಲವೇ ಗಂಟೆಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ತಲುಪಿಸಿತ್ತು. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಮನೆಗಳನ್ನು ಪುನರ್ನಿರ್ಮಿಸಲು ಸಹಾಯವನ್ನು ನೀಡಿತ್ತು. ನೆರವು ಇನ್ನೂ ಮುಂದುವರೆದಿದೆ. ಇನ್ನೂ ಕಾಬೂಲ್ ಮತ್ತು ನವದೆಹಲಿ ನಡುವೆ ಹೆಚ್ಚುವರಿ ವಿಮಾನಗಳ ಹಾರಾಟವನ್ನು ಚರ್ಚಿಸಿ, ವ್ಯಾಪಾರ ಮತ್ತು ವಾಣಿಜ್ಯವನ್ನು ಹೆಚ್ಚಿಸುವಲ್ಲಿ ಆಸಕ್ತಿ ಇದೆ ಎಂದು ಜೈಶಂಕರ್ ಹೇಳಿದರು.

    ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಮತ್ತು ತರಬೇತಿಯನ್ನು ಉಲ್ಲೇಖಿಸಿ ಆಫ್ಘನ್ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಏಪ್ರಿಲ್ 2025 ರಲ್ಲಿ ಹೊಸದಾಗಿ ಪರಿಚಯಿಸಲಾದ ವೀಸಾ ಮಾಡ್ಯೂಲ್ ವೈದ್ಯಕೀಯ, ವ್ಯವಹಾರ ಮತ್ತು ವಿದ್ಯಾರ್ಥಿ ಉದ್ದೇಶಗಳಿಗಾಗಿ ನೀಡಲಾಗುವ ವೀಸಾಗಳಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ. ಇದೇ ವೇಳೆ ಅಫ್ಘಾನ್‌ ಕ್ರಿಕೆಟ್‌ ತಂಡಕ್ಕೆ ತನ್ನ ಬೆಂಬಲ ನೀಡಲಿದೆ ಎಂದು ಇದೇ ವೇಳೆ ಅವರು ಹೇಳಿದರು. ಇದನ್ನೂ ಓದಿ: ಭಯೋತ್ಪಾದಕ ಗುಂಪು ಜೆಇಎಂ ಮಹಿಳಾ ವಿಭಾಗ ಆರಂಭ – ‘ಆಪರೇಷನ್‌ ಸಿಂಧೂರ’ದಲ್ಲಿ ಗಂಡನ ಕಳೆದುಕೊಂಡ ಮಹಿಳೆಗೆ ಚುಕ್ಕಾಣಿ

  • ಕಾಬೂಲ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್‌ ಬಂದ್‌

    ಕಾಬೂಲ್‌ ಮೇಲೆ ಪಾಕ್‌ ಏರ್‌ಸ್ಟ್ರೈಕ್‌ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್‌ ಬಂದ್‌

    – ತಾಲಿಬಾನ್‌ ವಿದೇಶಾಂಗ ಸಚಿವ ಭಾರತದಲ್ಲಿರುವಾಗ ದಾಳಿ

    ಕಾಬೂಲ್/ ಇಸ್ಲಾಮಾಬಾದ್‌: ಗುರುವಾರ ರಾತ್ರಿ ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್‌ (Kabul) ನಗರದ ಮೇಲೆ ಪಾಕಿಸ್ತಾನ (Pakistan) ಯುದ್ಧ ವಿಮಾನಗಳನ್ನು ಬಳಸಿ ವಾಯು ದಾಳಿ (Air Strike) ನಡೆಸಿದೆ.

    ಕಾಬೂಲ್ ನಗರದಲ್ಲಿ ಸ್ಫೋಟದ ಶಬ್ದ ಕೇಳಿಬಂದಿದೆ. ಯಾರೂ ಭಯಪಡುವ ಅಗತ್ಯವಿಲ್ಲ.ಘಟನೆಯ ತನಿಖೆ ನಡೆಯುತ್ತಿದೆ, ಇಲ್ಲಿಯವರೆಗೆ ಯಾವುದೇ ಹಾನಿಯ ವರದಿ ಬಂದಿಲ್ಲ ಎಂದು ಅಫ್ಘಾನ್-ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಕಾಬೂಲ್‌ನ ಪೂರ್ವ ಭಾಗದಲ್ಲಿರುವ ತಾಲಿಬಾನ್‌ ಸರ್ಕಾರದ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ.

