Tag: joint session

  • ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ, ಆರ್ಥಿಕ ಶಿಸ್ತು ಉತ್ತಮ – ಸರ್ಕಾರಕ್ಕೆ ರಾಜ್ಯಪಾಲರಿಂದ ಬಹುಪರಾಕ್

    ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ, ಆರ್ಥಿಕ ಶಿಸ್ತು ಉತ್ತಮ – ಸರ್ಕಾರಕ್ಕೆ ರಾಜ್ಯಪಾಲರಿಂದ ಬಹುಪರಾಕ್

    – ಸರ್ಕಾರದ 2 ವರ್ಷದ ಸಾಧನೆ, ಕಾರ್ಯಕ್ರಮಗಳಿಗೆ ಮೆಚ್ಚುಗೆ ಎಂದ ಗವರ್ನರ್

    ಬೆಂಗಳೂರು: ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ, ಆರ್ಥಿಕ ಶಿಸ್ತು ಉತ್ತಮವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಸರ್ಕಾರದ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಎಂದಿನಂತೆ ತಮ್ಮ ಭಾಷಣದಲ್ಲಿ ರಾಜ್ಯಪಾಲರು ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಹೊಗಳಿದರು.

    ಭಾಷಣದಲ್ಲಿ ಸರ್ಕಾರದ ಆರ್ಥಿಕ ಶಿಸ್ತು, ಕಾನೂನು ಸುವ್ಯವಸ್ಥೆ ಸದೃಢವಾಗಿದೆ ಎಂದು ರಾಜ್ಯಪಾಲರಿಂದ ಹೊಗಳಿಕೆ ಪಡೆದುಕೊಳ್ಳುವ ಮೂಲಕ ವಿಪಕ್ಷಗಳಿಗೆ ಸರ್ಕಾರ ತಿರುಗೇಟು ನೀಡಿತು. ಸರ್ಕಾರ ರಾಜ್ಯಪಾಲರ ಮೂಲಕ ಭಾಷಣ ಮಾಡಿಸಿ, ತನ್ನ ಎರಡು ವರ್ಷದ ಸಾಧನೆಗಳಿಗೆ ಬೆನ್ನು ತಟ್ಟಿಸಿಕೊಂಡಿದೆ. ಸರ್ಕಾರದ ಯೋಜನೆಗಳು, ನೀತಿ ನಿರೂಪಣೆ, ಕಳೆದ ಎರಡು ವರ್ಷಗಳ ಸರ್ಕಾರದ ಹಾದಿ ಬಗ್ಗೆ ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿ, ಸರ್ಕಾರ ಅಭಿವೃದ್ಧಿ ವೇಗವಾಗಿ ಸದೃಢಗೊಳಿಸಿದೆ. ಆಡಳಿತ ಅಂತಿಮವಾಗಿ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವಾಗಿ ಬಳಕೆಗೆ ಬದ್ಧವಾಗಿದೆ ಎಂದು ಘೋಷಿಸಿದ್ದಾರೆ. ಸರ್ಕಾರ ಆರ್ಥಿಕ ಶಿಸ್ತು ಕಾಯ್ದುಕೊಂಡಿದೆ, ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ ಎಂದು ಸರ್ಕಾರಕ್ಕೆ ಬಹುಪರಾಕ್ ಹೇಳಿದರು.ಇದನ್ನೂ ಓದಿ: ವೀರಪ್ಪ ಮೊಯ್ಲಿ ಹೇಳಿಕೆಗಿಂತಲೂ ಹೈಕಮಾಂಡ್ ಹೇಳಿಕೆ ಮುಖ್ಯ : ಸಿಎಂ

    ಒಟ್ಟು 39 ಪುಟಗಳ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು 1 ಗಂಟೆ 10 ನಿಮಿಷಗಳ ಅವಧಿಯಲ್ಲಿ ರಾಜ್ಯಪಾಲರು ಓದಿದರು. ಕಳೆದ ಬಜೆಟ್‌ನಲ್ಲಿ ಮಾಡಿದ್ದ 334 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಆಗಿದೆ. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಅಪರಾಧ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ ಎಂದು ಹೇಳುವ ಮೂಲಕ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸುತ್ತಿರುವ ವಿಪಕ್ಷಗಳಿಗೆ ಟಕ್ಕರ್ ಕೊಟ್ಟರು.

