Tag: Jesus statue

  • ಕೋಮಾದಲ್ಲಿರುವ ಮಗನ ಜೀವ ಉಳಿಸಲು ದೇವರ ಮೊರೆ ಹೋದ ತಾಯಿ – ಮಗು ಚೇತರಿಕೆ!

    ಕೋಮಾದಲ್ಲಿರುವ ಮಗನ ಜೀವ ಉಳಿಸಲು ದೇವರ ಮೊರೆ ಹೋದ ತಾಯಿ – ಮಗು ಚೇತರಿಕೆ!

    ಬೆಳಗಾವಿ: ಮೆದುಳು ಜ್ವರದಿಂದ ಬಳಲುತ್ತಿದ್ದ ಎಂಟು ವರ್ಷದ ಮಗನ ಜೀವ ಉಳಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸುಸ್ತಾಗಿದ್ದ ದಂಪತಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಬಳಿಕ ಶಿಲುಬೆ ಎದುರು ಮಗುವನ್ನು ಮಲಗಿಸಿ ಮಗುವಿನ ಜೀವ ಉಳಿಸಿಕೊಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.

    ಈ ವಿಷಯ ತಿಳಿದು ಬೆಳಗಾವಿ ಫೇಸ್‍ಬುಕ್ ಫ್ರೆಂಡ್ಸ್ ಸರ್ಕಲ್ ಗೆಳೆಯರ ತಂಡದವರು ಮಗುವಿನ ನೆರವಿಗೆ ಧಾವಿಸಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಸದ್ಯ ಮಗುವಿನ ಆರೋಗ್ಯ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಿದುಳು ಜ್ವರದಿಂದ ಬಳಲುತ್ತಿದ್ದ ಬಾಲಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್

    ಘಟನೆಯ ಹಿನ್ನೆಲೆ:
    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಕೃಷ್ಣಾ, ಮಹಾದೇವಿ ಸೂತ್ರವಿ ದಂಪತಿ ಪುತ್ರ ಶೈಲೇಶ್‍ನಿಗೆ ಮೆದುಳು ಜ್ವರ ಕಾಣಿಸಿಕೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಇದಾದ ಬಳಿಕ ಕೃಷ್ಣಾ, ಮಹಾದೇವಿ ಸೂತ್ರವಿ ದಂಪತಿ ಶೈಲೇಶ್‍ನನ್ನು ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದರು. ಆದ್ರೆ, ಶೈಲೇಶ್ ಆರೋಗ್ಯ ಮಾತ್ರ ಚೇತರಿಕೆ ಆಗಿರಲಿಲ್ಲ. ಇತ್ತ ವೈದ್ಯರು ಕೂಡ ಕೈಚೆಲ್ಲಿದ್ದರು. ಇದನ್ನೂ ಓದಿ: ಕೊಡಗಿನಲ್ಲಿ ಈವರೆಗೆ ಒಟ್ಟು 7 ಬಾರಿ ಭೂಕಂಪನ

    ಇದಾದ ನಂತರ ದಿಕ್ಕು ತೋಚದ ದಂಪತಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಹೊರವಲಯದಲ್ಲಿರುವ ಪ್ರಾರ್ಥನಾ ಮಂದಿರಕ್ಕೆ ತಂದು ಶಿಲುಬೆ ಮುಂದೆ ಮಲಗಿಸಿ ಶೈಲೇಶ್‌ನನ್ನು ಉಳಿಸಿಕೊಡುವಂತೆ ಪರಿಪರಿಯಾಗಿ ದೇವರಲ್ಲಿ ಬೇಡಿಕೊಂಡಿದ್ದರು. ಬಳಿಕ ಫೇಸ್‍ಬುಕ್ ಫ್ರೆಂಡ್ಸ್ ಸರ್ಕಲ್‍ನ ಯುವಕರು ಆ ದಂಪತಿ ನೆರವಿಗೆ ಬಂದ್ದಿದಲ್ಲದೇ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸಹ ಶೈಲೇಶ್‌ ಸಂಪೂರ್ಣ ಆರೋಗ್ಯದ ಖರ್ಚುವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಶೈಲೇಶ್‌ ಚೇತರಿಕೆ ಕಾಣುತ್ತಿದ್ದಾನೆ.

    Live Tv

  • ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು- ಬಿಕ್ಕಿ ಬಿಕ್ಕಿ ಅತ್ತ ಗ್ರಾಮಸ್ಥರು

    ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು- ಬಿಕ್ಕಿ ಬಿಕ್ಕಿ ಅತ್ತ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ಕನಕಪುರದ ಕಪಾಲ ಬೆಟ್ಟದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಾಗರಹಳ್ಳಿ ಬಳಿಯ ಬೆಟ್ಟದಲ್ಲಿ ತಲೆ ಎತ್ತಿದ್ದ ಏಸು ಪ್ರತಿಮೆ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿತ್ತು.