    ದೇಶದ ಒಳಗಡೆ ನಡೆಯುತ್ತಿರುವ ಭಯೋತ್ಪಾದಕ ದಾಳಿಗೆ ತಾಲಿಬಾನ್‌ನಲ್ಲಿರುವ ತೆಹ್ರೀಕ್-ಇ-ತಾಲಿಬಾನ್(TTP) ಉಗ್ರರೇ ಕಾರಣ ಎಂದು ಪಾಕಿಸ್ತಾನ ದೂರಿದೆ. ಈ ಉಗ್ರರಿಗೆ ಅಫ್ಘಾನಿಸ್ತಾನ ಬೆಂಬಲ ನೀಡುತ್ತಿರುವುದಕ್ಕೆ ತಾಲಿಬಾನ್‌ ಸರ್ಕಾರದ ವಿರುದ್ಧ ಪಾಕ್‌ ಸಿಟ್ಟಾಗಿದೆ..  ಇದನ್ನೂ ಓದಿ:  ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ (Amir Khan Muttaqi) ಭಾರತಕ್ಕೆ ಭೇಟಿ ನೀಡುತ್ತಿರುವ ಸಮಯದಲ್ಲಿ ಮತ್ತು ಇಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಸಲು ಸಿದ್ಧರಾಗಿರುವ ಸಮಯದಲ್ಲಿ ಕಾಬೂಲ್‌ನಲ್ಲಿ ಪಾಕಿಸ್ತಾನ ದಾಳಿ ನಡೆಸಿರುವುದು ಮಹತ್ವ ಪಡೆದಿದೆ.

    ಕಾಬೂಲ್‌ ಮೇಲೆ ಏರ್‌ಸ್ಟ್ರೈಕ್‌ ನಡೆದ ಬೆನ್ನಲ್ಲೇ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ ಮತ್ತು ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯಲ್ಲಿ ಮುಂದಿನ ಆದೇಶ ಜಾರಿಯಾಗುವವರೆಗೂ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

  • ಅಫ್ಘಾನಿಸ್ತಾನ ಭೂಕಂಪ – ಸಾವಿನ ಸಂಖ್ಯೆ 800ಕ್ಕೆ ಏರಿಕೆ: 2000ಕ್ಕೂ ಹೆಚ್ಚು ಜನರಿಗೆ ಗಾಯ

    ಅಫ್ಘಾನಿಸ್ತಾನ ಭೂಕಂಪ – ಸಾವಿನ ಸಂಖ್ಯೆ 800ಕ್ಕೆ ಏರಿಕೆ: 2000ಕ್ಕೂ ಹೆಚ್ಚು ಜನರಿಗೆ ಗಾಯ

    -ಮಾನವೀಯ ದೃಷ್ಟಿಯಿಂದ ಸಹಾಯ ಮಾಡಲು ಸಿದ್ಧ ಎಂದ ಮೋದಿ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಸಂಭವಿಸಿದ 6.0 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಈವರೆಗೆ 800 ಮಂದಿ ಬಲಿಯಾಗಿದ್ದು, 2000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ಭಾನುವಾರ ಮಧ್ಯರಾತ್ರಿ (ಆ.31) ಜಲಾಲಾಬಾದ್‌ನ ಪೂರ್ವ ಈಶಾನ್ಯಕ್ಕೆ ಸುಮಾರು 27 ಕಿ.ಮೀ ದೂರದಲ್ಲಿ 6.0 ತೀವ್ರತೆಯ ಭೂಕಂಪ ದಾಖಲಾಗಿದೆ. ಪೂರ್ವ ಅಫ್ಘಾನಿಸ್ತಾನದಾದ್ಯಂತ ಮೊದಲು ಭೂಕಂಪ ಸಂಭವಿಸಿದ ನಂತರ 30 ನಿಮಿಷಗಳ ಅವಧಿಯಲ್ಲಿಯೇ ಮತ್ತೆ ಮೂರರಿಂದ ನಾಲ್ಕು ಕಂಪನಗಳು ಸಂಭವಿಸಿವೆ. ಅವುಗಳ ತೀವ್ರತೆ 4 ರಿಂದ 5ರವರೆಗೆ ಇತ್ತು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ಪ್ರಕಾರ, ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಆಗ್ನೇಯ ಅಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳದಲ್ಲಿ 34.50ಓ ಅಕ್ಷಾಂಶ ಮತ್ತು 70.81ಇ ರೇಖಾಂಶದಲ್ಲಿದೆ ಎಂದು ತಿಳಿಸಿದೆ.

