Tag: Jobs

  • ಕೊರೊನಾ ಅವಾಂತರ- 3,700 ಉದ್ಯೋಗ ಕಡಿತಗೊಳಿಸಿದ ಊಬರ್

    ಕೊರೊನಾ ಅವಾಂತರ- 3,700 ಉದ್ಯೋಗ ಕಡಿತಗೊಳಿಸಿದ ಊಬರ್

    ನವದೆಹಲಿ: ಕೊರೊನಾ ಮಹಾಮಾರಿ ಅವಾಂತರದಿಂದಾಗಿ ದೇಶ ಮಾತ್ರವಲ್ಲ ವಿಶ್ವದ ಆರ್ಥಿಕತೆಯೇ ಅಲ್ಲೋಲಕಲ್ಲೋಲವಾಗಿದ್ದು, ಬೃಹತ್ ಕಂಪನಿಗಳು ಸಹ ನಷ್ಟ ಅನುಭವಿಸುತ್ತಿವೆ. ಇದರ ಭಾಗವಾಗಿ ಆ್ಯಪ್ ಆಧರಿತ ಟ್ಯಾಕ್ಸಿ ಕಂಪನಿ ಊಬರ್ 3,700 ಫುಲ್ ಟೈಮ್ ಉದ್ಯೋಗಿಗಳನ್ನು ಕಡಿತಗೊಳಿಸಿದೆ.

    ಈ ಕುರಿತು ಕಂಪನಿ ಬುಧವಾರ ಸ್ಪಷ್ಟಪಡಿಸಿದ್ದು, 3,700 ಫುಲ್ ಟೈಮ್ ಉದ್ಯೋಗಿಗಳನ್ನು ಕಡಿತಗೊಳಿಸಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಾರಾ ಖೋಸ್ರೋಶಾಹಿ ಅವರು ಈ ವರ್ಷದ ಉಳಿದ ಎಲ್ಲ ತಿಂಗಳುಗಳ ಮೂಲ ವೇತನವನ್ನು ತ್ಯಜಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

    ಊಬರ್ ಹಾಗೂ ಪ್ರತಿಸ್ಪರ್ಧಿ ಲಿಫ್ಟ್ ಲಾಭ ತೋರಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಇಂತಹ ಹೊತ್ತಿನಲ್ಲೇ ಕೊರೊನಾ ಗಂಡಾಂತರ ಎದುರಾಗಿದೆ. ಲಾಕ್‍ಡೌನ್‍ನಿಂದಾಗಿ ಕಂಪನಿಯ ಆರ್ಥಿಕ ಲೆಕ್ಕಾಚಾರಗಳೆಲ್ಲ ಬುಡಮೇಲಾಗಿದ್ದು, ಆ್ಯಪ್ ಆಧಾರಿತ ಪ್ರಯಾಣದ ಬೇಡಿಕೆ ಪ್ರಪಂಚದಾದ್ಯಂತ ತೀವ್ರವಾಗಿ ಕುಸಿದಿದೆ. ಹೀಗಾಗಿ ಬಹುತೇಕ ಟ್ರಾವೆಲ್ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ.

    ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವುದು ಕಂಪನಿಯ ಶೇ.17ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಕಸ್ಟಮರ್ ಸಪೋರ್ಟ್ ಹಾಗೂ ನೇಮಕಾತಿ ತಂಡ ಸೇರಿದಂತೆ ಹಲವು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಇದರಿಂದಾಗಿ 20 ಮಿಲಿಯನ್ ಡಾಲರ್ (152 ಕೋಟಿ ರೂ.) ಖರ್ಚು ಕಡಿಮೆಯಾಗಲಿದೆ ಎಂದು ಕಂಪನಿ ಅಂದಾಜಿಸಿದೆ. ಹೀಗಾಗಿ ಮುಲಾಜಿಲ್ಲದೆ ತನ್ನ ಉದ್ಯೋಗಿಗಳನ್ನು ತೆಗೆಯುತ್ತಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಲಿಫ್ಟ್ ಕಂಪನಿ ಸಹ ತನ್ನ 982 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಉನ್ನತ ಅಧಿಕಾರಿಗಳ ಮೂಲ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದೆ.

  • ನೀವಿರುವ ಊರಿನ ಶಾಲೆಗಳಲ್ಲೇ ಕೆಲಸ ಮಾಡಿ: ಶಿಕ್ಷಕರಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

    ನೀವಿರುವ ಊರಿನ ಶಾಲೆಗಳಲ್ಲೇ ಕೆಲಸ ಮಾಡಿ: ಶಿಕ್ಷಕರಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

    ಬೆಂಗಳೂರು: ಅನ್ಯ ಶಾಲೆಗಳಲ್ಲಿ ಕೆಲಸ ನಿರ್ವಹಿಸಿಸುತ್ತಿರುವ ಶಿಕ್ಷಕರು ತಾವು ಇರುವ ಸ್ಥಳದಲ್ಲಿ ಕೆಲಸ ನಿರ್ವಹಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ಈ ಕುರಿತು ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದು, ಬೇರೆ ಬೇರೆ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ತಾವಿರುವ ಊರು ಅಥವಾ ನಗರದ ಶಾಲೆಗಳಲ್ಲೇ ಕಾರ್ಯನಿರ್ವಹಿಸಬೇಕು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಸದ್ಯ ಇರುವ ಸ್ಥಳದಲ್ಲಿ ಕೆಲಸ ಮುಂದುವರೆಸುವಂತೆ ತಿಳಿಸಿದ್ದಾರೆ. ಸರ್ಕಾರದ ಅನುಮತಿ ಮೇರೆಗೆ ಸುರೇಶ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದು, ಶಿಕ್ಷಕರು ತಾವಿರುವ ಸ್ಥಳದಲ್ಲೇ ಕಾರ್ಯನಿರ್ವಹಿಸಬಹುದಾಗಿದೆ.

    ಇದೆಲ್ಲದರ ಮಧ್ಯೆ ಈ ಬಾರಿ ಶುಲ್ಕ ಹೆಚ್ಚಳ ಮಾಡದಂತೆ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲಾಗಿದ್ದು, ಕೊರೊನಾ ಹಿನ್ನೆಲೆ ಯಾವುದೇ ಖಾಸಗಿ ಶಾಲೆ ಶುಲ್ಕವನ್ನು ಹೆಚ್ಚಳ ಮಾಡಕೂಡದು ಎಂದು ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ.