    ಅಕ್ರಮವಾಗಿ ಬೆಟ್ಟದಲ್ಲಿ ನಿರ್ಮಾಣವಾಗಿದ್ದ ಏಸು ಪ್ರತಿಮೆ ಮೇಲೆ ಹಿಂದೂಪರ ಸಂಘಟನೆಗಳ ಕಣ್ಣು ಬಿದ್ದು ಹೋರಾಟಕ್ಕಿಳಿದಿದ್ರು. ಹೀಗಾಗಿ ಎಚ್ಚೆತ್ತ ತಹಶೀಲ್ದಾರ್ ಅಜಿತ್ ರೈ ಇಂದು ಏಸು ಪ್ರತಿಮೆ ತೆರವು ಮಾಡಿದ್ರು. ಆದರೆ ಗ್ರಾಮಸ್ಥರು ಮಾತ್ರ ಏಸು ಪ್ರತಿಮೆ ತೆರವು ಮಾಡಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಹೌದು. ಬೆಟ್ಟದ ಮೇಲೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗ್ರಾಮದ ಕೈಸ್ಥ ಧರ್ಮ ಬೆಂಬಲಿತರು ಬೆಟ್ಟಕ್ಕೆ ಮಹಿಮಾ ಬೆಟ್ಟ ಅಂತ ಹೆಸರಿಟ್ಟು, ಬೆಟ್ಟದ ಮೇಲೆ ಅಕ್ರಮವಾಗಿ ಏಸು ಪ್ರತಿಮೆ, ಶಿಲುಬೆ ಹಾದಿ ನಿರ್ಮಾಣ ಮಾಡಿ ಪ್ರಾರ್ಥನೆ ಮಾಡಿಕೊಂಡು ಬರುತ್ತಿದ್ದರು. ಈ ವಿಚಾರ ಹಿಂದೂಪರ ಸಂಘಟನೆಗಳ ಕಣ್ಣಿಗೆ ಬಿದ್ದು ಕನಕಪುರ ಕಪಾಲ ಬೆಟ್ಟದಂತೆ ದೊಡ್ಡ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಹೀಗಾಗಿ ಎಚ್ಚೆತ್ತ ದೇವನಹಳ್ಳಿ ತಹಶೀಲ್ದಾರ್ ಇಂದು ಏಸು ಪ್ರತಿಮೆ ತೆರವು ಕಾರ್ಯ ನಡೆಸಿದರು.

    ದೊಡ್ಡಬಳ್ಳಾಪುರ ಡಿವೈಎಸ್‍ಪಿ ರಂಗಪ್ಪ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸರು, ಕ್ರೇನ್ ಹಾಗೂ ಟಿಪ್ಪರ್‍ಗಳ ಮೂಲಕ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ತಹಶೀಲ್ದಾರ್ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು ಮಾಡಿದರು.

    ತೆರವು ಮಾಡಿದ ಏಸು ಪ್ರತಿಮೆಯನ್ನ ಟಿಪ್ಪರ್ ಮೂಲಕ ಗ್ರಾಮದಲ್ಲಿನ ಚರ್ಚ್‍ಗೆ ಸ್ಥಳಾಂತರಿಸಲಾಯಿತು. ಆದರೆ ಈ ವೇಳೆ ಬೆಳಗ್ಗೆಯಿಂದಲೂ ಊಟ ತಿಂಡಿ ಬಿಟ್ಟು ಚರ್ಚ್ ಬಳಿ ಮೊಕ್ಕಾಂ ಹೂಡಿದ್ದ ಕೈಸ್ತ ಧರ್ಮೀಯ ಗ್ರಾಮಸ್ಥರು, ಪ್ರತಿಮೆ ಆಗಮಿಸುತ್ತಿದ್ದಂತೆ ಕೈಯಲ್ಲಿ ಮೊಂಬತ್ತಿ ಹಿಡಿದು ಕಣ್ಣಿರು ಸುರಿಸಿ ಗೋಳಾಡಿದರು. ಕನಿಷ್ಠ ಗುಡ್ ಪ್ರೈಡೇ ಹಬ್ಬದವರೆಗೂ ಏಸು ಪ್ರತಿಮೆ ತೆರವು ಮಾಡದಂತೆ ಮನವಿ ಮಾಡಿದ್ರೂ ಅಧಿಕಾರಿಗಳು ಸ್ಪಂದಿಸಲಿಲ್ಲ ಅಂತ ತಮ್ಮ ಅಸಮಾಧಾನ ಹೊರಹಾಕಿದ್ರು.

    ಕನಕಪುರ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ವಿವಾದಂತೆ ಈ ಮಹಿಮಾ ಬೆಟ್ಟದ ಏಸು ಪ್ರತಿಮೆಯೂ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಎಚ್ಚೆತ್ತ ತಾಲೂಕು ಆಡಳಿತ ವಿವಾದ ತೀವ್ರ ಸ್ವರೂಪ ಪಡೆಯುವ ಮುನ್ನವೇ ಏಸು ಪ್ರತಿಮೆ ತೆರವು ಮಾಡಿದೆ. ಇದು ಸ್ಥಳೀಯ ಗ್ರಾಮಸ್ಥರ ಕಣ್ಣೀರಿಗೂ ಕಾರಣವಾಗಿದೆ.

  • ಕಪಾಲ ಬೆಟ್ಟದಂತೆ ದೇವನಹಳ್ಳಿಯ ದೊಡ್ಡಗುಟ್ಟದಲ್ಲೂ ಏಸು ಪ್ರತಿಮೆ ನಿರ್ಮಾಣ

    ಕಪಾಲ ಬೆಟ್ಟದಂತೆ ದೇವನಹಳ್ಳಿಯ ದೊಡ್ಡಗುಟ್ಟದಲ್ಲೂ ಏಸು ಪ್ರತಿಮೆ ನಿರ್ಮಾಣ

    – ದೊಡ್ಡಗುಟ್ಟಕ್ಕೆ ಮಹಿಮಾ ಬೆಟ್ಟವೆಂದು ನಾಮಕರಣ

    ಚಿಕ್ಕಬಳ್ಳಾಪುರ: ರಾಮನಗರದಲ್ಲಿನ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಗುಟ್ಟ ಬೆಟ್ಟದಲ್ಲೂ ಏಸು ಪ್ರತಿಮೆ ನಿರ್ಮಾಣವಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

    ದೊಡ್ಡಸಾಗರಹಳ್ಳಿ ಗ್ರಾಮದ ಬಳಿ ಇರುವ ದೊಡ್ಡಗುಟ್ಟ ಬೆಟ್ಟ ಕಪಾಲ ಬೆಟ್ಟದಂತೆ ವಿವಾದಕ್ಕೆ ಕಾರಣವಾಗುತ್ತಿದೆ. 180 ಮನೆಗಳಿರುವ ಪುಟ್ಟ ಗ್ರಾಮ ದೊಡ್ಡಸಾಗರಹಳ್ಳಿಗೆ ಹೊಂದಿಕೊಂಡಿರುವ ದೊಡ್ಡಗುಟ್ಟ ಬೆಟ್ಟದಲ್ಲಿ ಅಕ್ರಮವಾಗಿ ಏಸು ಪ್ರತಿಮೆ ಹಾಗೂ ಶಿಲುಬೆಗಳನ್ನ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಹಿಂದೂ ಪರ ಸಂಘಟನೆಗಳ ಕಂಗಣ್ಣಿಗೆ ಕಾರಣವಾಗಿದ್ದು, ಹಿಂದೂ ಪರ ಸಂಘಟನೆಯೊಂದು ದೇವನಹಳ್ಳಿ ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.

    ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಏಸು ಪ್ರತಿಮೆ ಹಾಗೂ ಶಿಲುಬೆಗಳನ್ನ ನಿರ್ಮಾಣ ಮಾಡಿರುವುದಲ್ಲದೇ ಗ್ರಾಮಸ್ಥರನ್ನ ಮತಾಂತರ ಮಾಡಿರುವುದಾಗಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ದೊಡ್ಡಗುಟ್ಟ ಬೆಟ್ಟಕ್ಕೆ ಮಹಿಮಾ ಬೆಟ್ಟ ಅಂತ ಹೆಸರು ಬದಲಿಸಲಾಗಿದೆ. ಈ ಹಿಂದೆ ಈ ಬೆಟ್ಟದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ವಿನಾಯಕನ ದೇವಾಲಯಗಳಿತ್ತು, ಸದ್ಯ ಅವುಗಳ ಕುರುಹುಗಳು ಸಿಗದ ಹಾಗೆ ನಾಶಪಡಿಸಿ ಏಸುಪ್ರತಿಮೆ ನಿರ್ಮಾಣ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

    ಈ ಏಸು ಪ್ರತಿಮೆ, ಶಿಲುಬೆಗಳಿಂದ ದೊಡ್ಡಗುಟ್ಟ ಬೆಟ್ಟ ಕಪಾಲ ಬೆಟ್ಟದಂತೆ ವಿವಾದಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ದೊಡ್ಡಬಳ್ಳಾಪುರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಹಿಂದೂ ಪರ ಸಂಘಟನೆಗಳ ಮುಖಂಡರು, ದೊಡ್ಡ ಸಾಗರ ಗ್ರಾಮದ ಸರ್ವೆ ನಂಬರ್ 158ರಲ್ಲಿ ಸರ್ಕಾರಿ ಜಾಗದ ಗುಡ್ಡದಲ್ಲಿ ಶಿಲುಬೆ ಹಾಕಿ ಏಸು ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಜಾಗದ ಗುಡ್ಡಗಳಲ್ಲಿ ಕರ್ನಾಟಕದಲ್ಲಿ ಏಸು ಶಿಲುಬೆ ಹಾಗೂ ಏಸು ಪ್ರತಿಮಗಳನ್ನ ನಿರ್ಮಾಣ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಕೇವಲ ಶಿಲುಬೆ, ಪ್ರತಿಮೆ ನಿರ್ಮಾಣ ಮಾಡುವುದಲ್ಲದೇ ಸುತ್ತಮುತ್ತಲ ಗ್ರಾಮಸ್ಥರನ್ನ ಮತಾಂತರ ಮಾಡುವ ಮೂಲಕ ಸರ್ಕಾರಿ ಜಾಗಗಳನ್ನ ಕಬಳಿಸುವ ಹುನ್ನಾರ ನಡೆಸಲಾಗ್ತಿದೆ. ಇಂತಹ ಕೆಲಸಗಳಿಂದ ಕೋಮು ಸೌಹಾರ್ದ ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಏಸು ಪ್ರತಿಮೆ ನಿರ್ಮಾಣ ಮಾಡಿರುವವರ ಸ್ವಯಂಪ್ರೇರಣೆಯಿಂದ ಪ್ರತಿಮೆ ಹಾಗೂ ಶಿಲುಬೆಯನ್ನ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

    ದೊಡ್ಡಗುಟ್ಟ ಬೆಟ್ಟದ ಮೇಲಿನ ಏಸು ಪ್ರತಿಮೆ ಹಾಗೂ ಶಿಲುಬೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಹಶೀಲ್ದಾರ್ ಅಜಿತ್ ರೈ ಗ್ರಾಮಕ್ಕೆ ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಪಬ್ಲಿಕ್ ಟಿವಿಗೆ ಫೋನ್ ಮೂಲಕ ಪ್ರತಿಕ್ರಿಯಿಸಿದ ತಹಶೀಲ್ದಾರ್, ಸರಿ ಸುಮಾರು 40 ಎಕ್ರೆ ಬೆಟ್ಟದ ಪ್ರದೇಶವಿದ್ದು, ಇದು ಸರ್ಕಾರಿ ಜಾಗವಾಗಿದೆ. ಗ್ರಾಮಸ್ಥರು ಸ್ಮಶಾನಕ್ಕೆ ಈ ಜಾಗದಲ್ಲಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಯಾರಿಗೂ ಏಸು ಪ್ರತಿಮೆ ನಿರ್ಮಾಣ ಮಾಡಲು ಜಾಗ ಕೊಟ್ಟಿಲ್ಲ. ಹೀಗಾಗಿ ಗುರುವಾರ ಗ್ರಾಮಸ್ಥರ ಜೊತೆ ಸಭೆ ನಡೆಸಿ, ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

  • ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ- ಡಿಕೆಶಿ ಕೆಂಡಾಮಂಡಲ

    ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ- ಡಿಕೆಶಿ ಕೆಂಡಾಮಂಡಲ

    ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರೋ ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಅವಕಾಶ ಇಲ್ಲ ಅಂತ ಬಿಜೆಪಿ ಹೇಳ್ತಿದ್ದರೆ, ಏಸು ಪ್ರತಿಮೆ  ಸ್ಥಾಪನೆ ಮಾಡಿಯೇ ಸಿದ್ಧ ಅಂತ ಮಾಜಿ ಸಚಿವ ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ. ಈ ಗೊಂದಲಗಳ ಮಧ್ಯೆ ಸೋಮವಾರ(ನಾಳೆ) ಬಿಜೆಪಿ, ಸ್ವಾಮೀಜಿಗಳ ನಿಯೋಗ ಕಪಾಲ ಬೆಟ್ಟಕ್ಕೆ ಭೇಟಿ ಕೊಡ್ತಿದ್ದು, ಬಿಜೆಪಿ ಭೇಟಿಗೆ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ.

    ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿರೋ ಡಿಕೆ ಶಿವಕುಮಾರ್ ಕನಕಪುರ ಜನರು ಶಾಂತಿ ಕಾಪಾಡಬೇಕು ಅಂತ ಮನವಿ ಮಾಡಿದ್ದಾರೆ. ಬಿಜೆಪಿ ಅವರು ಉದ್ದೇಶ ಪೂರ್ವಕವಾಗಿ ವಿವಾದ ಮಾಡಲು ಸೋಮವಾರ ಕನಕಪುರದ ಕಪಾಲ ಬೆಟ್ಟಕ್ಕೆ ಬರುತ್ತಿದ್ದಾರೆ. ಅಲ್ಲಿ ಸಭೆ ಮಾಡಿ ಗೊಂದಲ ಸೃಷ್ಟಿ ಮಾಡೋದು ಅವರ ಉದ್ದೇಶ. ಹೀಗಾಗಿ ಯಾರು ಬಿಜೆಪಿ ಅವರ ಮಾತಿಗೆ ಶಾಂತಿ ಕಳೆದುಕೊಳ್ಳಬೇಡಿ. ಶಾಂತಿಯುತವಾದ ಕನಕಪುರದ ಗೌರವ ಕಾಪಾಡಿ ಎಂದು ಮನವಿ ಮಾಡಿದ್ದಾರೆ.

    ಅಲ್ಲದೆ ಬಿಜೆಪಿ, ಆರ್ ಎಸ್‍ಎಸ್ ವಿರುದ್ಧವೂ ಗುಡುಗಿರೋ ಡಿಕೆಶಿ, ಹಿಂದುಳಿದ ಕನಕಪುರವನ್ನ ಅಭಿವೃದ್ಧಿ ಮಾಡಿದ್ದೇವೆ. ಇದನ್ನ ಸಹಿಸದ ಬಿಜೆಪಿ, ಆರ್ ಎಸ್‍ಎಸ್ ಶಾಂತಿ ಕದಡಲು ಕನಕಪುರಕ್ಕೆ ಬರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  • ಕೆಂಪೇಗೌಡ್ರ ಮಗ ಅಂತೀರಲ್ಲ, ಹಾಗೇ ನಾನು ಕಾಳೇಗೌಡ್ರ ಮೊಮ್ಮಗ- ಡಿಕೆಶಿಗೆ ಸ್ವಾಮೀಜಿ ಟಾಂಗ್

    ಕೆಂಪೇಗೌಡ್ರ ಮಗ ಅಂತೀರಲ್ಲ, ಹಾಗೇ ನಾನು ಕಾಳೇಗೌಡ್ರ ಮೊಮ್ಮಗ- ಡಿಕೆಶಿಗೆ ಸ್ವಾಮೀಜಿ ಟಾಂಗ್

    ರಾಮನಗರ: ಕನಕಪುರಕ್ಕೂ ಕಾಳಿಗೂ ಏನ್ ಸಂಬಂಧ ಅಂತೀರಾ, ನಾನು ಕನಕಪುರದ ಮೊಮ್ಮಗ. ಮಾಜಿ ಮಂತ್ರಿಗಳೇ ನಾನು ಕನಕಪುರದ ಕೆಂಪೇಗೌಡರ ಮಗ ಅಂತೀರಲ್ಲ, ಹಾಗೇ ಕಾಳೇಗೌಡರ ಮೊಮ್ಮಗ ನಾನು. ಹೆದರಿಸಬೇಡಿ ಇಲ್ಲಿ ಹೆದರಿಕೊಳ್ಳುವವರು ಯಾರೂ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ರಾಮನಗರದಲ್ಲಿ ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ ಟಾಂಗ್ ನೀಡಿದ್ದಾರೆ.

    ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಪ್ರತಿಮೆ ವಿರೋಧಿಸಿದ್ದಾರೆ. ಹಾಗೆಯೇ ಪ್ರತಿಮೆಗಾಗಿ ಕೆತ್ತನೆಯಾಗುತ್ತಿರುವ ಕಪಾಲ ಬೆಟ್ಟದ ಮೇಲಿರುವ ಕಲ್ಲುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರ ಜೊತೆ ಅವರು ರಾಮನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

    ಇದೇ ವೇಳೆ ಮಾತನಾಡಿದ ಸ್ವಾಮೀಜಿ, ಕನಕಪುರ ನಿಮ್ಮದಲ್ಲ, ರಾಮನಗರ ನಿಮ್ಮದಲ್ಲ, ಕರ್ನಾಟಕ ನಿಮ್ಮದಲ್ಲ. ನಮ್ಮದೂ ರಾಮನಗರನೇ, ನಾವು ಕೂಡ ಕರ್ನಾಟಕದವರೇ. ತಪ್ಪು ನಮ್ಮಿಂದ ಆಗಿಲ್ಲ. ಇಂತಹ ಎಷ್ಟೋ ಬೆಟ್ಟಗಳನ್ನು ಹೊಡೆದಿರುವಂತವರೆಲ್ಲ ಬೆಟ್ಟದ ಮೇಲೆ ಇನ್ನೊಂದು ಇಡುವುದಕ್ಕೆ ಹೋಗ್ತಾ ಇದ್ದೀರಾ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್‍ರವರು ಬೆಟ್ಟವನ್ನೇ ಕರಗಿಸಿ ಗಣಿಗಾರಿಕೆ ನಡೆಸಿದ್ದಾರೆ. ಇದೀಗ ಮತ್ತೊಂದು ಬೆಟ್ಟದ ಮೇಲೆ ಏಸುವಿನ ಪ್ರತಿಮೆ ಕೂರಿಸಲು ಹೋಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕಳೆದ ಡಿಸೆಂಬರ್ 31 ರಂದು ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅಪಪ್ರಚಾರ ಹಾಗೂ ದೂರುಗಳನ್ನು ನೀಡುವ ಮೂಲಕ ಹೆದರಿಸಲು ಪ್ರಯತ್ನಿಸ್ತಿದ್ದೀರಿ. ಸೋಷಿಯಲ್ ಮೀಡಿಯಾಗಳಲ್ಲಿ ಮೋದಿ ವಿರುದ್ಧ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ ಎಂದು ಅಪಪ್ರಚಾರ ಮಾಡ್ತಿದ್ದೀರಿ. ಆದರೆ ರಿಷಿಕುಮಾರ ಸ್ವಾಮೀಜಿ ಮೊದಲಿನಂತಿಲ್ಲ ಹೆದರಿಸಬೇಡಿ, ಹೆದರುವವರು ಯಾರೂ ಇಲ್ಲ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

