Tag: jeep

  • ಪೊಲೀಸ್ ಜೀಪ್ ಏರಿದ ನಾಗರಾಜನ ರಕ್ಷಣೆ

    ಪೊಲೀಸ್ ಜೀಪ್ ಏರಿದ ನಾಗರಾಜನ ರಕ್ಷಣೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವೃತ್ತನೀರಿಕ್ಷಕ ಎಂ.ಬಿ.ನವೀನ್ ಕುಮಾರ್ ಪೊಲೀಸ್ ಜೀಪಿನಲ್ಲಿ ಪತ್ತೆಯಾಗಿರುವ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

    ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಕರ್ತವ್ಯ ನಿಮಿತ್ತ ಹೊರ ಹೋಗಿ ಠಾಣೆಗೆ ವಾಪಾಸ್ಸಾಗುತ್ತಿದ್ದಾಗ ಬಸವಭವನದ ಬಳಿ ಬೈಕ್ ಸವಾರರೊಬ್ಬರು ಪೊಲೀಸ್ ಜೀಪಿನಲ್ಲಿ ಹಾವು ಇರೋದನ್ನ ಕಂಡಿದ್ದಾರೆ. ಕೂಡಲೇ ಪೊಲೀಸ್ ಜೀಪ್ ತಡೆದು ಸರ್ಕಲ್ ಇನ್ಸ್‍ಪೆಕ್ಟರ್‍ಗೆ ಮಾಹಿತಿ ನೀಡಿ ವಾಹನ ನಿಲ್ಲಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗರಕ್ಷಕ ಟೂಲ್ಸ್ ಬಾಕ್ಸ್ ಸೇರಿದ್ದ ಹಾವನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಸೆರೆ ಸಿಕ್ಕ ಹಾವಿನ ಹೆಸರು ರಾಮಬಾಣದ ಹಾವು ಅಂತ ಕರೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾವು ಎಲ್ಲಿ ಯಾವಾಗ ಪೊಲೀಸ್ ಜೀಪ್ ಏರಿತೋ ಏನೋ ಆದರೆ ಅದೃಷ್ಟವಶಾತ್ ಹಾವಿನಿಂದ ಪೊಲೀಸರಿಗೆ ಯಾವುದೇ ತೊಂದರೆಯಾಗಿಲ್ಲ.

  • KRS ಡ್ಯಾಂ ಮೇಲೆ ಪೊಲೀಸ್ ಜೀಪ್ ಓಡಿಸಿದ ಪ್ರಕರಣ – ಅಧಿಕಾರಿ ಸಸ್ಪೆಂಡ್

    KRS ಡ್ಯಾಂ ಮೇಲೆ ಪೊಲೀಸ್ ಜೀಪ್ ಓಡಿಸಿದ ಪ್ರಕರಣ – ಅಧಿಕಾರಿ ಸಸ್ಪೆಂಡ್

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂ ಮೇಲೆ ಯುವಕನ ಅಂಧ ದರ್ಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ವಾಹನವನ್ನು ಕೊಟ್ಟಿದ್ದ ಪೊಲೀಸಪ್ಪನನ್ನು ಇದೀಗ ಅಮಾನತು ಮಾಡಲಾಗಿದೆ.

    ಅಣೆಕಟ್ಟಿನ ಮೇಲೆ ಪೊಲೀಸ್ ಜೀಪ್ ಚಲಾಯಿಸಿದ್ದಲ್ಲದೇ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದ ಆರೋಪದ ಮೇಲೆ ಸ್ವಾಮಿ. ಎಸ್.ಬಿಯನ್ನು ಸಸ್ಪೆಂಡ್ ಮಾಡಲಾಗಿದೆ. ಸ್ವಾಮಿ ಅವರು ಕರ್ನಾಟಕ ಕೈಗಾರಿಕಾ ಭದ್ರತೆಯ 3ನೇ ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