    ಭೂಕಂಪದಿಂದಾಗಿ ಕುನಾರ್ ಪ್ರಾಂತ್ಯದ ಮೂರು ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗಿದ್ದು, ನುರ್ಗಲ್, ಚಾವ್ಕೇ ಮತ್ತು ವಾಟಪುರ್ ಜಿಲ್ಲೆಗಳಲ್ಲಿ ತೀವ್ರ ಹಾನಿಯಾಗಿದೆ. ಜೊತೆಗೆ ಹಲವರು ಮನೆಯ ಛಾವಣಿ ಅಡಿಯಲ್ಲಿಯೇ ಸಿಲುಕಿ ಸಾವನ್ನಪ್ಪಿದ್ದಾರೆ. ಸದ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರದೇಶದ ಗಡಿಯಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ. ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ದೆಹಲಿಯ ಎನ್‌ಸಿಆರ್ ಮತ್ತು ಇತರ ನಗರಗಳ ನಿವಾಸಿಗಳು ಕಂಪನದ ಅನುಭವವಾಗಿ ಭಯದಿಂದ ಮನೆಯಿಂದ ಹೊರಗೆ ಓಡಿದ್ದಾರೆ ಎಂದು ವರದಿಯಾಗಿದೆ.

    ಇನ್ನೂ ಈ ಸಂಬಂಧ ಪ್ರಧಾನಿ ಮೋದಿ ಅಫ್ಘಾನಿಸ್ತಾನಕ್ಕೆ ಅಗತ್ಯ ನೆರವು ಕೊಡ್ತೇವೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ಇಂತಹ ಸಮಯದಲ್ಲಿ ಮೃತರ ಕುಟುಂಬಸ್ಥರಿಗಾಗಿ ನಾವು ಪಾರ್ಥಿಸುತ್ತೇವೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ. ಮಾನವೀಯ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧವಿದ್ದೇನೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ 15 ಟನ್ ಪರಿಹಾರ ಸಾಮಾಗ್ರಿ ತೆರಳಿದೆ.ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

     

  • ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

    ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

    • ಭೂಕಂಪದ ತೀವ್ರತೆಗೆ 3 ಹಳ್ಳಿಗಳು ಸಂಪೂರ್ಣ ನಾಶ

    ಕಾಬುಲ್‌: ಅಫ್ಘಾನಿಸ್ತಾನದಲ್ಲಿ (Afghanistan) ಭಾನುವಾರ ರಾತ್ರಿ (ಆ.31) ಸಂಭವಿಸಿದ 6.0 ತೀವ್ರತೆಯ ಭೂಕಂಪದಲ್ಲಿ (Earthquake) ಕನಿಷ್ಠ 622 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

    ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಆಗ್ನೇಯ ಅಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳ, 34.50N ಅಕ್ಷಾಂಶ ಮತ್ತು 70.81E ರೇಖಾಂಶದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಇದನ್ನೂ ಓದಿ: ಸುನಾಮಿ ಎಂದರೇನು? ಭೂಕಂಪಕ್ಕೂ ಇದಕ್ಕೂ ಏನು ಸಂಬಂಧ?

    ಭೂಕಂಪದಿಂದ ಕುನಾರ್ ಪ್ರಾಂತ್ಯದ ಮೂರು ಹಳ್ಳಿಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ಇನ್ನೂ ಹಲವಾರು ಹಳ್ಳಿಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಒಂದೇ ಗ್ರಾಮದಲ್ಲಿ 30 ಮಂದಿ ಸಾವಿಗೀಡಾಗಿದ್ದಾರೆ. ಸಾವುನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಫ್ಘಾನ್ ಆರೋಗ್ಯ ಸಚಿವಾಲಯ ವಕ್ತಾರ ಶರಫತ್ ಜಮಾನ್ ತಿಳಿಸಿದ್ದಾರೆ.

    ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ ಬೇರೆ ದೇಶಗಳು ರಕ್ಷಣಾ ಅಥವಾ ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡಲು ಮುಂದೆ ಬಂದಿಲ್ಲ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

    ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ದೆಹಲಿ ಎನ್‌ಸಿಆರ್ ಮತ್ತು ಇತರ ನಗರಗಳ ನಿವಾಸಿಗಳು ಕಂಪನದ ಅನುಭವದಿಂದ ಭಯದಿಂದ ಕಟ್ಟಡಗಳಿಂದ ಹೊರಗೆ ಓಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ನಿರಂತರ ಹಿಮಸ್ಫೋಟದ ನಡುವೆಯೂ ಚಂಬಾದಲ್ಲಿ ಎರಡು ಬಾರಿ ಭೂಕಂಪನ

  • ಅಫ್ಘಾನಿಸ್ತಾನ | ಬಸ್‌ಗೆ ಬೆಂಕಿ ತಗುಲಿ 17 ಮಕ್ಕಳು ಸೇರಿ 76 ಮಂದಿ ಸುಟ್ಟು ಕರಕಲು

    ಅಫ್ಘಾನಿಸ್ತಾನ | ಬಸ್‌ಗೆ ಬೆಂಕಿ ತಗುಲಿ 17 ಮಕ್ಕಳು ಸೇರಿ 76 ಮಂದಿ ಸುಟ್ಟು ಕರಕಲು

    – ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಕಾಬೂಲ್: ಬಸ್ಸೊಂದು ಟ್ರಕ್ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ತಗುಲಿ 76 ಜನರು ಸಾವನ್ನಪ್ಪಿರುವ ಭೀಕರ ಘಟನೆ ಗುಜಾರಾ ಜಿಲ್ಲೆಯ ಹೆರಾತ್ ನಗರದ ಹೊರವಲಯದಲ್ಲಿ ನಡೆದಿದೆ.

    ಮೂಲಗಳ ಪ್ರಕಾರ, ಬಸ್ಸು ಇಸ್ಲಾಂ ಖಲಾ ಪ್ರದೇಶದಿಂದ ಕಾಬೂಲ್‌ಗೆ ಇತ್ತೀಚಿಗೆ ಇರಾನ್‌ನಿಂದ ಗಡೀಪಾರು ಮಾಡಲಾಗಿದ್ದ ನಿರಾಶ್ರಿತರನ್ನು ಕರೆದೊಯ್ಯುತ್ತಿತ್ತು ಎನ್ನಲಾಗಿದೆ. ಜೊತೆಗೆ ಬಸ್ಸಿನ ಅತಿಯಾದ ವೇಗದಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ

    ಬಸ್ಸು ಟ್ರಕ್ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಪ್ರಮಾಣದ ಬೆಂಕಿ ಆವರಿಸಿಕೊಂಡಿದ್ದು, ಬಸ್‌ನಲ್ಲಿದ್ದವರು ಸೇರಿದಂತೆ ಕೆಲವರು ಸುಟ್ಟು ಕರಕಲಾಗಿದ್ದಾರೆ. ಅವಘಡದಲ್ಲಿ ಈವರೆಗೂ 17 ಮಕ್ಕಳು ಸೇರಿದಂತೆ 76 ಜನರು ಸಾವನ್ನಪ್ಪಿದ್ದಾರೆ. ಕೆಲವರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.

    ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಟ್ರಕ್‌ನಲ್ಲಿದ್ದ ಇಬ್ಬರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಕೂಡ ಮೃತಪಟ್ಟಿದ್ದಾರೆ.ಇದನ್ನೂ ಓದಿ: ಚಹಲ್‌ಗೆ ಟಕ್ಕರ್ ಕೊಟ್ಟ ಮಾಜಿ ಪತ್ನಿ ಧನಶ್ರೀ

  • ನೀರಿಗಾಗಿ ಹಾಹಾಕಾರ – ಇನ್ನು 5ವರ್ಷ ಮಾತ್ರ ಬಾಕಿ.. ಈ ನಗರದಲ್ಲಿ ನೀರೇ ಇರಲ್ಲ!

    ನೀರಿಗಾಗಿ ಹಾಹಾಕಾರ – ಇನ್ನು 5ವರ್ಷ ಮಾತ್ರ ಬಾಕಿ.. ಈ ನಗರದಲ್ಲಿ ನೀರೇ ಇರಲ್ಲ!

    ಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್​ನಲ್ಲಿ (Kabul) ನೀರಿನ ತೀವ್ರ ಸಂಕಷ್ಟ ಎಂದುರಾಗಿದೆ. ಕೇವಲ 5 ವರ್ಷಗಳಲ್ಲಿ ಈ ಮಹಾನಗರ ನೀರಿಲ್ಲದೇ (Water) ಒಣಗಿ ಹೋಗುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ಮರ್ಸಿ ಕಾರ್ಪ್ಸ್ ಎಚ್ಚರಿಕೆಯ ವರದಿಯನ್ನು ನೀಡಿದೆ.