    ಕಪಾಲ ಬೆಟ್ಟದಲ್ಲಿ ಅಕ್ರಮವಾಗಿ ಈಗಾಗಲೇ ರಸ್ತೆ, ವಿದ್ಯುತ್, ಕೊಳವೆ ಬಾವಿ ಸಂಪರ್ಕ ನೀಡಲಾಗಿದೆ. ಸದ್ಯಕ್ಕೆ ಕಪಾಲ ಬೆಟ್ಟದ ಮೇಲೆ ನಡೆಯುತ್ತಿರುವ ಕಲ್ಲು ಕೆತ್ತನೆಯ ಕಾರ್ಯದ ಕಲ್ಲುಗಳನ್ನು ಹಾಗೂ ಬೆಟ್ಟದ ಮೇಲಿರಿಸಿರುವ ಕಲ್ಲು ಕೊರೆಯುವ ಮಷಿನ್‍ಗಳನ್ನು 19 ನೇ ತಾರೀಕಿನ ಒಳಗಾಗಿ ತೆರವುಗೊಳಿಸಬೇಕು. ಇಲ್ಲದಿದ್ರೆ ರಾಮನಗರ ತಾಲೂಕಿನ ಬಿಡದಿ ಸಮೀಪವಿರುವ ಕೋತಿ ಆಂಜನೇಯ ದೇವಾಲಯದಿಂದ ಕಪಾಲ ಬೆಟ್ಟಕ್ಕೆ ಪಾದಯಾತ್ರೆ ನಡೆಸುತ್ತೇವೆ. ಪಾದಯಾತ್ರೆಯಲ್ಲಿ ಅನೇಕ ಸಾಧು-ಸಂತರು, ಉತ್ತರ ಕರ್ನಾಟಕದ ಸಾಧು-ಸಂತರು ಅನೇಕ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸ್ತಾರೆ. ಆ ದಿನ ಏನಾದ್ರೂ ಕಪಾಲ ಬೆಟ್ಟದಲ್ಲಿ ಹೆಚ್ಚು ಕಡಿಮೆಯಾದ್ರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

  • ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಏಸುಕ್ರಿಸ್ತನ ಪ್ರತಿಮೆ ವಿವಾದ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಾಕಷ್ಟು ವಿರೋಧಗಳ ನಡುವೆ ಇದೀಗ ಏಸುಕ್ರಿಸ್ತನ ಬೆಂಬಲಕ್ಕೂ ಕೆಲ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.

    ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣವಾಗುತ್ತಿರುವ 10 ಏಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯುವುದಾದರೆ, ಈ ಹಿಂದೆ ಮಠ, ಆಶ್ರಮ, ದರ್ಗಾದಂತಹ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಜಾಗಗಳನ್ನು ಕೂಡ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಸಮತಾ ಸೈನಿಕದಳದ ಜಿಲ್ಲಾದ್ಯಕ್ಷ ಕೋಟೆ ಕುಮಾರ್ ಆಗ್ರಹಿಸಿದ್ದಾರೆ.

    ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಟನೆ ವತಿಯಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಮೆ ನಿರ್ಮಾಣದ ವಿಚಾರವಾಗಿ ಏನೆಲ್ಲಾ ಅನುಕೂಲಗಳು ಬೇಕಿದೆ, ಜೊತೆಗೆ ಪ್ರತಿಮೆ ವಿರೋಧಿಸುವವರ ವಿರುದ್ಧ ಹೋರಾಟಕ್ಕೂ ತಾವು ಕೈ ಜೋಡಿಸುವುದಾಗಿ ತಿಳಿಸಿದರು.

    ಕೆಲವರು ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರವಾಗಿ ಆಧಾರಗಳೇ ಇಲ್ಲದ ಮತಾಂತರದ ಊಹಾಪೋಹದ ಆರೋಪಗಳನ್ನು ಮಾಡುತ್ತಿದ್ದಾರೆ. ಹಾರೋಬೆಲೆಯಲ್ಲದೇ ಪ್ರತಿಮೆಯಾದರೆ ವಿಶ್ವದ ಜನ ಈ ಭಾಗಕ್ಕೆ ಬರುತ್ತಾರೆ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗಲಿದೆ. ಅಲ್ಲದೇ ಈ ಭಾಗದ ರೈತರ ಜಮೀನುಗಳು ಚಿನ್ನದಂತಹ ಬೆಲೆಯನ್ನ ಪಡೆದುಕೊಳ್ಳಲಿವೆ. ಆದರೆ ಧರ್ಮದ ಹೆಸರಿನಲ್ಲಿ ಕಲಹವನ್ನುಂಟು ಮಾಡುವಂತಹ ಕೆಲಸವನ್ನು ಮತಾಂಧರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಲಂಡನ್‍ನಲ್ಲಿ ವಿಶ್ವಮಾನವತೆ ಸಾರಿದ ಬಸವಣ್ಣನ ವಿಗ್ರಹವನ್ನ ಇಲ್ಲಿಂದ ತೆರಳಿ ಅಲ್ಲಿ ವಾಸ ಮಾಡುತ್ತಿರುವ ಹಿಂದೂಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಪ್ರತಿಮೆಗೆ ಮತಾಂಧರಿಂದ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದೇ ಜ.13ಕ್ಕೆ ಕನಕಪುರ ಚಲೋಗೆ ಮುಂದಾಗಿದ್ದಾರೆ, ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