    ಫೆಬ್ರವರಿ 09 ರಂದು ಸಂಜೆ 4 ಗಂಟೆ ಸುಮಾರಿಗೆ ಯುವಕ ಸರ್ಕಾರಿ ಜೀಪ್ ಚಲಾಯಿಸುತ್ತಿದ್ದರೆ ಪೊಲೀಸ್ ಅಧಿಕಾರಿ ಮಾತ್ರ ಪಕ್ಕದಲ್ಲಿ ಕೂತು ಮೊಬೈಲ್ ನಲ್ಲಿ ಶೂಟ್ ಮಾಡಿದ್ದರು. ಈ ಕುರಿತು ಫೆಬ್ರವರಿ 27 ರಂದು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆ ಅಂತ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನುಓದಿ: KRS ಅಣೆಕಟ್ಟೆ ಮೇಲೆ ಪೊಲೀಸ್ ಜೀಪ್‍ ಓಡಿಸಿದ ಯುವಕ

    ಇದೀಗ ಪೊಲೀಸ್ ಇಲಾಖೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಡ್ಯಾಂ ಮೇಲೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದರೂ ಯುವಕ ದರ್ಬಾರ್ ಮಾಡಲು ಅವಕಾಶ ನೀಡಲಾಗಿರುವುದರಿಂದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • ಟ್ರಕ್, ಜೀಪ್ ಡಿಕ್ಕಿ ಭೀಕರ ಅಪಘಾತದಲ್ಲಿ 6 ಸಾವು, 11 ಮಂದಿಗೆ ಗಾಯ

    ಟ್ರಕ್, ಜೀಪ್ ಡಿಕ್ಕಿ ಭೀಕರ ಅಪಘಾತದಲ್ಲಿ 6 ಸಾವು, 11 ಮಂದಿಗೆ ಗಾಯ

    ಲಕ್ನೋ: ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದ ವೇಳೆ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಜೌನ್‍ಪುರ ಜಿಲ್ಲೆಯ ವಾರಾಣಸಿ-ಜಾನ್‍ಪುರ ಹೆದ್ದಾರಿಯಲ್ಲಿ ನಡೆದಿದೆ.

    ಮೃತರನ್ನು ಅಮರ್ ಬಹದ್ದೂರ್ ಯಾದವ್(58), ರಾಮ್ ಸಿಂಗಾರ್ ಯಾದವ್ (38), ಮುನ್ನಿಲಾಲ್(38), ಇಂದ್ರಜಿತ್ ಯಾದವ್(48), ಕಮಲಾ ಪ್ರಸಾದ್ ಯಾದವ್(60) ಹಾಗೂ ರಾಮ್ ಕುಮಾರ್(65) ಎಂದು ಗುರುತಿಸಲಾಗಿದೆ. 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ವಾರಣಾಸಿಯಲ್ಲಿ ನಡೆದ ಅಂತ್ಯಕ್ರಿಯೆಯನ್ನು ಮುಗಿಸಿ 17 ಮಂದಿ ಜೀಪಿನಲ್ಲಿ ವಾಪಾಸಾಗುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಟ್ರಕ್ ಮತ್ತು ಜೀಪ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಪರಿಣಾಮವಾಗಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿದ್ದಾರೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.

  • ಗ್ರಾ.ಪಂ. ಎಲೆಕ್ಷನ್ ವಿಜಯೋತ್ಸವದ ವೇಳೆ ವಾಹನ ಪಲ್ಟಿ – ಓರ್ವ ಸಾವು

    ಗ್ರಾ.ಪಂ. ಎಲೆಕ್ಷನ್ ವಿಜಯೋತ್ಸವದ ವೇಳೆ ವಾಹನ ಪಲ್ಟಿ – ಓರ್ವ ಸಾವು

    ಮಂಗಳೂರು: ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶದ ಬಳಿಕ ನಡೆದ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ನೆಟ್ಲ ನಿವಾಸಿ ನರೇಶ್ (30) ಎಂದು ಗುರುತಿಸಲಾಗಿದೆ. ನಿನ್ನೆ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಅಂತೆಯೇ ಗೋಳ್ತಮಜಲು ಗ್ರಾಮ ಪಂಚಾಯ್ತಿಯಲ್ಲಿ ಗೆದ್ದವರಿಂದ ಸಂಭ್ರಮಾಚರಣೆ ನಡೆಸಲಾಗುತ್ತಿತ್ತು.