    ಸರ್ಕಾರದ ವಿತ್ತೀಯ ನಿರ್ವಹಣೆಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಎಸ್‌ಟಿ ತೆರಿಗೆ ಸಂಗ್ರಹ, ರಾಜಸ್ವಸ್ವೀಕೃತಿ, ಕೃಷಿ, ನೀರಾವರಿ, ಪಶು ಸಂಗೋಪನೆ, ಗ್ಯಾರಂಟಿ ಯೋಜನೆಗಳು, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಮುಂತಾದ ವಲಯಗಳಲ್ಲಿ ಕಳೆದೆರಡು ವರ್ಷಗಳ ಕಾರ್ಯಕ್ರಮ, ಕಾಮಗಾರಿ, ಅನುದಾನ ಬಗ್ಗೆ ಪ್ರಸ್ತಾಪಿಸಿ, ಶ್ಲಾಘಿಸಿದರು. ಇನ್ನೂ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರ ಪ್ರಸ್ತಾಪಿಸಿ, ಹಿಂದಿನ ನಡೆದಿದ್ದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗಳು ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿವೆ ಎಂದು ಹೇಳಿದರು.

    ಭಾಷಣದಲ್ಲಿ ಬೆಂಗಳೂರು ಟ್ರಾಫಿಕ್ ದಟ್ಟಣೆ ನಿಯಂತ್ರಣ ಬಗ್ಗೆ ಪ್ರಸ್ತಾಪಿಸಿದ್ದು, ಗಮನ ಸೆಳೆಯಿತು. ಮುಂದಿನ ದಿನಗಳಲ್ಲಿ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ, ರಸ್ತೆ ಮೇಲ್ಸೇತುವೆ ನಿರ್ಮಾಣ ಉದ್ದೇಶ ಬಗ್ಗೆ ಸರ್ಕಾರ ಉಲ್ಲೇಖ ಮಾಡಿದೆ. 40.50 ಕಿ.ಮೀ ಸಂಯುಕ್ತ ಮೆಟ್ರೋ ರಸ್ತೆ ಮೇಲ್ಸೇತುವೆ ಯೋಜನೆಗೆ 8,916 ಕೋಟಿ ವೆಚ್ಚದ ಮಾಹಿತಿ ಕೊಡಲಾಗಿದೆ. ಇನ್ನೂ ಪೆರಿಫರಲ್-1 ಯೋಜನೆಯಡಿ 73 ಕಿ.ಮೀ ಉದ್ಧದ ರಸ್ತೆ ನಿರ್ಮಾಣದ ಮಾಹಿತಿ ಇದೆ. ಮೆಟ್ರೋ ಪ್ರಗತಿಯಲ್ಲಿರೋ ಕಾಮಗಾರಿಗಳ ಪ್ರಸ್ತಾಪಿಸಲಾಗಿದೆ.

    ಆದರೆ ಹಲವು ಮುಖ್ಯ ಯೋಜನೆ, ಕಾರ್ಯಕ್ರಮಗಳನ್ನು ರಾಜ್ಯಪಾಲರ ಭಾಷಣದಲ್ಲಿ ಉದ್ದೇಶಪೂರ್ವಕವಾಗಿ ಸರ್ಕಾರ ಪ್ರಸ್ತಾಪಿಸಿಲ್ಲ. ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ, ಬ್ರ‍್ಯಾಂಡ್ ಬೆಂಗಳೂರು, ಟನೆಲ್ ರೋಡ್ ಪ್ರಾಜೆಕ್ಟ್, ಗ್ಯಾರಂಟಿಗಳಿಗೆ ಎಸ್‌ಸಿಎಸ್ಪಿ-ಟಿಎಸ್ಪಿ ಹಣ ಬಳಕೆ, ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿ, ವಿವಿಧ ನೀರಾವರಿ ಯೋಜನೆಗಳ ನಿರ್ದಿಷ್ಟ ಪ್ರಗತಿ ಹಂತ ಬಗ್ಗೆ ಮಾಹಿತಿಯೇ ಕೊಡದೇ ಜಾಣ ನಡೆ ಇಡಲಾಗಿದೆ.