    ಸರ್ವಧರ್ಮದ ರಾಷ್ಟ್ರ ನಮ್ಮದಾಗಿದ್ದು. ಸಂವಿಧಾನದಲ್ಲೇ ಸರ್ವಧರ್ಮದ ಕಲ್ಪನೆಯನ್ನ ಹೇಳಲಾಗಿದೆ. ದೇಶದಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ, ಜೈನ, ಭೌದ್ಧರು ವಾಸಿಸುತ್ತಿದ್ದಾರೆ. ಕೆಲವರು ಸಮಾಜದ ಸ್ವಾಸ್ಥ್ಯ ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರತಿಮೆ ನಿರ್ಮಾಣದ ಜಾಗ ವಾಪಸ್ ಪಡೆಯುವಂತೆ ಆಗ್ರಹಿಸಿರುವುದು ಸರಿಯಲ್ಲ ಎಂದರು.

     

  • ಕಪಾಲ ಬೆಟ್ಟ ವಿವಾದ- ಜ.13ಕ್ಕೆ ಕನಕಪುರ ಚಲೋ

    ಕಪಾಲ ಬೆಟ್ಟ ವಿವಾದ- ಜ.13ಕ್ಕೆ ಕನಕಪುರ ಚಲೋ

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಎತ್ತರದ ಏಸು ಕ್ರಿಸ್ತನ ಪ್ರತಿಮೆ ವಿಚಾರವಾಗಿ ಹಿಂದೂ ಜಾಗರಣ ವೇದಿಕೆ ಹಾಗೂ ಆರ್‍ಎಸ್‍ಎಸ್ ಕಾರ್ಯಕರ್ತರು ಜ.13 ರಂದು ಕನಕಪುರ ಚಲೋ ಹಮ್ಮಿಕೊಂಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಉಲ್ಲಾಸ್, ಕಪಾಲ ಬೆಟ್ಟ ಮೊದಲಿಗೆ ಮುನೇಶ್ವರ ಬೆಟ್ಟವಾಗಿತ್ತು. ಮುನೇಶ್ವರನ ಆರಾಧನೆ ಮಾಡುತ್ತಿದ್ದ ಕುರುಹು ಇನ್ನೂ ಬೆಟ್ಟದಲ್ಲಿ ಇದೆ. ಆದರೆ ಅದೇ ಸ್ಥಳದಲ್ಲಿ ಶಿಲುಬೆ ನಿಲ್ಲಿಸಲಾಗಿದೆ. ಈ ಮೂಲಕ ಹಿಂದೂ ಧರ್ಮದವರನ್ನು ತುಳಿದು ಮತಾಂತರ ಮಾಡಿಸಿರುವ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

    ಕಪಾಲ ಬೆಟ್ಟ ಅರಣ್ಯ ಪ್ರದೇಶವಾಗಿದ್ದು, ಗೋಮಾಳ ಜಮೀನಾಗಿದೆ. ಗೋಮಾಳ ಗೋವುಗಳಿಗೆ ಮೀಸಲಿಟ್ಟ ಜಾಗವಾಗಿದ್ದು, ಅಲ್ಲಿನ ಗೋವುಗಳು ಪರದಾಡುವಂತಹ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಜಮೀನು ಪರಭಾರೆ ಕಾನೂನು ಬಾಹಿರವಾಗಿ ನಡೆದಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತೆ ಜಮೀನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ಜ.13ರಂದು ಕನಕಪುರ ಚಲೋ ನಡೆಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್‍ನ ಕ್ಷೇತ್ರೀಯ ಪ್ರಮುಖ್ ಪ್ರಭಾಕರ್ ಕಲ್ಲಡ್ಕ ಭಟ್ ಭಾಗವಹಿಸಲಿದ್ದು, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

    ರಾಮನಗರ ಸೇರಿದಂತೆ ಮಂಡ್ಯ, ಕೋಲಾರ ಭಾಗದಲ್ಲಿ ಪ್ರಮುಖವಾಗಿ ಒಕ್ಕಲಿಗರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಕಾದಿದೆ ಎಂದರು.

  • ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಿ- ಸಿಎಂ ಭೇಟಿ ಮಾಡಿದ ಕ್ರೈಸ್ತರ ನಿಯೋಗ

    ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಿ- ಸಿಎಂ ಭೇಟಿ ಮಾಡಿದ ಕ್ರೈಸ್ತರ ನಿಯೋಗ

    ಬೆಂಗಳೂರು: ಕನಕಪುರದ ಹಾರೋಬೆಲೆಯಲ್ಲಿರುವ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಲು ಅವಕಾಶ ಕೋರಿ ಕ್ರೈಸ್ತರ ನಿಯೋಗ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ.

    ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೊ ನೇತೃತ್ವದ ನಿಯೋಗದಿಂದ ಇಂದು ಮಧ್ಯಾಹ್ನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಬಿಎಸ್‍ವೈ ಭೇಟಿ ಮಾಡಿ ಮಾತುಕತೆ ನಡೆಸಲಾಯ್ತು. ಈ ವೇಳೆ ಕಪಾಲ ಬೆಟ್ಟದಲ್ಲಿ ಕ್ರೈಸ್ತ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡುವಂತೆ ಸಿಎಂಗೆ ಮನವಿ ನಿಯೋಗದಿಂದ ಮನವಿ ಮಾಡಲಾಯಿತು.