    ಸಂಭ್ರಮದ ವೇಳೆ ಜೀಪ್ ಪಲ್ಟಿಯಾಗಿದೆ. ಪರಿಣಾಮ ನರೇಶ್ ಸಾವನ್ನಪ್ಪಿದ್ರೆ, ಜೀಪ್ ನಲ್ಲಿದ್ದ ವಿಜೇತ ಅಭ್ಯರ್ಥಿ ದೀಪಕ್, ಜಗನ್ನಾಥ, ಗುರುವಪ್ಪ, ಸುಚಿತ್ರಾ, ನಳಿನಿ ಹಾಗೂ ಯೋಗೀಶ್ ಗೆ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಘಟನೆ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಟಾಕಿ ತರುವಾಗ ಅಪಘಾತ – ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

    ಪಟಾಕಿ ತರುವಾಗ ಅಪಘಾತ – ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

    ಚಿಕ್ಕಮಗಳೂರು: ಮನೆಗೆ ಪಟಾಕಿ ತೆಗೆದುಕೊಂಡು ವಾಪಸ್ ಹಿಂದಿರುಗುವಾಗ ಬೈಕಿಗೆ ಜೀಪ್ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು 25 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಬಾವಿಕೆರೆಯಿಂದ ಸುಮಾರು 8 ಕಿ.ಮೀ ದೂರದ ರಂಗೇನಹಳ್ಳಿಗೆ ಪಟಾಕಿ ತರಲು ಹೋದವನು ಇನ್ನೇನು ಬಂದೇ ಬಿಟ್ಟ ಎಂದು ಮನೆಯವರು ದಾರಿ ಕಾಯುತ್ತಿದ್ದರು. ಆದರೆ ಅರುಣ್ ದಾರಿ ಎದುರು ನೋಡುತ್ತಿದ್ದ ಮನೆಯವರಿಗೆ ಬಿಗ್ ಶಾಕ್ ಕಾದಿತ್ತು. ಬೆಳಗ್ಗೆಯಿಂದ ಮನೆಯಲ್ಲಿದ್ದವನು ಸಂಜೆ ಪಟಾಕಿ ತರಲು ಹೋಗಿ ವಾಪಸ್ ಬರಲಿಲ್ಲ ಎಂಬ ವಿಷಯ ಕೇಳಿ ಆತನ ಮನೆಯಲ್ಲಿ ಹಬ್ಬದ ಸಂಭ್ರಮವೇ ಇಲ್ಲದಂತಾಗಿತ್ತು.

    ಮೃತ ಅರುಣ್ ಬಾವಿಕೆರೆ ಗ್ರಾಮದಿಂದ ರಂಗೇನಹಳ್ಳಿಗೆ ಪಟಾಕಿ ತರಲು ತನ್ನ ಸ್ನೇಹಿತ ಕಿರಣ್ ಜೊತೆ ಹೋಗಿದ್ದ. ಪಟಾಕಿಯನ್ನು ತೆಗೆದುಕೊಂಡು ವಾಪಸ್ ಬರುವಾಗ ಬಾವಿಕೆರೆ ಸಮೀಪ ಎದುರಿನಿಂದ ಬಂದ ಜೀಪ್ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅರುಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ಕಿರಣ್‍ಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಕಿರಣ್ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಕಿರಣ್ ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬಕ್ಕಾಗಿ ಊರಿಗೆ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸ್ ಜೀಪ್ ಕದ್ದು ಕಾಡಿನೊಳಗೆ ಓಡಿ ಹೋದ ಕಳ್ಳ