    ಕ್ಷೌರಿಕ ಹಾಗೂ ದಂತ ವೈದ್ಯಕೀಯ ಚಿಕಿತ್ಸೆಯನ್ನು ಸಹ ಪುನರಾರಂಭಿಸಲು ಅನುಮತಿ ನೀಡಬೇಕೆಂದು ಮುಖ್ಯಮಂತ್ರಿಗಳಿವೆ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕ್ಷೌರಿಕ ವೃತ್ತಿ(ಸವಿತಾ ಸಮಾಜ)ಯವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದಂತ ವೈದ್ಯಕೀಯ ಚಿಕಿತ್ಸೆಯೂ ಅವಶ್ಯಕವಾಗಿದೆ. ಈ ಎರಡು ವಲಯಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಪ್ರಾರಂಭ ಮಾಡಲು ಅವಕಾಶ ಕೊಡಬೇಕು ಎಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

  • ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ: ರಾಹುಲ್ ಗಾಂಧಿ

    ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ: ರಾಹುಲ್ ಗಾಂಧಿ

    – ಇಂದಿನ ದೇಶದ ಈ ಪರಿಸ್ಥಿತಿಗೆ ಮಾಧ್ಯಮಗಳೇ ಕಾರಣ

    ಮುಂಬೈ: ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.

    ಇಂದು ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಯುವಕರು ಕೇಂದ್ರ ಸರ್ಕಾರವನ್ನು ಕೆಲಸದ ಬಗ್ಗೆ ಕೇಳಿದಾಗ, ಬಿಜೆಪಿ ಸರ್ಕಾರ ಚಂದ್ರನ ಕಡೆ ತೋರಿಸುತ್ತಾರೆ. ದೇಶದ ಜನರನ್ನು ಬೇರೆ ಕಡೆ ಸೆಳೆಯುತ್ತಾರೆ ಎಂದು ಬಿಜೆಪಿ ಮೇಲೆ ಕಿಡಿಕಾರಿದರು.

    ಇತ್ತೀಚಿಗೆ ಪ್ರಧಾನಿ ಮೊದಿ ಅವರು, ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರನ್ನು ಭೇಟಿ ಮಾಡಿದರು, ಈ ಭೇಟಿಯಲ್ಲಿ ಅವರು 2017 ಚೀನಾದ ಸೈನ್ಯ ಭಾರತೀಯ ಭೂಪ್ರದೇಶದ ಮೇಲೆ ಅಕ್ರಮಣ ಮಾಡಿದರ ಬಗ್ಗೆ ಕೇಳಿಲ್ಲ. ಮೋದಿ ಅವರು ಮೇಕ್ ಇನ್ ಇಂಡಿಯಾ ಮಾಡುತ್ತಿಲ್ಲ. ಬದಲಾಗಿ ಮೇಕ್ ಇನ್ ಚೀನಾ ಮಾಡುತ್ತಿದ್ದಾರೆ ಎಂದು ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ದೇಶದ ಜನ ಉದ್ಯೋಗ ಮತ್ತು ಸಮಸ್ಯೆಗಳ ಬಗ್ಗೆ ಕೇಳಿದಾಗ, ಚಂದ್ರಯಾನ, 370ನೇ ವಿಧಿ ರದ್ದು ಈ ರೀತಿಯ ವಿಚಾರಗಳನ್ನು ತೋರಿಸಿ ಜನರ ಗಮನವನ್ನು ಬೇರೆ ಕಡೆ ಸಳೆಯುವುದು ಮಾಧ್ಯಮ, ಮೋದಿ ಮತ್ತು ಅಮಿತ್ ಶಾ ಅವರ ಕೆಲಸವಾಗಿದೆ. 370ನೇ ವಿಧಿ ಮತ್ತು ಚಂದ್ರಯಾನದ ಬಗ್ಗೆ ಸದಾ ಮಾತನಾಡುವ ಕೇಂದ್ರ ಸರ್ಕಾರ ದೇಶದ ಸಮಸ್ಯೆ ಬಗ್ಗೆ ಮೌನ ವಹಿಸಿದೆ ಎಂದು ಕಿಡಿಕಾರಿದರು.

    ಈ ವೇಳೆ ಮಾಧ್ಯಮಗಳ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಅವರು 15 ಜನ ಶ್ರೀಮಂತರ 5.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು. ಆಗ ಈ ಮಾಧ್ಯಮಗಳು ಮೋದಿಯನ್ನು ಪ್ರಶ್ನೆ ಮಾಡಲಿಲ್ಲ. ಇಂದಿನ ರೈತರ ಸಂಕಟ ದೇಶದಲ್ಲಿನ ಉದ್ಯೋಗದ ಕೊರತೆಗೆ ಮಾಧ್ಯಮಗಳು ಕೂಡ ಕಾರಣ ಎಂದು ಗುಡುಗಿದರು.

    ಮೋದಿ ಅವರ ಅಮಾನೀಕರಣದಿಂದ (ನೋಟ್ ಬ್ಯಾನ್) ಯಾರಿಗೆ ಲಾಭ ಸಿಕ್ಕಿತು. ಉದ್ಯಮಿ ನೀರವ್ ಮೋದಿ ದೇಶ ಬಿಟ್ಟು ಓಡಿ ಹೋದರು. ಪ್ರಧಾನಿ ಅವರ ನೋಟ್ ಬ್ಯಾನ್ ನಿಂದ ಬಡವರಿಗೆ ಪ್ರಯೋಜನವಾಗಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ಚಂದ್ರನ ಬಳಿ ರಾಕೆಟ್ ಕಳುಹಿಸುವುದರಿಂದ ಮಹಾರಾಷ್ಟ್ರದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಮೋದಿ ಅವರ ಯೋಜನೆಗಳ ಮೇಲೆ ವಾಗ್ದಾಳಿ ಮಾಡಿದರು.

    ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮತ್ತು ನೋಟ್ ಬ್ಯಾನ್ ಉದ್ದೇಶ ಬಡವರ ಜೇಬಿನಲ್ಲಿರುವ ಹಣವನ್ನು ತೆಗೆದುಕೊಂಡು ಹೋಗಿ ಶ್ರೀಮಂತರಿಗೆ ನೀಡುವುದು ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

  • ದೇಶದಲ್ಲಿ ವಿಫುಲ ಉದ್ಯೋಗಾವಕಾಶ ಇದ್ದರೂ ಆಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆಯಿದೆ: ಕೇಂದ್ರ ಸಚಿವ

    ದೇಶದಲ್ಲಿ ವಿಫುಲ ಉದ್ಯೋಗಾವಕಾಶ ಇದ್ದರೂ ಆಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆಯಿದೆ: ಕೇಂದ್ರ ಸಚಿವ

    ಲಕ್ನೋ: ದೇಶದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಆದರೆ ಆಕಾಂಕ್ಷಿಗಳಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯದ ಕೊರತೆ ಕಾಣುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕೆ. ಗಂಗ್ವಾರ್ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕೇಂದ್ರ ಸಚಿವರು, ದೇಶದಲ್ಲಿ ಆರ್ಥಿಕ ಹಿಂಜರಿತದ ಭಯವಿದ್ದರೂ ನಿರುದ್ಯೋಗದ ಸಮಸ್ಯೆಯಿಲ್ಲ. ದೇಶದ ವಿವಿಧ ವಿಭಾಗಗಳಲ್ಲಿ ಅನೇಕ ಉದ್ಯೋಗಾವಕಾಶಗಳಿವೆ. ಆದರೆ ಆಕಾಂಕ್ಷಿಗಳ ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗಗಳು ದೊರಕುತ್ತಿಲ್ಲ ಎಂದು ತಿಳಿಸಿದ್ದಾರೆ.

    ನಾನು ಕಾರ್ಮಿಕ ಸಚಿವಾಲಯದ ಜವಾಬ್ದಾರಿ ಹೊಂದಿದ್ದೇನೆ. ಇಲ್ಲಿನ ಪರಿಸ್ಥಿತಿಯನ್ನು ಪ್ರತಿದಿನವೂ ವಿಚಾರಿಸುತ್ತೇನೆ. ನನಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ. ಒಂದು ಉದ್ದೇಶಕ್ಕಾಗಿ ಉದ್ಯೋಗ ವಿನಿಮಯ ಮಾಡುತ್ತೇವೆ ಹಾಗೂ ಪ್ರತ್ಯೇಕ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

    ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಅವರ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ, ಮಂತ್ರಿಗಳೇ ನಿಮ್ಮದೇ ಸರ್ಕಾರ ಕಳೆದ 5 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಉದ್ಯೋಗಗಳನ್ನು ಸೃಷ್ಟಿಸಿಲ್ಲ. ಸರ್ಕಾರದ ನೀತಿಗಳಿಂದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದ್ದು, ಇದ್ದ ಉದ್ಯೋಗಗಳೂ ಕಣ್ಮರೆಯಾಗುತ್ತಿವೆ. ಸರ್ಕಾರ ಏನಾದರೂ ಉತ್ತಮವಾದದ್ದು ಮಾಡುತ್ತದೆ ಎಂದು ಯುವಜನತೆ ಭರವಸೆಯಿಂದ ಕಾಯುತ್ತಿದ್ದಾರೆ. ಉತ್ತರ ಭಾರತೀಯರನ್ನು ಹೀಯಾಳಿಸಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿ ಕಿಡಿಕಾರಿದ್ದಾರೆ.

  • 1 ಲಕ್ಷ ಮಂದಿ ಉದ್ಯೋಗಿಗಳಿಗೆ ಐಬಿಎಂ ಗೇಟ್‍ಪಾಸ್

    1 ಲಕ್ಷ ಮಂದಿ ಉದ್ಯೋಗಿಗಳಿಗೆ ಐಬಿಎಂ ಗೇಟ್‍ಪಾಸ್

    – ಮಾಜಿ ಉದ್ಯೋಗಿಯಿಂದ ನ್ಯಾಯಾಲಯದಲ್ಲಿ ಕೇಸ್

    ಸ್ಯಾನ್‍ಫ್ರಾನ್ಸಿಸ್ಕೋ: ಐಬಿಎಂ ಕಂಪನಿ ಕೆಲ ವರ್ಷಗಳಿಂದ ಒಟ್ಟು ಅಂದಾಜು 1 ಲಕ್ಷ ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.

    ಆಫೀಸಿನಲ್ಲಿ ಯುವ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಿರಿಯ ಉದ್ಯೋಗಿಗಳನ್ನು ಬಲವಂತವಾಗಿ ಕಂಪನಿ ಗೇಟ್ ಪಾಸ್ ನೀಡುತ್ತಿದೆ ಎಂದು ಆರೋಪಿಸಿ ಐಬಿಎಂ ಮಾಜಿ ಉದ್ಯೋಗಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

    ಜೊನಾಥನ್ ಲಾಂಗ್ಲೆ ಎಂಬವರು ಈ ದಾವೆ ಹೂಡಿದ್ದು, ಅರ್ಜಿಯಲ್ಲಿ ಕಳೆದ ಐದು ವರ್ಷದಲ್ಲಿ ಹತ್ತಿರ  ವಿಶ್ವದೆಲ್ಲೆಡೆ ಒಟ್ಟು 1 ಲಕ್ಷ ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.

    ಗೂಗಲ್, ಫೇಸ್‍ಬುಕ್, ಅಮೇಜಾನ್ ಕಂಪನಿಯಂತೆ ಯುವ ಉದ್ಯೋಗಿಗಳಿಗೆ ಐಬಿಎಂ ಮಣೆ ಹಾಕುತ್ತಿದ್ದು, ಈ ಹಿನ್ನೆಯಲ್ಲಿ ಹಿರಿಯ ನುರಿತ ಉದ್ಯೋಗಿಗಳನ್ನು ಕಾರಣವಿಲ್ಲದೇ ತೆಗೆದು ಹಾಕುತ್ತಿದೆ ಎಂದು 61 ವರ್ಷ ಜೊನಾಥನ್ ಆರೋಪಿಸಿದ್ದಾರೆ. ಹೈ ಬ್ರಿಡ್ ಕ್ಲೌಡ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೊನಾಥನ್ ಅವರನ್ನು ಐಬಿಎಂ ಕಳೆದ ವರ್ಷ ತೆಗೆದು ಹಾಕಿತ್ತು.