    ನೀರಿನ ಸಮಸ್ಯೆಯಿಂದಾಗಿ ಜನ ತಳ್ಳುವ ಗಾಡಿಗಳಲ್ಲಿ ನೀರು ಸಂಗ್ರಹಿಸಲು ಕಿಲೋ ಮೀಟರ್‌ಗಟ್ಟಲೇ ಅಲೆಯಬೇಕಾಗಿದೆ. ಕಾಬೂಲ್​ನಲ್ಲಿರುವ ತೋಟಗಳು, ಮರಗಳೆಲ್ಲಾ ಒಣಗಿ ಹೋಗುತ್ತಿವೆ. ಈಗಾಗಲೇ ನಗರದ ಅರ್ಧದಷ್ಟು ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿ ಹೋಗಿವೆ. ನೀರಿನ ಕೊರತೆ ಆ ದೇಶಕ್ಕೆ ಮಾರಕವಾಗಿ ಕಾಡುತ್ತಿದೆ.

    ನೀರಿನ ಕೊರತೆ ಉಂಟಾಗಿದ್ದು ಯಾಕೆ? 

    ಅಫ್ಘಾನಿಸ್ಥಾನದಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಅದರ ಜೊತೆಗೆ ಜನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 2001ರಲ್ಲಿ ಕಾಬೂಲ್​​ನಲ್ಲಿ 1 ಮಿಲಿಯನ್‌ಗಿಂತಲೂ ಕಡಿಮೆ ಜನರಿದ್ದರು. ಆದರೆ ಆ ಸಂಖ್ಯೆ ಈಗ 7 ಪಟ್ಟು ಹೆಚ್ಚಾಗಿದೆ! ಇದರಿಂದ ನೀರಿನ ಬಳಕೆ ಕೂಡ ಹೆಚ್ಚಾಗಿದೆ. ಇಲ್ಲಿನ ನೀರನ್ನೂ ಪ್ರತಿದಿನದ ದಿನಸಿ ಸಾಮಾನುಗಳಂತೆ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆ ಮಟ್ಟದಲ್ಲಿ ನೀರಿನ ಬರ ಎದುರಾಗಿದೆ.

    ಕಾಬೂಲ್​ ನಗರದಲ್ಲಿ 80% ಅಂತರ್ಜಲ ಇದೆ. ಆದರೆ​ ಆ ನೀರು  ಕಲುಷಿತಗೊಂಡಿದೆ. ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಒಳಚರಂಡಿ, ಲವಣಾಂಶ ಮತ್ತು ಆರ್ಸೆನಿಕ್ ಸೇರಿರುವ ನೀರು ಸೇರಿಕೊಂಡಿದೆ. ಇದು ಕುಡಿಯಲು ಹಾಗೂ ಕೃಷಿಗೆ ಬಳಸಲು ಯೋಗ್ಯವಾಗಿಲ್ಲ. ಈಗಾಗಲೇ ಕಾಬೂಲ್​ನ ಜನ ನೀರಿನ ಸಮಸ್ಯೆಯಿಂದ ವಲಸೆ ಹೋಗುತ್ತಿದ್ದಾರೆ. 

    ನೀರಿಗಾಗಿ ಪಂಜ್‌ಶೀರ್ ನದಿ ಪೈಪ್‌ಲೈನ್

    ಪಂಜ್‌ಶೀರ್ ನದಿ ಪೈಪ್‌ಲೈನ್ ಯೋಜನೆ ಮೂಲಕ ಕಾಬೂಲ್‌ಗೆ ನೀರು ತರಲು ಪ್ರಯತ್ನಿಸಲಾಗುತ್ತಿದೆ. ಈ ಯೋಜನೆಯ ಕಾಮಗಾರಿ ಇನ್ನೂ ನಡೆಯುತ್ತಿದೆ. ಈ ಯೋಜನೆ ಪೂರ್ತಿಯಾದರೆ ನಗರದ ಅಂತರ್ಜಲ ಮಟ್ಟ  ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಈ ಯೋಜನೆಯ ಪೂರ್ತಿಗೊಳಿಸಲು ಬಜೆಟ್​ ಅನುಮೋದನೆಗಾಗಿ ಕಾಯಲಾಗುತ್ತಿದೆ.