    ಪೊಲೀಸ್ ಜೀಪ್ ಕದ್ದು ಕಾಡಿನೊಳಗೆ ಓಡಿ ಹೋದ ಕಳ್ಳ

    ಚಿಕ್ಕಮಗಳೂರು: ನಡು ಮಧ್ಯಾಹ್ನ ರಸ್ತೆ ಮಧ್ಯದಲ್ಲಿ ನಿಂತಿದ್ದ ಪೊಲೀಸ್ ಜೀಪನ್ನೇ ಕಳ್ಳನೋರ್ವ ಕದ್ದು ಅಪಘಾತ ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

    ನಗರದ ಹನುಮಂತಪ್ಪ ವೃತ್ತದ ಬಳಿ ಗ್ರಾಮಾಂತರ ಠಾಣೆಯ ರಕ್ಷಾ ಗಾಡಿಯನ್ನು ನಿಲ್ಲಸಿ ಪೊಲೀಸರು ಮೆಡಿಕಲ್ ಸ್ಟೋರ್ ಗೆ ಹೋಗಿ ಬರುವಷ್ಟರಲ್ಲಿ ಜೀಪ್ ಇದ್ದ ಜಾಗದಲ್ಲಿ ಇರಲಿಲ್ಲ. ಪೊಲೀಸರು ಜೀಪಿನಿಂದ ಇಳಿದು ಹೋಗ್ತಿದ್ದಂತೆ ಅದನ್ನು ಗಮನಿಸುತ್ತಿದ್ದ ಕಳ್ಳ ಜೀಪನ್ನು ತೆಗೆದುಕೊಂಡು ಪರಾರಿ ಆಗಿದ್ದಾನೆ.

    ಇದನ್ನು ಗಮನಿಸಿಸ ಪೊಲೀಸರು ಆತನನ್ನು ಹಿಂಬಾಲಿಸಿದ್ದಾರೆ. ನಗರದಿಂದ ಐದು ಕಿ.ಮೀ. ಸಾಗಿದ ಮೇಲೆ ಕಳ್ಳ ಪೊಲೀಸರ ಜೀಪನ್ನು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಬಳಿಕ ಗಾಡಿಯ ನಿಯಂತ್ರಣ ಸಿಗದೆ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದಿದ್ದಾನೆ. ಹಿಂದೆ ಪೊಲೀಸರು ಇರುವುದನ್ನು ಗಮನಿಸಿ ಜೀಪನ್ನು ಅಲ್ಲೇ ಬಿಟ್ಟು ಕಾಡಿನೊಳಗೆ ಓಡಿ ಪರಾರಿಯಾಗಿದ್ದಾನೆ.

    ಪೊಲೀಸರ ವಾಹನವನ್ನೇ ಕದ್ದ ಧೈರ್ಯವಂತನಿಗಾಗಿ ಗ್ರಾಮಾಂತರ ಪೊಲೀಸರು ಕಾಡಿನೊಳಗೆ ಹುಡುಕಾಟ ನಡೆಸಿದ್ದಾರೆ. ಆದರೆ ಆತನ ಸುಳಿವು ಸಿಕ್ಕಿಲ್ಲ.

  • ಭಾರತೀಯ ಸೇನೆಯಲ್ಲಿ ಬಳಸುವ ಜೀಪ್ ಖರೀದಿಸಿದ ಧೋನಿ

    ಭಾರತೀಯ ಸೇನೆಯಲ್ಲಿ ಬಳಸುವ ಜೀಪ್ ಖರೀದಿಸಿದ ಧೋನಿ

    ರಾಂಚಿ: ಇಲ್ಲಿನ ಜೆಎಸ್‍ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನೋಡಲು ಧೋನಿ ಬರುತ್ತಾರೆ ಎಂದು ಕ್ರೀಡಾಭಿಮಾನಿಗಳು ಕಾಯುತ್ತಿದ್ದರೆ ಮಾಜಿ ನಾಯಕ ಭಾರತೀಯ ಸೇನೆ ಬಳಸುತ್ತಿರುವ ಜೀಪ್ ಖರೀದಿಸಿ ರೌಂಡ್ಸ್ ಹೊಡೆಯುತ್ತಿದ್ದಾರೆ.