    ರಾಜ್ಯಪಾಲರ ಭಾಷಣ ವೇಳೆ ಸದನದಲ್ಲಿ ಕಾಂಗ್ರೆಸ್ ಶಾಸಕರಿಂದ ಮೆಚ್ಚುಗೆ ಸಿಗಲಿಲ್ಲ. ಶಾಸಕರು ಭಾಷಣ ವೇಳೆ ಮೇಜು ಕುಟ್ಟದೇ ಸಾವಧಾನದಲ್ಲಿ ಕೂತು ಭಾಷಣ ಕೇಳಿದ್ದು, ಅಚ್ಚರಿ ಮೂಡಿಸಿತು. ಬಿಜೆಪಿ ಪರಿಷತ್ ಸದಸ್ಯರು ರಾಜ್ಯಪಾಲರ ಭಾಷಣವನ್ನು ಕೇಸರಿ ಶಾಲು ಹಾಕಿಕೊಂಡು ಕೇಳಿದರು. ರಾಜ್ಯಪಾಲರ ಭಾಷಣ ಮುಗಿದ ಬಳಿಕ ಬಿಜೆಪಿ ಶಾಸಕರಿಂದ ಭಾರತ್ ಮಾತಾಕೀ ಜೈ ಎಂದು ಘೋಷಣೆ ಮೊಳಗಿಸಲಾಯಿತು.ಇದನ್ನೂ ಓದಿ: ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳು ಹೇಳಿಸಿದ ಸರ್ಕಾರ: ಬಿಜೆಪಿ ಟೀಕೆ

     

  • ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಕಾಂಗ್ರೆಸ್‍ನಿಂದ ಸಪ್ತಾಸ್ತ್ರ ಪ್ರಯೋಗ

    ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಕಾಂಗ್ರೆಸ್‍ನಿಂದ ಸಪ್ತಾಸ್ತ್ರ ಪ್ರಯೋಗ

    ಬೆಂಗಳೂರು: ನಾಳೆಯಿಂದ ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ನಾಳೆ ಎರಡು ಸದನಗಳನ್ನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಈ ಮೂಲಕ ವಿಧಾನ ಮಂಡಲದ ಅಧಿವೇಶನಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಚಾಲನೆ ನೀಡಿಲಿದ್ದಾರೆ. ಇತ್ತ ವಿಪಕ್ಷ ಕಾಂಗ್ರೆಸ್ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ಸಪ್ತಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

    ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅಧಿವೇಶನದಲ್ಲಿ ಚರ್ಚೆ ಮಾಡಬೇಕಾದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯ್ತು. ಪ್ರಮುಖ 7 ವಿಷಯಗಳನ್ನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಸರ್ಕಾರವನ್ನ ಇಕ್ಕಟ್ಟಗೆ ಸಿಲುಕಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ನಿನ್ನೆಯಷ್ಟೆ ಪೊಲೀಸ್ ವ್ಯವಸ್ಥೆ ದುರ್ಬಳಕೆ ಆಗ್ತಿದೆ. ಕಾನೂನು ಸುವ್ಯವಸ್ಥೆ ಸರಿಯಿಲ್ಲ ಅಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದೇ ವಿಷಯವನ್ನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

    ಇನ್ನು ನಾಳಿನ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ರಾಜ್ಯಪಾಲರ ಭಾಷಣದಲ್ಲಿ ಸಿಎಎ ಪರ ವಿಷಯ ಪ್ರಸ್ತಾಪ ಮಾಡಿದ್ರೆ ಕೂಡಲೇ ಭಾಷಣಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಮಂಗಳೂರು ಗೋಲಿಬಾರ್ ವಿಷಯ ಪ್ರಸ್ತಾಪಕ್ಕೂ ಕಾಂಗ್ರೆಸ್ ನಿರ್ಧಾರ ಮಾಡಿದ್ದು, ಪೊಲೀಸರ ವರ್ತನೆ, ಇಬ್ಬರು ಮೃತ ವಿಚಾರ ಮುಂದಿಟ್ಟುಕೊಂಡು ಸರ್ಕಾರಕ್ಕೆ ತರಾಟೆ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ.