    ಕಾರ್ಪ್ಸ್ ವರದಿಯಲ್ಲಿ ಏನಿದೆ?

    ಕಾಬೂಲ್‌ನಲ್ಲಿ ಪ್ರತೀ ವರ್ಷ ಬಳಸುವ ನೀರಿನ ಪ್ರಮಾಣವು ಪ್ರಕೃತಿಯಿಂದ ಮರುಪೂರಣಗೊಳ್ಳುವುದಕ್ಕಿಂತ 44 ಮಿಲಿಯನ್ ಘನ ಮೀಟರ್ ಹೆಚ್ಚಾಗಿದೆ. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಕಾಬೂಲ್ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಕಳೆದ ದಶಕದಲ್ಲಿ, ಕಾಬೂಲ್‌ನ ಅಂತರ್ಜಲ ಮಟ್ಟವು 25 ರಿಂದ 30 ಮೀಟರ್‌ಗಳಷ್ಟು (82 ರಿಂದ 98 ಅಡಿ) ಕುಸಿದಿದೆ. ವರ್ಷಕ್ಕೆ 44 ಮಿಲಿಯನ್ ಘನ ಮೀಟರ್‌ಗಳಷ್ಟು ನೀರನ್ನು ಹೊರತೆಗೆಯುತ್ತಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಇದು ಮುಂದುವರಿದರೆ, 2030 ರ ವೇಳೆಗೆ ಕಾಬೂಲ್‌ನ ಅಂತರ್ಜಲ ಮಟ್ಟ ಮತ್ತಷ್ಟು ಕುಸಿದು ನೀರೇ ಇಲ್ಲದ ನಗರವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

    ನೀರಿಲ್ಲದೆ ಕಾಬೂಲ್‌ನ ಜನರು ತಮ್ಮ ಮನೆಗಳನ್ನು ತೊರೆಯಬೇಕಾಗುತ್ತದೆ. ಈಗ ಕ್ರಮ ಕೈಗೊಳ್ಳದಿದ್ದರೆ, ದೇಶಾದ್ಯಂತ ವ್ಯಾಪಕ ವಲಸೆ ಮತ್ತು ಬಿಕ್ಕಟ್ಟು ಉಂಟಾಗುತ್ತದೆ. ಕಾಬೂಲ್‌ನ ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದ ಭೂಗತ ಕೊಳವೆಬಾವಿಗಳಲ್ಲಿ ಅರ್ಧದಷ್ಟು ಈಗಾಗಲೇ ಬತ್ತಿಹೋಗಿವೆ. 2001 ರಿಂದ ಕಾಬೂಲ್‌ನ ಜನಸಂಖ್ಯೆ 7 ಪಟ್ಟು ಹೆಚ್ಚಾಗಿದೆ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಪಂಜ್‌ಶೀರ್ ನದಿಯಿಂದ ನೀರಿನ ಪೈಪ್‌ಲೈನ್ ಯೋಜನೆಯು ಕಾಬೂಲ್‌ನ ಸುಮಾರು 20 ಲಕ್ಷ ಜನರಿಗೆ ನೀರನ್ನು ಒದಗಿಸಬಹುದು. ಆದರೆ ಇದಕ್ಕೆ ಭಾರೀ ಹಣ ಖರ್ಚುಮಾಡಬೇಕಿದೆ.

    ಹಲವು ವರ್ಷಗಳಿಂದ ಮಳೆ ಕೊರತೆ 

    ಕಾಬೂಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆ ತೀವ್ರವಾಗಿ ಕಡಿಮೆಯಾಗಿದೆ. ಅಂತರ್ಜಲವು ಮುಖ್ಯವಾಗಿ ಹಿಂದೂ ಕುಶ್ ಪರ್ವತಗಳಿಂದ ಬರುವ ಹಿಮ ಕರಗುವಿಕೆ ಮತ್ತು ಹಿಮನದಿಗಳಿಂದ ಮರುಪೂರಣಗೊಳ್ಳುತ್ತದೆ. ಆದರೆ ಅಕ್ಟೋಬರ್ 2023 ರಿಂದ ಜನವರಿ 2024 ರವರೆಗೆ, ಅಫ್ಘಾನಿಸ್ತಾನವು ತನ್ನ ಸಾಮಾನ್ಯ ಚಳಿಗಾಲದ ಮಳೆಯ ಕೇವಲ 45 ರಿಂದ 60% ಮಾತ್ರ ಪಡೆದಿದೆ. ಇದರ ಪರಿಣಾಮವಾಗಿ, ಭವಿಷ್ಯದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆಯಿದೆ.