    ಕ್ರಿಕೆಟ್ ಜೊತೆಗೆ ಧೋನಿಗೆ ಕಾರು, ಬೈಕ್ ಖರೀದಿರುವ ಕ್ರೇಝ್ ಸ್ವಲ್ಪ ಹೆಚ್ಚೇ ಇದೆ. ಧೋನಿ ಅವರ ಮನೆಯಲ್ಲಿ ದುಬಾರಿ ಹಮ್ಮರ್ ಕಾರು ಸೇರಿದಂತೆ ಹಲವು ಕಾರುಗಳಿವೆ. ಇತ್ತೀಚೆಗಷ್ಟೇ ಜೀಪ್ ಕಂಪಾಸ್ ಚೆರೋಕಿ ಟ್ರಾಕ್‍ವಾಕ್ ಕಾರನ್ನು ಖರೀಸಿದ್ದರು. ಈ ಬೆನ್ನಲ್ಲೇ ಅವರ ಮನೆ ಹೊಸ ಅತಿಥಿಯಾಗಿ ನಿಸ್ಸಾನ್ ಕಂಪನಿಯ ಜೊಂಗಾ ಜೀಪ್ ಬಂದಿದೆ.

    ತಮ್ಮ ನೂತನ ಜೀಪ್‍ನಲ್ಲಿ ಜಾಲಿ ರೈಡ್ ಮಾಡಿದ್ದ ಧೋನಿ ಸ್ಥಳೀಯ ಪೆಟ್ರೋಲ್ ಬಂಕ್‍ಗೆ ಬಂದಿದ್ದಾರೆ. ಈ ವೇಳೆ ಧೋನಿ ಅವರನ್ನು ನೋಡಿದ ಅಭಿಮಾನಿಗಳು ಆಟೋಗ್ರಾಫ್‍ಗೆ ಮುಗಿಬಿದ್ದಿದ್ದಾರೆ. ಅಭಿಮಾನಿಗಳನ್ನು ನಿರಾಶೆಗೊಳಿಸದ ಧೋನಿ, ಪ್ರತಿಯೊಬ್ಬರಿಗೂ ಆಟೋಗ್ರಾಫ್ ನೀಡಿ ಸೆಲ್ಫಿ ತೆಗೆಸಿಕೊಂಡಿದ್ದಾರೆ.

    ವಿಶ್ವಕಪ್ ಬಳಿಕ ಧೋನಿ ನಿವೃತ್ತಿಯ ಕುರಿತು ಭಾರೀ ಚರ್ಚೆಗಳು ನಡೆದಿದ್ದು, ಬಿಸಿಸಿಐ ಬಾಂಗ್ಲಾದೇಶದ ಟೂರ್ನಿಗೂ ಅವರನ್ನು ಆಯ್ಕೆ ಮಾಡಿಲ್ಲ. ಪರಿಣಾಮ ಅವರು ಮುಂದಿನ ಅವಧಿಯಲ್ಲಿ ಟೀಂ ಇಂಡಿಯಾ ಪರ ಧೋನಿ ಆಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಧೋನಿ ಆಪ್ತ ವಲಯದಲ್ಲಿರುವ ದಿವಾಕರ್ ಕೂಡ, ನಿವೃತ್ತಿಯ ಬಗ್ಗೆ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದಾರೆ. ಅಲ್ಲದೇ ಧೋನಿ ಅವರ ತೀರ್ಮಾನಗಳ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ. ಅಂದಹಾಗೇ ಧೋನಿ ಟೆಸ್ಟ್ ಕ್ರಿಕೆಟ್‍ಗೆ 2014ರಲ್ಲಿ ನಿವೃತ್ತಿ ಘೋಷಿಸಿದ್ದು, ಸಿಮೀತ ಓವರ್ ಗಳ ಕ್ರಿಕೆಟ್‍ನಲ್ಲಿ ಮಾತ್ರ ಈಗ ಆಡುತ್ತಿದ್ದಾರೆ.

    ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ವಶಕ್ಕೆ ಪಡೆದಿದ್ದು, ರಾಂಚಿ ಪಂದ್ಯವನ್ನು ಗೆಲ್ಲಲು 2 ವಿಕೆಟ್‍ಗಳ ಅಗತ್ಯವಿದೆ.

  • ಸಿಎಂ ಬರಮಾಡಿಕೊಳ್ಳಲು ಹೊರಟಿದ್ದ ಎಸ್ಕಾರ್ಟ್ ವಾಹನ ಪಲ್ಟಿ – ಮೂವರು ಪೊಲೀಸ್ ಸಿಬ್ಬಂದಿಗೆ ಗಾಯ

    ಸಿಎಂ ಬರಮಾಡಿಕೊಳ್ಳಲು ಹೊರಟಿದ್ದ ಎಸ್ಕಾರ್ಟ್ ವಾಹನ ಪಲ್ಟಿ – ಮೂವರು ಪೊಲೀಸ್ ಸಿಬ್ಬಂದಿಗೆ ಗಾಯ

    ಬಾಗಲಕೋಟೆ: ಇಂದು ಬಾಗಲಕೋಟೆ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬರ ಮಾಡಿಕೊಳ್ಳಲು ಹೊರಟಿದ್ದ ಬಾಗಲಕೋಟೆ ಜಿಲ್ಲಾ ಪೊಲೀಸ್ ಬೆಂಗಾವಲು ವಾಹನ ಪಲ್ಟಿ ಆಗಿದೆ.

    ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಎದುರು ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೆಂಗಾವಲು ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದೆ.

    ಈ ಅಪಘಾತದಲ್ಲಿ ಇಳಕಲ್ ಪಿಎಸ್‍ಐ ಕುಮಾರ ಹಾಡಕರ್, ಹವಾಲ್ದಾರ್ ಮಂಜುನಾಥ ರಾಥೋಡ್ ಹಾಗೂ ವಾಹನ ಚಾಲಕ ಶಿವಾನಂದ ಕಟ್ಟಿಮನಿಗೆ ಗಾಯಗೊಂಡಿದ್ದಾರೆ. ಸದ್ಯ ಮೂವರಿಗೆ ಮಹಲಿಂಗಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

  • ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಜೀಪ್ ಚಾಲನೆ – ವಿದ್ಯಾರ್ಥಿನಿ ಸೇರಿ ಮೂವರಿಗೆ ಗಂಭೀರ ಗಾಯ

    ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಜೀಪ್ ಚಾಲನೆ – ವಿದ್ಯಾರ್ಥಿನಿ ಸೇರಿ ಮೂವರಿಗೆ ಗಂಭೀರ ಗಾಯ

    ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಮಹೀಂದ್ರ ಜೀಪನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಶಾಲಾ ವಿದ್ಯಾರ್ಥಿನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಕಾರು ಚಲಾಯಿಸಿದ ಯುವಕ ಸ್ಥಳೀಯ ನಿವಾಸಿಯಾಗಿದ್ದು, ತನ್ನ ಇತರೇ ಇಬ್ಬರು ಗೆಳೆಯರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮಹೀಂದ್ರ ಥಾರ್ ಜೀಪ್ ಚಲಾಯಿಸಿಕೊಂಡು ಬಂದಿದ್ದ. ಈ ವೇಳೆ ಜೀಪನ್ನು ನಿಯಂತ್ರಿಸಲು ವಿಫಲವಾಗಿದ್ದು, ರಸ್ತೆಬದಿ ನಿಲ್ಲಿಸಿದ್ದ ಬೈಕಿಗೆ ಡಿಕ್ಕಿ ಹೊಡೆದು ನಂತರ ಮಹಿಳೆಯೋರ್ವರಿಗೆ ಕಾರು ಡಿಕ್ಕಿಯಾಗಿದೆ. ಆ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಜೀಪ್ ನಿಂತಿದೆ.

