Tag: jds

  • ವಿಜಯೇಂದ್ರ, ನಿಖಿಲ್‌ ನೇತೃತ್ವದಲ್ಲಿ ಅಶ್ವಮೇಧ ಯಾಗ: ಹೆಚ್‌ಡಿಕೆ

    ವಿಜಯೇಂದ್ರ, ನಿಖಿಲ್‌ ನೇತೃತ್ವದಲ್ಲಿ ಅಶ್ವಮೇಧ ಯಾಗ: ಹೆಚ್‌ಡಿಕೆ

    -ಸರ್ಕಾರಕ್ಕೆ ಅಂತಿಮ ಕಾಲ ಹತ್ತಿರ ಬಂದಿದೆ

    – ಕಾಂಗ್ರೆಸ್ ಭ್ರಷ್ಟಾಚಾರದ ಕಸ ಕ್ಲೀನ್ ಮಾಡಲು ಹೊರಟಿದ್ದೇವೆ

    ರಾಮನಗರ: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ (BJP- JDS) ಅಶ್ವಮೇಧ ಆರಂಭಿಸಿದ್ದು, ಈ ಸರ್ಕಾರದ ಅಂತಿಮ ಕಾಲ ಹತ್ತಿರದಲ್ಲಿಯೇ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

    ರಾಮನಗರದಲ್ಲಿ (Ramnagar) ಮೈಸೂರು ಚಲೋ (Mysuru Chalo) ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ. ನಿಮ್ಮ ಲೆಕ್ಕ ಚುಕ್ತಾ ಮಾಡುತ್ತೇವೆ. ಅಶ್ವಮೇಧಕ್ಕೆ ಚಾಲನೆ ಕೊಟ್ಟಿದ್ದೇವೆ. ನಿಮ್ಮನ್ನು ಮುಗಿಸುವ ಕಾಲ ಹತ್ತಿರ ಬಂದಿದೆ. ಈ ಸರ್ಕಾರ ಯಡಿಯೂರಪ್ಪ ಅವರ ವಿಷಯದಲ್ಲಿ ಅಮಾನುಷವಾಗಿ ವರ್ಸಿಸಿದೆ. ಅವರ ಮನಸ್ಸಿಗೆ ನೋವು ಕೊಟ್ಟಿದೆ. ನಿಮ್ಮ ಪಾಪದ ಕೊಡ ತುಂಬಿ, ನಿಮ್ಮ ಅಂತಿಮ ಕಾಲ ಹತ್ತಿರಕ್ಕೆ ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಬಿಜೆಪಿ-ಜೆಡಿಎಸ್ ಶವಯಾತ್ರೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಕಲಬುರ್ಗಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಶವಯಾತ್ರೆ ಮಾಡಿಸಿದ್ದಾರಲ್ಲ, ಆ ಅಧಿಕಾರಿಯನ್ನು ಬಲಿ ತೆಗೆದುಕೊಂಡು ಆ ಕುಟುಂಬವನ್ನು ಬೀದಿಪಾಲು ಮಾಡಿದ್ದೀರಲ್ಲ. ನಿಮ್ಮ ಪ್ರಾಮಾಣಿಕತೆ ಎಂದರೆ ಇದೇನಾ? ಪೊಲೀಸ್ ಅಧಿಕಾರಿಗಳೇ ನೀವು ಜನರಿಗೆ, ಕರ್ತವ್ಯಕ್ಕೆ ನಿಷ್ಠರಾಗಿ ಕೆಲಸ ಮಾಡಿ. ನಮ್ಮ ಕಾರ್ಯಕರ್ತರ ಮೇಲೆ ಸಿಕ್ಕ ಸಿಕ್ಕವರಿಗೆಲ್ಲ ಕೇಸ್ ಹಾಕುತ್ತಿದ್ದೀರಿ. ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ನನ್ನ ಗಮನಕ್ಕೂ ಬರುತ್ತಿದೆ. ಪರಮೇಶ್ವರ್ ಅವರೇ, ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿ. ಒಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮಡದಿಯ ಪರಿಸ್ಥಿತಿ ಏನು? ಈಗಲಾದರೂ ಪೊಲೀಸರು ಈ ಸರ್ಕಾರದ ವರ್ತನೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹರಿಹಾಯ್ದಿದ್ದಾರೆ.

    ನಾಡಿನ ಬಡ ಜನತೆ ಬೆವರು ಸುರಿಸಿ, ತೆರಿಗೆ ರೂಪದಲ್ಲಿ ಕಟ್ಟಿದ ಹಣ ಲೂಟಿ ಆಗುತ್ತಿದೆ. ಪರಿಶಿಷ್ಟರ ಹಣ ಲೂಟಿ ಮಾಡಿರುವ ಈ ಸರ್ಕಾರ ಇರಬೇಕೋ, ಬೇಡವೋ ಎನ್ನುವ ಕಾರ್ಯಕ್ರಮ ಇದು. ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದೀರಿ. ಮಾತೆತ್ತಿದರೆ 136 ಸೀಟು ಗೆದ್ದಿದ್ದೇವೆ ಎನ್ನುತ್ತೀರಿ. ಶೀಘ್ರದಲ್ಲೇ ನೀವು 16 ಸೀಟಿಗೆ ಬಂದು ನಿಲ್ಲುವ ದಿನ ದೂರವಿಲ್ಲ ಎಂದು ಅವರು ಕುಟುಕಿದ್ದಾರೆ.

    ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಸಿಡಿ ಶಿವು ಅವರು ಅತ್ಯಂತ ಲಘುವಾಗಿ ಮಾತಾಡಿದ್ದಾರೆ. ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಹೌದು. ಬೆಂಗಳೂರಿನಲ್ಲಿ ಕಸ ತೆಗೆಯುವ ಕೆಲಸ ಮಾಡುತ್ತಿದ್ದೆ. ಜಯನಗರ, ವಿಲ್ಸನ್ ಗಾರ್ಡನ್, ಸುಧಾಮನಗರ ವಾರ್ಡುಗಳಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆ ತೆಗೆದುಕೊಂಡಿದ್ದೆ. ಯಾರೋ ಹಿರಿಯರು ನನಗೆ ರಾಜಕೀಯಕ್ಕೆ ಬರಲು ಹೇಳಿ, ನೀನು ಕಸ ತೆಗೆಯುವ ಜಾಗ ಬೇರೆ ಇದೆ. ಅಲ್ಲಿ ಹೋಗಿ ಕೆಲಸ ಮಾಡು ಎಂದು ಹೇಳಿದರು. ಅದಕ್ಕೆ ರಾಜಕೀಯಕ್ಕೆ ಬಂದೆ. ನಾನು ಮತ್ತು ಬಿಜೆಪಿಯವರು ಕಾಂಗ್ರೆಸ್ ಭ್ರಷ್ಟಾಚಾರದ ಕಸ ಕ್ಲೀನ್ ಮಾಡಲು ಹೊರಟಿದ್ದೇವೆ. ಕರ್ನಾಟಕ ರಾಜ್ಯದ ಉದ್ದಗಲಕ್ಕೂ ವ್ಯವಸ್ಥೆಯನ್ನು ಹಾಳು ಮಾಡಿದ್ದೀರಿ. ಅದನ್ನೇ ಸ್ವಚ್ಛ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಡಿಸಿಎಂಗೆ ತಿರುಗೇಟು ಕೊಟ್ಟಿದ್ದಾರೆ.

  • ನೀವು ರೈತರ ಮಗ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ: ಹೆಚ್‍ಡಿಕೆಗೆ ಡಿಕೆಶಿ ವ್ಯಂಗ್ಯ

    ನೀವು ರೈತರ ಮಗ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ: ಹೆಚ್‍ಡಿಕೆಗೆ ಡಿಕೆಶಿ ವ್ಯಂಗ್ಯ

    – ನಾನು ಫೇಸ್ ಟು ಫೇಸ್ ಫೈಟರ್, ಬೇಕಿದ್ರೆ ಫೈಟ್ ಮಾಡೋಣ ಬಾ ಎಂದು ಹೆಚ್‍ಡಿಕೆಗೆ ಸವಾಲು
    – ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ

    ರಾಮನಗರ: ಬಿಜೆಪಿ-ಜೆಡಿಎಸ್ (BJP-JDS) ಮಾಡುತ್ತಿರುವುದು ಪಾದಯಾತ್ರೆಯಲ್ಲ, ಇದು ಪಾಪ ವಿಮೋಚನಾ ಪಾದಯಾತ್ರೆ. ಅವರ ಎಲ್ಲಾ ಪಾಪ ವಿಮೋಚನೆ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.

    ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ, ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅವರ ಪಾಪಗಳನ್ನ ಜನರಿಗೆ ತಿಳಿಸಲು ಪಾದಯಾತ್ರೆ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

    ಬಿಜೆಪಿಯಯವರು ಕುಮಾರಸ್ವಾಮಿಗೆ (H.D Kumaraswamy )ಹಿಂದೆ ಯಾವ ಪ್ರಶ್ನೆ ಕೇಳಿದ್ದರೋ, ಅದಕ್ಕೆ ಮೊದಲು ಉತ್ತರ ಕೊಡಬೇಕು. ಶಾಸಕ ಯತ್ನಾಳ್, ಮಾಜಿ ಸಿಎಂ ಬಿಎಸ್‍ವೈ ಹಾಗೂ ಅವರ ಮಗ ವಿಜಯೆಂದ್ರಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮ ಪಾಪ ವಿಮೋಚನೆ ಪಾದಯಾತ್ರೆಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

    ಈ ಭಾಗದಲ್ಲಿ ಹೆಚ್‍ಡಿಕೆ ಆಯ್ಕೆ ಆಗಿ, ಇಲ್ಲಿ 6 ವರ್ಷ ಅಧಿಕಾರ ನಡೆಸಿದ್ದೀರಿ. ನೀವು ರೈತನ ಮಗ ಪಾಪ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ. ನಮ್ಮ ಕಡೆ ಒಂದು ಗಾದೆ ಇದೆ. ಹುಟ್ಟಿದ ಕರು ಎಲ್ಲಾ ಗೂಳಿ ಆಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ರೈತರಾಗಲು ಸಾಧ್ಯವಿಲ್ಲ. ಕುಮಾರಣ್ಣ ನಿನ್ನ ಕೈಯಲ್ಲಿ ಬಡವರಿಗೆ ಜಮೀನು ಕೊಡಲು ಆಗಲಿಲ್ಲ. ಒಂದು ಸೈಟ್ ಹಂಚಿಕೆ ಮಾಡಿಲ್ಲ.
    ನಾನು ಈ ಕ್ಷೇತ್ರದಲ್ಲಿ ಬಂದು ಜನಸಂದರ್ಶನ ಸಭೆ ಮಾಡಿದ್ದೆ. 22 ಸಾವಿರ ಜನ ಬಂದು ಅರ್ಜಿ ಕೊಟ್ಟಿದ್ದಾರೆ. ಇಷ್ಟು ದಿನ ನೀವು ಇಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

    ಬಾಲಕೃಷ್ಣ ನಿನ್ನ ಸಹೋದರ ಅಲ್ವಾ? ನಿನ್ನ ತಂದೆ, ಪತ್ನಿ, ಕುಟುಂಬ, ಸಹೋದರರು ಎಷ್ಟು ಆಸ್ತಿ ಮಾಡ್ತಿದ್ದಾರೆ. ಒಬ್ಬ ಸರ್ಕಾರಿ ನೌಕರ ಎಷ್ಟು ಆಸ್ತಿ ಮಾಡಲು ಸಾಧ್ಯ? ನಾನು ಹುಟ್ಟಿನಿಂದ ರೈತ, ನೀವು ಎಷ್ಟು ಬೆಳೆ ಬೆಳೆದಿದ್ದೀರಿ ಹೇಳಿ? ನನ್ನನ್ನ ಕಲ್ಲು ಕಳ್ಳ, ಕಲ್ಲು ಲೂಟಿ ಮಾಡಿದ್ದಾನೆ ಎಂದಿದ್ದೀರಿ. ನನ್ನ ಮೇಲೆ, ನನ್ನ ತಮ್ಮನ ಮೇಲೆ ಮತ್ತು ನನ್ನ ಪತ್ನಿ ಮೇಲೆ ಕೇಸ್ ಹಾಕಿ, ನನ್ನನ್ನ ಜೈಲಿಗೆ ಹಾಕಿದ್ದಾಗ ಬಂದು ನೀನು ನೋಡಿದ್ದೆ. ಆಗ ನನ್ನ ಆತ್ಮಸ್ಥೈರ್ಯ ಹೇಗಿತ್ತು ನೋಡಿದ್ದೆ ಅಲ್ವಾ? ನನ್ನ ಹಾಗೂ ನನ್ನ ಕುಟುಂಬ ಮೇಲೆ ಹಾಕಿದ್ದ ಕೇಸ್ ವಜಾ ಆಗಿದೆ ಗೊತ್ತಾ? ಹಾಗೆ ನಿನ್ನ ಅಕ್ರಮವನ್ನೂ ಪಟ್ಟಿ ಮಾಡಿಸುತ್ತಿದ್ದೇನೆ. ಅದರ ಬಗ್ಗೆಯೂ ತನಿಖೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.

    ಹಿಟ್ ಅಂಡ್ ರನ್ ಕುಮಾರಸ್ವಾಮಿ ನೀನು. ನೀನು ಎಲ್ಲರನ್ನೂ ಹೆದರಿಸಿದ ಹಾಗೆ ಬಿಜೆಪಿಯವ್ರನ್ನೂ ಹೆದರಿಸಲು ಹೋದೆ. ಪಾದಯಾತ್ರೆ ಬಗ್ಗೆ ನೀನೊಂದು ಮಾತು, ನಿನ್ನ ಮಗ ಒಂದು ಮಾತು, ಜಿಟಿಡಿ ಒಂದು ಮಾತು ಆಡಿದ್ದೀರಿ. ಈಗ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕ್ತಿದ್ದೀಯಾ? ನಿನಗೆ ನೈತಿಕತೆ ಇದ್ಯಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಚನ್ನಪಟ್ಟಣದ ಉಪಚುನಾವಣೆ ವಿಚಾರವಾಗಿ, ಇಲ್ಲಿ ಹಸ್ತದ ಚಿಹ್ನೆಯೇ ಅಭ್ಯರ್ಥಿ. ಕುಮಾರಸ್ವಾಮಿ ನಾನು ಐದೇ ನಿಮಿಷದಲ್ಲಿ ಮೇಕೆದಾಟಿಗೆ ಅನುಮತಿ ಕೊಡಿಸ್ತೀನಿ ಎಂದಿದ್ದಾರೆ. ನಾನು ಮಂಡ್ಯದಲ್ಲಿ ಅದನ್ನ ರಿವೀಲ್ ಮಾಡ್ತೀನಿ. ಮಂಡ್ಯದ ನಾಯಕರಿಗೆ ನಾನು ಹೇಳ್ತೇನೆ. ಕುಮಾರಸ್ವಾಮಿ, ಯಡಿಯೂರಪ್ಪ ಏನು ಹೇಳಿದ್ರು ಅದನ್ನ ಡಿಸ್ಪ್ಲೈ ಮಾಡಿ. ಚುನಾವಣೆ ವೇಳೆ ಏನು ಮಾತನಾಡಿದ್ರೂ ಅದನ್ನ ಸ್ಕ್ರೀನ್ ಮೇಲೆ ತೋರಿಸಿ. ಅವರ ನವರಂಗಿ ಬಣ್ಣ ಬಯಲು ಮಾಡೋಣ ಎಂದು ಬೆಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ದೇವರಾಜು ಟ್ರಕ್ ಟರ್ಮಿನಲ್ ಹಗರಣದಲ್ಲಿ ಯಾಕೆ ನಿಮ್ಮ ಸಿಎಂ, ಮಂತ್ರಿಗಳು ರಾಜೀನಾಮೆ ಕೊಟ್ಟಿಲ್ಲ. ನಿಮ್ಮ ಪಕ್ಷದವರೇ ಏನು ಹೇಳಿದ್ರು ಅಂತಾ ಗೊತ್ತಿಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ, ಅಮಿತ್ ಶಾ, ಮೋದಿ ಬಗ್ಗೆ ಕುಮಾರಸ್ವಾಮಿ ಏನು ಮಾತಾಡಿದ್ರು ಅನ್ನೋದು ತೋರಿಸಬೇಕಾ? ಅಪ್ಪ ಮಗನ ನಂಬಬೇಡಾ ಹುಷಾರ್ ಅಂತಾ ಯಡಿಯೂರಪ್ಪ ನನಗೆ ಹೇಳಿದ್ರು. ಅಲ್ಲದೇ ಇವಾಗ ಏನು ಇಬ್ರೂ ತಬ್ಬಾಡ್ತ ಇದ್ದೀರಿ. ಪಾಪ ನಿಮ್ಮ ಕುಟುಂಬ ಬೇರೆ ರೇವಣ್ಣ ಕುಟುಂಬ ಬೇರೆ ಅಂತೀರಿ. ಭಾಗ ಆಗಿಬಿಟ್ಟಿದ್ದೀವಿ ಅಂತೀರಿ. ಇನ್ನೂ ನಾನು ಪೆನ್‍ಡ್ರೈವ್ ಹಂಚಿದ್ದೀನಿ ಎಂದು ಹೇಳಿದ್ದೆ. ನಾನು ಫೇಸ್ ಟು ಫೇಸ್ ಫೈಟರ್. ನನ್ನ ಮೇಲೆ ಒಂದು ಸಲ ಸೋತಿದ್ದಿ, ಮತ್ತೊಮ್ಮೆ ಬೇಕಿದ್ರೆ ಫೈಟ್ ಮಾಡೋಣ ಬಾ ಎಂದು ಹೆಚ್‍ಡಿಕೆಗೆ ಬಹಿರಂಗ ಸವಾಲು ಹಾಕಿದ್ದಾರೆ.

  • ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನ ಡಿಕೆಶಿ ಲಪಟಾಯಿಸಿದ್ದಾರೆ – ಹೆಚ್‌ಡಿಕೆ ಬಾಂಬ್‌

    ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನ ಡಿಕೆಶಿ ಲಪಟಾಯಿಸಿದ್ದಾರೆ – ಹೆಚ್‌ಡಿಕೆ ಬಾಂಬ್‌

    – ಹೆಣ್ಣುಮಗಳನ್ನ ಕಿಡ್ನ್ಯಾಪ್‌ ಮಾಡಿ ಸೈಟು ಬರೆಸಿಕೊಂಡಿದ್ದೀರಿ
    – ನಂದು, ವಿಜಯೇಂದ್ರದು ಏನಿದೆ ನಿಮ್ಮ ಬಳಿ ಬಿಚ್ಚಿ ಎಂದು ಹೆಚ್‌ಡಿಕೆ ಸವಾಲ್‌

    ಬೆಂಗಳೂರು: ದಲಿತರಿಗೆ (Dalits) ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನ ಡಿಕೆ ಶಿವಕುಮಾರ್ ಲಪಟಾಯಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಬಾಂಬ್‌ ಸಿಡಿಸಿದ್ದಾರೆ.