    ಭಾರೀ ವಿವಾದಕ್ಕೆ ಕಾರಣವಾಗಿರೋ ಸಚಿವ ಆರ್.ಅಶೋಕ್ ಪುತ್ರನ ಅಪಘಾತ ಪ್ರಕರಣವನ್ನು ಪ್ರಸ್ತಾಪ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಅಶೋಕ್ ಪುತ್ರನ ಅಪಘಾತ ಪ್ರಕರಣದ ಕುರಿತು ತನಿಖೆ ಆಗಬೇಕು ಅಂತ ಕಾಂಗ್ರೆಸ್ ಒತ್ತಾಯ ಮಾಡಲಿದೆ. ಅಲ್ಲದೇ ಪ್ರಾಮಾಣಿಕ ತನಿಖೆಗೆ ಸರ್ಕಾರವನ್ನ ಒತ್ತಾಯಿಸಲಿದೆ. ಇದರ ಜೊತೆಗೆ ನೆರೆ ಸಂತ್ರಸ್ಥರ ಪರಿಹಾರ ವಿಚಾರ, ಹುಬ್ಬಳ್ಳಿ ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನ ಬಿಡುಗಡೆ ಮಾಡಿದ ವಿಚಾರ. ಬೀದರ್ ದೇಶದ್ರೋಹಿ ಪ್ರಕರಣ ಮತ್ತು ಎಸ್.ಸಿ. ಎಸ್.ಟಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಹಕ್ಕಿಲ್ಲ ಅನ್ನೊ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಅಂತ ಕಾಂಗ್ರೆಸ್ ಅಧಿವೇಶನದಲ್ಲಿ ಸರ್ಕಾರವನ್ನ ಒತ್ತಾಯಿಸಲಿದೆ.

  • ಇಂದಿನಿಂದ ವಿಧಾನಮಂಡಲ ಅಧಿವೇಶನ – ನಾಳೆ ಮಾರ್ದನಿಸಲಿದೆ ಐಟಿ ರೇಡ್, ದೌರ್ಜನ್ಯ ಪ್ರಕರಣ

    ಬೆಂಗಳೂರು: ಇಂದು ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈ ನಡುವೆ ಅಧಿವೇಶನದಲ್ಲಿ ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಬಗ್ಗೆ, ಬರ ನಿರ್ವಹಣೆಯ ಬಗ್ಗೆ ಚರ್ಚೆ ಕಾವೇರುವ ಸಾಧ್ಯತೆ ಇದೆ.

    ವರ್ಷದ ಕೊನೆಯಿಂದಲೇ ಚುನಾವಣಾ ಜ್ವರ ಆರಂಭವಾಗಲಿದ್ದು, ಈ ದೃಷ್ಟಿಯಲ್ಲಿ ಸರ್ಕಾರದ ಯೋಜನೆ, ನೀಲಿ ನಕ್ಷೆ ಏನು ಅನ್ನೋದು ರಾಜ್ಯಪಾಲರ ಭಾಷಣದಲ್ಲಿ ಅಡಕವಾಗಿರುತ್ತೆ. ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ವಜು ಭಾಯಿ ವಾಲಾ ಭಾಷಣ ಮಾಡಲಿದ್ದಾರೆ. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದ್ದು, ನಾಳೆಯಿಂದ ಶುಕ್ರವಾರದವರೆಗೆ ಕಲಾಪಗಳು ನಡೆಯಲಿವೆ.

    ಸರ್ಕಾರದ ವಿರುದ್ಧ `ಐಟಿ’ ಅಸ್ತ್ರ!: ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಬಗ್ಗೆ ಕಲಾಪದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಲಿದೆ. ಸಚಿವ ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಮೇಲಿನ ಐಟಿ ದಾಳಿಯನ್ನು ವಿಪಕ್ಷಗಳು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲಿವೆ. ಇದರ ಜೊತೆಗೆ ಬರಗಾಲದ ನಿರ್ವಹಣೆ, ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಕಪ್ಪತಗುಡ್ಡ ವಿವಾದ ಕೂಡ ಪ್ರತಿಧ್ವನಿಸಲಿದೆ.

    ಇದರೊಂದಿಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ತಿದ್ದುಪಡಿ ವಿಧೇಯಕ ಮಂಡಿಸಲು ಸರ್ಕಾರ ಚಿಂತನೆ ನಡೆಸಿದೆ. ಇನ್ನು ಕಲಾಪದ ಮಧ್ಯೆ ಎಸ್‍ಎಂ ಕೃಷ್ಣ ರಾಜೀನಾಮೆ ಸೇರಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗಗಳೂ ಚರ್ಚೆಗೆ ಬರಲಿವೆ. ಈ ನಡುವೆ ಕೇವಲ 5 ದಿನ ಅಧಿವೇಶನ ನಡೆಸುತ್ತಿರುವುದಕ್ಕೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.