    ಸಿಎಂ ಭೇಟಿ ಬಳಿಕ ಮಾತಾಡಿದ ಪೀಟರ್ ಮಚಾಡೊ, ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಸಿಎಂಗೆ ಮನವಿ ಮಾಡಿದ್ದೇವೆ. ಇದರಲ್ಲಿ ಯಾರೂ ರಾಜಕೀಯ ಮಾಡೋದು ಬೇಡ. ಸುಮಾರು ವರ್ಷಗಳಿಂದಲೂ ಏಸುವನ್ನು ಅಲ್ಲಿ ನಾವು ಪೂಜಿಸುತ್ತಾ ಬಂದಿದ್ದೇವೆ. ಅಲ್ಲಿ ಈಗ ಏಸು ಪ್ರತಿಮೆ ನಿರ್ಮಾಣ ಆಗುತ್ತಿದೆ. ಇದಕ್ಕೆ ವಿರೋಧ ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

    ಕಪಾಲ ಬೆಟ್ಟದಲ್ಲಿ ಹಿಂದೂ ದೇವತೆಗಳನ್ನು ಪೂಜೆ ಮಾಡುತ್ತಾ ಇದ್ದರು ಎನ್ನುವ ವಿಷಯದ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಷ್ಟಕ್ಕೂ ಅದು ಕಪಾಲಿ ಬೆಟ್ಟ ಅಲ್ಲ. ಅದು ಕಪಾಲ ಬೆಟ್ಟ. ಕಪಾಲಿ ಬೆಟ್ಟ ಅಂತ ಆಗಿದ್ದು ಹೇಗೆಂದು ಗೊತ್ತಿಲ್ಲ ಅಂತ ಇದೇ ವೇಳೆ ಪೀಟರ್ ಮಚಾಡೊ ಹೇಳಿದರು.

    ಕಪಾಲ ಬೆಟ್ಟದ ಸುತ್ತಮುತ್ತಲಿನ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪವನ್ನೂ ಅವರು ಅಲ್ಲಗಳೆದರು. ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಮತಾಂತರ ಮಾಡೋದು ಸುಲಭ ಅಲ್ಲ. ಹಿಂದೆ ಬಂದಿದ್ದ ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿರಬಹದು. ನಾವು ಒಂದೂವರೆ ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಿದ್ದೇವೆ. ಒಬ್ಬರನ್ನಾದರೂ ಮತಾಂತರ ಮಾಡಿದ್ದನ್ನು ತೋರಿಸಲಿ ಎಂದು ಪೀಟರ್ ಮಚಾಡೋ ಸ್ಪಷ್ಟಪಡಿಸಿದರು.

    ಕ್ರೈಸ್ತರ ನಿಯೋಗಕ್ಕೆ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟ ಭರವಸೆ ಕೊಟ್ಟಿಲ್ಲ ಎನ್ನಲಾಗಿದೆ. ರಾಮನಗರ ಜಿಲ್ಲಾಡಳಿತದಿಂದ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

    ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಡದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ವಿರೋಧಿಸಿ ಜನವರಿ 13ರಂದು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ರಾಮನಗರದಲ್ಲಿ ತಿಳಿಸಿದ್ದಾರೆ.

    ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸಹ ಸೂಚನೆ ನೀಡಲಾಗಿದೆ. ಇದೀಗ ದಿನದಿಂದ ದಿನಕ್ಕೆ ವಿವಾದ ರಂಗೇರುತ್ತಿದ್ದು ಬಿಜೆಪಿ ನಾಯಕರು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ರಾಮನಗರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ನಗರದ ಕೆಂಪೇಗೌಡ ಸರ್ಕಲ್‍ನಿಂದ ಆರಂಭವಾದ ಜಾಗೃತಿ ಜಾಥಾ ಮೆರವಣಿಗೆ ಜೂನಿಯರ್ ಕಾಲೇಜ್ ಮೈದಾನದವರೆಗೆ ನಡೆಸಲಾಯಿತು. ಸಿಎಎ ಬೆಂಬಲದ ಅಭಿಯಾನದಲ್ಲಿ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಈ ವೇಳೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‍ರವರು, ಕಪಾಲ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬರುತ್ತೆ, ಅದು ಗೋಮಾಳದ ಜಮೀನು. ಅಲ್ಲಿ ಅನಧಿಕೃತವಾಗಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡ್ತಿರುವುದು ತಪ್ಪು ಎಂದರು. ಅಲ್ಲದೆ ಅನಧಿಕೃತವಾಗಿ ಪ್ರತಿಮೆ ನಿರ್ಮಾಣವಾಗುತ್ತಿರುವ ದೃಷ್ಟಿಯಿಂದ ಇದೇ ಜನವರಿ 13ರಂದು ಜಿಲ್ಲೆಯಾದ್ಯಂತ ಕಾರ್ಯಕ್ರಮ ರೂಪಿಸಿದ್ದೇವೆ. ಕಪಾಲ ಬೆಟ್ಟಕ್ಕೆ ಭೇಟಿ ನೀಡುತ್ತೇವೆ, ಕನಕಪುರದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.

    ನಾವು ಶಾಂತಿ ಪ್ರಿಯರಾಗಿದ್ದು, ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಕಪಾಲ ಬೆಟ್ಟಕ್ಕೆ ಹೋಗಿ ಬಂದ ಬಳಿಕ ಕನಕಪುರದಲ್ಲಿ ಪ್ರತಿಭಟನೆ ಮೂಲಕ ಜನಜಾಗೃತಿ ಮೂಡಿಸುವಂತಹ ಕೆಲಸ ಮಾಡುವುದಾಗಿ ತಿಳಿಸಿದರು.