    ಪಾದಯಾತ್ರೆ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ (DCM) ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನ ಡಿಕೆ ಶಿವಕುಮಾರ್ ಲಪಟಾಯಿಸಿದ್ದಾರೆ. ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ಇವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ನಾನು ಸಿನಿಮಾ ವಿತರಕ ಆಗಿದ್ದಾಗ ಭೂಮಿ ಖರೀದಿಸಿದ್ದೆ. ಯಾರಿಗೂ ಮೋಸ ಮಾಡಲಿಲ್ಲ. ವಂಚನೆ ಮಾಡಿ ಭೂಮಿ ಖರೀದಿಸಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲ್‌ ಎಸೆದಿದ್ದಾರೆ.

    ಅದೇನೋ ಬಿಚ್ತೀಯೋ ಬಿಚ್ಚು ನೋಡೋಣ:
    ಹೆಣ್ಣು ಮಗಳೊಬ್ಬಳನ್ನ‌ ಕಿಡ್ನ್ಯಾಪ್‌ ಮಾಡಿ ಬೆದರಿಕೆ ಹಾಕಿದ್ದು ಇವರು. ಆ ಹೆಣ್ಣುಮಗಳ ಕಿಡ್ನ್ಯಾಪ್ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ಸೈಟು ಬರೆಸಿಕೊಂಡಿದ್ದೀರಿ. ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು, ವಿಜಯೇಂದ್ರದು ಏನಿದೆ ನಿಮ್ಮ ಬಳಿ ಬಿಚ್ಚಿ? ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ಎಂದು ಡಿ.ಕೆ ಶಿವಕುಮಾರ್‌ (DK Shivakumar) ವಿರುದ್ಧ ಲೇವಡಿ ಮಾಡಿದ್ದಾರೆ.

    ನಾನು ಬಿಚ್ಚೋಕೆ ಹೋದ್ರೆ ನಿಮ್ಮದು ಪುಟ ಗಟ್ಟಲೆ ಇದೆ. ಅದನ್ನ ತನಿಖೆ ಮಾಡೋದಕ್ಕೆ ಹತ್ತತ್ತು ಸಿಬಿಐ, ಇಡಿ ಸಂಸ್ಥೆಗಳನ್ನ ಸ್ಥಾಪನೆ ಮಾಡ್ಬೇಕು. ಅಜ್ಜಯ್ಯನ ಬಗ್ಗೆ ಶಿವಕುಮಾರ್‌ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ನೀವು ಪ್ರಾಮಾಣಿಕವಾಗಿ ಬೆಳೆದು ಬಂದ್ರಾ ಅಂತ ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡ್ತೇನೆ. ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ. ಎಷ್ಟು ಮನೆಗಳನ್ನು ಒಡೆದು ನೀವು ಬೆಳೆದಿರಿ ಅಂತ ಗೊತ್ತಿದೆ ಎಂದು ಎಚ್ಚರಿಸಿದ್ದಾರೆ.

    ರಾಜ್ಯವನ್ನು ದರಿದ್ರದತ್ತ ತೆಗೆದುಕೊಂಡು ಹೋಗಿದ್ದಾರೆ:
    ಈ ಪಾದಯಾತ್ರೆ ಅಸೂಯೆಯಿಂದ ಹಮ್ಮಿಕೊಂಡಿದ್ದಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅಂಗಡಿ ಬಾಗಿಲು ತೆರೆದು ಕೂತಿದೆ. ಗ್ಯಾರಂಟಿಗಳಿಂದ ಬದಲಾವಣೆಗಳನ್ನು ತಂದಿದ್ದೇವೆ ಅನ್ಕೊಂಡಿದ್ದೇವೆ. ಆದ್ರೆ ಗ್ಯಾರಂಟಿಗಳಿಂದ ರಾಜ್ಯವನ್ನು ದರಿದ್ರದತ್ತ ತೆಗೆದುಕೊಂಡು ಹೋಗಿದ್ದಾರೆ. ಮಂತ್ರಿಗಳಲ್ಲಿ ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೀತಿದೆ. ಬಿಜೆಪಿ ಸರ್ಕಾರದಲ್ಲಿ ಅಕ್ರಮ ನಡೆದಿದೆ ಅಂತಾರೆ, ಇವರಿಗೆ ಒಂದೇ ಒಂದು ದಾಖಲೆ ಕೊಡಲು ಆಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಸಿಎಂ ಪತ್ನಿ ಸೈಟು ಪಡೆಯಲು ನಮ್ಮ ವಿರೋಧವಿಲ್ಲ:
    ನಮ್ಮ ಶಾಸಕರು ಇವರ ಅಕ್ರಮದ ಬಗ್ಗೆ ದಾಖಲೆಗಳ ಸಮೇತ ಮಾತಾಡಿದ್ದಾರೆ. ಮೈಸೂರು ನಗರದ ಉಸ್ತುವಾರಿಯನ್ನು ಸಿಎಂ ಅವರೇ ವಹಿಸಿಕೊಂಡಿದ್ದಾರೆ. ಸಿಎಂ ತಮ್ಮ ಪತ್ನಿ ಹೆಸರಲ್ಲಿ 14 ಸೈಟು ಪಡೆಯಲು ನಮ್ಮ ವಿರೋಧ ಇಲ್ಲ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸೈಟು ಪಡೆದಿದ್ದಾರೆ. ಇಲ್ಲಿ ನಿಂಗ, ಜವರ, ದೇವರಾಜ, ದಲಿತ ಅನ್ನೋ ಪ್ರಶ್ನೆ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ 15 ಸೈಟುಗಳನ್ನು ತಗೊಂಡಿದ್ದಾರೆ. ಇದನ್ನು ಸಿಎಂ ಕಾನೂನು ಬಾಹಿರವಾಗಿ ತಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿದ್ದರಾಮಯ್ಯ ಅವರು ಸರ್ಕಾರದ ಆಸ್ತಿ ಲಪಟಾಯಿಸಿದ್ದಾರೆ. ಇದರ ದಾಖಲೆ ಸದನದಲ್ಲಿ ಇಟ್ಟಿದೀವಿ. ಕಾಂಗ್ರೆಸ್ ನಾಯಕರು ಉತ್ತರ ಕೊಡದೇ ಪಲಾಯನ ಮಾಡಿದ್ದಾರೆ. ಇವರಿಗೆ ಯಾರಿಗಾದರೂ ತಾಕತ್ ಇದ್ರೆ, ಗಟ್ಟಿ ಧ್ವನಿ ಇದ್ದರೇ ಅದು ಕುಮಾರಸ್ವಾಮಿಗೆ ಅಂತ ಡಿಸಿಎಂ ಹೇಳಿದ್ದಾರೆ. ಡಿಸಿಎಂ ಅವರು ಏನು ಪ್ರಶ್ನೆ ಗಳನ್ನು ಹಾಕಿದಾರೋ ಅದಕ್ಕೆ ಉತ್ತರ ಕೊಡಲು ಇಲ್ಲಿದ್ದೇನೆ. ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಡಿಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ನಾವೂ ಹಳ್ಳಿಯ ಮಕ್ಕಳೇ, ನಿಮಗಿಂತಲೂ ಹೆಚ್ಚಾಗಿ ಏಕವಚನದಲ್ಲಿ ಮಾತಾನಾಡಲು ನಮಗೂ ಗೊತ್ತು. ಆದ್ರೆ ಆ ಕೆಳಮಟ್ಟಕ್ಕೆ ನಾವು ಇಳಿಯಲ್ಲ ಎಂದು ಡಿಕೆಶಿ ವಿರುದ್ಧ ಹೆಚ್‌ಡಿಕೆ ಗುಡುಗಿದ್ದಾರೆ.

    ಕೇತಗಾನಹಳ್ಳಿಯಲ್ಲಿ ನಾನು ಚಲನಚಿತ್ರ ಪ್ರದರ್ಶಕನಾಗಿದ್ದಾಗ ಚುನಾವಣೆಗೆ ನಿಲ್ಲುವ 15 ವರ್ಷಗಳ ಹಿಂದೆ 45 ಎಕರೆ ಜಮೀನು ತಗೊಂಡಿದ್ದೇನೆ. ಇದನ್ನು ನಾನು ಎಲ್ಲೂ ಮುಚ್ಚಿಟ್ಟಿಲ್ಲ ಎಂದು ತಿಳಿಸಿದ್ದಾರೆ.

  • 2ನೇ ದಿನಕ್ಕೆ ಕಾಲಿಟ್ಟ ದೋಸ್ತಿ ನಾಯಕರ ಪಾದಯಾತ್ರೆ; ಇದು ಹಗರಣಗಳ ಕೂಪ ಅಂತ ವಿಜಯೇಂದ್ರ ವಾಗ್ದಾಳಿ

    2ನೇ ದಿನಕ್ಕೆ ಕಾಲಿಟ್ಟ ದೋಸ್ತಿ ನಾಯಕರ ಪಾದಯಾತ್ರೆ; ಇದು ಹಗರಣಗಳ ಕೂಪ ಅಂತ ವಿಜಯೇಂದ್ರ ವಾಗ್ದಾಳಿ

    – ಪಾದಯಾತ್ರೆಗೂ ಮುನ್ನ `ಬಿಡದಿ ತಟ್ಟೆ ಇಡ್ಲಿ’ ಸವಿದ ಬಿಜೆಪಿ ರಾಜ್ಯಾಧ್ಯಕ್ಷ

    ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ವತಿಯಿಂದ ನಡೆಯುತ್ತಿರುವ `ಮೈಸೂರು ಚಲೋ’ (Mysuru Chalo) ಪಾದಯಾತ್ರೆಯು 2ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನಂದಂತೆಯೇ `ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿʼ, ʻಧಿಕ್ಕಾರ, ಧಿಕ್ಕಾರ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ, ರಾಜ್ಯ ಸರ್ಕಾರಕ್ಕೆ ಧಿಕ್ಕಾರʼ ಘೋಷಣೆಗಳನ್ನು ಬಿಜೆಪಿ-ಜೆಡಿಎಸ್ ನಾಯಕರು ಮೊಳಗಿಸುತ್ತಿದ್ದಾರೆ.