    108 ವರ್ಷ ಹಳೆಯ ಐಬಿಎಂ ಕಂಪನಿ ಈ ವಿಚಾರವಾಗಿ ಪ್ರತಿಕ್ರಿಯಿಸಿ, ವರ್ಷದ ಆಧಾರದ ಮೇಲೆ ನಾವು ಯಾವುದೇ ತಾರತಮ್ಯ ಮಾಡಿಲ್ಲ, ಪ್ರತಿ ವರ್ಷ ನಾವು 50 ಸಾವಿರ ಮಂದಿಗೆ ಉದ್ಯೋಗ ನೀಡುತ್ತೇವೆ. ಇವರಿಗೆ ತರಬೇತಿ ನೀಡಲೆಂದೇ ಅರ್ಧ ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡುತ್ತೇವೆ. ಉದ್ಯೋಗಕ್ಕಾಗಿ ಪ್ರತಿ ದಿನ 8 ಸಾವಿರಕ್ಕೂ ಅಧಿಕ ಅರ್ಜಿಗಳು ಬರುತ್ತಿರುವುನ್ನು ನೋಡಿ ನಾವು ಉತ್ಸಾಹಗೊಂಡಿದ್ದೇವೆ ಎಂದು ತಿಳಿಸಿದೆ.

    ಸರಿಯಾಗಿ ಕೆಲಸ ಮಾಡದ ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವುದು ಇದೇ ಮೊದಲಲ್ಲ. ಹಲವು ವರ್ಷಗಳಿಂದ ನಾವು ಈ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ಕಂಪನಿ ಪ್ರತಿಕ್ರಿಯಿಸಿದೆ.

    ಪ್ರೊಪಬ್ಲಿಕ ಹೆಸರಿನ ಅಮೆರಿಕದ ಸಂಸ್ಥೆಯೊಂದು 2018ರ ಮಾರ್ಚ್ ತಿಂಗಳಿನಲ್ಲಿ ತನಿಖೆ ನಡೆಸಿ, ಕಳೆದ 4 ವರ್ಷದಲ್ಲಿ ಅಮೆರಿಕ ಒಂದೇ ದೇಶದಲ್ಲಿ ಐಬಿಎಂ 40 ವರ್ಷಕ್ಕೂ ಮೇಲ್ಪಟ್ಟ ಅಂದಾಜು 20 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ತಿಳಿಸಿದೆ.

  • ಗೂಗಲ್ ಕಂಪೆನಿಗೆ ಬೆಂಗ್ಳೂರು ವಿದ್ಯಾರ್ಥಿ ಆಯ್ಕೆ: ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ.

    ಗೂಗಲ್ ಕಂಪೆನಿಗೆ ಬೆಂಗ್ಳೂರು ವಿದ್ಯಾರ್ಥಿ ಆಯ್ಕೆ: ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ.

    ಬೆಂಗಳೂರು: ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರಿನ (ಐಐಐಟಿ-ಬಿ) 22 ವರ್ಷದ ವಿದ್ಯಾರ್ಥಿಯೊಬ್ಬರು ಗೂಗಲ್ ಸಂಸ್ಥೆಗೆ ಆಯ್ಕೆಯಾಗಿದ್ದು, ಸದ್ಯ ಅವರ ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ. ನಿಗದಿಯಾಗಿದೆ.

    ನ್ಯೂಯಾರ್ಕ್ ನಲ್ಲಿರುವ ಗೂಗಲ್ ಸಂಸ್ಥೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್ ವಿಂಗ್‍ಗೆ ಐಐಐಟಿ-ಬಿ ವಿದ್ಯಾರ್ಥಿ ಆದಿತ್ಯ ಪಾಲಿವಾಲ್ ಅವರು ಆಯ್ಕೆಯಾಗಿದ್ದಾರೆ. ಆದಿತ್ಯ ಅವರು ಮುಂಬೈ ಮೂಲದವರು. ಬೆಂಗಳೂರಿನ ಐಐಐಟಿಯಲ್ಲಿ ಐದು ವರ್ಷ ಇಂಟಿಗ್ರೆಟೆಡ್ ವ್ಯಾಸಂಗ ಮಾಡಿ ಎಂ.ಟೆಕ್ ಪದವಿ ಪಡೆದಿದ್ದರು.

    ಬೆಂಗಳೂರು ಬಗ್ಗೆ ಆದಿತ್ಯ ಹೇಳಿದ್ದೇನು?
    ಬೆಂಗಳೂರಿನಲ್ಲಿ ಕಳೆದ ಐದು ವರ್ಷ ಅನುಭವ ಅದ್ಭುತವಾಗಿತ್ತು. ಕಾಲೇಜಿನ ಶಿಕ್ಷಕರು ಸೃಜನಾತ್ಮಕ ವಿಚಾರಗಳನ್ನು ಬೆಳೆಸುತ್ತಿದ್ದರು, ಅಷ್ಟೇ ಅಲ್ಲದೆ ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡುತ್ತಿದ್ದರು. ಹಿರಿಯ ವಿದ್ಯಾರ್ಥಿಗಳು ಗೂಗಲ್ ಸಂಸ್ಥೆಯ ಆಯ್ಕೆಗೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೆಮ್ಮೆಯಿಂದ ಆದಿತ್ಯ ಹೇಳಿದರು.

    ಗೂಗಲ್ ಸಂಸ್ಥೆಯು ಕೋಡಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಜಗತ್ತಿನ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಕೇವಲ 50 ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದು, ಆದಿತ್ಯ ಕೂಡಾ ಒಬ್ಬರಾಗಿದ್ದಾರೆ.

    2017-18ರಲ್ಲಿ ಎಸಿಎಂನಿಂದ ನಡೆಯುವ ಕಾಲೇಜು ಮಟ್ಟದ ಅಂತರಾಷ್ಟ್ರೀಯ ಪ್ರೋಗ್ರಾಮಿಂಗ್ ಸ್ಪರ್ಧೆ (ಐಸಿಪಿಸಿ)ಯ ಅಂತಿಮ ಸ್ಪರ್ಧಿಗಳಲ್ಲಿ ಆದಿತ್ಯ ಕೂಡಾ ಒಬ್ಬರಾಗಿದ್ದರು. ಆದಿತ್ಯ ಅವರ ತಂಡದಲ್ಲಿ ಸಿಮ್ರಾನ್ ಡೊಜನಿಯಾ ಹಾಗೂ ಶ್ಯಾಮ್ ಕೆ.ಬಿ. ಕೂಡಾ ಇದ್ದರು. ಈ ಸ್ಪರ್ಧೆಯು ಕಂಪ್ಯೂಟರ್ ಭಾಷೆಯ ಕೋಡಿಂಗ್ ಉತ್ಸಾಹಿಗಳಿಗೆ ಆಯೋಜಿಸುವ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಒಂದಾಗಿದೆ. ಇದೇ ವರ್ಷ ಏಪ್ರಿಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ 3,098 ವಿಶ್ವವಿದ್ಯಾನಿಲಯಗಳ 50 ಸಾವಿರ ವಿದ್ಯಾರ್ಥಿಗಳು ಭಾಗವಹಸಿದ್ದರು.