  • ಏಸು ಪ್ರತಿಮೆ ನಿರ್ಮಾಣ ಹಿನ್ನೆಲೆ – ಕಪಾಲ ಬೆಟ್ಟಕ್ಕೆ ಬಿಜೆಪಿ ಕಾರ್ಯಕರ್ತರು ಭೇಟಿ

    ಏಸು ಪ್ರತಿಮೆ ನಿರ್ಮಾಣ ಹಿನ್ನೆಲೆ – ಕಪಾಲ ಬೆಟ್ಟಕ್ಕೆ ಬಿಜೆಪಿ ಕಾರ್ಯಕರ್ತರು ಭೇಟಿ

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಕ್ರಿಸ್ತನ ಪ್ರತಿಮೆ ವಿಚಾರವಾಗಿ ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ದಿನನಿತ್ಯ ಬಿಜೆಪಿ ಸರ್ಕಾರದ ಸಚಿವರು, ನಾಯಕರು ಸಹ ಪ್ರತಿಮೆ ನಿರ್ಮಾಣದ ವಿಚಾರವಾಗಿ ಭೂಮಿ ಮಂಜೂರಾತಿ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಬಿಜೆಪಿ ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

    ಹಾರೋಬೆಲೆಯ ಕಪಾಲ ಬೆಟ್ಟಕ್ಕೆ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ನೇತೃತ್ವದ ಸುಮಾರು 50 ಮುಖಂಡರು, ಕಾರ್ಯಕರ್ತರ ತಂಡ ಕಪಾಲ ಬೆಟ್ಟಕ್ಕೆ ಭೇಟಿ ನೀಡಿತ್ತು. ಕಪಾಲ ಬೆಟ್ಟದ ತಳಭಾಗದಿಂದಲೂ ಕೂಡಾ ನಡೆದುಕೊಂಡೇ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳದವರೆಗೆ ಬೆಟ್ಟದ ವೀಕ್ಷಣೆ ಹಾಗೂ ಈ ಹಿಂದಿನ ಕುರುಹುಗಳ ವೀಕ್ಷಣೆ ನಡೆಸುತ್ತಾ ಸಾಗಿದರು. ಅಲ್ಲದೇ ಬೆಟ್ಟದ ಮೇಲ್ಭಾಗದಲ್ಲಿನ ಶಿಲುಬೆಯ ತಳಭಾಗದಲ್ಲಿ ಇರುವ ಮುನೇಶ್ವರ ಸ್ವಾಮಿಯ ಕಲ್ಲುಗಳು ಹಾಗೂ ಮುನಿಸೇವೆ ಮಾಡುತ್ತಿದ್ದ ಕುರುಹುಗಳ ವೀಕ್ಷಣೆ ಮಾಡಿದ್ರು.

    ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಕ್ರಿಸ್ತನ ಪ್ರತಿಮೆಯ ಜಾಗವವನ್ನು ವೀಕ್ಷಣೆ ಮಾಡಿದರು. ಅಲ್ಲದೇ ಕಪಾಲ ಬೆಟ್ಟ ಈ ಹಿಂದೆ ಮುನೇಶ್ವರ ಬೆಟ್ಟವಾಗಿತ್ತು ಅದಕ್ಕೆ ಸಂಬಂಧಪಟ್ಟ ಕುರುಹುಗಳು ಶಿಲುಬೆಯಿರುವ ಜಾಗದಲ್ಲಿದೆ ಎಂದರು. ಕಪಾಲ ಬೆಟ್ಟ ಸಾಕಷ್ಟು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಯಾವುದೇ ರೀತಿ ಘಟನೆ ನಡೆದರೂ ಇದೀಗ ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಲಿದ್ದು, ಏಸುವಿನ ಮಾದರಿ ಪ್ರತಿಮೆ ಬಳಿ ಹಾಗೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಾಲ್ಕು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

    ಕಪಾಲ ಬೆಟ್ಟದ ಭೇಟಿ ವಿಚಾರವಾಗಿ ಮಾತನಾಡಿದ ಬಿಜೆಪಿ ಜಿಲ್ಲಾದ್ಯಕ್ಷ ಎಂ.ರುದ್ರೇಶ್, ಪ್ರತಿಮೆ ನಿರ್ಮಾಣದ ಜಾಗದ ವಸ್ತುಸ್ಥಿತಿ ಹೇಗಿದೆ, ಪ್ರತಿಮೆ ನಿರ್ಮಾಣಕ್ಕು ಮುನ್ನ ಬೆಟ್ಟದ ವಸ್ತುಸ್ಥಿತಿ ಹೇಗಿತ್ತು ಎಂಬ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ವರದಿ ಕೇಳಿದ್ದು ಜಾಗದ ವರದಿಯನ್ನ ನೀಡಲಿದ್ದೇವೆ. ಅದರ ಮುಂದಿನ ಕಾನೂನು ಕ್ರಮ ಏನಿದೆ ಅವರು ತೆಗೆದುಕೊಳ್ಳಲಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಅವರು ಕೂಡಾ ಕಪಾಲ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

    ಏಸುಕ್ರಿಸ್ತನ ಪ್ರತಿಮೆ ನಿರ್ಮಾಣದ ಬೆಟ್ಟದ ತುದಿಗೆ ತೆರಳಲು ಮಣ್ಣಿನ ರಸ್ತೆ ಹಲವಾರು ವರ್ಷಗಳಿಂದ ಇದೆ. ಇತ್ತೀಚೆಗೆ ಪ್ರತಿಮೆಯ ಶಿಲಾನ್ಯಾಸದ ವೇಳೆ ರಸ್ತೆಯನ್ನ ಜೆಸಿಬಿ ಬಳಸಿ ಅಲ್ಪಸ್ವಲ್ಪ ದುರಸ್ಥಿ ಕಾರ್ಯ ನಡೆಸಲಾಗಿತ್ತು. ಆದರೆ ನಿನ್ನೆ ಕೆಲವರು ದಾರಿಯಲ್ಲಿ ಕೆಲವು ಕಡೆಗಳಲ್ಲಿ ಗುಂಡಿಗಳನ್ನು ತೋಡಿದ್ದು ವಾಹನಗಳು ಓಡಾಡಂತೆ ಮಾಡಿದ್ದಾರೆ. ಸುಮಾರು ಎರಡ್ಮೂರು ಅಡಿಗಳಷ್ಟು ಆಳವಾಗಿ ನಾಲ್ಕು ಕಡೆಗಳಲ್ಲಿ ಗುಂಡಿಗಳನ್ನು ತೆಗೆದಿದ್ದು ವಾಹನಗಳು ಬೆಟ್ಟದ ಮೇಲ್ಭಾಗಕ್ಕೆ ತೆರಳದಂತೆ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಈ ರೀತಿ ಮಾಡಿ ಬೆಟ್ಟಕ್ಕೆ ಬರುವವರ ವಿರುದ್ಧ ಹಗೆತನ ಸಾಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.