    ಬೆಳಗ್ಗೆ 9:30ರ ಸುಮಾರಿಗೆ 2ನೇ ದಿನದ ಪಾದಯಾತ್ರೆ ಆರಂಭಗೊಂಡಿದ್ದು, ಬಿಡದಿಯಿಂದ ರಾಮನಗರದ (Ramanagara) ಕೆಂಗಲ್‌ವರೆಗೆ ಅಂದ್ರೆ ಸುಮಾರು 22 ಕಿಮೀ ವರೆಗೆ ಪಾದಯಾತ್ರೆ ಸಾಗಲಿದೆ. ರಾಮನಗರದಲ್ಲಿ ಸಂಜೆ 4 ಗಂಟೆ ವೇಳೆಗೆ ದೋಸ್ತಿ ನಾಯಕರಿಂದ ಸಾರ್ವಜನಿಕ ಸಭೆ ನಡೆಯಲಿದೆ. ಶನಿವಾರ (ಆ.3) ಕೆಂಗೇರಿಯಲ್ಲಿ ಉದ್ಘಾಟನೆಗೊಂಡ ಪಾದಯಾತ್ರೆಯು ಮೊದಲ ದಿನ ಬಿಡದಿವರೆಗೆ ನಡೆದಿತ್ತು.

    ತಟ್ಟೆ ಇಡ್ಲಿ ಸವಿದ ವಿಜಯೇಂದ್ರ
    ಪಾದಯಾತ್ರೆಗೂ ಮುನ್ನ ಬಿಡದಿಯಲ್ಲಿ ಮುಖಂಡರ ಜೊತೆ ವಿಜಯೇಂದ್ರ (BY Vijayendra) ತಟ್ಟೆ ಇಡ್ಲಿ ಸವಿದರು. ಈ ವೇಳೆ ಶಾಸಕರಾದ ಸಿ.ಕೆ ರಾಮಮೂರ್ತಿ, ಎಂ. ಕೃಷ್ಣಪ್ಪ, ಡಿ.ಎಸ್ ಅರುಣ್, ಎನ್. ರವಿಕುಮಾರ್, ಶರಣು ಸಲಗರ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಪ್ರಮುಖರು ಉಪಾಹಾರ ಸೇವಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಪಾದಯಾತ್ರೆ ನೋಡಿ ಆಡಳಿತ ಪಕ್ಷ ಗಾಬರಿಯಾಗಿದೆ. ರಾಜ್ಯದ ಜನರ ಪರ ನಾವು ಸರ್ಕಾರಕ್ಕೆ ಪ್ರಶ್ನೆ ಕೇಳ್ತಿದ್ದೀವಿ. ನಮ್ಮ ಪ್ರಶ್ನೆಗಳಿಗೆ ಅವರಿಬ್ಬರೂ (ಸಿಎಂ, ಡಿಸಿಎಂ) ಉತ್ತರ ಕೊಡಬೇಕು. ಅವರು ಉತ್ತರ ಕೊಡುವ ಬದಲು ಬೆದರಿಕೆ ಹಾಕ್ತಿದ್ದಾರೆ. ಸದನದಲ್ಲೂ ಅವರು ಅಕ್ರಮಗಳ ಬಗ್ಗೆ ಉತ್ತರ ಕೊಡಲಿಲ್ಲ. ಆದರೆ ಉತ್ತರ ಕೊಡೋವರೆಗೂ ನಾವು ಬಿಡಲ್ಲ, ಹೋರಾಟ ಬಿಡಲ್ಲ. ಇದು ಹಗರಣಗಳ ಕೂಪ ಆಗಿದೆ. ಆಡಳಿತ ಪಕ್ಷದ ಪರಿಸ್ಥಿತಿ ಹಾಳಾಗಿದೆ. ಭ್ರಷ್ಟಾಚಾರದಲ್ಲಿ ಎಲ್ಲರೂ ನಿರತರಾಗಿದ್ದಾರೆ. ಪಿಎಸ್‌ಐ ಪರಶುರಾಮ್ ಅವರು ಶಾಸಕರ ಒತ್ತಡದ ಕಾರಣ ಮೃತ ಪಟ್ಟಿದ್ದಾರೆ. ಸ್ಥಳೀಯ ಶಾಸಕ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದೇ ಪರಶುರಾಮ್ ಸಾವಿಗೆ ಕಾರಣ. ಅಷ್ಟೇ ಅಲ್ಲ ನಿರಂತರವಾಗಿ ವರ್ಗಾವಣೆ ದಂಧೆಯೂ ನಡೀತಿದೆ ಎಂದು ಗುಡುಗಿದ್ದಾರೆ.

    ಯತ್ನಾಳ್ ವಿರುದ್ಧ ಶಾಸಕ ಕೃಷ್ಣಪ್ಪ ವಾಗ್ದಾಳಿ:
    ಪಾದಯಾತ್ರೆಗೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಕೃಷ್ಣಪ್ಪ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾದಯಾತ್ರೆ ಬಗ್ಗೆ ನಮ್ಮದೇ ಪಕ್ಷದ ಕೆಲವರು ಟೀಕೆ ಮಾಡ್ತಿದ್ದಾರೆ. ಯತ್ನಾಳ್ ಅವರೇ ಯಾಕೆ ಹೀಗ್ ಮಾಡ್ತೀರಿ? ಪಕ್ಷ ಸಂಘಟನೆಗೆ ಗಮನ ಕೊಡಿ. ಬಿಜೆಪಿ ಸರ್ಕಾರ ಇದ್ದಾಗಲೂ ಮಾತಾಡ್ತಿದ್ರಿ, ಈಗಲೂ ಮಾತಾಡ್ತಿದೀರಿ. ಪಕ್ಷದ ವಿಚಾರ ಯಾಕೆ ಹೀಗೆಲ್ಲ ಮಾತಾಡ್ತೀರಿ. ನಿಮ್ಮ ಕ್ಷೇತ್ರದಲ್ಲೇ ನೀವು ಲೀಡ್ ಕೊಡಿಸೋಕ್ಕೆ ಆಗಲಿಲ್ಲ. ನೀವೇನು ಪಾದಯಾತ್ರೆ ಬಗ್ಗೆ ಮಾತಾಡೋದು? ಮೊದಲು ನಿಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಮೈಸೂರು ಚಲೋಗೆ ಭರ್ಜರಿ ಆರಂಭ; ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೋಸ್ತಿ ನಾಯಕರು

    ಮೈಸೂರು ಚಲೋಗೆ ಭರ್ಜರಿ ಆರಂಭ; ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೋಸ್ತಿ ನಾಯಕರು

    ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆಯು ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಶಕ್ತಿಯನ್ನು ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.

    ಕೆಂಗೇರಿಯಲ್ಲಿ ಇಂದು ಬಿಜೆಪಿ-ಜೆಡಿಎಸ್ ಸಮನ್ವಯದಲ್ಲಿ ‘ಮೈಸೂರು ಚಲೋ’ ಪಾದಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಬಾಸಾಹೇಬ ಡಾ.ಅಂಬೇಡ್ಕರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಗಾರಿ ಬಾರಿಸುವ ಮೂಲಕ ಪಾದಯಾತ್ರೆಯನ್ನು ಉದ್ಘಾಟನೆ ಮಾಡಲಾಯಿತು. ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ.. ಧಿಕ್ಕಾರ, ಧಿಕ್ಕಾರ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಘೋಷಣೆಗಳನ್ನು ಕೂಗಲಾಯಿತು.

    ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ವಚನಭ್ರಷ್ಟವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಹಿಂದ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರ ಸರ್ಕಾರವು ಪರಿಶಿಷ್ಟ ಸಮುದಾಯದ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಟೀಕಿಸಿದರು. ಮೈಸೂರಿನ ಮುಡಾದ ಅವ್ಯವಹಾರದಡಿ ಬಡವರಿಗೆ ನಿವೇಶನಗಳನ್ನು ವಂಚಿಸಿದ್ದಾರೆ. 5 ಸಾವಿರ ಕೋಟಿಯ ಹಗರಣ ಅಲ್ಲಿ ನಡೆದಿದೆ. ಭ್ರಷ್ಟ ಅಧಿಕಾರಿಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಬೆಂಬಲ, ರಕ್ಷಣೆ ಕೊಡುತ್ತಿದ್ದಾರೆ. ಭ್ರಷ್ಟಾಚಾರ ತಮ್ಮ ಬುಡಕ್ಕೆ ಬರುವ ಆತಂಕದಿಂದ ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

    ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ನೀಡಲು ಎಟಿಎಂ ಸರ್ಕಾರ ಬರುತ್ತಿದೆ ಎಂದು ಚುನಾವಣೆ ವೇಳೆ ಹೇಳಿದ್ದೆವು. ಮುಡಾ ಹಗರಣ ನಡೆದುದಾಗಿ ಸಿದ್ದರಾಮಯ್ಯನವರೇ ನೇಮಿಸಿದ ಮುಡಾ ಅಧ್ಯಕ್ಷ ಮರಿಗೌಡರೇ ಹೇಳಿದ್ದಾರೆ. ಪರಿಶಿಷ್ಟ ಸಮುದಾಯಕ್ಕೆ ನಿರಂತರ ಅನ್ಯಾಯ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಪಕ್ಷ. ಅಂಥ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕಲಿದ್ದೇವೆ ಎಂದು ವಿಜಯೇಂದ್ರ ಪ್ರಕಟಿಸಿದರು. ಕಾಂಗ್ರೆಸ್ಸಿಗರು ಬಿಜೆಪಿಯ ಭ್ರಷ್ಟಾಚಾರದ ಕಟ್ಟು ಕಥೆ ಹೇಳುತ್ತಿದೆ. ನಮಗೆ ಧಮ್ಕಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲಿದ್ದೇವೆ. ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ನಮ್ಮ ಹೋರಾಟ ವ್ಯಕ್ತಿಯ ವಿರುದ್ಧ ಅಲ್ಲ. ಭ್ರಷ್ಟ ವ್ಯವಸ್ಥೆ ವಿರುದ್ಧ. ಬಡವರ ವಿರೋಧಿ ನೀತಿ ವಿರುದ್ಧ ಹೋರಾಟ ಇದು. ಇದೊಂದು ರಣಕಹಳೆ ಎಂದು ಸ್ಪಷ್ಟಪಡಿಸಿದರು.

    ಬಿಜೆಪಿ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಭ್ರಷ್ಟಾಚಾರದಲ್ಲಿ ಸಿಲುಕಿದ ಸಿದ್ದರಾಮಯ್ಯನವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಲಿ ಎಂದು ಒತ್ತಾಯಿಸಿದರು. ಈ ಪಾದಯಾತ್ರೆ ಮಧ್ಯದಲ್ಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಂಟುನೆಪ ಬೇಡ. ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ರಚನೆವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ವಿಜಯೇಂದ್ರ ತಿಳಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಇನ್ನು 10 ವರ್ಷ ಬಿಡಿ, 10 ತಿಂಗಳು ಕೂಡ ಅವರು ಆಡಳಿತ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಸರ್ಕಾರವು ಆಡಳಿತದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರ್ಕಾರ, ಸಿದ್ದರಾಮಯ್ಯನವರನ್ನು ಕಿತ್ತೊಗೆಯಲು ಈ ಪಾದಯಾತ್ರೆ ಮಾಡುತ್ತಿದ್ದೇವೆ. ವಾಲ್ಮೀಕಿ ನಿಗಮ, ಮುಡಾ ಹಗರಣ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ನಡೆದಿದೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಕೆಂಪಣ್ಣ ಆಯೋಗದ ಮುಚ್ಚಿಟ್ಟ ಪುಸ್ತಕವನ್ನು ತೆರೆದಿಡಲು ಒತ್ತಾಯಿಸಿದರು.

    ಪಾದಯಾತ್ರೆ ತಡೆಯಲು ಕಾಂಗ್ರೆಸ್ಸಿನವರು ಬಿಡದಿಯಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ನಮ್ಮ ಆಸ್ತಿ ಕುರಿತ ಕಾಂಗ್ರೆಸ್ಸಿನ ಅಧ್ಯಕ್ಷರ ಪ್ರಶ್ನೆಗಳಿಗೆ ಬಿಡದಿಯಲ್ಲಿ ಉತ್ತರ ಕೊಡುತ್ತೇನೆ. ಅವರ ಅಕ್ರಮಗಳನ್ನೂ ತಿಳಿಸುತ್ತೇನೆ ಎಂದು ತಿಳಿಸಿದರು. ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ ಎಂದು ಶಿವಕುಮಾರ್ ಅವರೇ ಹೇಳಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಶಿವಕುಮಾರರ ಆಸ್ತಿ ಹಿಂದೆ ಎಷ್ಟಿತ್ತು? ಒಂದು ಬ್ಲ್ಯಾಕ್‌ ಆಂಡ್ ವೈಟ್ ಟಿವಿ, ಡಿವಿಡಿ ಇದ್ದುದನ್ನು ಅವರ ಗುರುಗಳೇ ಹೇಳಿದ್ದಾರೆ. ಅದರ ಮೂಲಕ ಏನನ್ನು ಪ್ರದರ್ಶನ ಮಾಡಿದ್ದರು ಎಂದು ಪ್ರಶ್ನಿಸಿದರು. ಅದರಿಂದ ಸಾವಿರಾರು ಕೋಟಿ ಪಡೆದರೇ ಎಂದು ಕೇಳಿದರು. ಸಂವಿಧಾನ ಕೊಟ್ಟ ಹಕ್ಕುಗಳನ್ನು ಮೋದಿಯವರು ಜನತೆಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು. ಡಾ.ಪರಮೇಶ್ವರ್ ಅವರು ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿ ಸಾವಿನ ಬಗ್ಗೆ, ಅಧಿಕಾರಿಯ ಪತ್ನಿಯ ಆರೋಪಕ್ಕೆ ಉತ್ತರಿಸಬೇಕಿದೆ ಎಂದು ಆಗ್ರಹಿಸಿದರು.

    ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ಮಾತನಾಡಿ, ರಾಹುಲ್ ಗಾಂಧಿಯವರ ಸೂಚನೆಯಂತೆ ಈ ಹಗರಣ ನಡೆದಿದೆ. ಹಣವನ್ನು ಹೈಕಮಾಂಡಿಗೆ ಕಳುಹಿಸಲಾಗಿದೆ. ಚುನಾವಣಾ ಭ್ರಷ್ಟಾಚಾರಕ್ಕೆ ಹಣ ಬಳಸಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡ ಭ್ರಷ್ಟರು. ಅವರ ಅಕ್ರಮ ಹಣ ಈ ಹಿಂದೆ ಸಿಕ್ಕಿತ್ತು ಎಂದು ವಿವರಿಸಿದರು. ಸರ್ಕಾರಕ್ಕೆ ನೋಟಿಸ್ ಕೊಟ್ಟ ರಾಜ್ಯಪಾಲರಿಗೆ ಧನ್ಯವಾದ ಸಲ್ಲಿಸಿದರು.

    ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಮಾತನಾಡಿ, ಇದು ಜನರ ಪಾದಯಾತ್ರೆ. ವಿಜಯೇಂದ್ರ-ಕುಮಾರಸ್ವಾಮಿ ಅವರು ಕೃಷ್ಣಾರ್ಜುನರಂತೆ ಇದನ್ನು ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಭ್ರಷ್ಟರ ಸರ್ಕಾರ, ಸುಳ್ಳರ ಸರ್ಕಾರ ಎಂದು ಟೀಕಿಸಿದರು. ಸಂವಿಧಾನವನ್ನು ಅವಮಾನ ಮಾಡಿದ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕಿದೆ ಎಂದು ಆಗ್ರಹಿಸಿದರು.

    ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಾಂಗ್ರೆಸ್ಸಿನ ಡಿಎನ್‌ಎಯಲ್ಲೇ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿತ್ತು. ಆದರೆ, ವಾಜಪೇಯಿ, ನರೇಂದ್ರ ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲ ಎಂದರು. ಕಲ್ಲಿದ್ದಲು, 2 ಜಿ ಸೇರಿ ಅನೇಕ ಹಗರಣಗಳು ಆಗ ನಡೆದಿದ್ದವು. ಈಗ ಸಿದ್ದರಾಮಯ್ಯನವರು ಇಂಥ ಹಗರಣಗಳನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರೇ ಈ ಹಗರಣ ನಿಮ್ಮ ಕೈಯಿಂದಲೇ ನಡೆದಿದೆ. ಭ್ರಷ್ಟತನ ಮುಚ್ಚಿಹಾಕಲು ರಾಜ್ಯಪಾಲರನ್ನು ಬೆದರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದ ಅವರು, ಕಾಂಗ್ರೆಸ್ ಹೈಕಮಾಂಡ್ ಕೂಡ ಇದರಲ್ಲಿ ಪಾಲುದಾರಿಕೆ ಪಡೆದಿದೆ ಎಂದು ಆಕ್ಷೇಪಿಸಿದರು.

    ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಾವು ನಿಲುವಳಿ ಸೂಚನೆ ಮೂಲಕ ಮುಡಾ ಹಗರಣದ ವಿವರ ಕೇಳಿದ್ದೆವು. ಮುಡಾದಲ್ಲಿ 3ರಿಂದ 4 ಸಾವಿರ ಕೋಟಿಯ ಹಗರಣ ಆಗಿದೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ವಿಪಕ್ಷದ ಹೋರಾಟದ ಹಕ್ಕನ್ನು ಮುಂದಿಟ್ಟು ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ದಲಿತ ವ್ಯಕ್ತಿಯ ಜಮೀನು ನುಂಗಿದ್ದಾರೆ. ಸಿದ್ದರಾಮಯ್ಯನವರು ತಪ್ಪು ಮಾಡದೆ ಇದ್ದರೆ ಅವರ‍್ಯಾಕೆ ರಾಜ್ಯಪಾಲರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಒಂದು ನೋಟಿಸ್‌ಗೇ ಕಾಂಗ್ರೆಸ್ಸಿಗರು ಗಡಗಡ ನಡುಗುತ್ತಿದ್ದಾರೆ ಎಂದರು. ಕಾಂಗ್ರೆಸ್ ಇವತ್ತು ಒಡೆದ ಮನೆಯಾಗಿದೆ ಎಂದು ಲೇವಡಿ ಮಾಡಿದರು.

  • ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ: ಎಚ್‌ಡಿಕೆ ಸವಾಲು

    ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ: ಎಚ್‌ಡಿಕೆ ಸವಾಲು

    – ಬಾಮೈದನ ಹೆಸರಿಗೆ ಆಸ್ತಿ ಮಾಡೋಕೆ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ?
      ಸಿಎಂ ವಿರುದ್ಧ ಮುಡಾ ದಾಖಲೆ ಕೊಟ್ಟಿದ್ದು ಡಿಕೆಶಿ

    ಬೆಂಗಳೂರು: 10 ವರ್ಷ ನಾವೇ ಸರ್ಕಾರದಲ್ಲಿ ಇರುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳುತ್ತಾರೆ. ಆದರೆ ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ. ನಿಮ್ಮ ಪಾಪದ ಕೊಡ ತುಂಬಿದೆ. ನಮ್ಮ ಪಾದಯಾತ್ರೆ ಮೈಸೂರು ತಲಪುವವರೆಗೆ ಈ ಸರ್ಕಾರದ ವಿಕೆಟ್‌ಗಳು ಬೀಳಬೇಕು. ಅದು ನಾಯಕನಿಂದಲೇ ಶುರುವಾಗಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದಲ್ಲಿ ಬಿಜೆಪಿ- ಜೆಡಿಎಸ್‌ (BJP-JDS) ಪಾದಯಾತ್ರೆಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೀವು ಮುಡಾದ ಬಗ್ಗೆ ಮಾತನಾಡುತ್ತೀರಾ? ಅದರ ಬಗ್ಗೆ ಮಾತಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ. 14 ಸೈಟ್ ಯಾಕೆ? ಎಷ್ಟು ಬೇಕಾದರೂ ಕಾನೂನು ಪ್ರಕಾರ ಪಡೆದುಕೊಳ್ಳಲಿ. ಇವರು ಕಾನೂನು ಮೀರಿ ಸೈಟ್ ಪಡೆದಿದ್ದಾರೆ ಎಂದು ದೂರಿದರು.

    ಸಿದ್ದರಾಮಯ್ಯನವರೇ (Siddaramaiah) ಅದು ಯಾರ ಆಸ್ತಿ. ಮುಡಾ (MUDA) ಸರ್ಕಾರದ ಆಸ್ತಿ. ಬಡಾವಣೆ ಆಗಿರುವ ಆಸ್ತಿಯನ್ನು ನಿಮ್ಮ ಬಾಮೈದನ ಹೆಸರಿಗೆ ಮಾಡಲು ಅವಕಾಶ ಇದೆಯಾ? ಇದನ್ನ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ? ಸರ್ಕಾರದ ಜಮೀನನ್ನ ನಿಮ್ಮ ಬಾಮೈದನ ಹೆಸರಿಗೆ ಹೇಗೆ ದಾಖಲಾತಿ ಮಾಡಿಕೊಟ್ಟರು. ಸಿದ್ದರಾಮಯ್ಯ ನನಗೆ ಇದ್ಯಾವುದು ಗೊತ್ತಿಲ್ಲ ಎನ್ನುತ್ತಾರೆ. 64 ಕೋಟಿ ಕೊಡಿ ಎನ್ನುತ್ತಿರಾ. ಅಲ್ಲಿ ನಡೆದ ಘಟನೆ ನಿಮ್ಮ ಗಮನಕ್ಕೆ ಬಾರದೇ ಆಗಿದೆಯಾ? ನಿಮ್ಮ ಪ್ರಭಾವ ಬೀರದೇ ಇಲ್ಲ ಎನ್ನುವುದಕ್ಕೆ ಸಾಧ್ಯವಿದೆಯಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿ ಹರಿಹಾಯ್ದರು.

    ಒಂದು ಮಾಧ್ಯಮದಲ್ಲಿ  ಪ್ರಾಯೋಜಿತ  ಸಂದರ್ಶನ ನೋಡಿದೆ. ಪ್ರಾಯೋಜಿತ  ಸಂದರ್ಶನ ನೀಡಿದ್ದು ಇಡೀ ದೇಶದ ಇತಿಹಾಸದಲ್ಲಿಯೇ ಮೊದಲು. ನನ್ನದು ತೆರೆದ ಪುಸ್ತಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೆಂಪಣ್ಣ ಆಯೋಗದ ವರದಿ ತೆರಿಯಿರಿ. ಈಗ ದೇಸಾಯಿ ಹೆಸರಿನಲ್ಲಿ ಮುಡಾ ಕೇಸ್ ಮುಚ್ಚಿ ಹಾಕಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದರು.

    ಪರಮೇಶ್ವರ್ ಕುಮಾರಸ್ವಾಮಿ ಬಣ್ಣ ಬಯಲಾಗಿದೆ ಎನ್ನುವ ಮಾತಿಗೆ, ಪರಮೇಶ್ವರ್ ಅವರೇ ನನ್ನ ಬಣ್ಣ ಯಾವತ್ತು ಬದಲಾವಣೆಯಾಗುವುದಿಲ್ಲ. ನನ್ನದು ಒರಿಜಿನಲ್ ಕಲರ್. 2006-2007 ರಲ್ಲಿ ನಾನು ಯಡಿಯೂರಪ್ಪಗೆ ಅಧಿಕಾರ ಕೊಟ್ಟಿದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ನಾನು ಅವತ್ತು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಎಂದಿದ್ದೆ. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಒಂದು ವೇಳೆ ಅವತ್ತು ಬಿಜೆಪಿ ಮತ್ತು ನಾವು ಒಟ್ಟಾಗಿ ಇದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ಪರಮೇಶ್ವರ್ ಅವರೇ 2018 ರಲ್ಲಿ ನನ್ನನ್ನು ಸಿಎಂ ಮಾಡಿ ಎಂದು ನಿಮ್ಮ ಮನೆಗೆ ಬಂದಿದ್ದಿನಾ? ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡಿ ಎಂದು ಹೇಳಿದರೂ ಒತ್ತಡ ಮಾಡಿ ನನ್ನನ್ನು ಸಿಎಂ ಮಾಡಿದ್ದೀರಿ. ನೀವು ನನ್ನನ್ನ ಹೇಗೆ ನಡೆಸಿಕೊಂಡಿದ್ದೀರಿ ಗೊತ್ತಿಲ್ಲವಾ ಎಂದು ಜರಿದರು. ಇದನ್ನೂ ಓದಿ: ಮುಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಿಎಸ್‌ವೈ

    ದೇವೇಗೌಡರನ್ನ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಇಲ್ಲ. ಕಮ್ಯುನಿಸ್ಟ್ ಪಕ್ಷದ ಜೊತೆ ಸೇರಿ 13-14 ಪಕ್ಷ ಬೆಂಬಲ ಕೊಟ್ಟಿದ್ದರಿಂದ ಅವರು ಪ್ರಧಾನಿಯಾಗಿದ್ದರು. ಅವತ್ತು ದೇವೇಗೌಡರನ್ನು ಪ್ರಧಾನಿ ಕುರ್ಚಿಯಿಂದ  ಕೆಳಗಿಳಿಸಿದ್ದು ಕಾಂಗ್ರೆಸ್. ಅವರು ದೇವೇಗೌಡರನ್ನು ಪ್ರಧಾನಿ ಕುರ್ಚಿಯಿಂದ ಅದ್ಯಾಕೆ ಕೆಳಗಿಳಿಸಿದರು ಎಂದು ಪ್ರಶ್ನಿಸಿದರು.

     

    ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ವಿರುದ್ದ ದಾಖಲಾತಿ ಕೊಟ್ಟಿದ್ದಾರೆ. ಅವರು ಯಾರ್ ಯಾರ ಕೈಯಲ್ಲಿ ದಾಖಲಾತಿ ಕೊಟ್ಟಿದ್ದಾರೆ ಎಂದು ನಮಗೆ ಗೊತ್ತಿದೆ. ಈಗ ನಾನು ಸಿದ್ದರಾಮಯ್ಯ ಪರ ಎಂದು ನಾಟಕ ಮಾಡುತ್ತಿದ್ದಾರೆ. ನೀವು 100 ಅಲ್ಲ ಇನ್ನು 200 ಪ್ರಶ್ನೆ ಕೇಳಿದರೂ ಉತ್ತರ ಕೊಡುತ್ತೇನೆ. ನಮ್ಮ ಕಾರ್ಯಕರ್ತರು ಉತ್ಸಾಹದಲ್ಲಿದ್ದು, ಈ ಸರ್ಕಾರ ತೆಗೆಯಬೇಕೆಂದು ನಿರ್ಧಾರ ಮಾಡಿದ್ದಾರೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

    ನೀವು ಗ್ಯಾರಂಟಿ ಹೆಸರಿನಲ್ಲಿ ಏನೇನು ಮಾಡುತ್ತಿದ್ದೀರಿ? ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಬಿರುಕು ತರಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಹಗರಣಗಳನ್ನ ಬಿಚ್ಚಿಡಲು ನಾವಿಬ್ಬರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತೀರುಗೇಟು ನೀಡಿದರು.