  • ಸಾರಿಗೆ ಇಲಾಖೆಯಿಂದ ಮಹಿಳಾ ಸಿಬ್ಬಂದಿಗೆ ಶಾಕಿಂಗ್ ನ್ಯೂಸ್!

    ಸಾರಿಗೆ ಇಲಾಖೆಯಿಂದ ಮಹಿಳಾ ಸಿಬ್ಬಂದಿಗೆ ಶಾಕಿಂಗ್ ನ್ಯೂಸ್!

    ಹಾಸನ: ಮೋದಿ ಸರ್ಕಾರದಲ್ಲಿ ಭೇಟಿ ಪಡಾವೋ, ಭೇಟಿ ಬಚಾವೋ ಎಂದು ಮಹಿಳೆಯ ಅಭಿವೃದ್ಧಿಗೆ ಪಣತೊಟ್ಟಿದೆ. ಆದರೆ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮಾತ್ರ ಮಹಿಳೆಯರು ಕೆಲಸಕ್ಕೆ ಬೇಡ ಎಂದು ಹೇಳಲಾಗುತ್ತಿದೆ.

    ಹಾಸನ ಕೆಎಸ್‍ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಮಹಿಳೆಯರಿಗೆ ಕೆಲಸ ಕೊಡೋದು ಬೇಡ ಪ್ಲೀಸ್ ಎಂದು ಎಡವಟ್ಟು ಪತ್ರವನ್ನು ಬರೆದಿದ್ದಾರೆ. ಕೆಎಸ್‍ಆರ್ ಟಿಸಿ ತಾಂತ್ರಿಕ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಕೆಲಸಕ್ಕೆ ಮಹಿಳೆಯರ ನೇಮಕ ಬೇಡ, ಪುರುಷರಿಗಷ್ಟೇ ಅವಕಾಶ ನೀಡೋಣ ಅಂತಾ ಬೆಂಗಳೂರು ಕೆಎಸ್‍ಆರ್ ಟಿಸಿ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದಾರೆ.

    ಮಹಿಳೆಯರಿಗೆ ಕೆಲ್ಸ ಕೊಡೋದು ಬೇಡ!
    * ತಾಂತ್ರಿಕ ವಿಭಾಗದಲ್ಲಿ ಭದ್ರತೆಗಾಗಿ ಮಹಿಳೆಯರನ್ನು ನಿಯೋಜಿಸೋದಕ್ಕೆ ಕಷ್ಟವಾಗುತ್ತೆ.
    * ಮಹಿಳೆಯರು ಸಿಕ್ಕಾಪಟ್ಟೆ ಸೂಕ್ಷ್ಮ ಮನಸ್ಥಿತಿಯವರು ರಜೆ ಜಾಸ್ತಿ ಹಾಕುತ್ತಾರೆ.
    * ಪ್ರಸೂತಿ ರಜೆ, ಆರೋಗ್ಯ ಸರಿ ಇಲ್ಲ ಹೀಗೆ ನಾನಾ ಕಾರಣದಿಂದ ದೀರ್ಘ ರಜೆ ಹಾಕುತ್ತಾರೆ. ಪಾಪ ಆಗ ಪುರುಷ ಸಿಬ್ಬಂದಿಗಳ ಮೇಲೆ ಹೊರೆ ಬೀಳುತ್ತೆ.
    * ಮಕ್ಕಳ ಲಾಲಾನೆ ಪಾಲನೆ ಅಂತಾ ಹೆಚ್ಚಿನ ರಜೆ ಕೇಳುತ್ತಾರೆ.

    ಹೀಗೆ ನಾನಾ ಕಾರಣವನ್ನು ಅಧಿಕಾರಿ ಮುಂದಿಟ್ಟಿದ್ದಾರೆ. ಈಗಾಗಲೇ ತಾಂತ್ರಿಕ ವಿಭಾಗದಲ್ಲಿ ಇರುವ ಮಹಿಳೆಯರು ಕಾರ್ಯ ನಿರ್ವಹಿಸುತ್ತಿಲ್ಲ ಅಂತಾ ಅವಲತ್ತುಕೊಂಡಿದ್ದಾರೆ.

  • ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾ ವಿಚಾರ ಎತ್ತಿ ಕೈ ವಿರುದ್ಧ ಶಾ ವಾಗ್ದಾಳಿ

    ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾ ವಿಚಾರ ಎತ್ತಿ ಕೈ ವಿರುದ್ಧ ಶಾ ವಾಗ್ದಾಳಿ

    ನವದೆಹಲಿ: ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾವನ್ನು ಮಾರಾಟ ಮಾಡಿ ಮೋದಿ ಹೇಳಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

    ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ನಿರುದ್ಯೋಗಿಯಾಗಿ ಇರುವುದಕ್ಕಿಂತ ಕಾರ್ಮಿಕನಾಗಿ ಅಥವಾ ಪಕೋಡಾ ವ್ಯಾಪಾರಿ ಆಗುವುದು ಉತ್ತಮ. ಪಕೋಡಾ ಮಾರಾಟ ಮಾಡಲು ಯಾವುದೇ ಮುಜುಗರ ಪಡಬೇಕಿಲ್ಲ ಎಂದರು.

    ದೇಶದ ಯುವ ಜನತೆಗೆ ಹೊಸ ಉದ್ಯೋಗ ಸೃಷ್ಟಿ ಮಾಡಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ಹಿಂದಿನ ಹಲವು ಸರ್ಕಾರಗಳು ಬಡತನ ನಿರ್ಮೂಲನೆ ಎಂಬ ಘೋಷಣೆಗಳನ್ನು ಇಟ್ಟು ಅಧಿಕಾರ ವಹಿಸಿಕೊಂಡರೂ ಯಶಸ್ವಿಯಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಜಾರಿಗೆ ಬರುತ್ತಿದೆ. ಉದ್ಯೋಗ ಸೃಷ್ಟಿಯ ಬಗ್ಗೆ ನಮ್ಮ ಸರ್ಕಾರ ಜಾಗೃತವಾಗಿದೆ. ಆದರೆ ಒಮ್ಮಿದೊಮ್ಮೆಗೆ ಬದಲಾವಣೆ ಮಾಡಲು ಸಾಧ್ಯವೇ? ವಿರೋಧಿಗಳ ಟೀಕೆಗಳನ್ನು ಕೇಳಲು ನಮಗೆ ಸಂತಸವಾಗುತ್ತಿದೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡರು.