    ಈ ಬಿಕ್ಕಟ್ಟಿನ ಪರಿಣಾಮವಾಗಿ, ಕನಿಷ್ಠ 30 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳಬೇಕಾಗಬಹುದು. ಯುನಿಸೆಫ್ ನೀಡಿರುವ ಮಾಹಿತಿ ಪ್ರಕಾರ, 50% ಬಾವಿಗಳು ಬತ್ತಿ ಹೋಗಿವೆ. ಇವು ನಗರದ ಹೆಚ್ಚಿನ ಜನರಿಗೆ ಕುಡಿಯುವ ನೀರಿನ ಮೂಲವಾಗಿದ್ದವು. ಈಗ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.  

  • ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕು – ಅಫ್ಘಾನ್ ನಿರ್ಧಾರವನ್ನು ಸ್ವಾಗತಿಸಿದ ಭಾರತ

    ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕು – ಅಫ್ಘಾನ್ ನಿರ್ಧಾರವನ್ನು ಸ್ವಾಗತಿಸಿದ ಭಾರತ

    ನವದೆಹಲಿ: ಅಫ್ಘಾನಿಸ್ತಾನದ (Afghanistan) ಹಿಂದೂಗಳು ಮತ್ತು ಸಿಖ್ (Hindus and Sikhs) ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕುಗಳನ್ನು ಮರುಸ್ಥಾಪಿಸುವ ತಾಲಿಬಾನ್ (Taliban) ಸರ್ಕಾರದ ಕ್ರಮವನ್ನು ಭಾರತ (India) ಸಕಾರಾತ್ಮಕ ನಡೆ ಎಂದು ಬಣ್ಣಿಸಿದೆ.

    ತಾಲಿಬಾನ್ ಆಡಳಿತವು ಹಿಂದೂ ಮತ್ತು ಸಿಖ್ ಸಮುದಾಯಗಳ ಆಸ್ತಿ ಹಕ್ಕುಗಳನ್ನು ಮರುಸ್ಥಾಪಿಸಲು ಕ್ರಮಗಳನ್ನು ಕೈಗೊಂಡಿದೆ. ನಾವು ಈ ಬಗ್ಗೆ ವರದಿಗಳನ್ನು ನೋಡಿದ್ದೇವೆ. ತಾಲಿಬಾನ್ ಸರ್ಕಾರ ಅಫ್ಘಾನ್ ಹಿಂದೂ ಮತ್ತು ಸಿಖ್ ಸಮುದಾಯಕ್ಕೆ ಸೇರಿದ ತಮ್ಮ ನಾಗರಿಕರಿಗೆ ಆಸ್ತಿ ಹಕ್ಕುಗಳನ್ನು ಮರುಸ್ಥಾಪಿಸಲು ನಿರ್ಧರಿಸಿದ್ದರೆ ಇದನ್ನು ಸಕಾರಾತ್ಮಕ ಬೆಳವಣಿಗೆ ಎಂದು ನಾವು ಪರಿಗಣಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

    ಹಿಂದಿನ ಅವಧಿಯಲ್ಲಿ ಸೇನಾಧಿಕಾರಿಗಳು ವಶಪಡಿಸಿಕೊಂಡ ಖಾಸಗಿ ಭೂಮಿಯನ್ನು ಮಾಲೀಕರಿಗೆ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವನ್ನು ಸ್ಥಾಪಿಸಿದೆ ಎಂದು ವರದಿಯಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್‍ನ ವಿಭಾಗದ ಮುಖ್ಯಸ್ಥರಾಗಿರುವ ಜೆ.ಪಿ ಸಿಂಗ್, ಕಳೆದ ತಿಂಗಳು ತಾಲಿಬಾನ್‍ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅವರ ಭೇಟಿಯ ಬಳಿಕ ಈ ಬೆಳವಣಿಗೆ ನಡೆದಿದೆ.