     

    24 ಗಂಟೆಯಲ್ಲಿ ಮೇಕೆದಾಟು ತರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು ಎಂದು ಡಿಕೆಶಿ ಹೇಳುತ್ತಾರೆ. ಯಾರೋ ಹುಚ್ಚರು ಅವರಿಗೆ ಹೇಳಿರಬೇಕು. ನಾನು 24 ಗಂಟೆಯಲ್ಲಿ ಮೇಕೆದಾಟು ತರುತ್ತೇನೆ ಎಂದು ಹೇಳಿಲ್ಲ. ಹೇಳಿರುವುದನ್ನು ತೋರಿಸಿದರೆ ತಲೆ ಬಾಗುತ್ತೇನೆ. ತಾಕತ್ತು ಇದ್ದರೆ ನಿಮ್ಮ ಸ್ನೇಹಿತರಾದ ಡಿಎಂಕೆ ಸ್ಟಾಲಿನ್ ಜೊತೆ ಮಾತನಾಡಿ. ಇವರು ತಮಿಳುನಾಡಿಗೆ ಹೆಚ್ಚು ನೀರು ಬಿಟ್ಟಿದ್ದಾರೆ. ಈ ಬಾರಿ ಮೋದಿ ಅವರನ್ನು ಕಾನೂನು ಬದ್ದವಾಗಿ ಮನವೊಲಿಕೆ ಮಾಡುತ್ತೇವೆ ಎಂದು ತಿಳಿಸಿದರು.

    ಪಾದಯಾತ್ರೆಯ ಬಗ್ಗೆ ಯಾರ ಒತ್ತಡವೂ ಇಲ್ಲ. ನಾನು ಯಾವ ಸಮಯದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಅದನ್ನ ಕೈಗೊಂಡಿದ್ದೇನೆ. ಮುಕ್ತವಾಗಿ ಚರ್ಚೆ ಮಾಡಿಯೇ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ ಮುಂದೆ ಹಾಕಿದರೆ ಕಾಂಗ್ರೆಸ್‌ನವರು ಎಲ್ಲಿ ದಾಖಲೆ ತಿರುಚುತ್ತಾರೆ ಎಂದು ಪಾದಯಾತ್ರೆ ಮುಂದುವರೆಸಿದ್ದೇವೆ. ಮೈಸೂರು ತಲಪುವವರೆಗೆ ಈ ಸರ್ಕಾರದ ವಿಕೆಟ್‌ಗಳು ಬೀಳಬೇಕು. ಅದು ಕ್ಯಾಪ್ಟನ್ ನಿಂದಲೇ ಶುರುವಾಗಬೇಕು. ಒಂದೇ ತಾಯಿ ಮಕ್ಕಳ ರೀತಿ ಒಟ್ಟಾಗಿ ಎರಡು ಪಕ್ಷಗಳು ಕೆಲಸ ಮಾಡಬೇಕು. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ವರ್ಗಾವಣೆ ದಂಧೆಯನ್ನ ಮಾಡುತ್ತಿದೆ. ಈ ಸರ್ಕಾರದ ವಿರುದ್ಧ ಎರಡು ಪಕ್ಷದ ಕಾರ್ಯಕರ್ತರು ಭಾಗಿಯಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಮಂಡ್ಯ ಮಾತ್ರವಲ್ಲ ಇಡೀ ಮೈಸೂರಿನವರಗೆ ಪಾದಯಾತ್ರೆ ನಡೆಯುತ್ತದೆ ಎಂದು ಹೇಳಿದರು.

     

  • ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ದೋಸ್ತಿಗಳ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ

    ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ದೋಸ್ತಿಗಳ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ

    ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಆಗ್ರಹಿಸಿ ಇಂದಿನಿಂದ ದೋಸ್ತಿಗಳು (BJP_JDS) ಮೈಸೂರು ಚಲೋ (Mysuru Chalo) ಆರಂಭಿಸಿದ್ದಾರೆ.

    ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ (BS Yediyurappa) ಮತ್ತು ಮಾಜಿ ಸಿಎಂ, ಕೇಂದ್ರ ಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಮುಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಿಎಸ್‌ವೈ

    ಹೆಚ್‌ಡಿಕೆ ಮಾತನಾಡಿ, ಇದು ಜನವಿರೋಧಿ ಸರ್ಕಾರವಾಗಿದ್ದು ಮುಡಾ, ವಾಲ್ಮೀಕಿ ಪ್ರಕರಣ ಬಯಲಿಗೆ ಬಂದಿದೆ. ಜನರ ಆಸ್ತಿಗಳನ್ನು ನುಂಗಿದ ಸರ್ಕಾರದ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ದೇವೇಗೌಡರ ಕುಟುಂಬದಿಂದ ನೈಸ್ ಸುತ್ತಮುತ್ತ ಅಕ್ರಮ ಆಸ್ತಿ ಎಂಬ ಡಿಕೆ ಶಿವಕುಮಾರ್‌ (DK Shivakumar) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅವರ ಕೈಯಲ್ಲೇ ಇದೆ. ನಾವು ಅಕ್ರಮವಾಗಿ ಆಸ್ತಿ ಮಾಡಿದರೆ ಸರ್ಕಾರ ವಶಪಡಿಸಿಕೊಳ್ಳಲಿ. ಸರ್ಕಾರ ಅವರದ್ದೇ ಇದೆ, ಮುಟ್ಟುಗೋಲು ಹಾಕಿಕೊಳ್ಳಲಿ. ನಾವು ನ್ಯಾಯ ಬದ್ಧವಾಗಿ ಬದುಕಿದ್ದೇವೆ, ಇವರ ಥರ ಬದುಕಿಲ್ಲ. ಶಿವಕುಮಾರ್‌ ಬಿಡದಿಯಲ್ಲಿ ಆರೋಪ ಮಾಡಿದ್ದಾರೆ. ಅವರಿಗೆ ನಾನು ಬಿಡದಿಯಲ್ಲೇ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದರು.

     

    ಇಂದಿನಿಂದ ಆಗಸ್ಟ್ 10 ರವರೆಗೆ ಏಳು ದಿನಗಳ ಕಾಲ ಒಟ್ಟು 124 ಕಿಮೀವರೆಗೆ ಪಾದಯಾತ್ರೆ ನಡೆದು ಮುಡಾ ಕಚೇರಿಯಲ್ಲಿ ಕೊನೆಯಾಗಲಿದೆ. ಕೊನೆಯ ದಿನದಂದು ಮೈಸೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.

    ಮೈತ್ರಿ ಪಾದಯಾತ್ರೆಯ ಹಾದಿ
    * ಆ.3 – ಕೆಂಗೇರಿಯಲ್ಲಿ ಆರಂಭ. ಬಿಡದಿಯಲ್ಲಿ ವಾಸ್ತವ್ಯ
    * ಆ.4 – ಬಿಡದಿಯಲ್ಲಿ ಆರಂಭ. ಕೆಂಗಲ್‌ನಲ್ಲಿ ವಾಸ್ತವ್ಯ
    * ಆ.5 – ಕೆಂಗಲ್‌ನಲ್ಲಿ ಆರಂಭ. ನಿಡಘಟ್ಟದಲ್ಲಿ ವಾಸ್ತವ್ಯ
    * ಆ.6 – ನಿಡಘಟ್ಟದಲ್ಲಿ ಆರಂಭ. ಮಂಡ್ಯದಲ್ಲಿ ವಾಸ್ತವ್ಯ
    * ಆ.7 – ಮಂಡ್ಯದಲ್ಲಿ ಆರಂಭ. ತೂಬಿನಕೆರೆಯಲ್ಲಿ ವಾಸ್ತವ್ಯ
    * ಆ.8 – ತೂಬಿನಕೆರೆಯಲ್ಲಿ ಆರಂಭ. ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ
    * ಆ.9 – ಶ್ರೀರಂಗಪಟ್ಟಣದಲ್ಲಿ ಆರಂಭ. ಮೈಸೂರು ಹೊರವಲಯದಲ್ಲಿ ವಾಸ್ತವ್ಯ
    * ಆ.10 – ಮೈಸೂರು ಹೊರವಲಯದಲ್ಲಿ ಆರಂಭ. ವೇದಿಕೆಯಲ್ಲಿ ಅಂತ್ಯ

  • ಇಂದಿನಿಂದ ಮೈಸೂರಿಗೆ ದೋಸ್ತಿ ಪಾದಯಾತ್ರೆ – ಯಾವ ದಿನ ಎಲ್ಲಿ ವಾಸ್ತವ್ಯ?

    ಇಂದಿನಿಂದ ಮೈಸೂರಿಗೆ ದೋಸ್ತಿ ಪಾದಯಾತ್ರೆ – ಯಾವ ದಿನ ಎಲ್ಲಿ ವಾಸ್ತವ್ಯ?

    ಬೆಂಗಳೂರು: ಇಂದಿನಿಂದ ರಾಜ್ಯ ರಾಜಕೀಯ ಇನ್ನಷ್ಟು ಕಾವೇರಲಿದೆ. ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ತಲೆದಂಡಕ್ಕೆ ಆಗ್ರಹಿಸಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಜಂಟಿಯಾಗಿ ಮೈಸೂರು ಚಲೋ (Mysuru Chalo) ಪಾದಯಾತ್ರೆ ಹಮ್ಮಿಕೊಂಡಿದೆ. ಇಂದು ಬೆಳಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy), ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ (Yediyurappa) ಜಂಟಿಯಾಗಿ ಕೆಂಗೇರಿಯ ಕೆಂಪಮ್ಮ ದೇವಾಲಯದಲ್ಲಿ ಚಾಲನೆ ನೀಡಲಿದ್ದಾರೆ.