    ಪುಟ್ ಪಾತ್ ಮೇಲೆ ನಡೆದುಹೋಗುತ್ತಿದ್ದ ಮಹಿಳೆಗೆ ಜೀಪ್ ಡಿಕ್ಕಿ ಹೊಡೆದಿದ್ದು, ಕ್ಷಣ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಗಾಯಗೊಂಡ ಶಾಲಾ ವಿದ್ಯಾರ್ಥಿನಿ ತಂದೆಯೊಂದಿಗೆ ಶೂ ಖರೀದಿ ಮಾಡಲು ಆಗಮಿಸಿದ್ದರು. ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿನಿ ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.

    ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನ ಅಡಿ ಸಿಕ್ಕ ಸ್ಕೂಟರ್ ನಜ್ಜುಗುಜ್ಜಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಾಗೂ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೀಪನ್ನು ಸ್ಥಳದಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

  • ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ – ಟಿಕ್‍ಟಾಕ್‍ಗೆ ವಿಡಿಯೋ ಅಪ್‍ಲೋಡ್

    ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ – ಟಿಕ್‍ಟಾಕ್‍ಗೆ ವಿಡಿಯೋ ಅಪ್‍ಲೋಡ್

    ರಾಜ್‍ಕೋಟ್: ನಡುರಸ್ತೆಯಲ್ಲಿಯೇ ಜೀಪ್ ಸ್ಟಾರ್ಟಾಗದೆ ನಿಂತ ಪರಿಣಾಮ ಕೋಪಗೊಂಡ ವ್ಯಕ್ತಿ ತನ್ನ ಜೀಪಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಗುಜರಾತ್‍ನ ರಾಜಕೋಟ್‍ನಲ್ಲಿ ಘಟನೆ ನಡೆದಿದ್ದು, ಇಂದ್ರಜೀತ್ ಸಿಂಗ್ ತನ್ನ ಜೀಪಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ. ಈ ಎಲ್ಲಾ ದೃಶ್ಯಗಳನ್ನು ಆತನ ಸ್ನೇಹಿತ ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಟಿಕ್‍ಟಾಕ್‍ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ಇಂದ್ರಜೀತ್ ತನ್ನ ಇಷ್ಟದಂತೆ ಜೀಪ್‍ಗೆ ಹೊಸ ವಿನ್ಯಾಸಗಳನ್ನು ಮಾಡಿಸಿರುವುದು ಕಾಣಬಹುದಾಗಿದೆ. ಅಲ್ಲದೇ ಜೀಪ್‍ಗೆ ಬೆಂಕಿ ಹಚ್ಚಿ ವಿಡಿಯೋ ಮಾಡುತ್ತಿರುವ ಸ್ನೇಹಿತ ಕಡೆ ಇಂದ್ರಜೀತ್ ನಡೆದು ಬಂದಿದ್ದಾನೆ.

    https://twitter.com/dineshjoshi70/status/1168817621891870720

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇಂದ್ರಜೀತ್ ಸಿಂಗ್ ಸೇರಿದಂತೆ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ ಹಚ್ಚುವ ಮೂಲಕ ಸರ್ಕಾರಿ ಆಸ್ತಿಗೆ ನಷ್ಟ ಉಂಟುಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಿದ್ದಾರೆ.

    ಈ ಘಟನೆ ಕುರಿತು ಮಾಹಿತಿ ನೀಡಿರುವ ರಾಜ್‍ಕೋಟ್ ಎಸ್‍ಪಿ ಎಎನ್ ರಾಥೋಡ್, ಜೀಪಿನ ಬ್ಯಾಟರಿ ಕೆಲಸ ಮಾಡದ ಕಾರಣ ಅದು ಸ್ಟಾರ್ಟ್ ಆಗಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಇಂದ್ರಜೀತ್ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.