    ಭಾರತವು ಅಫ್ಘಾನ್ ಮಣ್ಣನ್ನು ಯಾವುದೇ ದೇಶದ ವಿರುದ್ಧ, ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಾರದು ಎಂದು ಒತ್ತಾಯಿಸುತ್ತಿದೆ. ದೇಶದಲ್ಲಿ ತೆರೆದುಕೊಳ್ಳುತ್ತಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಅಫ್ಘಾನಿಸ್ತಾನಕ್ಕೆ ಅಡೆತಡೆಯಿಲ್ಲದ ಮಾನವೀಯ ನೆರವು ನೀಡಲು ಭಾರತವು ಸಹಾಯ ಮಾಡುತ್ತಿದೆ.

    ಜೂನ್ 2022 ರಲ್ಲಿ ಅಫ್ಘಾನ್ ರಾಜಧಾನಿಯಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸುವ ಮೂಲಕ ಭಾರತವು ಕಾಬೂಲ್‍ನಲ್ಲಿ (Kabul) ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿತು. ಇದಕ್ಕೂ ಮೊದಲು 2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಹಿಸಿಕೊಂಡ ನಂತರ ಅವರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಭಾರತ, ತನ್ನ ಅಧಿಕಾರಿಗಳನ್ನು ರಾಯಭಾರ ಕಚೇರಿಯಿಂದ ಹಿಂಪಡೆದಿತ್ತು.

  • ಚೀನಾದಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿಯಲ್ಲೂ ಕಂಪಿಸಿದ ಭೂಮಿ, ಬೆಚ್ಚಿಬಿದ್ದ ಜನ

    ಚೀನಾದಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿಯಲ್ಲೂ ಕಂಪಿಸಿದ ಭೂಮಿ, ಬೆಚ್ಚಿಬಿದ್ದ ಜನ

    ನವದೆಹಲಿ: ಚೀನಾದ ದಕ್ಷಿಣ ಕ್ಸಿನ್‌ಜಿಯಾಂಗ್‌ನಲ್ಲಿ (Southern part of China’s) ಸೋಮವಾರ ತಡರಾತ್ರಿ 7.2 ತೀವ್ರತೆಯ ಪ್ರಬಲ ಭೂಕಂಪನ (Earthquake) ಸಂಭವಿಸಿದ್ದು, ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಸದ್ಯ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಆಸ್ತಿಪಾಸ್ತಿ ಹಾನಿಯಾದ ಬಗ್ಗೆಯೂ ವರದಿಯಾಗಿಲ್ಲ.

    ರಿಕ್ಟರ್‌ ಮಾಪಕದಲ್ಲಿ ಭೂಕಂಪನ ತೀವ್ರತೆ 7.2 ಎಂದು ಗುರುತಿಸಲಾಗಿದ್ದು, ಸುಮಾರು 80 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ‘ಜೈ ಶ್ರೀರಾಮ್‌ ಇಂಡಿಯಾ’: ವಿಶೇಷ ಪೋಸ್ಟ್‌ ಮೂಲಕ ರಾಮಮಂದಿರ ಪ್ರಾಣ ಪ್ರತಿಷ್ಠೆ ಆಚರಿಸಿದ ಡೇವಿಡ್‌ ವಾರ್ನರ್‌

    ಇದೇ ಜನವರಿ 11ರಂದು ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆ ಭೂಕಂಪ ಸಂಭವಿಸಿದ ನಂತರ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಲಘು ಭೂಕಂಪ ಸಂಭವಿಸಿದ್ದವು. ಕಾಬೂಲ್‌ನಿಂದ ಈಶಾನ್ಯಕ್ಕೆ 241 ಕಿಮೀ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿತ್ತು. ಪಾಕಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದನ್ನೂ ಓದಿ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ದಂಪತಿ

    47 ಮಂದಿ ಜೀವಂತ ಸಮಾಧಿ: ಸೋಮವಾರ ಬೆಳಿಗ್ಗೆ ಈಶಾನ್ಯ ಚೀನಾದ ಗುಡ್ಡಗಾಡು ಹಾಗೂ ಪರ್ವತ ಶ್ರೇಣಿಯಲ್ಲಿ ಭೂಕಂಪ ಸಂಭವಿಸಿದ್ದು, 47 ಮಂದಿ ಜೀವಂತ ಸಮಾಧಿಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿಯನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಪ್ರಸಾರಸಂಸ್ಥೆಗಳು ವರದಿ ಮಾಡಿವೆ. ಅಲ್ಲದೇ ದಿಢೀರ್‌ ಮಳೆ ಹಿನ್ನೆಲೆಯಲ್ಲಿ ಚೀನಾದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.