    ಎಂಟು ದಿನದಲ್ಲಿ 124 ಕಿಲೋಮೀಟರ್ ಪಾದಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿದೆ. ಪಾದಯಾತ್ರೆಗೆ ಜೆಡಿಎಸ್ ಯಾವುದೇ ಷರತ್ತು ಹಾಕಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಪಾದಯಾತ್ರೆಗೆ ಸರ್ಕಾರ ಕೂಡ ಅನುಮತಿ ನೀಡಿದೆ. ಇದನ್ನೂ ಓದಿ: ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    ಮೈತ್ರಿ ಪಾದಯಾತ್ರೆಯ ಹಾದಿ
    * ಆ.3 – ಕೆಂಗೇರಿಯಲ್ಲಿ ಆರಂಭ. ಬಿಡದಿಯಲ್ಲಿ ವಾಸ್ತವ್ಯ
    * ಆ.4 – ಬಿಡದಿಯಲ್ಲಿ ಆರಂಭ. ಕೆಂಗಲ್‌ನಲ್ಲಿ ವಾಸ್ತವ್ಯ
    * ಆ.5 – ಕೆಂಗಲ್‌ನಲ್ಲಿ ಆರಂಭ. ನಿಡಘಟ್ಟದಲ್ಲಿ ವಾಸ್ತವ್ಯ
    * ಆ.6 – ನಿಡಘಟ್ಟದಲ್ಲಿ ಆರಂಭ. ಮಂಡ್ಯದಲ್ಲಿ ವಾಸ್ತವ್ಯ
    * ಆ.7 – ಮಂಡ್ಯದಲ್ಲಿ ಆರಂಭ. ತೂಬಿನಕೆರೆಯಲ್ಲಿ ವಾಸ್ತವ್ಯ
    * ಆ.8 – ತೂಬಿನಕೆರೆಯಲ್ಲಿ ಆರಂಭ. ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ
    * ಆ.9 – ಶ್ರೀರಂಗಪಟ್ಟಣದಲ್ಲಿ ಆರಂಭ. ಮೈಸೂರು ಹೊರವಲಯದಲ್ಲಿ ವಾಸ್ತವ್ಯ
    * ಆ.10 – ಮೈಸೂರು ಹೊರವಲಯದಲ್ಲಿ ಆರಂಭ. ವೇದಿಕೆಯಲ್ಲಿ ಅಂತ್ಯ ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆಗೆ ಹೈಕೋರ್ಟ್ ಗ್ರೀನ್‌ ಸಿಗ್ನಲ್

  • ‘ಮೈಸೂರು ಚಲೋ’ ಪಾದಯಾತ್ರೆ ಗೊಂದಲಕ್ಕೆ ತೆರೆ; ಆ.3 ರಂದು ಹೆಚ್‌ಡಿಕೆ, ಬಿಎಸ್‌ವೈರಿಂದ ಚಾಲನೆ

    ‘ಮೈಸೂರು ಚಲೋ’ ಪಾದಯಾತ್ರೆ ಗೊಂದಲಕ್ಕೆ ತೆರೆ; ಆ.3 ರಂದು ಹೆಚ್‌ಡಿಕೆ, ಬಿಎಸ್‌ವೈರಿಂದ ಚಾಲನೆ

    – ಸಂಧಾನ ಸಭೆ ಬಳಿಕ ಬೆಂಬಲ ಕೊಟ್ಟ ಕುಮಾರಸ್ವಾಮಿ

    ಬೆಂಗಳೂರು: ಆ.3ರಿಂದ ಆರಂಭವಾಗಬೇಕಿರುವ ಪಾದಯಾತ್ರೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೆಲವೊಂದು ಕಾರಣದಿಂದ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಜೊತೆ ಪ್ರಹ್ಲಾದ್ ಜೋಶಿ ಸಂಧಾನ ಸಭೆ ನಡೆಸಿ, ಗೊಂದಲ ಇಲ್ಲವಾಗಿಸಿದ್ದಾರೆ.

    ಸಂಸತ್ ಭವನದ ಕುಮಾರಸ್ವಾಮಿ ಕಚೇರಿಯಲ್ಲಿ ನಡೆದ ಈ ಸಂಧಾನ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾಲ್ಗೊಂಡಿದ್ದರು. ಪ್ರೀತಂ ಗೌಡಗೆ ದೊಡ್ಡ ಜವಾಬ್ದಾರಿಗಳನ್ನು ನೀಡಿಲ್ಲ. ನೀವು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಬಿಜೆಪಿಗರು ಮನವೊಲಿಸಿದರು. ಇದಕ್ಕೆ ಕುಮಾರಸ್ವಾಮಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಪಾದಯಾತ್ರೆಯನ್ನು ಕೇಂದ್ರ ಮಂತ್ರಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಸಭೆ ಬಳಿಕ ಪ್ರತ್ಯೇಕವಾಗಿ ಮಾತಾಡಿದ ಕುಮಾರಸ್ವಾಮಿ, ನಮಗೆ ಪ್ರೀತಂ ಗೌಡ ಸಮಸ್ಯೆಯಲ್ಲ. ಪಾದಯಾತ್ರೆಯನ್ನ ಬಿಜೆಪಿಯ ಕಾರ್ಯಕ್ರಮದ ರೀತಿಯಲ್ಲಿ ಬಿಂಬಿಸುವುದಕ್ಕೆ ಹೋಗಿದ್ದರು. ಇದನ್ನೆಲ್ಲ ಕುಳಿತು ಸರಿಪಡಿಸೋ ಕೆಲಸವಾಗಿದೆ ಎಂದು ಹೇಳಿದ್ದಾರೆ.

    ಇನ್ನೊಂದೆಡೆ, ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆಗೆ ಒಪ್ಪದ ರೆಬೆಲ್ ನಾಯಕರು ಸಭೆ ಸೇರಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್‌ಸಿಂಹ, ಕುಮಾರ ಬಂಗಾರಪ್ಪ ಸಭೆ ನಡೆಸಿದ್ದಾರೆ. ನಾಡಿದ್ದಿನಿಂದ (ಶನಿವಾರ) ಶುರುವಾಗಲಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ.

  • ಕರ್ನಾಟಕದಲ್ಲಿ ವಿರೋಧ ಪಕ್ಷಗಳ ಸ್ಟಾರ್ ಚೆನ್ನಾಗಿಲ್ಲ: ಡಿವಿಎಸ್‌

    ಕರ್ನಾಟಕದಲ್ಲಿ ವಿರೋಧ ಪಕ್ಷಗಳ ಸ್ಟಾರ್ ಚೆನ್ನಾಗಿಲ್ಲ: ಡಿವಿಎಸ್‌

    ಬೆಂಗಳೂರು: ಕರ್ನಾಟಕದಲ್ಲಿ (Karnataka) ವಿರೋಧ ಪಕ್ಷಗಳ (Opposition Party) ಸ್ಟಾರ್ ಚೆನ್ನಾಗಿಲ್ಲ. ಒಳ್ಳೆಯ ಜ್ಯೋತಿಷಿಯನ್ನು ನೋಡಿ ಎಲ್ಲವನ್ನು ಸರಿ ಮಾಡಿಕೊಳ್ಳಬೇಕು ಎಂದು ಮಾಜಿ ಕೇಂದ್ರ ಮಂತ್ರಿ ಡಿವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎನ್‌ಡಿಎ (NDA) ತಂಡಕ್ಕೆ ಇಂದು ಅದ್ಬುತ ಅವಕಾಶ ಇದೆ. ಸರ್ಕಾರ ಜಾಗ ನುಂಗಿಕೊಂಡು, ಹೆಂಡತಿ ಹೆಸರಿಗೆ ಮಾಡೋ ನಿಕೃಷ್ಟ ರಾಜಕೀಯವನ್ನು ಕಾಂಗ್ರೆಸ್ (Congress) ಮಾಡುತ್ತಿದೆ. ಇದನ್ನ ನಾವು ಬಳಕೆ ಮಾಡಿಕೊಳ್ಳಬೇಕು ಎಂದರು. ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವನ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ?: ಕುಮಾರಸ್ವಾಮಿ ಕಿಡಿ

    ಬಿಜೆಪಿ-ಜೆಡಿಎಸ್ (BJP-JDS) ಒಡೆದ ಮನೆ ಆಗಿದೆ. ಕಾಂಗ್ರೆಸ್ ಒಡೆದ ಮನೆಯಾಗಿದೆ ಎನ್ನುವ ಬದಲು ನಮ್ಮದಾಗಿದೆ. ಯತ್ನಾಳ್, ಜಾರಕಿಹೋಳಿ ಒಂದು ಕಡೆ, ಜಿಟಿ ದೇವೇಗೌಡ ಮತ್ತೊಂದು. ಇದನ್ನ ನೋಡಿದ್ರೆ ವಿಪಕ್ಷ ಸ್ಟಾರ್ ಚೆನ್ನಾಗಿಲ್ಲ ಎಂದು ಅನಿಸುತ್ತದೆ.

    ನಮ್ಮಲ್ಲಿ ಸಾಮರಸ್ಯವಿಲ್ಲ ಪ್ಲ್ಯಾನ್ ಆಫ್ ಆಕ್ಷನ್ ಇಲ್ಲದ್ದಕ್ಕೆ ನೋವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ನಮ್ಮ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವೂ ಆಗಿದ್ದು ಫೋನ್ ಮಾಡಿ ತಿಳಿಸುತ್ತಿದ್ದಾರೆ. ಒಂದು ಕಡೆ ರಾಜಕೀಯ ಹೋರಾಟ ಆಗಬೇಕು. ಮತ್ತೊಂದು ಕಡೆ ಕಾನೂನು ಹೋರಾಟ ಮಾಡಬೇಕು ಎಂದರು.