    ಕಾಂಗ್ರೆಸ್ 60 ವಷಗಳ ಅಧಿಕಾರ ಅವಧಿಯಲ್ಲಿ ಉದ್ಯೋಗ ಸೃಷ್ಟಿಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ನಾವು ಈಗಾಗಲೇ ಉದ್ಯೋಗ ಸೃಷ್ಟಿಯ ಬಗ್ಗೆ ಕಾರ್ಯಪ್ರವೃತ್ತವಾಗಿದ್ದೇವೆ. ಸರ್ಕಾರದ ಸ್ಮಾರ್ಟ್ ಆಫ್ ಇಂಡಿಯಾ, ಮುದ್ರಾ ಯೋಜನಾ ಮುಂತಾದ ಯೋಜನೆಗಳು ಪ್ರಗತಿಯಲ್ಲಿದೆ ಎಂದರು.

    2014 ರಲ್ಲಿ ದೇಶದ ಜನರು ಶಕ್ತಿಶಾಲಿ ಸರ್ಕಾರಕ್ಕೆ ಮತ ಹಾಕುವ ಮೂಲಕ ಐತಿಹಾಸಿಕ ನಿರ್ಣಯ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿ ಅಭಿವೃದ್ಧಿ, ಶಾಂತಿಯನ್ನು ಬಯಸಿದ್ದಾರೆ. ಸರ್ಕಾರ ರಚನೆ ಮಾಡಲು ಸಂಪೂರ್ಣ ಬಹುಮತವಿದ್ದರೂ ಬಿಜೆಪಿ ಎನ್‍ಡಿಎ ಒಕ್ಕೂಟದ ಮಿತ್ರ ಪಕ್ಷಗಳ ಮೂಲಕ ಸರ್ಕಾರ ರಚನೆ ಮಾಡಿದೆ ಎಂದರು.

    ಅಮಿತ್ ಶಾ ಮೊದಲ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದ್ದು, ಟ್ವಿಟ್ಟರ್ ನಲ್ಲಿ ಭಾರತದಲ್ಲಿ #ShahSpeaksInRajyaSabha ಹ್ಯಾಶ್ ಟ್ಯಾಗ್ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಆಗಿತ್ತು.

    ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮದ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಪಕೋಡಾ ಮಾರಾಟ ಮಾಡುವುದು ಒಂದು ಸ್ವಯಂ ಉದ್ಯೋಗವಾಗಿದ್ದು, ಪಕೋಡಾ ಮಾರಾಟ ಮಾಡುವ ವ್ಯಕ್ತಿ ಪ್ರತಿದಿನ ಸಂಜೆ 200 ರೂ. ಗಳಿಸುತ್ತಾರೆ ಎಂದಿದ್ದರು. ಮೋದಿ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಿತ್ತು.

    ಬೆಂಗಳೂರಿನ ಆರಮನೆ ಮೈಧಾನದಲ್ಲಿ ಭಾನುವಾರ ನಡೆದ ಪರಿವರ್ತನಾ ಯಾತ್ರೆ ವೇಳೆಯು ಪ್ರಧಾನಿಗಳ ವಿರುದ್ಧ ಪ್ರತಿಭಟನೆ ನಡೆಸಿತ್ತು. ವಿಶ್ವವಿದ್ಯಾಲಯ ಘಟಿಕೋತ್ಸವದ ದಿನ ವಿದ್ಯಾರ್ಥಿಗಳು ಧರಿಸುವ ಗೌನ್ ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಪಕೋಡಾ ಮಾರಾಟ ಮಾಡಿ ಪ್ರತಿಭಟನೆ ನಡೆಸಿದ್ದರು.

  • ಮೋದಿ ವಿರುದ್ಧ ಉದ್ಯೋಗ ಸೃಷ್ಟಿಗಾಗಿ Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ `ಪಕೋಡ’ ಪ್ರತಿಭಟನೆ

    ಮೋದಿ ವಿರುದ್ಧ ಉದ್ಯೋಗ ಸೃಷ್ಟಿಗಾಗಿ Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ `ಪಕೋಡ’ ಪ್ರತಿಭಟನೆ

    ಬೆಂಗಳೂರು: ಪಕೋಡ ಮಾಡಿ ಮಾರುವುದು ಒಂದು ಉದ್ಯೋಗವೇ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದ ಹೇಳಿಕೆಯನ್ನು ಖಂಡಿಸಿ ಇಂದು ವಿದ್ಯಾರ್ಥಿಗಳು ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ಸಂದರ್ಶನದಲ್ಲಿ ಪಕೋಡ ಮಾರಾಟ ಮಾಡಿದರೂ ಉದ್ಯೋಗವೇ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು. ಆದ್ದರಿಂದ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಚೇರಿ ಎದುರು Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಬಿಸಿ ಬಿಸಿ ಪಕೋಡ ಕರಿದು ಅವುಗಳಿಗೆ 10 ರೂ. ಬೆಲೆ ನಿಗದಿ ಮಾಡಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.

    ಉದ್ಯೋಗ ಕೊಡುತ್ತೇವೆ ಎಂದಿದ್ದ ಪ್ರಧಾನಿ ಮೋದಿ ಪಕೋಡ ಮಾರುವಂತೆ ಹೇಳಿದ್ದರು. ಆದರೆ ಪಕೋಡಾ ಮಾರುವ ಉದ್ಯೋಗ ಸೃಷ್ಠಿ ಮಾಡಿದ್ದು ನರೇಂದ್ರ ಮೋದಿಯಲ್ಲ, ಉದ್ಯೋಗ ಸೃಷ್ಟಿಸಿ ಎಂದರೆ ಪಕೋಡಾ ಮಾರಾಟದ ಉದಾಹರಣೆ ನೀಡಿದ್ದರು. ಇನ್ನೂ ಹೆಚ್ಚು ಜನ ಪಕೋಡಾ ಮಾರೋಕೆ ಆಗಲ್ಲ ಎಂದು ಯುವ ಸಮೂಹವೊಂದು ಪಕೋಡಾ ಅಂಗಡಿ ಪ್ರಾರಂಭಿಸಿ ಪ್ರತಿಭಟನೆ ನಡೆಸಿದ್ದಾರೆ.

    ಈ ವೇಳೆ ಮಾತನಾಡಿದ ಹೋರಾಟಗಾರರು, ಉದ್ಯೋಗಕ್ಕಾಗಿ ಯುವ ಜನರು, ನರೇಂದ್ರ ಮೋದಿ ಸ್ವಯಂ ಉದ್ಯೋಗ ಪಕೋಡಾ ಸ್ಟಾಲ್ ಮಾಡಿದ್ದು, ಈ ಸ್ಟಾಲ್‍ನ ಉದ್ದೇಶ ತಮಾಷೆಯಲ್ಲ. ಇದು ನಮ್ಮ ನೋವು ಮತ್ತು ಆಕ್ರೋಶದ ಪ್ರತೀಕವಾಗಿದೆ. ಪ್ರಧಾನಿಯವರ ಜೊತೆ 1ಗಂಟೆ ಸಂವಾದ ಮಾಡಿ ನಮ್ಮ ಯುವ ಪ್ರಣಾಳಿಕೆಯ ಕರಡನ್ನು ಕೊಡಲು ಫೆಬ್ರವರಿ 4ರಂದು ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಪಕೋಡಾ ಸ್ಟಾಲ್ ಮುಂದುವರೆಯುತ್ತದೆ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

    ಪಕೋಡಾ ಮಾರುವವರ ಬದುಕನ್ನು, ಕೃಷಿ ಮಾಡುತ್ತಿರುವವರ ಅಸಹಾಯಕತೆಯನ್ನು ಆಡಿಕೊಳ್ಳುವ ಪ್ರಧಾನಿಯನ್ನು ಕ್ಷಮಿಸುವುದು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=LqnbGiE0F3Q

  • ಕೇಂದ್ರ ಸರ್ಕಾರದ ನಕಲಿ ವೆಬ್‍ಸೈಟ್ ಓಪನ್ ಮಾಡಿ ಎರಡೇ ದಿನದಲ್ಲಿ 20 ಲಕ್ಷ ದೋಚಿದ ವಿದ್ಯಾರ್ಥಿ

    ಕೇಂದ್ರ ಸರ್ಕಾರದ ನಕಲಿ ವೆಬ್‍ಸೈಟ್ ಓಪನ್ ಮಾಡಿ ಎರಡೇ ದಿನದಲ್ಲಿ 20 ಲಕ್ಷ ದೋಚಿದ ವಿದ್ಯಾರ್ಥಿ

    ನವದೆಹಲಿ: ಕೇಂದ್ರ ಸರ್ಕಾರ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಎರಡೇ ದಿನದಲ್ಲಿ 20 ಲಕ್ಷ ರೂ. ದೋಚಿದ್ದ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    27 ವರ್ಷದ ಸುಮಿತ್ ಕುಮಾರ್ ಬಂಧಿತ ವಿದ್ಯಾರ್ಥಿ. ಸುಮಿತ್ ಕಾನೂನು ಪದವಿಯನ್ನು ಓದುತ್ತಿದ್ದು, ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿಲ್ಲ. ಹೀಗಾಗಿ ಪರೀಕ್ಷೆ ಉತ್ತೀರ್ಣನಾಗಲು ಸರ್ಕಾರದ ನಕಲಿ ವೆಬ್‍ಸೈಟ್ ತೆರೆದಿರುವುದು ಬೆಳಕಿಗೆ ಬಂದಿದೆ. ಮತ್ತೊಂದು ವೆಬ್‍ಸೈಟ್ ಮೂಲಕ ಹುದ್ದೆಗಳು ಖಾಲಿ ಇದೆ ಎಂದು ಹೇಳಿ ಅರ್ಜಿ ಕರೆಯುವ ಮೂಲಕ 4000ಕ್ಕೂ ಅಧಿಕ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಎಂದು 20 ಲಕ್ಷ ರೂ. ಸಂಗ್ರಹಿಸಿದ್ದಾನೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧೀನದ ಕಚೇರಿ ನಕಲಿ ವೆಬ್ ಸೈಟ್ ಬಗ್ಗೆ ದೂರನ್ನು ದಾಖಲಿಸಿತ್ತು. ದೂರಿನ ಅನ್ವಯ ತನಿಖೆ ಆರಂಭಿಸಿದ ದೆಹಲಿ ಪೊಲೀಸರು ಆರೋಪಿ ಸುಮಿತ್ ನನ್ನ ಬಂಧಿಸಿದ್ದಾರೆ ಎಂದು ನವ ದೆಹಲಿಯ ಡಿಸಿಪಿ ಬಿ.ಕೆ.ಸಿಂಗ್ ತಿಳಿಸಿದ್ದಾರೆ.

    ಏನು ವ್ಯತ್ಯಾಸ?: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ “wcd.nic.in” ಈ ವೆಬ್‍ಸೈಟ್ ತೆರದಿದ್ದರೆ, ಸುಮಿತ್ ಕುಮಾರ್ “wcdo.org.in” ಹೆಸರಿನ ವೆಬ್‍ಸೈಟ್ ಆರಂಭಿಸಿದ್ದ. ಅಷ್ಟೇ ಅಲ್ಲದೇ ಸುಮಿತ್ ತನ್ನ ವೆಬ್‍ಸೈಟ್ ನಲ್ಲಿ ಯಾರ ಅನುಮತಿಯನ್ನು ಪಡೆಯದೇ ಸಚಿವಾಲಯದ ಅಧಿಕೃತ ಲೋಗೋವನ್ನು ಬಳಸಿದ್ದಾನೆ. ಸಾರ್ವಜನಿಕರಿಗೆ ನೀಡುವ ಹೆಲ್ಪ್ ಲೈನ್ ಗಾಗಿ ನೀಡುವ ದೂರವಾಣಿ ಸಂಖ್ಯೆಯನ್ನು ಸಚಿವಾಲಯದ ಕಚೇರಿ ನಂಬರ್ ನೀಡಿದ್ದಾನೆ. ಹೀಗಾಗಿ ಜನರು ಇದೇ ಸರ್ಕಾರದ ಅಧಿಕೃತ ವೆಬ್‍ಸೈಟ್ ಎಂದು ತಿಳಿದು ಹಣವನ್ನು ಪಾವತಿ ಮಾಡಿದ್ದಾರೆ.

    ಪತ್ತೆಯಾಗಿದ್ದು ಹೇಗೆ?
    ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಪೊಲೀಸರು ವೆಬ್‍ಸೈಟ್ ನ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಹುದ್ದೆಗಾಗಿ ಅರ್ಜಿ ಸಲ್ಲಿಸುವ ಶುಲ್ಕವನ್ನು ಐಸಿಐಸಿಐ ಬ್ಯಾಂಕ್‍ ನ ಖಾತೆಗೆ ಕಟ್ಟುತ್ತಿರುವುದು ಪತ್ತೆಯಾಗಿದೆ. ನಂತರ ಖಾತೆಯ ಮಾಹಿತಿಯನ್ನು ಪಡೆದಾಗ ಆರೋಪಿ ಬಗ್ಗೆ ಸುಳಿವು ಸಿಕ್ಕಿದೆ. ವಿಚಾರಣೆ ಆರಂಭದಲ್ಲಿ ತನಿಖೆಯ ದಿಕ್ಕನ್ನು ತಪ್ಪಿಸುವ ಎಲ್ಲ ಪ್ರಯತ್ನವನ್ನು ಮಾಡಿದ್ದಾನೆ. ಪೊಲೀಸರು ಅನುಮಾನಗೊಂಡು ವಿಚಾರಣೆಯನ್ನು ತೀವ್ರಗೊಳಿಸಿದಾಗ ಒಪ್ಪಿಕೊಂಡಿದ್ದಾನೆ.

    ಎನ್‍ಜಿಓ ಆರಂಭಿಸಿದ್ದನು: ಸುಮಿತ್ ಎನ್‍ಜಿಓ ಒಂದನ್ನು ಆರಂಭಿಸಿದ್ದನು. ದೆಹಲಿ ಕೇಂದ್ರದ ಉಪ-ನೊಂದಣಿ ಕಚೇರಿಯಲ್ಲಿ ಎನ್‍ಜಿಓ ಆರಂಭಿಸಿದರ ಬಗ್ಗೆ ಮಾರ್ಚ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದನು. ನೋಂದಣಿ ಬಳಿಕೆ ವೆಬ್ ಡಿಸೈನರ್ ಬಳಿ ತೆರಳಿ ತನಗೆ ಬೇಕಾದ ಹಾಗೆ ತನ್ನ ಸೈಟ್‍ ನ್ನು ರೂಪಿಸಿಕೊಂಡಿದ್ದನು. ಈ ವೇಳೆ ಸಚಿವಾಲಯದ ಔಟರ್ ಲುಕ್ ಮತ್ತು ಲೋಗೋವನ್ನು ನಕಲು ಮಾಡಿಸಿಕೊಂಡಿದ್ದಾನೆ.

    ಕೆಲವು ದಿನಗಳ ಹಿಂದೆ 6715 ಶಿಕ್ಷಕ/ಕಿ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದಾನೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ್ದಾನೆ. ಒಬ್ಬ ಅಭ್ಯರ್ಥಿಗೆ 800 ರೂ. ಪರೀಕ್ಷಾ ಶುಲ್ಕವನ್ನು ನಿಗಿದಿ ಮಾಡಿದ್ದಾನೆ. ನಿರ್ದಿಷ್ಟ ಕೆಲವು ಜಾತಿ ಮತ್ತು ಪಂಗಡಗಳಿಗೆ ಶುಲ್ಕವನ್ನು ಅರ್ಧದಷ್ಟು ಕಡಿತಗೊಳಿಸಿದ್ದನು ಎಂದು ಡಿಸಿಪಿ ಹೇಳಿದ್ದಾರೆ.

    ಶ್ರೀಮಂತನಾಗಲು ಪ್ಲ್ಯಾನ್ ಮಾಡಿದ್ದ: ಸುಮಿತ್ ಕಡಿಮೆ ಅವಧಿಯಲ್ಲಿ ಶ್ರೀಮಂತ ವ್ಯಕ್ತಿಯಾಗಲು ಪ್ಲ್ಯಾನ್ ಮಾಡಿದ್ದನು. ಸುಮಿತ್ ತನ್ನ ಎನ್‍ಜಿಓ ಮುಖಾಂತರ ಯಾವುದೇ ಶಾಲೆಗಳನ್ನು ಆರಂಭಿಸಿರಲಿಲ್ಲ. ಅತಿ ಹೆಚ್ಚು ಹಣವನ್ನು ಗಳಿಸುವ ಉದ್ದೇಶವನ್ನು ಮಾತ್ರ ಸುಮಿತ್ ಹೊಂದಿದ್ದನು.

    ಪೊಲೀಸರು ಪ್ರಕರಣ ಸಂಬಂಧಿಸಿದಂತೆ ಸುಮಿತ್ ನಿಗೆ ಈ ಕೆಲಸದಲ್ಲಿ ಸಹಾಯ ಮಾಡಿದ್ದ ಮೂವರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ. ವೆಬ್‍ಸೈಟ್ ಡಿಸೈನರ್, ಎನ್‍ಜಿಓ ಸ್ಥಾಪನೆಗೆ ಸಹಾಯ ಮಾಡಿದವರ ಬಂಧನವಾಗಬೇಕಿದೆ.

    ಸರ್ಕಾರಿ ವೆಬ್‍ಸೈಟ್ ಎಂದು ತಿಳಿಯುವುದು ಹೇಗೆ?
    ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ವೆಬ್‍ಸೈಟ್‍ಗಳನ್ನು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್(ಎನ್‍ಐಸಿ) ಸಿದ್ಧಪಡಿಸುತ್ತದೆ. ಎನ್‍ಐಸಿ ಸಿದ್ಧಪಡಿಸಿ ವೆಬ್‍ಸೈಟ್‍ಗಳ ಯೂನಿಫಾರ್ಮ್ ರಿಸೋರ್ಸ್ ಲೋಕೆಟರ್(ಯುಆರೆಲ್)ಗಳು www.pib.nic.in, www.kar.nic.in ಈ ರೀತಿ ಇರುತ್ತದೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲ ವೆಬ್‍ಸೈಟ್‍ಗಳನ್ನು ಎನ್‍ಐಸಿಯೇ ಸಿದ್ಧಪಡಿಸುವುದಿಲ್ಲ. ಹೀಗಾಗಿ ಅವುಗಳ ಒಳಗಡೆ ಇರುವ ಮಾಹಿತಿ, ವೆಬ್‍ಸೈಟಿಗೆ ಲಿಂಕ್ ಆಗಿರುವ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ನೋಡಿದ ಬಳಿಕವಷ್ಟೇ ಇದು ಸರ್ಕಾರಿ ವೆಬ್‍ಸೈಟ್ ಎಂದು ಖಚಿತಪಡಿಸಿಕೊಳ್ಳಬಹುದು.

    https://www.youtube.com/watch?v=zwBR_pwfAnI

    https://www.youtube.com/watch?v=aDskLSZhDR0